ಶಿಲೆಯೊಡನೆ ಸ್ವಗತ
ಬೆಳಗಿನ ಜನಜಂಗುಳಿ ಕರಗಿ ಹೋಗಿತ್ತು. ರಾತ್ರಿ ಏಳರ ಸಮಯ. ನಾನು ಮತ್ತು ಅವಳು ಇಬ್ಬರೇ ಮುಖಾಮುಖಿ ನಿಂತಿದ್ದೆವು. ಅವಳು -ಕುಂದಾಪುರದ ಬಳಿ ಇರುವ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರೀ. ಹೊರಗೆ ಧೋ ಧೋ ಅಕಾಲಿಕ ಮಳೆ. ಬಂಗಾಳ ಕೊಲ್ಲಿಗೆ ಉಬ್ಬಸವಂತೆ! ಹೀಗಾಗಿ ಅರಬ್ಬಿ ತೀರಕ್ಕೆ ಸಮೀಪವಿರುವ ಇವಳ ತಲೆಯ ಮೇಲೂ ಮಳೆ ! ಎಲ್ಲರ ಮೂಗುಬ್ಬಸವನ್ನು ಕಳೆಯುವವಳು ಮೊದಲು ತಂಪಾಗಬೇಕಲ್ಲ?
ಚಿನ್ನದ ಮುಖ, ವಿಧವಿಧ ಆಭರಣ, ರೇಷಿಮೆ ದುಕೂಲ, ಅರಸಿನ ಕುಂಕುಮ ಹೂ ತರತರದ ಅಲಂಕಾರ. ಕನ್ನಡಿಯಂತೆ ಫಳ ಫಳ ಹೊಳೆಯುತ್ತಿದ್ದಳು.
ಗರ್ಭಗುಡಿಯಲ್ಲಿ ಅರ್ಚಕರೂ ಕಾಣಲಿಲ್ಲ. ನನ್ನ ಅವಳ ಏಕಾಂತಕ್ಕೆ ಭಂಗ ತರಬಾರದೆಂದು ಎಲ್ಲೋ ಹೊರಗೆ ಹೋಗಿರಬೇಕು. ನೋಡುತ್ತಲೇ ಇದ್ದೆ ಅವಳು ಮುಡಿದ ಹೂವಿನ ಸೊಬಗನ್ನು ! ಪರಿಮಳ ಆಹ್ಲಾದಕರವಾಗಿ ಉಸಿರಿನೊಂದಿಗೆ ಒಳಹೊರಗೆ ಹಾಯುತ್ತಿತ್ತು. ಮುಟ್ಟಲು ಸಾಧ್ಯವಾಗಲಿಲ್ಲ ಅಷ್ಟೇ. ಇವೆಲ್ಲ ಅಂದ ಚೆಂದಗಳು ಭಕ್ತರ ಕಣ್ಣಿಗಾಗಿ ಅಷ್ಟೇ . ಅವಳು ಉದ್ಭವವಾಗಿರುವುದು 'ಅರೂಪ' ಲಿಂಗಿಯಾಗಿ. ಕಮಲಶಿಲೆ ಆಕಾರದಲ್ಲಿ. ಪೂಜೆಗೊಳ್ಳುವುದೂ ಹಾಗೆಯೇ. 'ಅರೂಪ' ಮತ್ತು 'ಲಿಂಗ' ಇವುಗಳ ಕಲ್ಪನೆಯಲ್ಲಿಯೇ ವೈರುಧ್ಯವಿದೆ. ನಮ್ಮ ಲೋಕಗ್ರಹಿಕೆಯಲ್ಲೇ ಅಸಂಖ್ಯಾತ ವೈರುಧ್ಯಗಳು ಇವೆಯಲ್ಲ? ಮತ್ತೆ ನಮ್ಮ ದೇವರುಗಳೂ ಹಾಗೆಯೇ!
"ನೀನು ಹೀಗೆ ಕನ್ನಡಿಯಾಗಿ ಹೊಳೆದರೆ ಅದರೊಳಗೆ ಎದುರು ನಿಂತ ನಾನೇ ಕಾಣುವೆನಲ್ಲೇ? ನನಗೆ ನಾನೇ ಕಾಣಬೇಕು ನಿಜ. ಆದರೆ ಅದಕ್ಕೂ ಮೊದಲು ನನಗೆ ಜಗತ್ತು ಕಾಣಬೇಕಲ್ಲ? ಕಂಡಕಡೆಯಿಂದ ಕಾಣದಕಡೆಗೆ ಚಲಿಸುವುದೇ ಸರಿಯಲ್ಲವೇ? ನಿನಗೇಕೆ ಮುಖವಾಡ , ವಿಶ್ವಮುಖಿಗೆ? ಬಹುಶಃ ನನ್ನನ್ನು ಅಣಕಿಸಲೆಂದೇ ನೀನು ಚಿನ್ನದ ಮುಖವಾಡ ತೊಟ್ಟಿರಬೇಕು? ನೀನು ಕನ್ನಡಿಯಾಗಿದ್ದೀ! ಕಿಟಕಿಯಾಗಬೇಕು ಅಲ್ಲವೇನೇ? ನನಗೇನೋ ನೀನೊಂದು ಚೌಕಟ್ಟು ಕಿಟಕಿಯ ಚೌಕಟ್ಟೇ ಆಗಿರುವೆ.
ಕಿಟಕಿ ತೆರೆದರೆ ತಾನೇ ಬಯಲು, ಆಕಾಶ ಕಾಣುವುದು?
ಬಯಲನ್ನು, ಆಕಾಶವನ್ನು ಕಾಣಲು ಕಿಟಕಿಯೊಂದು ಮಾಧ್ಯಮ, ಆಧಾರವಷ್ಟೇ. ಎಷ್ಟು ಸಣ್ಣ ಕಿಟಕಿ, ಹಿಂದೆ ನಿಂತು ದಿಟ್ಟಿಸುವ ಕಣ್ಣುಗಳು ಇನ್ನೂ ಸಣ್ಣವು! ಆದರೆ ಅಂತಹ ಸೂಜಿಕಣ್ಣಿನೊಳಗೆ ಆಕಾಶ - ಜಗತ್ತು ಹೇಗೆ ನುಗ್ಗಿಬಿಡುತ್ತದೆ ನೋಡು! ಷರೀಫರ ಕೋಳಿ ಕೋಡುಗನನ್ನು ನುಂಗಿದ ಹಾಗೆ! ನಿನ್ನೆದುರು ನಿಂತ ನನ್ನ ಧಾರ್ಷ್ಟ್ಯದ ಹಾಗೆ.
ನಮ್ಮಲ್ಲಿ ಎಷ್ಟೊಂದು ಕಿಟಕಿಗಳಿವೆ. ಕಿಟಕಿಗಳು ಇರುವುದು ಲೋಕ ಕಾಣುವುದಕ್ಕೆ ಅಲ್ಲವೇನೇ? ಕಂಡ ಲೋಕವನ್ನು ಒಳಗಿಟ್ಟು ನಿಗೂಢ ಕಾಯಬೇಕು, ಧೇನಿಸಬೇಕು! ಬೆಳಕು ಹಾಯದ ಮೇಲೆ ಎಷ್ಟು ಕಣ್ಣುಗಳಿದ್ದರೇನು ?
ನಿನಗೋ ಸಹಸ್ರ ಕೈಕಾಲುಗಳು ಕಣ್ಣುಗಳು! ನೀನೆಷ್ಟು ಕಂಡಿರಬೇಡ? ನಿನ್ನ ಗತಿಯೋ ಅಗಮ್ಯ ದುರ್ಗಮ್ಯ!
ನನಗೂ "ಗೂಡಾನ್ನ ಪ್ರಿಯ"ವೇ ಕಣೇ! ನಿನ್ನ ಅಂಗಳದಲ್ಲಿ ಇಂದು ಅದನ್ನು ಬಡಿಸಿದಷ್ಟು ತಿಂದೆ.
ನೀನು "ಮಾಂಸನಿಷ್ಠೆಯಂತೆ? " ಆದರೆ ನಾನು ನೋಡು ಮಾಂಸಲಳೇ ಆಗಿರುವೆನಲ್ಲ? ಏನು ತಿಂದರೂ ಕೊನೆಗೆ ಕೊಬ್ಬುವುದು ಮಾಂಸವೇ ತಾನೇ?
ನಿನ್ನ ಹಾಗೆ ನನಗೂ ಹುಲಿ/ಸಿಂಹದ ಸವಾರಿ ಮಾಡಬೇಕೆನಿಸುತ್ತದೆ. ಆದರೆ ಏನು ಮಾಡಲಿ ಹೇಳು ಹುಳ ಹುಪ್ಪಟೆಗಳಿಗೂ ಹೆದರುವೆ ನಾನು. ಒಮ್ಮೆ ಕಿಟಕಿ ತೆರೆ ನಿನ್ನ ಸಾವಿರ ಕೈಗಳನ್ನು ನೋಡಬೇಕಿದೆ ನನಗೆ. ಆಗಲಾದರೂ ಪಾಪಕ್ಕೆ ಪಕ್ಕಾದ ನನ್ನ "ಭಯ ಲೋಭ"ಗಳು ಹಿಂಗಿಯಾವು. ಗೋಡೆಗಳು ಬಿದ್ದು ಬಯಲು ಕಾಣಬಹುದು."
ಯಾರೋ ಬಂದರು. ನಮ್ಮ ಸಂಭಾಷಣೆ... ಅಲ್ಲಲ್ಲ ನನ್ನ ಸ್ವಗತ ( ಸಾಲಿಲೊಕಿ) ತುಂಡಾಯಿತು. ಹೊರಗೆ ದೊಡ್ಡ ಪ್ರಾಕಾರ. ಅಲ್ಲಿ ಕುರ್ಚಿಗಳನ್ನು ಇಟ್ಟಿದ್ದರು. ಅಲ್ಲಿ ಹೋಗಿ ಸುಮ್ಮನೇ ಕಣ್ಣು ಮುಚ್ಚಿ ಕುಳಿತೆ. ಅಷ್ಟರಲ್ಲಿ ವಿದ್ಯುತ್ ಪೂರೈಕೆ ತುಂಡಾಯಿತು. ದೀಪಗಳು ಆರಿಹೋದವು. ದ್ವಿಜಾವಂತಿ ರಾಗದ "ಅಖಿಲಾಂಡೇಶ್ವರಿ" ಹಾಡು ಒಳಗಿನಿಂದ ಒದ್ದುಕೊಂಡು ಬಂದಿತು. ತಕ್ಷಣ ನನಗೆ ಅರಿವಿಲ್ಲದಂತೆ ಕಣ್ಣೀರು ಇಳಿಯತೊಡಗಿತು. ಕತ್ತಲಲ್ಲಿ ನಾನೊಬ್ಬಳೇ ! ಅದು ಹೇಗೆ ಗುಡಿಯ ಒಳಗೆ ಅವಳಿದ್ದಳಲ್ಲ? ಹೊರಗೆ ಅವಳದೇ ನೇರಕ್ಕೆ ನಾನು ಕುಳಿತಿದ್ದೆ.
ಬೆಳಿಗ್ಗೆ ಗುಡಿಯ ಮುಂದೆ ಹೂ, ಬಳೆ, ಅರಿಸಿನ ಕುಂಕುಮ, ಪರಿಮಳದ್ರವ್ಯ, ಕುಪ್ಪಸದ ಖಣಗಳ ಸಂತೆ. "ನಾನೇನು ಬಳೆ ತೊಟ್ಟುಕೊಂಡಿದ್ದೇನಾ" ಎಂದು ಮೀಸೆ ಹುರಿಮಾಡುವ ಬಹದ್ದೂರ್ ಗಂಡೂ ಕೂಡ ನತಮಸ್ತಕನಾಗಿ ಇಲ್ಲಿ ಹೂ ಕುಂಕುಮ, ಬಳೆಗಳು ತುಂಬಿದ ಹರಿವಾಣ ಹಿಡಿದು, ಅಂಗಿ ಕಳಚಿ ದೈನ್ಯನಾಗಿ ನಿಲ್ಲುತ್ತಾನೆ -ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೊರಗಿನ ಸಮಾಜಕ್ಕೆ ಇರುವ ಒಂದು ಡಯಲಕ್ಟಿಕಲ್ ಸಂಬಂಧ ಸ್ವರೂಪದ ಪ್ರತೀಕದಂತೆ. ಹರಿವಾಣ ಅಣಕಿಸುತ್ತದೆ. "ಎಷ್ಟು ಬಳೆ ಹಾಕಿಕೊಂಡರೂ ಸಾಲುವುದಿಲ್ಲ ಅಮ್ಮನಿಗೆ ನೋಡು" ಎಂದು ದೇವೀ ಉಪಾಸಕಿ ಶೋಭಾ ಶಣೈಅವರು ತಮ್ಮ ಅಮ್ಮನನ್ನು ಕೊಂಡಾಡುತ್ತಿದ್ದುದು ನೆನಪಾಗುತ್ತದೆ.
(ಬಳೆ, ಕುಂಕುಮಕ್ಕೆ ಹಚ್ಚಿಕೊಳ್ಳಬೇಕೆಂದಲ್ಲ. ಕೆಲವರು ತೊಡಲೇ ಬೇಕು, ಇನ್ನು ಕೆಲವರು ತೊಡಲೇ ಬಾರದು ಎನ್ನುವ ನಿಷೇಧದ ಬಗ್ಗೆ ದನಿ ಎತ್ತಬೇಕಾಗಿದೆ. ಬಳೆ ತೊಡುವ ಕಾರಣಕ್ಕಾಗಿಯೇ ದುರ್ಬಲ ಎನ್ನುವುದಾದರೆ. ಅದು ದೌರ್ಬಲ್ಯವಲ್ಲ ಶಕ್ತಿ ಎಂದು ಸಾಬೀತು ಪಡಿಸುವ ಅಗತ್ಯ ಇದೆ)
ಜಾತಿವಿಜಾತಿಯನ್ನದೇ ಇಲ್ಲಿ ಅನ್ನದಾಸೋಹದ ಪುಣ್ಯಕಾರ್ಯ ನಡೆಯುತ್ತದೆ. ಅಮ್ಮನಲ್ಲವೇ ? ಸದಾ ಅವಳಿಗೆ ತನ್ನ ಮಕ್ಕಳ ಹೊಟ್ಟೆಯದೇ ಚಿಂತೆ.
ಟಿಪ್ಪು ಮತ್ತು ಹೈದರಾಲಿ ಈ ದೇವಾಲಯವನ್ನು ರಕ್ಷಿಸಿ ಪೋಷಿಸಿದರಂತೆ ಆ ಕಾರಣವಾಗಿ ಅವರ ನೆನಪಿನಲ್ಲಿ ಸಂಜೆಯ ಹೊತ್ತು ಸಲಾಂ ಪೂಜೆ ನಡೆಯುತ್ತದೆ ಎಂದು ಗೂಗಲ್ ಹೇಳುತ್ತದೆ.
ಇಲ್ಲಿ ಶಿವ ವಿಷ್ಣು ಗಣಪತಿ ಇತ್ಯಾದಿ ದೇವತೆಗಳು ನೆಲೆಸಿರುವುದು ಗರ್ಭಗುಡಿಯ ಹೊರಗಿನ ಪ್ರಾಕಾರದಲ್ಲಿ. ಅವಳ ಮನೆಯೆಂದ ಮೇಲೆ ಅವಳೇ ಒಡತಿಯಾಗಬೇಕಲ್ಲವೇ? ಜೊತೆಗೆ ಸಿಂಹ /ಹುಲಿ ಬೇರೆ! ಇದು ಪ್ರಳಯಭಯಂಕರಿಯ ಹೊತ್ತ ಸಿಂಹವಲ್ಲ. ಬದಲಾಗಿ ಆತ್ಮದ ಗುಹೆಯೊಳಗೆ ಇರುವ ಕೇಸರಿ! ಅದನ್ನು ಸಾತ್ ಮಾಡಿಕೊಂಡವಳು ದುರ್ಗಾಪರಮೇಶ್ವರೀ! ಗುಹೇಶ್ವರೀ! ಅವಳ ಮೂಲ ಸ್ಥಳವೂ ಒಂದು ಗುಹೆಯೇ. ದೇವಸ್ಥಾನದಿಂದ ಎರಡು ಕಿ.ಮೀ ಎತ್ತರದ ಗುಹೆಯೊಳಗೆ ಅವಳ ವಾಸ. ಈ ಜಾಗಕ್ಕೆ ಸುಪಾರ್ಶ್ವ ಮುನಿ ಗೋರಕ್ಷನಾಥ ಮುಂತಾದ ಹೆಸರುಗಳು ಲಗತ್ತಾಗಿವೆ. ಬಹುಶಃ ಅವರು ಇಲ್ಲಿ ಬಂದು ತಪಸ್ಸು ಮಾಡಿರಬೇಕು!
ನಮಗೋ ಗುಹೆಯ ಹೊರಗೇ ಅಲೆಯುವುದರಲ್ಲಿ ಆಸಕ್ತಿ. ಈ ಅಲೆತದಲ್ಲಿ ದಾರಿಯ ತೋರು ಫಲಕಗಳೇ ದಾರಿಗಳಾಗಿಬಿಡುತ್ತವೆ. ನಮ್ಮ ದಾರಿಯನ್ನು ನಾವು ನಡೆಯುವುದೇ ಇಲ್ಲ. ಫಲಕಗಳನ್ನು ಹಿಡಿದುಕೊಂಡು ಪರಸ್ಪರ ಗುದ್ದಾಡುವುದರಲ್ಲೇ ವ್ಯಸ್ತರಾಗಿಬಿಡುತ್ತೇವೆ. ಹೊರಗೇ ಉಳಿದುಬಿಡುತ್ತೇವೆ.
" ಈ ಒಡಲು ಕಲ್ಪಾಂತರ ಸ್ಥಾಯಿಯೇ ಪೇಳಾ?" (ಪಂಪ)



