Monday, 14 August 2023

Amma Auto

ಅಮ್ಮ ಮತ್ತು ಖಾರಾಸೇವೆ: (ಸೆಪ್ಟೆಂಬರ್ ‌೩೦ ೨೦೧೯) "ಎಂಟು ಗಂಟೆಗೇ ಅವರು ಬರಬೇಕಿತ್ತು. ಇನ್ನೂ ಬರಲಿಲ್ಲ. ಈಗ ಎಷ್ಟು ಗಂಟೆ" ಅಮ್ಮನಿಗೆ ಇನ್ನೇನು ತೊಂಬತ್ತನಾಲ್ಕು ವಸಂತ ಭರ್ತಿ. ಯಾವಾಗಲೂ ಯಾರನ್ನೋ ಕಾಯುತ್ತಿರುತ್ತಾರೆ. " ಯಾರಮ್ಮಾ? ಯಾರು ಬರ್ತಾರಂತೆ? ಅವರು ನಿನಗೆ ಗೊತ್ತಾ? ಏನು ಹೆಸರು" " ಅವರು ಕಣೇ ಅವರು.. ರಾಘವೇಂದ್ರ ಸ್ವಾಮಿ ಭಕ್ತರು. ಹಿಂದೇನೂ ಎರಡು ಸಲ ಬಂದಿದ್ದರು. ಈಗ ಬರ್ತೀನಿ ಅಂತ ಹೇಳಿದ್ರು. ಯಾಕೋ ಬಂದಿಲ್ಲ. ಅಥವಾ ಬಂದು ಹೊರಟು ಹೋದರೋ. ಅದಕ್ಕೆ ಬಾಗಿಲು ತೆಗೆದೇ ಇರು ಅಂತ ಹೇಳಿದ್ದು. ಅವರು ಯಾರಿಗೂ ಗೊತ್ತಾಗದ ಹಾಗೆ ಬರೋದು" ರಾತ್ರಿ ಒಂಬತ್ತು ಗಂಟೆ ಬೆಂಗಳೂರಿನ ನಿರ್ಜನ ಪ್ರದೇಶದಲ್ಲಿ ಮನೆ. ಮನೆಯಲ್ಲಿ ನಾನು ಅಮ್ಮ ಇಬ್ಬರೇ. ಬಾಗಿಲು ಹಾಕಬೇಡ ಅಂದರೇ? "ನೋಡು ಮಂತ್ರಾಕ್ಷತೆ ಕೊಟ್ಟು ಹೋಗಿದ್ದಾರೆ ಎಲ್ಲರಿಗೂ ಕೊಡು" "ಸರಿ ಎಲ್ಲಿ? ಕೊಡು ಮಂತ್ರಾಕ್ಷತೆ" ಖಾರಾಶೇವೆ ಇಟ್ಟ ಡಬ್ಬಿಯನ್ನು ಕೊಟ್ಟಳು. ಎಲ್ಲರಿಗೂ ಮಂತ್ರಾಕ್ಷತೆ ಕೊಟ್ಟಂತೆ ಮಾಡಿದೆ. ಅತ್ತಿಗೆ ನಿಜವೆಂದು ಭಾವಿಸಿ 'ನನಗೆ ಬೇಡ' ಎಂದಳು. ಸುಮ್ಮನೇ ತೊಗೋಳ್ಳೆ ಎಂದು ಗಡುಸಾಗಿ ಹೇಳಿ ಕಣ್ಣು ಮಿಟುಕಿಸಿ ಹುಸಿನಗೆ ನಕ್ಕ ಅಣ್ಣ. ಮುಂಬಯಿ ನಿಂದ ಬೆಂಗಳೂರಿನ ಅಣ್ಣನ ಮನೆಗೆ ಕಾಲಿಟ್ಟು ಬಚ್ಚಲಿನಿಂದ ಹೊರ ಬರಲಿಕ್ಕಿಲ್ಲ, ' ದೇವರು ಮನೆ ನೋಡಿದ್ಯೇನೆ.... ನೀನು ಬಿ.ಎ. ಓದುವಾಗ ಪ್ಲಾಸ್ಟಿಕ್ ವೈರಿನ ಹಾರಮಾಡಿದ್ಯಲ್ಲಾ ಅದೇ ಈ ರಾಘವೇಂದ್ರ ಸ್ವಾಮಿಗಳ ಪಟಕ್ಕೆ ಹಾಕಿರುವುದು. ಎಷ್ಟು ಚೆನ್ನಾಗಿದೆ ನೋಡು' ಅಮ್ಮನ ದೇವರು ಮನೆಯೆಂದರೆ ನೋಡುವಂತಹುದೇ. ಅಷ್ಟು ಚೊಕ್ಕಟ ಶುಭ್ರ. ದೇವರುಗಳ ಜಾತ್ರೆ. ಅದರಲ್ಲಿ ರಾಘವೇಂದ್ರ ಸ್ವಾಮಿಗಳದ್ದೇ ಹೆಚ್ಚು. ಎಷ್ಟು ಹೂವಿದ್ದರೂ ಸಾಲದು ಪೂಜೆಗೆ. ಮಾರನೆಯ ದಿನ ನಿರ್ಮಾಲ್ಯಕಳೆಯುವುದಕ್ಕೇ ಬೇಕು ಅರ್ಧ ಗಂಟೆ. "ರಾಘವೇಂದ್ರ ಸ್ವಾಮಿನೇ ಹೇಳಿ ಕಳುಹಿಸಿದ್ದಾರಂತೆ. ಮಂತ್ರಾಲಯಕ್ಕೆ ನನ್ನನ್ನು ಕರೆದುಕೊಂಡು ಹೋಗಲು ಬರ್ತೀನಿ ಅಂತ ಹೇಳಿದ್ದಾರೆ. ಯಾಕೋ ನೋಡು ಇನ್ನೂ ಬಂದಿಲ್ಲ. ಅವರ ಪಾದದಲ್ಲಿ ನನ್ನನ್ನು ಸೇರಿಸಿಕೊಳ್ಳುತ್ತಾರಂತೆ. ಆಮೇಲೆ ಇನ್ನೇನು? ಏನೂ ಇಲ್ಲ. ಇನ್ನೇನು ಎರಡು ತಿಂಗಳು ನನಗೆ ನೂರು ವರ್ಷ ಆಗುತ್ತಲ್ಲ?" "ಸುಮ್ಮನೇ ಸುಳ್ಳು ಹೇಳಬೇಡ ನಿನಗೆ ೯೪ ವರುಷ ಅಷ್ಟೇ ಇನ್ನೂ ಆರು ವರುಷ ಬಾಕಿ ಇದೆ" "ಇಲ್ಲ ಇನ್ನು ನಾಲ್ಕು ವರ್ಷ..." ಇಲ್ಲ ಎರಡು ತಿಂಗಳು" ಅಮ್ಮನ ಲೆಕ್ಕ ತಪ್ಪಿ ಐದಾರು ವರ್ಷಗಳೇ ಕಳೆದಿವೆ. ತನ್ನ ಬಾಲ್ಯದ ಕಥೆ. ಅದನ್ನು ಕಳೆದ ಮನೆ, ಮಂದಿ, ಊರು ಅಲ್ಲಿಯ ಜನ ಅದರ ಲೆಕ್ಕ ಮಾತ್ರ ಕರಾರುವಾಕ್ಕಾಗಿ ನೆನಪಿದೆ. ಹದಿಮೂರೊಂಬತ್ಲಿ...೧೧೭ ಬಾಯಲ್ಲೇ ಇದೆ. ಅಮ್ಮನಿಗೆ ಮದುವೆಯಾಗಿ ಎಂಟು ವರ್ಷಗಳ ಕಾಲವಾದರೂ ಮಕ್ಕಳಾಗಲಿಲ್ಲವೆಂದು ರಾಘವೇಂದ್ರ ಸ್ವಾಮಿಗಳಿಗೆ ಹರಕೆ ಹೊತ್ತು, ೪೮ ದಿನ ವ್ರತ ಮಾಡಿದಮೇಲೆ ಅಣ್ಣ ಹುಟ್ಟಿ, ಆನಂತರ ಸಾಲಾಗಿ ನಾವು ನಾಲ್ಕು ಮಕ್ಕಳು ಹುಟ್ಟಿ ಒಟ್ಟಿನಲ್ಲಿ ಅಮ್ಮ ಐದು ಮಕ್ಕಳ ತಾಯಿಯಾದಳು. ಕಾಲಕ್ರಮೇಣ ಅಮ್ಮನ ದೈವ ಕೆಟ್ಟಿತು. ರಾಘವೇಂದ್ರ ಸ್ವಾಮಿಗಳ ವರದಿಂದ ಹುಟ್ಟಿದ ಮಗನನ್ನು ೨೭ ವರುಷಗಳ ಬಳಿಕ 'ಅವರೇ ಕರೆಸಿಕೊಂಡು ಬಿಟ್ಟರು' ಅಮ್ಮನಿಗೆ ಹೆಚ್ಚಿನ ಮರೆವು ಬಂದಿದ್ದರೂ. ರಾಘವೇಂದ್ರ ಸ್ವಾಮಿಯನ್ನು ಮರೆತಿಲ್ಲ. ಅಪಘಾತದಲ್ಲಿ ೪೪ ವರ್ಷಗಳ ಹಿಂದೆ ಗತಿಸಿದ ಮಗನನ್ನು ಮರೆತಿಲ್ಲ. ಅಂಥ ಮಗನನ್ನು ಇಟ್ಟುಕೊಳ್ಳುವ ಯೋಗ ನನಗಿಲ್ಲದೇ ಹೋಯಿತು ಎಂದು ಅರಳು ಮರುಳಿನ ನಡುವೆಯೂ ಹಲುಬುತ್ತಾರೆ. ಮಂತ್ರಾಕ್ಷತೆ ಯೆಂದು ಡಬ್ಬಿಯಲ್ಲಿಟ್ಟುಕೊಂಡ ಖಾರಾಶೇವೆಯನ್ನು 'ಇಂದಾ ಇಂದಾ, ಹಿಡಿ ಹಿಡಿ.... ಅಕ್ಷತೆ ತೊಗೋ ಒಳ್ಳೆಯದಾಗುತ್ತದೆ' ಎನ್ನುವುದು ತಪ್ಪಿಲ್ಲ. ಬೆಳಿಗ್ಗೆ ಎದ್ದು ಹೊಸ್ತಿಲು ತೊಳೆದು ರಂಗೋಲಿ ಇಕ್ಕಿ, ಸ್ನಾನ ಮಾಡಿ, ದೇವರ ಮನೆ ಸೇರಿದಳೆಂದರೆ, ಹೊರಬರುವುದು ಒಂದೂವರೆ ಗಂಟೆಯ ಮೇಲೆಯೇ. ಆಮೇಲೆ ಕಾಫಿ ತಿಂಡಿ. ಊಟ ಮಾಡುವುದನ್ನು ಬಿಟ್ಟು ನಾಲ್ಕೈದು ವರ್ಷಗಳಾಗಿವೆ. ಕೇವಲ ಫಲಾಹಾರ. ಆದರೆ ಖಾರಾಶೇವೆ ಮಾತ್ರ ಸದಾ ದಿಂಬಿನಡಿಯಲ್ಲಿ ಇರಬೇಕು. "ನಿನ್ನನ್ನು ಕಂಡರೆ ಅದೇನೋ ರಾಘವೇಂದ್ರ ಸ್ವಾಮಿಗಳಿಗೆ ಇಷ್ಟವಂತೆ" ಪಕ್ಕದಲ್ಲಿ ಕೂತಾಗ ಇದ್ದಕ್ಕಿದ್ದಂತೆ ಹೇಳಿದಳು. ವಾಹ್ ಮೇರಾ ನಂಬರ್ ಆಗಯಾ ಎಂದು ಕೊಂಡವಳು "ಹೌದಾ. ಏನಂತಾರೆ ನಿನ್ನ ರಾಘವೇಂದ್ರ ಸ್ವಾಮಿಗಳು? ಮಗಳನ್ನು ಬೇಗ ಕಳುಹಿಸು ಅಂದ್ರಾ?" ಎಂದು ಕೇಳಿದೆ. "ಛೇ ಇಲ್ಲ ಕಣೇ.... ನಾನಿನ್ನೂ ಗುಂಡುಕಲ್ಲಾಗಿ ಇಲ್ಲವಾ ಎನ್ನುವ ಭಾವದಲ್ಲಿ ನೀನು ಇಷ್ಟೆಲ್ಲಾ ಓದು ಬರೆದೂ ಮಾಡಿದ್ದೀಯಲ್ಲಾ? " (ಅವರ ಕೃಪೆ) ಹೊರಗೆ ಮಂಕು ಬೀದಿ ದೀಪ. ಕಷ್ಟಪಟ್ಟು ಅಮ್ಮ ಮೆಟ್ಟಿಲು ಇಳಿಯುತ್ತಿದ್ದಾಳೆ. "ಎಲ್ಲಿಗೆ ಹೋಗ್ತೀಯಮ್ಮಾ" ಮಾತಿಲ್ಲ.... ಸುಮ್ಮನೇ ಗೇಟಿನ ಬಳಿಗೆ ನಡೆದಳು. ಮೆಟ್ಟಿಂಗಾಲು ಹಾಕಿ ಯಾರನ್ನೋ ಗೇಟಿನಾಚೆ ಹುಡುಕುತ್ತಿದ್ದಳು...... ****************** ಅಮ್ಮನ ವಾರ್ಷಿಕ ಶ್ರಾದ್ಧದ ಎರಡನೆಯ ದಿನ ಇಂದು. ರಾಘವೇಂದ್ರ ಸ್ವಾಮಿಗಳ ಆರಾಧನೆ ನಡೆಯುತ್ತಿರುವಾಗಲೇ ಅಮ್ಮ ತೀರಿಕೊಂಡಿದ್ದು ಒಂದು ಆಕಸ್ಮಿಕ.

America Seattle

ಅಮೇರಿಕಾದಲ್ಲೊಂದು ಅಚ್ಛೋದ ಸರೋವರ... ಸಮುದ್ರ ಮಥನವನ್ನು ನಾವು ಕಲ್ಪಿಸಿಕೊಳ್ಳಬೇಕು. ಅದಕ್ಕೆ ಮಿಥಿಕಗಳು ನಮಗೆ ರೆಕ್ಕೆಯನ್ನು ಒದಗಿಸುತ್ತವೆ. ಅದರ ಭವ್ಯತೆಯ ಅನುಭವ ನಮಗಾಗಬೇಕಾದರೆ ನಮ್ಮ ಕಲ್ಪನಾಶಕ್ತಿಯೂ ಅಷ್ಟು ಎತ್ತರಕ್ಕೆ ಏರಬೇಕು! ಕ್ರೇಟರ್ ಲೇಕ್ ನ ಮುಂದೆ ನಿಂತಾಗ ಅನಾಮತ್ತಾಗಿ ನಮ್ಮ ಸಮುದ್ರ ಮಥನದ ಮಿಥಿಕಕ್ಕೆ ಒಂದು ವಾಸ್ತವ ಸ್ಪರ್ಶ ಒದಗಿ ಬಿಟ್ಟಿತು. ಆ ಅನುಭವವೊಂದು ಮಿಥಿಕ ಮತ್ತು ವಾಸ್ತವತೆಯ ಅಭೂತಪೂರ್ವ ಸಂಗಮ. ಅಲ್ಲಿನ ಕ್ಲಮಾತ್ ಆದಿವಾಸಿ ಜನರ ನಂಬಿಕೆಯ ಪ್ರಕಾರ (Makalak legend) ಎರಡು ಪೌರಾಣಿಕ ದೈತ್ಯ ಶಕ್ತಿಗಳ ನಡುವೆ ನಡೆದ ಘೋರ ಯುದ್ಧದ ಪರಿಣಾಮವಾಗಿ ಈ ಬೃಹತ್ ಸರೋವರ ಸೃಷ್ಟಿಯಾಯಿತಂತೆ, ಅದಕ್ಕೆ ಗೀವಾಸ್ ಎಂದು ಮೂಲನಿವಾಸಿಗಳು ಇಟ್ಟ ಹೆಸರು. ಇದಕ್ಕೆ ಅವರ ಭಾಷೆಯಲ್ಲಿ ಶಕ್ತಿಯುತವಾದ ಸರೋವರ ಎಂದೂ ಅರ್ಥವಿದೆಯಂತೆ. ಜ್ವಾಲಾಮುಖಿಯ ಸ್ಫೋಟದೊಂದಿಗೆ ಯುದ್ಧ ಕೊನೆಗೊಂಡಿತಂತೆ! ಎಲ್ಲ ಯುದ್ಧಗಳ ಅಂತಿಮ ಪರಿಣಾಮವೂ ಜ್ವಾಲಾಮುಖಿಯ ಆಸ್ಫೋಟವೇ! ಅದರ ಕುರುಹಾಗಿ ಆದಿವಾಸಿಗಳು ಶೋಕಾಚರಣೆಯನ್ನು ಆಚರಿಸುತ್ತಾರಂತೆ. ನಮಗೆ ಎರಡು ತಲೆಮಾರಿನ ಹಿಂದಿನ ನಮ್ಮ ಪೂರ್ವಜರ ಹೆಸರೇ ಗೊತ್ತಿರುವುದಿಲ್ಲ! ಅಂತಹುದರಲ್ಲಿ ಸುಮಾರು ೭೭೦೦ ವರುಷಗಳ ಹಿಂದಿನ ಒಂದು ಚಾರಿತ್ರಿಕ ಘಟನೆಯ ಅದ್ಭುತ ಪರಿಣಾಮವೊಂದು ಸಾಕ್ಷಾತ್ತಾಗಿ ಕಣ್ಣೆದುರಿಗೆ ವಿರಾಜಮಾನವಾಗಿದೆಯೆಂದರೆ? ಕಾಲನ ಅಗಾಧ ಚಲನೆಯ ವಾಸನೆ ಹತ್ತಿ ಒಂದು ರೀತಿಯ ಅಲೌಕಿಕ ಅನುಭವ ಒಳಗೆ ಸುಳಿಯುತ್ತದೆ. ಸು.ಏಳುಸಾವಿರ ವರ್ಷಗಳ ಹಿಂದೆ ಸ್ಫೋಟಗೊಂಡ ೧೨೦೦೦ ಅಡಿಗಳ ಜ್ವಾಲಾಮುಖಿಯಿಂದಾಗಿ ಮೌಂಟ್ ಮಝಾಮಾ ಪರ್ವತ ಕುಸಿದಾಗ ಉಂಟಾದ ಸರೋವರವೇ ಕ್ರೇಟರ್ ಲೇಕ್. ಒರೆಗಾನ್ ರಾಜ್ಯದಲ್ಲಿರುವ ೧೯೪೯ ಅಡಿ ಆಳವಿರುವ ಈ ಸರೋವರ ಅಮೇರಿಕಾ ದೇಶದಲ್ಲಿಯೇ ಅತ್ಯಂತ ಆಳವಾದದ್ದು ಎಂದು ಹೆಸರು ಪಡೆದಿದೆ. ಆರು ಮೈಲಿ ಉದ್ದ ಮತ್ತು ಐದು ಮೈಲಿ ಅಗಲ. ಫ್ಯಾಂಟಮ್ ಶಿಪ್ ಮತ್ತು ವಿಝಾರ್ಡ್ ಐಲ್ಯಾಂಡ್ಸ್ ಎಂಬ ಎರಡು ದ್ವೀಪಗಳೂ ಇವೆ. ಕ್ರೇಟರ್ ಲೇಕ್ ಸುತ್ತ ಇರುವ ಕಾಡಿಗೆ ಕ್ರೇಟರ್ ಲೇಕ್ ನ್ಯಾಷನಲ್ ಪಾರ್ಕ್ ಎಂದೇ ಹೆಸರು. ಸರೋವರ ಪ್ರದಕ್ಷಿಣೆ ಮಾಡಲು ಅನುಕೂಲವಾಗುವಂತೆ ಕಾಡಿನೊಳಗೆ ಸಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಅಲ್ಲಲ್ಲಿ ಕೆಫೆಟೇರಿಯಾಗಳು, ಶೌಚಾಲಯಗಳು, ಊಟಮಾಡಲು ಮೇಜು, ಬೆಂಚುಗಳು, ಅಡುಗೆ ಮಾಡಿಕೊಳ್ಳಲು ಗ್ರಿಲ್ ಉಳ್ಳ ಸೌದೆ ಒಲೆಗಳು ಇದ್ದು ಪ್ರವಾಸಿಗರು ಆಯಾಸವಿಲ್ಲದೆ ಸುತ್ತಿ ಬರಬಹುದಾಗಿದೆ. ಇದು Klamath ಭಾಷೆಯನ್ನಾಡುವ ಮೂಲವಾಸಿಗಳ ಪವಿತ್ರ ಕ್ಷೇತ್ರವೂ ಆಗಿದೆ. ಈ ಸರೋವರದ ನೀರು ಎಷ್ಟು ತಿಳಿ ಎಂದರೆ ಆಕಾಶ ಮತ್ತು ಸುತ್ತಮುತ್ತಲಿನ ಗುಡ್ಡ ಗಿಡಗಳ ಪ್ರತಿಬಿಂಬವನ್ನು ಕಾಣಬಹುದಾಗಿದೆ ಆದುದರಿಂದಲೇ ಇದಕ್ಕೆ reflection lake ಎಂದು ಹೆಸರು. ಈ ಸರೋವರಕ್ಕೆ ಯಾವ ನದಿಯ ಸಂಪರ್ಕವೂ ಇಲ್ಲ. ಇದು ಸ್ವಯಂಭೂ. ತನ್ನ ನೀರನ್ನೇ ಆವಿಯಾಗಿ ಮೇಲೆ ಕಳುಹಿಸಿ ಮತ್ತೆ ಕೆಳಗೆ ತುಂಬಿಕೊಳ್ಳುತ್ತದೆ. ಬಾಣಭಟ್ಟನ ಕಾದಂಬರಿಯಲ್ಲಿ ಬರುವ 'ಅಚ್ಛೋದ ಸರೋವರ' ಹೀಗೆಯೇ ಇದ್ದಿರಬೇಕು! ಅಲ್ಲಿ ಓಡಾಡುತ್ತಿದ್ದ ಪ್ರೇಮಿಗಳೆಲ್ಲಾ ಚಂದ್ರಾಪೀಡ, ಕಾದಂಬರಿ, ಹಾಗೂ ಮಹಾಶ್ವೇತೆಯರಂತೆಯೇ ಕಂಡರಲ್ಲ? "ಪ್ರಳಯಕಾಲದ ಮೋಡಗಳು ಈ ಕೆರೆಯ ನೀರನ್ನೆ ಹೊತ್ತು ಸಾಗುತ್ತಿರಬೇಕು. ಅದರಿಂದಲೆ ಅವು ಮುಗಿಲನ್ನೆಲ್ಲ ಮುತ್ತಿ ಜಗತ್ತನ್ನೆಲ್ಲ ಮುಳುಗಿಸುವುದು ಸಾಧ್ಯವಾಗುತ್ತದೆ. ಸೃಷ್ಟಿಯ ಮುನ್ನ ಬ್ರಹ್ಮಾಂಡವೆಲ್ಲ ನೀರೇ ನೀರಾಗಿತ್ತು ಎಂದು ಶಾಸ್ತ್ರಗಳಲ್ಲಿ ಓದಿದ್ದೇನೆ. ನನಗನಿಸುತ್ತಿದೆ: ಆ ಆದಿಕಾಲದ ಸಲಿಲವೆ ಒಟ್ಟಾಗಿ ಈ ಸರಸಿಯ ರೂಪ ತಾಳಿದೆ.” (ಬಾಣನ "ಕಾದಂಬರಿ" ಅನುವಾದ ಬನ್ನಂಜೆ ಗೋವಿಂದಾಚಾರ್ಯ) "ಓಹ್! ಏನು ಅದರ ಚೆಲುವು. ಮೂಜಗದ ಚೆಲುವನ್ನು ಪ್ರತಿಬಿಂಬಿಸುವ ರನ್ನಗನ್ನಡಿ. ಸ್ಫಟಿಕದಿಂದ ಕೆತ್ತಿದ ಭೂಮಿ ತಾಯಿಯ ಪ್ರಾಂಗಣ. ಕಡಲನೀರು ಹರಿಯುವ ಕಾಲುವೆದಾರಿ. ದಿಕ್ಕುಗಳೆ ನೀರಾಗಿ ನಿಂತ ನೆಲೆ. ಮುಗಿಲೇ ಇಳಿದುಬಂದ ಸೆಲೆ. ಕೈಲಾಸವೆ ಕರಗಿ ಕೆರೆಯಾದಂತೆ. ಹಿಮಗಿರಿಯೆ ಹರಿದುಬಂದಂತೆ. ಬೆಳದಿಂಗಳೆ ನೀರಾಗಿ ಬಂದಂತೆ. ಹರನ ಅಟ್ಟಹಾಸವೇ ರಸವಾಗಿ ಹರಿದಂತೆ. ಮೂಜಗದ ಸುಕೃತವೆ ಸರೋವರದ ರೂಪ ತಳೆದಂತೆ. ವೈಡೂರ್ಯದ ಗಿರಿಯೆ ನೀರಾಗಿ ನಿಂತಂತೆ. ಶರತ್ಕಾಲದ ಬೆಳ್ಮುಗಿಲ ಮಾಲೆಯೆಲ್ಲ ದ್ರವವಾಗಿ ಒಂದೆಡೆ ಕಲೆತಂತೆ" (ಅದೇ) ಬಾಣಭಟ್ಟ ಕ್ರೇಟರ್ ಸರೋವರವನ್ನು ಬಹುಶಃ ಕಂಡಿರಬೇಕು! ಇಲ್ಲದಿದ್ದರೆ ಅದು ಹೇಗೆ ತದ್ವತ್ತಾಗಿ ಅಚ್ಛೋದ ಸರೋವರವನ್ನು ವರ್ಣಿಸಲು ಅವನಿಗೆ ಸಾಧ್ಯವಾಗುತ್ತಿತ್ತು? ಎಲ್ಲಿಯ ಕ್ರೇಟರ್ ? ಅದೆಲ್ಲಿಯ ಅಚ್ಛೋದ? ವಾಷಿಂಗ್ಟನ್‌ ಎಂದರೆ ಇಂತಹ ಅನೇಕ ಸರೋವರಗಳ ರಾಜ್ಯ. ಕ್ರೇಟರ್ ಲೇಕ್ ನ ಅನತಿ ದೂರದಲ್ಲಿಯೇ ಡೈಮಂಡ್ ಲೇಕ್ ಎನ್ನುವ ಇನ್ನೊಂದು ಸರೋವರವೂ ಇದೆ. ನಾವು ಅಲ್ಲಿಗೆ ಹೋದಾಗ ಸಂಜೆ. ಸೂರ್ಯ ಇಳಿಯುತ್ತಿದ್ದ. ಇಲ್ಲ ,ಇಲ್ಲ ನೀರಿನ ಅಲೆಗಳ ಮೇಲೆ ಸಾವಿರ ಲಕ್ಷ ರೂಪಗಳಲ್ಲಿ ಹೊಳೆಯುತ್ತಿದ್ದ. ಅದ್ವೈತ ಪರಿಕಲ್ಪನೆಯ ಚಿದಾಕಾಶ ಪ್ರತಿಬಿಂಬ ( ಏಕ ಚೈತನ್ಯ ಅನೇಕ ರೂಗಳಲ್ಲಿ ಕಾಣುವ ಅಧ್ಯಾಸ ಅಥವಾ ಆಭಾಸ) ಅನೇಕ ರೂಪಗಳಲ್ಲಿ ಹೊಳೆಯುತ್ತಿತ್ತು. ಚೈತನ್ಯಕ್ಕೆ ಗುಣ, ಬಣ್ಣ, ಸ್ವಾಭಾವಗಳಿಲ್ಲ ಎನ್ನುತ್ತಾರೆ. ಆದರೆ ಅದು ಹೊಳೆಯಿಸುವ ಮಾಧ್ಯಮಗಳಿಗೆ ಮಾತ್ರ ಅದೆಂತಹ ರೂಪ, ವರ್ಣ ವೈಭವ! ನೀರಿನ ಒಂದೊಂದು ಕಣವೂ ಅಕ್ಷರಶಃ ವಜ್ರದ ಹರಳುಗಳಂತೆ ಹೊಳೆಯುತ್ತಿತ್ತು. ಗಾರ್ಲಿಕ್ ಬ್ರೆಡ್ ತಿನ್ನುತ್ತಾ ಅದರ ಮುಂದೆ ಕುಳಿತ ನಮಗೆ ದ್ವೈತ ಮತ್ತು ಅದ್ವೈತದ ದಾರ್ಶನಿಕ ಕಲ್ಪನೆಯೊಂದು ಅಯೋಮಯ ಅನುಭವವಾಗಿ ಒಳನುಗ್ಗಿತು. Insights unavailable for this post OCt 22/22 ಫಾಲ್ : ವರ್ಣ ವೈಭವ.... ಅಮೇರಿಕಾದೊಳಗೆ ಶರತ್ ಕಾಲಿಡುತ್ತಿದ್ದಾನೆ. ಇದಕ್ಕೆ ಇಲ್ಲಿ ಫಾಲ್ ಎನ್ನುತ್ತಾರೆ. ( ಹಳದಿ ಎಲೆಗಳು ಬೀಳುವ ಕಾಲ) ಈ 'ಫಾಲ್' ಗೆ ಸೊಗಸಾದ ಬಣ್ಣಗಳಿವೆ. ಕೆಂಪು, ಕೇಸರಿ ,ಹಳದಿ ,ನಶ್ಯದ ಬಣ್ಣ, ನೀಲಿ ಹೀಗೆ. ಗಿಡಮರಗಳ ಮೇಲೆ ಬಣ್ಣ ಬದಲಾಯಿಸುತ್ತಾ ಕಂಗೊಳಿಸುವ ಇವಕ್ಕೆ ಲಾರ್ಚ್ ಎಂದು ಹೆಸರು. ಶರದೃತುವಿನ ಈ ಬಣ್ಣಗಳಿಗೆ ಫಾಲ್ ಕಲರ್ ಎಂದೇ ಹೇಳುತ್ತಾರೆ. ಅವುಗಳನ್ನು ನೋಡಲು ಜನ ನಿಸರ್ಗ ಧಾಮಗಳಿಗೆ ಧಾವಿಸುತ್ತಾರೆ. ಹಾಗೆ ಬಣ್ಣ ಬದಲಾಯಿಸದ ನಿತ್ಯ ಹರಿದ್ವರ್ಣದ ದೇವದಾರು ಕಾಡುಗಳೂ ಇವೆ . ಈ ದೇವತೆಗಳಿಗೆ ಮುಪ್ಪಿಲ್ಲ. ಶರದೃತುವಿನ ಆನಂತರ ಶಿಶಿರ ಇಲ್ಲಿ ಘೋರ. ಉಣ್ಣೆಯ ಬಟ್ಟೆಗಳು ಒಂದೊಂದಾಗಿ ಹೊರಬರುತ್ತವೆ. ಏನು ಹಾಸಿ, ಹೊದ್ದುಕೊಂಡರೂ, ಚಳಿಯೇ ಗೊತ್ತಿಲ್ಲದ ಮುಂಬಯಿಗರಿಗಂತೂ ಇದು ಘನಘೋರ. ಅರವತ್ತು ಕಳೆದ ನಮ್ಮಂತಹ ವಿದೇಶೀ ಪ್ರವಾಸಿಗರು ಗಂಟುಮೂಟೆ ಕಟ್ಟುವುದೇ ಲೇಸು.. ಸ್ವದೇಶೇ ನಿಧನಂ ಶ್ರೇಯಃ! ವಸಂತ ಕಾಣುವ ಭರವಸೆ ಇಲ್ಲದ ನಾವು, ಶಿಶಿರ ಕಾಲೂರುವ ಮುನ್ನ ಇಲ್ಲಿಂದ ಕಾಲ್ತೆಗೆಯಬೇಕು. "ಶಿಶಿರ ಬಂದಾ"ಎಂದು ಯಾರೂ ಹುರುಪಿನಿಂದ ಹಾಡುವುದಿಲ್ಲ. ಯಾಕೆಂದರೆ ಅವನು ಋತುಗಳ ರಾಜನಲ್ಲ! ಅಲ್ಲಿ ಹಕ್ಕಿಗಳ ಉಲುಹಿಲ್ಲ, ಇನ್ನು "ಹೆಣ್ಗಳನ್ನು ಹೇಗೆ ತಾನೇ ಕುಣಿಸಿಯಾನು? "ಟೂವೀ ಟೂವಿಟ್ಟವೂ" ಕೇವಲ‌ ನೆನಪು ಮಾತ್ರ. ಸಂದು ಸಂದುಗಳಲ್ಲಿ ಶಿಶಿರ ವರಾತ ! ಸಿಕ್ಕಿದಷ್ಟೇ ಸುಗ್ಗಿ. ದಕ್ಕಿದ್ದೇ ಬೋನಸ್. ಏರು ವಯಸ್ಸಿನಲ್ಲಿ ರೊಯ್ಯನೆ ರಾಕೆಟ್ಟಿನಂತೆ ನಖಶಿಖಾಂತ ಏರುವುದಾದರೆ, ಇಳಿವಯಸ್ಸಿನಲ್ಲಿ ಇಳಿಯುವುದೆಂದರೆ ಜರ್ರನೆ ಜಾರುವುದೇ! ಅದು ನಿಧಾನ ಇಳಿಯುವುದಲ್ಲ ದೊಪ್ಪನೆ ಬೀಳುವುದು. ಅದು ನಿಜವಾದ ಫಾಲ್ ( Fall). ಏರುವ, ಇಳಿಯುವ ಎರಡರ ವೇಗದಲ್ಲೂ ಯಾವುದೇ ವ್ಯತ್ಯಾಸವಿಲ್ಲ- "ಕಾಲನೆಂಬುವ ಪ್ರಾಣಿ" ಭೇದದಲಿ ಹೊಕ್ಕಿರಿಯುವ ಪರಿಯನ್ನು ಬಿಟ್ಟರೆ. ಇಲ್ಲಿ ಶಾಶ್ವತವೆಂದರೆ ಬದಲಾವಣೆಯಷ್ಟೇ. ಫಾಲ್ ನ್ನು ನೋಡಲು ನಾವೂ ನಾರ್ಥ್ ಕ್ಯಾಸ್ಕೇಡ್ ನ್ಯಾಷನಲ್ ಪಾರ್ಕ್ ಎನ್ನುವ ಸರೋವರ ಪ್ರದೇಶಕ್ಕೆ ಹೋಗಿದ್ದೆವು. ನಾವಿರುವ ಬೆಲ್ ವ್ಯೂ ವಿನಿಂದ ಮೂರು ಗಂಟೆಗಳ ದಾರಿ . ಇಲ್ಲಿಂದ ಕೆನಡಾ ದೇಶದ ವ್ಯಾಂಕೋವರ್ ನಗರ ಕೂಡ ಬಹಳ ಹತ್ತಿರ ( ಸು. ೧೩೮ ಕಿಮೀ). ಕ್ಯಾಸ್ಕೇಡ್ ತಿಳಿಯಾದ ನೀಲ ಸರೋವರ. ' ಫಾಲ್' ನ ಸಂದರ್ಭದಲ್ಲಿ ನಿಂತ ನನಗೆ ಅದು ಪಾತಾಳ ಬಿಲಕ್ಕೆ ಬಾಗಿಲ್ ವೈಶಂಪಾಯನ ಸರೋವರದ ಹಾಗೆಯೇ ಕಂಡುಬಿಟ್ಟಿತು. ಒಂದಲ್ಲ, ಹಾಗೆ ಹಲವಾರು ಸಣ್ಣ ಪುಟ್ಟ ಸರೋವರಗಳು. ಅದರ ಸುತ್ತ 'ಬೀಳಲು' ಸಿದ್ಧವಾದ ಬಣ್ಣ ಬಣ್ಣದ ಗಿಡಗಂಟಿಗಳು!. ಅದರಾಚೆಗೆ ಸುತ್ತ ಪರ್ವತಗಳ ಸಾಲು. ಕೆಲವು ಗ್ಲೇಸಿಯರ್ ಗುಡ್ಡಗಳು. ಎಲ್ಲವೂ "ಸರೋವರದ ಸಿರಿಗನ್ನಡಿಯಲ್ಲಿ" ನಿಚ್ಚಳ ಕಾಣುತ್ತಿದ್ದವು. ಇದು ಸ್ವರ್ಗಾರೋಹಣವೇ ಸರಿ! ನಾನಂತೂ "ಬದುಕಿರುವಾಗಲೇ ನಾವು ಸ್ವರ್ಗಾರೋಹಣ ಮಾಡಿಯಾಯಿತು. ಇನ್ನು ನಮಗಾಗಿ ಸತ್ತ ಮೇಲೆ ಏನೂ ಮಾಡಬೇಡ, ಮಗನೇ" ಎಂದು ಜೊತೆಯಲ್ಲಿ ಬಂದ ಮಗನಿಗೆ ಹೇಳಿಬಿಟ್ಟೆ. ಬದುಕಿದ್ದಾಗ ನರಕ ದರ್ಶನ ಮಾಡಿಸಿ‌ ಸತ್ತಮೇಲೆ ಸ್ವರ್ಗ ತೋರಿಸಿದರೆ ಏನು ಪ್ರಯೋಜನ ಕಾ ಕಾ ಕರೆದು ಪಿಂಡ ಹಾಕಿದರೆ!! ಇಲ್ಲಿ ಎಲ್ಲಾ (ಲಾರ್ಚ್ ) ಗಿಡಗಳು ಏಕಕಾಲಕ್ಕೆ ಬಣ್ಣ ಬದಲಿಸುವುದಿಲ್ಲ. ತಮ್ಮ ತಮ್ಮ ವೈಯಕ್ತಿಕ ಗುಣಧರ್ಮಕ್ಕೆ ಹಾಗೂ ಋತದ ಸ್ವಭಾವಕ್ಕೆ ಅನುಗುಣವಾಗಿ ಅವು ಮಾಗುತ್ತವೆ. ಧರಾಶಾಯಿಯಾಗುತ್ತವೆ. ಈ ವ್ಯತ್ಯಾಸವೇ ಬಣ್ಣಗಳ ಜಾತ್ರೆಗೆ ಕಾರಣ. ಕೆಲವು ಹಿಂದು, ಇನ್ನು ಕೆಲವು ಮುಂದು. ಒಬ್ಬೊಬ್ಬರ ಆಯಸ್ಸಿಗೆ ಒಂದೊಂದು ಕಾಲ. "ಸೂಳ್ ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್"( ಪಂಪ ) "ಶಾರು ಹೋಗಿಯಾಯಿತು ನನಗಿಂತ ಚಿಕ್ಕವಳು! ನಾನಿನ್ನೂ ಬದುಕಿದ್ದೀನಿ" ಎಂದು ಅಮ್ಮ ಹೇಳುತ್ತಿದ್ದಳು. "ಶಾರು ಲೆಕ್ಕ ಶಾರುಗೆ, ನಿನ್ನ ಲೆಕ್ಕ ನಿನಗೆ " ಎಂದು ನಾನು ಅವಳನ್ನು ಸುಮ್ಮನಿರುವಂತೆ ಗದರುತ್ತಿದ್ದೆ. ಯಾರ ಲೆಕ್ಕ ಯಾರಿಗೆ? ಸರತಿಯಲ್ಲಿ ನಿಂತಿದ್ದೇವೆ ಸರಿ! ಆದರೆ ಸರತಿ ಸಾಲಿನಲ್ಲಿ ನಾವು ಎಷ್ಟನೆಯವರು ? ಯಾರು ಹೇಳುವವರು? ಅಮ್ಮ ಹೋಗಿಯಾಯಿತು ಸಾವಿಗೂ ನನಗೂ ಇದ್ದ ಗೋಡೆ ಈಗ ಬಿದ್ದು ಹೋಗಿದೆಯಲ್ಲ ? ಈಗ ನಾನು ಮತ್ತು ಸಾವು ನೇರಾ ನೇರ !(ಭೈರಪ್ಪನವರ ಮಾತು ನೆನಪಾಗಿ) ಈ ಸರತಿ ಸಾಲಿಗೆ ಅದರ‌ದೇ ಆದ ಕಾಲಮಾನ (chronology) ಇರುವಂತಿದೆ. ನಮ್ಮ "ಗಡಿಯಾರದಂಕಿ ಇಲ್ಲಿ ಪಾವನ"ವಲ್ಲ! 'ಏಳು ಹೆಜ್ಜೆ' ಜೊತೆ ಜೊತೆ ಯಾಗಿ ಪಯಣಿಸಿದರೂ, ಜೊತೆಯಾಗಿ ಉಡ್ಡಯನ ಸಾಧ್ಯವಿಲ್ಲ. ಶಂಭಾ ಜೋಶಿಯವರಂತಹವರಿಗೋ, ಕುರ್ತುಕೋಟಿಯವರಂತಹ ಅದೃಷ್ಟವಂತರಿಗೋ ಮಾತ್ರ ಅದು ಸಾಧ್ಯ. ಉಳಿದವರಿಗೆ ಕೆ.ಎಸ್.ನ ಅವರ "ನಾರಾಯಣ ನಾರಾಯಣ" ನೇ ಗತಿ. ಜೀವನ ಸಂಗಾತಿಗಳಾದರೇನು? ಶಿಶಿರ ಎನ್ನುವುದು ಸಾಪೇಕ್ಷವೇ! "Things fall apart; the centre cannot hold" (W.B. Yeats) ಋತಚಕ್ರಕ್ಕೆ ಬದ್ದವಾಗಿ ಹಳದಿ ಎಲೆಗಳು ಸಂತೃಪ್ತವಾಗಿ, ಚಿಗುರೊಡೆಯುವ ಹಸಿರುಗಳನ್ನು ಕಣ್ತುಂಬಿಕೊಳ್ಳುತ್ತಾ ನೆಲಕ್ಕೆ ಬೀಳಬೇಕು. ಅದೇ ಸುಖ.ಅದೇ ಚೆಲುವು! ಅದುವೇ 'ಫಾಲ್ 'ನ ಬಣ್ಣ ( Fall colour) , ಅದರ ವೈಭವ. OCT 2 ಅಮೇರಿಕನ್ ಸೂಪರ್ ಬಜಾರಿನಲ್ಲಿ ಸಿಹಿಕುಂಬಳ ಜಾತ್ರೆ.. ಅಮೇರಿಕನ್ ಸೂಪರ್ ಬಜಾರಿನಲ್ಲಿ "ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು" ಮಾತ್ರವಲ್ಲ ಸಿಹಿಕುಂಬಳಕಾಯಿ ಬೀಜವೂ ಸಿಗುತ್ತದೆ. ಇಲ್ಲಿ ಅದಕ್ಕೆ ಬಾದಾಮಿ, ಗೋಡಂಬಿ ಹಾಗೂ ಪಿಸ್ತಾಗಳ‌ ಸ್ಥಾನ ಮತ್ತು‌ ಬೆಲೆ. ಇಲ್ಲಿರುವ ಸೇಫ್ ವೇ ಎಂಬ ಮಾಲ್ ನ ಹೊರಗೆ ಸುಮಾರು ಎರಡು ಲಾರಿಗಳಷ್ಟು ಸಿಹಿಕುಂಬಳಕಾಯಿಗಳನ್ನು ಒಟ್ಟಿದ್ದಾರೆ. ಅವು ಎರಡು ವಾರಗಳಿಂದಲೂ ಅಲ್ಲಿಯೇ, ಹಾಗೆಯೇ ಬಿದ್ದಿವೆ. ಹೋಮ್ ಲೆಸ್ ಗಳು ಅಲ್ಲಲ್ಲೇ ಕುಳಿತಿರುತ್ತಾರೆ! ಆದರೂ ಅವು ಕಳುವಾಗುವುದಿಲ್ಲ. ಮನೆಯೇ ಇಲ್ಲದವರು ಕುಂಬಳಕಾಯಿ ಇಟ್ಟುಕೊಂಡು ಏನು ಮಾಡಿಯಾರು? ಮೂಸಂಬಿ ಗಾತ್ರದ ಕಾಯಿಗಳಿಂದ ಹಿಡಿದು ಪುಟ್ಬಾಲ್ ಗಿಂತಲೂ ದೊಡ್ಡದಾದ ಹಸಿರು, ಕೇಸರಿ, ಹಳದಿ ಬಿಳಿ ಹೀಗೆ ನಾನಾ ಬಣ್ಣದ ಕಾಯಿಗಳು. ನಲವತ್ತು ವರುಷಗಳ ಹಿಂದಿನ ಅಜ್ಜಿ ಮನೆಯ ಕತ್ತಲ ಉಗ್ರಾಣ ಚಕ್ಕನೆ ಕಣ್ಣ ಮುಂದೆ ಹಾಯಿತು. ಕುಂಬಳ ಕಾಯಿ ಕುರುಕುರು ಬೀಜದ ರುಚಿಯ ಜೊತೆಗೆ ಅಜ್ಜಿ‌ಮನೆಯ ಹಳೆ ವಾಸನೆಯೂ ಮೂಗಿಗೆ ಹತ್ತಿತು. ಅಲ್ಲೂ ಹೀಗೆ ಹಲವಾರು ಕುಂಬಳಕಾಯಿಗಳು, ಮೊಟ್ಟೆ ತೆಂಗಿನಕಾಯಿಗಳು ಒಟ್ಟಿಕೊಂಡು ಇರುತ್ತಿದ್ದವು. ವಾರಕ್ಕೆ ಎರಡು ಸಲವಾದರೂ ಕುಂಬಳ ಕಾಯಿ ತೊವ್ವೆ, ಗೊಜ್ಜು, ಪಲ್ಯ ಇದ್ದೇ ಇರುತ್ತಿತ್ತು. ಅವುಗಳ ಬೀಜಗಳನ್ನು ತೆಗೆದು ಬೂದಿ ಪೂಸಿ ಒಂದೆರಡು ದಿನಗಳ ಕಾಲ ಒಣಹಾಕುತ್ತಿದ್ದರು. ನಾವು ಅಜ್ಜಿಯ ಮನೆಗೆ ಹೋದಾಗೆಲ್ಲಾ ತೊಟ್ಟಿಯ ಬದಿಗೆ ಇದ್ದ ಕಂಭಕ್ಕೆ ಒರಗಿಕೊಂಡು ಅಮ್ಮನ ಅಕ್ಕತಂಗಿಯರೋ, ಅತ್ತೆಯೋ ಕಂಬಳ ಕಾಯಿ ಬೀಜಗಳನ್ನು ಬಿಡಿಸುತ್ತಾ ಇರುವ ಚಿತ್ರ ಕಣ್ಣಿನಿಂದ ಹೋಗುವುದೇ ಇಲ್ಲ. ಅವುಗಳನ್ನು‌ ಬಿಡಿಸುವುದು ಸುಲಭವೇನಲ್ಲ, ಉಗುರುಗಳೇ ಕಿತ್ತು‌ ಬರುತ್ತಿದ್ದವು. ಅಜ್ಜಿ ಮಾಡಿದ ಅವರೇಕಾಳು ಹುರಿಗಾಳು ತಿನ್ನುವಾಗ ಅವು ಬಾಯಿಗೆ ಗರಿ ಗರಿಯಾಗಿ ಸಿಕ್ಕುತ್ತಿದ್ದರೆ ಆಹಾ ಎಂಥ. ಸುಖ! ಎರಡು ವರುಷಗಳ ಹಿಂದೆ ಗಂಡನ ಸಂಧಿವಾತದ ಕಾಯಿಲೆಗೆ ಔಷಧಿಯೆಂದು ಮೈಸೂರು ದೇವರಾಜ ಮಾರ್ಕೆಟ್ಟಿನಲ್ಲಿ ಕುಂಬಳದ ಬೀಜಕ್ಕಾಗಿ ಅಲೆದಿದ್ದೆ. ಇದ್ದುದು ಒಂದೇ ಅಂಗಡಿಯಲ್ಲಿ ! ಕಾಲು ಕೇಜಿಗೆ ಇನ್ನೂರು ರೂಪಾಯಿ. ಇಲ್ಲಿ ಅಮೇರಿಕಾದ ಪ್ರತಿ ಮಾರುಕಟ್ಟೆಯಲ್ಲೂ ಹೇರಳವಾದ ಕುಂಬಳದ ಬೀಜಗಳು ಗಾಳಿಯಾಡದ ( airtight) ಆಕರ್ಷಕ ಡಬ್ಬಿಗಳಲ್ಲಿ !! ಬಾದಾಮಿ ಗೋಡಂಬಿಗಳ ಮಧ್ಯೆ! ಅಮ್ಮನೋಡಿದ್ದರೆ ಕುಂಬಳದ ಬೀಜವೇ? ಅದಕ್ಕೆ ದುಡ್ಡೇ? ಎಂದು ಖಂಡಿತಾ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಳು ಹಿಂದಿನ ಕಾಲದ ಮಹಿಳೆಯರಿಗೆ ಒಮೆಗಾ3 ಗೊತ್ತಿರಲಿಲ್ಲ ಆದರೆ ಕುಂಬಳದ ಬೀಜ ಗೊತ್ತಿತ್ತು.... Sept 26/22 ಗ್ರ್ಯಾಂಡ್ ಕ್ಯಾನ್ಯನ್ ಒಳಗೆ ಮಹಾನಿರ್ವಾಣ.... "In time and with water, everything changes - Leonardo da vinci" ( ಕಾಲ ಮತ್ತು ನೀರಿನ ಪ್ರವಾಹದೊಂದಿಗೆ ಎಲ್ಲವೂ ಬದಲಾಗುತ್ತದೆ). ಗ್ರ್ಯಾಂಡ್ ಕ್ಯಾನ್ಯನ್ ನ ನೈಸರ್ಗಿಕ ವಾಸ್ತುವೈಭವವನ್ನು ವಿವರಿಸಲು ಡವಿಂಚಿಯ ಈ ಒಂದು ವಾಕ್ಯ ಸಾಕು. ಪುನರುತ್ಥಾನದ ಹರಿಕಾರನಾದ, ಶಿಲ್ಪಿ, ಚಿತ್ರಕಲಾಕಾರ, ವಿಜ್ಞಾನಿ, ಇಂಜನಿಯರ್ , ತತ್ವಜ್ಞಾನಿ ಎಲ್ಲವೂ ಆದ ಲಿಯೋನಾರ್ಡೊ ಡವಿಂಚಿಯಂತಹ ಒಬ್ಬ ದಾರ್ಶನಿಕನ ದೃಷ್ಟಿಗೆ ನೈಸರ್ಗಿಕ ಉತ್ಕ್ರಾಂತಿ ದಕ್ಕುವ ಕ್ರಮವೇ ಅನನ್ಯ ಮತ್ತು ವಿಶಿಷ್ಟ. ಗ್ರಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದವರು ಛಾಪಿಸಿರುವ ಭಿತ್ತಿ ಪತ್ರದಲ್ಲಿರುವ ಮೊದಲ ಮಾತೇ ಮೇಲೆ ಹೇಳಿದ ಡವಿಂಚಿಯದು. ಡವಿಂಚಿಯಂತಹ ಸಾವಿರಾರು ಬೃಹತ್ ಕಲಾಕಾರರು ಒಟ್ಟುಗೂಡಿದರೂ ಕೆತ್ತಲಾಗದಂತಹ ಮೇರು ಸದೃಶ ಕಲಾಕೃತಿಗಳನ್ನು , ಬಳ್ಳಿಯಂತೆ ಬಳಕುವ, ಕೋಮಲವಾದ ಕೊಲೆರ‌್ಯಾಡೋ ನದಿ ದೊಡ್ಡ ಬಂಡೆಗಳ ಸಾಲು ಪರ್ವತಗಳನ್ನು ಕೆತ್ತಿ ಕೊರೆದು ಕಾಲಾಂತರದಲ್ಲಿ ಗ್ರ್ಯಾಂಡ್ ಕ್ಯಾನ್ಯನ್ ಎಂಬ ಅದ್ಭುತ ಸೃಷ್ಟಿಗಳನ್ನು ರೂಪಿಸಿದೆ. ಹೌದು "ಗ್ರ್ಯಾಂಡ್ ಕಾನ್ಯನ್" ! ಅದು ಈ ಲೋಕದ್ದೆಂದು ಎನಿಸುವುದೇ ಇಲ್ಲ. ನೂರಾರು ಮೈಲಿಗಳ ಬಂಡೆ ಕಲ್ಲುಗಳ ಮರುಭೂಮಿಯ ಹಾಸು! ಮರುಭೂಮಿಯೆಂದರೆ ಕೇವಲ ಮರಳ ಹಾಸು ಎಂದೇ ತಿಳಿದಿದ್ದೆ. ಪಕ್ಕದಲ್ಲೇ ಇರುವ ರಾಜಸ್ಥಾನಕ್ಕೂ ಕಾಲಿಡದ ನನ್ನ ತಲೆಯೊಳಗೆ ಮರುಭೂಮಿ ಒಂದು ಮಾಹಿತಿಯಾಗಿ ಮಾತ್ರ ದಕ್ಕಿತ್ತು ಅಷ್ಟೇ! ಮರುಭೂಮಿ ಎಂದರೆ ಬೆಟ್ಟ ಬಂಡೆಗಳ ವಿಸ್ತಾರ ಎಂಬ ಅರಿವು ಮೂಡಿದ್ದೇ ಗ್ರ್ಯಾಂಡ್ ಕಾನ್ಯನ್ ಮುಂದೆ ನಿಂತಾಗ. ಅದರ ಹೆಸರಿನಲ್ಲೇ ಇದೆ ಅದರ ವೈಭವ. ವಿಶ್ವದ ಏಳು ಅದ್ಭುತಗಳಲ್ಲಿ ಇದೂ ಒಂದು. "ನಾವೇನಾದರೂ ಮಂಗಳ ಗ್ರಹಕ್ಕೆ ಬಂದುಬಿಟ್ಟಿದ್ದೇವಾ, ಅಮ್ಮಾ?" ಕಾರು ಓಡಿಸುತ್ತಿದ್ದ ಮಗ ಉದ್ಗಾರ ತೆಗೆದ. ನೆವಾಡಾ ರಾಜ್ಯದ ಬೌಲ್ಡರ್ ಎನ್ನುವ ಊರಿನಿಂದ ಬೆಳಿಗ್ಗೆ ಅರಿಜೋನಾ ರಾಜ್ಯದಲ್ಲಿರುವ ಗ್ರ್ಯಾಂಡ್ ಕ್ಯಾನ್ಯನ್ ಪಶ್ಚಿಮ ಭಾಗಕ್ಕೆ ಹೊರಟೆವು. ಬೌಲ್ಡರ್ ! ಎಷ್ಟು ಅನ್ವರ್ಥ ನಾಮ. ಸುತ್ತಲೂ ಎತ್ತೆತ್ತಲೂ ದೈತ್ಯಾಕಾರದ ಬಂಡೆಗಳು ಮುಂದೆ ದಾರಿಯೇ ಕಾಣದಂತೆ ಸುತ್ತುವರಿದಿದ್ದವು. ಬಂಡೆಗಳ ನ್ನು ಸೀಳಿಕೊಂಡು ಗಾಡಿ ಓಡುತ್ತಿತ್ತು. ಭೂಮಿಯನ್ನು ಬಿಟ್ಟು ಯಾವುದೋ ಗ್ರಹಕ್ಕೆಬಂದ ಹಾಗೆ ಭಾಸವಾಗುತ್ತಿತ್ತು. ರಾಕ್ ಹೆವಿ ಮೆಟಲ್ ಗಳಿಂದ ಹಿಡಿದು ಶಾಸ್ತ್ರೀಯ ಸಂಗೀತದವರೆಗೆ ಹಾಡುಗಳು ಆಪ್ಯಾಯಮಾನ ಹಿನ್ನೆಲೆ ಒದಗಿಸುತ್ತಿತ್ತು. ಕಾರ್ತಿಕೇಯ ಧುತ್ತೆಂದು ಪ್ರತ್ಯಕ್ಷನಾದ. ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಅವರ ಕಾಂಬೋಜಿ ರಾಗದ "ಶ್ರೀ ಸುಬ್ರಹ್ಮಣ್ಯ" ಮುಗಿದ ತಕ್ಷಣ ಗಾಯತ್ರಿ ರಂಜನಿಯವರ "ಶರವಣ ಭವ ಸದನ " ಕೀರ್ತನೆ ದೇವಕ್ರಿಯಾ ರಾಗದಲ್ಲಿ ಪ್ರಾರಂಭವಾಯಿತು. ಅರೆ! ಒಂದರ ಹಿಂದೆ ಇನ್ನೊಂದು ಸುಬ್ರಹ್ಮಣ್ಯ ಸ್ತುತಿ! ಇದು ಕಾಕತಾಳೀಯವೇ? ದೇವಸೇನಾಪತಿಯ ದೈತ್ಯ ಶಕ್ತಿಯನ್ನು ಎದುರಾಗುತ್ತಿರುವ ದೈತ್ಯಬಂಡೆಗಳು ಪ್ರಮಾಣೀಕರಿಸುತ್ತಿವೆಯೇ? ತಾರಕಾಸುರನನ್ನು ಇನ್ನೇನು ಕೊಲ್ಲಬೇಕು ಆಗ ಆಕಾಶದೆತ್ತರದ ಒಂದು ದೊಡ್ಡ ಕೋಡುಗಲ್ಲಿನಂತಹ ಬಂಡೆಯಮೇಲೆ ಕಾರ್ತಿಕೇಯ ನಿಂತಿರುತ್ತಾನೆ. ಆಗ ತಾರಕಾಸುರ ಬಾಲಕನ್ನು ಅನಾಮತ್ತಾಗಿ ಅಲ್ಲಿಂದ ಎಸೆಯುತ್ತಾನೆ. ಕಾರ್ತಿಕೇಯ ಇನ್ನೇನು ನೆಲಕ್ಕೆ ಬೀಳಬೇಕು ಆಗ ಶಿವಬಂದು ತನ್ನ ಅಂಗೈ ಆಸರೆಯನ್ನು ಕೊಟ್ಟು ಅವನನ್ನು ಬೀಳದಂತೆ ತಡೆಯುತ್ತಾನೆ! ( ದೇವೋಂಕಾ ದೇವ್ ಮಹಾದೇವ್- ಧಾರಾವಾಹಿ) ಬಂಡೆ ಬಂಡೆಗಳಲ್ಲಿ ಕುಮಾರ ಸಂಭವ! ತಾರಕಾಸುರನನ್ನು ಕಂಡ ಕಂಡ ಬಂಡೆಗಳಿಗೆ ಸುಬ್ರಹ್ಮಣ್ಯ ಅಪ್ಪಳಿಸಿ ಬಡಿದು ಬಿಸಾಕುತ್ತಿದ್ದ. ಮೃದಂಗ ಅದನ್ನು ಪ್ರತಿಧ್ವನಿಸುತ್ತಿತ್ತು. ಗ್ರ್ಯಾಂಡ್ ಕ್ಯಾನ್ಯನ್ ಹಾದಿಯ ಬಂಡೆಗಳು ಅದನ್ನು ನಾಟ್ಯೀಕರಿಸುತ್ತಿದ್ದವು. ಕಾರ್ತಿಕೇಯ ಶಕ್ತಿ ಬಂಡೆಗಲ್ಲಿನಿಂದ ಬಂಡೆಗಲ್ಲಿಗೆ ಕಲ್ಪಾಂತರ ಹಾಯುತ್ತಿದ್ದವು. ಢಮಢಮಡ್ಡಮ.....ತಾಂಡವ ಕೂಡ ಜೊತೆಗೂಡಿತು. ಡಿಸ್ನಿಯವರು 'ಅರ್ಜುನ್' ಸಿನಿಮಾ ಮಾಡಿದ್ದಾರೆ. 'ಕಾರ್ತಿಕೇಯ' ಸಿನಿಮಾವನ್ನೇನಾದರೂ ಅವರು ಮಾಡುವುದಾದರೆ ಗ್ರಾಂಡ್ ಕ್ಯಾನ್ಯನ್ ಪ್ರಶಸ್ತವಾದ ಜಾಗ ಎನಿಸಿತು. ಇಂತಹ ಕಲ್ಪನೆಗೆ ಆಧಾರ ಬೇಕಿಲ್ಲ. ಆದರೆ ಅದು ನಿರಾಧಾರವೂ ಅಲ್ಲ. ದಕ್ಷಿಣ ಮುಖದ (south rim) ಅನೇಕ ವೀಕ್ಷಣಾ ಸ್ಥಳಗಳಲ್ಲಿ ಇದಕ್ಕೆ ಪುಷ್ಠಿದೊರೆಯುತ್ತದೆ. ಇಲ್ಲಿನ ಒಂದು ವೀಕ್ಷಣಾ ಸ್ಥಳಕ್ಕೆ duck on a rock? ಎಂದೇ ಹೆಸರು. ಇಲ್ಲಿ ಬೃಹದಾಕಾರದ ಬಂಡೆಯೊಂದು ಬಾತುಕೋಳಿಯಾಗಿ ಕೊಕ್ಕನ್ನು ಚಾಚಿಕೊಂಡು ಕುಳಿತಿದೆ. ದಕ್ಷಿಣ ಮುಖದಿಂದ ಪಶ್ಚಿಮ‌ದ ಮುಖದವರೆಗೆ( west rim) ವರೆಗೆ ಈ ಗ್ರ್ಯಾಂಡ್ ‌ಕ್ಯಾನನ್ ಹಬ್ಬಿ ಹರಡಿದೆ. ದಕ್ಷಿಣ ಮುಖದಿಂದ ಪಶ್ಚಿಮದ ಮುಖದವರೆಗೆ ಇರುವ ದೂರ ಸು. ಇನ್ನೂರ ಎಪ್ಪತ್ತೇಳು ಮೈಲಿಗಳು. ಎರಡೂ ಭಾಗವನ್ನು ಒಂದೇ ದಿನ ನೋಡಲು ಸಾಧ್ಯವಾಗುವುದಿಲ್ಲ. ಸಿಯಾಟಲ್ ನಿಂದ ನಾವು ವಿಮಾನದಲ್ಲಿ ಫೀನಿಕ್ಸ್ ಗೆ ತಲಪಿ ಅಲ್ಲಿನಿಂದ ಅರಿಜೋನಾದ ವಿಲಿಯಮ್ಸ್ ಎನ್ನುವ ಊರನ್ನು ಮುಟ್ಟಿದಾಗ ಮಧ್ಯರಾತ್ರಿಯಾಗಿತ್ತು. ಬೆಳಿಗ್ಗೆ ಎದ್ದು ಹೊರಟೆವು. ಅಲ್ಲಿಂದ ಒಂದು ಗಂಟೆಯ ಪ್ರಯಾಣ ದಕ್ಷಿಣ ಭಾಗಕ್ಕೆ (South rim). ಗ್ರ್ಯಾಂಡ್ ಕ್ಯಾನ್ಯನ್ ದಕ್ಷಿಣ ಭಾಗದ ಗೇಟಿನೊಳಹೊಕ್ಕು ಕಾರನ್ನು ಒಂದೆಡೆ ನಿಲ್ಲಿಸಿ ಪ್ರಸಿದ್ಧ ಮಾಥೆರ್ ವೀಕ್ಷಣಾ ಸ್ಥಳಕ್ಕೆ ಬಂದು ನೋಡಿದಾಕ್ಷಣ ಹೊಸದೊಂದು ಲೋಕವೇ ಬಯಲಾಯಿತು. ಕಲ್ಲಿನ ಚಿತ್ರ ವಿಚಿತ್ರ ಕಲಾಕೃತಿಗಳು ಕಣ್ಣು ಹಾಯುವವರೆಗೆ ಹಾಸಿಕೊಂಡಿದ್ದವು! ನನಗಂತೂ ಕೆಂಪುಕಲ್ಲಿನ ಪದರ ಪದರಗಳಲ್ಲಿ ಅಸಂಖ್ಯ ಬೇಲೂರು ಹಳೇಬೀಡು ದೇವಾಲಯಗಳು, ಎಲ್ಲೋರದ ಕೈಲಾಸ ಶಿಖರಗಳು, ಅಬೂವಿನ ದಿಲ್ವಾರಾ ಮಂದಿರಗಳು, ಬುದ್ಧ ಸ್ತೂಪಗಳು ಕಣ್ಣಿಗೆ ಬಿದ್ದವು. ಹಂಪಿ ಬಂದು ಅಲ್ಲೇ ಬೀಡುಬಿಟ್ಟಿತ್ತು. 'ದಕ್ಷಿಣ ಮುಖ' ಮುಗಿಯುವವರೆಗೂ ಮಹಾನಿರ್ವಾಣದಲ್ಲಿ ಮಲಗಿದ್ದ ಬುದ್ಧ ಹಿಂಬಾಲಿಸುತ್ತಲೇ ಇದ್ದ. ಕೆಳಗೆ ಆಳದಲ್ಲಿ ಹರಿವ ಕೆಂಪಾದ ಸಪೂರ ಕೊಲೆರ‌್ಯಾಡೋ! ಯಾವ ಶಿಲ್ಪಿಯೂ ಕೆತ್ತಲಾರದ ವೈವಿಧ್ಯಮಯ ಶಿಲ್ಪಗಳನ್ನು ಕೊಲೆರ‌್ಯಾಡೋ ನದಿ ಸಾವಿರಾರು ವರುಷಗಳಿಂದ (ಸು. ೬ ಮಿಲಿಯ ವರುಷ) ಕೆತ್ತಿ ಕೊರೆದು ರೂಪಿಸುತ್ತಲೇ ಬಂದಿದೆ. ಈ ನದಿ ಹುಟ್ಟುವುದು ಕೊಲೆರ‌್ಯಾಡೋದ ರಾಕಿ ಪರ್ವತದಲ್ಲಿ ಒಂದು ಸಣ್ಣ ತೊರೆಯಾಗಿ. ಮೆಕ್ಸಿಕೋ ಮತ್ತು ಕ್ಯಾಲಿಫೋರ್ನಿಯಾದ ನಡುವಿನ ಕೊಲ್ಲಿಯೊಳಗೆ ಮಾಯವಾಗುವ ಮುನ್ನ ಇದು ಚಲಿಸುವ ದೂರ ೧೪೦೦ ಮೈಲಿಗಳು. ಈ ನದಿ ಪಶ್ಚಿಮ ಅಮೇರಿಕಾದ ಹಲವಾರು ರಾಜ್ಯಗಳ ಜೀವನದಿ ಎನಿಸಿದೆ. ಅನಾದಿ ಕಾಲದಿಂದ ( ಸುಮಾರು ಎರಡು ಸಾವಿರ ವರುಷಗಳು) ಈ ಕಣಿವೆಯ ಜೊತೆ ಪೇಲಿಯೋ ಇಂಡಿಯನ್ಸ್, ಹವಸುಪೈ,ಯವಪೈ- ಅಪಾಚೆ, ಹೌಲಾಪೈ ಮುಂತಾದ ಹೆಸರಿನ ಆದಿವಾಸಿಗಳು ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ಅವರ ನಂಬಿಕೆ, ಆಹಾರ ಆಚಾರ, ವಿಚಾರಗಳು, ನಂಬಿಕೆಗಳು ಇದರ ಜೊತೆಗೆ ತಳಕು ಹಾಕಿಕೊಂಡಿವೆ. ಪಶ್ಚಿಮ ಭಾಗದ ರಾಷ್ಟ್ರೀಯ ಉದ್ಯಾನವನದ ಸ್ವಾಮ್ಯ ಅವರ ಕೈಯಲ್ಲಿಯೇ ಇದೆ. ಈ ಬುಡಕಟ್ಟಿಗೆ ಸಂಬಂಧಿಸಿದಂತೆ ಅನೇಕ ಜಾನಪದ ಉಪಕರಣಗಳು, ಮನೆಗಳು, ಕೃಷಿಯ ಸಾಧನಗಳು ಮುಂತಾದ ಅವರ ಲೋಕದ ವಿವರಗಳನ್ನು ಅನೇಕ ಪ್ರತಿಕೃತಿಗಳ ಮೂಲಕ ಇಲ್ಲಿ ಪ್ರದರ್ಶನಕ್ಕೆ ಇಲ್ಲಿ ಇಡಲಾಗಿದೆ. ಅಲ್ಲಿ ಲಭ್ಯವಾಗುವ ಬಣ್ಣ ಬಣ್ಣದ ಕಲ್ಲುಗಳಿಂದ ಮಾಡಿದ ಸರಗಳು ಹೆಣ್ಣುಮಕ್ಕಳನ್ನು ಆಕರ್ಷಿಸುತ್ತವೆ. ಅದು ಆದಿವಾಸಿಗಳ ಒಡವೆಯೂ ಆಗಿದ್ದಿರಬಹುದೇನೋ! ಆಧುನಿಕತೆ ಮತ್ತು ಪ್ರಾಚೀನತೆ ಎರಡನ್ನೂ ಇಲ್ಲಿ ಕಾಪಾಡಿಕೊಂಡು ಬರಲಾಗಿದೆ.Sept 23 ಒರೆಗಾನ್ ನಲ್ಲಿ ಓಶೋ Wild Wild Country..... ಒರೆಗಾನ್‌ ರಾಜ್ಯದ 'ಕ್ರೇಟರ್ ಲೇಕ್' ತಾಣದಲ್ಲಿ ನಮ್ಮ ಅಮೇರಿಕಾ ಸಣ್ಣ ಪ್ರವಾಸ ಮುಕ್ತಾಯವಾಗಿತ್ತು. ಅಲ್ಲಿಂದ ಮೂರು ನಾಲ್ಕು ತಾಸುಗಳ ದಾರಿ- ನಮ್ಮ ನಿಲ್ದಾಣ ಸಿಯಾಟಲ್ ಕಡೆಗೆ ಹೊರಟಿದ್ದೆವು. ಒರೆಗಾನ್ ಪಕ್ಕದ್ದೇ ವಾಷಿಂಗ್ಟನ್ ನಾವು ಸೇರಬೇಕಾದ ಊರಿರುವ ರಾಜ್ಯ. ನಡುವೆ ಪೋರ್ಟ್ ಲ್ಯಾಂಡ್ ಎಂಬ ಬಹಳ ದೊಡ್ಡ ಮಾರುಕಟ್ಟೆಗಳ ಸಂಕೀರ್ಣ. ನಾನಾ ತರಹದ ಸಾವಿರ ಮಳಿಗೆಗಳು. ಅಲ್ಲಿ ಸೇಲ್ಸ್ ಟ್ಯಾಕ್ಸ್ ಇಲ್ಲವಂತೆ. ಹೀಗಾಗಿ ಅಕಪಕ್ಕದ ರಾಜ್ಯಗಳ ಜನ ಲಗ್ಗೆ ಹಾಕುತ್ತಾರೆ. ಅಲ್ಲಿ ಇಣುಕಿ ಮುಂದೆ ಹೊರಟಾಗ ಗಕ್ಕನೆ ಓಶೋ ರಜನೀಶ್ ಮುತ್ತಿಕೊಂಡರು. ಒರೆಗಾನ್ ರಾಜ್ಯಕ್ಕೂ ಭಾರತಕ್ಕೂಒಂದು ರೀತಿಯ ಹಳೆಯ ನಂಟಿದೆ. "ಅಮ್ಮಾ "wild wild country" ನೋಡಿದ್ದೀಯ? ಅಂತಹ prefect documentary ಯನ್ನು ನಾನು ನೋಡೇ ಇಲ್ಲ " ಎಂದು ಮಗ ಹುಚ್ಚು ಹತ್ತಿಸಿದ.ಆ ಕ್ಷಣದಿಂದ ಓಶೋ ಕಾಡತೊಡಗಿದರು. "Wild wild country " ಎಂಬ ಸಾಕ್ಷ್ಯ ಚಿತ್ರ ಓಶೋ ರಜನೀಶ್ ಅವರು ಅಮೇರಿಕಾದ ಒರೆಗಾನ್ ರಾಜ್ಯದ ಆ‌್ಯಂಟಿಲೋಪ್ ಪ್ರದೇಶದಲ್ಲಿ ತಮ್ಮ ಸಾಮ್ರಾಜ್ಯವನ್ನು ಕಟ್ಟಿ ಪತನಗೊಂಡ ಕಥೆ. ಅಮೇರಿಕನ್ನರು ಷಡ್ಯಂತ್ರಹೂಡಿ ಅವರ ಸಾಮ್ರಾಜ್ಯವನ್ನು ನಾಶಗೊಳಿಸಿದರು. ಈ ಕಥೆ, ನಾವು ಹಾದು ಬಂದ ಒರೆಗಾನ್ ಪ್ರದೇಶದ ಆ‌್ಯಂಟಿಲೋಪ್ ಮತ್ತು ಪೋರ್ಟ್ ಲ್ಯಾಂಡ್ ಗಳಲ್ಲೇ ಓಡಾಡುತ್ತದೆ. ಸಂಪರ್ಕ ಸಾಧನೆಗೆ ಒಂದು ಸಣ್ಣ ಕೊಕ್ಕೆ ಸಿಕ್ಕಿದರೂ ಸಾಕು ಮನಸ್ಸು ಹೇಗೆ ಅದಕ್ಕೆ ಲಬಕ್ಕ್ ಎಂದು ನೇತುಹಾಕಿಕೊಂಡು ಬಿಡುತ್ತದೆ? ಮರ್ಕಟ! ಓಶೋ ಮತ್ತು ಅವರ ಅನುಯಾಯಿಗಳನ್ನು ಪೋರ್ಟ್ ಲ್ಯಾಂಡಿನ ಬೀದಿಗಳಲ್ಲಿ ಹುಡುಕತೊಡಗಿದೆ. ಅವರ ಗ್ರಾಮವನ್ನು ನೋಡುವ ಆಸೆಯಾಯಿತು. ಮಗನನ್ನು ಕೇಳಿದೆ ಅದಕ್ಕೆ ಅವನು "ಅಲ್ಲೇನಿದೆ ಈಗ ಮಣ್ಣು. ಎಲ್ಲಾ ನೆಲಸಮ ಮಾಡಿ ಬೇರೆ ಕಟ್ಟಿದ್ದಾರೆ. ರೇಸಿಸ್ಟ್ ....ಮಕ್ಕಳು" ಎಂದು ಕೋಪಾವಿಷ್ಟನಾದ. ಒಂದು ಕಾಲದಲ್ಲಿ ನನಗೂ ಓಶೋ ಅಮಲಿತ್ತು. ಅವರ ವಿಚಾರಧಾರೆಗಳು ಈಗಲೂ ಪ್ರಿಯವೇ . ನನಗೆ ಓಶೋ ಹುಚ್ಚು ಹಿಡಿಸಿದವರು ಸ್ನೇಹಿತರಾದ ಮಾಯ ಮತ್ತು ಅಶೋಕ್ ದಂಪತಿ. ಶಿವರಾತ್ರಿಯಂದು ನಾವು ಓಶೋ ಅವರ 'Meeting the Ultimate' ಓದುತ್ತಾ ಜಾಗರಣೆ ಮಾಡಿದ ನೆನಪು ಇನ್ನೂ ಹಸಿರಾಗಿದೆ. ಅದೇ ಟ್ರಾನ್ಸ್ ನಲ್ಲಿ ನಾನು ಅವರ "ಮಾನವ ಧರ್ಮ" ಎನ್ನುವ ಹಿಂದಿ ಕೃತಿಯನ್ನು ಕಷ್ಟ ಪಟ್ಟು ಓದಿ ಅರಗಿಸಿಕೊಂಡು ಕೆಲವು ಪುಟಗಳನ್ನು ಕನ್ನಡಕ್ಕೆ ಅನುವಾದಿಸಿದ್ದೆ. ಆನಂತರ 'ಯಾರು ಪ್ರಕಟಿಸುತ್ತಾರೆ?' ಎಂಬ ನಿರಾಶೆಯಲ್ಲಿ ಅದನ್ನು ಹರಿದು ಹಾಕಿದ್ದೆ. ಅದು ಫೇಸ್ ಬುಕ್ ಕಾಲವಲ್ಲ! ಸಿಯಾಟಲ್ ಗೆ ಬಂದ ಮಾರನೆಯ ದಿನವೇ wild wild country ನೋಡಲು ಪ್ರಾರಂಭಿಸಿದೆ. ಆರು ಸಂಚಿಕೆಗಳ ದೀರ್ಘ ಸಾಕ್ಷ್ಯಚಿತ್ರ. ಓಶೋ, ಮದುವೆ ಸಂಸ್ಥೆ ಯನ್ನು worthless ಎಂದು ಧೂಳೀಪಟ ಮಾಡಿದವರು, ಮನುಷ್ಯ ಸಂಬಂಧ ಮತ್ತು ಮಾನವ ಪ್ರೇಮವನ್ನು ಸಾರಿದವರು. ಇದನ್ನು ಮಾತ್ರ ಓಶೋ ಎಂದು ಕೊಂಡವರು ಅವರ ವಿಚಾರಗಳನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಿದರು. ಅವರನ್ನು ಪೂರ್ಣವಾಗಿ ಗ್ರಹಿಸದೇ ಹೋದರು. ವಿರೋಧಿಸಿದರು. ಉಳಿಗಾಲವಿಲ್ಲದಂತೆ ಮಾಡಿದರು. ಅಸಾಧಾರಣ ಮಹಾಲಿವುಡ್ ನಲ್ಲಿ ಬಾಲಿವುಡ್ ಬಾಲಿವುಡ್ ತಾರೆಯರಿಗೆ ಮಲಬಾರ್ ಹಿಲ್ ಇರುವಂತೆ ಹಾಲಿವುಡ್ ತಾರೆಯರಿಗೆ ಲಾಸ್ಏಂಜಲೀಸ್ ನ 'ಬಿವರ್ಲೀ ಹಿಲ್ಸ್‌'. ಹಾಲಿವುಡ್ ಎಂಬ ಹೆಸರು ಬರಲು ಅನೇಕ ದಂತಕತೆಗಳಿವೆ. ಅವುಗಳಲ್ಲಿ ಅಲ್ಲಿ ಹಾಲಿ (Holly) ಎಂಬ ಹೆಸರಿನ ಕಡು ಕೆಂಪು ಹಣ್ಣುಗಳ ಅನೇಕ ಪೊದೆಗಳು ಆ ಬೆಟ್ಟದ ತುಂಬಾ ಬೆಳೆಯುತ್ತಿದ್ದುವಂತೆ ಅದಕ್ಕಾಗಿ ಅಲ್ಲಿನ ಮೂಲನಿವಾಸಿಗಳು 'ಹಾಲಿವುಡ್' ಎಂದು ಕರೆದರು ಎಂಬುದೂ ಒಂದು. ಅಲ್ಲಿ ಪ್ರಾರಂಭವಾದ ಸಿನಿಮಾ ಉದ್ಯಮಕ್ಕೆ ಆ ಹೆಸರು ಬಂದಿತು. (೧೮೮೭) ಬಾಲಿವುಡ್ ಹೆಸರು ಬರಲು ಕೇವಲ 'ಬಾಂಬೆ' ಎಂಬ ಹೆಸರು ಮಾತ್ರ ಕಾರಣವಾಗಿರಲಾರದು. ಹಾಲಿವುಡ್ ಹೆಸರನ್ನು ನಕಲು ಮಾಡಿ ತೆಗೆದು ಕೊಂಡಿರಬೇಕು, ಎಂಬುದು ನನ್ನ ಅನುಮಾನ. ಸ್ಯಾಂಡಲ್ ವುಡ್ ನಮ್ಮಲ್ಲಿದೆ ( ಗಂಧದಗುಡಿ) ಆದುದರಿಂದ ಅದು ಹಾಲಿವುಡ್ ನ ನಕಲಾದರೂ ಅರ್ಥಪೂರ್ಣ ನಕಲು ಎನಿಸುತ್ತದೆ. ಇನ್ನು 'ಟಾಲಿವುಡ್' 'ಕೊಲಿವುಡ್ ' ಬಗ್ಗೆ ಏನೇನು ಐತಿಹ್ಯಗಳಿವೆಯೋ ಸಂಶೋಧನೆ ಮಾಡಬೇಕು ಬಿವರ್ಲೀ ಹಿಲ್ಸ್ ನ ದೊಡ್ಡ ರಸ್ತೆಗಳ ನಡುವೆ ಹಾಯುತ್ತಿದ್ದೆವು. ಇಕ್ಕೆಲಗಳಲ್ಲಿ ನಮ್ಮ ಬೆಂಗಳೂರಿನಂತಹುದೇ ದೊಡ್ಡ ದೊಡ್ಡ ಬಂಗಲೆಗಳು. ವ್ಯತ್ಯಾಸವೆಂದರೆ ಇಲ್ಲಿ ಲ್ಯಾಂಡ್ ಸ್ಕೇಪ್, ಬ್ಯಾಕ್ ಯಾರ್ಡ್ ಎಂದೆಲ್ಲಾ ಮನೆಗಿಂತಲೂ ವಿಶಾಲವಾದ ಬಯಲ ಆವರಣವೇ ಹೆಚ್ಚು. 'ಬೋರೇಗೌಡಿ ಬೆಂಗಳೂರಿ'ಗೆ ಬಂದ ಹಾಗೆ ಬೆಕ್ಕಸ ಬೆರಗಾಗಿ ಕಾರಿನ ಕಿಟಕಿಯಿಂದಲೇ ಹಾಲಿವುಡ್ ತಾರೆಯರ ಮನೆಗಳನ್ನು ನೋಡುತ್ತಿದ್ದೆ . "ಅಲ್ಲಿ ನೋಡಿ ಶಾರುಖಾನ್ ಚಹಾ ಕುಡಿಯಲು ಬಾಲ್ಕನಿಗೆ ಬಂದಿದ್ದಾನೆ !ಇಲ್ಲಿ ನೋಡಿ... ನೋಡಿ..ಅಮೀರ್ ಖಾನ್ ಅಮಿತಾಬ್, ರೇಖಾ" ಎಂದು ಬಸ್ಸಿನೊಳಗೆ ಕುಳಿತವರು ಕಿಟಕಿಯಿಂದಲೇ ಧುಮುಕುವಂತೆ ಹುಚ್ಚೆಬ್ಬಿಸುತ್ತಿದ್ದರು, ಮುಂಬಯಿ ದೇಖೋನ ಟೂರಿಸ್ಟ್ ಗೈಡುಗಳು, ಸುಳ್ಳೇ ನಮ್ಮನ್ನು ಬೇಸ್ತು ಬೀಳಿಸುತ್ತಿದ್ದುದು ನೆನಪಾಯಿತು. ಇಂಗ್ಲಿಷ್ ಸಿನಿಮಾಗಳನ್ನು ನೋಡದ ನನಗಾವ ಹಾಲಿವುಡ್ ತಾರೆಯರ ಪರಿಚಯವಿರುತ್ತದೆ? ಆರ್ನಾಲ್ಡ್ ಶುವಾರ್ಟ್ಸನೆಗರ್ ( Arnold Schwarzenegger)ನನ್ನು 'ಟರ್ಮಿನೇಟರ್ ' ಸಿನಿಮಾವನ್ನು ಮಕ್ಕಳು ನೋಡುತ್ತಿದ್ದಾಗ ಅಡುಗೆ ಮನೆಯ ಒಳಹೊರಗೆ ಸುಳಿಯುತ್ತಾ ಟಿ.ವಿಯ ಕಡೆಗೆ ಕಣ್ಣುಹಾಯಿಸುತ್ತಾ ಕಂಡಿದ್ದಷ್ಟೇ. ಮರ್ಲಿನ್ ಮುನ್ರೋ ತನ್ನ ಹಾರುತ್ತಿರುವ ಲಂಗವನ್ನು ನಿಯಂತ್ರಿಸುತ್ತಿರುವ‌ ಚಿತ್ರವೊಂದು ಪರಿಚಿತವಾಗಿತ್ತು. ಅದು ಬಿಟ್ಟರೆ ನನಗೆ ಅಮೇರಿಕಾ ಸಿನಿಮಾದ ಬಗ್ಗೆ ಬೇರೆ ಏನೂ ಗೊತ್ತಿಲ್ಲ. ಹೀಗಾಗಿ ಬಿವರ್ಲೀ ಹಿಲ್ಸ್ ನಲ್ಲಿ ಹಾಯುವಾಗ ಯಾವನಾದರೂ ಸೂಪರ್ ಸ್ಟಾರ್ ಮನೆಯ ಹೊರಗೆ ಬಂದಿದ್ದರೂ ನನಗೇನೂ ತಿಳಿಯತ್ತಿರಲಿಲ್ಲ. ರೋಮಾಂಚನವಂತೂ ಆಗುತ್ತಿರಲೇ ಇಲ್ಲ. "ಮರ್ಲಿನ್ ಮುನ್ರೋ ಇಲ್ಲದ ದೇಶಕ್ಕೆ ಹೋಗುತ್ತಿದ್ದೀರಿ?!" ಎಂದು ಹಾ.ಮಾ. ನಾಯಕರನ್ನು ಅವರು ಅಮೇರಿಕಾಕ್ಕೆ ಹೊರಟಾಗ ಯಾರೋ ಕೇಳಿದ್ದರಂತೆ. ಕಳೆದ ಶತಮಾನದ ಐವತ್ತು ಅರವತ್ತರ ದಶಕದಲ್ಲಿ ಯುವಕರ ನಿದ್ದೆಗೆಡಿಸಿದ ಹಾಲಿವುಡ್ ತಾರೆ ಅವಳು. ಪಾಪ್ ಸಂಸ್ಕೃತಿಯನ್ನು ಚಲಾವಣೆಗೆ ತಂದವಳು, ಲೈಂಗಿಕ ಅಭಿವ್ಯಕ್ತಿಯಲ್ಲಿ‌ ಕ್ರಾಂತಿ ಉಂಟು ಮಾಡಿದವಳು ಎಂದೆಲ್ಲಾ ಅವಳನ್ನು ಬಣ್ಣಿಸುತ್ತಾರೆ. ಬಹಳ ಸಣ್ಣ ವಯಸ್ಸಿಗೇ ತೀರಿಕೊಂಡಳು (೩೬) ಆ ಕಾಲದ ಸಿನಿಮಾ ಪ್ರೇಮಿಗಳ ಹುಚ್ಚೆಬ್ಬಿಸಿದ ಬೆಳ್ಳಿ ತೆರೆಯ ರಾಣಿ. ಅವಳ ಫೋಟೋ ನೋಡಿದಾಗೆಲ್ಲಾ ನನಗೆ "ಅಚ್ಛಾ ಜೀ ಮೇಂ ಹಾರಿ ಚಲೋ ಮಾನ್ ಜಾವೋನಾ" ಎಂದು ದೇವಾನಂದನ ಸುತ್ತ ಬಿಂಕ ಬಿನ್ನಾಣದಿಂದ ಸುತ್ತುವ ಮಧುಬಾಲಾಳೇ ಕಣ್ಣ ಮುಂದೆ ಸುಳಿಯುತ್ತಾಳೆ. ಈಗ ಮಾಧುರಿದೀಕ್ಷಿತ್ ಳನ್ನು ಅವಳಿಗೆ ಸ್ವಲ್ಪ ಹತ್ತಿರವಾಗಿ ಕಲ್ಪಿಸಿಕೊಳ್ಳಬಹುದು. ದಿವ್ಯ ಭವ್ಯ ಬಂಗಲೆಗಳ ಶ್ರೀಮಂತರ ರಸ್ತೆಗಳಲ್ಲಿ ಮಗ ಎರಡು ಮೂರು ಬಾರಿ ಕಾರು ಓಡಿಸಿದ. "ಅಮ್ಮಾ ರೋಲ್ಸ್ ರಾಯ್ಸ್ ನೋಡಿದೆಯಾ?" ಮಗ ಅತಿ ಉತ್ಸಾಹದಿಂದ ಕೂಗಿದ. ರೋಲ್ಸ್ ರಾಯ್ಸ್ ಕಾರು ಬಹಳ ದುಬಾರಿಯದೆಂದು ಗೊತ್ತಿತ್ತು. ಆದರೆ ಎಷ್ಟು ದುಬಾರಿ ಗೊತ್ತಿರಲಿಲ್ಲ. ಕಾರನ್ನು ಓಡಿಸಲು ಬಾರದ ನನಗೆ ಮಾರುತಿಯಾದರೇನು? ರೋಲ್ಸ್ ರಾಯ್ಸ್ ಆದರೇನು? ಮೈಸೂರು ಮಹಾರಾಜರು ಅದರ ಬಳಿನಿಂತು ತೆಗೆಸಿಕೊಂಡ ಫೋಟೋ ನೋಡಿದ್ದೆ. ಭಾರತದಿಂದ ಓಡಿ ಬಂದ ಓಶೋ ರಜನೀಶ್ ಅವರು ವಾಷಿಂಗ್ಟನ್ ಬಳಿಯ ಒರೆಗಾನ್ ರಾಜ್ಯದಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಿದಾಗ ಅವರೂ ಕೂಡ ರೋಲ್ಸ್ ರಾಯ್ಸ್ ನಲ್ಲೇ ಓಡಾಡುತ್ತಿದ್ದರಂತೆ. ರೋಲ್ಸ್ ರಾಯ್ಸ್ ಕೊಳ್ಳಲು ಪಾಟಿಯಾಲದ ಭೂಪಿಂದರ್ ಸಿಂಗ್ ಎನ್ನುವ ರಾಜ ಹೋದಾಗ ಇಂಗ್ಲೆಂಡಿ ಕಾರಿನ ಕಂಪನಿಯವರು ಭಾರತೀಯನಾದ ಅವನ ಆರ್ಥಿಕ ಸಾಮರ್ಥ್ಯ ‌ಮತ್ತು ಯೋಗ್ಯತೆಯನ್ನು ಅನುಮಾನಿಸಿ ಕಾರನ್ನು ಅವನಿಗೆ ಮಾರಲು ನಿರಾಕರಿಸಿದರಂತೆ. ಆಗ ಆ ರಾಜ ಅಂತಹ ಏಳು ಕಾರುಗಳನ್ನು ಕೊಂಡು ಅದನ್ನು ಕಸ ಎತ್ತುವ ಗಾಡಿಯನ್ನಾಗಿ ಮಾಡಿದನಂತೆ. ಆಗ ಆ ಕಾರಿನ ಕಂಪನಿಯ ಮಾಲೀಕರು ಅವರಿಗಾದ ಅವಮಾನವನ್ನು ಗುರುತಿಸಿ ಕ್ಷಮೆ ಕೇಳಿದ್ದರಂತೆ. ಇಂತಹ ರಾಯಲ್ ಇತಿಹಾಸವಿರುವ ಕಾರು ಲಾಸ್ಏಂಜಲೀಸ್ ನ ಬಿವರ್ಲಿ ಹಿಲ್ಸ್ ನಲ್ಲಲ್ಲದೇ ಬೇರೆಲ್ಲಿ ತಿರುಗ ಬೇಕು? ದಾರಿಯಲ್ಲಿ ನಿಂತಿದ್ದ ಒಂದು ದೊಡ್ಡ ಕಾರಿನ ಹಿಂದೆ Actor ಎನ್ನುವ‌ ಫಲಕ ತೂಗುತ್ತಿತ್ತು. ಅದರಲ್ಲಿ ಯಾವ ನಟ ಕುಳಿತಿರಬಹುದು? ಅದು ಯಾವ ಮಾಡೆಲ್ ಕಾರಾಗಿರಬಹದು? ಮಗನ ಎದುರಿಗೆ ನನ್ನ ಅಜ್ಞಾನ ತೋರಿಸಿಕೊಳ್ಳದೇ ಸುಮನಿದ್ದೆ. ಕಾರು "ಹಾಲಿವುಡ್ ವಾಕ್ ಆಫ್ ಫೇಮ್‌ " ದಾರಿಯ ಕಡೆಗೆ ತಿರುಗಿತು.ೇಧಾವಿ. ತತ್ವಜ್ಞಾನಿಯಾದ ಓಶೋ ಈ ಕಾರಣದಿಂದ ಹಿಂದೂ ಸಂಪ್ರದಾಯವಾದಿ, ನೈತಿಕವಾದಿಗಳಿಂದ ತಪ್ಪಿಸಿಕೊಂಡು ಅಮೇರಿಕಾಕ್ಕೆ ಓಡಿಹೋಗಬೇಕಾಯಿತು. ಅಲ್ಲಿ ಒರೆಗಾನ್ ಎಂಬ ಉತ್ತರ ಪಶ್ಚಿಮ ರಾಜ್ಯದ, ಆ‌್ಯಂಟಿಲೋಪ್ (ವಾಸ್ಕೋ ಕೌಂಟಿ) ಪ್ರದೇಶದಲ್ಲಿ ಬಿಡಾರ ಹೂಡಿದರು (೧೯೮೦) ಆನಂತರ ಅದು ಪಕ್ಕದ ಕೌಂಟಿಗೂ ವಿಸ್ತರಿಸಿತು. (ಡೇಲ್ಸ್) ಅವರ ಆಪ್ತ ಕಾರ್ಯದರ್ಶಿ ಮಾ ಆನಂದ ಶೀಲಾ ತಮ್ಮ ಗಂಡನ ಸು.೬೪ ಸಾವಿರ ಎಕೆರೆ ಬರಡು ಭೂಮಿಯಲ್ಲಿ ಓಶೋ ಅವರ ಸಾವಿರಾರು ಅನುಯಾಯಿಗಳ ಸಹಾಯದಿಂದ ರಜನೀಶ್ ಅವರ ಕನಸಿನ ಸಾಮ್ರಾಜ್ಯ ಕಟ್ಟಿದರು. ಹಿಂದೂ ಸಂಪ್ರದಾಯವಾದಿಗಳಿಂದ ತಪ್ಪಿಸಿಕೊಳ್ಳಲೋಸುಗ ಕ್ರಿಶ್ಚಿಯನ್ ನೆಲದ ಮೇಲೆ ಕಾಲಿಟ್ಟರು ಓಶೋ. ದುರಂತವೆಂದರೆ ಕ್ರಿಶ್ಚಿಯನ್ ಮೂಲಭೂತವಾದಿಗಳ, ನೈತಿಕವಾದಿಗಳ, ಜನಾಂಗ ದ್ವೇಷಿಗಳ ಹುನ್ನಾರಗಳಿಗೆ ಬಲಿಯಾದರು. ಆ‌್ಯಂಟಿಲೋಪ್, 'ರಜನೀಶಪುರಮ್ ' ಆಯಿತು. ರಸ್ತೆಗಳು, ಹೊಟೇಲ್ ಗಳು ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯ ಘಮಲು ಪಸರಿಸಿತು ( ಉದಾ : ಕೃಷ್ಣಮೂರ್ತಿ ಲೇಕ್) ಅಂಗಡಿ ಮುಂಗಟ್ಟುಗಳು,‌ ದೊಡ್ಡ ಮಾಲ್ ಗಳು, ಮನೆಗಳು, ಅತಿಥಿ ಗೃಹಗಳು, ಪ್ರಯೋಗಾಲಯಗಳು, ಕೆರೆಕಟ್ಟೆ, ವಿದ್ಯುತ್, ಪೋಸ್ಟ್ ಆಫೀಸು, ಒಳ ಚರಂಡಿ ವ್ಯವಸ್ಥೆ, ಅಗ್ನಿ ಶಾಮಕದಳ,ಪೋಲೀಸ್ ವ್ಯವಸ್ಥೆ, ತಮ್ಮದೇ ಆದ ಚಿಕ್ಕ ಖಾಸಗಿ ವಿಮಾನ ನಿಲ್ದಾಣ ( Air strip) ಶಾಂತಿಪಾಲನೆಗಾಗಿ ಶಸ್ತ್ರಾಸ್ತ್ರ ಸಂಗ್ರಹ, ಚಿನ್ನಾಭರಣ ವಜ್ರವೈಢೂರ್ಯಗಳು.... ಹೀಗೆ ಬರಡು ಭೂಮಿಯಾಗಿದ್ದ ಆ‌್ಯಂಟಿಲೋಪ್ ಕೆಲವೇ ವರುಷಗಳಲ್ಲಿ ರಜನೀಶೀಸ್ ಸನ್ಯಾಸಿಗಳ ( ರಜನೀಶ್ ಅನುಯಾಯಿಗಳು) ಸಹಕಾರದಿಂದ ಸುಸಜ್ಜಿತ ಆಧುನಿಕ ರಜನೀಶಪುರಮ್ ಆಯಿತು. ಅದು ಎಷ್ಟು ಬೆಳೆಯಿತೆಂದರೆ ಅಲ್ಲಿನ ಚುನಾವಣೆಗೆ ರಜನೀಶ್ ಅವರನ್ನು ನಿಲ್ಲಿಸಲೂ ತಯಾರಾದರು ಅವರ ಅನುಯಾಯಿಗಳು. ಆ ಊರಿನ ಮೂಲನಿವಾಸಿಗಳಿಗೆ ಇದು ಅವರ ಖಾಸಗಿ ಬದುಕಿಗೆ ಅಡ್ಡಿ ಎನಿಸಿತು. ಎಲ್ಲಿಂದಲೋ ಬಂದ ಕೆಂಪು ಕೋತಿಗಳು ಗದ್ದಲವೆಬ್ಬಿಸುತ್ತ ಶಾಂತಿಭಂಗ ಮಾಡುತ್ತಿವೆ ಎನಿಸಿತು. ಅವರ ಸ್ವಚ್ಛಂದ ಲೈಂಗಿಕತೆ ಕ್ರಿಶ್ಚಿಯನ್ ಧರ್ಮಕ್ಕೆ ಮಾರಕವಾಗಿ ಕಂಡಿತು. ಕ್ರಮೇಣ ಆ ಊರಿನವರಿಗೂ ರಜನೀಶ್ ಅನುಯಾಯಿಗಳಿಗೂ ಸಂಘರ್ಷ ಪ್ರಾರಂಭವಾಯಿತು. ಕೆರೆಕಟ್ಟೆಗೆ ವಿಷ ಹಾಕಿದ, ತಿನ್ನುವ ಪದಾರ್ಥಗಳಲ್ಲಿ ವಿಷದ ಬ್ಯಾಕ್ಟೀರಿಯ ಬೆರೆಸಿದ, ಅಲ್ಲಿನ ಅಟಾರ್ನಿ ಜನರಲ್ ಟರ್ನರ್ ಎನ್ನುವವನ ಕೊಲೆ ಪ್ರಯತ್ನ ನಡೆಸಿದ ಆರೋಪದ ಮೇಲೆ ಓಶೋ ಅನುಯಾಯಿಯಗಳನ್ನು ಬಂಧಿಸಲಾಯಿತು. ಓಶೋ ಅವರನ್ನೂ ಕೂಡ ಬಿಡಲಿಲ್ಲ. ಅವರು ಕೊಲೆಯಾಗುವುದರಿಂದ ಸ್ವಲ್ಪದರಲ್ಲೇ ಬಚಾವಾದರು. "One thing about this wild, wild country It takes a strong, strong, it breaks a strong, strong mind" ಇದು ಅಮೇರಿಕಾದ ಒಬ್ಬ ದನಗಾಹಿಯ ಹಾಡು. ಇದನ್ನು ಹಾಡಿದವನು ಬಿಲ್ ಕ್ಯಲಹ್ಯಾನ್ ಎನ್ನುವ ಪ್ರಸಿದ್ಧ ಅಮೆರಿಕನ್ ಗಾಯಕ. ಅವನ ಹಾಡಿನ ಸಾಲನ್ನು ಶೀರ್ಷಿಕೆಯಾಗಿ ಈ ಸಾಕ್ಷ್ಯ ಚಿತ್ರಕ್ಕೆ ಇರಿಸಲಾಗಿದೆ. ಅಮೇರಿಕಾದ ಯಾವ ಪ್ರವಾಸಿ ತಾಣಗಳಿಗೇ ಹೋಗಲಿ ಅಲ್ಲಿ ಅದರ ಮೂಲನಿವಾಸಿಗಳ ಹಾಡುಗಳು, ಚಿತ್ರಕಲೆಗಳು, ಅವರ ವೇಷ ಭೂಷಣದ ಭಾವಚಿತ್ರಗಳು, ಅವರ ಗ್ರಾಮ ಜೀವನದ ಪ್ರತಿಕೃತಿಗಳು, ಬೇಟೆಯ ಸ್ವರೂಪ, ಆಹಾರ ಪದ್ಧತಿ, ಅವರ ಸ್ಥಳನಾಮಗಳು ಕಂಡು ಬರುತ್ತವೆ. ಮೇಲಿನ ಹಾಡು ಕೂಡ ಒಬ್ಬ ದನಗಾಹಿಯ ಹಾಡು. ಇದು , ಮೂಲನಿವಾಸಿಗಳ ಸಂಸ್ಕೃತಿಯ ಮೇಲೆ ಆಧುನಿಕ ಸಮಾಜದ ದಬ್ಬಾಳಿಕೆಯನ್ನು ಬಯಲಾಗಿಸುತ್ತದೆ. ರಜನೀಶ್ ಅವರ 'wild country ' ಕೂಡ ತನ್ನ ಸಂಸ್ಕೃತಿಯನ್ನು ಹೊಸಕಿ ಹಾಕಲು ಬಂದ ಅಮೇರಿಕಾ ಆಡಳಿತ ವ್ಯವಸ್ಥೆಯನ್ನು , ಮಿಲಿಟರಿ ಮತ್ತು ಪೋಲಿಸ್ ಶಕ್ತಿಯನ್ನು, ನ್ಯಾಯಾಂಗವನ್ನು ಎದುರು ಹಾಕಿಕೊಂಡಿತು. ನಾಲ್ಕುವರುಷಗಳ ಮೌನ ಮುರಿದ ಭಗವಾನ್ ರಜನೀಶ್ ಅಮೇರಿಕಾಕ್ಕೆ ಪಾಠಕಲಿಸುತ್ತೇನೆ ಎಂದು ತರ್ಜನಿ ಬೆರಳಲ್ಲಿ ಎಚ್ಚರಿಸಿದರು. ಆದರೆ ಪ್ರವಾಸಿಗರಾಗಿ ಹೋದ ಅವರು ವಿದೇಶೀ ವಲಸೆಯ ನಿಯಮಕ್ಕೆ ವಿರುದ್ಧವಾಗಿ ಆಶ್ರಮ ಕಟ್ಟಿ ಸಾವಿರಾರು ಅನುಯಾಯಿಗಳ ಬಲದಿಂದ ಅಲ್ಲಿಯೇ ಝಾಂಡಾ ಹೂಡಿದರು . ಅದೇ ಅವರಿಗೆ ಮುಳುವಾಯಿತು. ವಿಮಾನದಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದ ಅವರನ್ನು ಅಮೇರಿಕಾದ ದಕ್ಷಿಣ ಸರಹದ್ದಿನಲ್ಲಿ (ಸೌತ್ ಕರೊಲಿನಾ) ಹಿಡಿಯಲಾಯಿತು. ವಿಮಾನ ನಿಲ್ದಾಣದಲ್ಲಿಯೇ ಕೋಳತೊಡಿಸಿ ಕರೆದೊಯ್ದರು. ಅವರ ಅಪಾರ ಹಣ, ವಜ್ರ ವೈಢೂರ್ಯ, ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಂಡರು. ದಂಡ ತೆತ್ತು ಬಿಡುಗಡೆಯಾಗಿ ಓಶೋ 'ಇನ್ನು ಇಲ್ಲಿಗೆ ಕಾಲಿಡಲಾರೆ' ಎಂದು ಮತ್ತೆ ಪುಣೆಗೆ ಹಾರಿದರು.( ೧೯೮೮) ಅವರ ಕಾರ್ಯದರ್ಶಿ ಶೀಲಾ ಮೊದಲೇ ಅವರನ್ನು ಬಿಟ್ಟು ಜರ್ಮನಿಗೆ ಹಾರಿದ್ದರು. ರಜನೀಶರ ಕ್ರೋಧಕ್ಕೆ ಕಾರಣರಾದರು. ಅಮೇರಿಕಾದ ಸರ್ಕಾರ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಿತು. ವಿಕಿಪೀಡಿಯ ಮಾಹಿತಿಯ ಪ್ರಕಾರ ರಜನೀಶ್ ಮತ್ತು ಅವರ ಅನುಯಾಯಿಗಳನ್ನು ದಂಗೆಕೋರರು, ಭಯೋತ್ಪಾದಕರು ಎಂದೇ ನೇತ್ಯಾತ್ಮಕವಾಗಿ ಚಿತ್ರಿಸಲಾಗಿದೆ. ಆದರೆ wild wild ನ ಚಿತ್ರದ ವಿಶೇಷತೆ ಇರುವುದು ಇಲ್ಲಿಯೇ! ತೀರ್ಮಾನಗಳನ್ನು ಅದು ಪ್ರೇಕ್ಷಕರಿಗೇ ಬಿಡುತ್ತದೆ. ಬಹಳ ವಸ್ತುನಿಷ್ಠವಾಗಿ ಅಮೇರಿಕನ್ ಆಡಳಿತ ವ್ಯವಸ್ಥೆ , ಗ್ರಾಮವಾಸಿಗಳು ಮತ್ತು ಅವುಗಳ ವಿರುದ್ಧ ನಿಂತ ಓಶೋ ಅನುಯಾಯಿಗಳ ಎಲ್ಲರ ಅಭಿಪ್ರಾಯಗಳನ್ನೂ ಇಲ್ಲಿ ದಾಖಲಿಸಲಾಗಿದೆ. ಪರವಿರೋಧಗಳ ಸಮತೋಲನ ವೀಕ್ಷಣೆ ಇಲ್ಲಿದೆ. ಎಲ್ಲವನ್ನೂ ಮಾರಿಕೊಂಡು ಆಶ್ರಮದಲ್ಲಿ ನೆಲಸಲು ಬಂದವರು 'ಭಗವಾನ'ರಿಂದ ವಿದಾಯ ಹೊಂದಿ ನೆಲೆಯಿಲ್ಲದ ಜಾಗಕ್ಕೆ ಮರಳುವಾಗ ಅನೇಕ ಅಮೇರಿಕನ್ನರು ದುಃಖಿಸಿರುವಂತೆಯೇ, ಗ್ರಾಮವಾಸಿಗಳು ಕೆಲವರು ನಿರಾಳದ ನಿಟ್ಟುಸಿರು ಬಿಟ್ಟಿದ್ದಾರೆ. ಒರೆಗಾನ್ ನಲ್ಲಿನ ಅವರ ವಾಸ್ತವ್ಯ ಅಕ್ರಮವಾದುದಲ್ಲ ಎಂದು‌ ಆನಂತರ ಅಮೇರಿಕನ್ ವ್ಯವಸ್ಥೆಗೆ ತಿಳಿದು ಬಂದಿತು. ಆವೇಳೆಗೆ ಪುಣೆ ಸೇರಿದ ಓಶೋ ಮತ್ತೆ ಆಶ್ರಮದ ಚಟುವಟಿಕೆಗಳನ್ನು ಪ್ರಾರಂಭಿಸಿದ್ದರು. ೧೯೯೦ ರಲ್ಲಿ ಒಂದು ದಿನ ಮಲಗಿದವರು ಏಳವುದಿಲ್ಲ. ಅವರಿಗೆ ಅಗತ್ಯಕ್ಕಿಂತ ಹೆಚ್ಚಿನ ಪರಿಮಾಣದ ಔಷಧಿಯನ್ನು ಚುಚ್ಚಲಾಗಿತ್ತು ಎಂದು ಆನಂತರ ತಿಳಿದು ಬರುತ್ತದೆ. ಓಶೋ ಅವರದ್ದು ಸಹಜ ಮರಣವಲ್ಲ, ಕೊಲೆ ಎಂದು ಸಾಬೀತಾಗುತ್ತದೆ. ಓಶೋ ಎಂದರೆ ಜ್ಞಾನಸಾಗರ. ಒಮ್ಮೆ ಪತ್ರಕರ್ತರ ಪ್ರಶ್ನೆಗೆ ಅವರು 1,65,000 ಪುಸ್ತಕಗಳನ್ಮು ಓದಿರುವೆನೆಂದು ಉತ್ತರಿಸುತ್ತಾರೆ. ಅವರನ್ನು ದಾರ್ಶನಿಕನಾಗಿ ಕಂಡುಕೊಂಡವರಿಗೆ ಅವರ ಹೋರಾಟದ ಇನ್ನೊಂದು ಮುಖ ಕಾಣಬೇಕೆಂದರೆ 'wild wild ..' ನೋಡಬೇಕು. ಒಂದು ಅದ್ಭುತ ಸಾಕ್ಷ್ಯ ಚಿತ್ರವಾಗಿ ಕಾಣಿಸುತ್ತದೆ. ಯಾವ ವಿಷಯದಲ್ಲೂ ಈ ಚಿತ್ರ ನಿರ್ಣಾಯಕವಾಗಿ ಒಂದು ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಅಲ್ಲಿ ಬರುವ ಪಾತ್ರಗಳೇ ಆ ಕೆಲಸವನ್ನು ಮಾಡುತ್ತವೆ. ಓಶೋ ಅವರು ಬರೆದದ್ದು ಎರಡೇ ಪುಸ್ತಕ, ಅದೂ ಖಾಸಗಿ ದಿನಚರಿಗಳದ್ದು. “Cup of Tea” ಮತ್ತು “Seeds of Wisdom.” ಉಳಿದ ೬೫೦ ಕ್ಕೂ ಹೆಚ್ಚಿನ ಪುಸ್ತಕಗಳು ಅವರ ಬೆಳಗಿನ ಮತ್ತು ಸಂಜೆಯ ಪ್ರವಚನಗಳಿಂದ ಆಯ್ದ ಸಂಗ್ರಹಗಳು, ಎಂದು ವಿಕಿಪೀಡಿಯ ಹೇಳುತ್ತದೆ. ಬೋಧಿ ಧರ್ಮ ಮತ್ತು ಝೆನ್ ಕುರಿತಾದ ಅವರ ವಿಚಾರ ಧಾರೆಗಳು, ಸಂಭೋಗ್ ಸೆ ಸಮಾಧಿ ತಕ್ ಮತ್ತು, ಧ್ಯಾನ, ಕ್ರಿಶ್ಚಿಯಾನಿಟಿ, ಧಮ್ಮಪಾದ ಕುರಿತಾದ ಕೃತಿಗಳು, ಮುಲ್ಲಾ ನಸರುದ್ದೀನನ ಹಾಸ್ಯಗಳು, ಮಾನಸ ಚಿಕಿತ್ಸೆ( psycho therapy), ಸಮಾಜವಾದ ಹೀಗೆ ಅವರ ಪುಸ್ತಕಗಳು ಅವರ ಆಸಕ್ತಿಯ ವೈವಿಧ್ಯವನ್ನು‌ ಬಯಲಾಗಿಸುತ್ತವೆ. ಈ ಚಿತ್ರದ ಮಿತಿಯೆಂದರೆ ನಾವು ಭಾರತದಲ್ಲಿ ಕಂಡ, ಮೇಲಿನ‌ ಅವರ ಗ್ರಂಥಗಳ ಮೂಲಕ ಗ್ರಹಿಸಿದ 'ಮೇರು ಓಶೋ' ಇಲ್ಲಿ ಸಿಕ್ಕುವುದಿಲ್ಲ. ಅವರ ದಾರ್ಶನಿಕ ಮುಖ ಮರೆಯಾಗಿದೆ. ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವುದೇ ಕಡಿಮೆ. ಆದರೂ ಅಮೇರಿಕಾದ ವಿರುದ್ಧ ಸೆಡ್ಡು ಹೊಡೆದು ಸೋತರೂ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಪ್ರಪಂಚದ ಅನೇಕ ದೇಶಗಳಲ್ಲಿ ಓಶೋ ಸಂಸ್ಥೆಗಳಿವೆ. ಲಕ್ಷಾಂತರ ಅನುಯಾಯಿಗಳಿದ್ದಾರೆ. ಜಗತ್ತಿನ ಹಲವಾರು ಭಾಷೆಗಳಿಗೆ ಅವರ ಪುಸ್ತಕಗಳು ಅನುವಾದಗೊಂಡಿವೆ. 'ಬುದ್ಧ ದೇವ' ಎಂದು ಅವರನ್ನು ಕರೆದವರಿದ್ದಾರೆ. ಓಶೋ ಒಂದು ಶಕ್ತಿ ಎಂಬ ಗ್ರಹಿಕೆ ಪೂರ್ಣವಾಗಬೇಕಾದರೆ wild wild ನೋಡ ಬೇಕು. ಎಲ್ಲಾ ಉಪಾಧಿಗಳನ್ನು ಹರಿದುಕೊಂಡು ಉಕ್ಕುವ ಸಾಗರ 'ಓಶೋ' ಎಂಬ ಅರಿವಾಗುತ್ತದೆ. Maclain Way, Chapman Way ನಿರ್ದೇಶಕರು. ನೋಡಿ ನೆಟ್ ಫ್ಲಿಕ್ಸ್ ನಲ್ಲಿದೆ. ಚಿತ್ರಗಳು : ಗೂಗಲ್ ಕೃಪೆ Sept 22/22 ಹಾಲಿವುಡ್ ವಾಕ್ ಆಫ್ ಫೇಮ್ : ಹಾಲಿವುಡ್ ಪ್ರಸಿದ್ಧರ ಹಾದಿ. ಹಾಲಿವುಡ್ ಬುಲವಾರ್ ಮತ್ತು ವೈನ್ ಸ್ಟ್ರೀಟ್ ಎಂಬ ಎರಡು ರಸ್ತೆಗಳು ಪ್ರಪಂಚದ ಮನರಂಜನೆಯ ಕೇಂದ್ರಗಳೆಂದೇ ಪ್ರಸಿದ್ಧರ ಹಾದಿ ಅಥವಾ ನಡಿಗೆಯಾಗಿ ಹೆಸರು ಪಡೆದಿವೆ. ನಮ್ಮ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಹಾಗೆ ಉದ್ದಕ್ಕೂ ಸಿನಿಮಾ ಮಂದಿರಗಳು. ಎರಡೂ ರಸ್ತೆಗಳ ಫುಟ್ ಪಾತಿನ ಮಧ್ಯದಲ್ಲಿ ಅನೇಕ ಕಂಚಿನ ನಕ್ಷತ್ರಗಳನ್ನು ನೆಡಲಾಗಿದೆ.ಅವುಗಳಲ್ಲಿ ಅಮೇರಿಕಾದ ಪ್ರಸಿದ್ಧ ತಾರೆಯರ ಹಾಗೂ ಸಿನಿಮಾಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಸಿದ್ಧ ಕಾರ್ಯಕರ್ತರ ಹೆಸರುಗಳನ್ನು ಕೆತ್ತಲಾಗಿದೆ. ಹಾಗೆ ಇಲ್ಲಿ ೨೭೦೦ ಕ್ಕಿಂತಲೂ ಹೆಚ್ಚಿನ ನಕ್ಷತ್ರಗಳಿವೆಯಂತೆ. ಕೆಲವು ನಕ್ಷತ್ರಗಳನ್ನು ಖಾಲಿ ಬಿಡಲಾಗಿದೆ. ಯಾರದ್ದಾದರೂ ಹೆಸರನ್ನು ಕೆತ್ತಿಸುವುದಕ್ಕೆ ಛೇಂಬರ್ ಆಫ್ ಕಾಮರ್ಸ್ ಸಂಸ್ಥೆಗೆ ನಾಮಪತ್ರ ಸಲ್ಲಿಸಬೇಕು. ಯಾರೂ ಸಲ್ಲಿಸಬಹುದು. ಆಯ್ಕೆಯಾದವರ ಹೆಸರನ್ನು ಅಲ್ಲಿ ನೆಡಲಾಗುತ್ತದೆ. ಇವುಗಳನ್ನು ಅಗೆದು ಕದಿಯುವವರೂ ಇದ್ದಾರಂತೆ. ಹಾಲಿವುಡ್ ಛೇಂಬರ್ ಆಫ್ ಕಾಮರ್ಸ್ ಎನ್ನುವ ವ್ಯವಸ್ಥಾಪಕ ಸಂಸ್ಥೆ ಇದನ್ನು‌ ನೋಡಿಕೊಳ್ಳುತ್ತಿದೆ. ಇದೇ ರಸ್ತೆಯಲ್ಲಿದ್ದ ಮರ್ಲಿನ್ ಮುನ್ರೋಳ ಸ್ಟೀಲಿನ ಪ್ರತಿಮೆಯನ್ನು ಯಾರೋ ಕದ್ದೊಯ್ದರಂತೆ. ಅಲ್ಲಿ ಅಮಿತಾಬ್ ಬಚ್ಚನ್ ನ್ನು ಹುಡುಕುತ್ತಿದ್ದೆ ಆದರೆ ನನಗೆ ಕಾಣಿಸಲಿಲ್ಲ. ಈಗಾಗಲೇ ನ್ಯೂಯಾರ್ಕ್ ನ ಮ್ಯೂಸಿಯಂ ಒಂದರಲ್ಲಿ ಅವರ ಮೇಣದ ಪ್ರತಿಮೆ ಇರುವ ಸುದ್ದಿ ತಿಳಿದಿತ್ತು. ಆ ರಸ್ತೆಯಲ್ಲಿ ಸಾಗುವವರು ಆ ನಕ್ಷತ್ರಗಳನ್ನು ತುಳಿದುಕೊಂಡೇ ಓಡಾಡಬೇಕು. ನಾವೂ ಕೂಡ ಪ್ರಸಿದ್ಧರ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆದೆವು. ಈ ಭಾಗ ಥೇಟ್ ನಮ್ಮ ಕೆಂಪೇಗೌಡ ರಸ್ತೆಯಂತೆಯೇ ಬಹಳ ಜನಸಂದಣಿ ಇರುವ ರಸ್ತೆ. ಸಿಗ್ನಲ್ ಗಳಲ್ಲಿ ಅಷ್ಟೊಂದು ಜನ ಒಟ್ಟಿಗೇ ದಾಟುವುದನ್ನು ಪ್ರಥಮಬಾರಿಗೆ ಅಮೇರಿಕಾದಲ್ಲಿ ಕಂಡದ್ದು ನಾನು ಇಲ್ಲಿಯೇ. ಇಲ್ಲಿನ ಭಾರತೀಯ ಹೊಟೇಲ್ ಗೆ ಒಂದರಲ್ಲಿ ಅಲ್ಲಿಗೆ ಭೇಟಿಕೊಟ್ಟ ಪ್ರಸಿದ್ಧ ತಾರೆಯರ ಜೊತೆಗೆ ಹೊಟೇಲ್ ಮಾಲೀಕರು ತೆಗೆಸಿಕೊಂಡ ಫೋಟೋಗಳಿವೆ. ಅದರಲ್ಲಿ ನಮ್ಮ ರಜನೀಕಾಂತ್ ಚಿತ್ರವೂ ಇದೇ. ಅಮೇರಿಕಾದ ಸ್ವಚ್ಛತೆಯ ಬಗ್ಗೆ ಭ್ರಮೆ ಇರುವವರು ಈ ಎರಡು ರಸ್ತೆಗಳನ್ನು ನೋಡಿದರೆ ಸಾಕು. ಅಲ್ಲಲ್ಲಿ ಎಸೆದ ಕಸಗಳು, ಬೀದಿ ಬದಿಯಲ್ಲಿ ಬೀಡು ಹೂಡಿದ ಭಿಕ್ಷುಕರು ಕಾಣಬರುತ್ತಾರೆ. "ಕಳ್ಳರು ಇದ್ದಾರೆ ಎಚ್ಚರಿಕೆ" ಎಂದು ಬೋರ್ಡ್ ಹಾಕದಿದ್ದರೂ, ನಾವು ಇಲ್ಲಿ ಜಾಗ್ರತೆಯಾಗಿ ಇರುವುದು ಕ್ಷೇಮ. ಸದ್ಯ ಮುಂಬಯಿನ 'ಪಾಕಿಟ್ ಮಾರ್ ಗಳು ಕಾಣಲಿಲ್ಲ' ಅಥವಾ ನಮ್ಮ ಬಳಿ ಅವರ ಹಣ ಇಲ್ಲವೆಂದು ಗೊತ್ತಿರಬಹುದು. "ಒಂದು ತೆಗೆದುಕೊಂಡರೆ ಎರಡು ಉಚಿತ" ದ ಸಸ್ತಾ ಮಾಲುಗಳು. ಲಾಸ್ಏಂಜಲೀಸ್ ನಗರ ದರ್ಶನಕ್ಕಾಗಿ ಬನ್ನಿ ಬನ್ನೀ ಎಂದು ಬಸ್ ಏಜೆಂಟರುಗಳು ಕೂಗುತ್ತಿದ್ದರು. ಗರ್ಭಪಾತದ ಬಗ್ಗೆ ಬಂದ ಹೊಸ ಕಾನೂನಿನ ವಿರುದ್ಧ ಒಂದು ಗುಂಪು ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಿತ್ತು. ಆಕಾರದಲ್ಲಿ ಮುಂಬಯಿಗಿಂತ ದೊಡ್ಡ ನಗರವಾದರೂ ಕೊಳಕಿನ ವಿಷಯದಲ್ಲಿ ಮಂಬಯಿ ನೆನಪನ್ನೇ ತರುತ್ತದಾದರೂ, ಮುಂಬಯಿಯನ್ನು ಯಾವ ನಗರವೂ ಮೀರಿಸಲು ಸಾಧ್ಯವಿಲ್ಲ. ಇಲ್ಲಿ ಕೊಳಗೇರಿ ಇಲ್ಲವೆಂದು ಕೇಳಿದ್ದೇನೆ. ಬೆಂಗಳೂರು ಮತ್ತು ಮುಂಬಯಿ ಎರಡೂ ನಗರಗಳು ಸೇರಿ ಲಾಸ್ ಏಂಜಲೀಸ್ ನಗರ ರೂಪುಗೊಂಡಿರುವಂತೆ ನನಗೆ ಕಂಡಿತು. ಈ ರಸ್ತೆಯಲ್ಲಿಯೇ ಲಾಸ್ಏಂಜಲೀಸ್ ಪ್ರಮುಖ ಪ್ರವಾಸ ತಾಣಗಳಲ್ಲಿ ಒಂದಾದ ಪ್ರಸಿದ್ಧ ಭವ್ಯ ಚೈನಾ ಥಿಯೇಟರ್ ( TCL) ಇರುವುದು. ವಿಶ್ವದಲ್ಲಿಯೇ ಇದು ಅತಿ ದೊಡ್ಡದಾದ IMAX ಲೇಸರ್ ಅನುಭವ ಕೊಡುವ ಆಡಿಟೋರಿಯಮ್ ಉಳ್ಳ ಸಿನಿಮಾ ಮಂದಿರವಂತೆ.ಇದು ಅರಮನೆಯಂತಹ ಒಂದು ಭವ್ಯ ಕಟ್ಟಡ ಕೆಳಗಿನ ಮಹಡಿಯಲ್ಲಿ ಗೋಡೆಗಳ ಉದ್ದಕ್ಕೂ ಸಿನಿಮಾ ತಾರೆಯರ ಚಿತ್ರಗಳಿವೆ. ಇಲ್ಲಿಯೇ ಮರ್ಲಿನ್ ಮುನ್ರೋಳ ಕೈಅಚ್ಚು ಕೂಡ ಇದೆ. ಕುತೂಹಲಕ್ಕೆಂದು ಒಳಹೊಕ್ಕ ನಾವು 'ಟಾಪ್ ಗನ್ ' (೨೦೨೨) ಎಂಬ ಒಂದು ಕೆಟ್ಟ 4D ಸಿನಿಮಾ ನೋಡಿಕೊಂಡು ಬಂದೆವು. ಟಾಮ್ ಕ್ರೂಯಿಸ್ ಹೆಸರಿನ ಇದರ ನಾಯಕನನ್ನು ನಾನು ಕೇಳಿದ್ದು, ಕಂಡಿದ್ದು ಇದೇ ಮೊದಲು. ಹಾಲಿವುಡ್ ಬೀದಿ ಸುಖವೆನಿಸಲಿಲ್ಲ. ಕೊಳಕು ಕಳ್ಳತನ, ಬಡತನಕ್ಕೆ ಸಂಬಂಧಿಸಿದಂತೆ ಎಲ್ಲಾ ನಗರಗಳ ಕಂಪನಗಳೂ ( vibes) ಹೆಚ್ಚು ಕಮ್ಮಿ ಒಂದೇ, ಸ್ವಲ್ಪ ಮೇಲ್ಪದರದ ಬದಲಾವಣೆಗಳಿರಬಹುದು ಎಂದೇ ಎನಿಸಿತು.Sept 19 ಹಾಲಿವುಡ್ ನಲ್ಲಿ ಬಾಲಿವುಡ್ ಬಾಲಿವುಡ್ ತಾರೆಯರಿಗೆ ಮಲಬಾರ್ ಹಿಲ್ ಇರುವಂತೆ ಹಾಲಿವುಡ್ ತಾರೆಯರಿಗೆ ಲಾಸ್ಏಂಜಲೀಸ್ ನ 'ಬಿವರ್ಲೀ ಹಿಲ್ಸ್‌'. ಹಾಲಿವುಡ್ ಎಂಬ ಹೆಸರು ಬರಲು ಅನೇಕ ದಂತಕತೆಗಳಿವೆ. ಅವುಗಳಲ್ಲಿ ಅಲ್ಲಿ ಹಾಲಿ (Holly) ಎಂಬ ಹೆಸರಿನ ಕಡು ಕೆಂಪು ಹಣ್ಣುಗಳ ಅನೇಕ ಪೊದೆಗಳು ಆ ಬೆಟ್ಟದ ತುಂಬಾ ಬೆಳೆಯುತ್ತಿದ್ದುವಂತೆ ಅದಕ್ಕಾಗಿ ಅಲ್ಲಿನ ಮೂಲನಿವಾಸಿಗಳು 'ಹಾಲಿವುಡ್' ಎಂದು ಕರೆದರು ಎಂಬುದೂ ಒಂದು. ಅಲ್ಲಿ ಪ್ರಾರಂಭವಾದ ಸಿನಿಮಾ ಉದ್ಯಮಕ್ಕೆ ಆ ಹೆಸರು ಬಂದಿತು. (೧೮೮೭) ಬಾಲಿವುಡ್ ಹೆಸರು ಬರಲು ಕೇವಲ 'ಬಾಂಬೆ' ಎಂಬ ಹೆಸರು ಮಾತ್ರ ಕಾರಣವಾಗಿರಲಾರದು. ಹಾಲಿವುಡ್ ಹೆಸರನ್ನು ನಕಲು ಮಾಡಿ ತೆಗೆದು ಕೊಂಡಿರಬೇಕು, ಎಂಬುದು ನನ್ನ ಅನುಮಾನ. ಸ್ಯಾಂಡಲ್ ವುಡ್ ನಮ್ಮಲ್ಲಿದೆ ( ಗಂಧದಗುಡಿ) ಆದುದರಿಂದ ಅದು ಹಾಲಿವುಡ್ ನ ನಕಲಾದರೂ ಅರ್ಥಪೂರ್ಣ ನಕಲು ಎನಿಸುತ್ತದೆ. ಇನ್ನು 'ಟಾಲಿವುಡ್' 'ಕೊಲಿವುಡ್ ' ಬಗ್ಗೆ ಏನೇನು ಐತಿಹ್ಯಗಳಿವೆಯೋ ಸಂಶೋಧನೆ ಮಾಡಬೇಕು ಬಿವರ್ಲೀ ಹಿಲ್ಸ್ ನ ದೊಡ್ಡ ರಸ್ತೆಗಳ ನಡುವೆ ಹಾಯುತ್ತಿದ್ದೆವು. ಇಕ್ಕೆಲಗಳಲ್ಲಿ ನಮ್ಮ ಬೆಂಗಳೂರಿನಂತಹುದೇ ದೊಡ್ಡ ದೊಡ್ಡ ಬಂಗಲೆಗಳು. ವ್ಯತ್ಯಾಸವೆಂದರೆ ಇಲ್ಲಿ ಲ್ಯಾಂಡ್ ಸ್ಕೇಪ್, ಬ್ಯಾಕ್ ಯಾರ್ಡ್ ಎಂದೆಲ್ಲಾ ಮನೆಗಿಂತಲೂ ವಿಶಾಲವಾದ ಬಯಲ ಆವರಣವೇ ಹೆಚ್ಚು. 'ಬೋರೇಗೌಡಿ ಬೆಂಗಳೂರಿ'ಗೆ ಬಂದ ಹಾಗೆ ಬೆಕ್ಕಸ ಬೆರಗಾಗಿ ಕಾರಿನ ಕಿಟಕಿಯಿಂದಲೇ ಹಾಲಿವುಡ್ ತಾರೆಯರ ಮನೆಗಳನ್ನು ನೋಡುತ್ತಿದ್ದೆ . "ಅಲ್ಲಿ ನೋಡಿ ಶಾರುಖಾನ್ ಚಹಾ ಕುಡಿಯಲು ಬಾಲ್ಕನಿಗೆ ಬಂದಿದ್ದಾನೆ !ಇಲ್ಲಿ ನೋಡಿ... ನೋಡಿ..ಅಮೀರ್ ಖಾನ್ ಅಮಿತಾಬ್, ರೇಖಾ" ಎಂದು ಬಸ್ಸಿನೊಳಗೆ ಕುಳಿತವರು ಕಿಟಕಿಯಿಂದಲೇ ಧುಮುಕುವಂತೆ ಹುಚ್ಚೆಬ್ಬಿಸುತ್ತಿದ್ದರು, ಮುಂಬಯಿ ದೇಖೋನ ಟೂರಿಸ್ಟ್ ಗೈಡುಗಳು, ಸುಳ್ಳೇ ನಮ್ಮನ್ನು ಬೇಸ್ತು ಬೀಳಿಸುತ್ತಿದ್ದುದು ನೆನಪಾಯಿತು. ಇಂಗ್ಲಿಷ್ ಸಿನಿಮಾಗಳನ್ನು ನೋಡದ ನನಗಾವ ಹಾಲಿವುಡ್ ತಾರೆಯರ ಪರಿಚಯವಿರುತ್ತದೆ? ಆರ್ನಾಲ್ಡ್ ಶುವಾರ್ಟ್ಸನೆಗರ್ ( Arnold Schwarzenegger)ನನ್ನು 'ಟರ್ಮಿನೇಟರ್ ' ಸಿನಿಮಾವನ್ನು ಮಕ್ಕಳು ನೋಡುತ್ತಿದ್ದಾಗ ಅಡುಗೆ ಮನೆಯ ಒಳಹೊರಗೆ ಸುಳಿಯುತ್ತಾ ಟಿ.ವಿಯ ಕಡೆಗೆ ಕಣ್ಣುಹಾಯಿಸುತ್ತಾ ಕಂಡಿದ್ದಷ್ಟೇ. ಮರ್ಲಿನ್ ಮುನ್ರೋ ತನ್ನ ಹಾರುತ್ತಿರುವ ಲಂಗವನ್ನು ನಿಯಂತ್ರಿಸುತ್ತಿರುವ‌ ಚಿತ್ರವೊಂದು ಪರಿಚಿತವಾಗಿತ್ತು. ಅದು ಬಿಟ್ಟರೆ ನನಗೆ ಅಮೇರಿಕಾ ಸಿನಿಮಾದ ಬಗ್ಗೆ ಬೇರೆ ಏನೂ ಗೊತ್ತಿಲ್ಲ. ಹೀಗಾಗಿ ಬಿವರ್ಲೀ ಹಿಲ್ಸ್ ನಲ್ಲಿ ಹಾಯುವಾಗ ಯಾವನಾದರೂ ಸೂಪರ್ ಸ್ಟಾರ್ ಮನೆಯ ಹೊರಗೆ ಬಂದಿದ್ದರೂ ನನಗೇನೂ ತಿಳಿಯತ್ತಿರಲಿಲ್ಲ. ರೋಮಾಂಚನವಂತೂ ಆಗುತ್ತಿರಲೇ ಇಲ್ಲ. "ಮರ್ಲಿನ್ ಮುನ್ರೋ ಇಲ್ಲದ ದೇಶಕ್ಕೆ ಹೋಗುತ್ತಿದ್ದೀರಿ?!" ಎಂದು ಹಾ.ಮಾ. ನಾಯಕರನ್ನು ಅವರು ಅಮೇರಿಕಾಕ್ಕೆ ಹೊರಟಾಗ ಯಾರೋ ಕೇಳಿದ್ದರಂತೆ. ಕಳೆದ ಶತಮಾನದ ಐವತ್ತು ಅರವತ್ತರ ದಶಕದಲ್ಲಿ ಯುವಕರ ನಿದ್ದೆಗೆಡಿಸಿದ ಹಾಲಿವುಡ್ ತಾರೆ ಅವಳು. ಪಾಪ್ ಸಂಸ್ಕೃತಿಯನ್ನು ಚಲಾವಣೆಗೆ ತಂದವಳು, ಲೈಂಗಿಕ ಅಭಿವ್ಯಕ್ತಿಯಲ್ಲಿ‌ ಕ್ರಾಂತಿ ಉಂಟು ಮಾಡಿದವಳು ಎಂದೆಲ್ಲಾ ಅವಳನ್ನು ಬಣ್ಣಿಸುತ್ತಾರೆ. ಬಹಳ ಸಣ್ಣ ವಯಸ್ಸಿಗೇ ತೀರಿಕೊಂಡಳು (೩೬) ಆ ಕಾಲದ ಸಿನಿಮಾ ಪ್ರೇಮಿಗಳ ಹುಚ್ಚೆಬ್ಬಿಸಿದ ಬೆಳ್ಳಿ ತೆರೆಯ ರಾಣಿ. ಅವಳ ಫೋಟೋ ನೋಡಿದಾಗೆಲ್ಲಾ ನನಗೆ "ಅಚ್ಛಾ ಜೀ ಮೇಂ ಹಾರಿ ಚಲೋ ಮಾನ್ ಜಾವೋನಾ" ಎಂದು ದೇವಾನಂದನ ಸುತ್ತ ಬಿಂಕ ಬಿನ್ನಾಣದಿಂದ ಸುತ್ತುವ ಮಧುಬಾಲಾಳೇ ಕಣ್ಣ ಮುಂದೆ ಸುಳಿಯುತ್ತಾಳೆ. ಈಗ ಮಾಧುರಿದೀಕ್ಷಿತ್ ಳನ್ನು ಅವಳಿಗೆ ಸ್ವಲ್ಪ ಹತ್ತಿರವಾಗಿ ಕಲ್ಪಿಸಿಕೊಳ್ಳಬಹುದು. ದಿವ್ಯ ಭವ್ಯ ಬಂಗಲೆಗಳ ಶ್ರೀಮಂತರ ರಸ್ತೆಗಳಲ್ಲಿ ಮಗ ಎರಡು ಮೂರು ಬಾರಿ ಕಾರು ಓಡಿಸಿದ. "ಅಮ್ಮಾ ರೋಲ್ಸ್ ರಾಯ್ಸ್ ನೋಡಿದೆಯಾ?" ಮಗ ಅತಿ ಉತ್ಸಾಹದಿಂದ ಕೂಗಿದ. ರೋಲ್ಸ್ ರಾಯ್ಸ್ ಕಾರು ಬಹಳ ದುಬಾರಿಯದೆಂದು ಗೊತ್ತಿತ್ತು. ಆದರೆ ಎಷ್ಟು ದುಬಾರಿ ಗೊತ್ತಿರಲಿಲ್ಲ. ಕಾರನ್ನು ಓಡಿಸಲು ಬಾರದ ನನಗೆ ಮಾರುತಿಯಾದರೇನು? ರೋಲ್ಸ್ ರಾಯ್ಸ್ ಆದರೇನು? ಮೈಸೂರು ಮಹಾರಾಜರು ಅದರ ಬಳಿನಿಂತು ತೆಗೆಸಿಕೊಂಡ ಫೋಟೋ ನೋಡಿದ್ದೆ. ಭಾರತದಿಂದ ಓಡಿ ಬಂದ ಓಶೋ ರಜನೀಶ್ ಅವರು ವಾಷಿಂಗ್ಟನ್ ಬಳಿಯ ಒರೆಗಾನ್ ರಾಜ್ಯದಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಿದಾಗ ಅವರೂ ಕೂಡ ರೋಲ್ಸ್ ರಾಯ್ಸ್ ನಲ್ಲೇ ಓಡಾಡುತ್ತಿದ್ದರಂತೆ. ರೋಲ್ಸ್ ರಾಯ್ಸ್ ಕೊಳ್ಳಲು ಪಾಟಿಯಾಲದ ಭೂಪಿಂದರ್ ಸಿಂಗ್ ಎನ್ನುವ ರಾಜ ಹೋದಾಗ ಇಂಗ್ಲೆಂಡಿ ಕಾರಿನ ಕಂಪನಿಯವರು ಭಾರತೀಯನಾದ ಅವನ ಆರ್ಥಿಕ ಸಾಮರ್ಥ್ಯ ‌ಮತ್ತು ಯೋಗ್ಯತೆಯನ್ನು ಅನುಮಾನಿಸಿ ಕಾರನ್ನು ಅವನಿಗೆ ಮಾರಲು ನಿರಾಕರಿಸಿದರಂತೆ. ಆಗ ಆ ರಾಜ ಅಂತಹ ಏಳು ಕಾರುಗಳನ್ನು ಕೊಂಡು ಅದನ್ನು ಕಸ ಎತ್ತುವ ಗಾಡಿಯನ್ನಾಗಿ ಮಾಡಿದನಂತೆ. ಆಗ ಆ ಕಾರಿನ ಕಂಪನಿಯ ಮಾಲೀಕರು ಅವರಿಗಾದ ಅವಮಾನವನ್ನು ಗುರುತಿಸಿ ಕ್ಷಮೆ ಕೇಳಿದ್ದರಂತೆ. ಇಂತಹ ರಾಯಲ್ ಇತಿಹಾಸವಿರುವ ಕಾರು ಲಾಸ್ಏಂಜಲೀಸ್ ನ ಬಿವರ್ಲಿ ಹಿಲ್ಸ್ ನಲ್ಲಲ್ಲದೇ ಬೇರೆಲ್ಲಿ ತಿರುಗ ಬೇಕು? ದಾರಿಯಲ್ಲಿ ನಿಂತಿದ್ದ ಒಂದು ದೊಡ್ಡ ಕಾರಿನ ಹಿಂದೆ Actor ಎನ್ನುವ‌ ಫಲಕ ತೂಗುತ್ತಿತ್ತು. ಅದರಲ್ಲಿ ಯಾವ ನಟ ಕುಳಿತಿರಬಹುದು? ಅದು ಯಾವ ಮಾಡೆಲ್ ಕಾರಾಗಿರಬಹದು? ಮಗನ ಎದುರಿಗೆ ನನ್ನ ಅಜ್ಞಾನ ತೋರಿಸಿಕೊಳ್ಳದೇ ಸುಮನಿದ್ದೆ. ಕಾರು "ಹಾಲಿವುಡ್ ವಾಕ್ ಆಫ್ ಫೇಮ್‌ " ದಾರಿಯ ಕಡೆಗೆ ತಿರುಗಿತು. ನೂರುಜಡೆಯ ನೀಲವೇಣಿಯರು ಲಾಸ್ ಏಂಜಲೀಸ್ ನ ಸಾಂತಾ ಮೋನಿಕಾ ಬೀಚ್ ನಲ್ಲಿ ನಿಂತಿದ್ದೆ. ಅದೊಂದು ಜಾತ್ರೆ. "ಮುಂಬಯಿ ನೋಡು ಮುಂಬಯಿನ ....ನೋಡು" ಎನ್ನುವ ಬಯಾಸ್ಕೋಪಿನೊಳಗಿನ ರಂಗು ರಂಗಿನ ಲೋಕ. ಬಗೆ ಬಗೆಯ ರೋಲರ್ ಕೋಸ್ಟರ್ ತೊಟ್ಟಿಲುಗಳು, ವಿದ್ಯುತ್ ಬಣ್ಣ ಬಣ್ಣದ ದೀಪಗಳಿಂದ ಸಿಂಗರಿಸಿಕೊಂಡು ಆಕಾಶದಲ್ಲಿ ತೂಗುತ್ತಿದ್ದವು, ತಿರುಗುತ್ತಿದ್ದವು. ನನಗೆ ಇದು ಯಾವುದೂ ವಿಶೇಷವೆನಿಸಲಿಲ್ಲ. 'ಪಲವುಂ ನಾಲಗೆಯುಳ್ಳ ಆದಿಶೆಷ'ನಂತೆ, ಪಲವುಂ ವೇಣಿಗಳುಳ್ಳ ಕಪ್ಪು ಸುಂದರಿಯೊಬ್ಬಳು ತನ್ನ ಗೆಳೆಯನ ಜೊತೆ ಪ್ರೇಮೋನ್ಮಾದದಲ್ಲಿ ತಲ್ಲೀನಳಾಗಿದ್ದಳು. ನನಗೆ ಅಚ್ಚರಿಯಾದದ್ದು ಅವಳ ಪ್ರೇಮದ ಉನ್ಮಾದವಲ್ಲ. ಕಾಳುಮೆಣಸಿನ ತೆನೆಯಂತೆ ನೀಳವಾಗಿ ಪೆಡಸಾಗಿ ತೂಗುತ್ತಿದ್ದ ಅವಳ ಹಲವಾರು ಸಣ್ಣ ಸಣ್ಣ ಜಡೆಗಳು!! ಒಂದು ಮೂವತ್ತು ನಲವತ್ತು ಜಡೆಗಳಾದರೂ ಇರಬೇಕು!! ಅವಳನ್ನು ಮಾತನಾಡಿಸುವ ಆಸೆಯಿತ್ತು. ಆದರೆ ಅವಳಿದ್ದ ಸ್ಥಿತಿಯಲ್ಲಿ ನನಗದು ಸಾಧ್ಯವಾಗಲಿಲ್ಲ. ಮಗ ಬೇರೆ ಪಕ್ಕದಲ್ಲೇ ಇದ್ದ. ಇನ್ನು ನನ್ನನ್ನೂ 'ರೋಲರ್ ಕೋಸ್ಟರ್ ರೈಡಿ'ಗೆ ಇವನು ತೆಗೆದುಕೊಂಡಾನು ಎಂಬ ಭಯದಿಂದ ಸುಮ್ಮನಾದೆ. ಅವಳ ಹಿಂಬದಿಯಿಂದ ಮಗನಿಗೆ ತಿಳಿಯದಂತೆ ಒಂದು ಫೋಟೋ ತೆಗೆದೆ. ಅವಳನ್ನೇ ಕೇಳಿದ್ದರೆ 'ವಾವ್ , ಯ್ಹಾ' ಎನ್ನುತ್ತಾ ನನ್ನ ಜೊತೆ ಸೆಲ್ಫಿಗೆ ಪೋಸುಕೊಟ್ಟು ನಿಲ್ಲುತ್ತಿದ್ದಳೇನೋ !! ಆದರೆ ಮಗನಿದ್ದನಲ್ಲಾ?ಇಂಡಿಯಾದಿಂದ ಬಂದ ಮಕ್ಕಳಿಗೆ ಇಲ್ಲಿನ ಅಮೇರಿಕನ್ನರಿಗಿಂತಲೂ ಸಭ್ಯತೆಯ ಪ್ರಜ್ಞೆ ಜಾಸ್ತಿ. ಹಾಗೆ ಮಾಡಬಾರದು ಹೀಗೆ ನೋಡಬಾರದು, ಗಟ್ಟಿಯಾಗಿ ಮಾತನಾಡಬಾರದು.....ಇತ್ಯಾದಿ ಪಿರಿ ಪಿರಿಗಳು. ನಾವು ತಂಗಿದ್ದು ಗ್ಲಂಡೇಲ್ ಎಂಬ ಪ್ರದೇಶದ ಚಾರಿಯೇಟ್ ಹೆಸರಿನ ಲಾಜ್ ಒಂದರಲ್ಲಿ. ಬೆಳಿಗ್ಗೆ ಎದ್ದಕೂಡಲೇ ಸ್ಟಾರ್ ಬಕ್ಸ್ ಹುಡುಕಿಕೊಂಡು ನಾವಿಬ್ಬರೇ ಕಾಫಿಗೆ ಹೊರಟೆವು. ಮಗ ಇನ್ನೂ ಮಲಗಿದ್ದ. ಅಲ್ಲಿ ಕಾಫಿಗೆ ಸಕ್ಕರೆ ಹಾಲು ಬೆರೆಸಿಕೊಳ್ಳಲೆಂದು ಒಂದು ಮೇಜಿನ ಬಳಿ ನಿಂತಿದ್ದೆ. ಎದುರಿಗೆ ನೋಡಿದರೆ ಇಬ್ಬರು ನೂರಾರು ಮೆಣಸು ತೆನೆಯ ನೀಲವೇಣಿಯರು! "ವಾವ್ ಯೂ ಲುಕ್ ಬ್ಯೂಟಿಫುಲ್ , ಪ್ರಟಿಡ್ರೆಸ್" ಎಂದು ನನ್ನನ್ನು ನೋಡಿ ಅಲ್ಲ. ..ಅಲ್ಲ ..ನಾನುಟ್ಟ ಸೀರೆಯನ್ನು ನೋಡಿ ಉದ್ಗಾರ ತೆಗೆದಳು. ಜಗತ್ತಿನಲ್ಲಿ ಒಬ್ಬಳಿಗಾದರೂ ನಾನು ಪ್ರೆಟಿಯಾಗಿ ಕಂಡೆನಲ್ಲ?! ನಾನು ಕೂಡ 'ನಿನ್ನ ಜಡೆಗಳು ತುಂಬಾ ಚೆನ್ನಾಗಿವೆ 'ಎಂದು ಹೊಗಳಿ. "ಹೌ ಡು ಯು ಡೂ ಇಟ್" ಎಂದು ಆಶ್ಚರ್ಯ ವ್ಯಕ್ತ ಪಡಿಸುತ್ತಾ ಮಾತಿಗೆ ತೊಡಗಿದೆ. "ನಾನು ಹೆಣೆದುಕೊಳ್ಳುವುದಿಲ್ಲ. ಪಾರ್ಲರಿಗೆ ಹೋಗುತ್ತೇನೆ" "ದಿನಾ ಹೋಗ್ತೀಯ?" "ಇಲ್ಲ ಮೂರುವಾರಗಳಿಗೊಮ್ಮೆ" "ಮತ್ತೆ ತಲೆಗೆ ಸ್ನಾನ ?" "ಅದನ್ನೂ ಪಾರ್ಲರ್ ನಲ್ಲೇ ಮಾಡಿಸುತ್ತೇನೆ, ಮೂರುವಾರಗಳಿಗೊಮ್ಮೆ" "ನಿನಗೆ ಕೂದಲು ಬಿಟ್ಟುಕೊಳ್ಳಲು ಇಷ್ಟವಿಲ್ಲವಾ?" "ನೋವ್" ಅಯ್ಯೋ ಶಿವನೇ! "ಅಜ್ಜಯ್ಯನ ಅಭ್ಯಂಜನ"ವಾಗಲೀ "ಹಡಬೆ ವೆಂಕಟನ" ಎಣ್ಣೆ ಸ್ನಾವಾಗಲೀ ಪಾಪ ಇವಳಿಗೆ ಹೇಗೆ ಗೊತ್ತು? ಇವರಿಗೆ 'ತಲೆಗೆ ಎಣ್ಣೆ ಹಾಕುವ' ಪದ್ಧತಿ ಮಾತ್ರ ಇಲ್ಲವೇನೋ! ಯಾರಿಗೆ ಗೊತ್ತು? ಬಾಲ್ಯದಲ್ಲಿ ಜಡೆ ಹೆಣೆಸಿಕೊಳ್ಳಲು, ಎಣ್ಣೆ ಸ್ನಾನ ಮಾಡಿಸಿಕೊಳ್ಳಲು ಎಷ್ಟು ರಂಪ, ರಾಮಾಯಣ!.ಬಿಸಿ ಜಾಸ್ತಿ, ತಣ್ಣಗಾಯ್ತು, ಕಣ್ಣುರಿ ಎಂದು ಬಚ್ಚಲಲ್ಲಿ ತಕ ಪಕ ಕುಣಿಯುತ್ತಾ ಅಮ್ಮನ ಮೇಲೆ ಏನು ರೋಪು! ಇನ್ನು ತಲೆ ಬಾಚಿಸಿಕೊಳ್ಳುವಾಗ, ಅಮ್ಮನದೋ ನನ್ನದೋ ಮೂಡ್ ಸರಿ ಇಲ್ಲದಿದ್ದರಂತೂ ದೊಡ್ಡ ಯುದ್ಧವೇ ನಡೆದು ಹೋಗುತ್ತಿತ್ತು. ಅಲ್ಲಿ ಗುಬ್ಬಳು, ಇಲ್ಲಿ ಗುಬ್ಬಳು ಎಂದು ರಂಪಮಾಡಿ ಟೇಪು ಕಿತ್ತು, ಹೆಣದ ಜಡೆಯನ್ನು ರಪರಪ ಬಿಚ್ಚಿ , ತಲೆ ಕೆದರಿಕೊಂಡು ,‌ಕೈ ಕಾಲು ಒದರಿ ಚಂಡಿಯಂತಾಡುವಾಗ "ಶಾಲೆಗೆ ಹೊತ್ತಾಯ್ತಲ್ಲೇ, ಏನು ಗೋಳು ನಿಂದು" ಎಂದು ಅಮ್ಮ ಒರಟಾಗಿ ಎಳೆದು ಕೊಂಡು ಬೆನ್ನ ಮೇಲೆ ಗುದ್ದಿ, ಜುಂಗಿಸಿ ಎರಡು ಜಡೆ ಹೆಣೆದು "ಎಲ್ಲಿ‌, ಮುಂದೆ ತಿರುಗು, ಮುದುಕ ಗಂಡ ಸಿಕ್ತಾನಂತೇ" ಎಂದು ಗಲ್ಲ ಹಿಡಿದು ಮುಂದಲೆ ಬಾಚಿ ನನ್ನನ್ನು ಎಬ್ಬಿಸುವ ಹೊತ್ತಿಗೆ ಪಾಪ ಅಮ್ಮ ಎಷ್ಟು ಹೈರಾಣಾಗಿರಬೇಡ. ಈ ಕಪ್ಪು ಸುಂದರಿಯ ತಾಯಿಯೇನಾದರೂ ಇವಳಿಗೆ ಜಡೆ ಹಾಕಲು ಕುಳಿತರೆ ಏನು ಗತಿ? ! ಅಡುಗೇನೆ ಮಾಡ್ತಾಳೋ ಜಡೇನೇ ಹೆಣೀತಾಳೋ? ಐದಾರು ಜನ ಹೆಣ್ಣುಮಕ್ಕಳೇನಾದರೂ ಇದ್ದು ಬಿಟ್ಟರೆ? ಆ ಹೇನು ಸೀರುಗಳನ್ನು ಹೇಗೆ ಹೆಕ್ಕುತ್ತಾಳೋ ? ಪಾಪ ಅವಳನ್ನು ದೇವರೇ ಕಾಪಾಡಬೇಕು.Sept 15 ವಾಣಿಜ್ಯ ನಗರಿಯಲ್ಲಿ ಅರಳಿದ ಕಲೆ: ನಮ್ಮ ಜುಗಲ್ ಬಂದಿ (ನಾನು ಮತ್ತು ರಘುನಾಥ್ ಇಬ್ಬರೂ ಸೇರಿ ಬರೆದ ಬರಹ) "ನಮ್ಮ ದೇಶದಲ್ಲಿ ಅಂತಹ ನಗರಗಳೆಲ್ಲಿವೆ ನ್ಯೂಯಾರ್ಕ್‌ ನಂತಹವು?" ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ ಎನ್ನುವ ರಘುನಾಥ್ ಅವರ ಪಿಎಚ್. ಡಿ ವಿಷಯವನ್ನು ಕೇಳಿದ ಯು.ಆರ್ ಅನಂತಮೂರ್ತಿಯವರು ಸುಮಾರು ಇಪ್ಪತ್ತೈದು ವರುಷಗಳ ಹಿಂದೆ ಹೀಗೆ ನುಡಿದಿದ್ದರು. ಲಾಸ್ ಏಂಜಲೀಸ್ ನ ಬ್ರೆಂಟ್ ವುಡ್ ಪ್ರದೇಶದಲ್ಲಿರುವ 'ಗೆಟ್ಟಿ‌ ಸೆಂಟರ್' (ಆರ್ಟ್ ಗ್ಯಾಲರಿ) ಇರುವುದು ಸ್ಯಾಂಟಾ ಮೋನಿಕಾ ಪರ್ವತ ಮಾಲೆಗಳ ಮೇಲೆ. ಬೆಟ್ಟದ ಮೇಲೆ ನಿಂತು ಮುಸ್ಸಂಜೆಯಲ್ಲಿ ಕೆಳಗೆ ಕಾರಿನ ಪ್ರವಾಹಗಳನ್ನು ನೋಡುತ್ತಿದ್ದಾಗ ಯು.ಆರ್.ಎ ಅವರ ನೆನಪಾಯಿತು. ನಾಲ್ಕು ಸಾಲುಗಳಲ್ಲಿ ಮೈಲುಗಟ್ಟಲೆ ಕಾರುಗಳು ಒಂದರ ಹಿಂದೆ ಒಂದು‌ ಶಿಸ್ತಾಗಿ ಪ್ರವಾಹದೋಪದಿಯಲ್ಲಿ ಬರುತ್ತಿದ್ದವು. ಮೇಲಿನಿಂದ ಕಾಣುವಾಗ ಬೆಳಕಿನ ಪ್ರವಾಹಚಲಿಸುತ್ತಿರುವಂತೆ ಭಾಸವಾಗುತ್ತಿತ್ತು. ಇಲ್ಲಿ ಇಡೀ ಲಾಸ್ ಏಂಜಲೀಸ್ ನಗರದ ಪಕ್ಷಿನೋಟವೊಂದು ದೊರಕುತ್ತದೆ. ಲಾಸ್ ಏಂಜಲೀಸ್ ನಮ್ಮ ಮುಂಬಯಿಗಿಂತಲೂ ದೊಡ್ಡ ಶಹರ. ಅಮೇರಿಕಾದಲ್ಲಿರುವಂತಹ ನಗರಗಳು ನಮ್ಮ ದೇಶದಲ್ಲಿ ಇಲ್ಲದಿರಬಹುದು. ಆದರೆ ಪ್ರತಿಯೊಂದು ನಗರಕ್ಕೂ‌ಅದರದೇ ಆದ ಕಂಪನಗಳು (vibes) ಇದ್ದೇ ಇರುತ್ತದಲ್ಲವೇ? (ಅನಂತ ಮೂರ್ತಿಯವರು ಈಗ ಬದುಕಿದ್ದಿದ್ದರೆ ಖಂಡಿತಾ ಈ ಮಾತನ್ನು ಅವರಿಗೆ ತಿಳಿಸುತ್ತಿದ್ದೆ) ನಗರೀಕರಣಕ್ಕೂ, ಆಧುನಿಕತೆಗೂ ನಂಟು ಇದ್ದದ್ದೇ! ಅದಕ್ಕೆ ಪ್ರತಿಕ್ರಿಯೆಯಾಗಿ, ಪ್ರತಿಭಟನೆಯಾಗಿ, ಪೂರಕವಾಗಿ, ಪರ್ಯಾಯವಾಗಿ ಕೊನೆಗೆ ಸಾಮರಸ್ಯದ ರೂಪವಾಗಿ ಅನಾದಿಕಾಲದಿಂದಲೂ ಸಾಹಿತ್ಯ ಮತ್ತು ಕಲೆ ತನ್ನ ದಿಕ್ಕನ್ನು ಬದಲಾಯಿಸುತ್ತಾ ರೂಪಾಂತರಗೊಳ್ಳುತ್ತಲೇ ಬಂದಿದೆ. ಲಾಸ್ ಏಂಜಲೀಸ್ ನ ಆರ್ಟ್ ಗ್ಯಾಲರಿಯ ಹೊರಗೆ ನಿಂತು ಹರಿದು ಬರುತ್ತಿರುವ ಕಾರುಗಳನ್ನು ನೋಡುವಾಗ ನನಗೆ ನೆನಪಾದದ್ದು ನವ್ಯ ಸಾಹಿತ್ಯದ ಪ್ರಾತಿನಿಧಿಕವೆನ್ನಬಹುದಾದ ಕಥೆಗಳು. ಗೆಟ್ಟಿ ಆರ್ಟಗ್ಯಾಲರಿಯೊಳಗೆ ಹೊಕ್ಕಾಗ ಅಲ್ಲಿ ತೆರೆದುಕೊಂಡದ್ದೇ ಇನ್ನೊಂದು ಲೋಕ. ಎಂಟನೇ ಶತಮಾನದಿಂದ ಹಿಡಿದು ನಗರಗಳ ಹುಟ್ಟಿಗೆ ಆಧುನಿಕತೆಗೆ ಕಾರಣವಾದ ಈಗಿನ ವರೆಗಿನ ಅನೇಕ ರೀತಿಯ ಗ್ರೀಕ್ ಶಿಲ್ಪಗಳು, ಪುನರುತ್ಥಾನ ಕಾಲದ ಯೂರೋಪಿಯನ್ ಚಿತ್ರಕಲೆಗಳು, ರೇಖಾ ಚಿತ್ರಗಳು, ಹಸ್ತಪ್ರತಿಗಳು, ಮುದ್ರಣ ಯಂತ್ರದ ಆವಿಷ್ಕಾರದ ಪ್ರತೀಕವಾಗಿ ಹೊಸದಾಗಿ ಮುದ್ರಣಕ್ಕೆ ಒಳಗಾದ ಬೈಬಲ್ ಪ್ರತಿಗಳು, ಫೋಟೋಗ್ರಫಿಯ ಆರಂಭಕಾಲದಿಂದ ಇಲ್ಲಿಯವರೆಗೆ ಸಂಗ್ರಹಿಸಿದ ಜಗದ್ವಿಖ್ಯಾತ ಪೋಟೋಗಳು, ಅಲಂಕಾರಿಕ ಕಲಾರೂಪಗಳು (Decorative arts). ಕಳೆದು ಹೋದ ಕ್ಲಾಸಿಕ್ ಕಲಾಕೃತಿಗಳನ್ನು , ಪ್ರಾಚೀನ ಗ್ರಂಥಗಳನ್ನು ಮುದ್ರಿಸುವುದರ ಮೂಲಕ, ಅನುವಾದ ಮಾಡುವುದರ ಮೂಲಕ ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದ ಒಂದು ಕ್ರಾಂತಿಯ ಸ್ವರೂಪವೇ ಆ ಎರಡು ಮಹಡಿಗಳ ಬೃಹತ್ ಕೊಠಡಿಗಳಲ್ಲಿ ಚಲ್ಲವರಿದಿದ್ದವು. ಪ್ರದರ್ಶನಕ್ಕಿಟ್ಟ ಚಿತ್ರಗಳು ಮತ್ತು ಇತರ ಪ್ರತಿಕೃತಿಗಳು ಅಂದಿನ ದಿನಗಳ ನೆನಪಿನ ಘಮಲನ್ನು ಕೋಣೆಗಳ ತುಂಬಾ ಪಸರಿಸಿದ್ದವು. ಕೋಣೆಯ ಹೊರಗೆ ೨೨ನೇ ಶತಮಾನದ ಅತ್ಯಾಧುನಿಕತೆ ದೌಡಾಯಿಸುತ್ತಿತ್ತು. ಎಲ್ಲಾ ಕೋಣೆಗಳಲ್ಲೂ ಸುಸಜ್ಜಿತ ಕಾವಲುಗಾರರು. ಫ್ಲ್ಯಾಷ್ ಬರುವ ಫೋಟೋಗಳನ್ನು ತೆಗೆಯುವ ಹಾಗಿಲ್ಲ. ಎಲ್ಲ ಕಡೆ ಶಾಂತಿಯಿಂದ ಸಾಗುವ ಪ್ರೇಕ್ಷಕರು. ನಮ್ಮ ಮುಂಬಯಿನ ಜಹಾಂಗೀರ್ ಆರ್ಟ್ ಗ್ಯಾಲರಿಯ ನೆನಪು ಮರುಕಳಿಸಿತು. ಇದು ಅದರ ಕಲ್ಪನೆಗೂ ಮೀರಿದಷ್ಟು ದೊಡ್ಡದಾಗಿತ್ತು ( ೨೪ ಎಕರೆ ವಿಸ್ತೀರ್ಣ). ಚಿತ್ರಗಳನ್ನು ನೋಡಿ ಅವುಗಳ ವಿವರಣೆಗಳನ್ನು ಓದುವಷ್ಟರಲ್ಲಿ ಕಾಲುಗಳು ದಣಿದವು. ಕೇವಲ ಎರಡು ಮಹಡಿಯ ಕೋಣೆಗಳನ್ನು ನೋಡಲು ಎರಡು ಮೂರು ತಾಸು. ಹೀಗಾಗಿ ಶಿಲ್ಪಕಲೆಗೆ ಸಂಬಂಧಿಸಿದಂತಹ ಕಟ್ಟಡಕ್ಕೆ ಹೋಗಲು ಸಾಧ್ಯವಾಗಲೇ ಇಲ್ಲ. ಈ ಗ್ಯಾಲರಿಯದ್ದೇ ಆದ ವಿಶಿಷ್ಟ ಉದ್ಯಾನವೂ ಇದೆ. ಪೂರ್ತಿ ನೋಡಲು ಎರಡು ದಿನಗಳಾದರೂ ಬೇಕು. ಲಾಸ್ಏಂಜಲೀಸ್ ನ 'ಯೂನಿವರ್ಸಲ್ ಸ್ಟೂಡಿಯೋ' ( ಡಿಸ್ನಿ ವರ್ಲ್ಡ್) ಇಲ್ಲ 'ಗೆಟ್ಟಿ ಸೆಂಟರ್' (ಆರ್ಟ್ ಗ್ಯಾಲರಿ ) ಇವುಗಳಲ್ಲಿ ಒಂದನ್ನು ನೋಡುವಷ್ಟು ಕಾಲಾವಕಾಶ ಮಾತ್ರ ನಮಗಿತ್ತು. ನಾವು ಗೆಟ್ಟಿಯನ್ನೇ ಆರಿಸಿಕೊಂಡೆವು. ಗ್ಯಾಲರಿಯ ಆವರಣ ಹೊಕ್ಕ ತಕ್ಷಣ ಕಣ್ಣಿಗೆ ಬಿದ್ದುದು ಅನೇಕ ಪ್ರಾಚೀನ ಗ್ರೀಕ್ ನಗ್ನ ಹಾಗೂ ಆಧುನಿಕ‌ ಶಿಲ್ಪಗಳು. ಪ್ರತಿಯೊಂದು ಕೋಣೆಗಳಲ್ಲೂ ಮಧ್ಯಕಾಲೀನ ಯುರೋಪಿನ ಪುನರುತ್ಥಾನ ಯುಗದ ಕಲಾವಿದರ ಅನೂಹ್ಯ ಚಿತ್ರಗಳು. ಮೈಕೆಲ್ ಎಂಜಲೊ, ವ್ಯಾನ್ ಗೊ, ರೆಂಬ್ರಾಂಟ್ , ಇತ್ಯಾದಿ ಪ್ರಸಿದ್ಧ ಯುಗ ನಿರ್ಮಾಪಕ ಕಲಾವಿದರ ಚಿತ್ರಗಳು. ಬಹುತೇಕ ಕ್ರಿಸ್ತನ ಹುಟ್ಟಿದ ದಿನದಿಂದ ಹಿಡಿದು, ಅವನ ದೀಕ್ಷೆ , ಅವನನ್ನು ಎಳೆದುಕೊಂಡು ಹೋಗುತ್ತಿರುವ, ಮುಳ್ಳಿನ ಕಿರೀಟವನ್ನು ತೊಡಿಸುತ್ತಿರುವ, ಕ್ರೂಸಿಫಿಕೇಷನ್ , ಅವನ ಕಣ್ಣಿನಲ್ಲಿನ ಅಪಾರ ಕರುಣೆ, ಮೇರಿ ಮ್ಯಾಗ್ಡಲಿನ, ಅವಳ ಕೈಯಲ್ಲಿ ಮಗು, ರೋಮ್ ಸಾಮ್ರಾಜ್ಯದ ಕಾಲದಲ್ಲಿ ಅಲ್ಲಿನ ನಿರಂಕುಶ ಪ್ರಭುತ್ವದ ಅಡಿಯಲ್ಲಿ ಸಿಕ್ಕಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣು, ಕಣ್ಣೀರು ಗರೆಯುತ್ತ, ಎದಗೆ ಚೂರಿ ಹಾಕಿಕೊಂಡು ತನ್ನ ಪ್ರತಿಭಟನೆಯನ್ನು ದಾಖಲಿಸಿದ ಅಪೂರ್ವ ಭಾವಪೂರ್ಣ ಚಿತ್ರ. ಅದರ ಪರಿಣಾಮವಾಗಿ , ಹುಟ್ಟಿದ ಚಳವಳಿಯಿಂದ ತನ್ನ ಪ್ರಭುತ್ವವನ್ನು ಕಳೆದುಕೊಂಡ ಅನನ್ಯ ಕ್ಷಣಗಳು. ನಮ್ಮ ಕಂಸನನ್ನು ಹೋಲುವ ರಾಜ ಮಗು ತನ್ನನ್ನು ಕೊಲ್ಲುತ್ತದೆ ಎಂಬ ಭವಿಷ್ಯದ ವಾಣಿಯನ್ನು ಕೇಳಿ ಅವಳನ್ನು ಕೊಲ್ಲ ಹೊರಡುವನು. ಅದಕ್ಕೆ ಮೊದಲು ಡಯೋನಿಸಿಸ್ ಎನ್ನುವ ಗ್ರೀಕ್ ಪುರಾಣ ದೈವ ಮಾರುವೇಷದಿಂದ ಪ್ರವೇಶ ಮಾಡಿ ಅವಳನ್ನು ಬಸಿರುಮಾಡುತ್ತಾನೆ. ‌ ‌ಇಂತಹ ಅಪೂರ್ವ ಚಿತ್ರಗಳನ್ನು ಹೊಚ್ಚ ಹೊಸದಾಗಿ ಕಾಣುವಂತೆ ರಕ್ಷಿಸಲಾಗಿದೆ. ಇದು ಅವರ ಅಭಿರುಚಿ ಮತ್ತು ಅದನ್ನು ಶಿಸ್ತಿನಿಂದ ನಿರಂತರವಾಗಿ ಕಾಪಾಡಿಕೊಂಡು ಬರುವ ಅವರ ಆಸ್ಥೆಯನ್ನು ವ್ಯಕ್ತಪಡಿಸುತ್ತದೆ. ಹೀಗೆ ಅನೇಕ ಕಾಲಮಾನಗಳಿಗೆ ಸೇರಿದ ಶಿಲ್ಪಕಲೆಗಳು, ಯೂರೋಪಿಯನ್ ಅಲಂಕಾರಿಕ ಕಲೆಗಳು (decorative arts),ವಿಶೇಷ ವಿದ್ಯುತ್ ಬೆಳಕನ್ನು ಹೊಂದಿದ ಹಸ್ತಪ್ರತಿಗಳು,ಸುಭದ್ರ ಚೌಕಟ್ಟುಗಳುಳ್ಳ ಬೃಹತ್ ಗಾತ್ರದ ಫ್ರೆಂಚ್‌ ಅಲಂಕಾರಿಕ ಕಲೆಗಳು, ಹತ್ತೊಂಬತ್ತನೇ ಶತಮಾನದ‌ ಚಿತ್ರಕಲೆ, ರೇಖಾಚಿತ್ರ ಮತ್ತು ಛಾಯಾಚಿತ್ರಕ್ಕೆ ಸಂಬಂಧಿಸಿದ ಪ್ರದರ್ಶನಗಳು ಉತ್ತರ, ದಕ್ಷಿಣ, ಪೂರ್ವ ಪಶ್ಚಿಮ ಎಂಬ ನಾಲ್ಕು ದಿಕ್ಕುಗಳಲ್ಲಿ ಹರಡಿಕೊಂಡಿವೆ ಅನೇಕ ಕ್ಲಾಸಿಕ್ ಚಿತ್ರಕಲೆಯನ್ನು ಸಮಕಾಲೀನರು ಮರುಸೃಷ್ಟಿ ಮಾಡುವ ಸವಾಲುಗಳನ್ನೂ ಬೇಕಾದರೆ ಸ್ವೀಕರಿಸಬಹುದು. ಅದಕ್ಕಾಗಿ ಇಲ್ಲಿ ಕಲಾವಿದರಿಗೆ ಅವಕಾಶವಿದೆ. ಜೆ ಪಾಲ್ ಗೆಟ್ಟಿ (೧೮೯೨-೧೯೭೬) ಎನ್ನುವ ಒಬ್ಬ ಶ್ರೀಮಂತ ಉದ್ಯಮ ಪರಂಪರೆಗೆ ಸೇರಿದ ಕಲಾರಾಧಕ. ಇಟಾಲಿಯನ್ ಪುನರುತ್ಥಾನ , ಡಚ್ ಮತ್ತು ಫ್ಲೆಮಿಷ್ ಬ್ರೊಕ್ (Dutch and flemish baroque) ಕೃತಿಗಳಲ್ಲಿ ತೀವ್ರವಾದ ಆಸಕ್ತಿ ಯನ್ನು ಹೊಂದಿದ ಗೆಟ್ಟಿ ಆ ಪರಂಪರೆಯ ಪ್ರಖ್ಯಾತ ಕಲಾಕಾರರ ಮೂಲ ಕಲಾಕೃತಿಗಳನ್ನು ಸಂಗ್ರಹಿಸುವಲ್ಲಿ ಸು. ನಾಲ್ಕು ದಶಕಗಳ ಕಾಲ‌ ಶ್ರಮಿಸಿದ. ಇಟಾಲಿಯ ಕಲಾವಿದರುಗಳಾದ ಮಸಾಚ್ಚೊ - 1401-1428 (Masaccio), ಟಿಷನ್ -1488-1576 ( Titian), ಪರ್ಮಜ್ಯಾನೀನೋ (Parmigianino,) (1503 -1540), ಕ್ಯನುಲೆಟೊ, (Canaletto) (1697-1768) ಜರ್ಮನಿಯ ಲುಕಾಸ್ ಕನಾಖ್ (Lucas Cranach,1472-1553), ಫ್ರೆಂಚ ಕಲಾವಿದರುಗಳಾದ ನಿಕೊಲಸ್ ಪುಷಿನ್ (ಬ್ರೋಕ್ ಶೈಲಿ) (Nicholas Poussin 1594-166), ಫ್ರ್ಯಗ್ನಾರ್ ( Fragonard 1732-1806) ಮ್ಯಾನೆಟ್ (Manet,1832-183),ಎಡ್ಗರ್ ಡುಗಾ ( Edgar Degas 1834-1883) Degas, ಅಗಸ್ಟ್ ರಿನೊ (Renoir 1841-1919), ಇಂಗ್ಲೇಂಡಿನ ರೊಮ್ಯಾಂಟಿಕ್ ಕಲಾವಿದ ಟರ್ನರ್ (J.M.W. Turner 1775-1851) ಗ್ರೀಕ್ ಕಲಾವಿದ ಎಲ್ ಗ್ರ್ಯಾಕೊ El Greco (1542-1614) ಡಚ್ ಕಲಾವಿದರುಗಳಾದ ವಿನ್ಸೆಂಟ್ ವ್ಯಾನ್ ಗೊ ( Vincent VanGogh,( 1853-1890) ರೆಂಬ್ರ್ಯಾಂಟ್( 1606-69) ಹೀಗೆ ಅವನು ಆಸ್ಥೆಯಿಂದ ಒಟ್ಟು ಮಾಡಿದ ಚಿತ್ರಗಳ ಹಾಗೂ ಚಿತ್ರಕಲಾಕಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. "ಒಬ್ಬ ನಿಜವಾದ ಕಲಾಪ್ರೇಮಿಯು ಕಲಾಕೃತಿಗಳನ್ನು ಕೇವಲ ತನಗಾಗಿ ಮಾತ್ರ ಸಂಗ್ರಹಿಸುವುದಿಲ್ಲ. ತಾನು ಮಾತ್ರ ಅನುಭವಿಸಬೇಕು, ಸಂತೋಷಪಡಬೇಕು ಎಂಬ ಸ್ವಾರ್ಥಪರತೆಯಿಂದ, ಲಾಲಸೆಯಿಂದ ಅವನು ಚಿತ್ರಕಲೆಗಳನ್ನಾಗಲೀ, ಶಿಲ್ಪವನ್ನಾಗಲೀ, ಯಾವುದೇ ಪುರಾತನ ವಸ್ತುಗಳನ್ನಾಗಲೀ ಒಟ್ಟುಮಾಡುವುದಿಲ್ಲ. ಒಂದು ಕಲಾಕೃತಿಯ ಸೌಂದರ್ಯವನ್ನು ಮೆಚ್ಚುವುದರ ಜೊತೆಗೆ , ತನ್ನ ಸಂತೋಷವನ್ನು ಇತರರೊಡನೆ ಹಂಚಿಕೊಳ್ಳಲು ಕಾತುರನಾಗಿರುತ್ತಾನೆ" (—J. Paul Getty, The Joys of Collecting, 1965) ಎಂಬ ಅವನ ಮಾತುಗಳಿಗೆ ಗೆಟ್ಟಿ ಗ್ಯಾಲರಿ ಒಂದು ಜೀವಂತ ಸಾಕ್ಷಿಯಾಗಿದೆ. ನೂರಕ್ಕಿಂತಲೂ ಹೆಚ್ಚು ಮಹಾನ್ ಕಲಾಕೃತಿಗಳ ಸಮೀಕ್ಷೆಗಳು, ವಿವರಗಳು, ಬಣ್ಣ ಬಣ್ಣದ ರೋಚಕ ಚಿತ್ರಣಗಳು ಈ ಕಲಾಕೃತಿಗಳ ಐತಿಹಾಸಿಕ ಸಂಗತಿಗಳ ಕಡೆಗೆ ಗಮನ ಸೆಳೆಯುವುದಲ್ಲದೇ ಅವುಗಳ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮಹತ್ವವನ್ನೂ ಸಾರುತ್ತವೆ. "ಪಾಶ್ಚಾತ್ಯ ಕಲೆಯ ಪುರಾತನ ಲೋಕಕ್ಕೆ ಇದೊಂದು ಅಭೂತಪೂರ್ವ ಯಾತ್ರೆ ಇದ್ದಂತೆ" ಎಂದು ಕಲಾಪ್ರೇಮಿಗಳು ಬಣ್ಣಿಸುತ್ತಾರೆ. ಮನುಷ್ಯ ಸಮಾಜವನ್ನು ಸುಸಂಸ್ಕೃತಗೊಳಿಸುವಲ್ಲಿ, ನಾಗರಿಕವನ್ನಾಗಿ ಮಾಡುವಲ್ಲಿ ಕಲೆಯ ಪ್ರಭಾವ ಅನನ್ಯವಾದದ್ದು ಎಂದು ನಂಬಿದವನು ಗೆಟ್ಟಿ. ಅವನ ಅಪೂರ್ವ ಕಲಾಕೃತಿಗಳ ಸಂಗ್ರಹಗಳೇ ಲಾಸ್ ಏಂಜಲೀಸ್ ನ ಬ್ರೆಂಟ್ ವುಡ್ ನಲ್ಲಿರುವ 'ಗೆಟ್ಟಿ ಸೆಂಟರ್' ಎಂಬ ಕಲಾಕೇಂದ್ರಕ್ಕೆ ನಾಂದಿ ಹಾಡಿದವು. ಇದು ಸಾರ್ವಜನಿಕರಿಗೆ ತೆರೆದದ್ದು ೧೯೯೭ ರಲ್ಲಿ. ಪ್ರತಿ ವರ್ಷ ೧.೮ ಬಿಲಿಯ ಜನರು ಇಲ್ಲಿಗೆ ಭೇಟಿ ನೀಡುತ್ತಾರೆಂದು ವರದಿಯಾಗಿದೆ. ಮತ್ತು ಮಾಲಿಬು ಎಂಬ ಕಣಿವೆ ಪ್ರದೇಶದಲ್ಲಿರುವ 'ಗೆಟ್ಟಿ ವಿಲ್ಲಾ' ಪ್ರಾಚೀನ ಗ್ರೀಕ್, ರೋಮ್ ಕಲೆಗಳನ್ನು ಅಭ್ಯಾಸ ಮಾಡುವ ಶಿಕ್ಷಣ ಸಂಸ್ಥೆ ಹಾಗೂ ಸಂಶೋಧನ ಕೇಂದ್ರವೂ ಆಗಿದೆ. ಬೆಟ್ಟದ ಮೇಲಿರುವ ಗ್ಯಾಲರಿಗೆ ಹೋಗಿ ಬರಲು ಟ್ರ್ಯಾಮ್ ವ್ಯವಸ್ಥೆ ಇದೆ. ಒಂದರ ಹಿಂದೆ ಇನ್ನೊಂದು ಬರುತ್ತಲೇ ಇರುತ್ತದೆ. ಗಾಡಿಗಳನ್ನು ಪಾರ್ಕ್ ಮಾಡಲು ಹಣ ಕೊಟ್ಟರೆ ಸಾಕು ( ೨೦ ಡಾಲರು, ಸಂಜೆ ಐದೂವರೆಯ ಮೇಲೆ ಹತ್ತು ಡಾಲರ್) ಟ್ರ್ಯಾಮ್ ನಲ್ಲಿ ಸಂಚರಿಸಲು ಮತ್ತು ಗ್ಯಾಲರಿಯ ಒಳಗೆ ಹೋಗಲು ಬೇರೆ ಟಿಕೆಟ್ಟನ್ನು ಖರೀದಿಸುವ ಅಗತ್ಯವಿಲ್ಲ. ಆರ್ಟ್ ಗ್ಯಾಲರಿಯಲ್ಲಿ ತುಂಬಿ ತುಳುಕುವ ಕಲಾಪ್ರೇಮಿಗಳು. ಸಣ್ಣ ಸಣ್ಣ ಮಕ್ಕಳ ಜತೆಗೆ. ನಡೆಯಲಾರದ ಮಕ್ಕಳ ಬೆನ್ನು ಮೇಲೆ ಹೊತ್ತ ಅಪ್ಪಂದಿರು ನಡೆಯುತ್ತಿದ್ದ ದೃಶ್ಯ ಅಚ್ಚರಿ ಹುಟ್ಟಿಸುವಂತಿತ್ತು. ಎಲ್ಲ ನೋಡಿಕೊಂಡು ಕೊಂಡು ಕೆಳಗೆ ಬಂದರೆ ಅವುಗಳಿಗೆ ಸಂಬಂಧಿಸಿದ ಕಲಾವಿದರ ಅಂಗಡಿ. ಅವರ ಕುರಿತ ಪುಸ್ತಕಗಳು. ಅವುಗಳನ್ನು ಕಣ್ತುಂಬಿಕೊಂಡು ಮತ್ತೆ ಟ್ರ್ಯಾಮ್ ನಲ್ಲಿ ಮರಳಿ ಹೊರಟೆವು. ನಮ್ಮ ಕಳಿಸಿದವಳು ಶಾಮಲೆಯಾದರೆ ಸ್ವಾಗತಿಸಿದವಳು ಶ್ವೇತ ಸುಂದರಿ. ಅಲ್ಲಿಂದ ಮರಳಿದಾಗ ರಾತ್ರಿಯಾಗಿತ್ತು. ಕೆಲವು ಚಿತ್ರಗ Sept 14 /22 ಲಾಸ್ ವೇಗಾಸ್ ನ‌ ಬಟ್ಟೆ ಕಳಚುವ ಹುಡುಗಿಯರೂ ಮತ್ತು ನಾನು...... "ಅಮ್ಮಾ ಅದು ಮರ್ಯಾದಸ್ತರು ಹೋಗುವ ಜಾಗ ಅಲ್ಲ , ಬೇಡ" ಗ್ರ್ಯಾಂಡ್ ಕ್ಯಾನನ್ ಮುಗಿಸಿ ಡೆಥ್ ವ್ಯಾಲಿಗೆ ಹೋಗುವ ದಾರಿಯಲ್ಲಿ ನೆವಾಡಾ ರಾಜ್ಯಕ್ಕೆ ಸೇರಿದ 'ಲಾಸ್ ವೇಗಾಸ್' ನಗರ-ಖಳರು ಖೂಳರೇ ಸೇರಿ ಕಟ್ಟಿದ ನಗರ. ಜೂಜಿಗೆ ಈ ನಗರದಲ್ಲಿ ಹಾಗೂ ನ್ಯೂಜರ್ಸಿಯ ಯಾವುದೋ ಒಂದು ನಗರದಲ್ಲಿ ಮಾತ್ರ ಕಾನೂನು ಪರವಾನಗಿ ಇದೆಯಂತೆ. ಕಪ್ಪು ಹಣದ ವಹಿವಾಟಿನ ನಗರ. "ಅದರ ಒಂದು ಬೀದಿ ತೋರಿಸಿ ಬಿಡು ಸಾಕು ಹೇಗೂ ಅದರ ಮೇಲೆಯೇ ಹೋಗುತ್ತಿದ್ದೇವಲ್ಲ? ನಾವೇನು ಅಲ್ಲಿ ಕಸಿನೋ ಗೆ ಹೋಗಬೇಕಾ? " ಮಗನಿಗೆ ದುಂಬಾಲು ಬಿದ್ದೆ. ಮುಂಬಯಿಯಲ್ಲಿ ಕಾಮಾಠಿಪುರ ನೋಡಬೇಕೆನ್ನುವ ನನ್ನ ಎಂದಿನ ಕುತೂಹಲ ಇನ್ನೂ ತೀರಿಲ್ಲ. ಅಲ್ಲಾದರೆ ಪೋಲಿಸ್ ಪರವಾನಗಿ ಎಂದೆಲ್ಲಾ ನೂರೆಂಟು ನಿಯಮಗಳಿವೆ. ಇಲ್ಲಾದರೆ ಅದು ಯಾವುದೂ ಇಲ್ಲ. ಒಮ್ಮೆಯಾದರೂ ನೋಡಬೇಕು ಎಂದೆ "ನನ್ನ ಫ್ರೆಂಡ್ಸ್ ಗೆ ಏನಾದರೂ ಗೊತ್ತಾದರೆ ನಿಮ್ಮ ತಂದೆ ತಾಯಿಯನ್ನ ಅಂಥ ಜಾಗಕ್ಕೆ ಕರೆದುಕೊಂಡು ಹೋಗಿದ್ಯಾ? ಅಂತ ನನ್ನ ಉಗೀತಾರೆ ಅಷ್ಟೇ " ಎಂದು ಹೇಳಿದರೂ, ಮಗ ಗಾಡಿಯನ್ನು ಹೆದ್ದಾರಿಯಿಂದ ಲಾಸ ವೇಗಾಸ್ ಗೆ ಹೋಗುವ ದಾರಿಗೆ ತಿರುಗಿಸಿದ. ಪಲಾಝೋ ಕಸಿನೋ ರಿಸಾರ್ಟ್ ಎನ್ನವ ಹೊಟೆಲ್ಲಿನ ನೆಲಮಾಳಿಗೆಯಲ್ಲಿ ಕಾರನ್ನು ನಿಲ್ಲಿಸಿದೆವು. ಅದೊಂದು ದೇವಲೋಕದ ಅರಮನೆಯಂತಿತ್ತು. 'ಲಾಸ್ವೇಗಾಸ್ ಸ್ಟ್ರಿಪ್ ಇನ್ ಪ್ಯಾರಡೈಸ್ ' ಎನ್ನುವುದು ಲಾಸ್ವೇಗಾಸ್ ನ ಹೃದಯಭಾಗದಲ್ಲಿರುವ ಒಂದು ರಸ್ತೆ. ಅರಮನೆಯಂತಹ ಹೊಟೇಲುಗಳು. ಅದರೊಳಗೆ ಜೂಜಿನ ಅಡ್ಡಾಗಳ‌ ಬಹು ಮಹಡಿಗಳು. ಜಿಗಿ ಜಿಗಿ ತೂಗು ದೀಪಗಳು. ಬೆಲ್ಲಾಗಿಯೋ ಎನ್ನುವ ವಿಶಿಷ್ಟವಾಗಿ ಕೊರಿಯೋಗ್ರಫಿ ಮಾಡಿದ ಕಾರಂಜಿ, ಫ್ರಾನ್ಸ್ ನ ಐಫಿಲ್ ಟವರ್ ಮತ್ತು ನ್ಯೂಯಾರ್ಕ್‌ ನ ಲಿಬರ್ಟಿ ಸ್ಟ್ಯಾಚುವನ್ನು ಹೋಲುವ ಕಟ್ಟಡಗಳು, ರೋಮನ್ನರ ವಾಸ್ತುವಿನಿಂದ ಕಂಗೊಳಿಸುವ ಕಸಿನೊಗಳು. ಪ್ಯಾರಿಸ್ ನ ಹೊಟೇಲ್ ಗಳು ಮುಂತಾದವು ಕತ್ತೆತ್ತಿ ನೋಡಬೇಕಾದ ಗಗನ ಚುಂಬಿ ಕಟ್ಟಡಗಳು. 6852 ಕೋಣೆಗಳಿರುವ ಎಂ.ಜಿ.ಎಂ.ಗ್ರ್ಯಾಂಡ್ ಎನ್ನುವ ಹೋಟೆಲ್ ಮತ್ತು ಕಸಿನೋ ಪ್ರಪಂಚದಲ್ಲೇ ಏಕಮಾತ್ರ ದೊಡ್ಡ ಹೋಟೆಲ್ ಎಂದು ಹೆಸರಾಗಿದೆಯಂತೆ. ಒಬ್ಬಳು ಕುಡಿದು ತೂರಾಡುತ್ತಾ ಬರುತ್ತಿದ್ದಳು. ಎದೆಯ ಮೇಲಿದ್ದ ತುಂಡು ಪಟ್ಟಿಯೂ ಜಾರಿ ಬೀಳುತ್ತಿತ್ತು. ಪಕ್ಕದಲ್ಲಿದ್ದವ ಗಂಡನಿರ ಬೇಕು, ಅವಳನ್ನು ಹಿಡಿದುಕೊಂಡು ಬರುತ್ತಿದ್ದ. ಇನ್ನೊಂದೆಡೆ ಭಿಕ್ಷುಕನಂತೆ ಕಾಣುತ್ತಿದ್ದ ಒಬ್ಬ ಯಾರನ್ನೋ ಎತ್ತರದ ಧ್ವನಿಯಲ್ಲಿ ಜೋರಾಗಿ ಬೈಯುತ್ತಿದ್ದ. ದಾರಿಯ ಬದಿಯಲ್ಲಿ ಮತ್ತೊಬ್ಬ ಭಿಕ್ಷುಕ ಕುಳಿತಿದ್ದ. ಅವನ ಲೋಟದೊಳಗೆ ನನ್ನ ಬಳಿ ಇದ್ದ ಐವತ್ತು ಸೆಂಟ್ಸ್ ಹಾಕಿದೆ. ಈ ರಸ್ತೆಯಲ್ಲಿ ಓಡಾಡುವ ಬಸ್ಸಿಗೆ 'ಡ್ಯೂಷ್ ' ( Deuce) ಎನ್ನುತ್ತಾರೆ. ಡ್ಯೂಷ್ ಪದಕ್ಕೆ ಡಬ್ಬಲ್ ಡೆಕ್ಕರ್ ಎಂದಲ್ಲದೆ ಆಡುಮಾತಿನಲ್ಲಿ ವಾಂತಿ ಎನ್ನುವ ಅರ್ಥವಿದೆಯಂತೆ. ಇಲ್ಲಿ ಜನ ಕಂಠ ಮಟ್ಟ ಕುಡಿದು ವಾಂತಿಮಾಡಿಕೊಳ್ಳುವುದೇ ಹೆಚ್ಚಂತೆ. ಅಲ್ಲದೇ ಈ ಜಾಗ ಸಭ್ಯ ಜನರಿಗೆ ವಾಂತಿ ಬರಿಸುವಂತಹದ್ದೂ ಆಗಬಹುದು. ದಾರಿಯುದ್ದಕ್ಕೂ "ಬನ್ನಿ ಬನ್ನಿ ಅಷ್ಟು ಗೆಲ್ಲಿ ಇಷ್ಟು ಗೆಲ್ಲಿ" ಕೂಗುತ್ತಲೇ ಇದ್ದರು. ಮೆನೋಪಾಸ್ ಮಹಿಳೆಯರ ರಂಜನೆಗೆಂದೇ ಇರುವ 'ಸಂಜೆ ಕಾರ್ಯಕ್ರಮ' ಎಂದು ಇನ್ನೊಂದು ಕಡೆ ಫಲಕವೊಂದು ತೂಗುತ್ತಿತ್ತು. ಬಾರುಗಳು, ಹಾಡು, ಕುಣಿತಗಳ ತರಹಾವರಿ ಝಗಮಗ ಜಿಗಿ ಜಿಗಿ ಹೊಳೆಯುವ ಮಾಯಾಲೋಕ! ಕೆಂಪು ಬಣ್ಣದ ಪುಕ್ಕಗಳ ಕಿರೀಟ ಮತ್ತು ಅವುಗಳದೇ ತುಂಡು ಉಡುಗೆ ತೊಟ್ಟ ಇಬ್ಬರು ಸುಂದರಿಯರು ಫುಟ್ ಪಾತಿನ ಮೇಲೆ ನಮ್ಮೆದುರಿಗೆ ಹಾದು ಹೋದರು. ನಾನೋ ರೇಶ್ಮೆ ಸೀರೆ ಉಟ್ಟುಕೊಂಡು ಅಲ್ಲಿ ಅಡ್ಡಾಡುತ್ತಿದ್ದೆ. ನನ್ನನ್ನು ನೋಡಿ 'ಹಾಯ್' ಎಂದು ಏನೋ ಕೇಳಿದರು. ಅದಕ್ಕೆ ನಾನು 'ಇಂಡಿಯಾ' ಎಂದು ಕೈ ಬೀಸಿದೆ. "ನಿನ್ನದು ಒಂಥರಾ weird ಡ್ರೆಸ್ಸು , ಅವರದ್ದು ಇನ್ನೊಂದು‌ ತರಹದ weird ಡ್ರೆಸ್! ಒಬ್ಬರಿಗೆ ಇನ್ನೊಬ್ಬರದು ಆಶ್ಚರ್ಯ!" ಎಂದು ಮಗ ನಗೆಯಾಡಿದ. ಆ ಹುಡುಗಿಯರನ್ನು ನೋಡಿದ್ದೇ ಅನಂತಮೂರ್ತಿಯವರ 'ಕ್ಲಿಪ್ ಜಾಯಿಂಟ್ ' ಕಥೆ ನೆನಪಾಯಿತು. ಆ ಹುಡುಗಿಯರು ಸ್ಟ್ರಿಪ್ ಗರ್ಲ್ಸ್ ಎಂದು ಮಗ ಹೇಳಿದ. ಇನ್ನೂ ಸ್ವಲ್ಪ ಮುಂದೆ ಹೋದಾಗ ಬಿಳಿಯ ಪುಕ್ಕದ ಇಬ್ಬರು ಸುಂದರಿಯರು ಎದುರಾದರು. ಹಾಯ್ ಎಂದರು. ನಾನು ಒಂದು ಕ್ಷಣ ನಿಂತೆ ಅವರೂ ನಿಂತರು. ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳಬಹುದೇ? ಕೇಳಿದೆ. "ವಾವ್.. ಯಾ" ಎನ್ನುತ್ತ ಲಗುಬಗೆಯಿಂದ ಫೋಟೋಗೆ ನಿಂತರು. We are spouses ಎಂದು ಹೇಳುತ್ತಾ ನನ್ನನ್ನು ಅವರಿಬ್ಬರ ಮಧ್ಯೆ‌ ನಿಲ್ಲಿಸಿಕೊಂಡರು. ಕೇವಲ ಬ್ರಾ ತೊಟ್ಟು ಓಡಾಡುವ ಹುಡುಗಿಯರನ್ನು ನಾನು ಇಲ್ಲಿ ನೋಡಿದ್ದೇನೆ. ಆದರೆ ಈ ಸುಂದರಿಯರು ಅದನ್ನೂ ತೊಟ್ಟಿರಲಿಲ್ಲ. ಹತ್ತಿರದಿಂದ ಗಮನಿಸಿದಾಗ ಅವಳ ಮೊಲೆಯ ತೊಟ್ಟಿಗೆ ಒಂದು ಫಳ ಫಳ ಹೊಳೆಯುವ ದೊಡ್ಡ ಪ್ಲ್ಯಾಸ್ಟಿಕ್ ಹೂವನ್ನು ಕ್ಲಿಪ್ಪಿನ ಸಹಾಯದಿಂದ ಸಿಕ್ಕಿಸಿಕೊಂಡಿದ್ದಳು. ಅದನ್ನು ಬಹಳ ಕಲಾತ್ಮಕವಾಗಿ ತೊಟ್ಟಿದ್ದಳು. ಎಂಥವರನ್ನೂ ಅಧೀರಗೊಳಿಸುವ ಸುಂದರಿಯರು. ಅವರ ಮಧ್ಯೆ ದೃಷ್ಟಿಬೊಂಬೆಯಂತೆ ನಾನು ನಿಂತಿದ್ದೆ. Call your spouse ಎಂದಳು. ಇಲ್ಲ ಅವರು ಬರುವುದಿಲ್ಲ ಕೇವಲ ಫೋಟೋ‌ ತೆಗೆಯುತ್ತಾರೆ ಎಂದೆ. ಓಕ್ಹೇ ಎಂದರು. ಒಂದು ಫೋಟೋ ತೆಗೆದುಕೊಂಡ ಮೇಲೆ "ಒಂದು ಕಾಲನ್ನು ಅರ್ಧ ಮಡಚಿ ಎತ್ತಿ , ಓರೆಯಾಗಿ ನಿಂತುಕೋ ಇನ್ನೊಂದು ಫೋಟೋ ತೆಗೆದುಕೊಳ್ಳೋಣ" ಎಂದು ನನಗೆ ಅದರಲ್ಲೊಬ್ಬಳು ಆದೇಶಿಸಿದಳು. "ಕ್ಷಮಿಸು, ನಾನು ಹಾಗೆಲ್ಲಾ ಮಾಡುವುದಿಲ್ಲ" ಎಂದೆ. ಅದು ಸೆಕ್ಸಿ ಪೋಸ್ ಎಂದು ನನಗೆ ಗೊತ್ತಿತ್ತು. (ಮೊದಲೇ ಮಂಡಿ ನೋವು ಬೇರೆ! ಬಿದ್ದು ಗಿದ್ದು ಮೂಳೆ ಮುರಿದ್ರೆ ದೇವರೇ ಗತಿ. ಈ‌ ಮುದುಕಿಗೇನು ಕೇಡು!) "ನೀವು ಸ್ಟ್ರಿಪ್ ಹುಡುಗಿಯರಾ?" ಕೇಳಿದೆ. ಹೌದು ನಾವು ದುಡ್ಡಿಗಾಗಿ ಮಾಡುತ್ತೀವಿ. ಬರ್ತೀಯಾ ? ನಿನ್ನ ಗಂಡನನ್ನೂ ಕರೆದುಕೊಂಡು ಬಾ ಎಂದಳು. ನಾವು ಮುದುಕರೆಂದು ಗೊತ್ತಿದ್ದರೂ ಕರೆಯುತ್ತಿದ್ದಳು. ಮೆನೋಪಾಸ್ ಹೆಂಗಸರಿಗೆಂದೇ ಪ್ರತ್ಯೇಕ ಸಂಜೆ ಕಾರ್ಯಕ್ರಮಗಳಿವೆ ಎಂದರೆ. ಇಲ್ಲಿ ಮುದುಕ ತದುಕ ಪದಕ್ಕೆ ಅರ್ಥವಿಲ್ಲವೇನೋ. "ನೀನು ನಿನ್ನ ಚರ್ಮವನ್ನು‌ ಕಳಚಿ ಆತ್ಮವನ್ನು ತೋರಿಸುವುದಾದರೆ ನಾನು ಬರಲು ಸಿದ್ಧಳಿದ್ದೇನೆ" ಎಂದೆ. We are doing it for money ಎಂದು ಏನೇನೋ ಹೇಳಿದಳು. ನನಗೆ ಅದಾವುದೂ ಅರ್ಥವಾಗಲಿಲ್ಲ. ನನ್ನ ಮಾತು ಅವಳಿಗೆ ಅರ್ಥವಾಗಲಿಲ್ಲ. ಅಸಮಧಾನಗೊಂಡು ಅವರಿಬ್ಬರೂ ಹೊರಟು ಹೋದರು. ಇಲ್ಲಿ ಮನರಂಜನೆಗಾಗಿ ಹೆಣ್ಣುಗಳು ಮಾತ್ರವಲ್ಲ, ಹೆಣ್ಣುಗಳಿಗಾಗಿ ಗಂಡು ಮನರಂಜಕರೂ ಇದ್ದಾರೆ. ಡ್ಯೂಷ್ ಬಸ್ಸಿನ ಇಕ್ಕೆಲಗಳಲ್ಲಿ ಇಂತಹ ಹೆಣ್ಣುಗಂಡುಗಳ ಜಾಹೀರಾತಿನ ದೊಡ್ಡ ಫಲಕಗಳು ರಾರಾಜಿಸುತ್ತವೆ. ಮಗ ಅಪಾಯದ ಸುಳಿವರಿತು ಎಲ್ಲೋ ದೂರದಲ್ಲಿ ಕಾಯುತ್ತಿದ್ದ. "ಅವಳು ದುಡ್ಡಿಗೆ ಮಾಡ್ತಾಳೆ. ಪಾಪ, ಅವಳ ಹತ್ರ ಹೋಗಿ ನೀನು ಸ್ಪಿರಿಚುಯಾಲಿಟಿ ಮಾತಾಡಿದ್ದೀಯ? ಅವಳ ವಯಸ್ಸೆಷ್ಟು? ಮಗ ಬೈದ. "ಏನಮ್ಮಾ ಶಾಸ್ತ್ರಿಗಳ ಮಗಳಾಗಿ..." ಪಕ್ಕದಲ್ಲಿ ಇವನು ತಿವಿದ. ಹಾಲಿವುಡ್ ಸೇರುವ ಆಸೆಯಿಂದ ತುಂಬಾ ಹುಡುಗಿಯರು ಇಲ್ಲಿಗೆ ಬಂದು ವಿಫಲರಾಗಿ ಸ್ಟ್ರಿಪ್ ಗರ್ಲ್ ದಂಧೆಗೆ, ವೇಶ್ಯಾವಾಟಿಕೆಗೆ ಇಳಿಯುತ್ತಾರಂತೆ. ನಮ್ಮ ಬಾಲಿವುಡ್ ಕಥೆಯೇ ಇಲ್ಲಿಯೂ! ಒಲ್ಲದ ಗಂಡನನ್ನು ಕಟ್ಟಿಕೊಂಡ ಗರತಿ ಕೇವಲ ಆರ್ಥಿಕ ಸುರಕ್ಷೆಗಾಗಿ ಅವನ ಜೊತೆಗಿರುತ್ತಾಳೆ. ಅದೇ ಆರ್ಥಿಕ ಕಾರಣಗಳಿಗಾಗಿ ಒಬ್ಬ ವಾರಾಂಗನೆ ಪುರುಷನ ಸಹವಾಸ ಮಾಡುತ್ತಾಳೆ. ಇಬ್ಬರ ಸಹವಾಸದಲ್ಲೂ ಐಡಿಯಾಲಜಿಯ ದೃಷ್ಟಿಯಿಂದ ಅಂತಹ ವ್ಯತ್ಯಾಸವೇನಿಲ್ಲ. ಲಾಸ್ ವೇಗಾಸ್ ನಿಂದ ಮಗ ಕಾರನ್ನು ಡೆಥ್ ವ್ಯಾಲಿಯ ದಾರಿಯ ಕಡೆಗೆ ತಿರುಗಿಸುತ್ತಾ" ಅಮ್ಮಾ ತುಂಬಾ disgusting ಅನ್ನಿಸ್ತಾ ಇದೆಯಾ?" ಕೇಳಿದ. "ಇಲ್ಲಪ್ಪ ಇದೂ ಒಂದು ಲೋಕ. ಕೆಟ್ಟದ್ದೋ ಒಳ್ಳೆಯದೋ ಗೊತ್ತಿಲ್ಲ. ಅದು ಇದೆ ಅಷ್ಟೇ" ಎಂದೆ. ಆದರೆ ಇಲ್ಲಿ ಕಳ್ಳತನ, ಜೂಜು, ಬೆತ್ತಲೆ ನೃತ್ಯ, ‌ವೇಶ್ಯಾವಾಟಿಕೆ, ಕಪ್ಪುಹಣ ಸಂಗ್ರಹ ಎಲ್ಲವೂ ರಾಜಾರೋಷವಾಗಿ ನಡೆಯುತ್ತವೆ. ಎಲ್ಲವೂ ಅಧಿಕೃತ (ವೇಶ್ಯಾವಾಟಿಕೆ ಹೊರತಾಗಿ) ಮುಚ್ಚು ಮರೆಯಿಲ್ಲ. ಇದು ಕದ್ದು ಮುಚ್ಚಿ ಮಾಡುವಷ್ಟು ಅಪಾಯಕಾರಿಯಲ್ಲ. ಇಲ್ಲಿ ಬರುವವರಿಗಾಗಲೀ ಇದನ್ನು‌ ನಡೆಸುವವರಿಗಾಗಲೀ ಪಾಪ ಪ್ರಜ್ಞೆ ಕಾಡುವುದಿಲ್ಲ. ದುರಂತವೆಂದರೆ ಕದ್ದು‌ಮುಚ್ಚಿ ಮಾಡುವ ಮಹಾಮಹಿಮರಿಗೂ ಪಾಪಪ್ರಜ್ಞೆ ಕಾಡುವುದಿಲ್ಲವಲ್ಲ? ಹೊಟ್ಟೆಪಾಡಿಗೆ ಧಂಧೆಗೆ ಇಳಿದ ಆ ಸುಂದರ ಹೆಣ್ಣುಮಕ್ಕಳಿಗೆ ಅಧ್ಯಾತ್ಮ ಬೋಧನೆ ಮಾಡಿದ್ದು ಪಾಪ ಎಂದು ನನಗೀಗ ಎನಿಸುತ್ತಿದೆ. ಯಾವ ಬೋಧವೂ ಒಂದು ದರ್ಶನವೇ ಅಲ್ಲವೇ? Sept 10/22 ಡೆಥ್ ವ್ಯಾಲಿಯಲ್ಲಿ ಡಿವೈನ್ ಕಾಮಿಡಿ: ಅನಂತಕಾಲದಿಂದ 'ಕಾಲ' ನು ತಪಸ್ಸು ಮಾಡುತ್ತಾ, ಕಾಲಕ್ಕೆ ಸಡ್ಡು ಹೊಡೆಯುತ್ತಾ ನಿಂತ ಪರಿಯನ್ನು ನೋಡಲು 'ಡೆಥ್ ವ್ಯಾಲಿ"ಗೆ ಬರಬೇಕು. ನಾವು ಮನುಷ್ಯರು ಎಂಬುದನ್ನು ನೆನಪಿಸುವ ಜಾಗಗಳಿವು. ಇವು, ಮನುಷ್ಯ ತಾನು ಬೇರೆ ಎಂಬುದಕ್ಕಿಂತ ಅಖಂಡದ ಒಂದು ಭಾಗ ಎಂಬುದರ ಅರಿವು ಮೂಡಿಸುತ್ತವೆ. ನಮ್ಮನ್ನೇ ನಮಗೆ ಪರಿಚಯಿಸುವ ಅನುಭಾವಿಕ ತಾಣಗಳಿವು. ಪ್ರಕೃತಿಗಿಂತ ದೊಡ್ಡ ಗುರು ಬೇರಿಲ್ಲ. ಡೆಥ್ ವ್ಯಾಲಿ! ಇದನ್ನು ಬಹಳ ಜನ ಕೇಳಿರಲಾರರು. 'ಗ್ಯಾಂಡ್ ಕ್ಯಾನ್ಯನ್' ಅಷ್ಟು ಪ್ರಸಿದ್ಧವಲ್ಲ ಇದು. ಅಮೇರಿಕಾದ ನೆವಾಡಾ ರಾಜ್ಯದಿಂದ ಹೊರಟು ಕ್ಯಾಲಿಫೋರ್ನಿಯಾ ರಾಜ್ಯಕ್ಕೆ ಕಾಲಿಡುವ ಪ್ರಾರಂಭದಲ್ಲೇ ಈ ಡೆಥ್ ವ್ಯಾಲಿ ಇದೆ. ಸುಮಾರು ೧೭೦೦ ಮಿಲಿಯ ವರುಷಗಳ ಹಿಂದೆ, ರೂಪು ಗೊಂಡಿರಬಹುದಾದ ಗುಡ್ಡಗಾಡು, ಮರಳು ದಿಬ್ಬಗಳ ಈ ಬಂಜರು ಪ್ರದೇಶ ಕಾಲಾಂತರದಲ್ಲಿ ಅನೇಕ ರೂಪಾಂತರಗಳಿಗೆ ಒಳಗಾಗುತ್ತಾ ಬಂದಿದೆ. ಬೆಟ್ಟಗಳು ಜರಿಯುವ 'ನಿಗೂಢ ಮನುಷ್ಯರ' ಕತೆಗಳೂ ಇಲ್ಲಿವೆ. ಬೇಸಿಗೆ ಕಾಲದಲ್ಲಿ ಜಗತ್ತಿನಲ್ಲೇ ಹೆಚ್ಚು ಉಷ್ಣಾಂಶವನ್ನು ಹೊಂದಿರುತ್ತದೆ . ಇದರ ವಿಸ್ತೀರ್ಣ ೩,೩೭೩,೦೬೩ ಎಕರೆ. ೫ ರಿಂದ ೧೫ ಮೈಲು ಉದ್ದ ಮತ್ತು ೧೪೦ ಮೈಲಿ ಅಗಲ. ಮೊತ್ತಮೊದಲಿಗೆ ಡೆಥ್ ವ್ಯಾಲಿಯ ಅನ್ವೇಷಣೆ ಮಾಡುತ್ತಾ ಸಾಗಿದ ಒಂದು ಜನರ ಗುಂಪು ನಡುವೆಯೇ ಕಾಣೆಯಾಯಿತಂತೆ. ಅದೇ ಅವರ ಮಸಣದ ಗುಂಡಿಯೂ ಆಗಿರಬಹುದು ಎಂದು ಅನುಮಾನ ಪಟ್ಟ ಜನ ಅದಕ್ಕೆ 'ಡೆಥ್ ವ್ಯಾಲಿ' ಎಂದು ಪರಿಹಾಸದ ಹೆಸರಿಟ್ಟರು. ಭೂಮಿತಾಯಿ ಸೀರೆಯನ್ನು ಬದಲಾಯಿಸುವಾಗ, ಉಟ್ಟ ಸೀರೆಯನ್ನು ನಿರ್ಲಕ್ಷ್ಯದಿಂದ ಎಸೆದ ಸಾವಿರ ಲಕ್ಷಸೀರೆಗಳ ಗುಡ್ಡೆಗಳ ರಾಶಿ ರಾಶಿ! ಹಸಿರು, ನೀಲಿ, ಕೆಂಪು ಮಿಶ್ರಿತ ವಿಭಿನ್ನ ಬಣ್ಣದ ಪರ್ವತಗಳು! ಯಾವುದನ್ನು ಹಿಡಿಯಲಿ? ಯಾವುದನ್ನು ಬಿಡಲಿ? ಒಂದನ್ನು ಹಿಡಿಯ ಹೋದರೆ ಮತ್ತೊಂದು ಮಗದೊಂದು ಅವಿತು ಕಂಡು ಕಾಣದೇ ಆಟವಾಡಿಸುತ್ತಾ ಓಡುತ್ತಿದ್ದವು ಬೆಟ್ಟ ಬಂಡೆಯ ಸಾಲುಗಳು. ಇಲ್ಲಿನ ಒಂದು ವೀಕ್ಷಣಾ ಭಾಗದ ಹೆಸರೇ 'ಆರ್ಟಿಸ್ಟ್ ಪ್ಯಾಲೆಟ್ ( artist palatte)' ಚಿತ್ರಕಲಾಕಾರನ ವಿವಿಧ ಬಣ್ಣಗಳಿರುವ ತಟ್ಟೆ. ಕಲಾಕಾರರ ಕಣ್ಣುಗಳಿಗೆ ಮಾತ್ರ ಈ‌ ಬಣ್ಣಗಳು ಕಾಣುತ್ತವೆ. ಗಾಢ ಕಂದು ಬಣ್ಣ,‌ತಿಳಿ ಹಸಿರು, ಚಿನ್ನದ ಹಳದಿ, ಅಪ್ಪಟ ಬಿಳಿ, ಗಾಢ ಕಪ್ಪು, ನೇರಳೆ, ಕೆನ್ನೀಲಿ ಬಣ್ಣ ( purple). ಹೀಗೆ ಬಗೆ ಬಗೆಯ ಒಡಲು, ಅಂಚು, ಸೆರಗಿನ ವೈಭವ! ಇಲ್ಲಿರುವ ಖನಿಜ ಸಂಪತ್ತು ಮತ್ತು ಲಾವಾರಸದ ಬೂದಿ ಈ ಬಣ್ಣ ವೈವಿಧ್ಯಕ್ಕೆ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಚಿನ್ನ, ತಾಮ್ರ, ಬೆಳ್ಳಿ, ಸತು, ತವರ, ಟಂಗ್ ಸ್ಟನ್ ಮುಂತಾದ ಖನಿಜಗಳ ಗಣಿಗಾರಿಕೆಗೂ ಇದು ಪ್ರಸಿದ್ಧವಾಗಿದೆ. ಎತ್ತ ನೋಡಿದರತ್ತ 'ಭೂರಮೆಯುಟ್ಟ' ಬಣ್ಣ ಬಣ್ಣದ ಸೀರೆಯ ಸೊಬಗು! ಸೆರಗು ಹಿಡಿಯಲು ಬಂದ ಕಾಲನಿಗೆ 'ಸೆರಗ ಬಿಡೋ ಮರುಳೇ' ಎಂದು ಕಾಲನಿಂದ ಸೆರಗನ್ನು ಕಿತ್ತುಕೊಂಡು ಗಾಳಿಯಲ್ಲಿ ಹಾರಿಸಿದ ಹಾಗೆ. 'ಪುರಾತನ' ವಾಸನೆ ಘಮ್ಮೆಂದು ಪಂಚೇಂದ್ರಿಯಗಳ ಮೂಲಕ ಆವರಿಸಿಕೊಳ್ಳುತ್ತದೆ. ಅಂತಹ ಕಾಲದೇಶದಲ್ಲಿ ನಿಂತ ಕ್ಷಣದಲ್ಲಿ 'ನಾನು' ಕರಗದಿದ್ದರೆ ಹೇಗೆ? ಇಲ್ಲಿ 'ಡಾಂಟೇಸ್ ವ್ಯೂ' ಎನ್ನುವ, ಸುಮಾರು ಸಮುದ್ರಮಟ್ಟದಿಂದ ಐದುಸಾವಿರ ಅಡಿಗಳ ಎತ್ತರದಲ್ಲಿರುವ ಒಂದು ಶಿಖರ. ಅದಕ್ಕೆ ಒಡ್ಡಿಕೊಂಡು ನಿಂತಾಗ ಡಾಂಟೆಯ 'ಡಿವೈನ್ ಕಾಮಿಡಿ' ಅನಾಮತ್ತಾಗಿ ಕಣ್ಣಮುಂದೆ ನಿಂತಂತೆ ಭಾಸವಾಯಿತು! ಡಾಂಟೆಯ 'ಡಿವೈನ್ ಕಾಮೆಡಿ' ಎನ್ನುವುದು ಕತ್ತಲಿನಿಂದ ಬೆಳಕಿನೆಡೆಗೆ ನಡೆವ ಒಂದು ಆತ್ಮದ ಪ್ರಯಾಣದ ಕಥನ. ತಮಸೋಮಾ ಜ್ಯೋತಿರ್ಗಮಯ! ಎಲ್ಲಿಯ ಇಟಲಿಯ ಕವಿ? ಎಲ್ಲಿಯ ಅಮೇರಿಕಾದ ಗುಡ್ಡಗಳು? ಎರಡೂ ಮಹೋನ್ನತಿಗಳ ಪರಸ್ಪರ ಮುಖಾಮುಖಿ. ಡಿವೈನ್ ಕಾಮೆಡಿ, ಇದು 'ಹೆಲ್ (ಇನ್ಫೆರ್ನೋ)', 'ಪರ್ಗೇಟರಿ' ಮತ್ತು ಪ್ಯಾರಡೈಸ್ ಎನ್ನುವ ಮೂರು ಭಾಗಗಳ ಕಥನ ಕಾವ್ಯ. ಅದನ್ನು ನಾನು ಎಂ. ಎ. ಕಲಿಯುವಾಗ ಓದಿದ್ದು. ಅದು ಹೀಗೆ ನಲವತ್ತು ವರುಷಗಳ ನಂತರ ಹದಿಮೂರು ಸಾವಿರ ಮೈಲಿಗಳಾಚೆ ಧುತ್ತೆಂದು ಎದುರಿಗೆ ಬರುತ್ತದೆಂದು ಯಾರು ಕಂಡಿದ್ದರು? ಬೆಟ್ಟಗಳ ಆಳ ಪ್ರಪಾತದಲ್ಲಿ ಅಗಾಧ ಮರು ಭೂಮಿ. 'ಇನ್ಫೆರ್ನೋ' ಹಾಸಿದ ಮಸಕು ಮಸಕಿನ ದಾರಿ, ಅನೂಹ್ಯ ದಾರಿ ಕಂಡಷ್ಟೂ ಮುಗಿಯದು. ಮಳೆಗಾಲದಲ್ಲಿ ನದಿಯಾಗಿ ಹರಿದು ಆನಂತರ ಒಣಗಿ ಉಪ್ಪಿನ ಸಾಗರವಾದ ( salt pan) ಈ ಭಾಗಕ್ಕೆ Badwater ಎಂದು ಹೆಸರು. ನರಕದಲ್ಲಿ ಹರಿಯುವ ನದಿಗೆ ಬೇರಿನ್ನಾವ ಹೆಸರಿಡಲು ಸಾಧ್ಯ? ಇನ್ನೊಂದು ಕಡೆ ಬರೀ ಕರಿಯ ಕಲ್ಲುಮಣ್ಣುಗಳಿಂದ ಕೂಡಿದ ವಿಶಾಲವಾದ ಸಮತಟ್ಟಾದ ಭೂಮಿ. ಇದಕ್ಕೆ 'ಡೆವಿಲ್ಸ್ ಗೋಲ್ಫ್ ಕೋರ್ಸ್' ಎಂದು ಹೆಸರು. ದೆವ್ವಗಳಲ್ಲದೆ ಬೇರಾರು ಇಲ್ಲಿ ಗೋಲ್ಫ್ ಆಡಲು ಸಾಧ್ಯವಿಲ್ಲ ಎಂಬ ವಿಡಂಬನೆ! ಸಾವಿನ ಕಣಿವೆಯಲ್ಲಿ ದೆವ್ವಗಳದ್ದೇ ತಾನೇ ಆಟ?ಡಾಂಟೆಯ ವಿಡಂಬನಾತ್ಮಕ ಕಾವ್ಯವನ್ನು ಹೆಜ್ಜೆ ಹೆಜ್ಜೆಗೂ ನೆನಪಿಸುವ ಹೆಸರುಗಳು!! Exploring the bad lands ಎನ್ನುವ ಫಲಕ ಒಂದು ಕಡೆ. ಒಟ್ಟಿನಲ್ಲಿ ಎಲ್ಲವೂ ಕೇಡನ್ನು ಬಗೆವ ಬಗೆ. ಆ ಕೇಡನ್ನು ನೋಡಲು ಜನ ಎಲ್ಲೆಲ್ಲಿಂದಲೋ ಬರುತ್ತಾರೆ. ಒಳಿತನ್ನು ನಿಕಷಕ್ಕೆ ಒಡ್ಡುವುದು ಕೇಡು ತಾನೇ? ಅದೂ ಒಂದು ಬದುಕಿನ ಭಾಗ. ಹಾಗೆ ನೋಡಿದರೆ ಸಾವು ಕೇಡಲ್ಲ. ಅದು ಸತ್ಯ. ನಮ್ಮ ಬದುಕೆನ್ನುವುದು ಸದಾ ಸತ್ಯದ ನಿಕಷಕ್ಕೆ ಒಡ್ಡಿಕೊಳ್ಳುತ್ತಾ ಸಾಗಬೇಕು! ಅಜ್ಜ ತೀರಿಕೊಂಡಿದ್ದು ಐವತ್ತೈದು ವರುಷಗಳ ಹಿಂದೆ. ಆಗ ಪಿರಿಯಾಪಟ್ಟಣದ ಅವರ ಮನೆಯ ಜಗಲಿಯ ಮೇಲೆ ಸತತವಾಗಿ ಒಂಬತ್ತು ದಿನಗಳು ಗರುಡ ಪುರಾಣ ಪಠಣ ನಡೆದಿತ್ತು. ಆಗ ಕೇವಲ ಆಟ ಊಟ ಓಟದ ವಯಸ್ಸು ನನ್ನದು. ಆದರೂ, ಪುರಾಣಿಕರು ಗರುಡ ಪುರಾಣ ಓದುತ್ತಿದ್ದ ಚಿತ್ರವೇಕೆ ನನ್ನೊಳಗೆ ಇನ್ನೂ ಮಾಸದೇ ಉಳಿದಿದೆ? ಅದು ಈ ಡೆಥ್ ವ್ಯಾಲಿಯ ಶಿಖರದಮೇಲೆ ನಿಂತ ಈ ಕ್ಷಣದಲ್ಲೇ ಭೂಮಿಯ ಅಂತರಾಳದಿಂದೆದ್ದು ಬಂದ ನೆಲದ ಡುಬ್ಬಗಳ ಮೇಲೆ ಸವಾರಿ ಮಾಡುತ್ತಿದೆ? ಇಡೀ ಕಣಿವೆಯಲ್ಲಿ ಒಂದು ನರಪಿಳ್ಳೆ ಇಲ್ಲ. ಯಾವುದೇ ಸದ್ದುಗಳಿಲ್ಲ. ಅಕಲಂಕ ಮೌನ! ಸತ್ಯದ ಮುಂದೆ ನಿಬ್ಬೆರಗಾಗುವ ದಿವ್ಯ ನಿಶಬ್ದ! ರಾಕ್ ಸಂಗೀತದ ಹಿನ್ನೆಲೆಗೆ ಕಾರು ವೇಗವಾಗಿ ಅಸಂಖ್ಯ ತಿರುವುಗಳಲ್ಲಿ ಓಡುತ್ತಿತ್ತು. ಮುಂದೆ ರಸ್ತೆಯೇ ಇಲ್ಲವೇನೋ ಎನ್ನುವ ಕಡೆ ಅನಾಮತ್ತಾಗಿ ತಿರುವೊಂದು ತೆರೆದುಕೊಳ್ಳುತ್ತಿತ್ತು. ಕೆಳಗೆ ಪ್ರಪಾತ! ಪ್ರಪಾತವಿರ ಬಹುದೆಂದು ಎದುರು ನೋಡುತ್ತಿದ್ದರೆ ವಿಶಾಲ ಬಯಲು! ಇಲ್ಲಿನ ಹವೆಯೆಂದರೆ ಕಾಳು ಎಸೆದರೆ ಅರಳಾಗುವಷ್ಟು "ರಣ ರಣ ಬಿಸಿಲು, ಮಾರಣ ಬೆಂಕಿ, ಉರಿಯ ಉಯ್ಯಲೆ!" ಕೊತ ಕೊತ ಕುದಿಯುವ ನರಕದ ಎಣ್ಣೆ ಕೊಪ್ಪರಿಗೆ ? ಎಷ್ಟು ಹೇಳಿದರೂ ಕಮ್ಮಿಯೇ. Furnace creek ಎನ್ನುವುದು ಇಲ್ಲಿನ ಒಂದು ವೀಕ್ಷಣಾ ಸ್ಥಳದ ಹೆಸರು. ನನಗೆ ಇಡೀ ಡೆಥ್ ವ್ಯಾಲಿಯೇ ಒಂದು ಉರಿಯ ಬೃಹತ್ ಭಾಂಡವಾಗಿ ಕಾಣಿಸಿತು. ನಾವು ನಿಂತಿದ್ದುದೇನೋ 'ವೇಸ್ಟ್ ಲ್ಯಾಂಡಿ' ನಲ್ಲಿ. ಆದರೆ ಅದು ನಮಗೆ ಅನೇಕ 'ವಂಡರ್ ಲ್ಯಾಂಡ್' ಗಳನ್ನು ಅನಾವರಣ ಮಾಡುತ್ತಾ ಸಾಗುತ್ತಿತ್ತು. ನಾನೋ ಆ ಲೋಕದೊಳಗೆ ಅಂಡಲೆಯುವ ಒಬ್ಬ ‌ ಆ‌್ಯಲೀಸಳೇ ಆಗಿದ್ದೆ. ಇಲ್ಲಿ ಅನೇಕ ಕಡೆ ಸೂರ್ಯೋದಯವನ್ನು ಪೂರ್ವಾಭಿಮುಖವಾಗಿ ನೋಡಲು ಸಾಧ್ಯವಿಲ್ಲ. ಯಾವುದೋ ಗುಡ್ಡದ ಹಿಂಬದಿಯಿಂದ ಎದ್ದು ಬರುವ ಸೂರ್ಯ ಎದುರಿನ ಬೆಟ್ಟಗಳ ಮೇಲೆ ಪ್ರತಿಫಲನಗೊಳ್ಳುತ್ತಾನೆ. ಬೆಟ್ಟಗಳ ಬಣ್ಣಕ್ಕೆ ಅನುಗುಣವಾಗಿ ಥಳ ಥಳ ಹೊಳೆಯುತ್ತಾನೆ. ಹೀಗಾಗಿ ಸೂರ್ಯನಿಗೂ ಇಲ್ಲಿ ಅನೇಕ ಬಣ್ಣ! ಇಲ್ಲಿ ನಮಗೆ ಪಶ್ಚಿಮದಲ್ಲಿ ಸೂರ್ಯೋದಯ! ಇಲ್ಲಿ ಬೆಳಿಗ್ಗೆ ಸೂರಪ್ಪ ಹತ್ತರ ಹೊಸಿಲು ದಾಟುವ ಮುನ್ನ ವಿಹಾರ ಮಾಡಬೇಕು, ಇಲ್ಲದಿದ್ದರೆ ಸಂಜೆಯ ಆರರ ಮೇಲೆ ಅವನು ಕಣಿವೆಯಲ್ಲಿ ಇಳಿಯ ತೊಡಗಿದ ಆನಂತರವೇ ಹೊರಗೆ ತಲೆಯಿಡಲು ಸಾಧ್ಯ. ಅವನು ಮುಳುಗುವುದು ಸುಮಾರು ಏಳುಕಾಲಿಗೆ. ಪೂರ್ತಿ ಕತ್ತಲಾಗಲು ಎಂಟು ಎಂಟೂವರೆಯವರೆಗಾದರೂ ಕಾಯಬೇಕು. ನಾವು ಬೆಳಿಗ್ಗೆಯೇ ಹೋದುದರಿಂದ ಬಿಸಿಲು ಭಯಂಕರವಾಗಿರಲಿಲ್ಲ. ಡಾಂಟೆಯ ಶಿಖರದ ಮೇಲೆ ಕುಳಿತು ನಾವು ಉಪಹಾರ ಸ್ವೀಕರಿಸಿದೆವು. ಸಾವಿನ ಸಂದರ್ಭದಲ್ಲಿ ಹಸಿವು ಹೆಚ್ಚು. ಬಹುಶಃ ಡಿವೈನ್ ಕಾಮಿಡಿ ಎಂದರೆ ಇದೇ ಏನೋ! ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯುವುದು? ಇದು ಯಕ್ಷಪ್ರಶ್ನೆಯಿರಬಹುದು. ಇರಲಿ. ಇಲ್ಲ, ಇಲ್ಲ ಈ ಯಕ್ಷಪ್ರಶ್ನೆಯೇ ಬದುಕಿನ ಸೌಂದರ್ಯ. ಕಾಲದ ಅನಂತತೆಯನ್ನು ಅನುಭವಿಸಲು, ಸಾಕ್ಷಾತ್ಕರಿಸಿಕೊಳ್ಳಲು ನನಗೆ ಈ ಹೊತ್ತು ಸಾಧ್ಯವಾಗಿದೆಯಲ್ಲ? ಅದೇ ಬದುಕಿನ ಮಾಧುರ್ಯವಲ್ಲವೇ? A thing of beauty is joy for ever ! ಅದನ್ನು ಮನುಷ್ಯ ಕಂಡುಕೊಳ್ಳದೇ ಹೋಗುವುದೇ ನಿಜವಾದ ಕಾಮಿಡಿ!! "ಕಾಲ" ಹೀಗೆ ಅನಂತ ಶಯನನಾಗಿ ನಮ್ಮ ಮುಂದೆ ಭೂಮ ಸ್ವರೂಪದಲ್ಲಿ ಪ್ರತ್ಯಕ್ಷವಾಗಿರುವಾಗ ಅದನ್ನು ಹೊಸ ಕಣ್ಣುಗಳಿಂದ ಧ್ಯಾನಸ್ಥ ನೆಲೆಯಲ್ಲಿ ಕಾಣಬೇಕು.‌ ಅನುಭವದಲ್ಲಿ ಮಾಗಿ ( ಹೆಲ್), ವೈತರಣಿಯಲ್ಲಿ ಮಿಂದು ಶುದ್ಧವಾಗಿ ( ಪರ್ಗೇಟರಿ) ಸ್ವರ್ಗದ ಬಾಗಿಲಿಗೆ ಬಂದು ಸೇರುವ ( ಪ್ಯಾರಡೈಸ್) ಕಲ್ಪನೆಯೇ ಮೈನವಿರೇಳಿಸುವಂತಹದು. ಇವೆಲ್ಲವೂ ಇಹದಲ್ಲೇ (here and now) ಮುಗಿದು ಬಿಡಬೇಕು! ಸದ್ಯದಲ್ಲೇ ಎಲ್ಲದರಿಂದ ನಿವೃತವಾಗಿಬಿಡಬೇಕು! ಈ ಜನ್ಮದಲ್ಲಿ ಮಾಡಿದ ಪಾಪಕ್ಕೆ ಮುಂದಿನ ಜನ್ಮದಲ್ಲಿ ಶಿಕ್ಷೆಯಲ್ಲ! ( Crime and Punishment) ಅದೇ ಸೌಂದರ್ಯ! ಅದೇ ಬದುಕು! ಮಗನ ಆಗ್ರಹದ ಮೇರೆಗೆ ನಾವೂ ಒಬ್ಬರನೊಬ್ಬರು ಹಿಡಿದುಕೊಂಡು 'ಓಪರೋಪರೊಳ್ ಸಾಯ್ವ' ಆದಿಪುರಾಣದ ವಜ್ರಜಂಘ, ಶ್ರೀಮತಿಯರಂತೆ ಫೋಟೋಗೆ ಪೋಸ್ ಕೊಟ್ಟೆವು. ಕಾರು ವೇಗವಾಗಿ ಚಲಿಸುತ್ತಿತ್ತು. ಚಿಟ್ಟೆಗಳಂತಹ ಹಾರುವ ಕ್ರಿಮಿ ಕೀಟಗಳು ವಿಂಡ್ ಶೀಟರ್ ಗೆ ಬಂದು ಬಡಿದು ಅಪ್ಪಚ್ಚಿಯಾಗುತ್ತಿದ್ದವು. ಗಾಜಿನಮೇಲೆ, ಬಾನೆಟ್ಟಿನ ಮೇಲೆಲ್ಲಾ ಸಾವಿನ ಕಲೆಗಳು! ಮಗನಿಗೆ ವೈಪರ್ ಓಡಿಸಿ, ಓಡಿಸಿ ಸಾಕಾಯಿತು. ಗ್ಯಾಸ್ ಸ್ಟೇಷನ್ ( ಪೆಟ್ರೋಲ್ ಬಂಕ್) ಒಂದರಲ್ಲಿ ಸ್ವತಃ ತಾನೇ ಅವುಗಳನ್ನು ಉಜ್ಜಿ ತೊಳೆದ. ಪ್ರಯಾಣ ಮುಂದುವರಿದಂತೆಲ್ಲಾ ಹೊಸದಾಗಿ ತೊಳೆದ ಗಾಜಿನ ಮೇಲೆ ಮತ್ತೆ ಮತ್ತೆ‌ ಹೊಸ ಕಲೆಗಳು ಮೂಡತೊಡಗಿದವು. ರಾತ್ರಿ ಎಂಟುಗಂಟೆಗೆ ನಕ್ಷತ್ರ ವೀಕ್ಷಿಸಲು ಅದೇ ಡಾಂಟೆಯ ದಿಬ್ಬ ಹತ್ತಿದೆವು. ಇಲ್ಲಿ ಇದನ್ನು Star gazing ಎನ್ನುತ್ತಾರೆ. ನಕ್ಷತ್ರಲೋಕವನ್ನು ತದೇಕಚಿತ್ತವಾಗಿ ನೋಡುವುದು! ಇದೂ ಕೂಡ ಒಂದು ರೀತಿಯ ಧ್ಯಾನವೇ! ಆಗ ತಾನೇ ಪರ್ವೀನ್ ಸುಲ್ತಾನಳ ಕಲಾವತಿ ರಾಗದ ಖಯಾಲ್ ಮುಗಿದಿತ್ತು. ಆದರೆ ನನ್ನೊಳಗೆ ಅದರ ಗುಂಗಾನ ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ 'ಡಾಂಟೆಯ ಶಿಖರವನ್ನು ತಲಪಿದ್ದೆವು. ಕತ್ತಲಲ್ಲೇ ಕಾರನ್ನು ನಿಲ್ಲಿಸಿ ಹೊರ ಬಂದಾಗ ಸುತ್ತಲೂ ಗಾಡಾಂಧಕಾರ. ನಿಶಬ್ದ ಸಾಮ್ರಾಜ್ಯ ಮೇರೆವರಿದಿತ್ತು. ಪಂಚಮೀ ಚಂದ್ರನೊಬ್ಬ ಜತೆಗಿದ್ದ. ಕಲ್ಲು ಹಾಸಿನ ಮೇಲೆ ಅಂಗಾತ ಮಲಗಿ ಆಕಾಶದತ್ತ ನೋಡಿದಾಗ ಸಾವಿರ ಸಾವಿರ ನಕ್ಷತ್ರಗಳು ! ಅವುಗಳ ಮಧ್ಯದಲ್ಲಿ ಹಾಲು ಚೆಲ್ಲಿದ ಆಕಾಶಗಂಗೆ. ನಾನು ಕಂಡೇ ಅರಿಯದ ನನ್ನ, ಅನಾಮಿಕ ಮಾತೃ-ಮಾತಾಮಹರು ಹೊಳೆಯುತ್ತಾ ಅಲ್ಲಿ ಕಣ್ಣು‌ಮಿಟುಕಿಸುತ್ತಿದ್ದರು. ಅದೆಷ್ಟು ಪೀಳಿಗೆಯವರು ನನ್ನೊಳಗೆ ಹೀಗೆ ನಿಗೂಢವಾಗಿ ಅಡಗಿ ಕುಳಿತು ನನ್ನನ್ನು ಹೊಳೆಸುತ್ತಿದ್ದಾರೋ!? ಅವರೆಂದರೆ ನಾನೇ ಅಲ್ಲವೇ? ಒಂದು ಹಿಡಿ ಬೂದಿ ( star dust)! Sept 7 ಸಿಯಾಟಲ್ ನಲ್ಲಿ ಆಣೆಬಡ್ಡಿ ರಂಗವ್ವ ಮತ್ತು ಸಾಕವ್ವ ಸಿಯಾಟಲ್ ನಲ್ಲಿರುವ ಮಗನ ವಸತಿ ಸಮುಚ್ಚಯದ ಆವರಣದಲ್ಲಿ ಬೆಳಿಗ್ಗೆ ವಾಯು ವಿಹಾರ ಮಾಡುತ್ತಿದ್ದೆವು. ಆಗ ಬಿರುಸಿನ ನಡಿಗೆಯ ಒಬ್ಬ ಭಾರತೀಯ ತರುಣಿ ಒಂದು ಪಟಾಪಟಿ ಚಡ್ಡಿ ಹಾಕಿಕೊಂಡು ನಮ್ಮ ಮುಂದೆಯೇ ಹಾದು ಹೋದಳು. ಅದು ಹಿಂದಿಯ ಫಟಾಫಟಿ ( ಹರಿದು ಜೂಲಾಗಿರುವ) ಅಲ್ಲ ! ಅದೂ ಈಗಿನ ಮಕ್ಕಳ ಟ್ರೆಂಡೀ ದಿರುಸೇ! ಅದರ ಬಗ್ಗೆ ಎರಡು ಮಾತಿಲ್ಲ. ಈಗ ನಾನು ಹೇಳಲು ಹೊರಟಿದ್ದು ಪಟಾಪಟಿ ಚಡ್ಡಿಯ ಬಗ್ಗೆ. ಅದು ಹಿಂದಿನ ಕಾಲದಲ್ಲಿ ಹಳ್ಳಿಯ ಗಂಡಸರು ಹಾಕಿಕೊಳ್ಳುತ್ತಿದ್ದ ಥೇಟ್ ಹತ್ತಿಯ ಬಟ್ಟೆಯ, ಸಾಮಾನ್ಯವಾಗಿ ತಿಳಿನೀಲಿ, ಬಿಳಿ ಕಂದು ಮಿಶ್ರಿತ ಪಟ್ಟೆ ಪಟ್ಟೆಗಳಿರುವ ಚಡ್ಡಿಯಂತೆಯೇ ಇತ್ತು. ಇದು ನಮ್ಮ ಹಳ್ಳಿಯಲ್ಲಿ ನಾನು ಬಾಲ್ಯದಲ್ಲಿ ಯಾವಾಗಲೂ ಕಾಣುತ್ತಿದ್ದ ಚಿತ್ರ. ಕೆಲವೊಮ್ಮೆ ಸಂತೆಮಾಳದಲ್ಲಿ ದನದ ವ್ಯಾಪಾರಕ್ಕೆ ಬಂದ ಹಳ್ಳಿಗರು ಪಂಚೆ ಎತ್ತಿ ಚೆಡ್ಡಿಯ ಜೇಬಿನೊಳಗೆ ಕೈಹಾಕಿ ಕಂತೆ ನೋಟುಗಳನ್ನು ತೆಗೆಯುತ್ತಿದ್ದ, ಇತರರಿಗೆ ಒಳಗಿರುವ ರಖಂನ ಅಂದಾಜು ಸಿಗದಂತೆ ಜೇಬಿನೊಳಗೇ ಕಂತೆ ಎಣಿಸುತ್ತಿದ್ದ ಚಿತ್ರವೂ ಕಣ್ಣಮುಂದೆ ಬಂದಿತು. ಯಾಕೆಂದರೆ ಅವರೇ ಅಂದಿಗೆ ನನಗೆ ಹೆಚ್ಚು ಆಧುನಿಕರಾಗಿ ಕಾಣಿಸುತ್ತಿದ್ದರು. ನಮ್ಮ ಮನೆಯ ಬ್ರಾಹ್ಮಣರು ಕೌಪೀನದಿಂದ ಪಟಾಪಟಿಗೆ ಆಗಿನ್ನೂ ಭಡ್ತಿ ಹೊಂದಿರಲಿಲ್ಲ. ಬಚ್ಚಲು‌ ಮನೆಯಲ್ಲಿ ಒಣಹಾಕಿರುವ ಲಂಗೋಟಿಗಳ ಸಾಲು ಮನೆಯಲ್ಲಿರುವ ಪುರುಷರ ಸಂಖ್ಯೆಯನ್ನೂ ಸೂಚಿಸುತ್ತಿತ್ತು. ಅಮೇರಿಕಾದ ಆಧುನಿಕ ಯುವತಿಯ ಚಡ್ಡಿಯನ್ನು ನೋಡಿ " ಇದು ನಮ್ಮ ಹಳ್ಳಿಯ ಜನ ಹಾಕಿಕೊಳ್ಳುತ್ತಿದ್ದ ಚಡ್ಡಿಯ ಹಾಗೇ ಇದೆ ಅಲ್ವಾ?"ಎಂದೆ. "ಇವಳನ್ನು 'ಪಟಾಪಟಿ ಚಡ್ಡಿಯ ಗ್ರಾಮೀಣ ಗರತಿ' ಎನ್ನ ಬಹುದಾ?.... ಆದ್ರೆ ನಮ್ಮ ಗ್ರಾಮೀಣ ಮಹಿಳೆಯರು ಚಡ್ಡಿ ಹಾಕ್ಕೋಳಲ್ಲ ಬಿಡು" ಎಂದ ಇವನು. ಲಂಕೇಶರ ಬನದ ಕರಡಿ 'ಅವ್ವ' ಮತ್ತು 'ಮುಸ್ಸಂಜೆಯ'' ಆಣಿಬಡ್ಡಿ ರಂಗವ್ವ ಚಡ್ಡಿ ಹಾಕಿಕೊಂಡು ಹೊಸಲಿಗೆ ಅಡ್ಡನಿಂತಂತಾಯಿತು. ಹಿಂದೆಯೇ ಒಡಲಾಳದ ಸಾಕವ್ವ ಚಡ್ಡಿಯಲ್ಲಿ ಹುಂಜನನ್ನು ಅಟ್ಟಾಡಿಸಿಕೊಂಡು ಓಡಿ ಹೋಗುತ್ತಿದ್ದಳು. ನಗು ತಡೆಯಲಾಗಲಿಲ್ಲ.... ಅಷ್ಟೇ ಏಕೆ ಯಮುನಕ್ಕ, ಫಣಿಯಮ್ಮ. ಮೂಕಜ್ಜಿಯನ್ನೂ ಬೇಕಾದರೆ ನೀವು ಸೇರಿಸಿಕೊಳ್ಳಬಹುದು. ಅದೃಷ್ಟ ಕೂಡಿ ಬಂದಿದ್ದರೇ ಅಂದೇ ಎಲ್ಲರೂ ಹಡಗು ಹತ್ತಬಹುದಿತ್ತು ಪಂ. ರಮಾಬಾಯಿಯ ಹಾಗೆ. ಆಧುನಿಕ ಮಹಿಳಾ ಕನ್ನಡ ಕಾದಂಬರಿಯ ಚರಿತ್ರೆಯಲ್ಲಿ ಹಡಗು ಹತ್ತಿದ ಮೊದಲ ಹೆಣ್ಣೆಂದರೆ‌ ಕೃಷ್ಣಾಬಾಯಿಯೇ ( ಸದ್ಗುಣಿ ಕೃಷ್ಣಾಬಾಯಿ (೧೯೦೮) - ಶಾಂತಾಬಾಯಿ ನೀಲಗಾರ) ಕೃಷ್ಣಾಬಾಯಿಯ ಹಡುಗು ಮಧ್ಯದಲ್ಲಿಯೇ ಮುಳುಗಿ ಹೋಗುತ್ತದೆ. ಅವಳು ಬಚಾವಾದರೂ ಇಂಗ್ಲೆಂಡ್ ತಲಪಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ತಲಪಿದ್ದರೆ ಅವಳೂ ಪಟಾಪಟಿ ಚಡ್ಡಿ ತೊಟ್ಟು ಹೀಗೇ ನಡೆದು ಹೋಗುತ್ತಿದ್ದಳೇನೋ? ಪಾಪ ಚಡ್ಡಿತೊಡುವ ಭಾಗ್ಯದಿಂದ ವಂಚಿತರಾದ ಇವರೆಲ್ಲ ಬಲಿಪಶುಗಳಾಗಿಬಿಟ್ಟರು....Aug 26 ಅಮೇರಿಕಾ ನಂ. ೯೧೧ ಮತ್ತು ಸಾವಿನ ಶ್ರೇಣೀಕರಣ ಭಾವನವರು (ಗಂಡನ ಅಣ್ಣ) ತೀರಿಕೊಂಡ ಸುದ್ದಿ ಬಂದಾಗಲಿಂದ ಮನೆಯಲ್ಲಾ ಮಂಕಾಗಿದ್ದಿತು. ಸ್ವತಃ ಅಣ್ಣನ ಸಾವಿಗೆ ಅಮೇರಿಕಾದಿಂದ ಹೋಗಲಾರದ ಸ್ಥಿತಿಯೂಸೇರಿ, ಹೊರಗಿನ ಮೋಡದೊಳಗೆ ಎಂದಿಗಿಂತ ಹೆಚ್ಚಾಗಿಯೇ ಕಪ್ಪು ಅಡರಿತ್ತು. ಬೆಳಗಾಯಿತು ನಮ್ಮ ಕಟ್ಟಡದ ಕೆಳಗೆ ಧಡ್ ಧಡ್ ಎಂದು ಭಾರವಾದ ಎರಡು ಮೂರು ವಾಹನಗಳ ಬಾಗಿಲುಗಳು ಒಮ್ಮೆಲೇ ಮುಚ್ಚಿದ ಸದ್ದು ಕೇಳಿ ಬಾಲ್ಕನಿಗೆ ಬಂದೆವು. ಹೊರಗೆ ಅಗ್ನಿಶಾಮಕದಳ, ಆ‌ಂಬ್ಯು‌ಲೆನ್ಸ್ ಮತ್ತು ಪೋಲೀಸ್ ವಾಹನಗಳು ಒಟ್ಟಿಗೇ ಬಂದು ನಿಂತಿದ್ದವು. ಅದರೊಳಗಿಂದ ಇಳಿದ ಏಳೆಂಟು ಜನರ ಕೈಗಳಲ್ಲಿ ಎಂತೆಂಹುದೋ ಅರ್ಥವಾಗದ ವೈದ್ಯಕೀಯ ಸಾಮಾಗ್ರಿಗಳು, ಜೀವರಕ್ಷಕ ಯಂತ್ರಗಳು, ಪೆಟ್ಟಿಗೆಗಳು ! ಅವರೆಲ್ಲಾ ಓಡುವಂತೆ ನಡೆದು ಅವಸರದಲ್ಲಿ ಎದುರು ಕಟ್ಟಡ ಹೊಕ್ಕರು. ಅಮೇರಿಕಾದಲ್ಲಿ ಯಾವುದೇ ತುರ್ತು ಸೇವೆಯೆಂದರೆ ಕರೆಮಾಡಬೇಕಾಗಿರುವುದು ೯೧೧ ಸಂಖ್ಯೆಗೆ. ಇದು ವೈದ್ಯಕೀಯ, ಬೆಂಕಿ ಅಪಘಾತ ಅಥವಾ ಅಪರಾಧ- ಈ ಮೂರೂ ತುರ್ತು ಸಂಗತಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆಲ್ಲ ಒಂದೇ ಸಂಖ್ಯೆ. ಆದುದರಿಂದ ಯಾವುದೇ ತುರ್ತಿಗಾದರೂ ಆಂಬ್ಯಲೆನ್ಸ್, ಅಗ್ನಿ ಶಾಮಕದಳ ಮತ್ತು ಪೊಲೀಸ್ ಒಟ್ಟಿಗೆ ಬರುತ್ತವಂತೆ. ಇಷ್ಟೊಂದು ಜನ ಬರಬೇಕಾದರೆ ಯಾರದೋ ಮನೆಯಲ್ಲಿ ಬೆಂಕಿ ಅನಾಹುತ ಆಗಿರಬಹುದೆಂದು ಭಾವಿಸಿದ್ದೆವು. ಆದರೆ ಹತ್ತು ನಿಮಿಷದೊಳಗೆ ಅದೇ ಜನ ಒಂದು ಸ್ಟ್ರೆಚರ್ ನ್ನು ತಳ್ಳಿಕೊಂಡು ಹೊರ ಬಂದರು. ಸ್ಟ್ರೆಚರ್ ಮೇಲೆ ಮೂಗಿಗೆ ನಾಳಗಳನ್ನು ಹಚ್ಚಿಕೊಂಡ ಮಧ್ಯವಯಸ್ಸಿನ ಒಬ್ಬ ವ್ಯಕ್ತಿ ಮಲಗಿದ್ದ. ಯಾವುದೋ ಗಂಭೀರ ಖಾಯಿಲೆಯ ಕೇಸ್ ಇರಬೇಕು. ಮನೆಯ ಕೆಳಗೇ ನಿಂತ ವಾಹನದೊಳಗೆ ಸ್ಟ್ರೆಚರ್ ತಳ್ಳಿದರು. ಫೋಟೋ ತೆಗೆದುಕೊಳ್ಳುವುದು ಅಮಾನವೀಯ ಎಂದು ತೆಗೆಯಲಿಲ್ಲ. ಅರ್ಧಗಂಟೆಯೊಳಗೆ ಅಲ್ಲಿ ಏನೂ ನಡದೇ ಇಲ್ಲವೆನ್ನುವಂತೆ ಎಲ್ಲಾ ಖಾಲಿ. ನೆರೆದಿದ್ದ ಕೆಲವು ಜನರೂ ಮರಳಿದರು. ಸಾವು ಬಳಿಯಲ್ಲೇ ಉಜ್ಜಿಕೊಂಡು ಹೋದಂತೆ ಭಾಸವಾಯಿತು. "ಏನು ನೋಡ್ತಾ ಇದ್ದೀರಿ" ಎನ್ನುತ್ತಾ ಮಗ ಒಳಗಿನಿಂದ ಬಂದ. "ಒಂದು ಜೀವಕ್ಕೆ ಇಲ್ಲಿ ಎಷ್ಟು ಬೆಲೆ ಇದೆ ನೋಡು ಅಮ್ಮಾ, ೯೧೧ ಕರೆ ಮಾಡಿದ ತಕ್ಷಣ ಹೇಗೆ ಓಡಿಬರುತ್ತಾರೆ" ಎಂದ. "ಒಬ್ಬನಿಗಾಗಿ ಎಷ್ಟೊಂದು ಜನ?" ಎಷ್ಟೊಂದು ಖರ್ಚು?" " ಜನ ಅಷ್ಟು ತೆರಿಗೆ ಕಟ್ಟುವುದಿಲ್ವಾ?" ಎಂದ ಮಗ. "ದೊಡ್ಡಪ್ಪನ crimatation ಆಯಿತಾ?" ಕೇಳಿದ. "ಇಲ್ಲ ಕಣೋ ಯಾರೋ ಬರಬೇಕಂತೆ ಕಾಯುತ್ತಿದ್ದಾರೆ" ಎಂದೆ ಅಸಹನೆಯಿಂದ. ಹೀಗೆ ಹೆಣವನ್ನು ಇಟ್ಟುಕೊಂಡು ತಾಸುಗಟ್ಟಲೆ ಬರುವವರಿಗೆಲ್ಲಾ ಕಾಯುವುದು ಅಬ್ರಾಹ್ಮಣ ರೀತಿ ಎಂಬುದನ್ನು ಮನೆಯಲ್ಲಿ ಬಾಲ್ಯದಿಂದಲೂ ತಲೆಗೆ ತಿಕ್ಕಲಾಗಿತ್ತು. ನನ್ನ ಅಸಹನೆಗೆ ಅದೇ ಕಾರಣವೂ ಆಗಿತ್ತು. ಅದನ್ನು ಮಗನ ಬಳಿ ಕಕ್ಕಿದ್ದೆ. ಅದಕ್ಕೆ‌ ಮಗನಿಂದ ಫಟ್ ಅಂತ ಬಂತು ಉತ್ತರ. "ಹೀಗೆ ಕೊನೆಯ ಸಲ ಮುಖ ನೋಡುವುದು ಬದುಕಿರುವವರಿಗೇ ಒಳ್ಳೆಯದು ಅಮ್ಮಾ, ಒಂದು ರೀತಿಯ closure ಸಿಕ್ಕಿಬಿಡುತ್ತೆ. ಎಲ್ಲಾ ಮುಗಿಯಿತು ಇನ್ನು move on ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸನ್ನು ಸಿದ್ಧಮಾಡುತ್ತದೆ. ದೊಡ್ಡಪ್ಪನ ಹೆಣವನ್ನು ನೀವು ನೋಡಲಿಲ್ಲ, ಆದುದರಿಂದ ಅವರು‌ ಸತ್ತೇ ಇಲ್ಲ ಎಂದು‌ ನಿಮ್ಮ ಮನಸ್ಸು ಭಾವಿಸಬಹುದು. ಆದರೆ ಇದು ಒಂದು ರೀತಿಯ ಭ್ರಮೆ. ಸಾವನ್ನು ಒಪ್ಪಿಕೊಳ್ಳಬೇಕೆಂದರೆ ಹೆಣದ ಮುಖವನ್ನು ನೋಡಬೇಕು ಅದಕ್ಕೇ ಮುಖ ನೋಡಲು ಬರುವವರಿಗೆಲ್ಲ ಕಾಯುತ್ತಾರೆ" (ನಮ್ಮಲ್ಲೂ ಬಾಯಿಗೆ ಅಕ್ಕಿ ಕಾಳು ಹಾಕದೇ ಋಣ ತೀರುವುದಿಲ್ಲ ಎಂಬ ನಂಬಿಕೆಯೂ ಇದೆ) ಮಗ ಇಷ್ಟು ಬೇಗ ಬೆಳೆದು ಬಿಟ್ಟನೇ? ನಾನು ದಂಗಾದೆ. ಎಷ್ಟು ಸತ್ಯ ಹೇಳುತ್ತಿದ್ದಾನೆ! ಆದರೆ ನನಗೆ ಈವರೆಗೂ ತಲೆಯಲ್ಲಿ ಕುಳಿತದ್ದು ಸುಳ್ಳು. ಆ ಸುಳ್ಳನ್ನೇ ಶ್ರೇಷ್ಠವೆಂದು ನನ್ನ ಒಳಮನಸ್ಸಿನಲ್ಲಾದರೂ ಒಪ್ಪಿಕೊಂಡುಬಿಟ್ಟಿದ್ದೆ! ಭಾರತದ ಮೊತ್ತ ಮೊದಲ ಮಹಿಳಾ ಬ್ಯಾರಿಸ್ಟರ್ ಕಾರ್ನೀಲಿಯಾ ಸೋರಾಬ್ಜಿ (೧೮೬೬-೧೯೫೪) ಸಾವನ್ನು ಖಚಿತ ಪಡಿಸಿಕೊಳ್ಳದೇ ಸಂಸ್ಕಾರದ ಆತುರ ತೋರಿಸುವ ಬ್ರಾಹ್ಮಣರ ನೀತಿಗಳನ್ನು ಖಂಡಿಸುತ್ತಾಳೆ. ಹಾಗೆಯೇ ಕೆಳವರ್ಗದ ಜನ ಎದೆಬಡಿದುಕೊಂಡು ಅಳುವ ರೀತಿಯನ್ನೂ ವಿಕ್ಟೋರಿಯನ್ ಹುಸಿ ಮಾಡಸ್ಟಿಗೆ ಅನುಗುಣವಾಗಿ ಅಸಭ್ಯ ಎಂದು ಜರೆಯುತ್ತಾಳೆ. ಹೀಗೆ ಒಂದು ವಿದ್ಯುಕ್ತ ಕ್ರಿಯೆಯಂತೆ ದನಿ ಎತ್ತಿ ರೋದಿಸುವ ಪದ್ಧತಿ ಕೂಡ ಆಘಾತವನ್ನು ಹೊರಹಾಕುವ ರೀತಿಯೇ‌ ಆಗಿದೆ. ಅದು ಮನಶ್ಶಾಸ್ತ್ರದ ಸತ್ಯ. ಆದರೆ ಅದನ್ನು ಬ್ರಾಹ್ಮಣ ನೀತಿ ಮತ್ತು ವಿಕ್ಟೋರಿಯನ್ ಮಾಡಸ್ಟಿ ಅಸಭ್ಯತೆಯೆಂದೇ ಬಗೆಯುತ್ತದೆ. ಮೇಲು ಜಾತಿ ಮತ್ತು ಬ್ರಿಟಿಷ್ ನಂಬಿಕೆಗಳು ಹೇಗೆ ನಮ್ಮ ಜನಪದ ನಂಬಿಕೆಗಳನ್ನು ಕುಸಂಸ್ಕೃತಿ ಎನ್ನುವ ರೀತಿಯಲ್ಲಿ ದಾರಿ ತಪ್ಪಿಸಿದವು ಎಂಬುದನ್ನು ರಾಧಾಕುಮಾರ್ ಅವರು ತಮ್ಮ History of Doing ಪುಸ್ತಕದಲ್ಲಿ ಬಹಳ ವಿವರವಾಗಿ ಚರ್ಚಿಸುತ್ತಾರೆ. ಇದನ್ನೆಲ್ಲಾ ಇಪ್ಪತ್ತು ವರುಷಗಳ ಹಿಂದೆಯೇ ಕೇವಲ ಬುದ್ಧಿಯಿಂದ ಗ್ರಹಿಸಿದ್ದೆ. ಮಗನ ಮಾತು ಕೇಳಿದ ಮೇಲೆ ಅದು ತಲೆಯಿಂದ ಕೆಳಗಿಳಿಯಿತು. ಬದುಕಿನಲ್ಲಿ ಶ್ರೇಣೀಕರಣವನ್ನು ಅರ್ಥಮಾಡಿಕೊಳ್ಳಬಹುದು ಆದರೆ ..... ಸಾವಿನಲ್ಲಿ???? Aug 29 ಬೆಲ್ ವ್ಯೂ ವಸ್ತು ಸಂಗ್ರಹಾಲಯ- 1 ಬೆಲ್ ವ್ಯೂ ಆರ್ಟ್ ಗ್ಯಾಲರಿಯಲ್ಲಿ ಸಾವಿನ ತಟ್ಟೆಗಳು.. ಸಿಯಾಟಲ್ ಬಳಿಯ ಬೆಲ್ ವ್ಯೂ ನಗರದ ಕೇಂದ್ರ ಭಾಗದಲ್ಲಿ ಮೂರು ಮಹಡಿಗಳ ಒಂದು 'ಕಲೆ ಕುಶಲಕಲೆ ಮತ್ತು ವಿನ್ಯಾಸದ ವಸ್ತುಸಂಗ್ರಹಾಲಯ' ( Art, Craft and Design Museum) ಅದರ ಭವ್ಯವಾದ ಕಟ್ಟಡದ ಗಾಜಿನ ಬಾಗಿಲುಗಳನ್ನು ತಳ್ಳಿಕೊಂಡು ಒಳ ಹೋದ ಕೂಡಲೇ ವಿಶಾಲವಾದ ಹಾಲ್. ವಕ್ರಗತಿಯಲ್ಲಿ ಮೇಲೇರುವ ವಿಶಾಲ ಮೆಟ್ಟಿಲುಗಳು. ಮೆಟ್ಟಿಲುಗಳ ಮುಂದೆ ನಿಂತ ಕ್ಷಣ ಭಯಾನಕವಾದ ಒಂದು ಸ್ವಪ್ನದಿಂದ ಎದ್ದಂತೆ. ಮೆಟ್ಟಿಲುಗಳ ಬದಿಯಲ್ಲಿ ಎತ್ತರದ ಗೋಡೆಯ ತುಂಬಾ ಸಾವನ್ನು ಅಂಟಿಸಲಾಗಿದೆ. ಎಂಟು ನೂರು ಸಾವುಗಳು!! "Last Supper" ಎನ್ನುವ ಶೀರ್ಷಿಕೆಯಡಿ ಸಾವಿನ ವಾಸನೆ. ಇದು ಕ್ರಿಸ್ತನಿಗೆ ಸಂಬಂಧಿಸಿದುದಲ್ಲ. ಮರಣದಂಡನೆಗೆ ಗುರಿಯಾದ ಕೈದಿಗಳಿಗೆ ಸಂಬಂಧಿಸಿದುದು. ಜ್ಯೂಲಿ ಗ್ರೀನ್ (೧೯೬೧-೨೦೨೧) ಅಮೆರಿಕಾದ ಒಕ್ಲಾಹೊಮ ರಾಜ್ಯದ ವಿ.ವಿ.ಯಲ್ಲಿ ಕಲೆಯ ಪ್ರೊಫೆಸರ್ , ಹಾಗೂ ಸ್ವತಃ ಪ್ರತಿಭಾವಂತ ಕಲಾವಿದೆ. ಫೋರ್ಡ್ ಫೌಂಡೇಶನ್ ವಿದ್ಯಾರ್ಥಿ ವೇತನವೇ ಅಲ್ಲದೆ ಅನೇಕ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಒಂದು ಮುಂಜಾನೆ ಅವಳ ಬಳಿಗೆ ಬಂದು ಬಿದ್ದ ಸುದ್ದಿ ಪತ್ರಿಕೆಯಲ್ಲಿ, ಹಿಂದಿನ ದಿನವಷ್ಟೇ ನೇಣುಗಂಬ ಏರಿದವನಿಗೆ ಕೊಡಲಾದ 'ಕೊನೆಯ ಆಹಾರ'ದ ವಿವರಗಳಿರುತ್ತವೆ. ಗ್ರೀನ್ ಳಿಗೆ, ಇದರ ಅವಶ್ಯಕತೆಯಾದರೂ ಏನು? ಅಚ್ಚರಿಯಾಗುತ್ತದೆ. ಬಹಳ ವಿಚಲಿತಳಾಗುತ್ತಾಳೆ. ಗಾಢ ವಿಷಾದ ಕವಿಯುತ್ತದೆ. ಈ ಭಾವ ಸ್ಥಿತಿಯಲ್ಲೇ ಈ ಕೊನೆಯ ಊಟದ ರಹಸ್ಯವನ್ನು ತಿಳಿದುಕೊಳ್ಳಲು ಕಾರಾಗೃಹಗಳನ್ನು ಅರಸಿ ಹೋಗುತ್ತಾಳೆ. ನೇಣುಗಂಬ ಏರುವವರು ಘೋರ ಅಪರಾಧವೆಸಗಿದವರು ಎಂಬುದಷ್ಟೇ ನಮಗೆ ತಿಳಿದಿರುತ್ತದೆ ಆದರೆ ನೇಣುಗಂಬ ಏರುವ ಮಗನಿಗೆ ಅವನು ಬಯಸಿದ ಕೊನೆಯ ಊಟವನ್ನು ತಯಾರಿಸಿಕೊಡುವ ತಾಯಿಯ ಸ್ಥಿತಿ ಹೇಗಿರಬಹುದು? ಅಂತಹ ಊಟವನ್ನು ಮಾಡಲಾದರೂ ಸಾಧ್ಯವಾಗಬಹುದೇ? ಎಂಬ ಒಳಗುದಿ. ಯಾರೋ ಒಬ್ಬ ಕೈದಿ ಹುಟ್ಟು ಹಬ್ಬದ ಕೇಕನ್ನೇ ಕಂಡಿರಲಿಲ್ಲವಂತೆ! ಅವನನ್ನು ನೇಣಿಗೆ ಏರಿಸುವ ಹಿಂದಿನ ದಿನ ಹುಟ್ಟು ಹಬ್ಬದ ಕೇಕನ್ನು ತಿನ್ನಿಸಲಾಯಿತಂತೆ! "ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ" ಒತ್ತಡವನ್ನು ತಾಳಲಾರದ ಜ್ಯೂಲಿ ಗ್ರೀನ್ ಹೀಗೆ ಮರಣದಂಡನೆಗೆ ಒಳಗಾದ ಕೈದಿಗಳ ಕೊನೆಯ ಊಟದ ವಿವರಗಳನ್ನು ಪತ್ತೆ ಹಚ್ಚುತ್ತಾಳೆ. ಪ್ರತಿಯೊಬ್ಬ ಕೈದಿಯೂ ಕೊನೆಯದಾಗಿ ಉಂಡ ಊಟದ ವಿವರದ ಚಿತ್ರಗಳನ್ನು ಪಿಂಗಾಣಿಯ ತಟ್ಟೆಯ ಮೇಲೆ ಬಿಡಿಸುತ್ತಾಳೆ. ಹೀಗೆ ಅವಳು ಬಿಡಿಸಿದ ಎಂಟುನೂರು ತಟ್ಟೆಗಳನ್ನು ಅವಳೇ ಸೂಚಿಸಿದ 'ಲಾಸ್ಟ್ ಸಪ್ಪರ್' ಎಂಬ ಶೀರ್ಷಿಕೆಯಡಿ ಇಲ್ಲಿ ಸಾಲಾಗಿ ಜೋಡಿಸಲಾಗಿದೆ. ಕೈದಿಗಳ ಹೆಸರು ಮತ್ತು ಅವರು ಕೊನೆಯದಾಗಿ ಉಂಡ ಊಟದ ವಿವರಗಳ ಪಟ್ಟಿಯನ್ನೂ ಇಲ್ಲಿ ಕೊಡಲಾಗಿದೆ. ಮರಣದಂಡನೆಯಂತಹ ಶಿಕ್ಷೆ ಕೊನೆಗೊಳ್ಳಬೇಕೆಂಬ ಅವಳ ಆಸೆಯನ್ನು ವೀಡಿಯೋ ಒಂದರಲ್ಲಿ ಹಂಚಿಕೊಂಡಿದ್ದಾಳೆ. ಸಾವಿರ ತಟ್ಟೆಗಳನ್ನು ಮಾಡುವ ಉದ್ದೇಶ ಅವಳಿಗಿದ್ದು ಅದನ್ನು ಮುಗಿಸಿ ತನ್ನ ಅರವತ್ತನೇ ವಯಸ್ಸಿನಲ್ಲಿ ಕಳೆದ ವರ್ಷವಷ್ಟೇ ಅವಳು ತೀರಿಕೊಂಡಿದ್ದಾಳೆ. ಸಾವು ಸೌಂದರ್ಯವಾಗಿ ಇಲ್ಲಿ ಅಮರವಾಗಿದೆ. ಆದರೆ ಅದು ತಂದು ಕೊಡುವ ಅನುಭವ ಮಾತ್ರ ಬೆನ್ನು ಹುರಿಯಲ್ಲಿ ನಡುಕ ಹುಟ್ಟಿಸುವಂತಹದ್ದು, ದಿಕ್ಕು ಕೆಡಿಸುವಂತಹದ್ದು. ಕಸಬ್ ತಪ್ಪೊಪ್ಪಿಗೆಯ ವೀಡಿಯೋ ನೋಡುವಾಗ ಕೂಡ ನನಗೆ ಇದೇ ರೀತಿಯ ನಡುಕ ಉಂಟಾಗಿದೆ. ಅಪರಾಧಿಗಳ ಬಗ್ಗೆ ಮರುಕವೆಂದಲ್ಲ. ಅವರು ಮಾಡಿದ ಪಾಪಕ್ಕೆ ಶಿಕ್ಷೆಯಾಗಲೇ ಬೇಕು. ಆದರೆ ಅಪರಾಧಕ್ಕೆ ತಳ್ಳುವ ವ್ಯವಸ್ಥೆಯೊಂದಿದೆಯಲ್ಲ? ಅದರ ಕ್ರೌರ್ಯದ ಬಗ್ಗೆ ಸಿಟ್ಟು. ದೊಡ್ಡ ಹಾಲ್ ನ ಆ ಮೆಟ್ಟಿಲ ಮೇಲೆ ಲಾಸ್ಟ್ ಸಪ್ಪರ್ ಕೆಳಗೆ ನಿಂತ ನನಗೆ ಇಡೀ ಮ್ಯೂಸಿಯಮ್ ಗರಗರನೆ ತಿರುಗಿ ಕಣ್ಣು ಕತ್ತಲಿಟ್ಟಂತಾಯಿತು. ಸಾವಿನ ದಟ್ಟ ವಾಸನೆ ಕಣ್ಣು, ಕಿವಿ ಮೂಗೊಳಗೆಲ್ಲ ತುಂಬಿಕೊಂಡ ಅನುಭವ, ಬಗೆ ಬಗೆಯ ಖಾದ್ಯ ತುಂಬಿದ ತಟ್ಟೆಯ ಒಳಗೆ ಸಾವಿನ ರುಚಿ ! ಸಾವು ಬಂದು ಮುಟ್ಟಿತೇನೋ....ಕೊನೆಯ ಊಟವನ್ನು ತಯಾರಿಸುತ್ತಿರುವ ತಾಯಿಯೋ ಹೆಂಡತಿಯೋ ಕಣ್ಣ ಮುಂದೆ ಕಪ್ಪು ನೆರಳಿನಂತೆ ಸುಳಿಯುತ್ತಾಳೆ... (ಇನ್ನು ನಾಳೆಗೆ.....) ಮೂರು ಚಿತ್ರಗಳು ಗೂಗಲ್ ಕೃಪೆ. ಬೆಲ್ ವ್ಯೂ ವಸ್ತು ಸಂಗ್ರಹಾಲಯ- ೨ ಬಿಡುಗಡೆಯ ಹವಾ ವಸ್ತು ಸಂಗ್ರಹಾಲಯದ ಮೊದಲ ಮಹಡಿಯಲ್ಲಿ ಸಾವಿನ ವಾಸನೆಯಾದರೆ ಎರಡನೆಯ ಮಹಡಿಗೆ ಬಂದರೆ ಮುತ್ತಿ ಮುಕುರುವ ಹಳೆಯ ವಾಸನೆ. ಹತ್ತೊಂಬತ್ತನೇ ಶತಮಾನದಲ್ಲಿ ಹುಟ್ಟಿಕೊಂಡ 'ಪುರಾತನರ ರಗಳೆಗಳು" ! ಮೊದಲ ಮಹಡಿಯಲ್ಲಿ ಭವಿಷ್ಯದ ಕೆಟ್ಟ ಕನಸಾದರೆ ಎರಡನೆಯ ಮಜಲಿನಲ್ಲೆಲ್ಲಾ ಭೂತದ ಸಂಚಾರ. ನಿಜವಾದ ಭೂತ ಸಂಚಾರ ಇನ್ನೂ ಮೇಲಿನ ಮಹಡಿಯಲ್ಲಿದೆ. ಅದಕ್ಕೆ ಆಮೇಲೆ ಬರುವೆ. ಎರಡನೆಯ ಮಜಲಿನಲ್ಲೆಲ್ಲಾ ಒಂದು ರೀತಿಯ ಬಿಡುಗಡೆಯ ಹವಾ! ಹತ್ತೊಂಬತ್ತನೆಯ ಶತಮಾನದಲ್ಲಿ ಹುಟ್ಟಿಕೊಂಡ ಹೊಸ ಮಹಿಳೆಯ ( New woman) ಪ್ರತೀಕವಾಗಿ ಈ ಮಹಡಿಯ ತುಂಬಾ ಫ್ರೆಂಚ್ ಫಲಕಗಳು! ಫ್ರಾನ್ಸಿನ ಬುಲವಾರಗಳಲ್ಲಿ ಬಹಳ ಪ್ರಸಿದ್ಧಿ ಪಡೆದ ಲಿತೋಗ್ರಾಫಿಕ್ ಚಿತ್ರಗಳು. ಆ ಕೋಣೆಯ ಹೆಸರೇ "The passion for th French Posters". ಲಿತೋಗ್ರಾಫಿಕ್ ಚಿತ್ರಗಳ ಹೆಸರಾಂತ ಕಲಾವಿದರ ಚಿತ್ರಗಳು ಇಲ್ಲಿವೆ. ಆಧುನಿಕ ಪೋಸ್ಟರ್ ಗಳ ಪಿತಾಮಹನೆಂದೇ ಖ್ಯಾತನಾದ ಜ್ಯೂಲ್ಸ್ ಕೆರೆಟ್ (Jules Chéret), ಮಹಿಳೆಯ ಸೌಂದರ್ಯದ ಶ್ರೀಮಂತಿಕೆಯನ್ನು ಅಭಿವ್ಯಕ್ತಿಸಿದ ಯೂಗಿನ್ ಗ್ರಸೆಟ್ (Eugène Grasset), ಮಹಿಳೆಯರ ಮಾದಕತೆಯನ್ನು , ಅವರ ಸುಳಿ ಸುಳಿಯಾಗಿ ಇಳಿಬಿದ್ದ ನೀಳಕೇಶವನ್ನು ಕಲಾತ್ಮಕವಾಗಿ ಬಯಲಾಗಿಸುವುದಕ್ಕೆ ಹೆಸರಾದ ಆಲ್ಫೋನ್ಸೆ ಮೂಖ (Alphonse Mucha); ತನ್ನ ಕಾಲದ ಜನಪ್ರಿಯ ಪ್ರತೀಕಗಳನ್ನು ಹೊರಗೆಡಹಿದ ಥೀಯೊಫಿಲ್- ಅಲೆಕ್ಸಾಂಡರ್ ಸ್ಟೆನ್ಲಿನ್ (Théophile-Alexandre Steinlen) ಕೊನೆಯದಾಗಿ ಆಧುನಿಕತೆಯೆಡೆಗೆ ದಾರಿ ತೋರಿದ ಹೆನ್ರಿ- ಲಾಟ್ರೆಕ್ ( Henri de Toulouse-Lautrec) ಇವರುಗಳ ಮರೆಯಲಾರದ ಮರೆಯಬಾರದ ಚಿತ್ರಗಳಿವೆ. ಪೋಸ್ಟರ್ ಕಲೆಯ ಪರಿಕಲ್ಪನೆಯ ವ್ಯಾಖ್ಯೆಯನ್ನು ಬರೆದ ಪ್ರಥಮರು ಇವರೆಂದು ಗುರುತಿಸಲಾಗುತ್ತದೆ. ಬೀದಿಯಲ್ಲಿ ಬಿಕರಿಯಾಗುವ ವೇಶ್ಯೆಯರಿಂದ ಹಿಡಿದು ಸೈಕಲ್ ತುಳಿಯುವ ಆಧುನಿಕ ಹೆಂಗಳೆಯರು ಇಲ್ಲಿದ್ದಾರೆ. ಉದ್ದ ಕೂದಲನ್ನು ಬಿರುಬಿಟ್ಟುಕೊಂಡ, ಅದನ್ನು ಆಭರಣಗಳಿಂದ ಅಲಂಕರಿಸಿಕೊಂಡ ಮಹಿಳೆಯರ ಆಧುನಿಕ ಉತ್ಸವ ಇಲ್ಲಿ ಕಂಡು ಬರುತ್ತದೆ. ನಾವು ಚಿತ್ರಗಳನ್ನು ನೋಡುತ್ತಿರುವಾಗ ರೊಬೆರ್ಟಾ (Roberta) ಎನ್ನುವ, ಹೆಚ್ಚು ಕಮ್ಮಿ ನನ್ನದೇ ವಯಸ್ಸಿನ ಒಬ್ಬ ಅಮೇರಿಕನ್ ಮಹಿಳೆ ಎದುರಾದಳು. ವಸ್ತುಸಂಗ್ರಹಾಲಯದ ಸಿಬ್ಬಂದಿ ವರ್ಗದವಳಿರಬೇಕು. "ಇಲ್ಲಿನ ಪೇಂಟಿಂಗ್ ಬಗ್ಗೆ ಏನಾದರೂ ಹೇಳಲು ಸಾಧ್ಯವೇ?" ಎಂಬ ನಮ್ಮ ಕೋರಿಕೆಗೆ ನಮ್ಮ ಉತ್ಸಾಹವನ್ನೂ ಮೀರಿಸುವಂತೆ ಎಲ್ಲಾ ಕಡೆ ಸಣ್ಣ ಹುಡುಗಿಯ ಹಾಗೆ ನಮ್ಮನ್ನು ಎರಡನೆಯ ಮಹಡಿಯ ಕೋಣೆ ಕೋಣೆಗಳಲ್ಲಿ ಓಡಾಡಿಸಿದಳು. ವಿವರಿಸಿದಳು. 'women trade' ಎಂದು ಕೈ ತೋರಿಸುತ್ತಾ ಒಂದು ಚಿತ್ರದ ಮುಂದೆ ನಿಲ್ಲಿಸಿದಳು. ಆ ಚಿತ್ರದಲ್ಲಿ , ಒಂದು ಬದಿಗೆ ಸಿಗರೇಟು ಸೇದುತ್ತಿರುವ ವಿಟಪುರುಷ, ನೆಲದ ಮೇಲೆ‌ ಬಿದ್ದು ಅಳುತ್ತಿರುವ ಮೈಪೂರ್ತಿ ಮುಚ್ಚಿಕೊಂಡ ಹೆಣ್ಣು ಮಗಳು, ಇನ್ನೊಂದೆಡೆ ಜಗಳವಾಡುತ್ತಿರುವ ಮಹಿಳೆ ಮತ್ತು ಅವಳ ಹಿಂಬದಿಗೆ ಆಧುನಿಕ ಉಡುಪು ಧರಿಸಿದ ಇನ್ನೊಬ್ಬ ಮಾರಾಟದ ಹೆಣ್ಣು. ಚಿತ್ರದಲ್ಲಿ ಮಾರಾಟವಾಗುತ್ತಿರುವ ಹುಡುಗಿಗೆ ಮೂಲ ಕಥೆಯಲ್ಲಿ ಮೇಲುದವಿಲ್ಲದೇ ಬತ್ತಲೆ (ಸೊಂಟದಿಂದ ಮೇಲಕ್ಕೆ) ಇದ್ದಳಂತೆ. ಅಶ್ಲೀಲ ಎನ್ನುವ ಕಾರಣದಿಂದ ತನ್ನ ಚಿತ್ರ ಬಹಿಷ್ಕಾರಕ್ಕೆ ಒಳಗಾಗಬಹುದು ಎಂದು ಹೆದರಿ ಅವಳಿಗೆ ಒಂದು ರವಿಕೆಯಂತಹ ಉಡುಪನ್ನು ಕಲಾವಿದ ಅಲೆಕ್ಸಾಂಡರ್ ಸ್ಟೆನ್ಲಿನ್ ತೊಡಿಸಿದನಂತೆ. ಇನ್ನೊಂದು ಚಿತ್ರದಲ್ಲಿ ಬೈಸಿಕಲ್ ಸವಾರಿ ಮಾಡುವ ಹುಡುಗಿ. ಇದು ಸೈಕಲ್ ನ ಜಾಹೀರಾತು. ಈ ಚಿತ್ರದಲ್ಲಿ ರಸ್ತೆಯಲ್ಲಿರುವ ಬಾತುಗಳು ಚಲ್ಲಾಪಿಲ್ಲಿಯಾಗಿ ಚದುರಿವೆ. ದಾರಿಹೋಕರು ಮೂಗಿನ ಮೇಲೆ ಬೆರಳಿಟ್ಟು ಸೈಕಲ್ ಮೇಲೆ‌ ಬರುತ್ತಿರುವ ಹುಡುಗಿಯನ್ನು ನೋಡುತ್ತಿದ್ದಾರೆ. ಹೆಣ್ಣಿಗೆ ಸೈಕಲ್ ಬಿಡುಗಡೆಯ,‌ಸ್ವಾತಂತ್ರ್ಯದ ಒಂದು ಸಂಕೇತ. ನಾನು ೧೯೭೩-೭೪ ರಲ್ಲಿ ಸಕಲೇಶಪುರದಲ್ಲಿ ಸೈಕಲ್ ಓಡಿಸುವಾಗ ಜನ ಕೋತಿ ಕುಣಿಸುವುದನ್ನು ನೋಡುವಂತೆ ಸುತ್ತ ನಿಂತು ನೋಡುತ್ತಿದ್ದರು. ಆಗ ನನಗಾದ ಮುಜುಗರವನ್ನು ಬೇರೆಡೆ ಬರೆದುಕೊಂಡಿದ್ದೇನೆ. ಆಧುನಿಕತೆಯನ್ನು ಅದರಲ್ಲೂ ಮಹಿಳೆಯರು ಆಧುನಿಕವಾಗುವುದನ್ನು ನಮ್ಮ ಸಮಾಜ ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ಹೀಗೆ ಸೈಕಲ್ ಸವಾರಿಮಾಡುತ್ತಿರುವ ಹುಡುಗಿಯರ ಚಿತ್ರಗಳು ಬಹಳ ಇದ್ದವು . ಒಂದೇ ಕೋಣೆಯಲ್ಲಿ ಮಾರಾಟಕ್ಕೆ ಇಟ್ಟ ಹುಡುಗಿ‌ ಮತ್ತು ವಿದ್ಯಾವಂತಳಾಗಿ ಕಾಣುವ ಸೈಕಲ್ ಹೊಡೆಯುವ, ಕೂದಲನ್ನು ಬಿರು ಬಿಟ್ಟುಕೊಂಡ , ಗತ್ತಿನಿಂದ ಸಿಂಹಾಸನದ ಮೇಲೆ ಕುಳಿತುಕೊಂಡ ಹುಡುಗಿಯ ಚಿತ್ರಗಳು ಇದ್ದುದು ಕಾಕತಾಳೀಯವಲ್ಲ ಎನಿಸಿತು. ವಿದ್ಯೆ, ಆಧುನಿಕತೆ ಹೆಣ್ಣಿಗೆ ಬಿಡುಗಡೆಯ ಸಾಧನ, ಸ್ವಾತಂತ್ರ್ಯ ಮತ್ತು ಅಧಿಕಾರಕ್ಕೆ ದಾರಿ ಎಂಬುದನ್ನು ಇಲ್ಲಿನ ಒಟ್ಟು ಚಿತ್ರಗಳು ಹೇಳುತ್ತಿವೆ ಎನಿಸಿತು. ರಾಬರ್ಟೊ ಬಹಳ ಉತ್ಸಾಹದಿಂದ ನಮಗೆ ವಿವರಿಸಿದಳು. ಅವಳ ಉಚ್ಚಾರಣೆಯಲ್ಲಿ ನಾನು ಅರ್ಥಮಾಡಿಕೊಂಡಿದ್ದೆಷ್ಟೋ? ಆದರೆ ಕೊರಗಿರಲಿಲ್ಲ. ಗೂಗಲ್ ಮಾಮಿ ಹೇಗೂ ಇದ್ದಾಳಲ್ಲಾ ಅನುಮಾನ ಪರಿಹಾರಕ್ಕೆ. ಹೊರಡುವಾಗ ಅವಳು "you are wearing a nice" ಎನ್ನುತ್ತಾ ತನ್ನ ಸೊಂಟದ ಬಲಭಾಗದಿಂದ ಎಡ ಭುಜದವರೆಗೆ ತನ್ನ ಕೈ ಸವರಿಕೊಂಡಳು. "This is Saree..... We are Indians" ಎಂದು ನಾನೂ ನನ್ನ ಸೆರಗು, ನೆರಿಗೆಗಳನ್ನು ಅವಳ ಮುಂದೆ ಹಿಡಿದೆ. (ಸೀರೆಯೆಂದರೆ ಸೆರಗೇ ತಾನೇ? ಅದಕ್ಕೆಂದೇ ಸ್ಟೆನ್ಲಿನ್ ತನ್ನ ಚಿತ್ರದೊಳಗಿನ ಹೆಣ್ಣಿನ ಬತ್ತಲೆ ಎದೆಯನ್ನು ಮುಚ್ಚಲಿಲ್ಲವೇ?) ಅವಳ ನಾಲಗೆಯಲ್ಲಿ ಮತ್ತೊಮ್ಮೆ Wow, very nice ಎಂದು ಹೇಳುತ್ತಾ ಬಹಳ ಖುಷಿಯಿಂದ ತನ್ನ ಕೋಣೆಯೊಳಗೆ ಹೊಕ್ಕಳು. ನಾನು ನಿಮ್ಮಫೋಟೋ ತೆಗೆದು ಕೊಡಲೇ ಎಂದು ಇನ್ನೊಬ್ಬ ಅಮೇರಿಕೀ ಮಹಿಳೆ ಮುಂದೆ ಬಂದಳು. ನಾವು ಹೋದ ಕಡೆಯಲ್ಲಾ ಹೀಗೆ "together , photo?" ಎಂದು ತಾವಾಗಿಯೇ ಮುಂದೆ ಬಂದು ನಮ್ಮ ಫೋಟೋ ತೆಗೆದವರು ಬಹಳ. In ಬೆಲ್ ವ್ಯೂ ವಸ್ತು ಸಂಗ್ರಹಾಲಯ ಭಾಗ-೩ ಇಳಿಬಿಟ್ಟ ಕಣ್ಣ ಪರದೆಗಳು ವಸ್ತುಸಂಗ್ರಹಾಲಯ ದ ಮೂರನೆಯ ಮಹಡಿಗೆ ಏರಿದೆವೆಂದರೆ ನಮ್ಮನ್ನು ಸ್ವಾಗತಿಸುವುದು ಜೋಯ್ ವೆಲ್ಟ್ ಕಂಪ್ (Joey Veltkamp) ಎಂಬ ಕಲಾವಿದನ "SPIRIT" ಇದು "ಕೌದಿ"ಯ ಚೇತನ. ಈ ಚೈತನ್ಯ ಪೆಸಿಫಿಕ್ ನ ವಾಯವ್ಯ ವಲಯದ ಗ್ರಾಮೀಣ ವೈಭವನ್ನು ಸಾರುತ್ತದೆ. ಜೋಯ್ ವೆಲ್ಟ್ ಕಂಪ್ ( ತನ್ನನ್ನು ತಾನು ಜಾನಪದ ಕಲಾವಿದನೆಂದು ( folk artist) ಕರೆದುಕೊಳ್ಳುತ್ತಾನೆ. ಅವನು ಈ ಪ್ರದೇಶಗಳಲ್ಲಿ ಕೌದಿ ಕಲಾವಿದನೆಂದೂ ( quilt artist) ಹೆಸರಾಗಿದ್ದಾನೆ. ಕಂಪ್ ನಿಗೆ ತಾನು 'ಅವನಲ್ಲ ಅವಳು' ಎಂಬ ಅರಿವು ಹತ್ತಿದಾಗಿನಿಂದ ಅವನೊಳಗೆ ತಾಯಿ ಮತ್ತು ತಾಯಿನೆಲ ಜಾಗೃತವಾಗತೊಡಗಿತು. ಅವನನ್ನು queer (gay) folk artist ಎಂದೇ ಗುರುತಿಸಲಾಗುತ್ತದೆ. ಪೆಸಿಫಿಕ್ ನ ವಾಯುವ್ಯ ಪರಿಸರದ ಪ್ಯೂಜೆಟ್ ಸೌಂಡ್ ಪ್ರದೇಶದಲ್ಲಿರುವ ಮನೋಹರ ನಿಸರ್ಗದಿಂದ ಪ್ರಭಾವಿತನಾದವನು. ಅಲ್ಲಿನ ಜನರ ವಿಶಿಷ್ಟವಾದ ಸ್ವಭಾವ ಜೀವನ ಪದ್ಧತಿಯ ಬಗೆಗಿನ ನೆನವರಿಕೆ ಅವನ ರಚನೆಗಳಲ್ಲಿ ಕಂಡು ಬರುವ ಪ್ರಮುಖ ಅಂಶಗಳು. ಅವನ ಪ್ರಕಾರ "ಸ್ಪಿರಿಟ್ " ಎಂದರೆ ತಾಯ್ನಾಡಿಗೆ ಮರಳುವುದು, ಬಾಲ್ಯದ ಹುರುಪು, ಅಮೆಚೂರ್ ಥಿಯೇಟರ್, ಜೊತೆಗೆ ಅಲೆಮಾರಿಯ ಆನುಭಾವಿಕತೆ ( Mysric hippie spiritualty). ಈ ಎಲ್ಲವೂ ಅವನ ಕಲಾಕೃತಿಗಳಲ್ಲಿ ಮುಪ್ಪುರಿಗೊಂಡು ವ್ಯಕ್ತವಾಗಿವೆ. ಗಂಡಸಾಗಿ ಹುಟ್ಟಿದ ಕಂಪ್ ನಿಗೆ ಆಪ್ತ ಕೌಟುಂಬಿಕ ಗೃಹವಾದಿನಿಯ ಬಿಸುಪಿನ ಅಮಲೇರಿತು. ಅದರ ಪ್ರತೀಕವಾಗಿ ಅವನು ತನ್ನ ನಲವತ್ತನೇ ವರುಷದಿಂದ ಕೌದಿಗಳನ್ನು ಹೊಲಿಯತೊಡಗಿದ. ಕೌದಿ ಎಂದರೇನೆ ಅವ್ವನ ಬಿಸುಪು ಹೊತ್ತ ಹೊದಿಕೆ! ಅವ್ವನೆಂದರೆ ಬೆಚ್ಚಗಿನ ಮನೆ, ರುಚಿಯಾದ ಊಟ, ಎಣೆಯಿಲ್ಲದ ಪ್ರೀತಿ! ಆದುದರಿಂದಲೇ ಇವನ ಕೌದಿಗಳಲ್ಲಿ ತನ್ನ ತವರಿನ ಹಣ್ಣು ಹಂಪಲು ತರಕಾರಿಗಳು, ಬೀದಿ ವ್ಯಾಪಾರಿಗಳು, ಪ್ರಾಣಿ ಪಕ್ಷಿಗಳು ಜಾಗಪಡೆದಿವೆ. ಕೌದಿಯ ಮೂಲಕ ಕೋಮಲತೆ ಮತ್ತು ಹೆಣ್ಣುತನ ವನ್ನು (soft and feminine) ಬಯಲಾಗಿಸುವುದು ಇವನ ಉದ್ದೇಶ. ಅನೇಕ ವೇಳೆ ಮೇಲುನೋಟಕ್ಕೆ ಅಸಂಬದ್ಧ, ಅಪ್ರಸ್ತುತವೆನಿಸುವ ಇವು ವಿಕೃತ ಹಾಸ್ಯಗಳಿಂದಲೂ ಕೂಡಿವೆ. ಅತೀಂದ್ರಿಯ ವಾಸ್ತವಿಕತೆಯನ್ನು ಕೇಂದ್ರೀಕರಿಸಿಕೊಂಡಿರುವ (surrealism) ಇವನ ಕಲಾಕೃತಿಗಳು ಜಾಗರೂಕತೆ (watchfulness), ಅನುಭಾವಿಕ (spirituality), ಅನಿತ್ಯ (changeability) ದ ಪರಿಕಲ್ಪನೆಗಳನ್ನು ಪ್ರತಿನಿಧಿಸುತ್ತದೆ. ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಇವು ಕೇವಲ ಬಟ್ಟೆಯ ತುಣುಕುಗಳ ಜೋಡಣೆಗಳಷ್ಟೇ ಅಲ್ಲ ಅಪ್ರತಿಮ ಕಲಾಕೃತಿಗಳೂ ಆಗಿವೆ. ಅವುಗಳನ್ನು ಕಂಪ್ ಬಣ್ಣದ ಚಿತ್ರಗಳೆಂದೇ ಕರೆಯುತ್ತಾನೆ ( colour paintings). ಅಭೌತಿಕ ಸಂಗತಿಗಳಿಂದ ಹಿಡಿದು ಮಣ್ಣಿನ ಸಣ್ಣ ಸಣ್ಣ ವಿವರಗಳವರೆಗೆ ಇವನ ಕಲೆಯ ವಿಷಯ ಹರಡಿದೆ. ಇಲ್ಲಿ ಒಂದು ಕಡೆ ಬಿಳಿಯ ನೈಲಾನು ಬಟ್ಟೆಗಳ ಮೇಲೆ ವಿಧ ವಿಧವಾದ ತೆರೆದ ಕಣ್ಣುಗಳನ್ನು ಹೊಲಿದ ಹಲವಾರು ಪರದೆಗಳ ಅನುಸ್ಥಾಪನೆಗಳು ( Installations) ಕೋಣೆಯ ತುಂಬಾ ಇಳಿ ಬಿದ್ದಿವೆ. ಇಲ್ಲಿನ ಕೌದಿಗಳಲ್ಲಿ ತರಹೇವಾರಿ ಗೂಬೆಗಳದ್ದೇ ಮೇಲುಗೈ. ಇವು ಗೂಬೆಯ ಕಣ್ಣುಗಳೂ ಹೌದು. ಗೂಬೆ ಸಾವಿನ, ಅನ್ಯಲೋಕದ, ಶಕುನಗಳ, ಮಾಟಮಂತ್ರದ ಸಂಕೇತವೂ ಹೌದು. ಲೈಂಗಿಕ ಸಂಬಂಧಗಳ ಪ್ರತೀಕವೂ ಆಗಿದೆಯಂತೆ! ಈ ಕಣ್ಣುಗಳು ಅನೇಕ ದೇಹಗಳಲ್ಲಿ ಸಾಗುವ ಆತ್ಮದ ಪ್ರಯಾಣದ ಸಂಕೇತವೂ ಆಗಿದೆ. ಈ ಕಣ್ಣುಗಳು ದೇವರ ಕಣ್ಣುಗಳಾಗಬಹುದು, ಅನ್ಯ ಲೋಕದ ಅಥವಾ ದೆವ್ವದ ಕಣ್ಣುಗಳಾಗಬಹುದು. ಕಲಾವಿದನ, ದೆವ್ವಗಳು, ಗೂಬೆಗಳು ಮತ್ತು ಟ್ವಿನ್ ಪೀಕ್ಸ್ ನ ಕಲಾಕೃತಿಗಳ ಮೂಲ ಈ ಕಣ್ಣುಗಳೇ ಆಗಿವೆ.ಕಂಪ್ ನಿಗೆ ದೆವ್ವಗಳನ್ನು ರಚಿಸುವ ಗೀಳು 2008 ರ ಸುಮಾರಿಗೆ ಹುಟ್ಟಿಕೊಂಡಿತಂತೆ.... ಇಲ್ಲಿ ಕೆಲವು ಕಣ್ಣುಗಳಿಗೆ ಗುಡ್ಡೆಯೇ ಇಲ್ಲ. ಗುಳಿಬಿದ್ದ ಇಂತಹ ಕಣ್ಣುಗಳನ್ನು ದೆವ್ವದ ಪೋಷಾಕುಗಳನ್ನು ತಯಾರಿಸಲು ಉಪಯೋಗಿಸಲಾಗುತ್ತಿದ್ದುವಂತೆ. ದೆವ್ವವೋ,ದೇವರೋ, ಅನ್ಯಲೋಕದ ಜೀವಿಗಳೋ? ಒಟ್ಟಿನಲ್ಲಿ ನಾವು ಯಾರದೋ "ಕಣ್- ಕಟ್ಟಿ"ನೊಳಗೆ ಸದಾ ಇದ್ದೇವೆ ಎಂಬುದನ್ನು ಇದು ವ್ಯಕ್ತಪಡಿಸುತ್ತದೆ. ಗೂಬೆಗಳು ಮತ್ತು ಕಣ್ಣುಗಳ ಕೌದಿಗಳ ಅನುಸ್ಥಾಪಗಳು ಇಳಿ ಬಿದ್ದಿರುವುದು ಒಂದು ಕಡು ಕೆಂಪಾದ ಕೋಣೆಯಲ್ಲಿ. ಈ ಕೆಂಪು ಕೋಣೆ, ಕಾಲ ದೇಶಗಳ ಅರ್ಥಕಳೆದುಕೊಂಡ ಕನಸಿನ ಅಪೂರ್ವ ಆಯಾಮವನ್ನು ವ್ಯಕ್ತಪಡಿಸುತ್ತದೆ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.ಈ ಇನ್ಸ್ಟಲೇಷನ್ ಗಳು ದೆವ್ವಗಳ ದೃಷ್ಟಿ ಮತ್ತು ನೆನಪುಗಳ ಲೋಕಕ್ಕೆ ಕಟ್ಟಿದ ಪರದೆಯಾಗಿವೆ. ಇದೇ ಮಹಡಿಯಲ್ಲಿ ಪ್ಯಾಟ್ ಲೋಪರ್ ( Patte Loper) ನ ಪ್ರಯೋಗಾಲಯವೊಂದಿದೆ. ಮನುಷ್ಯ ತನ್ನ ಹೊರತಾಗಿ ಬೇರೆ ಜೀವ ಸಂಕುಲಗಳು ಇವೆ ಎಂಬುದನ್ನೇ ಮರೆತಂತಿದೆ. ಅದರತ್ತ ಗಮನ ಹರಿಸುವುದರ ಸಲುವಾಗಿ "Other worlds" ಎನ್ನುವ ಶೀರ್ಷಿಕೆಯಡಿ ಮನುಷ್ಯನಿಗೆ ಪ್ರಾಣಿ ಮತ್ತು ನಿಸರ್ಗದೊಡನೆ , ಇತರ ಜೀವ ಜಡಗಳೊಡನೆ ಇರುವ ಅವಿನಾ ಸಂಬಂಧವನ್ನೂ ಇವು ವ್ಯಕ್ತಪಡಿಸುತ್ತವೆ. ನಾವು ಸತ್ತನಂತರ ಮಣ್ಣಲ್ಲಿ ಮಣ್ಣಾಗುವ ಪರಿಯನ್ನು ಮಣ್ಣಿನಿಂದಲೇ ಜೀವ ಚಕ್ರ ಮತ್ತೆ ಪ್ರಾರಂಭವಾಗುವ ಪರಿಯನ್ನು ಇಲ್ಲಿನ ಪ್ರೊಜೆಕ್ಟರ್ ನಲ್ಲಿ ಅನಿಮೇಷನ್ ಮೂಲಕ ತೋರಿಸಲಾಗುತ್ತದೆ. ಜೋಯ್ ವೆಲ್ಟ್ ಕಂಪ್ ನ ಕೆಂಪು ಕೋಣೆಯ ಬದಿಯಲ್ಲಿಯೇ ಪ್ಯಾಟ್ ಲೋಪರ್ ನ ಪ್ರಯೋಗಾಲಯವನ್ನು ಇಟ್ಟಿರುವುದಕ್ಕೆ ಕಾರಣ ಈ ಬಹುಶಃ ಇಬ್ಬರೂ ಕಲಾವಿದರೂ ಜಾಗರೂಕತೆ (watchfulness), ಅನುಭಾವ (spirituality), ಅನಿತ್ಯ (changeability) ದ ಪರಿಕಲ್ಪನೆಗಳನ್ನೇ ವ್ಯಕ್ತಪಡಿಸುತ್ತಿದ್ದಾರೆ ಎಂದಿರಬಹುದು. Aug 9 ಸೈಕಲ್ ವಾಸನೆ.... ನನ್ನ ಮಗ ಇರುವ ಸಿಯಾಟಲ್ ನ ಬೆಲ್ ವ್ಯೂ ಎನ್ನುವ ಪ್ರದೇಶದ ಬಳಿ ದಿನಾ ಬೆಳಿಗ್ಗೆ ಮತ್ತು ಸಂಜೆ ನಾವು ವಾಯುವಿಹಾರಕ್ಕೆ ಹೋಗುವಾಗ ಒಂದು ಸೈಕಲ್ಲು ಕಣ್ಣಿಗೆ ಬೀಳುತ್ತದೆ. ಹೊಸತಾದ ತಿಳಿ ಹಸಿರು, ಬಿಳಿ ಬಣ್ಣದ ಸೈಕಲ್ಲು ! ಅದರ ಬಾರ್ ನ ಮೇಲೆ LIME ಎಂಬ ಹೆಸರಿದೆ. ಸ್ವೀಡನ್ ಲೈನ್ಸ್ ಡಾಟ್ ಕಾಮ್ ಎಂದೇನೋ ಬರೆದಿದೆ. ಹ್ಯಾಂಡಲ್ ಕೆಳಗೆ ಒಂದು ತಿಳಿ ಹಸಿರು ಬಣ್ಣದ ಬುಟ್ಟಿ. ಅದರ ಕೆಳಗೆ ಫಳ ಫಳ ಹೊಳೆಯುವ ಡೈನಮೋ! ಈಗಷ್ಟೇ ಮಾರುಕಟ್ಟೆಯಿಂದ ಬಂದಂತಿರುವ ಇದು ಸುಮಾರು ಹದಿನೈದು ದಿನಗಳಿಂದ ದಾದ್ ಫಿರ್ಯಾದುಗಳಿಲ್ಲದೆ ನಿಂತಲ್ಲೇ ನಿಂತಿದೆ ಫುಟ್ ಪಾತಿನ‌ಮೇಲೆ! ಪಡ್ಡೆ ಹುಡುಗರ ಪ್ರಾಣಪ್ರಿಯವಾದ, ಗಾಳಿಯಲ್ಲಿ ಸವಾರಿ ಮಾಡಿಕೊಂಡು ಹೋಗುವ ಸೈಕಲ್, ಎಷ್ಟು ಆಧುನಿಕವಾಗಿ ಸೊಟ್ಟಗೆ ಬಾಗಿ ನಿಂತಿದೆ! ಪಕ್ಕದಲ್ಲೇ ಮುಖ್ಯ ರಸ್ತೆಯ ಮೇಲೆ ದುಬಾರಿ ಕಾರುಗಳು ಸುಂಯ್ ಎಂದು ಜಾರಿಹೋಗುತ್ತಿವೆ. ಅವುಗಳ ಸೊಕ್ಕಿಗೆ ಸಾಕ್ಷಿಯಾಗಿ 'ಬಾಲ' ಬಾಹುಬಲಿಯಂತೆ ಇದು ನಿಂತೇ ಇದೆ. ಅಥವಾ ತನ್ನ ಸೈಕಲ್ಲಿನ ಲಡಾಸುತನಕ್ಕೆ ಹೇಸಿ ಅದನ್ನು ಒದ್ದು ಯಾವುದೋ 'ಫೆರಾರಿ'ಯನ್ನು ಹತ್ತಿಕೊಂಡು ಹೋಗಿಬಿಟ್ಟಿರಬಹುದೇ, ಅದರ ಸವಾರ? ಹೀಗೆ ತಾನು ಹೆತ್ತ ಮಗುವನ್ನು ಅನಾಥವಾಗಿ ಬಿಟ್ಟು ಹೋಗುವಂತೆ ಹೋದ ಇದರ ಒಡೆತಿ/ಒಡೆಯ ಯಾರಿರಬಹುದು? ಯಾರು ಬಿಟ್ಟು ಹೋಗಿರಬಹುದು? ಇಷ್ಟು ಹೊಸ ಸೈಕಲ್ಲನ್ನು ಬೇಕೆಂದೇ ಬಿಟ್ಟು ಹೋಗಿದ್ದಾರೆಯೇ? ಅಥವಾ ಯಾವುದೋ ತುರ್ತು ಕೆಲಸಕ್ಕೆಂದು ನಿಲ್ಲಿಸಿ ಹೊರಟವರು ಮರಳಿ ಬಾರದೇ ಕಳೆದು ಹೋಗಿರಬಹುದೇ? ಜೀವಕ್ಕೇನಾದರೂ ಅಪಾಯವಾಗಿರಬಹುದೇ? ಅದು ಹುಡುಗಿಯೊಬ್ಬಳ ಸೈಕಲ್ಲಾಗಿರಬಹುದೇ? ಅವಳನ್ನೇನಾದರೂ ಅಪಹರಿಸಿರಬಹುದೇ? ಯಾರಾದರೂ ಈ ಫುಟ್ ಪಾತನ್ನೇ ಪಾರ್ಕಿಂಗ್ ಜಾಗವನ್ನು ಮಾಡಿಕೊಂಡಿರಬಹುದು ಎಂದು ಊಹಿಸುವ ಹಾಗೂ ಇಲ್ಲ. ಯಾಕೆಂದರೆ ಪ್ರತಿ ಬೆಳಿಗ್ಗೆ ಮತ್ತು ಸಂಜೆಯ ವೇಳೆಗಳಲ್ಲೂ ಅದು ಅಲ್ಲೇ ಸ್ಥಾಪಿತವಾಗಿದೆ. ನಮ್ಮ ದೇಶವಾಗಿದ್ದರೆ ಇಷ್ಟು ಹೊತ್ತಿಗೆ ಈ ಚಂದದ ಸೈಕಲ್ ನ್ನು ಯಾರಾದರೂ ಎಂದೋ ಎಗರಿಸಿ ಬಿಡುತ್ತಿದ್ದರು ಎಂದು ವಾದಹೂಡಿದರೆ ಇದರ ಜೊತೆಗೆ ಕೊಕ್ಕೆ ಹಾಕಿಕೊಳ್ಳುವ ಕತೆಯ ಸೂಕ್ಷ್ಮ ನವಿರು, ನಲಗು, ಸಂಕಟ ಮಾಯವಾಗಿಬಿಡುತ್ತದೆ. ಪ್ರತಿ ನಿತ್ಯ ಬೆಳಿಗ್ಗೆ ಸಂಜೆ ಎದುರಾಗುತ್ತದೆ 'ಮುಂಡೇದು' ಎಷ್ಟು ಮುದ್ದಾಗಿದೆ! ಅನಾಥವಾಗಿ ಬಿದ್ದಿದೆ. ಇನ್ನು ಆ ಕಡೆಗೆ ಹೋಗಲೇಬಾರದು ಎನ್ನುತ್ತದೆ ಮನಸ್ಸು. ಆದರೆ ಕಾಲುಗಳು ಅರಿವಿಲ್ಲದೇ ಆ ಕಡೆ ಚಲಿಸುತ್ತವೆ. ದಿನನಿತ್ಯದ ಅಗತ್ಯಗಳಿಗೆ ಸಿಯಾಟಲ್ ನ ರಸ್ತೆಗಳಲ್ಲಿ ಓಡಾಡುವಾಗ, ಆ ಸೈಕಲ್ ಸವಾರನಿಗಾಗಿ ಕಣ್ಣುಗಳು ತಡಕಾಡುತ್ತವೆ. ಚಡ್ಡಿ ತೊಟ್ಟ ಪಡ್ಡೆ ಹುಡುಗರು ಎದುರಾಗುತ್ತಾರೆ. ನಲವತ್ತೇಳು ವರುಷಗಳ ಹಿಂದೆ ಬೆಂಗಳೂರಿನಲ್ಲಿ, ಆಫೀಸಿನಿಂದ ಬರುವಾಗ ಅಣ್ಣ ಬಸ್ಸಿನಡಿಗೆ ಸೈಕಲ್ ಸಮೇತ ಬಿದ್ದಿದ್ದ. ಅವನು ಆಗ ಓದುತ್ತಿದ್ದ ಕೆ.ಎಂ. ಮುನ್ಶಿಯವರ 'ಕೃಷ್ಣಾವತಾರ" , ಮಹಜರು ಮಾಡುವಾಗ ಸೈಕಲ್ ಅಡಿ ಸಿಕ್ಕಿತಂತೆ! ನಿಮ್ಹಾನ್ಸ್ ನಲ್ಲಿ ತಲೆತುಂಬಾ ಬ್ಯಾಂಡೇಜು ಕಟ್ಟಿಕೊಂಡು ಹೆಣವಾಗಿ ಮಲಗಿದ ಅಣ್ಣ, ಅಮೇರಿಕಾದ ಆಧುನಿಕ ರಸ್ತೆಯ ಮೇಲೆ, ಸೈಕಲ್ ಓಡಿಸುತ್ತಾ ಗಾಳಿಯಲ್ಲಿ ತೇಲುತ್ತ ಬರುತ್ತಾನೆ. ಕಿವಿಯೊಳಗೆಲ್ಲ ಟ್ರಿಣ್ ಟ್ರಿಣ್ ಸದ್ದು...., May 27 "ಸಾಗರಕ್ಕೆ ಸಾಗರವೇ ಉಪಮೆ"' 'ಸಾಗರ' ಈ ಶಬ್ದವನ್ನು ಆತ್ಮಸಾತ್ ಮಾಡಿಕೊಳ್ಳಬೇಕೆಂದರೆ ಸಾಗರದ ಮಧ್ಯಕ್ಕೆ ಬಂದು ನಿಲ್ಲಬೇಕು. ಜನಸಾಗರ, ಕರುಣಾಸಾಗರ, ಪ್ರೇಮಸಾಗರ ಇಂತಹ ಶಬ್ದಗಳನ್ನೆಲ್ಲಾ ಸಾಗರವನ್ನು ನೋಡದೆಯೇ ಚರ್ವಿತ ಚರ್ವಣವಾಗಿ ಬಳಸಿಬಿಡುತ್ತೇವೆ. ಅದರ ಅನುಭೂತಿಯಾಗಬೇಕೆಂದರೆ ಅದರ ಭೂಮಸದೃಶ ಆಕೃತಿಯ ಒಳಗೆ, ಒಂದು‌ ಸುರಕ್ಷಿತ ದೂರದಲ್ಲಿ ನಿಂತರೆ ಮಾತ್ರ ಭೂಮಾನುಭೂತಿ ಕಣ್ಮನಗಳಿಗೆ ಹತ್ತಬಹುದು. ಇಲ್ಲದಿದ್ದರೆ ಸೌಂದರ್ಯಕ್ಕೂ, ಸಾವಿಗೂ ನಡುವೆ ಒಂದೇ ನೆಗೆತ ಸಾಕು. ಪ್ರಾಚೀನ ಕಾವ್ಯಗಳಲ್ಲಿ ಅಷ್ಟಾದಶವರ್ಣನೆಯ ಭಾಗವಾಗಿ ಸಮುದ್ರದ ವರ್ಣನೆ ಕಡ್ಡಾಯವಾಗಿ ಇರಲೇಬೇಕೆಂಬ, ಇದ್ದರೆ ಮಾತ್ರ ಪರಿಪೂರ್ಣ ಕಾವ್ಯವಾಗುತ್ತದೆ ಎಂಬ ನಿಯಮವಿತ್ತು. ಈ ನಿಯಮವನ್ನು ಪೂರ್ಣಗೊಳಿಸಬೇಕೆಂಬ ಹಟದಲ್ಲಿ ಸಮುದ್ರವನ್ನು ನೋಡದೆಯೇ ಕವಿಗಳು ಸಮುದ್ರವನ್ನು ಕಾಲ್ಪನಿಕವಾಗಿ ಹಿಡಿಯುವ ಭರದಲ್ಲಿ ಅವುಗಳೊಳಗೆ ಕಮಲಗಳನ್ನು ಸೃಷ್ಟಿಸಿ ಔಚಿತ್ಯಭಂಗ ಮಾಡಿದುದೂ ಇದೆ. ನಿಜವಾಗಿ ಸಾಗರವನ್ನು ಅತ್ಯಂತ ಶಕ್ತಿಯುತವಾಗಿ ಹಿಡಿಯಲು ಪ್ರಾಚೀನ ಕವಿಗಳಲ್ಲಿ ಸಾಧ್ಯವಾಗಿರುವುದು ನಮ್ಮ ರತ್ನಾಕರವರ್ಣಿಗೆ ಮಾತ್ರ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅವನ ಹೆಸರೇ ರತ್ನಾಕರ!! ರತ್ನಾಕರವರ್ಣಿ ಸಾಗರದ ಪಕ್ಕದಲ್ಲೇ (ಮೂಡುಬಿದಿರೆ) ಬೆಳೆದವನು. "ತೆರೆ ತೆರೆ ಹೆದ್ದೆರೆ" ಹೀಗೆ ತೆರೆಗಳು ಒಂದನ್ನೊಂದು ಅಟ್ಟಿಸಿಕೊಂಡು ಓಡಿ ಆಡುವ ಆಟವನ್ನು ಕಣ್ಣಾರೆ ಕಂಡವನು! ಅದಕ್ಕೂ ಮೊದಲು "ನಿಚ್ಚಂ ಪೊಸತು ಆರ್ಣವಂಬೊಲ್" ಎಂದು ಪಂಪ ಹೇಳುತ್ತಾನೆ. ಕನ್ನಡ ಕಾವ್ಯದೊಳಗೆ ಅದು ಬಹುಶಃ ಸಮುದ್ರದ ಮೊತ್ತ ಮೊದಲ ಉಲ್ಲೇಖವಿರಬೇಕು! ಗೋಕಾಕರ‌ "ಸಮುದ್ರ ಗೀತೆಗಳಿಗೆ" ಇಂಗ್ಲೆಂಡಿಗೆ ಪ್ರಯಾಣಮಾಡುವಾಗ ಸಮುದ್ರದ ಸಮ್ಮುಖದಲ್ಲಿ ಅವರಿಗೆ ದಕ್ಕಿದ ಭೂಮಾನುಭೂತಿಯೇ ಕಾರಣವಿರಬೇಕು. "ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು" ಎಂದು ಸ್ವಚ್ಛಂದ ಹಾಡಿದರು. ಆಧುನಿಕ ಕನ್ನಡಕಾವ್ಯದೊಳಗೆ ಮೊದಲ ಬಾರಿಗೆ ಸಮುದ್ರ ಹೊಕ್ಕಿಬಿಟ್ಟಿತು. ನಾನೂ ೩೮ ವರುಷಗಳಿಂದ ಮುಂಬಯಿಯಲ್ಲಿ, ಹಾಗೂ ಅದರ ಸುತ್ತಮುತ್ತ ಸಮುದ್ರವನ್ನು ಕಾಣುತ್ತಲೇ ಬಂದಿರುವೆ. ಎಲಿಫೆಂಟಾಗೆ ಹೋಗುವಾಗ ಅದ್ಭುತ ಎನಿಸಿದ್ದಿದೆ. ಆದರೆ ನನಗೆ ನಿಜವಾದ ಅರ್ಥದಲ್ಲಿ ಸಾಗರನ ದರ್ಶನವಾದದ್ದು ವಾಷಿಂಗ್ಟನ್ ನ ಅನಾರ್ಕೊಟಿಸ್ ಎಂಬ ಪೋರ್ಟ್ ನ ಶಾಂತಸಾಗರದ ಸಮ್ಮುಖದಲ್ಲಿ! ಅದೊಂದು ಹದ್ದು ಮೀರಿದ ಅಪರಂಪಾರ ಶರಧಿಯ ದರ್ಶನ. ಸಾಗರವೆಂದರೆ ಕೇವಲ ನೀರಲ್ಲ. ಅದೊಂದು ಅನನ್ಯ ಜೀವಿಗಳ ಲೋಕ. ಈ ಪೋರ್ಟ್ ಡಾಲ್ಫಿನ್ ಜಾತಿಯ ತಿಮಿಂಗಲಗಳ ( ಕಿಲ್ಲರ್ ವೇಲ್ಸ್) ವೀಕ್ಷಣೆಗೆ ಪ್ರಸಿದ್ಧವಾದುದು. ಸಿಯಾಟಲ್ ನಗರದಿಂದ ಇಲ್ಲಿಗೆ ಸುಮಾರು ಒಂದು ತಾಸಿನ ಪ್ರಯಾಣ. ತೀರದಿಂದ ಸಾಗರದ ಮೇಲೆ ಸುಮಾರು ಮೂರುವರೆ- ನಾಲ್ಕು ತಾಸುಗಳ ಪ್ರಯಾಣ. ನಾವು ಸ್ವಲ್ಪ ತಡವಾಗಿ ತಲಪಿದುದರಿಂದ, ನಾವು ಬರುವುದಕ್ಕೇ ಕಾಯುತ್ತಿದ್ದಂತೆ ದೋಣಿ ಹೊರಟಿತು. ಆ ದೋಣಿ ನನ್ನ ಕಲ್ಪನೆಗೂ ಮೀರಿದ ಒಂದು ಹಡಗಿನಂತಿತ್ತು. ಒಂದು ನೂರು ಮಂದಿ ಕುಳಿತುಕೊಳ್ಳಬಹುದಾದಂತಹ ಸುಸಜ್ಜಿತವಾದ ದೊಡ್ಡ ದೋಣಿಯದು. ಒಳಗೇ ಸಣ್ಣ ಹೋಟೆಲ್, ದೋಣಿಯೂ ಕೂಡ ಹೋಟೆಲ್ ನಂತೆಯೇ ಸಜ್ಜಾಗಿತ್ತು ಎಲ್ಲರ ಮುಂದೆ ಇರಿಸಲಾದ ಸಣ್ಣ ಮೇಜುಗಳು, ಕುಳಿತುಕೊಳ್ಳಲು ಸುಖಾಸೀನಗಳು !!! ಎಲಿಫೆಂಟಾಗೆ ಹೋಗುವಾಗ ಒಂದು ತಾಸು ಮುರುಕಲು ಬೆಂಚಿನಲ್ಲಿ ಕುಳಿತ ನೆನಪಾಯಿತು. ಹೀಗೆ ತಿಮಿಂಗಲಗಳ ದರ್ಶನಕ್ಕೆ ಹೊರಡುವುದೆಂದರೆ ಒಂದು ಯಾತ್ರೆಗೆ ಹೊರಟಂತೆ! ಎಲ್ಲ ಕಾಲಕ್ಕೂ ಎಲ್ಲರಿಗೂ ಅವು ದರ್ಶನ ಕೊಡುವುದಿಲ್ಲವಂತೆ. ಅದೃಷ್ಟ ಇದ್ದವರಿಗೆ ಮಾತ್ರ ಈ ದರ್ಶನ ಲಭ್ಯ ಎಂಬೆಲ್ಲಾ ಮಾತುಗಳಿವೆ. ಏಕೆಂದರೆ ಇವು ದಿನಕ್ಕೆ ನೂರು ಮೈಲು ಚಲಿಸುತ್ತವೆ. ಅವು ಕುಪ್ಪಳಿಸುತ್ತಾ ಜೊತೆ ಜೊತೆಯಾಗಿ ನೀರಾಟವಾಡುತ್ತಾ, ಬಾಯಿಯಿಂದ ನೀರನ್ನು ಫುರ್ ಎಂದು ಕಾರಂಜಿಯನ್ನು ಹಾರಿಸುತ್ತಾ ಓಡಾಡುವುದಕ್ಕೂ ನಮ್ಮ ದೋಣಿಗಳು ಅಲ್ಲಿ ಹಾಯುವುದಕ್ಕೂ ಕಾಲಕೂಡಿ ಬರಬೇಕು! ಆದರೆ ಈಗ ಸ್ಯಾಟಲೈಟ್ ನ ಈ ಯುಗದಲ್ಲಿ ಎಲ್ಲ ಸಾಧ್ಯವಿದೆ. ತಿಮಿಂಗಲಗಳು ಓಡಾಡುತ್ತಿರುವುದನ್ನು ಕಂಡ ದೋಣಿಗರು ಅದೇ ಉದ್ದೇಶಕ್ಕೆ ಹೊರಟ ಮತ್ತೊಂದು ದೋಣಿಯಲ್ಲಿ ಯಾತ್ರೆಹೊರಟವರಿಗೆ ಪರಸ್ಪರ ಸುದ್ದಿ ಮುಟ್ಟಿಸುತ್ತಾರೆ. ದೋಣಿ ಆ ಸುದ್ದಿಯ ಜಾಡು ಹಿಡಿದು ದಿಕ್ಕು ಬದಲಿಸುತ್ತದೆ. ನಾವಂತೂ ದೋಣಿಯ ಪೂರ್ವ ಬಾಗಿಲಿನಿಂದ ಪಶ್ಚಿಮಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ ಓಡಾಡಿದ್ದೇ ಓಡಾಡಿದ್ದು. ತಿಮಿಂಗಿಲಗಳ ಜಾಡು ಹಿಡಿದು ದೋಣಿಯೂ ತಿರುಗುತ್ತದಲ್ಲ? ನಮಗೆ ಅಲ್ಲಿ ವಾಸವಾಗಿರುವ ಎಂಟು ತಿಮಿಂಗಿಲಗಳೂ ಕಂಡವು. ಒಂದಂತೂ ನಮ್ಮ ದೋಣಿಯ ಬುಡದಲ್ಲೇ ಡ್ಯಾನ್ಸ್ ಮಾಡುತ್ತಾ ಹಾದು ಹೋಯಿತು. ಬೃಹತ್ ಗಾತ್ರದ ನೀರೆ! ಅದೊಂದು ಭವ್ಯ ದರ್ಶನ. ಇದು ನಿಜವಾಗಿ ನೀರೆಯರ ಪ್ರಪಂಚವೇ! ತಿಮಿಂಗಲಗಳದ್ದು ಅದ್ಭುತವಾದ ಮಾತೃಪ್ರಧಾನ ಸಮಾಜ. ತಮ್ಮ ಕೌಟುಂಬಿಕ ಸಂಬಂಧಗಳನ್ನು ಜೀವಮಾನವಿಡೀ ಕಾಪಿಡುತ್ತವೆ. ಇಲ್ಲಿ ತಾಯಿ ತಿಮಿಂಗಲದ ಅಧಿಕಾರವೇ‌ ನಡೆಯುವುದು. ಹದಿನೆಂಟು ತಿಂಗಳು ಗರ್ಭ ( ಜಗತ್ತಿನ ಜೀವಿಗಳಲ್ಲೇ ಅಧಿಕ ಕಾಲಾವಧಿ) ಧರಿಸಿ ಒಂದೇ ಮರಿಯನ್ನು ಹೆತ್ತು, ಅದಕ್ಕೆ ಎರಡು ವರುಷಗಳ ಕಾಲ ಹಾಲೂಡುತ್ತವೆ. ಆನಂತರ ಅವುಗಳಿಗೆ ಬೇಟೆಯಾಡುವ, ತಮ್ಮನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ತರಬೇತಿ ಶುರು. ಅಮ್ಮಂದಿರು ಇಲ್ಲದಿದ್ದರೆ ಮಕ್ಕಳು ಬದುಕುವುದೇ ಇಲ್ಲ. ತಾಯಿಗೆ ಏನಾದರೂ ಸಾವು ಬಂದರೆ ಒಂದೆರಡು ವರುಷಗಳಲ್ಲಿ ಮಕ್ಕಳೂ ಅಸುನೀಗುತ್ತವೆ. ಗಂಡು ಮಕ್ಕಳು ಯಾವಾಗಲೂ ತಾಯಿಯ ಒಡನೆಯೇ ಓಡಾಡುತ್ತವೆ. ಹೆಣ್ಣು ಸಂತಾನಗಳು ಗರ್ಭಾವಸ್ಥೆಗೆ ಬಂದಾಗ ತಾಯಿಯಿಂದ ಪ್ರತ್ಯೇಕವಾಗಿಬಿಡುತ್ತವೆ. ಗಂಡುಗಳು ಮಾತ್ರ ಹೊರಗಿನ ಹೆಣ್ಣುಗಳ ಜೊತೆಗೆ ಸೇರಿ ಅವುಗಳ ಗರ್ಭಕ್ಕೆ ಕಾರಣವಾಗಿ ಮತ್ತೆ ತಮ್ಮ ಅಮ್ಮನಲ್ಲಿಗೇ ಬಂದುಬಿಡುತ್ತವೆ. ಅಮ್ಮ ಗರ್ಭಿಣಿಯಾಗಿರುವಾಗ, ಹಾಲೂಡುವ ಕಾಲದಲ್ಲಿ ಮತ್ತು ತಮ್ಮ ಕಿರಿಯ ತಮ್ಮ ತಂಗಿಯರನ್ನು ಕಾಯುವ ಕೆಲಸ ಇವುಗಳದ್ದೇ ಆಗಿರುತ್ತದೆ. ಹುಟ್ಟುವಾಗಲೇ ಯಾವುದೋ ಒಂದು ಖಾಯಿಲೆಯಿಂದ ನರಳುತ್ತಿದ್ದ ಮಗುವನ್ನು ಅದರ ಅಕ್ಕ ಅಣ್ಣಂದಿರೆಲ್ಲಾ‌ಸೇರಿ ಜೋಪಾನ ಮಾಡಿದ ವಿಷಯವನ್ನು ಅಲ್ಲಿನ ನಿರ್ವಾಹಕಿ ಹೇಳಿದಳು. ಗಂಡು ಮಕ್ಕಳು ಎಂದೂ ಅಮ್ಮಂದಿರ ಸೆರಗು ಹಿಡಿದೇ ತಿರುಗುವ 'Mumma's Boys' ! ಹಾಗೆಂದು ಇವು ಇತರ ಪ್ರಾಣಿಗಳಂತೆ ತಾಯ್ಗಂಡರಲ್ಲ. ತಾಯಿ ಮತ್ತು ಸಹೋದರಿಯರನ್ನು ಕೂಡುವುದು ತಿಮಿಂಗಿಲಗಳ ಸಮಾಜದಲ್ಲಿ ನಿಷೇಧ. ಇವುಗಳ ಕುಟುಂಬದ ಗುರುತು ದೇಹದ ಮೇಲೆ ಮೂಡುವ ಗೆರೆಗಳಿಂದ ಪತ್ತೆಯಾಗುತ್ತವಂತೆ. ಹೀಗಾಗಿ ತಮ್ಮ ಕುಟುಂಬದ ಹೊರಗಿನ ಸದಸ್ಯರೊಂದಿಗೇ ಕೂಡುವಿಕೆ. ಈ ಅಮ್ಮಂದಿರು ಋತುಬಾಧೆಯಿಂದಲೂ ಸಂಕಟಪಡುತ್ತಾರಂತೆ. ಸಂತಾನ ಶಕ್ತಿ ತೀರಿದ ಮೇಲೆ ಮನುಷ್ಯ ಸಮಾಜದ ಅಜ್ಜಿಯರಂತೆ ಇವೂ ಮೊಮ್ಮಕ್ಕಳಿಗೆ ಉಣಿಸುವ, ತರಬೇತಿ ಕೊಡುವ ಕೆಲಸಗಳನ್ನು ಮಾಡುತ್ತವೆ ಎಂಬ ಮಾಹಿತಿಗಳಿವೆ. "ಅಲ್ಲಿ ನೋಡಿ ....ಅವಳು ತನ್ನ ಮೊಮ್ಮಗನ ಜೊತೆ ಓಡುತ್ತಿದ್ದಾಳೆ"...... "ಇಗೋ ಇಲ್ಲಿ ನೋಡಿ ತನ್ನ ಮಗಳ ಜೊತೆ ಹೇಗೆ ಕುಪ್ಪಳಿಸುತ್ತಿದ್ದಾಳೆ!!!" ದೋಣಿಯಲ್ಲಿದ್ದ ನಿರ್ವಾಹಕಿಯೊಬ್ಬಳು ನಮ್ಮನ್ನು ಆಗಾಗ್ಗೆ ಜಾಗೃತಗೊಳಿಸುತ್ತಿದ್ದಳು. ಏನು ಸುಮ್ಮಾನ ಅವುಗಳಿಗೆ ! ತಮ್ಮ ಲೀಲೆಯಲೇ ಇದ್ದವು. ಅವುಗಳ ಸ್ವಚ್ಛಂದ ಕೇಳಿಗೆ ಭಂಗ ತರಬಾರದೆಂದೂ, ಅವುಗಳ ಆವಾಸದೊಳಗೆ ನಾವು ಪ್ರವೇಶ (ಅತಿಕ್ರಮ?) ಮಾಡಿದ್ದೇವೆಂದೂ ಎಚ್ಚರಿಕೆಯ ಗಂಟೆ ಆಗಾಗ ಧ್ವನಿವರ್ಧಕದಿಂದ ಮೆಲ್ಲಗೆ ಮೊಳಗುತ್ತಿತ್ತು. ಎಲ್ಲವಕ್ಕೂ ಏನೇನೋ ಹೆಸರುಗಳಿವೆ. "ಆರ್ಕಾಸ್" (Orca) ಜಾತಿಗೆ ಸೇರಿದ ಈ ತಿಮಿಂಗಲಗಳು ಜಲಚರಗಳಲ್ಲೇ ಬಹಳ ಶಕ್ತಿಯುತವಾದ ಪರಭಕ್ಷಕ (predators) ಪ್ರಾಣಿಗಳಂತೆ. ಈ ಪ್ರದೇಶದಲ್ಲಿ ಎಂಟು ತಿಮಿಂಗಿಲಗಳು ಇವೆಯಂತೆ. ನಾವು ನಿಜವಾಗಿ ಅದೃಷ್ಟವಂತರು, ಎಂಟು ತಿಮಿಂಗಿಲಗಳೂ ನಮಗೆ‌ ದರ್ಶನ ನೀಡಿದವು ಎಂದು ನಿರ್ವಾಹಕಿ ಹೇಳಿದ್ದರಿಂದ ನಮಗೆ ಗೊತ್ತಾಯಿತು. ನಾವು ಹತ್ತಿಪ್ಪತ್ತಾದರೂ ನೋಡಿದ್ದೇವೆ ಎನಿಸುತ್ತಿತ್ತು. ಯಾರು ಅಜ್ಜಿ ಯಾರು ಅಮ್ಮ, ಮೊಮ್ಮಗ? ತಿಮಿಂಗಿಲಗಳ ಅನನ್ಯ ಅಸ್ಮಿತೆ ನಮ್ಮಂತಹ ಪಾಮರರಿಗೆ ಗೊತ್ತಾಗುವುದಾದರೂ ಹೇಗೆ? ತಿಮಿಂಗಿಲಗಳ ಕುರಿತಾಗಿ‌ ಸಿನಿಮಾಗಳೂ ಬಂದಿವೆ. ಹಾಲಿವುಡ್ ಸಂಶೋಧನೆ ಮಾಡಿ ತೆಗೆದ ಇಂತಹ ಸಿನಿಮಾವೊಂದರಲ್ಲಿ 'ಕೀಕೋ' ಎನ್ನುವ ತಿಮಿಂಗಿಲಕ್ಕೆ ಈಗ ಪ್ರಪಂಚದಲ್ಲೇ ಬಹಳ ಪ್ರಸಿದ್ಧವಾದ ಜಲಚರವೆಂಬ ತಾರಾಮೌಲ್ಯವೂ ದೊರೆತಿದೆಯಂತೆ. ಜಲಪ್ರಯಾಣದಲ್ಲಿ ಅನೇಕ ಕಡಲ ಸಿಂಹಗಳೂ, ಸೀಲ್ ಮೀನುಗಳೂ, ಕಡಲ ಹಕ್ಕಿಗಳೂ ಕಂಡವು. ನಾಲ್ಕಾರು ಕಡಲ ಸಿಂಹಗಳಂತೂ ಕಡಲ ನಡುವೆ ಯಾವುದೋ ಕಂಬಕ್ಕೆ ಕಟ್ಟಿದ್ದ ಕಟ್ಟೆಯ ಮೇಲೆ ಒಂದರಮೇಲೊಂದು ಬಿದ್ದು ಕೊಂಡಿದ್ದವು. ಅನಂತ ಕಡಲ ಅಗಾಧತೆಯನ್ನು ತಡೆದುಕೊಳ್ಳ ಲಾರದವರಂತೆ ಪ್ರೇಮಿಗಳು ಖುಲ್ಲಂ ಖುಲ್ಲ ಪ್ರಣಯಚೇಷ್ಟೆಯಲ್ಲಿ ತೊಡಗಿದ್ದರು. ಸಾಗರನ ಹೃದಯದಲಿ ಇನ್ನೆಷ್ಟು ಅಂತರ್ಜೀವಜಾಲ ಮಾಲೆಗಳು ಅಡಗಿವೆಯೋ ಕಂಡವರಾರು? ಸಾಗರಕ್ಕೆ ಸಾಗರವೇ ಉಪಮೆಯಲ್ಲವೇ? * ಮೂರು ಬಣ್ಣದ ಚಿತ್ರಗಳು ಮಾತ್ರ ಗೂಗಲ್ ನಿಂದ ಕದ್ದದ್ದು May 11 ಏರುತಿಹುದು ಹಾರುತಿಹುದು ಬಾವುಟ.. ನಿನ್ನೆ ಜುಲೈ ನಾಲ್ಕನೆಯ ತಾರೀಖು ಅಮೇರಿಕಾದ ಸ್ವಾತಂತ್ರ್ಯ ದಿನ. ಅದರ ಆಚರಣೆಯ ನಿಮಿತ್ತ ರಸ್ತೆಯ ಬದಿಗಳ ಉದ್ದಕ್ಕೂ ಅಮೇರಿಕಾದ ಪುಟ್ಟ ಬಾವುಟಗಳನ್ನು ಸಾಲಾಗಿ ನೆಡಲಾಗಿತ್ತು. ಯಾವುದೋ ಕಟ್ಟಡದ ಮುಂದೆ ಬಾವುಟಗಳಿಂದ ಕಂದೀಲು, ಪ್ಯಾರಾಚೂಟ್, ಗಾಳಿಪಟ ಮುಂತಾದವುಗಳನ್ನು ಮಾಡಿ ಮಾರಾಟಕ್ಕೆ ತೂಗು ಹಾಕಿದ್ದರು. ರಾತ್ರಿ ಹತ್ತುಗಂಟೆಯ ಹೊತ್ತಿಗೆ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಹಾರಿಸುವ ಬಾಣ ಬಿರುಸುಗಳನ್ನು ನೋಡಲು ಸಿಯಾಟಲ್ ನ ಡೌನ್ ಟೌನ್ ಪಾರ್ಕಿಗೆ ಎಲ್ಲರಂತೆ ನಾವು ಹೋಗಿದ್ದೆವು. ಅಲ್ಲಿ ತೋರಿಸಲಾದ ಬಾಣಬಿರುಸಿನ ವರ್ಣ ವೈವಿಧ್ಯ, ಆಕಾಶದಲ್ಲಿ ಅವು ರಚಿಸುವ ತರ ತರದ ವಿನ್ಯಾಸಗಳಿಂದ ನಾವು ಬೆರಗಾದೆವು. ನಾವು ಮನೆಯಿಂದ ಹೊರಟಾಗ ರಸ್ತೆಯಲ್ಲಿ ಒಬ್ಬ ಬಾವುಟದ ಬಟ್ಟೆಯಲ್ಲಿ ಮಾಡಿದ ಪ್ಯಾಂಟನ್ನು ಧರಿಸಿ ಎದುರಿಗೆ ಬರುತ್ತಿದ್ದ. ಆಶ್ಚರ್ಯ ವಾಗಿ ಮಗನನ್ನು ಕೇಳಿದೆ. "ಪ್ಯಾಂಟೇನು ? ಬಾವುಟದ ಅಂಡರ್ ವೇರ್ ಕೂಡ ಮಾರುತ್ತಾರೆ" ಎಂದ ಮಗ. "ರಾಷ್ಟ್ರಧ್ವಜಕ್ಕೊಂದು ಘನತೆ ? ಮರ್ಯಾದೆ ಬೇಡವೇ?" ಎಂದೆ. "ಏನು ಅಂಡರ್ವೇರ್ ಹಾಕ್ಕೋಳೋದು ಮರ್ಯಾದೆ ಅಲ್ವಾ? ಅದು ನಮ್ಮ ಮಾನ ಕಾಪಾಡೋಲ್ವಾ?" ಥಟ್ ಅಂತ ಬಂತು ಉತ್ತರ. ಇಲ್ಲಿಯ ಜನ ದೇಶ ಭಕ್ತಿಯನ್ನು ತೋರಿಸುವ ರೀತಿಯೇ ಹೀಗಿರಬಹುದೆಂದು ಸುಮ್ಮನಾದೆ. ಇಲ್ಲಿ ರಾಷ್ಟ್ರ ಧ್ವಜದ ಜೊತೆಗೆ ಪ್ರತಿಯೊಂದು ರಾಜ್ಯಕ್ಕೂ ತಮ್ಮದೇ ಆದ ಪ್ರತ್ಯೇಕ ಧ್ವಜಗಳಿವೆ. ಮುಂಬಯಿಯಲ್ಲೂ "ಪಂಧ್ರಾ ಆಗೋಸ್ಟ್ ಮತ್ತು ಛಬ್ಬೀಸ್ ಜನೆವರಿ' ಎಂದು ಅಂಗಡಿಗಳಲ್ಲಿ ಪುಟ್ಟ ಪುಟ್ಟ ಬಾವುಟಗಳನ್ನು ಮಾರುತ್ತಾರೆ. ಚಿಕ್ಕಮಕ್ಕಳಿಗೆಲ್ಲಾ ಅದೇ ಒಂದು ಸಂಭ್ರಮ "ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ/ ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ" ಎಂದು ತಮ್ಮ ಸೈಕಲ್ಲುಗಳ ಮೇಲೆ ಸಿಕ್ಕಿಸಿಕೊಂಡು ಪಟಪಟ ರಸ್ತೆಗಳಲ್ಲೆಲ್ಲಾ ಹಾರಾಡುತ್ತಾರೆ. ದೇಶಭಕ್ತಿ ಎನ್ನುವುದು ಒಂದೊಂದು ದೇಶದಲ್ಲಿ ಒಂದೊಂದು ರೀತಿಯಲ್ಲಿ ವ್ಯಕ್ತವಾಗುತ್ತದೇನೋ? ಟೊಕೊಮ ಪರ್ವತ ಶ್ರೇಣಿಗಳೂ ! ದೇವದಾರು ಕಾಡುಗಳೂ..! ಚೂಪಾದ ತುದಿಯ ದೇವದಾರು ವೃಕ್ಷಗಳು ಮತ್ತು ಮಂಜಿನ ಬೆಟ್ಟಗಳು ಎಂದರೆ ವೈಜಯಂತಿಮಾಲ, ಮಧುಬಾಲ, ಸಾಧನಾ, ಆಶಾಪರೇಖ್, ಮಾಲಾ ಸಿನ್ಹಾ ಅವರ ಜೊತೆ ಯುಗಳ ಗೀತೆ ಹಾಡುತ್ತಾ ಸುತ್ತುವ ದೇವಾನಂದ್, ದಿಲೀಪ್ ಕುಮಾರ್, ರಾಜಕುಮಾರ್, ರಾಜೇಶ್ ಖನ್ನ, ಶಮ್ಮೀ ಕಪೂರ್ ಮುಂತಾದ ಹಳೆಯ ಹಿಂದಿ ಸಿನಿಮಾ ನಾಯಕ ನಟನಟಿಯರೇ ಕಣ್ಣ ಮುಂದೆ ಕುಣಿಯುತ್ತಾರೆ. ಮುಂಬಯಿನಿಂದ ಸುಮಾರು ಹದಿಮೂರು ಸಾವಿರ ಕಿ.ಮೀ.ಗಳಾಚೆ ಸಿಯಾಟಲ್ ನ ದೇವದಾರು ಕಾಡುಗಳಲ್ಲಿ ನಾವು ಸುತ್ತುವಾಗ ಹಿಂದೀ ಸಿನಿಮಾದ ವಾಸನೆಯೇ ಹಿಂಬಾಲಿಸುತ್ತಿತ್ತು. ನಮ್ಮ ಹೀರೋಗಳ ಮೆರವಣಿಗೆ ಹೊರಟಿತ್ತು. ದೂರದ ಯಾವುದೋ ಒಂದು ಬೆಟ್ಟದ ತುದಿಯೇ ಶಮ್ಮೀ ಕಪೂರ್ ನಾಗಿ ತನ್ನ ಮೈಯನ್ನೆಲ್ಲಾ ಮುರಿದುಕೊಂಡು 'ಚಾಹೇ ಕೋಯಿ ಮುಝೆ ಜಂಗಲಿ ಕಹೇಂ ಯಾಹ್ಞೂ" ಎಂದು ಎತ್ತರದ ದನಿಯಲ್ಲಿ ಹಾಡುತ್ತಿತ್ತು. ನಾವು ಹೊರಟಿದ್ದು ಸಿಯಾಟಲ್ ಬಳಿ ಇರುವ ಒಲಂಪಿಕ್ ಪರ್ವತ ಶ್ರೇಣಿಗಳ ಹರಿಕೇನ್ ರಿಡ್ಜ್ ಎನ್ನುವ ಪ್ರದೇಶಕ್ಕೆ. ಎಲ್ಕ್ ಪರ್ವತ ಈ ಶ್ರೇಣಿಗಳ ತುತ್ತತುದಿ. ಸುಳಿವೇ ಕೊಡದೇ ಇದ್ದಕ್ಕಿದ್ದಂತೆ ಏಳುವ ಚಂಡಮಾರುತ ಮತ್ತು ಬೀಳುವ ಹಿಮಮಳೆಯ ಝಂಝಾವಾತದ ಕಾರಣದಿಂದಾಗಿ ಇದಕ್ಕೆ ಹೀಗೆ ಹೆಸರು ಬಂದಿದೆಯಂತೆ. ಇಲ್ಲಿ ವರ್ಷಕ್ಕೆ ಸು. ಹತ್ತುಸಾವಿರ ಮಿ.ಮಿ ಹಿಮಪಾತವಾಗುತ್ತದೆ ಎಂದು ಗೂಗಲ್ ಹೇಳುತ್ತದೆ. ಹಿಮವೆಂದರೆ ಬಿಳಿಯೇ ಅಲ್ಲ. ನೀರಾಗಿ ಹರಿಯದ ಹಿಮ ಅಲ್ಲಲ್ಲೇ ನಿಂತು ಮಣ್ಣಿನಲಿ ಬೆರೆತು ಮಲಿನವಾಗುವುದೂ ಇದೆ. ಹಸಿರು ಆಚ್ಛಾದಿತ ಇಳಿಜಾರು ಪ್ರಪಾತ, ಅದರಾಚೆಗೆ ದೇವದಾರು ಕಾಡು ಮತ್ತೂ ಅದರಾಚೆಗೆ "ಗುಡ್ಡ ಗುಡ್ಡ ಸ್ಥಾವರ ಲಿಂಗಗಳು ಅವಕೆ ಅಭ್ಯಂಗ" ಎರೆದಿದ್ದರ ಗುರುತಾಗಿ ತಲೆಯಮೇಲೆ ಬಿಳಿ ತುಪ್ಪಟದ ಟೊಪ್ಪಿಗೆಗಳು. "ಬೆಟ್ಟಕ್ಕೆ ಚಳಿಯಾಗಿ"ರಬೇಕು! ಈ ಪರ್ವತಗಳ ಮೇಲೆ ಟೊಪ್ಪಿಗೆಯಂತೆ ಇರುವ ಹಿಮಗಳು ಕರಗುವುದಿಲ್ಲವಂತೆ. ಅದನ್ನು ಗ್ಲೇಷಿಯರ್ ( ಹಿಮದ ಗಡ್ಡೆಗಳು) ಎಂದು ಕರೆಯುತ್ತಾರೆ. ಇಳಿಜಾರಿನಲ್ಲಿ ಅಲ್ಲಲ್ಲಿ ಜಿಂಕೆಗಳು ನಮಗೆ ಕ್ಯಾರೇ ಅನ್ನದೇ ಹುಲ್ಲು ಮೇಯುತ್ತಿದ್ದವು. "ನಿಮ್ಮನ್ನು ನೋಡಲು ಹದಿಮೂರು ಸಾವಿರ ಕಿ.ಮೀ.ಗಳಾಚೆಯಿಂದ ಬಂದಿದ್ದೇವೆ ಎನ್ನುವ ಪರಿಜ್ಞಾನ ನಿಮಗೆ ಬೇಡವೇ?" ಎಂದು ಇವನು ಜಿಂಕೆಗಳನ್ನು ಛೇಡಿಸಿದ. ಅವು 'ಹ್ಞಹ್ ನೀನ್ಯಾವ ಗಿಡದ ತೊಪ್ಪಲು ! ಎಂದು ಅಂಡು ತಿರುಗಿಸಿಕೊಂಡು ಹೊರಟು ಹೋದವು. ಅಲ್ಲಿ ಸಾರಂಗಗಳೂ ಇವೆಯಂತೆ. 'ಟೊಕೊಮ' ಎನ್ನುವ ಆದಿವಾಸಿ ಜನರು ಅವುಗಳನ್ನು ಬೇಟೆಯಾಡಲು ಬರುತ್ತಿದ್ದರಂತೆ. ಒಲಂಪಿಕ್ ನ ಮೂಲ ಹೆಸರು 'ಟೊಕೊಮ' ಎಂದೇ. ಎಲ್ಲ ನಾಗರೀಕತೆಗಳೂ ಮೂಲನಿವಾಸಿಗಳನ್ನು ನಾಶಮಾಡಿದಂತೆ ಇಲ್ಲೂ ನಾಶಮಾಡಿದೆ. ಅದರ ಕುರುಹಾಗಿ 'ಟೊಕೊಮ' ಹೆಸರು ಅಲ್ಲಲ್ಲಿ ಸುಳಿಯುತ್ತದೆ. ಜಿಂಕೆಗಳ ಆ ವರ್ತನೆ ಮನುಷ್ಯನ ಭೂತಕಾಲದ ಎಲ್ಲ ಅಪಸವ್ಯಗಳಿಗೆ ಕೊಟ್ಟ ಪ್ರತಿಕ್ರಿಯೆ ಎನಿಸಿಬಿಟ್ಟಿತು. ಯಾಕೆಂದರೆ ಅಗಾಧ ಕಾಡುಗಳು ಅವುಗಳ ಹಿಂದಿದ್ದವು. ಕೋಟ್ಯಂತರ ವರುಷಗಳಿಂದ ನಿಶ್ಚಲವಾಗಿ ನಿಂತ ಭೂಮ್ಯಾಕಾಶಕ್ಕೆ ಏಣಿಹಾಕುವ ಪರ್ವತಗಳಿದ್ದವು. ಸಮೃದ್ಧವಾದ ಹುಲ್ಲುಗಾವಲುಗಳಿದ್ದವು. ಅನತಿ ದೂರದಲ್ಲೇ ಹೆದ್ದೆರೆಗಳ ಸಾಗರ, ಕೆರೆ‌, ಹರಿಯುವ ನದಿಗಳಿದ್ದವು. ಮನುಷ್ಯರಾದ ನಾವು ಪರಾನ್ನಪುಷ್ಠರು (parasites) ಎಂದು ಅವು ಸಾರಿ ಹೇಳುತ್ತಿದ್ದವು. ಜನರ ಅತಿಕ್ರಮವನ್ನು ತಡೆಯಲು ಅಲ್ಲಿ ಸುತ್ತಲೂ ಕಟ್ಟೆ ಕಟ್ಟಲಾಗಿದೆ. ಅಲ್ಲಿ ಎಳೆಯ ವಯಸ್ಸಿನ ದಂಪತಿಯೊಬ್ಬರು ಕೈಗೂಸನ್ನು ಹಿಡಿದುಕೊಂಡು ಊಟ ಮಾಡುತ್ತಿದ್ದರು. ಅವರ ತಟ್ಟೆಯಲ್ಲಿ ಅನ್ನ ಮತ್ತು ಬೆಂಡೆಕಾಯಿ ಸಾಂಬಾರು!!! ಕನ್ನಡದವರೇ ಇರಬೇಕು! ನಮ್ಮನ್ನು ನೋಡಿ ಪರಿಚಯದ ನಗೆ ನಕ್ಕರು! ಇದು ಬೆಂಡೇಕಾಯಿ ತಂದ ನಂಟು! ಒಲಂಪಿಕ್ ಬೆಟ್ಟ ಇಳಿದು ಸ್ವಲ್ಪ ದೂರ ಬಂದರೆ ಕ್ರೆಸೆಂಟ್ ಲೇಕ್. ಅದರ ಸುತ್ತಲೂ ದೇವದಾರು ಕಾಡು. ಅಲ್ಲಲ್ಲಿ ಒಣಗಿದ ಬೂದು ಬಣ್ಣದ ವೃಕ್ಷಗಳು ಹಸಿರಿನೊಡನೆ ಮಿಳಿತಗೊಂಡು ದೂರಕ್ಕೆ ನೀಲಿಯಾಗಿ ಕಾಣುತ್ತಿದ್ದವು. ಕಾಡಿನ ಆ ನೀಲಿ ನೀರಿನೊಳಗೆ ಪ್ರತಿಫಲಿತವಾಗುತ್ತಿತ್ತು. ಅದು ಆಕಾಶಕ್ಕೂ ವಿಸ್ತರಿಸಿತ್ತು. ಆದುದರಿಂದ ಆಕಾಶ, ನೀರು ಮತ್ತು ಕಾಡು ಗಾಢನೀಲಿಯಲ್ಲಿ ಅದ್ದಿಹೋದಂತೆ ಕಾಣುತ್ತಿದ್ದವು. 'ಎಂಟರ' ಇಳಿ ಸಂಜೆಯಲ್ಲಿ ( ಈ ಕಾಲದಲ್ಲಿ ಕತ್ತಲಾಗುವುದು ಇಲ್ಲಿ ಒಂಬತ್ತು ಗಂಟೆಗೆ) ಆ ನೀಲಿ ಕಾಡಿನದೋ, ಆಕಾಶದ್ದೋ ಇಲ್ಲ ನೀರಿನದ್ದೋ ಎಂಬ ಮಾಯಕವನ್ನು ಹರಡಿತ್ತು. ಅಂತಹ ಗಾಢ ನೀಲಿಯ ಆಕಾಶವನ್ನಾಗಲೀ, ನೀರನ್ನಾಗಲೀ ನಾವು ಕಂಡುದೇ ಇಲ್ಲ ಎನಿಸುವ ಮಟ್ಟಿಗೆ ಅನುಭವ ರಮಣೀಯತೆ ಒಳಗೆಲ್ಲಾ ಆರ್ದ್ರವಾಗಿ ಕರಗುತ್ತಿತ್ತು. ಅದು ಕಲ್ಲು ಕರಗುವ ಸಮಯವಾಗಿತ್ತು. June 28 ಸಿಯಾಟಲ್ ಗೆ ಬಂದು ಎರಡು ವಾರಗಳಾದವು. "ಹೊಸ ವಾತಾವರಣ ಹೊಂದಿಕೆಯಾಯಿಯತೇ" ಎಂದು ಗೆಳತಿ ಭಾಗ್ಯ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. ಹೊಂದಿಕೊಳ್ಳಬೇಕು, ಪರದೇಶ, ಪರಧರ್ಮವಲ್ಲವೇ? ಆದರೆ 'ಭಯಾವಹವಾಗಿ'ಯೇನೂ ಕಾಣುತ್ತಿಲ್ಲ. ನಮ್ಮ ಹಾಗೆಯೇ ಇದ್ದಾರೆ ಜನ. ಅಪರಿಚಿತರಾದರೂ ಎದುರಿಗೆ ಸಿಕ್ಕಾಗ 'ಗುಡ್ ಮಾರ್ನಿಂಗ್' ಎಂದೋ 'ಹ್ಯಾವ್ ಎ ಗುಡ್ಡೇ' ಎಂದೋ ಮುಗುಳ್ನಗುತ್ತಾರೆ. ಅವರು ಹಾಗೆ ಹೇಳುವುದು ಯಾಂತ್ರಿಕವಾಗಿ, ಅದಕ್ಕೆ ಅಷ್ಟೊಂದು excite ಆಗಬೇಕಿಲ್ಲ ಎಂದು ಮಗ ಹೇಳುತ್ತಾನೆ.! ಅಪರಿಚಿತರು ಮುಖಸಿಂಡರಿಸದೇ ಹೇಗೆ ವರ್ತಿಸಿದರೂ ಖುಷಿಯಾಗುತ್ತದೆ. ಬ್ಯಾಟರಿ ರೀಛಾರ್ಜ್! ಮುಂಬಯಿಯ ಹಾಗೆಯೇ ಈ ನಗರ ಇರುವುದೂ ಸಮುದ್ರ ಕಿನಾರೆಯಲ್ಲಿ. ಆದರೆ ಇದು ಶಾಂತಸಾಗರದ ದಂಡೆ. ಮುಂಬಯಿಯ ಹಾಗೆ ಇಲ್ಲಿ ನೀರಿಗೆ ಧುಮುಕುವ ಹಾಗಿಲ್ಲ. ಯಾಕೆಂದರೆ ಈ ಸಾಗರದ ನೀರು ಬೇರೆ ಸಾಗರಗಳಿಗಿಂತ ಬಹಳ ತಣ್ಣಗಿದೆಯಂತೆ. ಉತ್ತರದ ತುದಿಗೆ ಹತ್ತಿರವಿರುವುದರಿಂದ ಹವೆಯೂ ತಣ್ಣಗೆ. ನನಗೇನೋ, ಹವೆ ಮತ್ತು ಈ ನಗರದ ನಡಾವಳಿಯ ದೃಷ್ಟಿಯಿಂದ ಈ ಭಾಗದ ಇಡೀ ಅಮೇರಿಕಾವೇ ಮೇಲುನೋಟಕ್ಕೆ ಶಾಂತಸಾಗರವಾಗಿ ಕಂಡಿದೆ. ಒಳಗಿನ ಬಡಬಾನಲ ನನಗೆ ಗೊತ್ತಿಲ್ಲ. ಇಲ್ಲಿ ದೊಡ್ಡ ದೊಡ್ಡ ಅತ್ಯಾಧುನಿಕ ರಸ್ತೆಗಳಿವೆ. ಅವುಗಳ ಮೇಲೆ ಸಾವಿರಾರು ಕಾರುಗಳು ಓಡಾಡುತ್ತವೆ. ಬರೀ ಕಾರುಗಳೇ! ಅಲ್ಲೊಂದು ಇಲ್ಲೊಂದು ಬಸ್ಸು ಬಿಟ್ಟರೆ ಬೇರೆ ವಾಹನಗಳಿಲ್ಲ. ಟ್ರಕ್ ಮುಂತಾದ ದೊಡ್ಡ ವಾಹನಗಳಿಗೆ ಹೈವೇಗಳಲ್ಲಿ ಓಡಾಡಲು ಮಾತ್ರ ಪರವಾನಗಿ. ಪಾದಸಂಚಾರ ಇಲ್ಲಿ ಆಹ್ಲಾದಕರ. ಅಚ್ಚುಕಟ್ಟಾದ ಸಮತಟ್ಟಾದ ಫುಟ್ ಪಾತುಗಳಿವೆ ! ಇಕ್ಕೆಲಗಳಲ್ಲೂ, ಆಗ ತಾನೆ ಹೇರ್ ಕಟ್ ಮಾಡಿಸಿಕೊಂಡಂತೆ ಶಿಸ್ತಾಗಿ ನಿಂತ ಹಸಿರು ಹುಲ್ಲು , ಬಣ್ಣ ಬಣ್ಣದ ಹೂ ಗಿಡ ಮರ ಬಳ್ಳಿಗಳು! ಇಲ್ಲಿ ಸದಾ‌ ಜಿಟಿ ಜಿಟಿ ಮಳೆ! ಅಪರೂಪಕ್ಕೆ ಬಿಸಿಲು. ಆದುದರಿಂದ ಇಲ್ಲಿ‌ ನಿತ್ಯಹರಿದ್ವರ್ಣ! ನೋಡಿದೆಲ್ಲೆಲ್ಲಾ ಕಾಡು. ಝರಿ, ಜಲಪಾತಗಳು. ಕಾಡು‌ ಮತ್ತು ನಗರ ಒಟ್ಟಿಗೇ ಇರಲು ಇಂತಹ ಕಡೆ ಮಾತ್ರ ಸಾಧ್ಯ! ಆದುದರಿಂದಲೇ Ever green city ಯೆಂದು ಹೆಸರಾಗಿದೆ ಈ ಊರು. ಹಾಗೆ ನೋಡಿದರೆ ಇಡೀ ವಾಷಿಂಗ್ಟನ್‌ ರಾಜ್ಯವನ್ನೇ evergreen state ಎನ್ನುತ್ತಾರೆ. ಇಲ್ಲಿ ಓಡಾಡಿದರೆ ನಮ್ಮ ಕುಪ್ಪಳಿಯಲ್ಲಿ ಓಡಾಡಿದ ಅನುಭವವಾಗುತ್ತದೆ. ಇದೊಂದು ಅತ್ಯಾಧುನಿಕ ಕುಪ್ಪಳಿ!ಸಿಯಾಟಲ್ ನಲ್ಲಿ ಕುಪ್ಪಳಿ ! ಸೃಜನಾ ಗೆಳತಿಯರು ಇಲ್ಲೇ ಓಡಾಡುತ್ತಾರೆ! ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ ಲೇಖ ಲೋಕದ ಲೇಖಕಿಯರು ! ಬಣ್ಣ ಬಣ್ಣದ ಸೀರೆಯ ನವಿಲುಗಳು ಕಣ್ಣಮುಂದೆ ಬರುತ್ತವೆ. ಆದರೆ ಸಿಯಾಟಲ್ ನಲ್ಲಿ ನವಿಲುಗಳಿಲ್ಲ. ಮೊಲಗಳಿವೆ. ಇಲ್ಲಿ ಹೊರಗೆ ಜನರೇ ಓಡಾಡುವುದಿಲ್ಲ. ಸಿಗುವ ಕೆಲವರಾದರೂ ಭಾರತೀಯರೇ! ಜನರನ್ನು ನೋಡಬೇಕೆಂದರೆ ಬೀಚುಗಳಿಗೆ, ಜಲಪಾತ, ಕೆರೆಗಳ ಬಳಿ ಹೋಗಬೇಕು. ಬಿಸಿಲು ಬಂದ ದಿನ ಜನ ಬುಳ ಬುಳನೆ ಹೊರಬರುತ್ತಾರೆ. ಬಿಕನಿಗಳಲ್ಲಿ ಕೆಲವರು ಓಡಾಡುತ್ತಾರೆ. ನಾವು ಜರ್ಕಿನ್ ಜೇಬುಗಳಲ್ಲಿ ಕೈತೂರಿಸಿಕೊಂಡು ಹು..ಹು. ಚಳಿ ಚಳಿ ಎಂದು ಓಡಾಡುತ್ತೇವೆ. ಚಳಿಯ ಗಂಧ ಗಾಳಿಯೇ ಇಲ್ಲದ ಮುಂಬಯಿಗರಿಗಂತೂ, ಇವರು ಸೆಖೆ ಸೆಖೆ ಎಂದು ಒದ್ದಾಡುವ ೧೬ ಡಿಗ್ರಿ ಉಷ್ಣಾಂಶವೂ ಅಸಾಧ್ಯ ಚಳಿಯೇ! ಅಂತಹ ಚಳಿಯಲ್ಲಿ ಕೆಲವು ಅಮೇರಿಕನ್ ಪ್ರೇಮಿಗಳು, ಕುಟುಂಸ್ಥರು ಮಂಜು ನೀರಿನೊಳಗೆ ಇಳಿದು ಆಡುತ್ತಾರೆ. ಅವರು ನೀರಿಗೆ ಇಳಿಯುವುದೇ ನಮಗೆ ನಡುಕ ತರುತ್ತದೆ. ವಾಯುವಿಹಾರ ಇಲ್ಲಿ ಅದ್ಭುತ! ಬೇಸರ ತರಿಸುವಷ್ಟು ಸ್ವಚ್ಭ! ನಿರ್ಜನ! ನಿರ್ಭಿಡೆ ! ಆದರೂ ನಿಶಬ್ದ. ಶಾಂತಸಾಗರದ ಗಾಳಿ ಬೀಸುವ ನಗರವಾದ್ದರಿಂದಲೋ ಏನೋ, ಬರೀ ಮೌನ ಆಳುತ್ತದೆ. ಬುದ್ಧ ಇಲ್ಲಿಗೆ ಬಂದಿದ್ದರೆ????? ನಾವೋ ಸಂತೆಯಲ್ಲಿ ಮನೆಮಾಡಿರುವವರು. ಅಲ್ಲಿ ಮನೆಯ ಹೊರಗೆ ವಾಯು ವಿಹಾರಕ್ಕೆ ಹೊರಟರೆ ಸಾಕು ಹೆಜ್ಜೆ ಹೆಜ್ಜೆಗೂ ಪರಿಚಯದವರು ಸಿಕ್ಕಿ ಉಭಯ ಕುಶಲ ಸಾಂಗೋಪಾಂಗ, ಅಲ್ಲಲ್ಲಿ ಮಂಟಪೋತ್ಸವ ! ಸಪ್ಪೆ ಬದುಕಿಗೊಂದು ರೀಛಾರ್ಜ್! ಮುಂಬಯಿಗರಾದ ನಾವು ಕೊಳಕಿನಲ್ಲಿ, ವಿಚಿತ್ರ ಸಾಮಾಜಿಕ ಸಂಕೋಚಗಳಲ್ಲಿ, ಮುಜುಗರಗಳಲ್ಲಿ ಬದುಕುವವರು ! ಆದುದರಿಂದ ಇಲ್ಲಿ ಸ್ವಲ್ಪ ಅಜೀಬ್ ಫೀಲಿಂಗ್. ಇಲ್ಲಿಗೆ ಹೊಂದಿಕೊಳ್ಳುವುದು ಕಷ್ಟ. ಮನೆಯೆಂದರೆ ಸ್ವಲ್ಪ ರಂಪ, ಸುಕ್ಕು, ಕಸ, ಧೂಳು, ಶಬ್ದ, ಜಗಳ, ರಗಳೆ ಇರಬೇಕು! ಮನೆಗೆ ಮನೆಯೇ ಇಸ್ತ್ರಿಮಾಡಿಕೊಂಡು ನಿಂತುಬಿಟ್ಟರೆ? ಮನೆಯಲ್ಲ, ಇಡೀ ನಗರವೇ ಇಸ್ತ್ರಿಮಾಡಿಕೊಂಡು ಶಿಸ್ತಾಗಿ‌ನಿಂತ ಶಾಲಾಮಕ್ಕಳ ಹಾಗೆ ಕಾಣುತ್ತದೆ! ಎಲ್ಲಿ‌ಮುಟ್ಟಿದರೆ ಹೇಗೋ! ಏನೋ!? ಮುಟ್ಟುವುದಕ್ಕೇ ಭಯವಾಗುತ್ತದೆ. ಸ್ನಾನಕ್ಕೆ‌ ಬಚ್ಚಲಿಗೆ ಇಳಿದಾಗ ಫರದೆಯನ್ನು ಯಾವ ರೀತಿ ಇಳಿಬಿಟ್ಟುಕೊಳ್ಳಬೇಕು ಎನ್ನುವುದರಿಂದ ಹಿಡಿದು ಅಡುಗೆ ಮನೆಯ ಸಿಂಕಿನಲ್ಲಿ ಕಟ್ಟಿದ ನೀರು ಯಾವ ಗುಂಡಿ ಒತ್ತಿದರೆ ಹೊರಹೋಗುತ್ತದೆ ಎಂಬುವವರೆಗೆ ಎಲ್ಲವನ್ನೂ ಕಲಿತುಕೊಳ್ಳಬೇಕು ! ಅದೇನು ಬ್ರಹ್ಮವಿದ್ಯೆಯೇ? ನಾಲ್ಕುಸಲ ಬಳಸಿದರೆ ಎಲ್ಲಾ ಕರತಲಾಮಲಕವಾಗುತ್ತದೆ. ಎಷ್ಟೆಂದರೂ ಇಲ್ಲಿ ಮುಂಬಯಿನ ಬಿಂದಾಸ್ ಜೀವನ ಸಾಧ್ಯವಿಲ್ಲ. ಜೋರಾಗಿ ಮಾತನಾಡಬಾರದು! ಜೋರಾಗಿ ಹಾಡು ಕೇಳಬಾರದು. ಸಣ್ಣ ವಾಲ್ಯೂಮ್ ಹಾಕಿದ ಆ ಟಿ.ವಿ. ಮುಂದೆ ಕುಳಿತರೆ ಸಮಾಧಾನವೇ ಆಗುವುದಿಲ್ಲ! ಕಿವಿಯೇನಾದರೂ ಮಂದವಾಗುತ್ತಿರಬಹುದೇ? ಅನುಮಾನ. ಈ ಕ್ಷಣದಲ್ಲಿ 'ಪುಷ್ಪಕ್' ಮೂಕಿ ಸಿನಿಮಾದಲ್ಲಿ ಫೈವ್ ಸ್ಟಾರ್ ಹೊಟೆಲ್ ನಲ್ಲಿ ಒದ್ದಾಡುವ ಕಮಲಹಾಸನ್ ನೆನಪಾಗುತ್ತಾನೆ. ಹೊರಗೆ ಹೊರಟಾಗ ಯಾರದೋ ಮನೆಯ ಬಾಲ್ಕನಿಯಿಂದ ಹಿಂದಿ ಭಜನ್, ಇನ್ನಾವುದೋ ಕಡೆಯಿಂದ ಕುಶೋರ್ ದಾ ನ ಹಾಡುಗಳು ಸಣ್ಣಗೆ ಕೇಳಿ ಬರುತ್ತವೆ. ಸುಖವೆನಿಸುತ್ತದೆ. ಚಿತ್ರಗಳು: snoqualmie falls, ಫ್ಯಾಂಟಮ್ ಲೇಕ್, ಗೋಲ್ಡನ್ ಗಾರ್ಡನ್ ಬೀಚ್ June 22 ಶಾಂತಸಾಗರದ ಕರೆಯಮೇಲೆ ಪ್ರೇಮರಾಗ ಬಹಳ ಹಿಂದೆ ಯಾವುದೋ ಸಿನಿಮಾವೊಂದರಲ್ಲಿ ಕನ್ನಡವೋ, ಹಿಂದಿಯೋ ನೆನಪಿಲ್ಲ 'Love Lock' ಪ್ರಸಂಗವನ್ನು ನೋಡಿದ್ದೆ. ಪ್ರೇಮಿಗಳಿಬ್ಬರು ಸಮುದ್ರದ ತೀರಕ್ಕೆ ಬಂದು ಅಲ್ಲಿಯ ತಂತಿ ಬೇಲಿಗೆ ಬೀಗವೊಂದನ್ನು ಜಡಿದು ಬೀಗದಕೈಯನ್ನು ನೀರಿನೊಳಗೆ ಎಸೆದು ಬಿಡುತ್ತಾರೆ. ಈಚೆಗೆ ಸಿಯಾಟಲ್ ನ ಆಲ್ಕಿ ಬೀಚಿಗೆ ಬಂದು ನೋಡಿದಾಗ ಬೀಚಿಗೆ ಸುತ್ತುವರಿದ ತಂತಿಯ ಬೇಲಿಯ ಮೇಲೆಲ್ಲಾ ಬೀಗಗಳು ತೂಗಾಡುತ್ತಿವೆ!! ಇಲ್ಲಿ ಹೀಗೆ ತೂಗುತ್ತಿರುವ ಬೀಗಗಳ ಸಂಖ್ಯೆ ಸುಮಾರು ೨೫೦ ಎಂಬುದು ಗೂಗಲ್ ಮಾಮನ ಅಂಬೋಣ. ಎಂದೋ ಮರೆತು ಹೋಗಿದ್ದ ಸಿನಿಮಾ ಕಣ್ಣಮುಂದೆ ಬಂದು ಕುಣಿದಾಡಿತು. ಅಯ್ಯೋ ಬೀಗ ಬೀಗ ! ಖುಷಿಯಿಂದ ಕೂಗಿಕೊಂಡೆ. ಪಕ್ಕದಲ್ಲೇ ಬರುತ್ತಿದ್ದ ಗಂಡ ಮತ್ತು ಮಗನಿಗೆ ನನ್ನ ಖುಷಿಯ ತಲೆ ಬುಡ ಅರ್ಥವಾಗಲಿಲ್ಲ. ಶಾಂತಸಾಗರ ನೋಡಲು ಬಂದು ಬೀಗ !ಬೀಗ! ಎಂದು ಉತ್ಸಾಹ ತೋರಿದರೆ? ಪ್ರೇಮವನ್ನು ಶಾಶ್ವತವಾಗಿ ಬಂಧಿಸಿಡಬೇಕೆಂಬ ಹಾರೈಕೆಯೇ ಇದರ‌ ಮೂಲ. ಸಿಯಾಟಲ್ ನಗರವಿರುವುದು ಶಾಂತಸಾಗರದ ಕಿನಾರೆಯಲ್ಲಿ. ಸಾಗರ ಎಂದ ಕೂಡಲೇ ಬೀಚುಗಳಿಗೇನು ಬರವಿಲ್ಲವಲ್ಲ? ಸಿಯಾಟಲ್ ನ ಬೀಚುಗಳಲ್ಲಿ ಅಲ್ಕೀ ಬೀಚ್ ಎಂಬುದೂ ಒಂದು. ಮುಂಬಯಿ ಬೀಚಿಗೂ ಇದಕ್ಕೂ ಅರ್ಥಾರ್ಥ ಸಂಬಂಧ ಕಲ್ಪಿಸುವುದು ಸರಿಯಲ್ಲ. ಇರಲಿ, ಈ ಬೀಚಿಗೆ ಸುತ್ತಲೂ ಕಟ್ಟಿದ ತಂತಿ ಬೇಲಿಯಿದೆ. ಇಲ್ಲಿ ಬರುವ ಪ್ರೇಮಿಗಳು ತಮ್ಮ ಪ್ರೇಮ ಪಾಶವನ್ನು ಭದ್ರವಾಗಿರಿಸಲು ಈ ಬೇಲಿಗೆ ಬೀಗವೊಂದನ್ನು ಜಡಿದು ಬೀಗದ ಕೈಯನ್ನು ನೀರಿಗೆ ಎಸೆದು ಬಿಡುತ್ತಾರೆ. ಬೀಗದ ಕೈಯೇ ಸಿಗದಿರುವಾಗ ಪ್ರೇಮ ಬಂಧನವನ್ನು ಇನ್ನು ಬಿಡಿಸುವುದಾದರೂ ಹೇಗೆ? ಸಿಯಾಟಲ್ ನ ಈ ಬೀಚನ್ನು ನೋಡುತ್ತಿದ್ದಾಗ ಸಿನಿಮಾದ ಪ್ರೇಮಿಗಳು ನೆನಪಾದರು. ಇಲ್ಲಿ ನಮ್ಮಂತಹ ಮುದುಕರಿಗೆ ಏನು ಕೆಲಸ ಎನ್ನದಿರಿ. ನಾವೂ ಮೂವತ್ತೆಂಟು- ಮೂವತ್ತೊಂಬತ್ತು ವರುಷ ಪ್ರೇಮ ನಿಭಾಯಿಸಿದ್ದೇವೆ -'ನಾ-ನೀ' 'ಕದನ ಕುತೂಹಲ'ದ ಮೂಲಕ !!! 'ಕದನಕುತೂಹಲ' ಕರ್ನಾಟಕ ಸಂಗೀತದ ಒಂದು ರಾಗದ ಹೆಸರು. ಈ ರಾಗದ ನಡೆ ಸಾಗರಬಿದ್ದು ಓಡುವ ರೀತಿ. ರಾಮನ ಪರಾಕ್ರಮವನ್ನು ಸ್ತುತಿಸುವ "ರಘುವಂಶ ಸುಧಾಂಬುಧಿ ಚಂದ್ರಿಕೆ" ಕೀರ್ತನೆಯೊಂದು ಈ ರಾಗದಲ್ಲಿದೆ. ರಾಮಲೀಲಾ ವಿನೋದಕ್ಕೆ ಕದನ ಕುತೂಹಲವಿರಬೇಕಲ್ಲ ? ಪ್ರೇಮ ಸ್ಥಾಪಿತವಾಗುವುದೂ ಕದನದ ಮೂಲಕವೇ ಅಲ್ಲವೇ? June 15

Misc FB

ಪು. ಶಿ. ರೇಗೆಯವರ ಸಾವಿತ್ರಿ : ಪರ್ಯಾಪ್ತ ಅನುವಾದ: ಮರಾಠಿ ಲೇಖಕ ಪುರುಷೋತ್ತಮ್ ಶಿವರಾಮ್ ರೇಗೆಯವರ ಸಾವಿತ್ರಿ ಕಾದಂಬರಿಯನ್ನು ಗಿರಿಜಾ ಶಾಸ್ತ್ರಿ ಯವರು ಅದೇ ಹೆಸರಿನಲ್ಲಿ ಭಾಷಾಂತರಿಸಿದ್ದಾರೆ. ಇದನ್ನು ಸುಧಾ ಆಡುಕುಳ ಅವರು ಆನಂದ ಭಾವಿನೀ ಎಂದು ರಂಗ ರೂಪಕ್ಕೆ ಅಳವಡಿಸಿ ಕರ್ನಾಟಕದ ಹಲವೆಡೆ ಇತ್ತೀಚೆಗೆ ಅದರ ಪ್ರದರ್ಶನಗಳು ನಡೆದವು. ನಾನು ಆನಂತರ ಗಿರಿಜಾ ಕಳಿಸಿದ ಅನುವಾದವನ್ನು ಓದಿದೆ. ಇದು ಗಿರಿಜಾಗೆ ನಾನು ಬರೆದ ಟಿಪ್ಪಣಿ: ಪ್ರೀತಿಯ ಗಿರಿಜಾ, ತನ್ನ ಜೀವನದ ದಿನ ದಿನದ ಆಗು ಹೋಗುಗಳು, ಮಾನಸಿಕ ಸ್ಥಿತಿ, ಆಲೋಚನೆಗಳು, ಹಾಗೂ ಸಮಕಾಲೀನ ವರ್ತಮಾನವನ್ನು ಕುರಿತ ಚಿಕ್ಕ ಚಿಕ್ಕ ಪತ್ರಗಳ ರೂಪದಲ್ಲಿದ್ದರೂ, ಒಂದು ಕಾವ್ಯದ ಗಹನತೆಯನ್ನು ಹೊಂದಿರುವ ಸಾವಿತ್ರಿ ಕಾದಂಬರಿಯ ವಸ್ತು-ವಿನ್ಯಾಸದ ಬಗ್ಗೆ ನಾನು ಇಲ್ಲಿ ಹೆಚ್ಚೇನೂ ಬರೆಯುವುದಿಲ್ಲ. ಇದು ಪ್ರೇಮನಿವೇದನೆಯೆಂದರೆ ಪ್ರೇಮ ನಿವೇದನೆ, ಅಲ್ಲವೆಂದರೆ ಅಲ್ಲ. ಯಾಕೆಂದರೆ ಇಲ್ಲಿ ಆಜ್ನಾತನಾಗಿ ಹಾಜರಿರುವ “ಆತನಿಗೆ” ಸಾವಿತ್ರಿ ಬರೆಯುವ ಪತ್ರಗಳಲ್ಲಿ ವ್ಯಕ್ತವಾಗುವ ಪ್ರೇಮ ಕೇವಲ ಆತನಿಗೇ ಸೀಮಿತವಾದುದಲ್ಲ. ಅದು ಒಂದು ಅತ್ಯುನ್ನತ ಮನಃಸ್ಥಿತಿಯಲ್ಲಿ ಅಷ್ಟೇ ಉನ್ನತ ಮನೋಭೂಮಿಕೆಯಲ್ಲಿ ಮಾತ್ರ ಸಾಧ್ಯವಾಗುವ ವಿಶ್ವಮಾನವ ಪ್ರಜ್ನೆ, ವಿಶ್ವಪ್ರೇಮ. ಈ ಕಾರಣಕ್ಕಾಗಿ ಈ ಸಾವಿತ್ರಿ ಮಹರ್ಷಿ ಅರಬಿಂದೋ ಅವರ Savitri: A legend and a Symbol ಮಹಾ ಕಾವ್ಯಕ್ಕೆ ಹತ್ತಿರ. ಕುವೆಂಪು ಕಾದಂಬರಿಗಳನ್ನೂ ನೆನಪಿಸುವ ಕೃತಿ. ವಿಶೇಷವೆಂದರೆ ಈ ಎಲ್ಲ ಕೃತಿಗಳಲ್ಲೂ ಒಂದು ಪಯಣ ಅಥವಾ ಪರ್ಯಟನವಿದೆ. ಆ ಪಯಣ ವಾಸ್ತವಿಕವೂ ಹೌದು ಮಾನಸಿಕವೂ ಹೌದು. ತನ್ನದೇ ಬೆಳಕಿನಲ್ಲಿ ಮುನ್ಸಾಗುವ ಅನಂತ ಪಯಣ ಅದು. (ಟ್ರಾವೆಲ್ಲಿಂಗ್ ಇನ್ಫಿನಿಟೀ ಬೈ ಇಟ್ಸ್ ಓನ್ ಲೈಟ್ -ಸಾವಿತ್ರಿ ). ಅಕ್ಕನ ಹಂಬಲ ಮತ್ತು ಇಲ್ಲಿನ ಸಾವಿತ್ರಿಯ ಹಂಬಲಗಳ ನಡುವೆ ಹೋಲಿಕೆ ಇದ್ದೂ ಎರಡೂ ಒಂದೇ ಅಲ್ಲ. ಅಕ್ಕನ ವಚನಗಳ ದೇಹ ಕೇಂದ್ರಿತ ಮತ್ತು ಆತ್ಮ ಕೇಂದ್ರಿತ ಪ್ರತಿಮೆಗಳ ಭಾವ ತೀವ್ರತೆ ಇಲ್ಲಿಲ್ಲ.ಸಾವಿತ್ರಿ ಒಂದು ರೀತಿಯಲ್ಲಿ ವೈಚಾರಿಕವಾಗಿ ಚಿಂತಿಸುತ್ತಲೇ ಆ ವೈಚಾರಿಕತೆಯನ್ನು ಅನುಭವದಿಂದ ವಿಶ್ಲೇಷಣೆಗೆ ಒಳಪಡಿಸುವ ಪಾತ್ರ. ಎಲ್ಲ ಪತ್ರಗಳೂ “ಅವನಿಗಾಗಿ” ಬರೆಯಲ್ಪಟ್ಟವು. ಅವನು ಆದರ್ಶವಾದರೆ ಆದರ್ಶ ಜೊತೆಗೂಡುವಿಕೆ ಹಾಗೂ ಸಂಗಾತಿತನ ಸಾವಿತ್ರಿ ಬಿತ್ತುವ ಕನಸು. ಆರಬಿಂದೋ ಅವರ ಸಾವಿತ್ರಿ ಯಂತೆಯೇ ಮನುಷ್ಯನಿಗೆ ತನ್ನ ನಶ್ವರತೆಯಾಚೆಗಿನ ದೈವಿಕ ಪ್ರೇಮದ, ದೈವಿಕ ಪ್ರಜ್ನೆಯ ಮತ್ತು ಶಾಶ್ವತ ಬದುಕಿನ ಹಾದಿಯನ್ನು ಈ ಕಾದಂಬರಿ ತೆರೆಯುತ್ತದೆ. ಇಬ್ಬರನ್ನೂ ಬೆಳೆಸುವ ಗಂಡು-ಹೆಣ್ಣು ಸಂಬಂಧದ ಮತ್ತು ವಿಶ್ವ ಪ್ರೇಮದ ಸ್ವರೂಪಗಳು ಈ ಕಾದಂಬರಿಯ ವಿನ್ಯಾಸದಲ್ಲಿ ಅನಾವರಣಗೊಂಡಿವೆ. ವೈಚಾರಿಕತೆಯಷ್ಟೇ ಅನುಭವವೂ ಇಲ್ಲಿ ಮುಖ್ಯವಾಗಿದೆ. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಅದರಲ್ಲೂ ನಾವು ಕನ್ನಡದಲ್ಲಿ ನವೋದಯ ಎಂದು ಯಾವುದನ್ನು ಗುರುತಿಸುತ್ತೇವೋ ಆ ಕಾಲದಲ್ಲಿ ಭಾರತೀಯ ಭಾಷೆಗಳ ಆಧುನಿಕ ಸಾಹಿತ್ಯದಲ್ಲಿ “ಪ್ರೇಮ” ಯಾಕೆ ಪ್ರಧಾನವಾಗಿ ಮುನ್ನೆಲೆಗೆ ಬಂತು ಎನ್ನುವುದು ಬೇರೆಯೇ ಆದ ಚರ್ಚೆ. ನಮ್ಮ ಬದುಕು ಮತ್ತು ಸಂಸ್ಕೃತಿಗಳು ಕ್ರಿಯಾಶೀಲವಾಗಲು ಮತ್ತು ಸೃಜನಶೀಲವಾಗಲು ನಿರ್ವಾಜ ಪ್ರೇಮವೇ ಬುನಾದಿ ಎನ್ನುವುದನ್ನು ಈ ಕಾದಂಬರಿಯೂ ಸಾದರ ಪಡಿಸುತ್ತದೆ. ಈ ಕೃತಿಯ ಪತ್ರ ಸಂದರ್ಭಗಳು ಘಟನೆಗಳು ಮತ್ತು ಸಂಗತಿಗಳು ಮಹಾರಾಷ್ಟ್ರದಿಂದ ಹೊರಗಿನ ಅಂದರೆ ಕೊಡಗು, ಹಡಗು, ಜಪಾನಿನ ಪುರಾತನ ರಾಜಧಾನಿ Kyoto ನಗರ ಮತ್ತು ಲಂಡನ್ ಗಳನ್ನು ಸೂಚಿಸುತ್ತಿರುವುದು ಕುತೂಹಲಕರ. ಅಲ್ಲದೇ ಸಾವಿತ್ರಿ ತನ್ನ ಕೊನೆಯ ಪತ್ರ ಬರೆದದ್ದು ಆಗಸ್ಟ್ ೧೫, ೧೯೪೭ ರಂದು ! ಅದರಲ್ಲಿ ಪ್ರಾಯಶಃ ಸೃಜನಶೀಲತೆಯ ಒಂದು ವ್ಯಾಖ್ಯಾನ ಕೂಡಾ ದೊರಕುತ್ತದೆ: “ ಹಾಗೆ ನೋಡಿದರೆ ನವಿಲಿಗೆ ನೃತ್ಯ ಮಾಡಲು ಎಲ್ಲಿ ಬರುತ್ತದೆ ? ಒಂದು ಕಾಲನ್ನು ಎತ್ತಿದ ತಕ್ಷಣ ಅದು ತನ್ನ ಸಮತೋಲನವನ್ನು ಕಳೆದು ಕೊಳ್ಳುತ್ತದೆ, ಸಾವರಿಸಲಿಕ್ಕಾಗಿ ಅದು ತಕ್ಷಣ ಕಾಲನ್ನು ಕೆಳಗೆ ಬಿಡುತ್ತದೆ. ಇನ್ನೊಂದು ಕಾಲನ್ನು ಮೇಲೆ ಎತ್ತುತ್ತದೆ. ಹೀಗೆ, ಮತ್ತೆ ಮತ್ತೆ......... ad infinitum. ನೋಡುವವರು ಅದನ್ನು ನೃತ್ಯವೆಂದು ಕರೆಯುತ್ತಾರೆ.” (ಕೊನೆಯ ಪುಟ) ಈ ಸಾಲುಗಳು ಇಡೀ ಕಾದಂಬರಿಗೆ ಹೊಸ ಭಾಷ್ಯವನ್ನು ಬರೆಯುವಂತಿವೆ ಮಾತ್ರವಲ್ಲ, ನಮ್ಮ ಕ್ರಿಯಾಶೀಲತೆ ಮತ್ತು “ನಮ್ಮ ಅಹಮ್ಮಿನ ಕೋಟೆಯಲ್ಲಿ” ನಾವು ಜತನದಿಂದ ಕಾಪಿಟ್ಟುಕೊಂಡು ಬಂದಿರುವ ಸೃಜನಶೀಲತೆಯ ಕಲ್ಪನೆಯನ್ನೂ ಪುನರ್ವಿಮರ್ಶಿಸಲು ಒತ್ತಾಯಿಸುತ್ತವೆ. ಸಾವಿತ್ರಿ ಚಾರಿತ್ರಿಕವಾಗಿ ಇನ್ನೂ ಒಂದು ದೃಷ್ಟಿಯಿಂದ ಮುಖ್ಯ. ಈ ಕಾದಂಬರಿ ಭಾರತೀಯ ಭೂ ಖಂಡದ ಸ್ತ್ರೀ ವಾದಗಳ ಪೂರ್ವ ಪೀಠಿಕೆಯಂತಿದೆ ಎಂದರೆ ತಪ್ಪಾಗಲಾರದು. ಕಳೆದ ಶತಮಾನದ ೩೦-೪೦ ರ ದಶಕಗಳ ಹೊತ್ತಿಗಾಗಲೇ ಗಣನೀಯ ಸಂಖ್ಯೆಯಲ್ಲಿ ಹೆಣ್ಮಕ್ಕಳು ವಿದ್ಯಾ ವಂತರಾಗಿದ್ದರು. ಬಹಳ ಮಂದಿ ಕಾಲೇಜು ಮೆಟ್ಟಲನ್ನೂ ಏರಿದ್ದರು. ಹಲವರು ಅದಕ್ಕಿಂತ ಉನ್ನತ ಮಟ್ಟದ ವ್ಯಾಸಂಗವನ್ನು ಕೂಡಾ ಪೂರೈಸಿದ್ದರು. ಅವರಲ್ಲಿ ಹೆಚ್ಚಿನವರು ಮೇಲ್ಜಾತಿ, ಮೇಲ್ವರ್ಗಗಳಿಗೆ ಸೇರಿದ್ದರು. ಅದೇನೇ ಇರಲಿ, ವಿದ್ಯಾವಂತ ಸ್ತ್ರೀಯರು ಈ ಹೊತ್ತಿಗೆ ತಮ್ಮ ಬಗ್ಗೆ, ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಅಸ್ತಿತ್ವ ಮತ್ತು ಅಸ್ಮಿತೆಗಳ ಕುರಿತು ಹೊಸ ರೀತಿಯಲ್ಲಿ ಯೋಚಿಸಲು ಆರಂಭಿಸಿದ್ದರು. ಅದು ಮಹಿಳೆಯರ ಚಾರಿತ್ರಿಕ ಅಸ್ಮಿತೆಯ ಉದ್ಘಾಟನೆಯ ಕಾಲ. ‘ ಇಂದಿರಾ ಬಾಯಿ’ ಯರ ಕಾಲ. ತಾನು ಕೇವಲ ಗಂಡು ದುರ್ನೋಟದ ವಸ್ತುವಲ್ಲ, ತನಗೂ ಒಂದು ಚರಿತ್ರೆ, ಮನಸ್ಸು, ಹಂಬಲ ಹಾರೈಕೆಗಳಿವೆ ಎನ್ನುವ ಆಧುನಿಕ ಜಾಗೃತಿ ಸ್ತ್ರೀ ಲೋಕದಲ್ಲಿ ತಲೆಯೆತ್ತಿದ ಸಮಯ. ಅಂತಹ ಮಹಿಳಾ ಓದುಗವರ್ಗ ಕೂಡಾ ಈ ಕಾಲದಲ್ಲಿ ನಿರ್ಮಾಣವಾಯಿತು. ತಮ್ಮ ಹಂಬಲಗಳನ್ನು ಮುಚ್ಚಿಡದೇ ನಿರ್ಭಯವಾಗಿ ಮಹಿಳಾ ಲೇಖಕಿಯರು ಬರೆಯಲಾರಂಬಿಸಿದಾಗ ಹೊಸ ಹೊಸ ಸ್ತ್ರೀ ಕೇಂದ್ರಿತ ಸಾಹಿತ್ಯ ಕೂಡಾ ಉತ್ಪಾದಿತವಾಯಿತು. ಮಾನಸಿಕವಾಗಿ ತನ್ನನ್ನು ಅರ್ಥ ಮಾಡಿಕೊಳ್ಳಬಲ್ಲ, ತನ್ನನ್ನು ಸಮಾನ ಗೌರವದಿಂದ ನಡೆಸಿಕೊಳ್ಳಬಲ್ಲ ಪ್ರೀತಿಯ ಸಂಗಾತಿಯ ಹಾರೈಕೆ ಈ ಸಂದರ್ಭದ ಮಹಿಳಾ ಸಾಹಿತ್ಯದಲ್ಲಿ ಕಾಣುತ್ತದೆ. ಆದುದರಿಂದ ಒಂದೋ ಪ್ರೇಮಮಯ ಸಫಲ ದಾಂಪತ್ಯ ಅಥವಾ ಪ್ರೇಮವಿಲ್ಲದ ಮುರಿದುಬಿದ್ದ ವಿಫಲ ದಾಂಪತ್ಯ ಕಥನಗಳು ಈ ಸಂದರ್ಭದಲ್ಲಿ ಸೃಷ್ಟಿಯಾದವು ಮತ್ತು ಜನಪ್ರಿಯವಾದವು. ನಮ್ಮ ತ್ರಿವೇಣಿ ಈ ಸಾಹಿತ್ಯ ಪ್ರಕಾರದಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಮೇರು ಮಣಿಗಳಲ್ಲಿ ಒಬ್ಬರು. ಗಂಭೀರ ಪುರುಷ ಲೇಖಕರೂ ಏರು ಹುಬ್ಬಿನ ವಿಮರ್ಶಕರೂ ಮಹಿಳಾ ಕಾದಂಬರಿಗಳನ್ನು “ಅಡುಗೆ ಮನೆ ಸಾಹಿತ್ಯ” ಎಂದು ಲೇವಡಿ ಮಾಡಿರಬಹುದು. ಅದು ಅವರ ಖರ್ಮ! ಆದರೆ ಈ ಕೃತಿಗಳು ಆಧುನಿಕ ಭಾರತೀಯ ಭಾಷೆಗಳ ಸ್ತ್ರೀ ವಾದದ ದಾಖಲೆಗಳು ಎನ್ನುವುದಂತೂ ನಿಜ. ಪು. ಶಿ. ರೇಗೆಯವರ ಸಾವಿತ್ರಿ ಈ ಕಾಲದಲ್ಲಿ ಬಂತು ಎನ್ನುವುದು ಗಮನೀಯ. ತನ್ನ ಆಸೆ, ಹಂಬಲ, ಇಚ್ಛೆ, ಕಾಮನೆಗಳನ್ನು ದಿಟ್ಟವಾಗಿ ಹೇಳಿಕೊಂಡವರಲ್ಲಿ ಪ್ರಾಯಶಃ ಯಮಿ ವೇದ ಕಾಲದವಳು, ದ್ರೌಪದಿ, ಮಾಧವಿ ಮೊದಲಾದವರು ಪುರಾಣ ಕಾಲದವರು, ಅಕ್ಕ ಐತಿಹಾಸಿಕ ಕಾಲದವಳು, ಸಾವಿತ್ರಿ ಹಾಗೂ ಅವಳ ಸಮಕಾಲೀನ ಮತ್ತು ಅನಂತರದ ಕಥಾ ನಾಯಕಿಯರು ಆಧುನಿಕರು. ನಿಮ್ಮ ಮಾತುಗಳಲ್ಲಿ ನೀವು ತೋಡಿಕೊಂಡ ಭಾಷಾಂತರದ ಪಡಿಪಾಟಲುಗಳು ಎಲ್ಲ ಅನುವಾದಕರರೂ ಎದುರಿಸುವ ಕಷ್ಟಗಳು. ಭಾಷಾಂತರದ ಓದುಗರಿಗೆ ಸಾಮಾನ್ಯವಾಗಿ ಅವುಗಳ ಅರಿವಿರುವುದಿಲ್ಲ. ನಾವು ತೆಗೆದುಕೊಳ್ಳುವ ಭಾಷಾಂತರ ನಿರ್ಧಾರಗಳ ಕುರಿತೂ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇರಲಿ. ನೀವು ಸಾವಿತ್ರಿ ಯನ್ನು ಸೊಗಸಾಗಿ ಕನ್ನಡಕ್ಕೆ ತಂದಿದ್ದೀರಿ. ಈ ಕಾದಂಬರಿಯನ್ನು ರೂಪಿಸುವ ಪುಟ್ಟ ಪುಟ್ಟ ಪತ್ರಗಳು ಸಾವಿತ್ರಿಯ ದೈನಿಕವನ್ನೂ, ಅವಳ ಆಲೋಚನೆಗಳನ್ನೂ, ‘ಆತನ’ ಅನಿಸಿಕೆಗಳಿಗೆ ಅವಳ ಪ್ರತಿಕ್ರಿಯೆಗಳನ್ನೂ ಒಳಗೊಂಡಿವೆ. ಇವನ್ನು ಕನ್ನಡದಲ್ಲಿ ಕಾಗದ ಬರೆಯುವ ಪ್ರಮಾಣೀಕೃತ ಶೈಲಿಯಲ್ಲಿ ನೀವು ಪ್ರಸ್ತುತ ಪಡಿಸಿರುವುದರಿಂದ ಕನ್ನಡ ಸಾವಿತ್ರಿ ಆಪ್ತವಾಗಿದೆ. ನಿತ್ಯದ ವಾಸ್ತವ, ಮನೋ ಲಹರಿಗಳು, ಪ್ರಶ್ನೆಗಳು, ವಿಚಾರಣೆ, ಸಲಹೆಗಳು, ಆತಂಕಗಳು, ಮುಂದಿನ ಯೋಜನೆಗಳು ಇತ್ಯಾದಿ ಚಿಕ್ಕ ಚಿಕ್ಕ ವಾಕ್ಯಗಳು, ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಚೆನ್ನಾಗಿ ಮೂಡಿ ಬಂದಿವೆ. ಹಾಗೇಯೇ ದೀರ್ಘ ವಾಕ್ಯಗಳು ಚಿಂತನೆಯ ಗಹನತೆಯನ್ನು ಸೂಚಿಸುವಂತಿವೆ. ಈದನ್ನು ಓದುವಾಗ ನಮ್ಮ ಅಥವಾ ಪಕ್ಕದ ಮನೆ ಮಗಳು ಮಾತಾಡಿದಂತೆ ಅಥವಾ ಹೇಳಿದಂತೆ ಅನ್ನಿಸುತ್ತದೆ. ತಿರು ಪೇಟೆಯಿಂದ ಪ್ರಪಂಚ ಸುತ್ತಿ ಬರುವ ಪತ್ರಗಳಲ್ಲಿನ ಆಶಯಗಳು ನಮ್ಮನ್ನೂ ಅಲ್ಲೆಲ್ಲ ತಿರುಗಾಡಿಸಿ ಆನಂದ ಭಾವಿನಿಯ ಸಂತಸ ಮತ್ತು ಆತಂಕ ಎರಡರಲ್ಲೂ ಭಾಗವಹಿಸುವಂತೆ ಮಾಡುತ್ತವೆ. ಯಾವುದೇ ಭಾಷಾಂತರ ಯಾಂತ್ರಿಕವಾದಾಗ ಹೆಜ್ಜೆ ಹೆಜ್ಜೆಗೂ ಭಾಷೆಯ/ಕನ್ನಡದ ಹಾದಿಯಲ್ಲಿ ಕಲ್ಲೋ ಮುಳ್ಳೊ ಚುಚ್ಚಿದಂತಾಗಿ ಓದಿನ ಪಯಣವೇ ಪ್ರಯಾಸವಾಗುತ್ತದೆ. ಘಳಿಗೆಗೊಮ್ಮೆ ಪುಸ್ತಕವನ್ನು ಬದಿಗಿಡುವಾ ಅಂತ ಅನ್ನಿಸುತ್ತದೆ. ಆದರೆ ನಿಮ್ಮ ಅನುವಾದ ಮುದ ನೀಡುವ ತರ್ಜುಮೆಯಾಗಿದೆ. ತರ್ಜುಮೆಯಲ್ಲಿ ದೇಶೀಕರಣ ಮತ್ತು ವಿದೇಶೀಕರಣ ಎಂಬ ಎರಡು ತಂತ್ರಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಮೊದಲನೆಯ ಬಗೆಯಲ್ಲಿ ಮೂಲ ಪಠ್ಯ ನಮ್ಮ ಭಾಷೆಯ ಜಾಯಮಾನಕ್ಕೆ ತಕ್ಕಂತೆ “ಪಳಗುತ್ತದೆ.” ಎರಡನೆಯ ರೀತಿಯ ಭಾಷಾಂತರದಲ್ಲಿ ಮೂಲದ ಉಕ್ತಿ ಸೌಂದರ್ಯ ಯಾಂತ್ರಿಕವಾಗಿ ಅಲ್ಲ ಬದಲಾಗಿ ಸೃಜನಶೀಲವಾಗಿ ನಮ್ಮ (=ಭಾಷಾಂತರದ) ಭಾಷೆಯಲ್ಲಿ ಹೂ ಬಿಡುತ್ತದೆ. ದೇಶೀಕರಣ ತಥಾಕಥಿತ ಮೂಲ ಪಠ್ಯವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಉದಾಹರಣೆಗೆ ನಾವು ಕನ್ನಡಕ್ಕೆ ಕಾದಂಬರಿಯೊಂದನ್ನೋ, ಕವಿತೆಯನ್ನೋ ಅನುವಾದಿಸಿದಾಗ ಅದು ಶುದ್ಧಾಂಗವಾಗಿ ಕನ್ನಡ ಕೃತಿಯಾಗಿ ಬದಲಾಗುತ್ತದೆ. ಆದರೆ ವಿದೇಶೀಕರಣ ರೀತ್ಯಾ ತರ್ಜುಮೆಯಲ್ಲಿ ತಥಾಕಥಿತ ಮೂಲ ಪಠ್ಯವೂ ಬದಲಾಗುತ್ತದೆ, ತರ್ಜುಮೆಯ ಭಾಷೆಯೂ ಸ್ವಲ್ಪ ಮಟ್ಟಿನ ಪರಿವರ್ತನೆಗೆ ಒಳಗಾಗುತ್ತದೆ. ದೇಶೀಕರಣದ ತರ್ಜುಮೆಗೆ ನಾನು ನಿಮಗೆ ಉದಾಹರಣೆ ಕೊಡಬೇಕಾಗಿಲ್ಲ. ವಿದೇಶೀಕರಣಕ್ಕೆ ಉದಾಹರಣೆ ಕೊಡುವುದಾದರೆ, ಇದು ತರ್ಜುಮೆಯಾದ ಕವಿತೆ ಅಲ್ಲ, ಆದರೂ ಜಯಂತ ಕಾಯ್ಕಿಣಿ ಅವರ ಸಿನಿಮಾ ಪದ್ಯ “ ಅನಿಸುತಿದೆ ಯಾಕೋ ಇಂದು” ವಿನ ಈ ಸಾಲುಗಳನ್ನು ಗಮನಿಸಿ: “ ಕೊಲ್ಲು ಹುಡುಗಿ ಒಮ್ಮೆ ನನ್ನಾ .. ಹಾಗೇ ಸುಮ್ಮನೇ.. “; “ಪೂರ್ಣ ಚಂದಿರಾ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ” ಅಥವಾ “ ಮನಸೀನಾ ಪುಟದಲಿ ಕೇವಲ ನಿನ್ನದೆ ಸಹಿ ಇದೆ.” ಕೊಲ್ಲು, ರಜಾ ಹಾಕಿದಾ, ಮನಸಿನಾ ಪುಟದಲಿ, ನಿನ್ನದೆ ಸಹಿ ಇದೆ ಇತ್ಯಾದಿ ಇಂಗ್ಲೀಶ್ ಅಭಿವ್ಯಕ್ತಿಗಳು ಇಲ್ಲಿ ಹೇಗೆ ಮೂಲ ಪದಪುಂಜಗಳನ್ನೂ, ಕನ್ನಡವನ್ನೂ ಪರಿವರ್ತಿಸಿ, ಹೊಸ ಉಕ್ತಿ ವೈವಿಧ್ಯವನ್ನು ಪರಿಚಯಿಸಿ ಕನ್ನಡದ ಸಮೃದ್ಧಿಗೆ ಕಾರಣವಾಗಿವೆ ಎಂಬುದನ್ನು ಗಮನಿಸಿ. ನನ್ನ ಪ್ರಕಾರ ಇಂತಹ ಭಾಷಾಂತರ ಭಾಷೆಗಳನ್ನು ಬೆಳೆಸುತ್ತದೆ, ಭಾಷಾ ಸಾಮೀಪ್ಯವನ್ನು ಸಾಧಿಸುತ್ತದೆ. ಈ ಅರ್ಥದಲ್ಲಿ ಭಾಷಾಂತರದ ಭಾಷೆ ಮೂಲ ಮತ್ತು ಸ್ವೀಕಾರದ ಭಾಷೆಗಳ ನಡುವೆ ರೂಪುವಡೆದ ಹೊಸ ಬಾಷೆಯೇ ಆಗಿದೆ (ಡೇರಿಡಾ, ಹೋಮಿ ಭಾಭಾ). ಆಶ್ಚರ್ಯದ ಸಂಗತಿ ಎಂದರೆ ಭಾಷಾಂತರದ ವಿಷಯಕ್ಕೆ ಬಂದಾಗ ಭಾಷಾ ಸಮುದಾಯಗಳು ಸ್ವಲ್ಪ ಮಟ್ಟಿಗೆ ಸ್ವಾರ್ಥಿಯಾಗಿ ಬಿಡುತ್ತವೆ . ಅವುಗಳ ಸದಸ್ಯರ ಭಾಷಾ ಅಸ್ಮಿತೆ ಎಲ್ಲಿಂದಲೋ ಧುತ್ತೆಂದು ಜಾಗೃತವಾಗಿಬಿಡುತ್ತದೆ ಮತ್ತು ಬಹಳ ಬಾರಿ ಅದು ಅನುವಾದ ವಿಮರ್ಶಕರ ದ್ವಂದ್ವ ನೀತಿಗೆ ಕಾರಣವಾಗುತ್ತದೆ. ಬೇರೆ ಭಾಷೆಯಿಂದ ಕೃತಿಯೊಂದು ನಮ್ಮ ಭಾಷೆಗೆ (ಇಲ್ಲಿ ಉದಾಹರಣೆಗೆ ಕನ್ನಡ ಅಂದುಕೊಳ್ಳೋಣ) ಭಾಷಾಂತರವಾಗಿ ಬರುವಾಗ ತನ್ನ ಮೂಲ ಗುಣಗಳನ್ನು ಅದು ಪೂರ್ತಿಯಾಗಿ ಬಿಟ್ಟು ಕನ್ನಡೀಕರಣಗೊಳ್ಳಬೇಕೆಂದು ಅಪೇಕ್ಷಿಸುತ್ತೇವೆ. ಅದು ಸಹಜ ಎಂದೂ ಅಂದುಕೊಳ್ಳುತ್ತೇವೆ. ಆದರೆ ಕನ್ನಡದ ಕೃತಿಯೊಂದು ಬೇರೆ ಭಾಷೆಗೆ ಅನುವಾದ ಆಗುವಾಗ ಭಾಷಾಂತರದ ಬಗೆಗಿನ ಮೇಲೆ ಹೇಳಿದ ಸಹಜ ನಿಲುವು ಬದಲಾಗುತ್ತದೆ. ಬೇರೆ ಭಾಷೆಗೆ ಕನ್ನಡದಿಂದ ತರ್ಜುಮೆಯಾಗುವ ಕೃತಿ ಅ ಭಾಷೆಯ ಸಹಜ ಜಾಯಮಾನಕ್ಕೆ ಹೊಂದುವಂತೆ ಇರಬೇಕೆಂದು ನಾವು ಅಪೇಕ್ಷಿಸುವುದಿಲ್ಲ! ಬದಲಾಗಿ ಅದರ ಕನ್ನಡತನಕ್ಕೆ ಚೂರೂ ಭಂಗ ಬರಬಾರದು ಎಂದು ವಾದಿಸುತ್ತೇವೆ. ಅನೇಕ ಖ್ಯಾತ ವಿಮರ್ಶಕರೂ ಕೂಡಾ ಒಳ ಬರುವ ಮತ್ತು ಹೊರ ಹೋಗುವ ತರ್ಜುಮೆಯ ಬಗೆಗೆ ಒಂದೇ ಉಸಿರಿನಲ್ಲಿ ಈ ವೈರುಧ್ಯದ ದೋರಣೆಯನ್ನು ತಳೆಯಲು ಹಿಂದೆಗೆಯುವುದಿಲ್ಲ. ಆದುದರಿಂದಲೇ ಗಾಯತ್ರಿ ಸ್ಪಿವಾಕ್ ನಿರ್ದಿಷ್ಟ ಓದುಗರನ್ನು-ಆದರ್ಶ ಓದುಗರನ್ನು ಕೂಡಾ- ಹೊರಗಿಟ್ಟೇ ಭಾಷಾಂತರದ ಕೆಲಸಕ್ಕೆ ಹೊರಡಬೇಕು ಎಂದು ಹೇಳುತ್ತಾರೆ. ನಮ್ಮ ಓದಿನಿಂದ ನಮಗೆ ದಕ್ಕುವ ತಥಾಕಥಿತ ಮೂಲದ ಉಕ್ತಿ ವೈವಿಧ್ಯ ಮತ್ತು ಸೌಂದರ್ಯವನ್ನು ಅನುವಾದಿಸುವುದು ಒಳ್ಳೆಯ ಅನುವಾದ. ಮರಾಠಿಯಿಂದ ಕನ್ನಡಕ್ಕೆ ಅನುವಾದಿಸುವಾಗ ನೀವು ಈ ಸಮಸ್ಯೆಯನ್ನು ಎದುರಿಸಿರುವ ಸಾಧ್ಯತೆ ಕಡಿಮೆ. ಎರಡು ಭಿನ್ನ ಭಾಷಾ ಕುಟುಂಬಗಳಿಗೆ ಸೇರಿದ್ದರೂ, ಒಂದೇ ಸಾಂಸ್ಕೃತಿಕ ವಲಯಗಳಿಗೆ ಸೇರಿದ ಭಾಷೆಗಳಾದ್ದರಿಂದ ಅವುಗಳ ಅಭಿವ್ಯಕ್ತಿಯ ರೀತಿಗಳು ತುಂಬಾ ಹತ್ತಿರ. ಅವುಗಳ ನಡುವಣ ಕೊಡು-ಪಡೆ ಅಷ್ಟರ ಮಟ್ಟಿಗೆ ಸುಲಭಸಾಧ್ಯ. ಆದರೆ ಈ ಕಾದಂಬರಿಯ ಮನೋಲೋಕವನ್ನು ಅರ್ಥ ಮಾಡಿಕೊಳ್ಳಲು ನೀವು ಸಾಕಷ್ಟು ಶ್ರಮಿಸಿದ್ದೀರಿ. ನಿಮ್ಮ ಭಾಷಾಂತರ ಕನ್ನಡದ್ದೇ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಅಲ್ಲಿ ಇಲ್ಲಿ ಚಿಕ್ಕ ಮಟ್ಟಿನ ಅರ್ಥ ಸಂಧಿಗ್ಧತೆ ಬಂದಿದ್ದರೂ ಅದು ಗೌಣ. ಸಾವಿತ್ರಿಯ ಕೊಡಗು ವಾತಾವರಣವೂ ನಿಮ್ಮ ಅನುವಾದಕ್ಕೆ ಸಹಾಯ ಮಾಡಿದೆ. ನಾನು ನಮ್ಮೂರಿನಲ್ಲೇ ನಡೆದ ಕಥೆಯಂತೆ ಇದನ್ನು ಓದಿದ್ದೇನೆ. ಇಷ್ಟು ಚೆಂದದ ತರ್ಜುಮೆಯನ್ನು ಕನ್ನಡಕ್ಕೆ ತಂದ ನಿಮಗೆ ಕೃತಜ್ನತೆಗಳು ಮತ್ತು ಅಭಿನಂದನೆಗಳು. ಸಾವಿತ್ರಿಯ ರಂಗರೂಪವನ್ನು ರಚಿಸಿದ ಸುಧಾ ಆಡುಕುಳ, ಅಭಿನಯಿಸಿದ ಸಿರಿ ವಾನಳ್ಳಿ ಮತ್ತು ಪ್ರಸ್ತುತ ಪಡಿಸಿದ ರಂಗ ತಂಡದ ಎಲ್ಲರಿಗೂ ಅಭಿನಂದನೆಗಳು. ಇನ್ನೂ ಬರೆಯಬಹುದು. ಆದರೆ ಸದ್ಯಕ್ಕೆ ಸಾಕು -😊 ಇಂತೀ, ಶಿವರಾಮ ಪಡಿಕ್ಕಲ್ jan 16/23 ನಮ್ಮ ಒಂದು ಟೆಂಪಲ್ ರನ್ ( ಪದ್ಮಾಕುಮಾರಿಯವರ ಕ್ಷಮೆ ಕೋರಿ) "ಇಷ್ಟೊಂದು ಜನ fan followers? ಯಾವ ಸಿನಿಮಾ ನಟನಿಗೂ, ಗಾಂಧೀಜಿಯಂತಹ ನಾಯಕನಿಗೂ ಇಲ್ಲದಷ್ಟು! ಅದೂ, ಕಾಲವಾಗಿ ನೂರೈದು ವರುಷಗಳ ಆನಂತರವೂ? ದೇಶದ ಅನೇಕ ಕಡೆಗಳಿಂದ ಜನ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ, ಎಂದರೆ ಅವನು ತನ್ನ ಬದುಕಿದ ಕಾಲದಲ್ಲಿ ಎಂತಹ ಕೆಲಸ ಮಾಡಿರಬೇಕು-ಇಂತಹ ಸಾಮಾಜಿಕ ಸ್ಥಾನಮಾನ ಸಿಗಬೇಕಾದರೆ! ಸಾಮಾನ್ಯ ವ್ಯಕ್ತಿಯೊಬ್ಬ ಒಂದು ದೊಡ್ಡ ಸಂಸ್ಥಾನವಾಗಬೇಕಾದರೆ, ಅವನು ಪ್ರತಿಪಾದಿಸಿದ ಕರುಣೆ, ಪ್ರೀತಿ, ಕೋಮು ಸೌಹಾರ್ದ ಅದೇ ಮುಖ್ಯವಾಗಿರಬೇಕಲ್ಲವಾ?" ಅವನೂ ಅವಳೂ ಬೆಳಗಿನ ಝಾವ ನಾಲ್ಕಕ್ಕೇ ಶಿರಡಿ ಸಾಯಿಬಾಬನ ಮಂದಿರದೊಳಗೆ ನೂರಾರು ಜನರ ಸರತಿ ಸಾಲಿನಲ್ಲಿ‌ ನಿಂತಿದ್ದರು. ಸಾಲು ಸಾಲು ಸುತ್ತುವ ಕಂಬಿಗಳು! ಬಾಬನ ನೋಡಲಿಕ್ಕೆಂದು ಅವಳು ಬಂದಿದ್ದರೆ, ಕೇವಲ ಅವಳ ಜೊತೆಗೆಂದು ಇವನು ಬಂದಿದ್ದ. ಮೂರ್ಖರು ಎಲ್ಲಾ ಮೂರ್ಖರು...ಎಲ್ಲಾ ವ್ಯಾಪಾರ. ಎಂದ ಇಷ್ಟೊಂದು ಜನ ಲಕ್ಷಗಟ್ಟಲೆ! ಎಲ್ಲರೂ ಮೂರ್ಖರೇ ಅಂತೀಯ? ಇದು ಅಹಂಕಾರ ಆಗೋಲ್ವಾ? ಈ ಸಣ್ಣ ಊರಲ್ಲಿ ಏರ್ಪೋರ್ಟ್ ಕೂಡ ಇದೆ. ರಸ್ತೆ ಎಷ್ಟು ಚೆನ್ನಾಗಿದೆ. ಎಲ್ಲ ಕಡೆಯಿಂದ ರೈಲು, ಬಸ್ ವ್ಯವಸ್ಥೆ ಇದೆ.ಸಂಸ್ಥೆಯ ಹೆಸರಿನಲ್ಲಿ ದತ್ತಿ ದಾನಗಳಿವೆ, ಶಾಲಾ ಕಾಲೇಜುಗಳಿವೆ! ಎಷ್ಟು ಹೊಟೆಲ್ಲುಗಳು ! ಇಷ್ಟೆಲ್ಲ ವ್ಯವಸ್ಥೆ ಯಾಕಾಗಿ? ಯಾರ ಸಲುವಾಗಿ? ಎಲ್ಲ ವ್ಯಾಪಾರ, ದುಡ್ಡು ಮಾಡೋ ಸಾಧನ ! ಸಾಯಿಬಾಬನ್ನ ಎನ್ ಕ್ಯಾಷ್ ಮಾಡ್ಕೋತಿದ್ದಾರೆ. ನಾನ್ ಸೆನ್ಸ್. ಇದನ್ನೆಲ್ಲಾ ನೋಡ್ತಾ ಸುಮ್ನೆ ಯಾಕೆ ಕೂತಿದ್ದಾನೆ ಅವನು? ಅವನು ಬದುಕಲ್ಲಿ ಎಂದಾದರೂ ಚಿನ್ನದ ಕಿರೀಟ, ಚಿನ್ನದ ತಗಡಿನ ಮನೆ ಬಯಸಿದ್ದನಾ? ತುಂಡು ಮುಂಡುಟ್ಟ ಫಕೀರ! ಯಾವಾಗಲೂ ದೀನ ದಲಿತರ ಪರವಾಗಿದ್ದವನು ಅಂತ ಹೇಳ್ತೀಯಲ್ಲ ನೀನೇ? ಅವನ ಇಷ್ಟಕ್ಕೆ ವಿರುದ್ಧವಾಗಿ ಇವರೆಲ್ಲಾ ಮಾಡ್ತಿಲ್ವಾ? ಅದನ್ನು ನೋಡ್ಕೊಂಡು ಸುಮ್ನೆ ಕೂತಿದ್ದಾನೆ ಯಾಕೆ? ಅಲ್ಲಲ್ಲೇ ನೇತುಹಾಕಿದ್ದ "Beware of pickpocketers and thieves" ಎಂಬ ಫಲಕಗಳತ್ತ ಪ್ರಶ್ನಾರ್ಹವಾಗಿ ಬೊಟ್ಟು ಮಾಡಿ ತೋರಿಸಿದ. ವ್ಯಾಪಾರ ಮಾಡ್ತಿದ್ದಾರೆ ನಿಜ. ಹೊಟೆಲ್ ಇಲ್ಲದೇ ಇದ್ದಿದ್ದರೆ ನಾವು ಎಲ್ಲಿ ಇಳಕೋಬೇಕಿತ್ತು? ಏನು ಊಟ ಮಾಡ್ಬೇಕಿತ್ತು?ಟೂರಿಸಂ ಎಷ್ಟು ದೊಡ್ಡ ಉದ್ಯಮ. ಉಚಿತವಾಗಿ ಕೂಡ ಊಟ ಇದೆಯಲ್ಲಾ? ಧರ್ಮಶಾಲೆಗಳೂ ಇವೆಯಲ್ಲ? ಅಲ್ಲಿ ಹೋಗಿ ಇರೋಣ ಆಗುತ್ತಾ? ನಮಗೆ ಎಲ್ಲಾ ಸುಸಜ್ಜಿತ ಬೇಕಲ್ಲ? ಉಚಿತ ಇರೋಕಡೆ ಕೊಳಕು ಬೇಡ ಅಂತೀಯ! ಸುಸಜ್ಜಿತ ಇರೋಕಡೆ ಹಣ ಲೂಟಿ ಮಾಡ್ತಾರೆ ಅಂತೀಯ! ಏನು ಮಾಡಿದ್ರೂ ಯಾರದೋ ಹೊಟ್ಟೆಪಾಡು ನಡೀತಿದೆಯಲ್ಲ? ವ್ಯಾಪಾರ ಅಂದಮೇಲೆ ದ್ರೋಹ ಇದ್ದೇ ಇರುತ್ತೆ ಅದು ಯಾರ ಸನ್ನಿಧಿಯಾದರೆ ತಾನೇ ಏನು? ಏನಿದ್ದರೂ ವ್ಯವಸ್ಥಾಪಕರು ಜವಾಬ್ದಾರರು. ಈ ವ್ಯವಸ್ಥೆ ಮನುಷ್ಯರು ಮಾಡಿಕೊಂಡದ್ದು. ಅದಕ್ಕೆ ಅವರು ಕಾರಣ. ಮತ್ತೆ ಅವನೇನು ಕಣ್ಣು‌ಮುಚ್ಚಿ ಕುಳಿತಿದ್ದಾನಾ? ಇದನ್ನು ನೀನು ಅವನಿಗೇ ಕೇಳಬೇಕು. ಎಲ್ಲಿದ್ದಾನೆ? ಸಮಾಧಿಯೊಳಗೆ ಕೂತಿದ್ದಾನಲ್ಲ? ಇಬ್ಬರಿಗೂ ನಗು ಅವನೇನು ಮಾಡ್ತಾನೇ? ಇವರೇನು ಮಾಡ್ತಾರೆ ಅದರಿಂದ ನಮಗೇನು? ನನ್ನ ಪ್ರಶ್ನೆ ಅದಲ್ಲ. ಜನ ಹೇಗೆ ಬರ್ತಾರೆ ! ಅವನೇನು ತಿರುಪತಿ ತಿಮ್ಮಪ್ಪನ ತರಹ ದೇವರಲ್ಲ. ಒಬ್ಬ ಅಂಬಿಗನ ಮಗ, ಮುಸಲ್ಮಾನರು ಸಾಕಿದ ಮಗ, ಬ್ರಾಹ್ಮಣ ಮತ್ತು ಮುಸ್ಲಿಮ್ ದಂಪತಿಗೆ ಹುಟ್ಟಿದ ಮಗ ಎಂದೆಲ್ಲ ಹೇಳ್ತಾರೆ. ಅಂತಹ ಸಾಮಾನ್ಯನೊಬ್ಬನಿಗೆ ಅಸಮಾನ್ಯನಾಗಲು ಹೇಗೆ ಸಾಧ್ಯವಾಯಿತು? ಅದೇ ಆಶ್ಚರ್ಯ! ಪವಾಡ ಎಲ್ಲಾ ಮಾಡ್ತಾನಲ್ಲ? ಅದು ಆನಂತರದ ಅವನ ಭಕ್ತರು ಕಟ್ಟಿದ ಕತೆಯೂ ಇರಬಹುದು. ಅವನು ಹುಟ್ಟಿದ ತಾರೀಖು ಹಾಗೂ ಅವನ ತಾಯಿತಂದೆಯರ ಬಗ್ಗೆಯೇ ನಿಶ್ಚಯವಾಗಿ ಏನೂ ಹೇಳಲು ಸಾಧ್ಯವಿಲ್ಲ ಎಂದಾಗ, ಪವಾಡದ ಬಗ್ಗೆ ಹುಟ್ಟಿಕೊಂಡಿರುವ ಸಂಗತಿಗಳೂ ಕಪೋಲ ಕಲ್ಪಿತವಾಗಿಯೇ ಇರಬಹುದಲ್ಲ? ಚರಿತ್ರೆಯಲ್ಲಿ, ನಾಯಕನೊಬ್ಬ ದೇವರಾಗುವುದು ಹೀಗೆಯೇ ಅಲ್ಲವಾ? ಹಾಗೆಂದಾಗ ಅಲ್ಲಿಗೆ ಯಾಕೆ ಹೋಗಬೇಕು? ತಾಕತ್ತಿದ್ದರೆ‌ ಇರುವ ಕಡೆಯೇ ಕರೆಸಿಕೊಳ್ಳಬೇಕು. ಅದು ಎಲ್ಲರಿಗೂ ಎಲ್ಲಿ ಸಾಧ್ಯ? ತಮ್ಮ ತಮ್ಮ ಸಾಮರ್ಥ್ಯ ಕ್ಕನುಗುಣವಾಗಿ ನಡೆದುಕೊಳ್ಳುತ್ತಾರೆ. ಅದನ್ನು ಹೀಗೆ ಆಗಬೇಕು ಎಂದು ನಿರ್ದೇಶಿಸಲು, ನಿಯಂತ್ರಿಸಲು ನಾವ್ಯಾರು? ನಮಗೆ ಇಷ್ಟವಿಲ್ಲದಿದ್ದರೆ ಹೋಗುವುದು ಬೇಡವಪ್ಪ ಅಷ್ಟೇ... ತರ್ಕಕ್ಕೆ ತನ್ನನ್ನು ತಾನು ಸಾಬೀತು ಪಡಿಸುವ ಹಟವಿರುತ್ತದೆ. ಆದರೆ ನಂಬಿಕೆ ತರ್ಕಕ್ಕೆ ಸಿಗುವುದಿಲ್ಲ. ಒಂದಕ್ಕೆ ಭಾವದ ನೆಲೆಯಾದರೆ ಇನ್ನೊಂದಕ್ಕೆ ಬುದ್ಧಿಯ ನೆಲೆ. ಇದೆ ಎನ್ನುದು ಎಷ್ಟು ನಂಬಿಕೆಯೋ ಇಲ್ಲ ಎನ್ನುವುದೂ ಅಷ್ಟೇ ನಂಬಿಕೆ. ಎರಡನ್ನೂ ಸಾಬೀತು ಪಡಿಸಲು ಸಾಧ್ಯವಿಲ್ಲ. ಏನೇ ಆಗಲಿ ಮನುಷ್ಯರನ್ನು ಬದಲಾಯಿಸುವಲ್ಲಿ ದೇವರಾಗಲೀ, ದೇವ ಮನುಷ್ಯರಾಗಲೀ ಎಲ್ಲ ವಿಫಲರೇ. ಎಂದ ಅವನು. ಮತ್ತೆ, ದೇವರಿಗೇ ಸಾಧ್ಯವಾಗದ್ದು ನಮಗೆ ಸಾಧ್ಯವಾ? ಮಾಡಿದವರ ಪಾಪ ಆಡಿದವರ ಬಾಯಲ್ಲಿ ನಮಗೇಕೆ? ಎಂದಳು. ನಗುತ್ತಾ ಇಬ್ಬರೂ ಶಿರಡಿಯ ರಸ್ತೆ ಬದಿಯ ಅಮೃತ ಸಮಾನ 'ಏವಲೇ' ಚಹಾವನ್ನು ಆಸ್ವಾದಿಸುತ್ತಾ ಹೊಟೇಲ್ ಕಡೆಗೆ ನಡೆದರು. ('ಏವಲೇ' ಚಹಾವನ್ನು 'ಅಮೃತ ತುಲ್ಯ ಚಹಾ' ಎಂದು ಮರಾಠಿಗರು ವರ್ಣಿಸುತ್ತಾರೆ) jan 18 -23 ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾ..... ಬೆಳಗಿನ ವಾಯುವಿಹಾರಕ್ಕೆಂದು ನಮ್ಮ ಮನೆಯ ಬಳಿಯೇ ಇರುವ ಉದ್ಯಾನಕ್ಕೆ ಹೊರಟೆವು. ನಾನು ವೇಗವಾಗಿ ನಡೆದರೆ ರಘುನಾಥ್ ತಮ್ಮ ಸಂಧಿವಾತದ ನಡಿಗೆಯಲ್ಲಿದ್ದರು. ಜೊತೆಗೆ ಭೀಮಸೇನ್ ಜೋಶಿಯವರ "ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾ" ಅವಳು 'ಸಿಂಧುಭೈರವಿ'' ! ಕಾವೇರಿ‌ ಅರಬ್ಬಿ ಕಡಲೆಡೆಗೆ ಧಾವಿಸುತ್ತಿದ್ದಳು...ನಿಧಾನಗತಿಯಲ್ಲಿ ವಯ್ಯಾರವಾಗಿ. ಪ್ರಶ್ನೆ : "ದೇವರುಗಳನ್ನು ಹೀಗೆ ಸ್ಥಳೀಕರಿಸುವ‌ ಅಗತ್ಯವೇನು?" ಉತ್ತರ: "ಇದು ಭಕ್ತಿಯ ಎಕ್ಸೈಟ್ಮೆಂಟ್. ಭಕ್ತಿ ಎಷ್ಟು ವೈವಿಧ್ಯಗಳಲ್ಲಿ ರೂಪ ಪಡೆದಿದೆ ಎಂಬ ವಿಸ್ಮಯ, ಇಂತಹ ಸೌಂದರ್ಯವನ್ನು ನೋಡದಾ ಕಂಗಳು ಇದ್ದರೇನು ಇಲ್ಲದಿದ್ದರೇನು‌ ಎಂಬ ಆತ್ಯಂತಿಕ ಪ್ರಪತ್ತಿ ಅಷ್ಟೇ" ಪ್ರಶ್ನೆ : "ವೈಶ್ವಿಕವಾಗಿ ನೋಡಬೇಕಲ್ಲವಾ?" ಉತ್ತರ: " ಸ್ಥಳೀಯವಾದ ಎಲ್ಲದುದರ ದೊಡ್ಡ ಕ್ಯಾನ್ವಾಸ್ ವಿಶ್ವವೇ ನಿಜ! ಆದರೆ ಮಜಾ ಇರುವುದು ಅದರ ಸಣ್ಣ ಸಣ್ಣ ಪಿಕ್ಸೆಲ್ ಗಳಲ್ಲಿ ( ಕಣಗಳಲ್ಲಿ) ಕಡಲಿನಲ್ಲಿ ಹನಿ ಲೀನವಾಗಬೇಕಾದುದೇ ನಿಜ. ಆದರೆ ಅದರ ಜೀವಂತಿಕೆ ಉಲ್ಲಾಸಗಳಿರುವುದು ಅದಕ್ಕೆ ಹರಿದು ಬರುವ ನದಿಗಳ ಹರಿವಿನಲ್ಲೇ . ಎಲ್ಲವೂ ವಿಲೀನವಾದ ಕಡಲಿನಲ್ಲಿ‌ಏನಿದೆ? ಕೇವಲ ಉಬ್ಬರ ಇಲ್ಲವೇ ಶಾಂತ. ಅದಕ್ಕೇ ಸರ್ವಪ್ರಿಯಾನಂದರು "ಬ್ರಹ್ಮನ್ ಬಗ್ಗೆ ಮಾತನಾಡುವುದೆಂದರೆ ಮಾಯೆಯಬಗ್ಗೆಯೇ ಮಾತನಾಡಬೇಕು, ನಿರ್ಗುಣ ನಿರಾಕಾರದ ಬಗ್ಗೆ ಏನು ಮಾತನಾಡಲು ಸಾಧ್ಯ ಅದೊಂದು ಅನಿರ್ವಚನೀಯ ಅನುಭವ ಅಷ್ಟೇ" ಎನ್ನುತ್ತಾರೆ. ಪ್ರಶ್ನೆ: ಪ್ರೀತಿ, ಸಂಭೋಗ, ಕರುಣೆ ಇವೂ ಕೂಡ ಅನಿರ್ವಚನೀಯವೇ! ಉತ್ತರ: ಹೌದು ಮಾಯೆಯ ರೆಫೆರೆನ್ಸ್ ಇಲ್ಲದೇ ಬ್ರಹ್ಮನ್ ಕುರಿತಾಗಿ ಮಾತನಾಡಲು ಸಾಧ್ಯವೇ ಇಲ್ಲ. ಹಾಗೆ ನೋಡಿದರೆ ಮಾಯೆಯ ಕೂಸುಗಳಾದ ಎಲ್ಲಾ ರೀತಿಯ ರಸಾನುಭವಗಳೂ ಅನಿರ್ವಚನೀಯವೇ! ಪ್ರತಿಮೆ ರೂಪಕಗಳ ಸಹಾಯವಿಲ್ಲದೇ ಅವುಗಳನ್ನು ದಕ್ಕಿಸಿಕೊಳ್ಳುವ ಹಾಗೆಯೇ ಇಲ್ಲ. ಕಲೆ ಸಾಹಿತ್ಯ ಬದುಕು ಮುಂತಾದ ಬಹುಮುಖ ಸಂಸ್ಕೃತಿ ಎಲ್ಲವೂ ಮಾಯೆಯ ರೂಪಗಳೇ! ಅದಕ್ಕೇ ಅಕ್ಕ "ಚೆನ್ನಮಲ್ಲಿಕಾರ್ಜುನ ನೀನೊಡ್ಡಿದ ಮಾಯೆಯ ಆರು ಗೆಲಬಾರದು" ಎನ್ನುತ್ತಾಳೆ. ಇಲ್ಲಿ 'ಗೆಲಬಾರದು' ಎನ್ನುವುದನ್ನು ಗೆಲಲಾರದು , ಗೆಲ್ಲಲು ಅಸಾಧ್ಯ ಎಂದೇ ಓದಿಕೊಳ್ಳಬೇಕು .‌ ಆದರೆ ನನಗೇನೋ 'ಗೆಲಬಾರದು' ಎಂದೇ ಅಕ್ಷರಶಃ ಒಂದು ಉದ್ಘೋಷವಾಗಿ (statement) ಓದಿಕೊಳ್ಳುವುದೇ ಇಷ್ಟ. ಗೆದ್ದು ಬಿಟ್ಟರೆ ಬದುಕಿನ ವೈಭವಗಳೆಲ್ಲಾ ಮಾಯವಾಗಿಬಿಡುತ್ತವೆ. ದೇಹದ ಉರವಣೆಗಳೂ ಇವೆ ನಿಜ. ಆದರೆ ಅವೂ ನಮ್ಮನ್ನು ಮಾಗಿಸುವ ದಿವ್ಯಗಳೇ‌ ಆಗಿವೆ ಎಂಬುದು ನನ್ನ ನಂಬಿಕೆ. ಸಾಕ್ಷಾತ್ ಚೆನ್ನಮಲ್ಲಿಕಾರ್ಜುನನೇ ನನಗೆ ಎದುರಾಗಿ "ಭವಗೆಟ್ಟು ಬಂದ ಮಗಳೇ ತೆಗೆದುಕೋ ಮುಕ್ತಿಯನು" ಎಂದು ಉಚಿತವಾಗಿ ಮುಕ್ತಿಯನ್ನು ನೀಡಿದರೂ ನಾನೊಲ್ಲೆ. ಕದಳಿವನ ಹೊಕ್ಕಮೇಲೆ ಹಾಡು ಹಸೆ ಎಲ್ಲಿದೆ ? ಮೂಳೆ‌ ಮುರಿಯುವ‌ ಅವನ ಅಪ್ಪುಗೆ ? ನಾನು ಮತ್ತೆ ಮತ್ತೆ‌ ಮನುಷ್ಯಳಾಗಿಯೇ, ಹೆಣ್ಣಾಗಿಯೇ ಹುಟ್ಟಿಬರಬೇಕೆಂಬ ಆಸೆ. ನನಗೆ ಮುಕ್ತಿಯಲ್ಲಿ ಮಜಾ ಇಲ್ಲ. ಅದ್ವೈತ ನನಗೆ ಮನುಷ್ಯ ಸಂಬಂಧಗಳ ನಿಭಾವಣೆಗಷ್ಟೇ ಬೇಕು. ವೈಯಕ್ತಿಕ ಮುಕ್ತಿಗಲ್ಲ. ಬ್ರಹ್ಮನ್ ಮತ್ತು ಮಾಯೆಗೆ ಉದಾಹರಣೆಯಾಗಿ ಕ್ರಮವಾಗಿ ಚಿನ್ನ ಮತ್ತು ಒಡವೆಗಳ ಉದಾಹರಣೆಯನ್ನು ಕೊಡುತ್ತಾರೆ. ಒಡವೆಗಳೆಲ್ಲವೂ 'ಚಿನ್ನವೇ' ಸರಿ ಆದರೆ "ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರ ಪದಕ" ಎಲ್ಲವೂ ಬೇರೆ ಬೇರೆ ವಿನ್ಯಾಸಗಳವೇ ಅಲ್ಲವೇ? ಕಲೆ ಎನ್ನುವುದು ವಿನ್ಯಾಸದ ವೈವಿಧ್ಯವೇ ಅಲ್ಲವೇ? ಅದೇ ಸೌಂದರ್ಯವಲ್ಲವೇ? ಬರೀ ಚಿನ್ನವನ್ನು ಇಟ್ಟುಕೊಂಡು ಮಾಡುವುದಾದರೂ ಏನು? ಅದರ ಸಾರ್ಥಕ್ಯ ಇರುವುದೇ ಒಡವೆಯಾಗುವುದರಲ್ಲಿ ಅಲ್ಲವೇ? ರಂಗನ ಹಾರವಾಗಬೇಕು ಇಲ್ಲವೇ ರಮಣಿಯ ಪದಕವಾಗಬೇಕು ! ಕಾವೇರಿ ರಂಗ, ಶ್ರೀರಂಗ ರಂಗ, ಪಂಢರಪುರದ ರಂಗ,‌ ತಿರುಪತಿಯ ರಂಗ, ಬದರಿಯ ರಂಗ ಇವರೆಲ್ಲರ ಕತೆಗಳೂ ಬೇರೆ ಬೇರೆ, ಅವರುಗಳು ನಿಂತ ನೆಲೆಗಳೂ ಬೇರೆ ಬೇರೆ! ಅಲ್ಲಿನ ಬೆಟ್ಟಗುಡ್ಡಗಳು, ಹರಿವ ನದಿಗಳು ಬೇರೆ,‌ ಮಣ್ಣು ಬೇರೆ ! ಅವರು ತಮ್ಮ ತಮ್ಮ ಸ್ಥಳಗಳಲ್ಲಿ ಹರಿಯಬಿಟ್ಟಿರುವ ವೈವಿಧ್ಯಮಯ ಸಂಸ್ಕೃತಿ ವೈಭವ ಗಳನ್ನು ಕಾಣದಿದ್ದರೆ ಈ ಕಂಗಳಿದ್ದೂ ಏನು ಪ್ರಯೋಜನ? ವೈಶ್ವಿಕವಾಗುವುದರಲ್ಲಿ ಇವರೆಲ್ಲರೂ ಇಸ್ತ್ರಿಮಾಡಿಕೊಂಡ ಸಮವಸ್ತ್ರ ಧರಿಸಿದ ಸಿಪಾಯಿಗಳಂತೆ ನೆಟ್ಟಗೆ ನಿಂತುಬಿಡುತ್ತಾರೆ. ಹೀಗೆ ನೆಟ್ಟಗೆ ನಿಲ್ಲುವುದು ಸೌಂದರ್ಯವೇ ಅಲ್ಲ. (ವೈದ್ಯಕೀಯದಲ್ಲಿ ಕೂಡ ಅದು ಸಾವೇ!) ವಕ್ರವೇ ಸೌಂದರ್ಯ ! ನಮ್ಮ ಕೊಳಲು ರಂಗ ಹೇಗೆ ನಿಂತಿದ್ದಾನೆ ನೋಡಿ ಸೊಟ್ಟಗೆ!! ಸುದರ್ಶನ, ಪಾಂಚಜನ್ಯ ಹಿಡಿದ ಕೃಷ್ಣಮಾತ್ರ ನೇರ ನಿಲ್ಲುವುದು ಕುರುಕ್ಷೇತ್ರದಲ್ಲಿ. ಅವನು ಬಾಗುವುದಿಲ್ಲ ಅಲ್ಲಿ. ನಮಗೆ‌ ಬೇಕು ಬಾಗಿ ಬಳುಕಿ , ಹೆಣ್ಣಿನಂತೆ‌ ಏನು? ಹೆಣ್ಣುಗಳನ್ನೇ ಸುತ್ತುವರಿದ ಕೊಳಲನೂದುವ ಚೆಲುವ. ಕೊಳಲು ಕೇಳದ ಕಿವಿಗಳು, ಅವನ ರಾಸಲೀಲೆ ಕಾಣದ ಕಂಗಳು ಇದ್ದರೆಷ್ಟು ಬಿಟ್ಟರೆಷ್ಟು? ಈ ಬರಹಕ್ಕೆ ಕಾರಣವಾದ ಭೀಮಸೇನ್ ಜೋಶಿಯವರ ಹಾಡನ್ನೂ ಲಗತ್ತಿಸಿರುವೆ. ಜೋಗ್ ಮತ್ತು ನಾಟರಾಗದ ಜುಗಲ್ ಬಂದಿ ಉಸ್ತಾದ್ ನಿಸಾರರ ಸಂಗೀತ ಶಾಲೆಯ‌ ಮೆಟ್ಟಿಲೇರಿ ವಿಜು ಕರೆಗಂಟೆ ಒತ್ತಿದಳು. ಅದು ಶಾಲೆಯೇ? ಒಂದು ದೊಡ್ಡ ಮನೆ. ಬೆಚ್ಚಗಿನ ಮನೆ! "ಬಹುತ್ ದೇರ್ ಕರ್‌ ದೀ? " ಒಳಗಿನಿಂದ ಪರಿಚಿತ ದನಿ. "ಅದು.,.ಬಸ್ ಸ್ಟಾಪಿನಲ್ಲಿ ಇಳಿದು ...ರಿಕ್ಷಾ ಹತ್ತೋವಾಗ ರಿಕ್ಷಾವಾಲಾ ಭಾಳ ನಖರಾ ಮಾಡ್ತಿದ್ದಾ...."ವಿಜು ಹೇಳುತ್ತಿದ್ದಂತೆ "ಒಳಕ್ಕ ಬಾರ... ಮೊದ್ಲು ಕೂಡು. ಏನ್ ಬಾಗಲಾಗೇ ಎಲ್ಲ ಒಪ್ಪಿಸಬೇಕೇನು? " ನಗುತ್ತಾ ಉಸ್ತಾದರು ಎರಡೂ ಬಾಗಿಲು ತೆಗೆದರು. ಗೊತ್ತಾತು ಬಿಡ್ರಿ ಸರ್, ನಾನು ಇಷ್ಟ್ ದಪ್ಪ ಇದ್ದೀನಿ ಅಂತ ಹೀಂಗ್ ಚಾಷ್ಟೀ ಮಾಡ್ತೀರಿ....ಎರಡೂ ಬಾಗಿಲ್ ತೆಗೆದೂ... ಇಲ್ಲೇ...ಎರಡ್ ಹಡದ್ ಮ್ಯಾಗೂ ಹೀಂಗ ಅಂದ್ರ? ನೀ ಏನ್ ಇನ್ನಾ ಹುಡಿಗ್ಯಿದ್ದೀ? ಮಕ್ಕಳಾದ ಮ್ಯಾಲೆ ಲಟ್ಠ ಆಗೋದು ಸಹಜ್ ಅಲ್ಲಾ! ಭಾಳ ಹೈರಾಣಾಗಿದ್ದೀ ಬಾ ಕೂಡು...ಸೋಫಾದ ಮೇಲಿನ ಧೂಳು ಹೊಡೆಯುತ್ತಾ ಕೂರುವಂತೆ ಕೈ ಮಾಡಿದರು. ಬಸ್ಸಿನಾಗ ಭಾಳ ಗರ್ದಿ ಇತ್ತೇನು? ಕೇಳುತ್ತಲೇ ಉತ್ತರಕ್ಕೆ ಕಾಯದೇ ಒಳಹೋಗಿ ಬಂದು ಕೆಂಪು ದ್ರವ ತುಂಬಿದ ಒಂದು ಗಾಜಿನ ಲೋಟ ಮುಂದೆ ಹಿಡಿದರು. "ವಾಹ್ ...ರೂಅಬ್ಝಾ!" ಗಟಗಟನೆ ಕುಡಿದಳು. ಸಾವಕಾಶ್ ...ಸಾವಕಾಶ್ ಎನ್ನುತ್ತಾ ಅವಳನ್ನೇ ದಿಟ್ಟಿಸುತ್ತಿದ್ದರು. ಹಿಂಗ್ಯಾಕ ನೋಡ್ತೀರಿ? ಏನಿಲ್ಲ ಅಷ್ಟು ದೂರದಿಂದ ಹೈರಾಣಾಗಿ‌ ನೀ ಬಂದಿ. ಆದ್ರ ಇವತ್ ರಿಯಾಝ್ ಬ್ಯಾಡೇನೋ ಅಂತಾ... ಮುಂಜಾನೀನಾ ನೋಡು ಈ ತಾನಪುರ ಶ್ರುತಿಮಾಡಿಟ್ಟಾ.... ಆದ್ರೂ...ಯಾಕೋ ಬ್ಯಾಡನಸ್ತದಾ ತಂಬೂರೀ ಟೊಂಯ್... ಟೊಂಯ್... ಉಸ್ತಾದರ ಬಿಳಿಯ ನೀಳ ಬೆರಳುಗಳು ತಂಬೂರಿಯ ತಂತಿಯನ್ನು ಮೀಟುತ್ತಿದ್ದವು. ಆಳವಾದ ತೀಕ್ಷ್ಣ ಕಣ್ಣುಗಳು ಅವುಗಳ ಮೇಲೆಯೇ ನಾಟಿದ್ದವು! ಕಪ್ಪು ಬಿಳಿ ಬೆರೆತ ಗಡ್ಡ. ತಕ್ಷಣವೇ ಅವಳತ್ತ ತಿರುಗಿ , "ಹೀಂಗ್ ಮಾಡೋಣು...ಇವತ್ ಸುಮ್ಮ ಮಾತಾಡೋಣು, ಚಲೇಗಾ?" "ಯಾವುದರ ಕುರಿತು ಸರ್?" ಮುಂಜಾನಿಂದ ಈ ಜೋಗ್ ರಾಗ ಕಾಡ್ಲಿಕ್ಕ್ ಹತ್ಯದಾ...ಇದಕ್ಕ ನಿಮ್ಮ ಕರ್ನಾಟಕಿನಾಗ ಏನಂತೀರಿ? ಹ್ಞಾಂ ನಾಟ... ನಾಟರಾಗ.. "ಜಗದಾನಂದಕಾರಕ..." ಕೈಮೇಲೆತ್ತಿ ನಗುತ್ತಾ ಪಲುಕಿದರು. "ಸರ್ ನೀವು ತಮಾಷೆ ಮಾಡ್ತಿದ್ದೀರಿ? "ಮಝಾಕ್! ಹಂಗ್ ಎಂದಾದ್ರೂ ಹೇಳೀಯ ತಾಯಿ! ನಾನೊಬ್ಬ ಕಲಾವಿದ ಇದ್ದೀನಿ. ಎರಡೂ ಆ ದೇವಿ ನಾಲಗೇನಾ ಅಲ್ಲೇನ? ಸುಮ್ಮ... ನೀ ಸಿಟ್ಟಿಗೆದ್ದರ ನಿನ್ ಮಾರಿ ಕೆಂಪ್ ಆಗ್ತಾವಲ್ಲ! ನೋಡಬೇಕನಸ್ತಪಾ...ನೋಡ್ ನೋಡ್ ವಿಜಿಶರ್ಮಾನ ಕಿವಿ ಕೂಡ ಈಗ ಕೆಂಪಾತಲ್ಲ? ಉಸ್ತಾದರು ಜೋರಾಗಿ ನಗಹತ್ತಿದರು. ಚಾಷ್ಟೀ ಸಾಕಿನ್ನ... ಹ್ಞು ಎಲ್ಲಿದ್ದಾ? ಜೋಗ್ ...ಜೋಗ್ ಸಂಜೀರಾಗ ರಾತ್ರಿರಾಣಿ...ಅಂತಾರ ಭಕ್ತಿ... ಯೋಗ...ಪ್ರೀತಿ ಇದರಾಗ ತುಂಬಿ ತುಳಕ್ತದಾ ಅಂತಾರ... ಸರ್ ಆದರೆ ಕರ್ನಾಟಕ ಸಂಗೀತ ದೊಳಗೆ ಭಕ್ತಿ ಮಾತ್ರ ಮುಖ್ಯ. ಭಕ್ತಿ ಇಲ್ಲದ ಸಂಗೀತ ಸಂಗೀತವೇ ಅಲ್ಲ. ಮನುಷ್ಯರ ಭೌತಿಕ ಪ್ರೀತಿ ಮುಖ್ಯ ಅಲ್ಲ... ಭಕ್ತಿನಾಗ ಪ್ರೀತಿ ಇಲ್ಲೇನು? ಪ್ರೀತಿನಾಗ ಭಕ್ತಿ... ಅಂದ್ರಾ ಪರಸ್ಪರ ಶರಣಾಗೋದಿಲ್ಲೇನು? ಹುಚ್ಚಿ ಇದ್ದೀ ..!ಎರಡೂ ಹ್ಯಾಂಗ ಬ್ಯಾರೆ ಬ್ಯಾರೆ ಆಕ್ಕೇತಿ?ಮನಶಾರೆ ಪ್ರೀತಿ ಬ್ಯಾರೆ , ದೇವ್ರ ಪ್ರೀತಿ ಬ್ಯಾರೇನು? ಮನಶಾರ ಪ್ರೀತಿ ಮಾಡೋಹಂಗಾ ಅಲ್ಲೇನ ದೇವ್ರನ್ನಾ ಪ್ರೀತಿ ಮಾಡೋದು? ಮೀರಾ, ಅಕ್ಕನ ಹಾಡಿನೊಳಗಾ ಇಬ್ರ ಅಂಕಿತಾನೂ ತೆಗೆದು ಜರಾ ಹಾಡಿನೋಡು..ಹೆಂಗನಸ್ತದಾ ಹೇಳು. ಜಯದೇವ ಎಷ್ಟು ಎರೋಟಿಕ್ ಆಗಿ ಬರ್ದಾನ "ಪ್ರಿಯೇ ಚಾರು ಶೀಲೆ......ಸಪದಿ ಮದನಾನಲೋ ದಹತಿ ಮಮ ಮಾನಸಂ / ದೇಹಿ ಮುಖ ಕಮಲ ಮಧುಪಾನಂ" ಇದ್ನೂ ಭಕ್ತಿಸಂಗೀತಾನೇ ಅಂತಾರಲ್ಲವ್ವ? ನಿನ್ ಕ್ಲಾಸಿಫಿಕೇಷನ್ ಛಂದ್ ಅದಾ ವಿಜು. ಸಾಮಾಜಿಕವಾಗಿ ಬದುಕಲಿಕ್ಕ ಛಂದದಾ. ಆದ್ರ ಪ್ರಕೃತಿ ಒಳಗಾ ಈ ಯಾ ಕ್ಲಾಸಿಫಿಕೇಷನ್ ಇಲ್ಲ ಬಿಡು....ಪ್ರಕೃತಿ ಅಂದ್ರಾನೇ ಸಂಗೀತ ಅಲ್ಲೇನು?ಈ ಗಾಳಿಗಂಧ, ಮಳಿ, ಈ ಹಣ್ಣ ಹಂಪಲಾ, ಬಣ್ಣದ ಭೂಮಿ, ಕಾಪೂಸಿನಂತಹ ಮೃದು ಹೂ ಕೇಸರ, ಹಕ್ಕಿ ಕೂಜನ ಇವೇ ಅಲ್ಲೇನು ಸಂಗೀತ. ಇವೆಲ್ಲ ಬಿಟ್ಟ್ ಸಂಗೀತ ಅದೆ ಅಂತೀಯ? ಸಂಗೀತಂದ್ರ ಬರೀ ಶಬ್ದ ಅಂತಾ ಮಾಡೀಯೇನು? ಪ್ರೀತಿ ಇಲ್ದೇ ಇದ್ರ ಇವೆಲ್ಲ ಸಾಧ್ಯ ಅಂತೀಯೇನು? ರಿವರ್ಸ್ ಗೇರ್ ಹಾಕಿದ ಉಸ್ತಾದರು ಮತ್ತಾ ರಾಗಕ್ಕ ಕಾಲಗೀಲ ಏನಿಲ್ಲೇ...ಹಂಗ ನೋಡದ್ರ ಎಲ್ಲಾ ರಾಗಾನೂ ಸಾರ್ವಕಾಲಿಕಾನ ಅದಾ..ಮುಗುಳ್ನಗುತ್ತಾ,... ಇವನವ್ನಾ ಈ ಜೋಗ್ ಮಾತ್ರ ಬಿಡವೊಲ್ದ್ ನೋಡ. "ಸಾಜನ್ ಮೋರೆ ಘರ್ ಆಯೆ..." ಜೋಗ್ ನ ಜಲಪಾತದಲ್ಲಿ ಉಸ್ತಾದರು ಮುಳುಗಿಹೋದರು. ತನ್ಮಯರಾಗಿ, ಉತ್ಕಂಠಿತರಾಗಿ ಹಾಡುತ್ತಿದ್ದವರು ಸ್ವಲ್ಪ ಹೊತ್ತಿನ ನಂತರ ಕಣ್ಣು ತೆರೆದು, ಮೇಘದೂತದಾಗ ಒಬ್ಬಳು ನಾಯಕಿ ಬರ್ತಾಳ ನೋಡು. ಆಕಿ ಸಿಂಗಾರ ಮಾಡ್ಕೊಂಡು ತನ್ನ ಪ್ರಿಯತಮನೆಡೆಗೆ ಕತ್ತಲಲ್ಲಿ ಯಾರಿಗೂ ಕಾಣದ್ಹಂಗ ಓಡಿ ಹೋಗುತ್ತಿರುವಾಗ... "ಆ ಹೆಣಮಗಳ ಮುಂದ ನೀ ಘರ್ಜಿಸಿ ಆಕೀನ ಭಯಬೀಳಿಸಬ್ಯಾಡ" ಅಂತ ಕವಿ ಮೇಘಕ್ಕ ತಾಕೀತು ಮಾಡ್ತಾನ... ಅಂತಾ ನಾಯಕಿಗೆ ಏನಂತಾರ? ಅಭಿಸಾರಿಕೆ ಹೌದಲ್ಲೋ? ಭರತನ ಅಷ್ಟ ನಾಯಕಿಯರಲ್ಲಿ ಒಬ್ಳು‌! ನಾಯಕಿಯರಿಗೆ ಮಾತ್ರ ಎಂಟು ಹೆಸರು ಆದ್ರೆ ನಾಯಕರಿಗೇಕಿಲ್ಲ?ಪಾಟಿ ಸವಾಲು ಹಾಕಿದಳು ವಿಜು. "ಹಂಗಂತೀಯಾ? ಥಟ್ಟನೇ "ನಾಯಕರಿಗಾದ್ರ ಎಂಟಲ್ಲ ನೂರೆಂಟಲ್ಲ ಸಾವಿರದೆಂಟು ಹೆಸರಿಟ್ಟರೂ ಕಮ್ಮಿ ಆಕ್ಕೈತಿ ಬಿಡು" ಎಂದು ಜೋರಾಗಿ ನಕ್ಕರು. ಮತ್ತೆ ಗಂಭೀರವಾಗಿ "ನೋಡು ಈ ಜೋಗ್ ನೊಳಗಾ ಆ ಮೇಘದೂತದ ಅಭಿಸಾರಿಕಾ ಕಾಣಿಸಿದ್ಳು ನನಗಾ...ಎಂಥ ಹಪಾಹಪಿ! ಏನು ಆತಂಕ,ಭಯ, ಅದೆಷ್ಟು ಅವಸರ! ಏರ್ತಾ ಇಳೀತಾ ಇದ್ದದ್ದು ಆಕಿ ಎದೀನಾ ? ಇಲ್ಲ ಕದ್ದು ಮುಚ್ಚಿ ಓಡುವ ರಸ್ತೀನಾ? ಕಣ್ಣಾಮುಚ್ಚಾಲೆ ಆಡ್ತ್ಯಾವಲ್ಲ, ಅವು ರಸ್ತೀ ಮ್ಯಾಲೀನ್ ಬೆಳಕಾ? ಆ ಬೆಳಕು ಹೊರಗಿದ್ದುದಾ ಇಲ್ಲ ಆಕಿ ಒಳಗಿತ್ತಾ? ಆಕಿ ಅವನ್ನ ಸೇರಿದಳಾ? ಇಲ್ವಾ? ಸೇರಬೇಕಾ? ನನ್ ಕೇಳಿದೀ ಅಂದ್ರ ಅವಳು ಸೇರಲೇ ಬಾರದು" "ಯಾಕೆ?" ಆಶ್ಚರ್ಯದಿಂದ ಕೇಳಿದಳು. ಏನು ಧಡ್ಡಿ ಇದ್ದೀ ನೀನು, ನನ್ ಶಿಷ್ಯಳಾಗಿ ! ಯಾಕಂದ್ರ ಇಬ್ರೂ ಸೇರಿದರಂದ್ರ ಸಂಗೀತ ನಿಂತು ಹೋಗ್ತದಲೇ... ಹಾಡೇ ಮುಗೀತಂದ್ರ ಇನ್ ಬದುಕೆಲ್ಲಿರ್ತಾದಾ? ಯೋಗ / ಜೋಗ್ ಶಾರೀರದೊಳಗಾ ಇರ್ಬೇಕ್! ಶರೀರದಲ್ಲಿ ಅಲ್ಲ, ವಿಚಾರ ಮಾಡು" ಎಂದರು. ವಿಜು ನಾಟರಾಗದೊಳಗೆ ಕಳೆದು ಹೋಗಿದ್ದಳು. ಗಂಡ ಮಕ್ಕಳ ಜೊತೆ ದೋಣಿವಿಹಾರ ಮಾಡುತ್ತಿದ್ದಳು. ಮೇಲೆ ನೀಲಿ ಆಕಾಶ ನೀರೊಳಗೂ ನೀಲಿ. ನೀಲಿ ನೀರೊಳಗೆ ಜಗದಾನಂದಕಾರಕ ವೀಣೆ ಮಿಡಿಯುತ್ತಿತ್ತು. ಬದಿಯಲ್ಲೇ ಜೋಗ್ ರಾಗದ ಅಲೆಗಳೆದ್ದವು. ಸಾಜನ್ ಮೋರೆ ಘರ್ ಆಯೇ....ತರಂಗಗಳು ಸುತ್ತುವರೆದವು... ದೂರದಿಂದ ಗಾಳಿಯಲ್ಲಿ ಜೋಗ್ ಮತ್ತು ನಾಟರಾಗದ ಜುಗಲ್ ಬಂದಿ‌ಕೇಳಿ ಬರುತ್ತಿತ್ತು.. "ಸೂರ್ಯ ಚಂದ್ರರೇ ನಯನವಾಗುಳ್ಳ, ನಾಗೇಂದ್ರಶಯನ...ಸೃಷ್ಟಿ ಸ್ಥಿತ್ಯಂತಕಾರ ...ಓಂಕಾರ ಪಂಜರದಲ್ಲಿ ಗಿಣಿಯಾಗಿರುವ ...ಸರೋಜ ಭವ ಕೇಶವ" ಥಳ ಥಳ ಹೊಳೆಯುತ್ತಿದ್ದ jan 13 23 ಶಿಲೆಯೊಡನೆ ಸ್ವಗತ ಬೆಳಗಿನ ಜನಜಂಗುಳಿ ಕರಗಿ ಹೋಗಿತ್ತು. ರಾತ್ರಿ ಏಳರ ಸಮಯ. ನಾನು ಮತ್ತು ಅವಳು ಇಬ್ಬರೇ ಮುಖಾಮುಖಿ ನಿಂತಿದ್ದೆವು. ಅವಳು -ಕುಂದಾಪುರದ ಬಳಿ ಇರುವ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರೀ. ಹೊರಗೆ ಧೋ ಧೋ ಅಕಾಲಿಕ ಮಳೆ. ಬಂಗಾಳ ಕೊಲ್ಲಿಗೆ ಉಬ್ಬಸವಂತೆ! ಹೀಗಾಗಿ ಅರಬ್ಬಿ ತೀರಕ್ಕೆ ಸಮೀಪವಿರುವ ಇವಳ ತಲೆಯ ಮೇಲೂ ಮಳೆ ! ಎಲ್ಲರ ಮೂಗುಬ್ಬಸವನ್ನು ಕಳೆಯುವವಳು ಮೊದಲು ತಂಪಾಗಬೇಕಲ್ಲ? ಬೇವಿನ ಗಿಡ ನೆಡುವ ಹರಕೆ ಇತ್ತು. ಅದನ್ನು ತೀರಿಸುವ ಸಲುವಾಗಿ ಬೆಂಗಳೂರಿನಿಂದ ಕುಂದಾಪುರದ ರೈಲು ಹತ್ತಿದ್ದೆವು. 'ವನಮಹೋತ್ಸವ' ಆದ್ದರಿಂದ ಗಂಡನಿಗೆ ಅದರ ಬಗ್ಗೆ ತಕರಾರೇನೂ ಇರಲಿಲ್ಲ. ಆದರೆ ಅಂಗಿ ಕಳಚಿ ದೇವಸ್ಥಾನದ ಒಳಗೆ ಮಾತ್ರ ಬರಲಿಲ್ಲ. ನಾನು ಮಾತ್ರ ಒಳಹೊಕ್ಕೆ. ಚಿನ್ನದ ಮುಖ, ವಿಧವಿಧ ಆಭರಣ, ರೇಷಿಮೆ ದುಕೂಲ, ಅರಸಿನ ಕುಂಕುಮ ಹೂ ತರತರದ ಅಲಂಕಾರ. ಕನ್ನಡಿಯಂತೆ ಫಳ ಫಳ ಹೊಳೆಯುತ್ತಿದ್ದಳು. ಗರ್ಭಗುಡಿಯಲ್ಲಿ ಅರ್ಚಕರೂ ಕಾಣಲಿಲ್ಲ. ನನ್ನ ಅವಳ ಏಕಾಂತಕ್ಕೆ ಭಂಗ ತರಬಾರದೆಂದು ಎಲ್ಲೋ ಹೊರಗೆ ಹೋಗಿರಬೇಕು. ನೋಡುತ್ತಲೇ ಇದ್ದೆ ಅವಳು ಮುಡಿದ ಹೂವಿನ ಸೊಬಗನ್ನು ! ಪರಿಮಳ ಆಹ್ಲಾದಕರವಾಗಿ ಉಸಿರಿನೊಂದಿಗೆ ಒಳಹೊರಗೆ ಹಾಯುತ್ತಿತ್ತು. ಮುಟ್ಟಲು ಸಾಧ್ಯವಾಗಲಿಲ್ಲ ಅಷ್ಟೇ. ಇವೆಲ್ಲ ಅಂದ ಚೆಂದಗಳು ಭಕ್ತರ ಕಣ್ಣಿಗಾಗಿ ಅಷ್ಟೇ . ಅವಳು ಉದ್ಭವವಾಗಿರುವುದು 'ಅರೂಪ' ಲಿಂಗಿಯಾಗಿ. ಕಮಲಶಿಲೆ ಆಕಾರದಲ್ಲಿ. ಪೂಜೆಗೊಳ್ಳುವುದೂ ಹಾಗೆಯೇ. 'ಅರೂಪ' ಮತ್ತು 'ಲಿಂಗ' ಇವುಗಳ ಕಲ್ಪನೆಯಲ್ಲಿಯೇ ವೈರುಧ್ಯವಿದೆ. ನಮ್ಮ ಲೋಕಗ್ರಹಿಕೆಯಲ್ಲೇ ಅಸಂಖ್ಯಾತ ವೈರುಧ್ಯಗಳು ಇವೆಯಲ್ಲ? ಮತ್ತೆ ನಮ್ಮ ದೇವರುಗಳೂ ಹಾಗೆಯೇ! "ನೀನು ಹೀಗೆ ಕನ್ನಡಿಯಾಗಿ ಹೊಳೆದರೆ ಅದರೊಳಗೆ ಎದುರು ನಿಂತ ನಾನೇ ಕಾಣುವೆನಲ್ಲೇ? ನನಗೆ ನಾನೇ ಕಾಣಬೇಕು ನಿಜ. ಆದರೆ ಅದಕ್ಕೂ ಮೊದಲು ನನಗೆ ಜಗತ್ತು ಕಾಣಬೇಕಲ್ಲ? ಕಂಡಕಡೆಯಿಂದ ಕಾಣದಕಡೆಗೆ ಚಲಿಸುವುದೇ ಸರಿಯಲ್ಲವೇ? ನಿನಗೇಕೆ ಮುಖವಾಡ , ವಿಶ್ವಮುಖಿಗೆ? ಬಹುಶಃ ನನ್ನನ್ನು ಅಣಕಿಸಲೆಂದೇ ನೀನು ಚಿನ್ನದ ಮುಖವಾಡ ತೊಟ್ಟಿರಬೇಕು? ನೀನು ಕನ್ನಡಿಯಾಗಿದ್ದೀ! ಕಿಟಕಿಯಾಗಬೇಕು ಅಲ್ಲವೇನೇ? ನನಗೇನೋ ನೀನೊಂದು ಚೌಕಟ್ಟು ಕಿಟಕಿಯ ಚೌಕಟ್ಟೇ ಆಗಿರುವೆ. ಕಿಟಕಿ ತೆರೆದರೆ ತಾನೇ ಬಯಲು, ಆಕಾಶ ಕಾಣುವುದು? ಬಯಲನ್ನು, ಆಕಾಶವನ್ನು ಕಾಣಲು ಕಿಟಕಿಯೊಂದು ಮಾಧ್ಯಮ, ಆಧಾರವಷ್ಟೇ. ಎಷ್ಟು ಸಣ್ಣ ಕಿಟಕಿ, ಹಿಂದೆ ನಿಂತು ದಿಟ್ಟಿಸುವ ಕಣ್ಣುಗಳು ಇನ್ನೂ ಸಣ್ಣವು! ಆದರೆ ಅಂತಹ ಸೂಜಿಕಣ್ಣಿನೊಳಗೆ ಆಕಾಶ - ಜಗತ್ತು ಹೇಗೆ ನುಗ್ಗಿಬಿಡುತ್ತದೆ ನೋಡು! ಷರೀಫರ ಕೋಳಿ ಕೋಡುಗನನ್ನು ನುಂಗಿದ ಹಾಗೆ! ನಿನ್ನೆದುರು ನಿಂತ ನನ್ನ ಧಾರ್ಷ್ಟ್ಯದ ಹಾಗೆ. ನಮ್ಮಲ್ಲಿ ಎಷ್ಟೊಂದು ಕಿಟಕಿಗಳಿವೆ. ಕಿಟಕಿಗಳು ಇರುವುದು ಲೋಕ ಕಾಣುವುದಕ್ಕೆ ಅಲ್ಲವೇನೇ? ಕಂಡ ಲೋಕವನ್ನು ಒಳಗಿಟ್ಟು ನಿಗೂಢ ಕಾಯಬೇಕು, ಧೇನಿಸಬೇಕು! ಬೆಳಕು ಹಾಯದ ಮೇಲೆ ಎಷ್ಟು ಕಣ್ಣುಗಳಿದ್ದರೇನು ? ನಿನಗೋ ಸಹಸ್ರ ಕೈಕಾಲುಗಳು ಕಣ್ಣುಗಳು! ನೀನೆಷ್ಟು ಕಂಡಿರಬೇಡ? ನಿನ್ನ ಗತಿಯೋ ಅಗಮ್ಯ ದುರ್ಗಮ್ಯ! ನನಗೂ "ಗೂಡಾನ್ನ ಪ್ರಿಯ"ವೇ ಕಣೇ! ನಿನ್ನ ಅಂಗಳದಲ್ಲಿ ಇಂದು ಅದನ್ನು ಬಡಿಸಿದಷ್ಟು ತಿಂದೆ. ನೀನು "ಮಾಂಸನಿಷ್ಠೆಯಂತೆ? " ಆದರೆ ನಾನು ನೋಡು ಮಾಂಸಲಳೇ ಆಗಿರುವೆನಲ್ಲ? ಏನು ತಿಂದರೂ ಕೊನೆಗೆ ಕೊಬ್ಬುವುದು ಮಾಂಸವೇ ತಾನೇ? ನಿನ್ನ ಹಾಗೆ ನನಗೂ ಹುಲಿ/ಸಿಂಹದ ಸವಾರಿ ಮಾಡಬೇಕೆನಿಸುತ್ತದೆ. ಆದರೆ ಏನು ಮಾಡಲಿ ಹೇಳು ಹುಳ ಹುಪ್ಪಟೆಗಳಿಗೂ ಹೆದರುವೆ ನಾನು. ಒಮ್ಮೆ ಕಿಟಕಿ ತೆರೆ ನಿನ್ನ ಸಾವಿರ ಕೈಗಳನ್ನು ನೋಡಬೇಕಿದೆ ನನಗೆ. ಆಗಲಾದರೂ ಪಾಪಕ್ಕೆ ಪಕ್ಕಾದ ನನ್ನ "ಭಯ ಲೋಭ"ಗಳು ಹಿಂಗಿಯಾವು. ಗೋಡೆಗಳು ಬಿದ್ದು ಬಯಲು ಕಾಣಬಹುದು." ಯಾರೋ ಬಂದರು. ನಮ್ಮ ಸಂಭಾಷಣೆ... ಅಲ್ಲಲ್ಲ ನನ್ನ ಸ್ವಗತ ( ಸಾಲಿಲೊಕಿ) ತುಂಡಾಯಿತು. ಹೊರಗೆ ದೊಡ್ಡ ಪ್ರಾಕಾರ. ಅಲ್ಲಿ ಕುರ್ಚಿಗಳನ್ನು ಇಟ್ಟಿದ್ದರು. ಅಲ್ಲಿ ಹೋಗಿ ಸುಮ್ಮನೇ ಕಣ್ಣು ಮುಚ್ಚಿ ಕುಳಿತೆ. ಅಷ್ಟರಲ್ಲಿ ವಿದ್ಯುತ್ ಪೂರೈಕೆ ತುಂಡಾಯಿತು. ದೀಪಗಳು ಆರಿಹೋದವು. ದ್ವಿಜಾವಂತಿ ರಾಗದ "ಅಖಿಲಾಂಡೇಶ್ವರಿ" ಹಾಡು ಒಳಗಿನಿಂದ ಒದ್ದುಕೊಂಡು ಬಂದಿತು. ತಕ್ಷಣ ನನಗೆ ಅರಿವಿಲ್ಲದಂತೆ ಕಣ್ಣೀರು ಇಳಿಯತೊಡಗಿತು. ಕತ್ತಲಲ್ಲಿ ನಾನೊಬ್ಬಳೇ ! ಅದು ಹೇಗೆ ಗುಡಿಯ ಒಳಗೆ ಅವಳಿದ್ದಳಲ್ಲ? ಹೊರಗೆ ಅವಳದೇ ನೇರಕ್ಕೆ ನಾನು ಕುಳಿತಿದ್ದೆ. ಬೆಳಿಗ್ಗೆ ಗುಡಿಯ ಮುಂದೆ ಹೂ, ಬಳೆ, ಅರಿಸಿನ ಕುಂಕುಮ, ಪರಿಮಳದ್ರವ್ಯ, ಕುಪ್ಪಸದ ಖಣಗಳ ಸಂತೆ. "ನಾನೇನು ಬಳೆ ತೊಟ್ಟುಕೊಂಡಿದ್ದೇನಾ" ಎಂದು ಮೀಸೆ ಹುರಿಮಾಡುವ ಬಹದ್ದೂರ್ ಗಂಡೂ ಕೂಡ ನತಮಸ್ತಕನಾಗಿ ಇಲ್ಲಿ ಹೂ ಕುಂಕುಮ, ಬಳೆಗಳು ತುಂಬಿದ ಹರಿವಾಣ ಹಿಡಿದು, ಅಂಗಿ ಕಳಚಿ ದೈನ್ಯನಾಗಿ ನಿಲ್ಲುತ್ತಾನೆ -ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೊರಗಿನ ಸಮಾಜಕ್ಕೆ ಇರುವ ಒಂದು ಡಯಲಕ್ಟಿಕಲ್ ಸಂಬಂಧ ಸ್ವರೂಪದ ಪ್ರತೀಕದಂತೆ. ಹರಿವಾಣ ಅಣಕಿಸುತ್ತದೆ. "ಎಷ್ಟು ಬಳೆ ಹಾಕಿಕೊಂಡರೂ ಸಾಲುವುದಿಲ್ಲ ಅಮ್ಮನಿಗೆ ನೋಡು" ಎಂದು ದೇವೀ ಉಪಾಸಕಿ ಶೋಭಾ ಶಣೈಅವರು ತಮ್ಮ ಅಮ್ಮನನ್ನು ಕೊಂಡಾಡುತ್ತಿದ್ದುದು ನೆನಪಾಗುತ್ತದೆ. (ಬಳೆ, ಕುಂಕುಮಕ್ಕೆ ಹಚ್ಚಿಕೊಳ್ಳಬೇಕೆಂದಲ್ಲ. ಕೆಲವರು ತೊಡಲೇ ಬೇಕು, ಇನ್ನು ಕೆಲವರು ತೊಡಲೇ ಬಾರದು ಎನ್ನುವ ನಿಷೇಧದ ಬಗ್ಗೆ ದನಿ ಎತ್ತಬೇಕಾಗಿದೆ. ಬಳೆ ತೊಡುವ ಕಾರಣಕ್ಕಾಗಿಯೇ ದುರ್ಬಲ ಎನ್ನುವುದಾದರೆ. ಅದು ದೌರ್ಬಲ್ಯವಲ್ಲ ಶಕ್ತಿ ಎಂದು ಸಾಬೀತು ಪಡಿಸುವ ಅಗತ್ಯ ಇದೆ) ಜಾತಿವಿಜಾತಿಯನ್ನದೇ ಇಲ್ಲಿ ಅನ್ನದಾಸೋಹದ ಪುಣ್ಯಕಾರ್ಯ ನಡೆಯುತ್ತದೆ. ಅಮ್ಮನಲ್ಲವೇ ? ಸದಾ ಅವಳಿಗೆ ತನ್ನ ಮಕ್ಕಳ ಹೊಟ್ಟೆಯದೇ ಚಿಂತೆ. ಟಿಪ್ಪು ಮತ್ತು ಹೈದರಾಲಿ ಈ ದೇವಾಲಯವನ್ನು ರಕ್ಷಿಸಿ ಪೋಷಿಸಿದರಂತೆ ಆ ಕಾರಣವಾಗಿ ಅವರ ನೆನಪಿನಲ್ಲಿ ಸಂಜೆಯ ಹೊತ್ತು ಸಲಾಂ ಪೂಜೆ ನಡೆಯುತ್ತದೆ ಎಂದು ಗೂಗಲ್ ಹೇಳುತ್ತದೆ. ಇಲ್ಲಿ ಶಿವ ವಿಷ್ಣು ಗಣಪತಿ ಇತ್ಯಾದಿ ದೇವತೆಗಳು ನೆಲೆಸಿರುವುದು ಗರ್ಭಗುಡಿಯ ಹೊರಗಿನ ಪ್ರಾಕಾರದಲ್ಲಿ. ಅವಳ ಮನೆಯೆಂದ ಮೇಲೆ ಅವಳೇ ಒಡತಿಯಾಗಬೇಕಲ್ಲವೇ? ಜೊತೆಗೆ ಸಿಂಹ /ಹುಲಿ ಬೇರೆ! ಇದು ಪ್ರಳಯಭಯಂಕರಿಯ ಹೊತ್ತ ಸಿಂಹವಲ್ಲ. ಬದಲಾಗಿ ಆತ್ಮದ ಗುಹೆಯೊಳಗೆ ಇರುವ ಕೇಸರಿ! ಅದನ್ನು ಸಾತ್ ಮಾಡಿಕೊಂಡವಳು ದುರ್ಗಾಪರಮೇಶ್ವರೀ! ಗುಹೇಶ್ವರೀ! ಅವಳ ಮೂಲ ಸ್ಥಳವೂ ಒಂದು ಗುಹೆಯೇ. ದೇವಸ್ಥಾನದಿಂದ ಎರಡು ಕಿ.ಮೀ ಎತ್ತರದ ಗುಹೆಯೊಳಗೆ ಅವಳ ವಾಸ. ಈ ಜಾಗಕ್ಕೆ ಸುಪಾರ್ಶ್ವ ಮುನಿ ಗೋರಕ್ಷನಾಥ ಮುಂತಾದ ಹೆಸರುಗಳು ಲಗತ್ತಾಗಿವೆ. ಬಹುಶಃ ಅವರು ಇಲ್ಲಿ ಬಂದು ತಪಸ್ಸು ಮಾಡಿರಬೇಕು! ನಮಗೋ ಗುಹೆಯ ಹೊರಗೇ ಅಲೆಯುವುದರಲ್ಲಿ ಆಸಕ್ತಿ. ಈ ಅಲೆತದಲ್ಲಿ ದಾರಿಯ ತೋರು ಫಲಕಗಳೇ ದಾರಿಗಳಾಗಿಬಿಡುತ್ತವೆ. ನಮ್ಮ ದಾರಿಯನ್ನು ನಾವು ನಡೆಯುವುದೇ ಇಲ್ಲ. ಫಲಕಗಳನ್ನು ಹಿಡಿದುಕೊಂಡು ಪರಸ್ಪರ ಗುದ್ದಾಡುವುದರಲ್ಲೇ ವ್ಯಸ್ತರಾಗಿಬಿಡುತ್ತೇವೆ. ಹೊರಗೇ ಉಳಿದುಬಿಡುತ್ತೇವೆ. " ಈ ಒಡಲು ಕಲ್ಪಾಂತರ ಸ್ಥಾಯಿಯೇ ಪೇಳಾ?" (ಪಂಪ) Dec12/ 22 ಶಾರದೆಯ ಕಾಡು….- ಗಿರಿಜಾ ಶಾಸ್ತ್ರೀ March 10, 2023 aakrutikannada ಆಶ್ರಮದಂತಿರುವ ‘ಧ್ವನ್ಯಾಲೋಕ’ ವಿದ್ಯಾಸಂಸ್ಥೆ ಪ್ರಸಿದ್ಧ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಿ.ಡಿ. ನರಸಿಂಹಯ್ಯನವರ ಕನಸಿನ ಕೂಸಾಗಿತ್ತು. ಭಾರತದಲ್ಲಿ ಅಮೇರಿಕನ್ ಸಾಹಿತ್ಯವನ್ನು ಪರಿಚಯಿಸಿದವರೇ ಅವರು. ಕಾಮನ್ ವೆಲ್ತ್ ಸಾಹಿತ್ಯದ ಬೆಳವಣಿಗೆಗೆ ಕಾರಣರಾದವರು ಅದನ್ನು ಈಗ ಅವರ ಮಗನಾದ ಪ್ರೊ ಶ್ರೀನಾಥ್ ಅವರು ವಿಭಿನ್ನ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ, ಇನ್ನಷ್ಟು ವಿಷಯವನ್ನು ಲೇಖಕಿ ಗಿರಿಜಾ ಶಾಸ್ತ್ರೀ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ… ಮೈಸೂರಿನ ‘ಧ್ವನ್ಯಾಲೋಕ’ ಶಾರದೆಯ ಒಂದು ಸಹಜ ಕಾಡು. ನೂರಕ್ಕಿಂತ ಹೆಚ್ಚು ಜಾತಿಯ ಮರಗಳಿವೆ. ಮೂರುವರೆ ಎಕರೆಗಳ ಈ ಕಾಡನ್ಮು ಸಮವಾಗಿ ಕತ್ತರಿಸಿ ರಿಸಾರ್ಟ್ ಮಾಡಲಾಗಿಲ್ಲ. ಕಾಡನ್ನು ಕಾಡಿನಂತೆಯೇ ಉಳಿಸಿಕೊಂಡು ಅದರೊಳಗೆ ಒಂದು ಜ್ಞಾನ ದೇಗುಲವನ್ನು ರೂಪಿಸಲಾಗಿದೆ. ಇಲ್ಲಿ ಹಗಲೂ ಇರುಳೂ ಕಾಡಿನ ಕಲರವ. ಜ್ಞಾನದಾಹಿಗಳು ಇಲ್ಲಿ ಕಳೆದು ಹೋಗಬಲ್ಲಂಥ ಗ್ರಂಥಾಲಯವಿದೆ. ಅಪರೂಪದ ಗ್ರಂಥಗಳಿಂದ ತುಂಬಿರುವ ಇದರ ಒಳ ಹೊಕ್ಕರೆ ಸಾಕು ಅನಂತ ಪ್ರಾಚೀನತೆ ಮೂಗಿಗೆ ಬಡಿಯುತ್ತದೆ. ಕೇವಲ ಪರ್ವತ ಮತ್ತು ಸಾಗರಗಳ ಮುಂದೆ ನಿಂತಾಗ ಮಾತ್ರ ಭೂಮಾನುಭೂತಿಯಾಗುವುದಿಲ್ಲ. ಅಪೂರ್ವ ಗ್ರಂಥಾಲಯ ಹೊಕ್ಕಾಗಲೂ ಆಗುತ್ತದೆ. ಅದರೊಳಗೆ ಹೊಕ್ಕ ಪಾಮರರು ನಾವು ನಮ್ಮ ಸ್ಥಾನ ನಿರ್ದೇಶನಕ್ಕೆ ತಡಕಾಡುತ್ತಾ ಕಳವಳ ಪಡುತ್ತೇವೆ. ನಮ್ಮ ಭ್ರಮೆ ಹರಿಯುತ್ತದೆ. ೧೯೫೨ ರಿಂದಲೂ ಲಿಟರರಿ ಕ್ರೈಟೀರಿಯಾನ್ ಎನ್ನುವ ಶಾಣ್ಮಾಸಿಕ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ಶ್ರೇಯಸ್ಸು ಈ ಗ್ರಂಥಾಲಯಕ್ಕಿದೆ. ಸುಮಾರು ೨೩ ವರುಷಗಳಿಂದ ಅನುವಾದಕ್ಕೆಂದೇ ಇರುವ ಸಾರಸ ಎಂಬ ಪತ್ರಿಕೆಯನ್ನು ಶ್ರೀನಾಥ್ ಅವರು ನಡೆಸಿಕೊಂಡು ಬರುತ್ತಿದ್ದಾರೆ. ಒಂದು ರಂಗಮಂದಿರವಲ್ಲದೇ ರಾಜೀವ ಗಾಂಧೀ ಹೆಸರಿನ‌ ಬಯಲು ರಂಗಮಂದಿರ ಕೂಡ ಇದೆ. ಮರಗಳು ರೂಪಿಸಿದ ದಾರಿಯಲ್ಲೇ ನೆಲದ ಹಾಸುಗಳನ್ನು ನೆಡಲಾಗಿದೆ. ” ನೆಲ ಹಾಸುವುದಕ್ಕಾಗಿ ಒಂದು ಸಣ್ಣ ಗಿಡವನ್ನೂ ಘಾಸಿಗೊಳಿಸಿಲ್ಲ” . ಎಂದು ನಳಿನಾ ಅವರು ಹೇಳುತ್ತಾರೆ. ಇಲ್ಲಿ ಹಲವಾರು ತೆಂಗಿನಮರಗಳಿವೆ . ಬಿದ್ದ ಗರಿಗಳನ್ನು ಕಾಯಿಗಳನ್ನು ಯಾರು ಒಯ್ಯುತ್ತಾರೆ? ಗೊತ್ತಿಲ್ಲ ಈ ನಳಿನಾ ಅಕ್ಕನಿಗೆ. ಒಡೆತನವನ್ನು ಸ್ಥಾಪಿಸುವ ಮನಸ್ಸಿಗೆ ಸದಾ ಇದೇ ಆತಂಕವಲ್ಲವೇ? ನನ್ನ ನೆಲದ ಫಲವನ್ನು ಯಾರೋ ಸಂಬಂಧವಿಲ್ಲದವರು ಉಣ್ಣುತ್ತಾರೆ. ಹಾಗೆ ಉಣ್ಣುವವರು ಕಳ್ಳರು. “ಯಾರೋ ತೊಗೊಂಡು ಹೋಗ್ತಾರೆ ಬಿಡಿ” ಎಂದು ಯಾರು ತಿಂದರೆ ತಾನೆ ಏನು? ಎನ್ನುವಂತೆ ನಳಿನಿಯವರು ತಣ್ಣಗೆ ಹೇಳಿದಾಗ ನನಗೆ ಆಶ್ಚರ್ಯ ವಾಯಿತು. ಆಶ್ರಮದಂತಿರುವ ಈ ವಿದ್ಯಾಸಂಸ್ಥೆ ಪ್ರಸಿದ್ಧ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಿ.ಡಿ. ನರಸಿಂಹಯ್ಯನವರ ಕನಸಿನ ಕೂಸು. ಭಾರತದಲ್ಲಿ ಅಮೇರಿಕನ್ ಸಾಹಿತ್ಯವನ್ನು ಪರಿಚಯಿಸಿದವರೇ ಅವರು. ಕಾಮನ್ ವೆಲ್ತ್ ಸಾಹಿತ್ಯದ ಬೆಳವಣಿಗೆಗೆ ಕಾರಣರಾದವರು ಅದನ್ನು ಈಗ ಅವರ ಮಗನಾದ ಪ್ರೊ ಶ್ರೀನಾಥ್ ಅವರು ವಿಭಿನ್ನ ರೀತಿಯಲ್ಲಿ (ಅನುವಾದ ಸಾಹಿತ್ಯ ಕುರಿತಾದ ವಿಚಾರ ಸಂಕಿರಣಗಳು, ಕಮ್ಮಟಗಳು) ಮುನ್ನಡೆಸುತ್ತಿದ್ದಾರೆ. ಮತ್ತು ಬೆಳೆಸುತ್ತಿದ್ದಾರೆ . ಇನ್ನೂ ಬಹಳಷ್ಟು ಯೋಜನೆಗಳಿವೆ. ಶ್ರೀಮತಿ ನಳಿನಾ ಶ್ರೀನಾಥ್ ಅವರ ಬೆನ್ನಿಗಿದ್ದಾರೆ. ಸಿ.ಡಿ.ಎನ್. ಅವರ ಪ್ರತಿಭಾವಂತ ಮಗ, ಅವರ ಬಹಳ ಭರವಸೆಯ ಮಗ ಸಂಜಯ ಅಕಾಲಿಕ ಮರಣಕ್ಕೆ ತುತ್ತಾದರು. ಅವರ ನೆನಪಿನಲ್ಲಿ ಒಂದು ವಿಚಾರ ಮಂಟಪ ಧ್ವನ್ಯಾಲೋಕದ ಹೊಸ್ತಿಲಲ್ಲೇ ನಮಗೆ ಎದುರಾಗುತ್ತದೆ. ಇಲ್ಲಿಯೇ ವಾಸವಾಗಿರುವ ಅವರ ಶ್ರೀಮತಿ ಜಯಶ್ರೀ ಅವರೂ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರು. ಇಡಿಯ ಕುಟುಂಬವೇ ಇಂಗ್ಲಿಷ್ ಪ್ರಾಧ್ಯಾಪಕರುಗಳದ್ದು. English is our Business ಎಂದು ಸಿ.ಡಿ. ಎನ್ ಅವರು ತಮಾಷೆ ಮಾಡುತ್ತಿದ್ದರಂತೆ. ಸಂಜಯ ವಿಚಾರ ಮಂಟಪದಲ್ಲಿ ನಾಟಕದ ತಾಲೀಮುಗಳು, ಕವಿ ಕಲಾವಿದರ ಸಂದರ್ಶನಗಳು ನಡೆಯುತ್ತವೆ. ಸಂಶೋಧಕರು ತಿಂಗಳು ಗಟ್ಟಲೆ ಇಲ್ಲಿ ಬಂದು ತಂಗುತ್ತಾರೆ, ಸಿನಿಮಾ ಚಿತ್ರಕಥೆ ಬರೆಯುವವರೂ ಬರುತ್ತಾರೆ. ಹಾಗೆ ಬಂದವರಿಗೆ ಉಳಿದುಕೊಳ್ಳಲು ಇಲ್ಲಿ ಸರಳವಾದ ಕೋಣೆಗಳಿವೆ. ಉಣಬಡಿಸುವ ಮೆಸ್ ಇದೆ. ಈ ವಿಷಯ ಹೆಚ್ಚಿನ ಮೈಸೂರಿಗರಿಗೇ ಗೊತ್ತಿಲ್ಲ. ಹಾಸನದ ರಾಜಾರಾಯರು ಮತ್ತು ಆರ್ . ಕೆ. ನಾರಾಯಣ್ ಅವರ ಘಮಲು ಈ ಧ್ವನ್ಯಾಲೋಕದಲ್ಲಿ ಸುಳಿದಾಡುತ್ತದೆ. ನಿಜಿಮ್ ಎಜಕ್ಕಿಲ್, ಬಾಲಚಂದ್ರ ನೆಮಾಡೆ, ಕಂದಸ್ವಾಮಿ ಮುಂತಾದವರೆಲ್ಲಾ ಮುಂಬಯಿಯಿಂದ ಬಂದು ಹೋಗಿದ್ದಾರೆ. ಭಾರತದ ಎಲ್ಲಾ ಭಾಗಗಳಿಂದಲೂ ಜ್ಞಾನಾಕಾಂಕ್ಷಿಗಳಾದ ಜನ ಬರುತ್ತಾರೆ. ಇದರ ಹೆಸರೇ “center for Indian studies” ಎಂದು. ನಾನು ಹತ್ತು ವರುಷಗಳ ಹಿಂದೆ ಇಂಡಿಯನ್ ಇಂಗ್ಲಿಷ್ ಲೇಖಕಿಯರ ಬಗೆಗೆ ಸಂಶೋಧನೆಯನ್ನು ಕೈಗೊಂಡಾಗ ನನಗೆ ತೋರುಗಂಬವಾಗಿದ್ದು ಈ ಸಂಸ್ಥೆಯೇ ! ನಾವು ಧ್ವನ್ಯಾಲೋಕದೊಳಗೆ ಹೊಕ್ಕಾಗ ಇಲ್ಲಿನ ಮ್ಯಾನೇಜರ್ ಸುಭಾಷ್ ಅವರು ನಮ್ಮ ಲಗ್ಗೇಜುಗಳನ್ನು ಹೊತ್ತು ತಂದು ನಮ್ಮ ಕೋಣೆಗೆ ತಲಪಿಸಿದರು. ಮೆಟ್ಟಿಲು ಏರುತ್ತಿದ್ದಾಗ “ಬನ್ನಿ ಊಟ ಮಾಡಿ ” ಎಂಬ ದನಿ ಕೇಳಿಸಿತು. ಹಿಂದೆ ನಳಿನಾ ಅವರು ನಿಂತಿದ್ದರು. ಒಳ ಹೋದಾಗ ಕೂರಿಸಿ ಬಡಿಸಿದರು. ಯಾರೋ ಕ್ಯಾಂಟೀನಿನ ಪಾರುಪತ್ತೆಗಾರರಿರಬೇಕು ಎಂದು ಕೊಂಡೆ. ಅವರೇ ಈ ವಿದ್ಯಾಸಂಸ್ಥೆಯ ಒಡತಿ ಎಂದು ತಿಳಿಯಲಿಲ್ಲ. ಹಾಗೆ ಗುರುತಾದ ನಳಿನಾ‌ ಅವರು ಹಿರಿಯಕ್ಕನಂತೆ ಎಲ್ಲೆಲ್ಲಿ ಏನೇನೆಂದು ಅಕ್ಕಪಕ್ಕ ಪರಿಚಯಿಸಿದರು. ಎದುರಾದಾಗಲೆಲ್ಲ ಇವತ್ತೇನು ಮಾಡಿದಿರಿ? ಯಾರನ್ನ ಭೇಟಿಯಾದಿರಿ ? ಹೀಗೆ ಉಭಯಕುಶಲ. ಆಗಾಗ ಸಂಸಾರದ ಕಷ್ಟ ವ್ಯಸನ ಸಂತೋಷಗಳ ವಿನಿಮಯ. ಕಂಡಾಗಲೆಲ್ಲ ನಮ್ಮನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹೊಗಳಿ ಮುಜುಗರಗೊಳಿಸುತ್ತಿದ್ದರು. ಅವರೂ ಪ್ರವಾಸಿಗರ ತಂಗುವ ಕೋಣೆಯಲ್ಲೇ ಇರುವುದು. ಕೆಳಗಿನ ಮೆಸ್ ನಲ್ಲಿಯೇ ಊಟ. ಅವರ ಪತಿ ಶ್ರೀನಾಥ್ ಮಿತಭಾಷಿ. ಅಂತಹವರೂ ಕೂಡ ವಾಕ್ ಮಾಡುತ್ತಿದ್ದ ನಮ್ಮ ಬಳಿಗೆ ಬಂದು ನನ್ನ ‘ಸಂಗೀತದ ಒಸಗೆ’ ಪುಸ್ತಕದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಹೆಚ್ಚಾಗಿಯೇ ಆಡಿದರು. ಬರೆದು ಕೊಟ್ಟರು. ಬಿಡುಗಡೆಗೆ ಮುನ್ನವೇ ನನ್ನ ಪುಸ್ತಕಕ್ಕೆ ಬಂದ ಮೊತ್ತ ಮೊದಲ ಮಹತ್ವದ ಪ್ರತಿಕ್ರಿಯೆ ಅದು. ರಘುನಾಥ್, ಅವರ ಹಾಗೂ ಅವರ ತಂದೆಯ ಪುಸ್ತಕಗಳ ಬಗ್ಗೆ ಬರೆದಾಗ ಮೆಲುದನಿಯಲ್ಲೇ ಸಂತೋಷ ವ್ಯಕ್ತಪಡಿಸಿದರು. “ಇನ್ನೂ ಸ್ವಲ್ಪದಿನ ಇರಿ. ಈಗಲೇ ಯಾಕೆ ಹೋಗುತ್ತೀರ” ಗಂಭೀರ ಸ್ವಭಾವದ ಅವರಿಂದ ಈ ಮಾತುಗಳನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ( ಇವರೊಡನೆ ನಡೆಸಿದ ಸಂದರ್ಶನವನ್ನು ಪ್ರತ್ಯೇಕ ಹಂಚಿಕೊಳ್ಳುವೆ) ಅಲ್ಲಿ ನಾವು ತಂಗಿದ್ದು ಬರೋಬ್ಬರಿ ಹನ್ನೆರೆಡು ದಿನಗಳು. ಎಲ್ಲಿಯೂ ನಾವು ಒಂದು ಕಡೆ ಇಷ್ಟು ದಿನಗಳು ತಂಗಿದ ನೆನಪೇ ಇಲ್ಲ. ಕಾಲ ಹೇಗೆ ಹೋಯಿತೆಂದು ತಿಳಿಯಲೇ ಇಲ್ಲ. ಹೊರಡುವ ದಿನ ನಮಗೆ ಶ್ರೀನಾಥ್ ದಂಪತಿಯಿಂದ ಮೈಲಾರಿ ಹೊಟೆಲ್ ನಲ್ಲಿ ಆತಿಥ್ಯ. ತಾವೇ ಬಿಡಿಸಿದ ಒಂದು ಕಲಾತ್ಮಕ ಆಕರ್ಷಕ ಹೂದಾನಿಯನ್ನು ನನಗೆ ಉಡುಗೊರೆಯಾಗಿ ಇತ್ತರು ನಾನು ಸಂಶೋಧನೆಗೆಂದು ಅನೇಕ ವಿಶ್ವವಿದ್ಯಾಲಯಗಳ ಮೆಟ್ಟಿಲು ಹತ್ತಿದ್ದೇನೆ, ಪ್ರವಾಸವೆಂದು ಅನೇಕೆ ಹೋಟೆಲ್ ವಸತಿ ಗೃಹಗಳಲ್ಲಿ ತಂಗಿದ್ದೇನೆ. ಎಲ್ಲಾ ಕಡೆ, ಒಂದು ಅಂತರವನ್ನಿಟ್ಟುಕೊಂಡು ವ್ಯಾಪಾರದ ಬಿಗುವಿನಲ್ಲೇ ಮಾತನಾಡಿಸಿದ್ದಾರೆ. ಆದರೆ ಧ್ವನ್ಯಾಲೋಕದ ಅನುಭವವೇ ಬೇರೆ. ಮೈಸೂರು ನನ್ನ ತವರೂರು. ನಮ್ಮ ಧ್ವನ್ಯಾಲೋಕದ ವಾಸ್ತವ್ಯ ಅದನ್ನು ಮತ್ತೆ ಮತ್ತೆ ನೆನಪುಮಾಡಿಕೊಟ್ಟಿತು. ಬಹಳ ಉತ್ಸಾಹೀ ಮಹಿಳೆ ಶ್ರೀಮತಿ ಜಯಂತಿ ರಾಮಚಂದ್ರನ್ ಎಂಬ ಅಪರೂಪದ ಗೆಳತಿ ಸಿಕ್ಕಿದ್ದು ಇಲ್ಲಿಯೇ. ಪ್ರಸನ್ನ ಸಂತೇ ಕಡೂರು ಅವರು ನಮ್ಮನ್ನು ನೋಡಲು ಬಂದಾಗ ನಾವೆಲ್ಲಾ ಒಟ್ಟಿಗೆ ಸೇರಿ ಸಾಹಿತ್ಯಕ ಹುಯಿಲೆಬ್ಬಿಸಿದ್ದು ಅವಿಸ್ಮರಣೀಯ. ಅಲ್ಲಲ್ಲೇ ಮರಗಳ ಕೆಳಗೆ ಕಲ್ಲು ಬೆಂಚುಗಳು. ತಂಪಾದ ಗಾಳಿ, ಬೆಚ್ಚನೆ ಬಿಸಿಲು , ರಾತ್ರಿಹೊತ್ತು ತಲೆಯೆತ್ತಿ ನೋಡಿದರೆ ಚಂದ್ರತಾರೆಗಳು ! ಜೀರುಂಡೆ ಕೂಗು! ಪ್ರೀತಿಯಿಂದ ಎದುರುಗೊಳ್ಳುವ ಮಂದಿ! ಸುಖ ಎಂದರೆ ಮತ್ತೇನು? ಗಿರಿಜಾ ಶಾಸ್ತ್ರೀ – ಇಂಗ್ಲಿಷ್ ಉಪನ್ಯಾಸಕರು,ಲೇಖಕರು, ಮುಂಬೈ ಓಂಶಾಂತಿಧಾಮ ವೇದಗುರುಕುಲ' : ನನ್ನದೊಂದು ಲೇಖನ ವಿಶ್ವಾಣಿಯಲ್ಲಿ. ಶಶಿಧರ ಹಾಲಾಡಿಯವರಿಗೆ ಧನ್ಯವಾದಗಳು ಮನುಷ್ಯಜಾತಿ ತಾನೊಂದೆ ವಲಂ" ಎನ್ನುವ ಪ್ರಣಾಳಿಕೆಯನ್ನಿಟ್ಟುಕೊಂಡು, ವಸುಧೈವ ಕುಟುಂಬಕಂ ಎನ್ನುವ ಒಂದು ಅಖಂಡವಾದ ತಾತ್ವಿಕ ನೆಲೆಗಟ್ಟಿನ ಮೇಲೆ ಓಂಶಾಂತಿಧಾಮ ವೇದ ಗುರುಕುಲ ಎನ್ನುವ ಟ್ರಸ್ಟ್ ಬೆಂಗಳೂರಿಗೆ ತೊಂಬತ್ತು ಕಿ.ಮೀ. ದೂರದಲ್ಲಿ ಕನಕಪುರದ ಸಂಗಮದ ಬಳಿ ನೆಲೆ ನಿಂತಿದೆ. ಇದು "ವೇದಗಳಿಗೆ ಮರಳಿ" ಎನ್ನುವ ಸ್ವಾಮಿ ದಯಾನಂದ ಸರಸ್ವತಿಯವರ ಪರಿಕಲ್ಪನೆಯ ಮೇಲೆ ಸ್ಥಾಪಿತವಾಗಿರುವ ವಿದ್ಯಾಕೇಂದ್ರ. ವೇದಾದ್ಯಯನ, ಅಧ್ಯಾತ್ಮ ಸಾಧನೆ ಮತ್ತು ಆರೋಗ್ಯ ಪಾಲನೆ ( ಆಯುರ್ವೇದ) ಇದರ ಮೂರು ಮೂಲ ಉದ್ದೇಶ. ನಾನು ಓಂಶಾಂತಿಧಾಮ ವೇದ ಗುರುಕುಲಕ್ಕೆ ಕಾಲಿಟ್ಟು ಗೋಶಾಲೆಯ ಹತ್ತಿರ ಬಂದಾಗ ಒಬ್ಬರು ಸಾಮಾನ್ಯ ಗ್ರಾಮೀಣ ವ್ಯಕ್ತಿಯ ಹಾಗೆ ರಸ್ತೆ ಬದಿಯಲ್ಲಿ ಅಥವಾ ಸಂತೆಯೊಳಗೆ ಕೂರುವ ಹಾಗೆ ಒಂದು ಕುರ್ಚಿಯಮೇಲೆ ಕೆಲವು ವ್ಯಕ್ತಿಗಳನ್ನು ಸುತ್ತುವರಿದು ಕಾಲು ಚಾಚಿ ಕುಳಿತಿದ್ದರು. ಹಾಗೆ ಸಂತೆಯೊಳಗೆ ಕುಳಿತ ಸಂತ ಬೇರಾರೂ ಅಲ್ಲ ಅವರೇ ಈ ಗುರುಕುಲದ ಮಹತ್ವಾಕಾಂಕ್ಷೆಯ ಕನಸು ಕಂಡು ಅದನ್ನು ತಮ್ಮ ಜೊತೆಗಾರರ ಸಹಕಾರದಿಂದ ಹುಟ್ಟು ಹಾಕಿ ಬೆಳೆಸಿದ ಅನಂತ ಆರ್ಯಾ ಎಂದು ಗೊತ್ತಾಯಿತು. ಮಿಲಿಟರಿ ಸೇವೆಯಲ್ಲಿದ್ದ ಆರ್ಯಾಜೀ ಹೊರದೇಶಗಳಲ್ಲೂ ಸೇವೆ ಮಾಡಿ ಸಾಕಷ್ಟು ಹಣ ಗಳಿಸಿದರು. ಗಳಿಸಿದ ಹಣ ವಾಕರಿಕೆ ತರಿಸಿತು. ಅಪಾರ ಸಂಬಳದ ಕೆಲಸವನ್ನು ತ್ಯಜಿಸಿ ಭಾರತಕ್ಕೆ ಮರಳಿದರು. ಸಂಪಾದಿಸಿದ ಹಣ ಏನು ಮಾಡಬೇಕೆಂದು ತಿಳಿಯಲಿಲ್ಲ. ಆ ವೇಳೆಗೆ ಬ್ರಹ್ಮದೇವ್ ಎನ್ನುವ ಸಿದ್ಧಪುರುಷರೊಬ್ಬರ ಪರಿಚಯವಾಯಿತು. ಆರ್ಯಾಜೀಯವರು ಎಂದೂ ಅಧ್ಯಾತ್ಮದ ಹಾದಿ ತುಳಿದವರಲ್ಲ. ಬ್ರಹ್ಮದೇವ್ ಅವರ ಸಂಪರ್ಕಕ್ಕೆ ಬಂದದ್ದೇ ಪರುಷಮಣಿಯ ಸ್ಪರ್ಶವಾದಂತಾಯಿತು. ಗುರುಕುಲ ಸ್ಥಾಪನೆಯ ಬೆಳಕಿನ ಬೀಜವನ್ನು ಆರ್ಯಾಜೀಯವರ ಮನಸ್ಸಿನಲ್ಲಿ ಬಿತ್ತಿದವರೇ ಬ್ರಹ್ಮದೇವ್ ಅವರು. ಜೊತೆಗೆ ಸತ್ಯವ್ರತ ರಂತಹ ಸಮಾನ ಆಸಕ್ತರೂ ಸೇರಿಕೊಂಡರು. ಆರ್ಯಾಜೀ ಅವರ ಸಹೋದರ ಶಾಮಣ್ಣನವರೇ ಅಲ್ಲದೇ ಸುಧಾಕರ ಬಾಬು ಎಂಬುವವರೂ ಜೊತೆಗೂಡಿದರು. ಗುರುಕುಲವನ್ನು ಸ್ಥಾಪಿಸಲು ಬೆಟ್ಟಗಳಿಂದ ಸುತ್ತುವರಿದ, ನದಿಗಳು ಕೂಡುವ ಕಾಡಿನ ಪ್ರದೇಶವೇ ಪ್ರಶಸ್ತವಾದ ಜಾಗ ಎಂಬ ಉಲ್ಲೇಖ ಋಗ್ವೇದದಲ್ಲಿ ಇದೆಯಂತೆ. ೧೯೮೮-೮೯ ರ ಸುಮಾರಿಗೆ ಅಂತಹ ಜಾಗಕ್ಕಾಗಿ ಸಾವಿರಾರು ಮೈಲಿಗಳನ್ನು ಕರ್ನಾಟಕದಾದ್ಯಂತ ಅರಸುತ್ತಾ ಮೂವರು ಗೆಳೆಯರು ಅಲೆದಾಡಿದರು. ಕೊನೆಗೊಮ್ಮೆ ಕಾವೇರಿ ಅವರುಗಳನ್ನು ಕೈಮಾಡಿ ಕರೆದಳು. ಕನಕಪುರದ ಸಂಗಮದ ಬಳಿಯ ಅವಳ ತೀರದಲ್ಲಿ ಎಂಬತ್ತು ಎಕರೆಗಳಷ್ಟು ಜಾಗವನ್ನು ಆರ್ಯಾಜೀಯವರು ತಮ್ಮ ಸ್ವಂತ ಹಣದಿಂದ ಖರೀದಿಸಿದರು. ಆರ್ಯಾಜೀ ಮತ್ತು ಗೆಳೆಯರು ಗುರುಕುಲಕ್ಕಾಗಿ ಕಾಡಿನ ಪ್ರದೇಶವನ್ನು ನೋಂದಾಯಿಸಿಕೊಂಡ ತಕ್ಷಣ ನಾಡ ಪ್ರಭುಗಳ ಕಣ್ಣು ಕೆಂಪಾಯಿತು. ಆಗ ಅವರು ತಮ್ಮ ಪಡೆಗಳ ಸಮೇತ ಬಂದು "ಕೊಟ್ಟಷ್ಟು ದುಡ್ಡು ತೆಗೆದುಕೊಂಡು ಜಾಗ ಖಾಲಿ ಮಾಡು" ಎಂದು ತರ್ಜನಿ ಬೆರಳಲ್ಲಿ ಧಮ್ಕಿ ಹಾಕಿದರು. ಆರ್ಯಾಜೀಯವರು ಮೊದಲೇ ಮಿಲಿಟರಿಯಲ್ಲಿ ಇದ್ದವರು. "ನಾನು ವ್ಯಾಪಾರಕ್ಕೆ ಕುಂತಿಲ್ಲ‌, ಅದೇನು ಮಾಡ್ಕೋತೀಯೋ ಮಾಡ್ಕೋ ಹೋಗ್ " ಎಂದು ಹೆಗಲ ಮೇಲಿನ ಶಲ್ಯ ಒದರಿ ಎದ್ದು ಹೊರ ನಡೆದರು. ನಾಡ ಪ್ರಭುಗಳು ನಡುಗಿದರು. ೧೯೯೧ ರಲ್ಲಿ ಹೀಗೆ ಮೊದಲು ಹುಟ್ಟಿದ್ದು ಕನ್ಯಾ ಗುರುಕುಲ. ಹಾಗೆ ಗುರುಕುಲಕ್ಕೆ ದಾಖಲಾದ ಕನ್ಯೆಯರಲ್ಲಿ ಸತ್ಯವ್ರತ ಅವರ ಅಕ್ಕ ಸುಶೀಲಮ್ಮನವರೂ ಒಬ್ಬರು . ಮಹಿಳಾ ವೇದಾಧ್ಯಯನದ ಬಗ್ಗೆ ಜಾಗೃತಿಯನ್ನು ಮೂಡಿಸಲು ಇವರು ತಮ್ಮ ಸಹಚರರೊಂದಿಗೆ ಕರ್ನಾಟಕದ ಮೂಲೆ ಮೂಲೆ ತಿರುಗಿದರು. ಭಾಷಣಗಳನ್ನು ಮಾಡಿದರು. ಇಂದು ವೇದವಿದ್ಯಾ ಪಾರಂಗತೆಯಾಗಿ, ಸಂಸ್ಕೃತ ಪಂಡಿತೆಯಾಗಿ ಗುರುಕುಲದ ಎಲ್ಲ ಮಕ್ಕಳಿಗೆ ಸುಶೀಲಮ್ಮ ತಾಯಿಯಾಗಿದ್ದಾರೆ. ಇವರ ಹಾಗೆಯೇ ಅನೇಕ‌ ಮಹಿಳೆಯರು ವೇದವಿದ್ಯಾ ಪಾರಂಗತರಾಗಿ ಹೊರನಡೆದಿದ್ದಾರೆ. ಕಾಲಾಂತರದಲ್ಲಿ ಹುಡುಗಿಯರು ಮುಂದೆ‌ ಬಾರದ ಕಾರಣ ವೇದ ಗುರುಕುಲವನ್ನು ಬಾಲಕರ ವೇದಗುರುಕುಲವನ್ನಾಗಿ ಬದಲಾಯಿಸಲಾಯಿತು. ಸುಮಾರು ಐವತ್ತು ಮಕ್ಕಳು ಇಲ್ಲಿ ಅಧ್ಯಯನದಲ್ಲಿ ನಿರತರಾಗಿದ್ದಾರೆ. ವೇದ ಕಲಿಯಲು ಮಕ್ಕಳು ಬಂಗಾಳ ಮತ್ತು ರಾಜಾಸ್ಥಾನದಿಂದಲೂ ಬಂದಿದ್ದಾರೆ. ಇಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಊಟ, ಉಡುಪನ್ನು ನೀಡಲಾಗುತ್ತದೆ. ಕೇವಲ ಊಟವಷ್ಟೇ ಅಲ್ಲ, ಬೆಳಗಿನ ಹೊತ್ತು ವೇದಾಧ್ಯಯನ ವಾದರೆ ಮಧ್ಯಾಹ್ನ ಇತರ ಶಾಲೆಗಳಂತೆ ಆಧುನಿಕ ಶಿಕ್ಷಣ. ಎಷ್ಟೋ ವಿದ್ಯಾರ್ಥಿಗಳು ಇಲ್ಲಿಂದ ಹೊರ ಹೋದವರು ಸ್ನಾತರಾಗಿ ದೇಶವಿದೇಶಗಳಲ್ಲಿ ನೆಲೆಸಿ ಯಶಸ್ವೀ ಜೀವನ ನಡೆಸುತ್ತಿದ್ದಾರೆ. ಈ ಓಂ ಶಾಂತಿಧಾಮ ಗುರುಕುಲ ಅನೇಕ ಕಾರಣಗಳಿಗೆ ನನಗೆ ಮುಖ್ಯವಾಗಿದೆ.‌ ಇಲ್ಲಿ ಮಕ್ಕಳಿಗೆ ಶಿಕ್ಷಣದಿಂದ ಹಿಡಿದು, ವಸತಿ, ಉಡುಪು ಎಲ್ಲವೂ ಉಚಿತ. ಉಚಿತವೆಂದಾಕ್ಷಣ ಬೇಕಾಬಿಟ್ಟಿಯಾಗಿಲ್ಲ. ಪೌಷ್ಠಿಕ ಆಹಾರವನ್ನು ಕೊಡಲಾಗುತ್ತದೆ. ಬೆಳಗಿನ ತಿಂಡಿಯನಂತರ ಹತ್ತು ಗಂಟೆಗೆ ಹಾಲು ಮತ್ತು ಬಿಸ್ಕತ್ತು, ಸಂಜೆ ನಾಲ್ಕುಗಂಟೆಗೆ ಹಣ್ಣು , ಲಘು ಉಪಹಾರ, ದೀಪಾವಳಿಯ ತೈಲ ಅಭ್ಯಂಜನ....ಮಕ್ಕಳು ಸುಖವಾಗಿದ್ದಾರೆ. ಹಾಗೆಂದು ಮಕ್ಕಳೇ ಹೇಳಿದ್ದಾರೆ. ಶಿಕ್ಷಣವೆಂಬುದು ಒಂದು ಲಾಭದಾಯಕ ವ್ಯಾಪಾರವಾಗಿರುವ ಇಂದಿನ ದಿನಗಳಲ್ಲಿ ಓಂ ಶಾಂತಿಧಾಮ ಗುರುಕುಲವು ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಪ್ರಶಂಸನೀಯ. ಇಲ್ಲಿಂದ ಕಲಿತು ಹೋದ ಅನೇಕ ಮಕ್ಕಳು ದೇಶವಿದೇಶಗಳಲ್ಲಿ ನೆಲೆಸಿ ಯಶಸ್ವಿಗಳಾಗಿದ್ದಾರೆ. ಮಹಿಳಾ ವಿದ್ಯಾಭ್ಯಾಸಕ್ಕೆ ಮೊದಲ‌ ಆದ್ಯತೆ ಇತ್ತದ್ದು ಮಹತ್ವದ ಅಂಶ. ಅಧ್ಯಾತ್ಮ ಸಾಧನೆಗೆ ಹೆಣ್ಣು ಬಾಧಕ ಎನ್ನುವ ಸಂಸ್ಕೃತಿಯಲ್ಲೇ ಹೆಣ್ಣಿನ‌ ಅಧ್ಯಾತ್ಮ ವಿಕಾಸಕ್ಕೆ ಪುಷ್ಠಿ ಕೊಟ್ಟದ್ದು ಈ ಗುರುಕುಲದ ವೈಶಿಷ್ಟ್ಯ. "ಸಂಸ್ಕೃತ ಪಂಡಿತರು ತಮ್ಮ ಅತೀವ ಮಡಿವಂತಿಕೆಯಿಂದ ಆ ಭಾಷೆ ನಶಿಸುವಂತೆ ಮಾಡಿದರು" ಎಂದು ಸಂಸ್ಕೃತ ವಿದ್ವಾಂಸರಾದ ಮೈಸೂರಿನ ಲೀಲಾ ಪ್ರಕಾಶ್ ಅವರು ಅಭಿಪ್ರಾಯ ಪಡುತ್ತಾರೆ. ಎಲ್ಲಾ ರೀತಿಯ ಮಡಿವಂತಿಕೆಯನ್ನು ಮೀರುವುದರ ಪ್ರತೀಕವಾಗಿ ನಿಂತಿದೆ ಈ ಗುರುಕುಲ. ವೇದಾಧ್ಯಯನ ಕೇವಲ ಕೆಲವು ಜಾತಿಗಳಿಗೆ ಮಾತ್ರ ಮೀಸಲಿಟ್ಟಿದ್ದರಿಂದ ಅದು ಸಾಮಾಜಿಕ ಅಸಮತೋಲಕ್ಕೆ ಕಾರಣವಾದುದು ಇತಿಹಾಸ. ಅದಕ್ಕೆ ಪರ್ಯಾಯವನ್ನು ಕಂಡುಕೊಳ್ಳುವುದರಲ್ಲಿ ದಯಾನಂದ ಸರಸ್ವತಿಯವರಿಗೆ ದೊರೆತದ್ದೇ ಆರ್ಯಸಮಾಜದ ಕಲ್ಪನೆ. ಅದರ‌ ಆಧಾರದ ಮೇಲೆಯೇ ಹುಟ್ಟಿಕೊಂಡಿರುವ ಈ ಗುರುಕುಲದಲ್ಲೂ ಯಾವುದೇ ಜಾತಿಯವರಾದರೂ ವೇದ ಕಲಿಯಬಹುದಾಗಿದೆ. ಇಲ್ಲಿನ ಅರ್ಜಿಯಲ್ಲಿ ಜಾತಿಯ ಕಾಲಮ್ ಇಲ್ಲ. ಅಲ್ಲಿಗೆ ಬರುವ ಅತಿಥಿಗಳಿಗೂ "ನೀವು ಯಾವ ಜಾತಿಯವರೆಂದು" ಕೇಳುವುದಿಲ್ಲ. ಅನ್ಯಧರ್ಮೀಯರಿಗೂ ಸ್ವಾಗತವಿದೆ- ಅವರು ಆರ್ಯಸಮಾಜದ ನಿಯಮಗಳಿಗನುಗುಣವಾಗಿ ಕೆಲವು ಸರಳ ಸಂಸ್ಕಾರಕ್ಕೆ ಒಳಗಾಗುವುದಾದರೆ ಮಾತ್ರ. ಇಲ್ಲಿ ಯಾವ ದೇವರ ಮೂರ್ತಿಗಳೂ ಇಲ್ಲ.ಗುಡಿ ಗುಂಡಾರಗಳಿಲ್ಲ. ಗಂಟೆಗಳ ದನಿಯಿಲ್ಲ. ಹೀಗಾಗಿ ಭೇದವಾದ ಸುಳಿಯುವ ಸಾಧ್ಯತೆಗಳೇ ಇಲ್ಲ. ಮಕ್ಕಳು ಮೊಬೈಲ್ ಬಳಸುವ ಹಾಗಿಲ್ಲ. ದೂರದರ್ಶನದಿಂದ ಈ‌ ಮಕ್ಕಳು ದೂರ. ಆಗಾಗ ಕೆಲವು ಆದರ್ಶ ಪುರುಷರ ಚಲನಚಿತ್ರಗಳನ್ನು ತೋರಿಸಲಾಗುತ್ತದೆ. ಆಟೋಟಗಳಿಗೆಂದೇ ಅಧ್ಯಯನಕ್ಕೆ ಅಭ್ಯಾಸಕ್ಕೆ ನಿಗದಿತ ಸಮಯವಿದೆ. ಹಲವಾರು ಪರಿಣಿತ ಆಚಾರ್ಯರು ಇಲ್ಲಿ ಶಿಕ್ಷಕರಾಗಿದ್ದಾರೆ. ಇಲ್ಲಿನ ಮಕ್ಕಳ ಶಿಸ್ತು, ನಿಯಮ ಪಾಲನೆ ಬೆರಗುಗೊಳಿಸುವಂತಹದು. ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬೇಕು. ಬೆಳಗ್ಗೆ ನಾಲ್ಕಕ್ಕೇ ಏಳಬೇಕು. ತಣ್ಣಿರಿನ ಸ್ನಾನಮಾಡಬೇಕು. ಆನಂತರ ಸಂಧ್ಯಾವಂದನೆ, ದೈವಯಜ್ಞ ಆನಂತರ ಉಪಹಾರ. ತದನಂತರ ತರಗತಿಗಳು ಪ್ರಾರಂಭವಾಗುತ್ತವೆ. ಸಂಜೆ ಮತ್ತೆ ಸಂಧ್ಯಾ ವಂದನೆ, ರಾತ್ರಿ ಊಟ ಆನಂತರ ಭ್ರಮಣ, ಮತ್ತೆ ಅಭ್ಯಾಸ ಮತ್ತು ಬೇಗ ಮಲಗುವುದು. ಇಲ್ಲಿ ಪ್ಲಾಸ್ಟಿಕ್ ನಿಷೇಧ. ಪ್ಲ್ಯಾಸ್ಟಿಕ್ ಬಾಟಲ್ ಗಳಲ್ಲಿ ನೀರು ತುಂಬಿ ಒಯ್ಯುವ‌ ಹಾಗಿಲ್ಲ. ಇಲ್ಲಿನ ಸ್ವಚ್ಛತೆ ಪ್ರಮುಖ ಆಕರ್ಷಣೆ. ಯಾಕೆಂದರೆ ಗುಡಿಸುವುದನ್ನೇ ಕಾಯಕಮಾಡಿಕೊಂಡಿರುವಂತಹ, ಸೇವೆಯೇ ಪ್ರಥಮ ಆದ್ಯತೆಯಾಗಿರುವ ಕುಲಕರ್ಣಿ ತಾತನಂತಹವರು ಇದ್ದಾರೆ. ಇಲ್ಲಿ ಅಸ್ಪೃಶ್ಯತೆಯ ವಾಸನೆಯಿಲ್ಲ. ಎಲ್ಲ ಜಾತಿಯ ಸಿಬ್ಬಂದಿ ವರ್ಗದವರಿಗೂ ಅಡುಗೆ ಕೋಣೆಗೆ ಪ್ರವೇಶವಿದೆ. ಎಲ್ಲರಿಗೂ ಸಹ ಪಂಕ್ತಿ ಭೋಜನ ಸಾಧ್ಯವಿದೆ ಬಚ್ಚಲು ತೊಳೆಯುವುದರಿಂದ, ಕಸಗುಡಿಸುವುದರಿಂದ ಹಿಡಿದು ಅಡುಗೆ ಮಾಡುವವರೆಗೆ ಎಲ್ಲರೂ ಎಲ್ಲ ಕೆಲಸವನ್ನೂ ಮಾಡುತ್ತಾರೆ‌ . ಮಾಡುವ ಶ್ರಮಕ್ಕೆ ಘನತೆ ಇದೆ. (Dignity of labour). ಎಲ್ಲವೂ ಇಲ್ಲಿ ಸೇವೆಯೇ! ವಸುಧೈವಕುಟುಂಬಕಂ ಎಂಬುದು ಪ್ರಾಚೀನ ಮಾತು. ಇಡೀ ವಸುಧೆಯೇ ಒಂದು ಕುಟುಂಬ ಎಂಬ ನಂಬಿಕೆಯಲ್ಲಿ ಲೋಕವನ್ನು ಗ್ರಹಿಸಲಾಗುತ್ತಿತ್ತು. ಈ ಮಾತಿಗೆ ಇಂದು ವಿಸ್ಮೃತಿ ಒದಗಿಬಿಟ್ಟಿದೆ. ಸನಾತನ ಎಂಬುದನ್ನು ನಮಗಿಷ್ಟಬಂದಂತೆ ತಿರುಚಿ ವ್ಯಾಖ್ಯಾನಿಸಲಾಗುತ್ತಿದ್ದೇವೆ. ಇಂತಹ ಸಾಮಾಜಿಕ ಅನಿಷ್ಟಗಳಿಗೆ ಉತ್ತರವೆಂಬಂತೆ ಈ ಗುರುಕುಲದೊಳಗಿನ ಚಟುವಟಿಕೆಗಳು ಕಂಗೊಳಿಸುತ್ತಿವೆ. ಸತ್ಯವ್ರತ ಅವರು ಕಾರ್ಯದರ್ಶಿಗಳಾಗಿ ಗುರುಕುಲವನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ. ಆರ್ಯಾಜಿಯವರು ಅಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಬಸವರಾಜು ಅವರು ಗೋಶಾಲೆ ನೋಡಿಕೊಳ್ಳುತ್ತಿದ್ದಾರೆ. ಗುರುಕುಲ ಇಂದು ರಾಷ್ಟ್ರೀಯ ಐಕ್ಯತೆ, ಅಂತಾರಾಷ್ಟ್ರೀಯ ಸೌಹಾರ್ದ, ಹಾಗೂ ಜಾಗತಿಕ ಭಾತೃಪ್ರೇಮದ ಪ್ರತೀಕವಾಗಿ ತಲೆಯೆತ್ತಿ‌ ನಿಂತಿದೆ ಅನೇಕ ಕೊಡುಗೈ ದಾನಿಗಳು ಈ ಗುರುಕುಲಕ್ಕೆ ಉದಾರವಾಗಿ ಸಹಾಯಮಾಡುತ್ತಿದ್ದಾರೆ. ಪ್ರಶಾಂತವಾತಾವರಣದಲ್ಲಿರುವ ಈ ಗುರುಕುಲ ಎಲ್ಲ ರೀತಿಯ ಮಾಲಿನ್ಯದಿಂದ ಹೊರತಾಗಿದೆ. ಮೂರು ಕಾಲಗಳಲ್ಲಿಯೂ ಊಟದ ಸಮಯದಲ್ಲಿಯೂ ಜಾತಿ ವಿಜಾತಿಯನ್ನದೇ ಮಕ್ಕಳು ವೇದ ಘೋಷಮಾಡುವುದನ್ನು ಕೇಳುವುದೇ ಒಂದು ಆನಂದ. ಕೇವಲ 9 ನೇತರಗತಿಯವರೆಗೆ ಓದಿದ ರಾಜತ್ತಿ ಸಲ್ಮಾ ಏರಿದ ಎತ್ತರ ಯಾರಿಗಾದರೂ ಬೆರಗು ಗೊಳಿಸುವಂತಹದು. ತಮಿಳಿನ ಮೊತ್ತಮೊದಲ ಮುಸ್ಲಿಮ್ ಕವಿಯಾಗಿ ಕಾದಂಬರಿಕಾರ್ತಿ, ಅಂಕಣಕಾರ್ತಿ, ಡಿ.ಎಂ.ಕೆ ಕಾರ್ಯ ಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಲ್ಮಾ ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳಲು ಪಟ್ಟ ಪಾಡುಗಳು ನುಂಗಿದ ನೋವುಗಳು ಅನೇಕ. ಅವರೊಡನೆ ಸಂವಾದ ನಡೆಸಿದ ‘ಸೃಜನಾ’ ಸದಸ್ಯೆಯರಿಗೆ ಒಂದು ಮರೆಯಲಾರದ ಸಂಜೆ.. ಅವರ ಒಂದು ಕವಿತೆಯ ನನ್ನ ಕನ್ನಡ ಅನುವಾದ ಇಲ್ಲಿದೆ. ಒಪ್ಪಂದ ಒಂದೊಂದು ಬಾರಿಯೂ ಅಮ್ಮಾ ನಾಜೂಕಾಗಿ ಹೇಳುವುದನ್ನು ಅಕ್ಕ ಕೋಪದಲ್ಲಿ ಹೇಳುತ್ತಾಳೆ ಮಲಗುವ ಕೋಣೆಯಲ್ಲಿನ ತಪ್ಪುಗಳೆಲ್ಲಾ ನನ್ನದೇ ಎಂದು ದಿನವೂ ಮಲಗುವ ಕೋಣೆಯಲ್ಲಿ ಎದುರುಗೊಳ್ಳುವ ಮೊದಲ ಮಾತು `ಇವತ್ತಿಗೆ ಏನು’? ಹಲವು ಬಾರಿ ಕೊನೆಯ ಮಾತೂ ಇದುವೇ ಆಗಿರುತ್ತದೆ. ಸೂಳೆಗಾರಿಕೆಯಮೇಲೆ ಹೊಳೆಯುವ ಕೋಟಿ ನಕ್ಷತ್ರಗಳ ತೋರುಬೆರಳುಗಳು ನಡುಗುವ ರಾತ್ರಿಗಳಲ್ಲಿ ಮತ್ತೊಮ್ಮೆ ತೇಲುವ ಬುದ್ದಿಮಾತುಗಳು ಮರಿಗಳಿಗೆ ಉಣಿಸಲು ಕೈಲಾಗದ ಬೆಕ್ಕಿನ ಬಿಕ್ಕಳಿಸಿ ಅಳುವ ಕೂಗು ಹಿಂಡುವುದು ಕರುಳು ನಿನಗೂ ಕೂಡ ದೂರುಗಳೂ ಇರಬಹುದು ನನ್ನ ನಿಲುವು ಕಾಲದಿಂದಲೂ ಚರಿತ್ರೆಯಿಂದಲೂ ತಿಳಿಯಲ್ಪಟ್ಟಿದೆ ನಿನ್ನಿಂದಲೂ ತಿಳಿಯಲಾಗದಿದ್ದರೂ ತುಸು ಪ್ರೀತಿ ಪಡೆಯಲು ನಿನ್ನ ಮಗುವಿನ ತಾಯಿ ಎಂಬ ಜವಾಬ್ದಾರಿಯನ್ನು ನೆರವೇರಿಸಲು ಹೊರಗಿನಿಂದ ಸ್ಯಾನಿಟರಿ ನ್ಯಾಪ್ಕಿನ್ಗಳನ್ನೂ ಗರ್ಭನಿರೋಧಕಗಳನ್ನು ಪಡೆಯಲು ಇನ್ನೂ ಸಣ್ಣ ಸಣ್ಣ ಸಹಾಯವನ್ನು ಬೇಡಿ ಸಾಧ್ಯವಾಗುವುದಾದರೆ ನಿನ್ನ ಮೇಲೆ ಸ್ವಲ್ಪ ಅಧಿಕಾರವನ್ನು ಚಲಾಯಿಸಲು ನಾನು ಸ್ವಲ್ಪ ಅಧಿಕಾರವನ್ನು ಸ್ಥಿರಪಡಿಸಿಕೊಳ್ಳಲು ಎಲ್ಲಾ ತಿಳಿವಳಿಕೆಯೊಡನೆ ತೆರೆದೆಕೊಳ್ಳುವುದು ನನ್ನ ಯೋನಿ (ತೆಂಕಣ ನುಡಿಗಳಲ್ಲಿ ಸ್ತ್ರೀವಾದಿ ಸಂಕಥನ : ಪು 254: ಕುವೆಂಪು ಭಾಷಾಭಾರತಿ : ಸಂ: ವಿನಯ ವಕ್ಕುಂದ) ಯಮನ್ ಶರಧಿಯ ಮೇಲೆ ಕಾಪಿಯ ಲೀಲೆ.... ಏಳೆಂಟು ವರುಷಗಳ ಹಿಂದೆ, ಮಳೆಗಾಲದೊಂದು ಮುಂಜಾವು. ಕಲ್ಯಾಣದ ಗಾಯನ ಸಭಾದಲ್ಲಿ ಮೇಘಮಲ್ಹಾರ್ ಮಹೋತ್ಸವ! ಆಘ್ರಾಘರಾಣೆಯ ಪಂಡಿತರಾದ ಅರುಣ್ ಕಶಾಲ್ಕರ್ ಅವರ ಕಚೇರಿ ಮುಗಿಯಿತು. ಅವರನ್ನು ರಸಿಕರು ಮುತ್ತಿಕೊಂಡರು. ಅವರ ಶಿಷ್ಯೆಯೇ ಆದ ಸಂಜನಾ ಕೌಶಿಕ್ ಳ ಆಹ್ವಾನದ ಮೇರೆಗೆ ನಾನೂ ಆ ಕಚೇರಿಗೆ ಹೋಗಿದ್ದೆ. ಸಂಜನಾ ಅವರ ಗುರುಗಳಿಗೆ ನನ್ನನ್ನು ಪರಿಚಯಿಸಿದಳು. "ನನಗೆ ಸಂಗೀತ ಶಾಸ್ತ್ರ ಗೊತ್ತಿಲ್ಲ. ತಾಳ, ಲಯ, ಸ್ವರಗಳನ್ನು ನಾನರಿಯೆ. ಆದರೆ ಸುಶ್ರಾವ್ಯ ಸಂಗೀತ ನನ್ನನ್ನು ಬಹಳ ಆರ್ದ್ರವನ್ನಾಗಿ ಮಾಡಿಬಿಡುತ್ತದೆ. ನಾನು ರಸಿಕಳು ಮಾತ್ರ" ಎಂದೆ. ಕಶಾಲ್ಕರ್ ಥಾಣೆಯ ಪರಿಸರದಲ್ಲಿ ಬಹಳ ದೊಡ್ಡ ಹೆಸರು. " ಬಹುತ್ ಖೂಪ್ ....ವಹೀ ತೋ ಚಾಹಿಯೇನಾ" ಎಂದರು. ಆನಂತರ ನಮ್ಮಮನೆಗೆ ಬಂದ ಸಂಜನಾ ಬಸವಣ್ಣನ ವಚನವನ್ನು ಹಾಡಿದ್ದಳು. ನಾನು ಕರಗಿ ಹೋಗಿದ್ದೆ. ಮೈಸೂರು ಅಸೋಸಿಯೇಷನ್ ನಲ್ಲಿ ಕೂಡ ಅವಳ ಕಾರ್ಯಕ್ರಮ ಏರ್ಪಾಡಾಗಿತ್ತು. ಜನ ಬಹಳ ಮೆಚ್ಚಿಕೊಂಡರು. ಬಹಳ ವರ್ಷಗಳ ಆನಂತರ ಸಂಜನಾ ಕೌಶಿಕ್ ಳನ್ನು ನೋಡಿದ್ದು ಇಂದು ಸಂಜೆ ಮೈಸೂರಿನ ಆಳ್ವಾರ್ ಸಭಾಂಗಣದಲ್ಲಿ. ಬಹಳ ಉತ್ಕಟವಾಗಿ, ತನ್ಮಯಳಾಗಿ ಹಾಡಿದಳು. ರುದ್ರಪಟ್ಟಣ ಮೂಲದ ಈ ಬಾಲೆ ಇಂದು ಹಿಂದೂಸ್ತಾನಿ ಆಗ್ರಾಘರಾಣೆಯ ವಿದುಷಿಯಾಗಿ ಬೆಳೆದಿದ್ದಾಳೆ. ಬಾಲ್ಯದಲ್ಲಿಯೇ ಅನೇಕ ಸ್ಥಳೀಯ ಗುರುಗಳ ಮಾರ್ಗದರ್ಶನದಲ್ಲಿ ಹಿಂದೂಸ್ತಾನೀ ಸಂಗೀತ ಅಭ್ಯಾಸ ಪ್ರಾರಂಭಿಸಿದ ಸಂಜನಾಳ ಸಂಗೀತ ಪ್ರೇಮ ಎಷ್ಟು ಗಾಢವಾದುದೆಂದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯುವುದಕ್ಕೆಂದೇ ಮುಂಬಯಿಗೆ ಬಂದಳು. ಅಲ್ಲಿ ಗುರುಕುಲ ಪದ್ಧತಿಯಲ್ಲಿ ಆಗ್ರಾ ಘರಾಣೆಯ ಗುರು ಕಶಾಲ್ಕರ್ ಅವರ ಶಿಷ್ಯತ್ವ ಸ್ವೀಕರಿಸಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದಳು. ಪುಣೆಯ ಎಸ್.ಎನ್.ಡಿ.ಟಿ. ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಡಾ. ಪೂರ್ಣಿಮಾ ಧುಮಾಲೆಯವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಅಧ್ಯಯನ ಮುಗಿಸಿರುವ ಸಂಜನಾ ಅವರಿಗೆ ಸಧ್ಯದಲ್ಲಿಯೇ ಡಾಕ್ಟರೇಟ್ ಪದವಿ ದೊರೆಯಲಿದೆ. ಖಯಾಲ್ ಗಾಯನ ಅವರ ವೈಶಿಷ್ಟ್ಯ. ಇಂದು ಸಂಜನಾ ಭಾರತಾದ್ಯಂತವೇ ಅಲ್ಲದೇ ನೆದರ್ಲೆಂಡ್ಸ್‌ ನಲ್ಲಿಯೂ ಕಚೇರಿಗಳನ್ನು ನೀಡಿದ್ದಾರೆ. ಶ್ರೀಕೃಷ್ಣ ಗಾನ ಸಭಾ ಮೈಸೂರು. ಇವರು ಪಂಡಿತ್ ಭೀಮಸೇನ್ ಜೋಷಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಸಂಜನಾ ಅವರ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಂಜನಾ ಅವರು ಕಚೇರಿಯನ್ನು ಪ್ರಾರಂಭಿಸಿದ್ದು ಯಮನ್ ರಾಗದಲ್ಲಿ. ಕಾರಣ ಕೆಲವೇ ಸಿದ್ಧರಾಗಗಳಲ್ಲಿ ಯಮನ್ ರಾಗವೂ ಒಂದು ಎಂದು ಭೀಮಸೇನಜೋಷಿಯವರು ಹೇಳುತ್ತಿದ್ದರಂತೆ. ಆ ರಾಗವನ್ನು ಆತ್ಮಸಾತ್ ಮಾಡಿಕೊಳ್ಳುವುದು ಕಷ್ಟ ಸಾಧ್ಯ. ಬಹಳ ಸಾಧನೆ ಮಾಡದೇ ಅದು ದಕ್ಕದು ಎಂಬುದು ಅವರ ಅಭಿಪ್ರಾಯವಾಗಿದ್ದಿತ್ತಂತೆ. ಯಮನ್ ಸಂಗೀತದ ಅತ್ಯಂತ ಶ್ರೀಮಂತವಾದ ಮೂಲಭೂತ ರಾಗ. ವಿದ್ಯಾರ್ಥಿಗಳಿಗೆ ಮೊದಲ ಪಾಠ ಪ್ರಾರಂಭವಾಗುವುದು ಇಲ್ಲಿಂದಲೇ. ನಮ್ಮ 'ಕಲ್ಯಾಣಿ'ಯಲ್ಲಿ ದೇವರುಗಳು ಉತ್ತುಂಗದಲ್ಲಿ ನಲಿಯುವಹಾಗೆ ( ಗಾಯತ್ರಿ ರಂಜನಿಯವರ 'ಕೃಷ್ಣಾ ನೀ ಬೇಗನೆ ಬಾರೋ' full version ನೆನಪಿಸಿಕೊಳ್ಳಿ) ಇಲ್ಲಿಯ ಖಯ್ಯಾಲ್ ನಲ್ಲಿಯೂ ವಿಜೃಂಭಿಸುತ್ತಾರೆ. ಸಂಜನಾ ಮೊದಲಿಗೆ ಯಮನ್ ನ ಮೂರು ಪ್ರಸ್ತುತಿಯನ್ನು ನೀಡಿದರು. ಮೊದಲನೆಯದು ನೋಮ್ ತೋಮ್ ಆಲಾಪವಾದರೆ ಎರಡನೆಯದು "ನಾದ ಬೋಧಜ್ಯೋತಿ ಜಗಾದೇ...ಸಿಯಾನಾಥ್ ಕೋ ಪ್ರಣಾಮ್ " ಎನ್ನುವ ತಮ್ಮದೇ ರಚನೆಯ ಪ್ರಸ್ತುತಿ, ಮತ್ತೊಂದು ಅವರ ಗುರುಗಳ "ಪ್ರಭು ರಾಮಚರಣ ನಿತ ಧ್ಯಾವೋ" ಎನ್ನುವ ಬಂಧಿಶ್. ಭೀಮ್ ಸೇನ್ ಜೋಶಿಯವರ ಪ್ರಸಿದ್ಧವಾದ 'ಭಾಗ್ಯದಾ ಲಕ್ಷ್ಮೀ ಬಾರಮ್ಮಾ' ಹಾಡನ್ನು ಹಾಡಿ ಅವರ ಜನ್ಮ ಶತಾಬ್ದಿ ಆಚರಣೆಗೆ ಸಾರ್ಥಕ ಕೊಡುಗೆಯನ್ನು ನೀಡಿದರು. 'ಯಮನ್' ನ ವಿಶಾಲ ಶರಧಿಯ ಮೇಲೆ 'ಕಾಪಿ'ಯ ( ಆಜ್ ಖೇಲೆ ಶ್ಯಾಮ ಸಂಗ್ ಹೋಲಿ) ನಾವೆಯೊಳಗೆ ಏರುತ್ತಾ ಆಳಕ್ಕೆ ಇಳಿಯುತ್ತಾ, ತೂಗುತ್ತಾ, ತೊನೆಯುತ್ತಾ ಭೈರವಿಯ ದಡವನ್ನು ಸಂಜನಾ ಮುಟ್ಟಿಸಿದ ಪರಿ ಅನನ್ಯವಾದುದು. ಕರ್ನಾಟಕ ಸಂಗೀತದಲ್ಲಿ ಇದು ಸಿಂಧು ಭೈರವಿ. ಅಪರಂಪಾರ ಸಿಂಧುವನ್ನು ಪಾರುಗಾಣಿಸುವ ಶಕ್ತಿ ಸಂಗೀತಕ್ಕಲ್ಲದೇ ಬೇರೆ ಇನ್ನಾವ ಮಾಧ್ಯಮಕ್ಕಿದೆ? ಇಂದು ಸಂಜನಾ ಕೌಶಿಕ್ ಬಹಳ ಭರವಸೆಯ ಗಾಯಕಿಯಾಗಿದ್ದಾರೆ. ಅವರಿಗೆ ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯೂ ಸೇರಿ 'ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ', ಬೆಂಗಳೂರಿನ 'ಸುರ್ ಸಾಗರ್'' ಮುಂತಾದ ಸಂಸ್ಥೆಗಳಿಂದ ಶಿಷ್ಯವೇತನಗಳು ದೊರೆತಿವೆ. 'ಕಲಾಕಾರ್ 'ಮತ್ತು 'ಬಾಲಪ್ರತಿಭಾ ರತ್ನ' ಮುಂತಾದ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಅವರ ಬಗ್ಗೆ ಪಂ. ರಾಜೀವ್ ತಾರಾನಾಥರು ಹೀಗೆ ಹೇಳುತ್ತಾರೆ Sanjana's handling of raga shows a mature excellence, which would do credit to an older musician. In short, she is she is already a musician who demand s keen attention and respect" "Representing highly acclaimed musical tradition, Sanjana indulges in hard work with utmost dedication aiming at the perfection with a rare insight of Melody and Laya" - ಎಂದು ಪ್ರಸಿದ್ಧ ಪಿಟೀಲು ವಾದಕರಾದ ವಿದ್ವಾನ್ ಎಂ. ಮಂಜುನಾಥ್ ಅವರು ಅಭಿಪ್ರಾಯ ಪಟ್ಟಿರುವುದು ಸಂಜನಾ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಕನ್ನಡದ 'ಕೌಶಿಕಿ'ಯೊಬ್ಬರು ಇಲ್ಲಿ ಅರಳುತ್ತಿರುವ ಸೂಚನೆಗಳು ಕಾಣುತ್ತಿವೆ. ಸಂಜನಾಗೆ ಅಭಿನಂದನೆಗಳು, ಶುಭಾಶಯಗಳು. ಗಾಂಧಿಯ ನೆರಳು..... ಶಾಂತಿಧಾಮಕ್ಕೆ‌ ಕಾಲಿಟ್ಟಕೂಡಲೇ ಬಡಕಲು ದೇಹದ ವಯೋವೃದ್ಧರೊಬ್ಬರು ಕಣ್ಣಿಗೆ ಬಿದ್ದರು. ಅವರಿಗೆ ಎಪ್ಪತ್ತೊಂಬತ್ತು ವರುಷಗಳಂತೆ. ಒಂದು ಸವೆದು ಹೋದ ಮೋಟು ಪೊರಕೆಯಿಂದ ಅಗತ್ಯಕ್ಕಿಂತ ಹೆಚ್ಚಾಗಿ ಬಾಗಿ ಗುಡಿಸುತ್ತಿದ್ದರು. ಅಲ್ಲೇ ಕಲ್ಲ ಬೆಂಚಿನ ಮೇಲೆ ಕುಳಿತೆ. 'ಆ ಕಡೆ ಸರಿ' ಎನ್ನುವಂತೆ ಕೈ ಮಾಡಿದರು. "ಯಾಕೆ ?" ಎಂದೆ. "ಧೂಳು ಏಳ್ತದ್ರೀ" ಇಷ್ಟು ವಯಸ್ಸಾದವರನ್ನು ಈ ಕೆಲಸಕ್ಕೆ ನೇಮಿಸಿದ್ದಾರಲ್ಲ? ನನಗೆ ಅಸಮಾಧಾನ. ಆಮೇಲೆ ಗೊತ್ತಾಯಿತು. ಅದು ಅವರೇ ಆರಿಸಿಕೊಂಡ ಕೆಲಸ ಎಂದು. " ಯಜಮಾನರೇ, ಇಷ್ಟು ಸಣ್ಣ ಪೊರಕೆಯಿಂದ ಗುಡಿಸುತ್ತಿದ್ದೀರಲ್ಲ? ಸ್ವಲ್ಪ ದೊಡ್ಡ ಪೊರಕೆಯಾದರೆ ಅನುಕೂಲವಲ್ಲವೇ?" ಕೇಳಿದೆ ತುಂಡು ಪೊರಕೆ ಕೂಡ ಅವರ ಆಯ್ಕೆಯೇ ಆಗಿತ್ತೇನೋ. ಈ ತುಂಡು ಪೊರಕೆ ಬಾಗೋದನ್ನ ಕಲಿಸುತ್ತದೆ...ಬಾಗ ಬೇಕು..ಬಾಗಲಾರದೇ ಬಿಡುಗಡೆಯೇ ಇಲ್ಲ" ಎನ್ನುವಂತಿತ್ತು ಅವರ ಭಾವ. ಅಂಗಳ,ಮಣ್ಣು ರಸ್ತೆ, ಗುರುಕುಲದ ಆಸುಪಾಸು ಎಲ್ಲಾ ಗಂಟೆಗಟ್ಟಲೆ ಗುಡಿಸುತ್ತಿದ್ದರು. ಅವರು ಅಷ್ಟು ಗುಡಿಸುವ ಅಗತ್ಯವಿರಲಿಲ್ಲ. ಧ್ಯಾನಸ್ಥರಾಗಿ ಉಡುಗುತ್ತಿದ್ದರು. ಅಕ್ಕಪಕ್ಕದ ಧ್ಯಾಸವೇ ಇರದ ಹಾಗೆ! ನಾನು ಅಮೇರಿಕಾದ ನ್ಯಾಷನಲ್ ಪಾರ್ಕುಗಳಲ್ಲಿ ಕಂಡ ಸ್ವಚ್ಛತೆ ಅಲ್ಲಿತ್ತು....ಆದರೂ ಗುಡಿಸುತ್ತಿದ್ದರು. ಮೊದಲೇ ಬಾಗಿದ ಬೆನ್ನನ್ನು ಮತ್ತಷ್ಟು ಬಾಗಿಸಿ ಗುಡಿಸುತ್ತಿದ್ದರು. ಮಾರನೆಯ ದಿನ ಬೆಳಗಿನ ಉಪಾಹಾರಕ್ಕೆಂದು ಬಂದಾಗ "ಬರ್ರಿ ಬರ್ರೀ" ಎಂದು ಗುಡಿಸುತ್ತಲೇ ನಮ್ಮನ್ನು ಸ್ವಾಗತಿಸಿದರು. ಅವರ ಹೆಸರು ಕುಲಕರ್ಣಿ. ಗುರುಕುಲದವರಿಗೆಲ್ಲಾ ಅವರು ಪ್ರೀತಿಯ 'ತಾತ'. ಎಲ್ಲರೂ ಹಾಗೆಂದೇ ಕರೆಯುತ್ತಾರೆ. ಇಲ್ಲಿ ಅವರ ಪೂರ್ಣ ಹೆಸರು ಬರೆಯಲಾರೆ. ಅವರೊಂದು ಕಾಡಮಲ್ಲಿಗೆ! ನಾಡಿನ ಮಾರುಕಟ್ಟೆಯಲ್ಲಿ ಪರಿಮಳಬೀರುವುದು ಅವರಿಗೆ ಸಲ್ಲ. ಸದ್ಯ ಫೇಸ್ ಬುಕ್ ನೋಡಲಾರರು. ನಾನು ಅವರ ಬಗ್ಗೆ ಬರೆಯುತ್ತಿರುವುದನ್ನು ಓದಿದ್ದರೆ ನೊಂದುಕೊಳ್ಳುತ್ತಿದ್ದರೇನೋ. ಕೋಪಗೊಳ್ಳುತ್ತಿದ್ದರೇನೋ! ಏನು ಮಾಡಲಿ? ಕಾಡ ಹೂವನ್ನು ನಾಡ ಬೀದಿ ಬೀದಿಗಳಲ್ಲಿ 'ಮಲ್ಲಿಗೆ ಹೂವಾ...'ಎಂದು ದನಿಯೆತ್ತಿ ಪರಿಚಯಿಸುವ ಹುಚ್ಚು ನನಗಿದೆ. ಹೀಗಾಗಿ ನಾನೊಬ್ಬ 'ಹೂವಾಡಗಿತ್ತಿ' ಯಾಗುವುದು ಅನಿವಾರ್ಯ ಕರ್ಮವಾಗಿದೆ!- ಮಲ್ಲಿಗೆ ಬಳ್ಳಿ ನೆಡುವ ಅದಕ್ಕೆ ನೀರೆರೆಯುವ ಶಕ್ತಿ ಇಲ್ಲವಾದರೂ. "ನಿಮ್ಮ ಕಾಯಕ ಸುರು ಮಾಡಿದ್ರೀ?" ಎಂದ ತಕ್ಷಣ, ಗುಡಿಸುವುದನ್ನು ನಿಲ್ಲಿಸಿ ನನ್ನನ್ನು ಅವಾಕ್ಕಾಗಿ ನೋಡಿದರು. ನಾನು ವೀಡಿಯೋ ತೆಗೆದುಕೊಳ್ಳಲು ಪ್ರಯತ್ನಿಸುವುದು ಗೊತ್ತಾದಕೂಡಲೇ ಮುಖದ ಮೇಲೆ ಕೈ ಅಡ್ಡ ಹಿಡಿದು "ಬ್ಯಾಡ್ರೀ ಬ್ಯಾಡ್ರೀ" ಎಂದರು ಖಡಕ್ಕಾಗಿ. ನಾನು ಅರ್ಧದಲ್ಲಿಯೇ ನನ್ನ ಅಹಂಕಾರದ ಕಿಟಕಿಯನ್ನು ಮುಚ್ಚಿಬಿಟ್ಟೆ. ಗುಡಿಸುವಾಗ ಮಾತ್ರ ಅವರು ಹೊರಗೆ ಕಾಣಿಸಿಕೊಳ್ಳುತ್ತಿದ್ದರು. ಉಳಿದಂತೆ ತಮ್ಮ ಕುಟೀರ‌ ಸೇರಿಬಿಡುತ್ತಿದ್ದರು. ಅವರು ಆರೋಗ್ಯ ಇಲಾಖೆಯಲ್ಲಿ ಬಹಳ ದೊಡ್ಡ ಹುದ್ದೆಯಿಂದ ನಿವೃತ್ತರಾದವರು. ಬಾಗಲಕೋಟೆ ಅವರ ಮೂಲಸ್ಥಳವಂತೆ. ಅವರಿಗೆ ಬರುವ ದೊಡ್ಡ ಮೊತ್ತದ ಪಿಂಚಣಿಯನ್ನೆಲ್ಲಾ ಗುರುಕುಲಕ್ಕೇ ಅರ್ಪಿಸುತ್ತಾರೆ. ಗುರುಕುಲದ ವಿದ್ಯಾರ್ಥಿಗಳು ದಯಾನಂದ ಸರಸ್ವತಿಯವರ ಇನ್ನೂರನೇ ಹುಟ್ಟು‌ಹಬ್ಬ ಆಚರಿಸಿದರು. ಆಗ ಮಕ್ಕಳ ಜೊತೆ ಜಮಖಾನದಮೇಲೆ ಬಂದು ಕುಳಿತರು. ಮಂಡಿ ನೋವು, ಸೊಂಟ ನೋವು ನಮಗೆ! ಕುರ್ಚಿಯಮೇಲೆ ಕುಳಿತಿದ್ದೆವು. "ಮೆಟಾಫಿಸಿಕಲ್ ಕವಿತೆಗಳಂದರ ನನಗ ಭಾಳ ಸೇರ್ತದ್ರೀ.... ಎಲ್ಲಿ ನಿಮ್ಮ ಕವಿತಾ.... ಹಂಗಾ ಸ್ವಲೂಪ ಅನ್ರೀ ನೋಡೋಣು...?.... 'ನೊಂದ ಕನಸು' ಅಂತ ಇಟ್ಟೀರಲ್ಲ ನಿಮ್ಮ ಕವಿತಾಗ ಹೆಸರು? ಅದು "ಬೆಂದ ಕನಸು"' ಅಂದರಾ ಛಲೋ ಆಗ್ತದಾ ಅಂತ ಅನಿಸ್ತದಾ. ವಿಚಾರ‌ಮಾಡ್ರೀ...ಬೆಂದರೇನೆ ಬೇಂದ್ರೆ ಅಲ್ಲೇನು" ಆಳ ಕಣ್ಣುಗಳು, ನಿಗೂಢ ಕೊಳದಂತೆ! "ನೀವು ಒಬ್ಬ ಅವಧೂತರು..." ಎಂಬ ನನ್ನ ತಾರೀಫನ್ನು ಕೇಳಲು ಇಷ್ಟವಿಲ್ಲದವರ ಹಾಗೆ ನಡುವೆಯೇ ಕತ್ತರಿಸಿ "ಅದಲ್ಲಾ ಇರ್ಲೀ ನಿಮ್ಮ ಬಗ್ಗೆ ಹೇಳ್ರೀ" ಎಂದರು. ನಾನು ಹೋಗಿದ್ದುದು ಅವರನ್ನು ಮಾತನಾಡಿಸಲು! ಮುಂಜಾನೆ ಮತ್ತು ಸಂಜೆ ಗಡಿಯಾರದ ಮುಳ್ಳು ತಪ್ಪ ಬಹುದು ಆದರೆ ಅವರ ಗುಡಿಸುವ ಕಾಯಕ ತಪ್ಪುತ್ತಿರಲಿಲ್ಲ. "ನೀವು ಕಾಯಕ ಅಂದ್ರಲ್ಲ ? ಅದು ಎಷ್ಟು ಚಲೋ ಶಬ್ದ ನೋಡ್ರಿ. ನಮ್ಮ ಶರಣರ ಶಬ್ದ. ಕಾಯಕ ಅಂದ್ರ ನಿಮಗೇನು ಅನಸ್ತದಾ ಹೇಳ್ರೀ?" ನಾನೇನೋ ವ್ಯಾಖ್ಯಾನ ಕೊಟ್ಟೆ. "ನನಗೇನೋ ಅದು ನಿಷ್ಕಾಮ ಕರ್ಮಾನೇ ಆಗ್ಯದಾ" "ನೀವು ಒಂದು ಮಾಸ್ಕ್ ಆದ್ರೂ ಹಾಕೋಬಾರದಾ? ನಮಗೆ ಧೂಳಂತ .. ಸರೀರೀ ಅಂತ ಹೇಳತೀರಿ" ಕೇಳಿದೆ. "ಮಾಸ್ಕಿನ ಕಾಲ ಹೋತಲ್ಲ" ಬೊಚ್ಚುಬಾಯಿಯಲ್ಲಿ ನಕ್ಕರು. ಅವರು ನಕ್ಕ ರೀತಿಗೆ ಸಾಕ್ಷಾತ್ ಗಾಂಧೀ ಎದುರಿಗೆ ಬಂದು ಬಿಟ್ಟರು. ಅವರಿಗೆ ಅರಿವಾಗದ ಹಾಗೆ ದೂರದಿಂದ ಕೆಲವು ಫೋಟೋ ತೆಗೆದೆ. ನನ್ನ ಅಹಂಕಾರದ ಬಲೂನನ್ನು ಊದಿಕೊಳ್ಳಬೇಕಲ್ಲ? "ಇಷ್ಟು ತಡಮಾಡಿ ಹೊಂಟ್ಯಲ್ಲೋ ಸಂಧ್ಯಾಕ್ಕ? ಗಂಟೀ ಹೊಡದು ಎಷ್ಟು ಹೊತ್ತಾತು! ...ನೋಡಿ ಇವನು ಮಾಸ್ತರ್ ಇದ್ದಾನಾ. ಇವನೇ ಹೀಂಗ ನಿಯಮ ಮುರದ್ರ..ಮಕ್ಕಳಿಗೆ ಏನು ಕಲಸ್ತಾನ?.." ಅಷ್ಟರಲ್ಲಿ ಇನ್ನೊಬ್ಬ ಪುಟ್ಟ ವಟು ಓಡೋಡಿ ಬಂದ. "ಇವನೊಬ್ಬ ಅವನ ಶಿಷ್ಯ.. ನಡೀ ನಡೀ ಬೇಗ ಓಡ್" ಎಂದು ಗದರಿದರು. ಪೊರಕೆ ಅತ್ತಿಂದಿತ್ತ ಇತ್ತಿಂದತ್ತ ಶಿಸ್ತಿನ ಸಿಪಾಯಿಯಂತೆ ಎಡಬಿಡದೇ ಸರಿಯುತ್ತಿತ್ತು....ಗುರುಕುಲದ ತುಂಬೆಲ್ಲ ಹೂಗಳು ಅರಳಿ ಘಮ್ಮೆನ್ನುತ್ತಿದ್ದವು. "ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು" ವನವೆಲ್ಲ ನೀವೇ... "Sometimes I get bored" ಸತ್ಯವ್ರತ ಅವರ ಪಕ್ಕದಲ್ಲಿ ಕುಳಿತ ಸುಖಾ ಹೇಳಿದಳು. ಗಾಡಿ ಬನಶಂಕರಿಯಿಂದ ಕನಕಪುರದ 'ಶಾಂತಿಧಾಮ ಗುರುಕುಲದೆಡೆಗೆ ಚಲಿಸುತ್ತಿತ್ತು. "Is it known boredom or unknown boredom?if it is known boredom, its good. It is positive" ಸತ್ಯವ್ರತ ಅವರು ಹೇಳಿದರು. "ಹಾಗಾದರೆ unknown boredom ಎನ್ನುವುದು ಋಣಾತ್ಮಕವೇ" ಅವರ ಇನ್ನೊಂದು ಬದಿಗೆ ಕುಳಿತ ನಾನು ಕೇಳಿದೆ. "ಋಣಾತ್ಮಕ ಎಂತಲ್ಲ ಅದನ್ನು ನಿಮಗೆ ನೀವೇ ಎನ್ ಕೌಂಟರ್ ಮಾಡಬೇಕು" ಬುದ್ದನಿಗೆ ಆದದ್ದು known boredom. ಅವನು ಕುಂತಲ್ಲಿ ನಿಂತಲ್ಲಿ , ಕೊನೆಗೆ ಕನಸಿನಲ್ಲಿಯೂ ಒಂದು ದನಿ ಬೆನ್ನು ಹತ್ತಿ ಕಾಡುತ್ತಿತ್ತು, ಪೀಡಿಸುತ್ತಿತ್ತು "ನಡೆ ಸಿದ್ಧಾರ್ಥ ಏಳು....ನಡೆ" ಯಶೋಧರೆಗೆ ಅನ್ಯಾಯವಾಗಿದೆ. ನೂರಾರು ದೀಪಗಳು ಆರಿಹೋದವು. ನಿಜ. ಆದರೆ ಫೆಮಿನಿಸಂ ಮಾತನಾಡುವುದು ಈ ಬರಹದ ಉದ್ದೇಶವಲ್ಲ. ಸುಖಾ ಕ್ಯಾಲಿಫೋರ್ನಿಯಾದಿಂದ ಬಂದ ಒಬ್ಬ ಬೌದ್ಧ ಭಿಕ್ಕುಣಿ. "ಎಲ್ಲರೂ ಅಮೇರಿಕಾದಲ್ಲಿಯೇ ಮೋಕ್ಷ ಎಂದು ಅಲ್ಲಿಗೆ ಎಡತಾಕುತ್ತಿದ್ದರೆ, ನೀನು ಅಲ್ಲಿಂದ ಇಲ್ಲಿಗೆ ಬಂದಿದ್ದೀಯಲ್ಲ, ಮಾರಾಯ್ತಿ!?" "India is the best place for Sadhana" ಎಂದಳು. 'ಸುಖಾ' ಅವಳ ನಿಜವಾದ ಹೆಸರಲ್ಲ. ಅದು ಅವಳು ಇಟ್ಟುಕೊಂಡ ಹೆಸರು.ಅಥವಾ ಗುರುಗಳು ಕೊಟ್ಟ ಹೆಸರು. ಅದು ವೇದಕಾಲದ ಒಬ್ಬ ಋಷಿಕೆಯ ಹೆಸರಂತೆ!! "ನಿನ್ನ ಪೂರ್ವಾಶ್ರಮದ ಹೆಸರೇನು ಸುಖಾ?" ಸುಮ್ಮನೆ ನಕ್ಕಳು. ಇಪ್ಪತ್ತು ಬಾರಿಯಾದರೂ ವಿಪಶ್ಶನಾ ಶಿಬಿರಕ್ಕೆ ಹೋಗಿದ್ದಾಳಂತೆ. ಕಾಡಿನೊಳಗಿರುವ ಶಾಂತಿಧಾಮ ಆಶ್ರಮಕ್ಕೆ ಹೋಗಲು ನಮ್ಮ ಜೊತೆ ಗಾಡಿ ಹತ್ತಿದ್ದಳು. 'ಐವತ್ತು' ಅವಳ ಮುಖದಲ್ಲಿ ಹುಡುಕಿದರೂ ಕಾಣುತ್ತಿರಲಿಲ್ಲ. ಆಶ್ರಮದ ಕಾರ್ಯದರ್ಶಿಗಳಾದ ಸತ್ಯವ್ರತ ನಮ್ಮನ್ನು ಆಶ್ರಮಕ್ಕೆ ಅವರ ಗಾಡಿಯಲ್ಲಿ ಕರೆದೊಯ್ದರು. ಆಶ್ರಮವೆಂದರೆ, ಸುಮಾರು ಎಂಬತ್ತು ಎಕರೆ ವಿಸ್ತೀರ್ಣದ ವಿಶಾಲವಾದ ಕಾಡು ಅದು. ಸುಖಾ ಬಂದದ್ದು ಆಶ್ರಮಕ್ಕಲ್ಲ. ಆಶ್ರಮದವರು ಅವಳಿಗೆಂದೇ ಒಂದು ಕುಟೀರವನ್ನು ಕಟ್ಟಿ ಕೊಟ್ಟಿದ್ದಾರೆ. ಆದರೂ ಆಶ್ರಮದಾಚೆ ಇರುವ ದುರ್ಗಮ ಕಾಡಿನ ಒಂದು ಗುಹೆಯಲ್ಲಿ ಹತ್ತು ದಿನಗಳ ಕಾಲ ಕುಳಿತು ಧ್ಯಾನಮಾಡಲು ಬಂದಿದ್ದಳು. ಹಾವುಗಳು ಬಂದರೆ? "No snakes!" "No, Wild animals" ಎಂದು ಸೌಮ್ಯವಾಗಿ ನಕ್ಕಳು.ಮುಖದಲ್ಲಿ ಎಂತಹ ಅನನ್ಯ ಸಮಾಧಾನ. ಅಲ್ಲಿ ಆನೆಗಳ ಕಾಟ ಬಹಳ. ಆಗಾಗ ಚಿರತೆಗಳೂ ಬರುತ್ತವಂತೆ. 'ವರಾಹ'ಗಳದ್ದಂತೂ ಸರಿಯೇ ಸರಿ. ಆನೆಯೊಂದು ಮಜಬೂತು ಗೋಡೆಯನ್ನೂ ಒದ್ದು ಒಳ ಬಂದು ಆಶ್ರಮದಲ್ಲಿರುವ ಯಾವುದೋ ಕಾಡು ಮರವನ್ನು ಉರುಳಿಸಿತ್ತು. ಉರುಳಿಸಿದ ಮರವನ್ನು ಕಣ್ಣಾರೆ ಕಂಡ ನನಗೆ "no wild animals" ಎನ್ನುತ್ತಾಳಲ್ಲ? Wilderness ಗೇ ಹೊರಟವಳಿಗೆ wild ಎನ್ನುವುದು ಇಲ್ಲವೇನೋ. ಕಾಡಮೂಲಕ ಹೊರಟಿದ್ದಳು ಆಗಸಕ್ಕೆ! ನಾವೂ ವಿಮಾನದಲ್ಲಿ ಹಾರುತ್ತೇವಲ್ಲ ಕುಡಿದ ನೀರು ಅಲ್ಲಾಡದ ಹಾಗೆ ಸುಖಾಸೀನದಲ್ಲಿ ಕುಳಿತು? ಎಲ್ಲ ಭಯಗಳಿಂದ ಪಕ್ಕಾದ ನನ್ನೊಳಗೆ wilderness ಇಳಿಯುವುದಾದರೂ ಹೇಗೆ? ಕಣ್ಣಿನ ಬರ, ಕಿವಿಯ ಬರ, ಅಭಿವ್ಯಕ್ತಿ ಬರ ಇನ್ನೂ ಹಿಂಗಿಲ್ಲವಲ್ಲ? "ಸುಖಾ ಕುಳಿತುಕೊಳ್ಳುವ ಗುಹೆಯನ್ನು ನಾನೊಮ್ಮೆ ನೋಡಬಹುದೇ?" "ಸಾಧ್ಯವೇ ಇಲ್ಲ" ಹೇಳಿದರು ಸತ್ಯವ್ರತ. "ಕಾರು ಹೋಗುತ್ತದಲ್ಲ?" "ಕಾರು ಹೋಗುವುದು, ಸಂಗಮದವರೆಗೆ, ಅರ್ಧ ದಾರಿ ಮಾತ್ರ. ಅಲ್ಲಿಗೆ ಯಾವಾಗಲಾದಾರೂ ಹೋಗಬಹುದು. ಅಲ್ಲಿಂದಾಚೆ ಸುಖಾ ಹೋಗುವ ದಾರಿಯಲ್ಲಿ ಹೋಗಲು ನಿಮಗೆ ಸಾಧ್ಯವಿಲ್ಲ. ಮುಳ್ಳುಕಂಟಿಗಳ ಮದ್ಯೆ ದಾರಿಯನ್ನು ಮಾಡಿಕೊಂಡು, ಬಂಡೆಗಳನ್ನು ಹತ್ತಿ, ಬೆಟ್ಟ ಇಳಿದು ನದೀ ತೀರದಲ್ಲೇ ಸಾಗಬೇಕು...ತುಂಬಾ... ತುಂಬಾ ಕಷ್ಟ. ಇನ್ನೂ ನಾನೇ ನೋಡಿಲ್ಲ!" ಗೋಗರೆದೆ. ಖಡಾಖಂಡಿತವಾಗಿ "No" ಎಂದು ಬಿಟ್ಟರು. ಆಶ್ರಮದ ಊಟದ ಮನೆಯ ಮೇಜಿನ ಸುತ್ತ ಬೆಳಗಿನ ತಿಂಡಿಗಾಗಿ ಕಾಯುತ್ತ ನಾವೆಲ್ಲರೂ ಕುಳಿತಿದ್ದವು. ಸುಖಾ ವೇಗವಾಗಿ ಒಳಬಂದಳು. ಬದಿಯಲ್ಲೇ ಒಂದು ಕುರ್ಚಿ ಖಾಲಿ ಇತ್ತು. ಕರೆದೆ. "No, I have to go" ಎಂದಳು. ಯಾರೋ ಒತ್ತಾಯಿಸಿರಬೇಕು ಬದಿಯಲ್ಲಿ ಬಂದು ಕುಳಿತು ಬಡಿಸಿದ ಉಪ್ಪಿಟ್ಟನ್ನು ಮೂರೇ ಬೆರಳುಗಳಿಂದ ಸ್ವಲ್ಪ ಸ್ವಲ್ಪವೇ ನಾಜೂಕಾಗಿ ತೆಗೆದುಕೊಂಡು ಸವಿದು ಉಂಡಳು. ಅವಳು ಈ ಹಿಂದೆ ಹಲವಾರು ಬಾರಿ ಹೊಕ್ಕ, ಏರು ಇಳಹಿನ ಕಾಡಿನ ಜಾಡು, ಗುಹೆಯ ಚಿತ್ರಗಳನ್ನು ತೋರಿಸಿದಳು. ಅವುಗಳನ್ನು ನನ್ನನೊಡನೆ ಹಂಚಿಕೊಳ್ಳುವೆಯಾ ಎಂದಿದ್ದಕ್ಕೆ ತನ್ನ ಫೋನ್ ನಲ್ಲಿ ನನ್ನ ನಂಬರನ್ನು ನಮೂದಿಸಿಕೊಂಡಳು. "ಬೈ" ಎಂದು ನಗುತ್ತಾ ಕೈ ಬೀಸಿ ಹೊರಟೇ ಹೋದಳು. ಮೊದಲ ಬಾರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಇಮ್ಮಿಗ್ರೇಷನ್ ಗೆ ಹೊಗುವ ಮಕ್ಕಳ ಉತ್ಸಾಹವಿತ್ತು. . ಬರುವಾಗ ಕನಕಪುರದ ರಸ್ತೆಯಲ್ಲಿ ಒಂದು ಪ್ಯಾಕೆಟ್ ಖರ್ಜೂರವನ್ನು ಕೊಂಡುಕೊಂಡಿದ್ದಳು. ಹತ್ತು ದಿನಗಳ ವರೆಗೆ ಅಷ್ಟೇ ಅವಳ ಆಹಾರ. ನೀರನ್ನೂ ಕೂಡ ಕುಡಿಯುವುದಿಲ್ಲವಂತೆ. "ನನಗೆ ಇಷ್ಟ ಇದು" ಎಂದು ಅಲ್ಲೇ ಖರೀದಿಸಿದ ಎಂ.ಟಿ.ಆರ್ ಚಟ್ನಿಪುಡಿ ಪ್ಯಾಕೆಟ್ ನ್ನು ತೋರಿಸಿದ್ದಳು. ಇಡ್ಲೀನೇ? ದೋಸೇನೆ? ಯಾವುದರ ಜೊತೆಗೆ ಚಟ್ನೀಪುಡಿ?? ಹಸಿವಾಗದವಳಿಗೆ ಭಿಕ್ಷಾನ್ನಗಳೇಕೆ? ತೃಷೆಯಾಗದವಳಿಗೆ ಕೆರೆ ಹಳ್ಳ ಬಾವಿಗಳೇಕೆ? ಮಲಗದೇ ಇರುವವಳಿಗೆ ಪಾಳು ದೇಗುಲವಾದರೂ ಏಕೆ? ಆತ್ಮ ಸಂಗಾತ ಇರುವವಳಿಗೆ ಕಾಡು ಪ್ರಾಣಿಗಳ ಭಯವೆಲ್ಲಿಯದು? ಈಗ ಸುಖಾ ಏನು ಮಾಡುತ್ತಿರಬಹುದು? ಅವಳು ಹೊರಬರಲು ಇನ್ನೂ ಹತ್ತು ದಿವಸಗಳಾದರೂ ಬೇಕು! ಆಕಾಶ ನೋಡುವ ಹಂಬಲದಿಂದ ರಾತ್ರಿ ಊಟವಾದ ಬಳಿಕ ಗುರುಕುಲದ ಹೊರಗೆ ಬಂದೆ. ಗಾಡಾಂಧಕಾರ. ಕತ್ತಲಲ್ಲಿ ಒಂದಡಿ ಮುಂದೆ ಇಟ್ಟಿದ್ದಕ್ಕೆ ಭಯಗೊಂಡ ಗಂಡ ಕೈಹಿಡಿದು ಹಿಂದೆ ಎಳೆದ . ತಲೆಯ ಮೇಲೆ ನಕ್ಷತ್ರಗಳು ಹೊಳೆಯುತ್ತಿದ್ದವು. ಕೆ. ಎಸ್.ನ ಅವರ ಕವಿತೆಗಳಲ್ಲಿ ಮಣ್ಣಿನ ಹಾಡು ಗಿರಿಜಾ ಶಾಸ್ತ್ರಿ | Jan 27, 2023 | ಸಂಪಿಗೆ ಸ್ಪೆಷಲ್ | ಇಲ್ಲಿ ತಂದೆಯನ್ನು ಉದ್ದೇಶಿಸಿ ಕವಿತೆ ಮಾತನಾಡುವುದಾದರೂ ಇಡೀ ಕವಿತೆ ಹಾಡುವುದು ಭೂಮಿಗೀತವನ್ನೇ. ‘ನಿನ್ನ ಕಾಣದೆಯೆ ಬೆಳೆದೆ, ನಾ ಕಂಡಿಹೆ ತಾಯ ಸಂಪ್ರೀತಿಯನು ಚೆಲುವನು’ ಎನ್ನುವ ನಿರೂಪಕನಿಗೆ ತಂದೆ ಇಲ್ಲಿ ಅದೃಶ್ಯ ವ್ಯಕ್ತಿ ಅಥವಾ ಯಾವಾಗಲಾದರೊಮ್ಮೆ ಕಂಡರೂ, ಮಗ ‘ಕೈಬೀಸಿ ಕರೆದರೂ ರಾಜಾಧಿರಾಜನೆನ್ನುವ ಸೊಕ್ಕಿನಿಂದ’ ಮಗನ ಮೈಮುಟ್ಟದೆಯೇ ನಡೆವನು. ಆದರೆ ತಾಯಿಯಾದರೋ ‘ಮರುಭೂಮಿಯಲಿ ಮುಗಿಲ ತೊಟ್ಟಿಲ ಕಟ್ಟಿ, ಹಿಮ ಬೆಂಕಿ ಬಿರುಗಾಳಿ’ ಯ ವಿಕೋಪದ ನಡುವೆಯೂ ಹರುಷದಿಂದ ಅಮೃತವನ್ನೇ ಸೋಸಿ ಪೊರೆದವಳು. ಇಂದು ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಹುಟ್ಟುಹಬ್ಬ. ಅದರ ಪ್ರಯುಕ್ತ ಅವರ ಕವಿತೆಗಳ ಕುರಿತು ಗಿರಿಜಾ ಶಾಸ್ತ್ರಿ, ಮುಂಬಯಿ ಬರೆದ ಬರಹವೊಂದು ಇಲ್ಲಿದೆ ಕೆ.ಎಸ್.ನ ಅವರ ಮಾತೃಕೇಂದ್ರಿತವಾದ ಕವಿತೆಗಳ ಮೇಲೆ ಗಮನಹರಿಸುವುದು ಈ ಲೇಖನದ ಉದ್ದೇಶ. ಈ ಮಾತೆ- ಭೂಮಿ, ಕಾಲ, ಚರಿತ್ರೆ ಮತ್ತು ಸಾಕ್ಷಿ ಪ್ರಜ್ಞೆಯ ಪ್ರತೀಕವೂ ಆಗಿದ್ದಾಳೆ. ಕಾಲದ ಚಲನೆಯನ್ನು ಗುರುತಿಸುವುದೇ ಭೂಮಿಯ ಚಲನೆಯ ಮೂಲಕ. ಹೀಗಾಗಿ ಕಾಲದ ಚಲನೆಗೆ ಭೂಮಿ ಒಂದು ಸಾಕ್ಷಿ ಪ್ರಜ್ಞೆ. ಕಾಲದ ಚಲನೆಯೆಂದರೆ ಚರಿತ್ರೆಯ ಚಲನೆಯೇ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮಲ್ಲಿ ‘ಕಾಲ’ ಪುರುಷ ರೂಪ. ಇಂತಹ ಅಮೂರ್ತ ಪುರುಷ ರೂಪವನ್ನು ಚಲಾವಣೆಗೆ ತರುವವಳು ಭೂಮಿ. ಮಣ್ಣು ತನ್ನೊಡಲೊಳಗೆ ಬೀಜ ಧರಿಸಿ ಜೀವ ಜಾಲವನ್ನು ಪೊರೆಯುವ ವನಸ್ಪತಿಗೆ ಕಾರಣವಾಗುತ್ತದೆ. ಅವುಗಳ ತಂಗುದಾಣವಾಗುತ್ತದೆ.. ಭೂಮಿ ನಮ್ಮಲ್ಲಿ ಯಾವತ್ತೂ ಹೆಣ್ಣು ರೂಪ. ಆದುದರಿಂದಲೇ ಅದು ಕೆ.ಎಸ್.ನ ಅವರ ಪಾಲಿಗೆ ‘ಕುಂಕುಮ ಭೂಮಿ’. ಹೆಣ್ಣು ಈ ನೆಲಕ್ಕಂಟಿದವಳಾದರೆ ಗಂಡು ಅಮೂರ್ತಕ್ಕೆ ಹಾರುವವನು. ಆದುದರಿಂದ ಅವನು ಆಕಾಶ. ಆಕಾಶದ ಬೆಳಕಿನೆಡೆಗೆ ಸಾಗದಂತೆ ಭೂಮಿಯ ಮೋಹ ಮನುಷ್ಯನನ್ನು ಆವರಿಸಿದೆ, ಪುರುಷನ ಊರ್ಧ್ವಗಮನಕ್ಕೆ ಹೆಣ್ಣು ಬಾಧಕಳು ಎಂಬ ನಂಬಿಕೆಯೂ ನಮ್ಮಲ್ಲಿದೆ. ಆದರೆ ಕೆ.ಎಸ್.ನ ಅವರಿಗೆ ಪಿತೃ ಎಂದೂ ಒಂದು ಮಿಥ್ಯೆಯೇ. ತಾಯಿ ಮಾತ್ರ ಸತ್ಯ. ಅವಳು ಮಾಯೆ ಎಂಬುದನ್ನು ಅವರು ಒಪ್ಪುವುದಿಲ್ಲ. ಅದು ಅವರಿಗೆ ಪೊಳ್ಳು ಅಧ್ಯಾತ್ಮವಾಗಿ ಕಾಣ ಸುತ್ತದೆ. ‘ಇಹದ ಪರಿಮಳವಿರದ ಹಾದಿ’ಯ ಮೇಲೆ ಕ್ರಮಿಸುವುದರಲ್ಲಿ ಅವರಿಗೆ ನಂಬಿಕೆ ಇಲ್ಲ. ‘ಇಹದ ತಳಹದಿಯಿಂದ’ಲೇ ‘ದಿಟದ ದರ್ಶನವರಳಿ ಹಂಬಲಿಸಿ ಹಾಡಾಗಬೇಕು; (ಬೆಳಗಿನ ಮಂಜು) ಎಂಬುದು ಅವರ ಮತ. ಅವರಿಗೆ ಗತಿ ಮತ್ತು ಗಮ್ಯ ಎರಡೂ ಮೃತ್ತಿಕೆಯೇ. ಆದ್ದರಿಂದಲೇ “ನಾ ಬರೆದೆ ಭೂಮಿ ಮಣ್ಣೆಂದು” ಎನ್ನುತ್ತಾರೆ. (ಬಿಳಿಯ ಹೂಗಳ ಕವಿತೆ ಗೋರಿಗಳ ಮೇಲೆ). ಏಕೆಂದರೆ ಈ ಮಣ್ಣು ಸೃಷ್ಟಿಯ ಮೂಲ ಮತ್ತು ಅದರ ಪೋಷಣೆಯ ಆಧಾರ. ಇಡೀ ವಿಶ್ವವೇ ಅವಳ ಪ್ರತಿಮೂರ್ತಿಯಾಗಿ ಅವರಿಗೆ ಕಾಣುತ್ತಿದೆ. ಮಣ್ಣಿಂದಲೇ ಕಾಯ, ಅದನ್ನು ಬಿಟ್ಟವರಿಗೆ ಆಧಾರವೇ ಇಲ್ಲ ಎಂದು ದಾಸರೂ ಹಾಡಿದ್ದಾರೆ. ‘ನದಿಗಳೆಲ್ಲ ನಿನ್ನದೆ ಹಾಲು /ಬೆಟ್ಟ ಸಾಲು ನಿನ್ನ ಹೆಗಲು/ ಹಗಲು ನೀನು ನಗಲು/ಇರಳು ನಿನ್ನ ನೆರಳು/ ಹಸಿರುಡುಗೆ, ಮುಗಿಲಿನೊಡವೆ-/ಮುನ್ನೀರ ಮೇಲೆ ಕಣ್ಣೀರ ಸುರಿವ ತಾಯೆ/ ನೀನಲ್ಲ ಮಾಯೆ’ (ಶಿಲೆಗೆ ಹೂವಿನ ವಂಕಿ). ‘ಇರುವ ತನಕ ನೈಜವಾದದ್ದೊಂದೇ- ಭೂಮಿ’ ಎನ್ನುವ ಕೆ.ಎಸ್.ನ ಅವರಿಗೆ ದೇವರೆಂದರೆ ಸೃಜನಶೀಲತೆಯೇ. ಅವರ ಪ್ರಥಮ ಸಂಕಲನ ಮೈಸೂರು ಮಲ್ಲಿಗೆ ಪ್ರಾರಂಭವಾಗುವುದೇ ಸುಕೋಮಲವಾದ ರಮ್ಯ ಪ್ರಪಂಚದಿಂದ. ಹೇಳಿಕೇಳಿ ಅದು ಮಲ್ಲಿಗೆ. ಮೃದುತ್ವದ ಜೊತೆಗೆ ಅತಿ ಮಾಧುರ್ಯವನ್ನೂ ಜೊತೆಗೇ ಇರಿಸಿಕೊಂಡಿರುವಂತಹದು. ಇಲ್ಲಿರುವುದು ಗಂಡು ಹೆಣ್ಣಿನ ಸರಳವಾದ ಪ್ರೇಮ ಪ್ರಪಂಚ. ಇದು ಎಷ್ಟು ಸರಳವೆಂದರೆ, ಡಿ. ಆರ್. ನಾಗರಾಜ್ ಅವರ ಪ್ರಕಾರ, ಪ್ರೇಮ ಕಾಮಗಳ ದಟ್ಟ ಗಳಿಗೆಗಳ ಚಂಡಮಾರುತ ಇಲ್ಲಿ ಇಲ್ಲ. “ಜನಾಂಗವೊಂದು ತನ್ನ ಕಾಲದ ಭಾಷೆಯಲ್ಲಿ ಒಮ್ಮೆ ಮಾತ್ರ ಸೃಷ್ಟಿಸಲು ಸಾಧ್ಯವಿರುವ ಕೃತಿ ‘ಮೈಸೂರು ಮಲ್ಲಿಗೆ’. ಅದೇ ಜನಾಂಗದಲ್ಲಿ, ಅದೇ ಕಾಲದಲ್ಲಿ ಮತ್ತೆ ಮತ್ತೆ ಅದನ್ನು ಬರೆಯಲು ಪ್ರಯತ್ನಿಸಿದರೆ ಆಗ ಅದು ಮೂಲ ಕವಿಯ ಉಚ್ಚಿಷ್ಟದಂತೆ ಕಾಣುತ್ತದೆ’ ಎನ್ನುತ್ತಾರೆ. ‘ಕ್ಲಾಸಿಕ’ ನಗೆ ಗುಣವೇ ಅಂತುಹದೋ ಏನೋ ಸಂಪೂರ್ಣ ತೃಪ್ತಿ ಮತ್ತು ತೀವ್ರ ಅತೃಪ್ತಿಯ ಅನುಭವವನ್ನು ಏಕಕಾಲಕ್ಕೆ ನೀಡುತ್ತದೆ, ಎಂದು ಅವರು ವಿಸ್ಮಯ ಪಡುತ್ತಾರೆ (ಶಕ್ತಿ ಶಾರದೆಯ ಮೇಳ). ಮೈಸೂರು ಮಲ್ಲಿಗೆಯ ಸರಳ ಪ್ರೇಮದಿಂದ ಹೊರಟ ಹೆಣ್ಣು ಅವರ ಕಾವ್ಯ ಪ್ರಯಾಣದ ಕೊನೆಗೆ ಮೆಟಾಫಿಸಿಕಲ್ ನೆಲೆಗೆ ತಲಪುತ್ತಾಳೆ. ಅವರ ಈ ದೀರ್ಘ ಪ್ರಯಾಣದಲ್ಲಿ ಎಲ್ಲಿಯೂ ಅವರ ‘ಕಾವ್ಯ ಖಡ್ಗ’ವಾಗುವುದಿಲ್ಲ. ಇದನ್ನು ಉದಾರ ಮಾನವತಾವಾದ ಎಂದು ಡಿ.ಆರ್. ನಾಗರಾಜ್ ಗುರುತಿಸುತ್ತಾರೆ. ಖಡ್ಗವೆಂದರೆ ಕೊಲ್ಲುವುದು. ಅದು ಪುರುಷನ ವಿಧಿ. ಮಾಂಸಲ ಪಿಂಡಕ್ಕೆ ಜೀವದಾನ ಮಾಡುವುದು ಹೆಣ್ಣಿನ ಹೆಗ್ಗಳಿಕೆ. ‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ’ ಕವಿತೆ ತಂದೆಯ ವಾರಸುದಾರಿಕೆಯನ್ನು ಧಿಕ್ಕರಿಸುವುದರ ಮೂಲಕವೇ ಪ್ರಾರಂಭವಾಗುತ್ತದೆ. ‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ; /ತೊಡಿಸದಿರು ಚಂದ್ರ ಕಿರೀಟವನು./ಕೊರಳಿಗೆ ಭಾರ ನನಗೆ ನಕ್ಷತ್ರ ಮಾಲಿಕೆ;/ನಾನೊಲ್ಲೆ ದೊರೆತನವನು’ ಕೆ.ಎಸ್.ನ ಅವರಿಗೆ ಪಿತೃ ಎಂದೂ ಒಂದು ಮಿಥ್ಯೆಯೇ. ತಾಯಿ ಮಾತ್ರ ಸತ್ಯ. ಅವಳು ಮಾಯೆ ಎಂಬುದನ್ನು ಅವರು ಒಪ್ಪುವುದಿಲ್ಲ. ಅದು ಅವರಿಗೆ ಪೊಳ್ಳು ಅಧ್ಯಾತ್ಮವಾಗಿ ಕಾಣ ಸುತ್ತದೆ. ‘ಇಹದ ಪರಿಮಳವಿರದ ಹಾದಿ’ಯ ಮೇಲೆ ಕ್ರಮಿಸುವುದರಲ್ಲಿ ಅವರಿಗೆ ನಂಬಿಕೆ ಇಲ್ಲ. ‘ಇಹದ ತಳಹದಿಯಿಂದ’ಲೇ ‘ದಿಟದ ದರ್ಶನವರಳಿ ಹಂಬಲಿಸಿ ಹಾಡಾಗಬೇಕು; (ಬೆಳಗಿನ ಮಂಜು) ಎಂಬುದು ಅವರ ಮತ. ಇಲ್ಲಿ ತಂದೆಯನ್ನು ಉದ್ದೇಶಿಸಿ ಕವಿತೆ ಮಾತನಾಡುವುದಾದರೂ ಇಡೀ ಕವಿತೆ ಹಾಡುವುದು ಭೂಮಿಗೀತವನ್ನೇ. ‘ನಿನ್ನ ಕಾಣದೆಯೆ ಬೆಳೆದೆ, ನಾ ಕಂಡಿಹೆ ತಾಯ ಸಂಪ್ರೀತಿಯನು ಚೆಲುವನು’ ಎನ್ನುವ ನಿರೂಪಕನಿಗೆ ತಂದೆ ಇಲ್ಲಿ ಅದೃಶ್ಯ ವ್ಯಕ್ತಿ ಅಥವಾ ಯಾವಾಗಲಾದರೊಮ್ಮೆ ಕಂಡರೂ, ಮಗ ‘ಕೈಬೀಸಿ ಕರೆದರೂ ರಾಜಾಧಿರಾಜನೆನ್ನುವ ಸೊಕ್ಕಿನಿಂದ’ ಮಗನ ಮೈಮುಟ್ಟದೆಯೇ ನಡೆವನು. ಆದರೆ ತಾಯಿಯಾದರೋ ‘ಮರುಭೂಮಿಯಲಿ ಮುಗಿಲ ತೊಟ್ಟಿಲ ಕಟ್ಟಿ, ಹಿಮ ಬೆಂಕಿ ಬಿರುಗಾಳಿ’ ಯ ವಿಕೋಪದ ನಡುವೆಯೂ ಹರುಷದಿಂದ ಅಮೃತವನ್ನೇ ಸೋಸಿ ಪೊರೆದವಳು. ‘ಮಳೆ ಹೊಳೆ ಕಡಲೆಲ್ಲಾ ಹಾಡಿ ಕರೆ’ ದು ಮನುಷ್ಯನ ಬದುಕನ್ನು ಪೊರೆಯವವಳು, ‘ದೇಶ ದೇಶದ ಬಿಸಿಲ’ ತನ್ನ ಸೃಷ್ಟಿ ಕೂಸುಗಳ ಕೆನ್ನೆ ಮೇಲೆ ಹರಿಸಿ, ಬಾಂದಳದಲಿ ಕೂಸು ಮರಿ ಮಾಡಿ ಬೆಳೆಸುವ ಅಗ್ನಿ ಕುವರಿ ಅವಳು. ಇಲ್ಲಿ ಅಗ್ನಿ ಜೀವ ಪೋಷಕ ಧಾತುವಾಗಿರುವಂತೆ ಶಿಕ್ಷಿಸುವ ದಿವ್ಯವೂ ಹೌದು. ಅಗ್ನಿಯನ್ನು ಒಡಲೊಳಗೆ ಧರಿಸಿರುವ ಅವಳಿಗೆ ಒಂದು ‘ಋತ’ವಿದೆ ಚರಿತ್ರೆ ಅದರ ಉಲ್ಲಂಘನೆಯನ್ನು ಮಾಡಿದಾಗಲೆಲ್ಲ ಆಸ್ಫೋಟಗೊಂಡು ಚಂಡಮಾರಿಯಾಗಿ ಮನುಕುಲಕ್ಕೆ ಪಾಠ ಕಲಿಸುವವಳೂ ಹೌದು. ಅವಳ ತಾಳ್ಮೆಗೆ ಇಲ್ಲಿ ಇನ್ನೊಂದು ಉಪಮೆಯಿಲ್ಲ ನಿಜ. ಅವಳದು ತಂಪಿನೊಡಲು. ಅದರ ಮಡಿಲಲ್ಲಿ ಬಾಳು ಸೊಂಪು, ‘ಹಸುರೆಲ್ಲ ಹೂವಾದ ಹೊನ್ನ ಗೆಲುವು’ ಆದರೆ ಪಾಪದ ಕೊಡ ತುಂಬಿದಾಗ ಆಕೆ ‘ಹೆಮ್ಮಾರಿ ಬೆಳ್ಳಿಕುರಿ ದಡವ ನಾಲಗೆ ನೀಡಿ ನೆಕ್ಕುವ ಹೊಳೆ’ ಕುರಿಯನ್ನು ಬಲಿತೆಗೆದುಕೊಳ್ಳುವ ಮಾರಿ (‘ಬಿಳಿ ಹೂಗಳ ಕವಿತೆ ಗೋರಿಗಳ ಮೇಲೆ’) ಪ್ರಕೃತಿಯ ವಿಕೋಪಕ್ಕೆ ಪಾಪಿಗಳು ಮಾತ್ರವಲ್ಲ, ಪಾಪದವರೂ ಬಲಿಯಾಗಿಬಿಡುತ್ತಾರೆ. ಆಗ ಧೃತಿಗೆಡದೆ ಮಗ ನಿಂತು ಸವಾಲೆಸೆಯುತ್ತಾನೆ ‘ಕಣ್ಣ ಬೆದರಿಕೆಗೆ ಓಡುವೆನೆಂದು ಬಗೆಯದಿರು. ನಿನ್ನ ನೆತ್ತರೆ ನನ್ನ ಮೈಯ ತುಂಬ/ ಬರಡು ನೋಟಕೆ ರೋಸಿ ತೊಲಗಬಹುದೆನ್ನದಿರು/ಬಂಡೆ ಬಿರುಕಿಗೆ ಚಂದ್ರ ಬಿಂಬ….ತಳ್ಳುವೆಯ? ತಳ್ಳು ಕಮರಿಗೆ/ ಅಲ್ಲಿ ನಿನ್ನ ತೊಡೆ (ಸಾಂತ್ವನ ಪಡೆಯಲು ತಾಯ ತೊಡೆಗಿಂತ ಉತ್ತಮವಾದ ಆಶ್ರಯ ಯಾವುದು?)/ನನ್ನ ಬಾಳಿನ ನೋವು ನೀಗಬಹುದು /ಎತ್ತೆಸೆಯೆ ಪರ್ವತಾಗ್ರಕೆ ಅಲ್ಲಿ ನಿನ್ನ ಹೆಡೆ;/ನಾನದರ ಮಣ ಯಾಗಿ ಮಿನುಗಬಹುದು. (ಹೆಜ್ಜೆ ಗುರುತು). ಸತ್ಯಕ್ಕೆ/ಜೀವ ಪರವಾದದ್ದಕ್ಕೆ ಮಾತ್ರ ಇಂತಹ ಧಾರ್ಷ್ಟ್ಯ ಸಾಧ್ಯ. ಎಂತಹ ವಿಕೋಪನ್ನೂ ಮೀರಿ ಬದುಕಬಲ್ಲೆನೆಂಬ, ಕೊಲ್ಲುವ ಖಡ್ಗವನ್ನೇ ಗುರಾಣಿಯನ್ನಾಗಿ ಮಾಡಿಕೊಳ್ಳುವ ಎದೆಗಾರಿಕೆ ಜೀವಪರವಾದುದಕ್ಕೆ ಮಾತ್ರ ಸಾಧ್ಯ. ಜೀವ ವಿರೋಧಿಯಾದದ್ದಕ್ಕೆ ಮಾತ್ರ ಎಂದೂ ಉಳಿಗಾಲವಿಲ್ಲ. ಅದು ತಾಯಿಯ ಕ್ರೌರ್ಯದ ಎದುರು ನುಚ್ಚುನೂರಾಗಿಬಿಡುತ್ತದೆ. ತಂದೆಯ ಪಾತ್ರ ಮಗುವಿನ ಬೆಳವಣಿಗೆಯಲ್ಲಿ ಗೌಣ. ಆದುರಿಂದಲೇ ‘ನಿನ್ನ ಹಂಗಿಲ್ಲದೆಯೇ ನಾ ಬಾಳುವುದ ಕಲಿಸು’ ಎಂದು ತಂದೆಗೆ ಹೇಳುತ್ತಾರೆಯೇ ಹೊರತು ತಾಯಿಗೆ ಅಲ್ಲ. ‘ಬಂದ ಬಾಗಿಲು ಮಣ್ಣು, ಬಿಡುವ ಬಾಗಿಲು ಮಣ್ಣು, ನಡುವೆ ಕಾಪಾಡುವುದು ತಾಯ ಕಣ್ಣು’ ತಾಯಿಯ ಮಡಿಲಲ್ಲಿ ಕಣ್ಣುಬಿಡುವ ಬದುಕು, ಕಣ್ಣುಮುಚ್ಚುವುದೂ ಅಲ್ಲಿಯೇ. ಈ ನಡುವೆ ಕಾಪಾಡುವವಳು ಅವಳೇ. ಆದುದರಿಂದ ತಾಯ್ತನವೇ ಅಂತಿಮವಾದುದು. ‘ಬೆಳೆದ ಮಗ ಹೊರಲಿ ನೊಗ, ಕೇಳಿಬಿಡುವೆನೆಂದು ಭ್ರಮೆಗೊಂಡು ಬಂದಿರುವೆ ನೀನು’ ಎಂದು ತಂದೆಗೆ ಹೇಳುವಾಗ ಪಿತೃಪ್ರಾಧಾನ್ಯತೆಯ ಹುಸಿತನವನ್ನು ಬಯಲಾಗಿಸುತ್ತಾರೆ. ಪಿತೃವಿನೊಂದಿಗೇ ಗುರುತಿಸಿಕೊಳ್ಳುವ ವ್ಯವಸ್ಥೆಯೊಂದರಲ್ಲಿ ತಾಯಿಯೇ ಆತ್ಯಂತಿಕ ಸತ್ಯ ಎಂದು ಪುರುಷನೊಬ್ಬ ಹೇಳುವುದು ಬಹಳ ಮಹತ್ವವಾದುದು. ಆದುದರಿಂದಲೇ ‘ವಸುಂಧರೆಯ ಮಗ ನಾನು’ ಎನ್ನುತ್ತಾರೆ. ಬೇಂದ್ರೆಯವರು ಕೂಡ ಅಂಬಿಕಾತನಯದತ್ತ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ. ‘ಅವಳು’ ನುಡಿಸಿದ್ದನ್ನು ತಾನು ನುಡಿಯುವುದಾಗಿ ಹೇಳಿಕೊಳ್ಳುವ ಅವರು ತಾನು “ಐದು ಐದೆಯರ ಮಗ” (ಹೆತ್ತ ತಾಯಿ, ಭೂಮಿತಾಯಿ, ಕನ್ನಡ ತಾಯಿ, ಭಾರತ ಮಾತೆ, ವಿಶ್ವಮಾತೆ) ಎಂದು ಘೋಷಿಸಿಕೊಳ್ಳುತ್ತಾರೆ. ಪಿತೃವಿನ ನೆರಳಿನಿಂದ ತಪ್ಪಿಸಿಕೊಂಡ ಈ ಇಬ್ಬರೂ ಕನ್ನಡದ ಅನನ್ಯ ಕವಿಗಳು. ‘ಬಿಳಿಹೂಗಳ ಕವಿತೆ ಗೋರಿಗಳ ಮೇಲೆ’ ಕವಿತೆಯಲ್ಲಿ ಭೂಮಿ, ಸಾಕ್ಷಿ ಪ್ರಜ್ಞೆಯಾಗಿರುವುದರ ಜೊತೆಗೆ ಕಾಲ ಮತ್ತು ಚರಿತ್ರೆಯನ್ನು ಪ್ರತಿನಿಧಿಸುತ್ತಾಳೆ. ನಮ್ಮ ಲಿಖಿತ ಚರಿತ್ರೆಯೆಂಬುದು ಪೌರುಷಮಯವಾದುದು. ಅಹಂಕಾರ ಮೂಲವಾದುದು. ‘ಒಡಲಿನುರಿ, ನುಡಿಯ ಮುರಿ, ರಣ ಕಹಳೆ ದೆವ್ವಗಳ ಪಂಜು; ಸಿಡಿಲು ಸಾವಿರ ಒಡೆವ ಗಗನದ ಹೆಡೆ….. ರಣಹದ್ದು ಡೇಗೆಗಳ ಗಾಳಿಯ ಪಡೆ;” ಗಗನವೇ ಹೆಡೆಯೆತ್ತಿ ಮನುಕುಲವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಆದರೆ ಕಾಲಯಾನದ ಮಜಲುಗಳಲ್ಲಿ ಅವುಗಳೆಲ್ಲಾ ತಾಯಿಯ ಪಾದಧೂಳಿಯಾಗಿ ಬಿಟ್ಟಿವೆ. ‘ತಾಯ ಸೆರಗನೊದೆದು ಬಾಗಿ ನೋಡ ಹೋದ’ ‘ತಾಯ್ಗಂಡ’ ರಾಜ್ಯಾಧಿಪತಿಗಳೆಲ್ಲಾ ಪಾತಾಳ ಕಂಡರೂ, ತಾಯಿಯ ಮಡಿಲಿನಲ್ಲಿ ಗೋರಿಗಳಾಗಿ ಎದ್ದು ನಿಂತಿದ್ದಾರೆ. ಅಂತಹವರ ಮೇಲೆ ‘ಕೊಲುವ ಹಕ್ಕು ನಿಮಗಿಲ್ಲ ಸ್ನೇಹಿತರೇ ಅಸ್ತ್ರವೇನೆ ಇರಲಿ’ ಎಂದು ತಾಯಿ ಬಿಳಿ ಹೂಗಳ ಕವಿತೆಗಳನ್ನು ಚೆಲ್ಲಿದ್ದಾಳೆ. ಕೊಚ್ಚಿ ಕೊಲ್ಲುವ ಯುದ್ಧಗಳ ಎದುರಿಗೆ ಶಾಂತಿ ಪತಾಕೆಯನ್ನು ಹಾರಿಸಿದ್ದಾಳೆ. ಶಿವೇತರವಾದುದರಿಂದ ರಕ್ಷಿಸಿದ್ದಾಳೆ. ಯಾಕೆಂದರೆ ಅವಳು ಮಂಗಳೆ. ಸ್ವಲ್ಪ ಅಗೆದರೂ ಸಾಕು ತೆರೆದುಕೊಳ್ಳುವ ‘ಕುಂಕುಮ ಭೂಮಿ’. ರೈತರಿಗೆ ಬೀಜ ಬಿತ್ತಲು ಬೇಕಾಗಿರುವ ಅಗೆತವೂ ಅಷ್ಟೇ. ಜನಸಾಮಾನ್ಯರಿಗೆ ಬೇಕಾಗಿರುವುದು ‘ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿ’ (ಗೋಪಾಲಕೃಷ್ಣ ಅಡಿಗ)ದಾಗ ದೊರಕುವ ಮಿರಗುವ ಚಿನ್ನದ ಅದಿರಲ್ಲ. ಚಿನ್ನ ಯಾವತ್ತೂ ಅರಮನೆಯ ಬೊಕ್ಕಸವನ್ನು ತುಂಬುವಂತಹದು. ಅಂತಹ ಅರಮನೆಗಳನ್ನು ನಿಷ್ಠುರವಾಗಿ ನೆಲಸಮ ಮಾಡಲು ಭೂಮಿಗೆ, ಚರಿತ್ರೆಗೆ, ಕಾಲಕ್ಕೆ ಮಾತ್ರ ಸಾಧ್ಯ. ಆದರೆ ಕುಂಕುಮ ಭೂಮಿಯಾದರೋ ಕೃಷಿಯ ಮೂಲಕ ಸಾಮಾನ್ಯಜನರ ಹೊಟ್ಟೆಯನ್ನು ತಂಪಾಗಿಸುತ್ತದೆ. ಕೃಷಿ ದುಡಿಮೆಯ ಜೊತೆಗೂ ಥಳಕು ಹಾಕಿಕೊಂಡಿದೆ. ಬಿದ್ದ ಮಳೆ ಮತ್ತು ಮನುಷ್ಯನ ದುಡಿಮೆಯಿಂದಾಗಿ ಭೂಮಿ ‘ಬಸುರಿ’ಯಾಗಿದ್ದಾಳೆ. ಅವಳು ಅನ್ನಪೂರ್ಣೆ. ‘(ನೀನಿಲ್ಲದ) ಅನ್ನಪೂರ್ಣೆಯಿಲ್ಲದ ಮನೆಯಲಿ ಏನಿದ್ದೂ ವ್ಯರ್ಥ’ (ಅನ್ನಪೂರ್ಣೆ) ಎನ್ನುವಾಗ ಹಸಿವಿನ ಝಂಝಾವತಕ್ಕೆ ಸಿಕ್ಕಿ ಮನುಕುಲ ತತ್ತರಿಸಿಹೋಗುವ ಚಿತ್ರ ಕಣ್ಣಮುಂದೆ ಬರುತ್ತದೆ. ‘ಮುಚ್ಚು ಮರೆಯಿರದೆ ಬಾಳಿದ ಪೂರ್ಣ ಜೀವಿಗಳಾದ ಪ್ರಾಕೃತರಂತೆ “ಹುಟ್ಟಿದ್ದು ಗಟ್ಟಿಯಾಗಲಿ ಬೆಳೆದು ಅವರಂತೆ /ತುಂಬು ರಕ್ತದ ಹಾಡು ಕೇಳಿ ಬರಲಿ/ನೆಲದೊಡಲ ಕೆಂಪು, ನೀರೊಡಲ ಹಾವಿನ ಹೊಲಿಗೆ,/ಬಾನ ತಳಮಳ ಹೆತ್ತ ನೋವ ಸ್ಮರಿಸಿ…. ಹಸಿರೆಲೆಗಳಲ್ಲಿ ಮಾಸದ ಕಣ್ಣು ಥಳಥಳಿಸಿ/ ತಪ್ಪುಹೆಜ್ಜೆಗಳನ್ನು ಸರಿಪಡಿಸಿ/ ನೆಲದಾಳದಲ್ಲಿ ಬೇರಿಳಿದ ಮರಗಳು ಬದುಕಿ/ಎಲ್ಲ ಕಾಲಗಳಲ್ಲಿ ಹೂವು ತೊಡಲಿ’ (ಕುಂಕುಮ ಭೂಮಿ). ಮಣ್ಣು ಕೊಡುವುದನ್ನೆಲ್ಲ ಪಡೆದು ಅದನೆ ಹಳಿಯುವ, ಭೂಮಿಯನ್ನು ಬಿಡದೇ ಬರಡಾಗಿಸುತ್ತಿರುವ ಆಧುನಿಕ ಮನುಷ್ಯನ ಲಾಲಸೆಗೆ, ಅವನು ಎಸಗುತ್ತಿರುವ ಮಾತೃದ್ರೋಹಕ್ಕೆ ಕೊಟ್ಟ ಉತ್ತರ ಮೇಲಿನ ಸಾಲುಗಳು. ಸ್ಮರಿಸಲು ಅರ್ಹರಾದವರು ಪ್ರಾಮಾಣಿಕ ಜನರೇ ಹೊರತು, ರಾಜಾಧಿಪತ್ಯದ ಚುಕ್ಕಾಣಿ ಹಿಡಿದ ಅಧಿಕಾರಗಳಲ್ಲ ಎಂಬುದನ್ನು ಇದು ಸಾರುತ್ತದೆ. ಇಂತಹ ಪ್ರಾಮಾಣಿಕ ಶ್ರಮಜೀವಿಗೆ “ಮಂಜಗುರುಳಿನ ತಾಯಿ ಬಿಸಿಲ ಕಣ್ಣನು ತೆರೆದು/ ನಿನ್ನ ದಾರಿಯ ಮೇಲೆ ಹೂವೆಸೆಯಲಿ” (ಬೆಳಗಿನ ಮಂಜು) ಎಂದು ಹಾರೈಸುವ ಕೆ.ಎಸ್.ನ ಅವರ ದರ್ಶನ ಇಂದಿಗೂ ಪ್ರಸ್ತುತವಾಗಿದೆ. ಗಿರಿಜಾ ಶಾಸ್ತ್ರಿ ನನ್ನ ನಾವೆಯಿಂದ ನಿನ್ನ ನಾವೆಯವರೆಗೆ.... ಗೆಳತಿ ಸುಧಾ ಅಡುಕಳ ಅವರು ಕನ್ನಡಕ್ಕೆ ತಂದಿರುವ ರವೀಂದ್ರನಾಥ ಟಾಗೋರ್ ಅವರ ‘ಗೀತಾಂಜಲಿ’ಯನ್ನು ಕಳುಹಿಸಿ ಬಹಳ ದಿನಗಳ ಮೇಲಾಗಿತ್ತು. ಅದನ್ನು ಈಗ ಓದಿ ಮುಗಿಸಿದ ತಕ್ಷಣ, ಕಣ್ಣು ಕಂಡಷ್ಟೂ ವಿಸ್ತರಿಸುವ ವಿಶಾಲವಾದ ಸಾಗರದ ಮುಂದೆ ನಿಂತ ಅನುಭವವಾಯಿತು. ಮೇರು ಪರ್ವತ ಒಂದರ ತಪ್ಪಲಲ್ಲಿ ನಿಂತಂತೆ ಭಾಸವಾಯಿತು. ಕುವೆಂಪು ಅವರು ಇಂತಹ ಅನುಭವವನ್ನು ಭೂಮಾನುಭೂತಿ ( Sublime theory - Longinus) ಎನ್ನುತ್ತಾರೆ. wordsworth ತನ್ನ ಕವಿತೆಯಲ್ಲಿ"The world is too much with us; late and soon, Getting and spending, we lay waste our powers" ಎನ್ನುತ್ತಾನೆ. ಇಲ್ಲಿ ನನಗೆ ಟಾಗೋರರ ಜೊತೆಗೆ ಕುವೆಂಪು ಮತ್ತು words worth ನೆನಪಾಗಿರುವುದಕ್ಕೆ ಕಾರಣವಿದೆ. ಈ ಮೂವರೂ ರೊಮ್ಯಾಂಟಿಕ್ ಕವಿಗಳು. ( ಕುವೆಂಪು ಅವರಂತೂ ಕನ್ನಡದ wordsworth ಎಂದೇ ಹೆಸರಾದವರು) ನಿಸರ್ಗದೊಡನೆ ತಾದಾತ್ಮ್ಯ ಈ ಮೂವರ ಮೂಲ ಸೆಲೆ. ಪ್ರಕೃತಿಯ ದೈವೀಕರಣ ಭಾರತೀಯ ನವೋದಯದ ಮುಖ್ಯಲಕ್ಷಣಗಳಲ್ಲಿ ಒಂದು. ಅವರುಗಳೆಲ್ಲರ ಅಧ್ಯಾತ್ಮಿಕ ಔನ್ನತ್ಯದ ನೆಲೆಯೂ ಪ್ರಕೃತಿಯೇ! words worth ಕವಿತೆಯಲ್ಲಿರುವ ಕೊರಗಿಗೆ, ವಿಷಾದಕ್ಕೆ ಟಾಗೋರವರ ಕವಿತೆಗಳಲ್ಲಿ ಉತ್ತರವಿದೆ ಎಂದು ನನಗೆ ತೋರುತ್ತದೆ. ಅದು ಇಂದಿಗೂ ಪ್ರಸ್ತುತ. ನಾವಿಂದು ವ್ಯಾವಹಾರಿಕ ಪ್ರಪಂಚದಲ್ಲಿ ಸದಾ ಕಾಲವೂ ವ್ಯಸ್ತರಾಗಿದ್ದೇವೆ. ವೇಗ ಮತ್ತು ಧಾವಂತ ನಮ್ಮ ಬದುಕನ್ನು ರೂಪಿಸುತ್ತಿದೆ. ಆಧುನಿಕತೆಯ ಅಭಿಶಾಪವಿದು. ಕನಸು ಎಚ್ಚರಗಳಲ್ಲೂ ಪ್ರಪಂಚ ನಮ್ಮನ್ನು ಬಿಡದೆ ಕಾಡುತ್ತದೆ. ಆವರಿಸುತ್ತದೆ. ಅದರಿಂದ ಬಿಡುಗಡೆಯೇ ಇಲ್ಲ. ಆದುದರಿಂದಲೇ "ಒಂದರೆಕ್ಷಣ ನಿನ್ನೆದುರು ಕುಳಿತುಬಿಡುವ ಭಾಗ್ಯವ ಕೊಡು ದೊರೆಯೇ ಮತ್ತೆ ಮುಗಿಸುವೆ ಕೈಯಲ್ಲಿರುವ ಕೆಲಸಗಳೆಲ್ಲವನ್ನೂ"ಎನ್ನುತ್ತಾರೆ ಕವಿ ಹೀಗೆ ‘ಪ್ರಭುವೇ ದೊರೆಯೇ’ ಎಂದು ಅಲವರಿಯುವ, ಸಂಪೂರ್ಣ ಶರಣಾಗತಿಯ ರೀತಿ ಆಧುನಿಕರಿಗೆ ಗುಲಾಮತನವಾಗಿ ಕಾಣಬಹುದು. ಬ್ರಹ್ಮಾಂಡ ಎನ್ನುವುದು ಎಷ್ಟು ದೊಡ್ಡದಿದೆ ಎನ್ನುವುದನ್ನು ವಿವರಿಸುತ್ತಾ ಜಿ.ಟಿ. ನಾರಾಯಣರಾಯರು ಒಮ್ಮೆ ಅದರ ಮುಂದೆ ಮನುಷ್ಯ ಹೇಗೆ ಅಣುವಿಗಿಂತಲೂ ತೀರ ಚಿಕ್ಕವನು. ಆದರೆ ಸಂತಸದ ಸಂಗತಿಯೆಂದರೆ‌ ಈ ಅಣುವಿಗೆ ಬ್ರಹ್ಮಾಂಡದಲ್ಲಿ ತಾನು ಒಂದು ಅಣು ಎಂದು ಗೊತ್ತಿರುವುದು, ಎಂದಿದ್ದರು. ನಮ್ಮ ನಮ್ಮ ಗ್ರಹಿಕೆಯ ಸಾಮರ್ಥ್ಯಕ್ಕನುಗುಣವಾಗಿ ವಿಶ್ವ ತನ್ನ ರಹಸ್ಯವನ್ನು ಬಿಟ್ಟುಕೊಡುತ್ತದೆ ಎಂದಿದ್ದರು. ‘ನಾನು ಅಣು’ ಎಂಬ ಈ ಅರಿವೇ ಬ್ರಹ್ಮಾಂಡದ ಅಗಾಧತೆಯನ್ನು ಕಲ್ಪನೆ ಮಾಡಿಕೊಳ್ಳಲು ಸಹಾಯ ಮಾಡಬಹುದು. ಅಣುವೊಂದು ಬ್ರಹ್ಮಾಂಡವನ್ನು ಅರಿಯುವ ತಹ ತಹ, ಅದರೊಳಗೆ ಲೀನವಾಗಬೇಕೆನ್ನುವ ಹಂಬಲ ಟಾಗೋರರ ಈ ಕವಿತೆಗಳಲ್ಲಿದೆ. ಭೌತಿಕ ಮತ್ತು ಅಭೌತಿಕ ಸಂಘರ್ಷದಲ್ಲಿ ಹುಟ್ಟುವ ಚಿತ್ತವೃತ್ತಿ ಇದು. ಇದು ಗುಲಾಮತನವಲ್ಲ. ಭೂಮಾನುಭೂತಿ. ಗ್ರಹಿಕೆಗೆ ದಕ್ಕದ ವೈಶಾಲ್ಯದ‌ ಮುಂದೆ ನಿಂತಾಗ ಉಂಟಾಗುವ ತಳಮಳವಿದು. ವಿಸ್ಮಯವಿದು. ವ್ಯಾಕುಲತೆ ಇದು. ವ್ಯಾಕುಲತೆ ಭಕ್ತರ ಮುಖ್ಯ ಗುಣ.ವಿಸ್ಮಯಕ್ಕೆ ವಿಸ್ಮಯವೇ ಉತ್ತರ. ಬೇರೆ ಉತ್ತರಗಳಿಲ್ಲ. ಅಖಂಡವನ್ನು ಹಿಡಿಯಬೇಕೆನ್ನುವ ನಿಟ್ಟಿನಲ್ಲಿ ಈ ಕವಿತೆಗಳಲ್ಲಿ ಕಾಣುವುದು, ನಿರ್ಮಲತೆ, ಸೌಂದರ್ಯ, ಅನಿಚ್ಚಬೋಧ (ಬದಲಾವಣೆಯೊಂದೇ ಶಾಶ್ವತ) ಶುದ್ಧಪ್ರೇಮ, ಕರುಣೆ, ಪ್ರತೀಕ್ಷೆ, ಬಂದಾನೋ ಬಾರನೋ ಎನ್ನುವ ತಳಮಳ, ಬಾಗಿಲಲ್ಲೇ ನಿಂತಿರಬಹುದೆನ್ನುವ ಕನಸು, ಅದರ ಬಗೆಗಿನ ಅಸ್ಪಷ್ಟತೆ, ಅನಿಶ್ಚತತೆ, ಅದಕ್ಕಾಗಿ ಹಂಬಲಿಸುವ ಮೊರೆ ಅಖಂಡವಾದ ವಿಶ್ವಚೈತನ್ಯದಿಂದ ಬೇರ್ಪಟ್ಟ ವಿರಹದ ನೋವು ಮತ್ತು ಅದರೊಳಗೆ ಲೀನವಾಗುವ ಸಂಭ್ರಮ, -ಇವು ಆತ್ಮ ಪರಿವೀಕ್ಷಣೆಯ ಗುರಿಯಲ್ಲಿ ತನ್ನನ್ನೇ ತಾನು ಶೋಧಿಸಿಕೊಳ್ಳಲು ಹೊರಟ ಏಕಾಂಗಿ ದಾರಿಯಾಗಿ ಕಾಣಿಸುತ್ತದೆ. ಇಲ್ಲಿರುವುದು ಒಂಟಿದನಿ “ನನ್ನ ನಾವೆಯನ್ನು ನಾನೇ ನಡೆಸಬೇಕಿತ್ತು” ಎನ್ನುವಲ್ಲಿ ನನ್ನ ದಾರಿಯನ್ನು ನಾನೇ ನಡೆಯಬೇಕು ಎನ್ನುವ ಅರಿವಿದೆ. ಈ ಹಂಬಲದ ದಾರಿಯಲ್ಲಿ ನಿಮಗ್ನವಾಗಿ ನಡೆಯುವಾಗ ಮುತ್ತಿಕೊಳ್ಳುವ ಮಾಯಕದ ಬಗೆಯನ್ನು ಕೆಳಗಿನ ಸಾಲುಗಳು ಬಹಳ ತೀವ್ರವಾಗಿ ಹೇಳುತ್ತವೆ. ಆ ರಾತ್ರಿ ಅವನು ಬಂದು ನನ್ನ ಸನಿಹದಲ್ಲೇ ಕುಳಿತಿದ್ದ ನನಗೆ ಎಚ್ಚರವೇ ಆಗಲಿಲ್ಲ ಎಂಥಹ ಶಾಪಗ್ರಸ್ತ ನಿದ್ದೆ! ಓ, ದುರದೃಷ್ಟವಿದು ನನಗೆ! ಈ ಹಾದಿಯಲ್ಲಿ ನಡೆಯುವಾಗ ಅರೆಕೊರೆಗಳು, ತೊಡಕುಗಳೂ ಎಲ್ಲವೂ ಇರುವಂತಹುದೇ ಯಾವುದೂ ಪರಿಪೂರ್ಣವಲ್ಲ. “ಬಿರುಕಿಲ್ಲದ ಪೂರ್ಣತೆಯ ಹುಡುಕಾಟ ಆಹಾ !ಅದೆಷ್ಟು ವ್ಯರ್ಥ” ಯಾರೂ ಕೇಳುವವರಿಲ್ಲದ ಒಬ್ಬಂಟಿ ಹಾದಿಯಲ್ಲಿ ಪಥಿಕ ಅನಾಥ, ಅಲೆಮಾರಿ- "ಶರತ್ಕಾಲದ ಮೋಡದ ಅವಶೇಷದಂತೆ ಅನುಪಯುಕ್ತವಾಗಿ ಮುಗಿಲಲ್ಲಿ ಅಲೆಯುತ್ತಿದ್ದೇನೆ" ಕವಿ ಪ್ರಕೃತಿಯ ಎಲ್ಲಾ ಚಟುವಟಿಕೆಗಳಲ್ಲಿ ಒಂದು ಅಖಂಡವಾದ ಸೃಷ್ಟಿಶೀಲತೆಯನ್ನು ಕಾಣುತ್ತಿದ್ದಾರೆ. ಇವು ಒಂದನ್ನೊಂದು ಛೇದಿಸುವುದಿಲ್ಲ. ಅವುಗಳು ಭೇದರೂಪವಲ್ಲ ಬದಲಾಗಿ ಅಸಂಖ್ಯ ವೈವಿಧ್ಯಗಳ ಸಾಧ್ಯತೆ. "ಗಾಳಿಯೊಂದಿಗೆ ತೇಲಿ ಬರುವ ಗಾನದೊಳಗೆ ಮುಳುಗಿ ಹೋಗುವ ರೋಮಾಂಚನವನ್ನು" ಇವು ಉಂಟು ಮಾಡುತ್ತವೆ. ಕವಿ ತಮ್ಮ ಚಿತ್ತವೃತ್ತಿಗಳನ್ನು ಪ್ರಕೃತಿಯ ಸೃಷ್ಟಿಶೀಲ ಚಟುವಟಿಕಗಳಿಗೆ ಆರೋಪಿಸುತ್ತಿದ್ದಾರೋ ಅಥವಾ ಪ್ರಕೃತಿಯ ಸೃಷ್ಟಿಶೀಲ ಚಟುಚಟಿಕೆಗಳೇ ಕವಿಯ ಚಿತ್ತವೃತ್ತಿಗಳನ್ನು ನಿರ್ಮಾಣಮಾಡುತ್ತಿವೆಯೋ ಎಂಬ ಶಂಕೆ ಮೂಡುತ್ತದೆ. "ಹತಾಶೆಯಿಂದ ಆಗಸವು ನರಳುತ್ತಿದೆ" ಕಾಡುಗಳು ಎದೆಯ ಹಾಡುಗಳನ್ನು ಅಡಗಿಸಿವೆ" ಮನುಷ್ಯ ಕೂಡ ಪ್ರಕೃತಿಯ ಭಾಗವೇ! ಆದುದರಿಂದ ಮನುಷ್ಯ ಸಂಬಂಧಗಳ ಬಗೆಗೆ ಮಾತಾನಾಡುವಾಗಲೂ ಅವರ ಈ ಅಖಂಡ ದೃಷ್ಟಿಯೇ ಕೆಲಸಮಾಡಿದೆ. ಸಮಾಜದ ನಿಮ್ನವರ್ಗದವರ ದುಡಿಮೆಯಲ್ಲಿ ದೇವರನ್ನು ಕಾಣುವ "ಅವನು.....ಬರಡು ನೆಲವ ನೇಗಿಲಿನಿಂದ ಹಸನುಗೊಳಿಸುತ್ತಿರುವವರೊಂದಿಗಿದ್ದಾನೆ" ಎನ್ನುವ ಸಾಲುಗಳು ಕುವೆಂಪು ಅವರ ಕವಿತೆಗಳನ್ನೇ ನೆನಪಿಸುತ್ತವೆ. ಭೂಮಿಯ ಮೇಲಿನ ಅಖಂಡ ಜೀವ ಜಡ ಜಾಲವನ್ನು ಏಕತ್ರಗೊಳಿಸಿ ನೋಡುವ ಅದ್ವೈತ ದೃಷ್ಟಿಯಿದು. ಇಂತಹ ಒಂದು ವಿಶ್ವಪ್ರಜ್ಞೆಗೆ ಸಾವಿನ ಭಯವನ್ನು ಮೀರುವ ಧೈರ್ಯವಿದೆ. ಸಾವನ್ನು ಆಹ್ವಾನಿಸುವ ರೀತಿ ಅದಕ್ಕೆ ಮಾನಸಿಕವಾಗಿ ಸಿದ್ಧವಾಗುವಾಗಲೂ ಬದುಕಿನ ಧನ್ಯತೆಯ ಬಗ್ಗೆಯೇ ಹೆಚ್ಚು ಒತ್ತು ಇದೆ. ಇದು ಪರಿಪಕ್ವಗೊಂಡ ಸ್ಥಿತಿಯ ಪ್ರತೀಕವಾಗಿದೆ. ಅಹಂಕಾರದಿಂದ ಬಿಡುಗಡೆಗೊಂಡ ವಿನೀತ ಕವಿತೆಗಳಿವು. “ಯಾವ ಪದಗಳ ವ್ಯಾಖ್ಯೆಗೂ ನಿಲುಕದ ಹರ್ಷ ನನ್ನ ಕೊನೆಯ ಹಾಡಿನೊಂದಿಗೆ ಬೆರೆತು ಹೋಗಲಿ...” “ನಾನು ಚುಕ್ಕಾಣಿಯನು ಕೈ ಬಿಟ್ಟಾಗಲೇ ನನಗೆ ತಿಳಿದಿದೆ ನೀನದನ್ನು ಹಿಡಿಯುವ ಸಮಯ ಬಂದಿದೆ” ಎನ್ನುವ ಆತ್ಮ ವಿಶ್ವಾಸ ಬೆರಗು ಹುಟ್ಟಿಸುವಂತಹುದು. “ಓ ಪ್ರೀತಿಯೇ ಯಾಕೆ ನನ್ನನ್ನಿನ್ನೂ ಬಾಗಿಲ ಬಳಿಯೇ ಒಂಟಿಯಾಗಿ ಕಾಯುವಂತೆ ಮಾಡುತ್ತಿರುವೆ?” “ನೀನು ಮಾತನಾಡದಿದ್ದರೆ ನಿನ್ನ ಮೌನವನು ಹೃದಯದೊಳಗೆ ತುಂಬಿಕೊಳ್ಳುತ್ತೇನೆ” “ಅಮ್ಮಾ, ನನ್ನ ಕಣ್ಣೀರಿನ ಮುತ್ತುಗಳಿಂದ ಮಾಡಿದ ಮಾಲೆಗಳಿಂದ ನಿನ್ನ ಕತ್ತನಲಂಕರಿಸುವೆ” (ಇಲ್ಲಿ ತ್ಯಾಗರಾಜರು ಬಿಂದುಮಾಲಿನಿ ರಾಗದಲ್ಲಿ ರಚಿಸಿದ ಕೀರ್ತನೆಯ ನೆನಪಾಗುತ್ತಿದೆ) ವಿಶ್ವಪ್ರಜ್ಞೆಯ ಭಾಗವಾಗಬೇಕೆನ್ನುವ ಮೊರೆಯನ್ನು ಹೊತ್ತ ಈ ಎಲ್ಲಾ ಕವಿತೆಗಳು ಹೀಗೆ ಎಷ್ಟು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ! ನಾನು ಟಾಗೋರ್ ಕವಿತೆಗಳನ್ನು ಇಂಗ್ಲಿಷಿನಲ್ಲಿ ಓದಿದ್ದೆ. ಕನ್ನಡದಲ್ಲಿ ಅವುಗಳನ್ನು ಓದುವ ಸುಖವೇ ಬೇರೆ! Later poems of Tagore ನ್ನು ಡಿ.ಆರ್. ಎನ್ ಮೇಷ್ಟ್ರು ಪಾಠ ಮಾಡುತ್ತಿದ್ದರು. ಸುಧಾ ಅವರ ಪುಸ್ತಕವನ್ನು ಓದುವಾಗ ನನಗೆ ಅವರದೇ ನೆನಪು ! ಬಹಳ ಆಪ್ತವಾಗಿ ತಟ್ಟಿದ್ದು, ಈ ಕವಿತೆಗಳ ಅತಿಯಾದ ಅಲಂಕಾರಗಳಿಂದ ಹೊರತಾದ ಸರಳವಾದ ಭಾಷೆ. ಇದಕ್ಕಾಗಿ ಸುಧಾ ಅವರನ್ನು ಅಭಿನಂದಿಸುತ್ತೇನೆ. ಓದಿನ ಸುಖ ಕೊಡುವುದು ಅನುವಾದ ಸರಾಗವಾಗಿ ಓದಿಸಿಕೊಂಡು ಹೋದಾಗ ಮಾತ್ರ! ಬಳಸುವ ನುಡಿಗಟ್ಟುಗಳು, ಪ್ರತಿಮೆ ಅಲಂಕಾರಗಳು ಕನ್ನಡದ್ದೇ ಎಂದೆನಿಸಬೇಕು. ಗೆಳತಿ ಸುಧಾ ಅಂತಹ ಕೆಲಸವನ್ನು ಬಹಳ ಸಮರ್ಥವಾಗಿ ಸಮಗ್ರವಾಗಿ ಮಾಡಿದ್ದಾರೆ. ಎಲ್ಲಿಯೂ ಅನುವಾದದ ವಾಸನೆ ಹತ್ತಿಲ್ಲ. ಇಲ್ಲಿ ಮೆರೆಯುವುದು ಕನ್ನಡದ ಗಂಧವತಿ. ಟಾಗೋರರ ಕವಿತೆಗಳ ಬಗ್ಗೆ ಸುಧಾ ಅವರಿಗೆ ಇರುವ ಅದಮ್ಯ ಪ್ರೀತಿ ವ್ಯಕ್ತವಾಗುತ್ತದೆ. ಅವರು ಹೇಳಿ ಕೇಳಿ ಗಣಿತದ ಅಧ್ಯಾಪಕಿ. ಅಂತಹವರು ಎಲ್ಲಿಯೂ ಕನ್ನಡದ ಗಂಧ ಮಾಸದ ಹಾಗೆ ಅನುವಾದಿಸಿರುವುದು, ಅನುವಾದದ ಸುಳಿವೂ ಸಿಕ್ಕದಂತೆ ಅನನ್ಯವಾಗಿ ಕನ್ನಡಕ್ಕೆ ತಂದಿರುವುದು ಅಚ್ಚರಿಯ ಸಂಗತಿ. ನನ್ನ ಮೇಲಿನ ಪ್ರೀತಿಯಿಂದ ಪುಸ್ತಕವನ್ನೂ ಕಳುಹಿಸಿದ್ದಾರೆ. ಅವರಿಗೆ ಶುಭಾಶಯಗಳು ಮತ್ತು ಧನ್ಯವಾದಗಳು. ಬಾಂಬೇ ಬೋರ್ಡ್...... ಅಯ್ಯಯ್ಯೋ ಇವಳನ್ಯಾರ್ರೀ ಇಷ್ಟು busy board ನಲ್ಲಿ ಕೂರಿಸಿರೋದು? 'ಪ್ರಭಾದೇವಿ' ( ಬಾಂಬೆಯ ಒಂದು ಸಬ್ ಟೆಲಿಫೋನ್ ಎಕ್ಸ್ ಛೇಂಜ್ ಆಪರೇಟರ್) ಬೊಂಬಡಾ ಬಜಾಯಿಸ್ತಿದ್ದಾನೆ. ನಿಮ್ಮ ಬಾಂಬೆ ಬೋರ್ಡ್ ಹುಡುಗಿ ಸರಿಯಾಗಿ answer ಮಾಡ್ತಿಲ್ಲಾಂತ" ಎಂದು ಕರ್ರಗಿನ ಮಾನಿಟರ್ ( ಸೂಪರ್ವೈಸರ್) ಒಬ್ಬಳು ನನ್ನ ಬಳಿಗೆ ಬಂದು " ಏಳು, ನಿನ್ನ ಸ್ಟಾಫ್ ನಂ ನೋಡಿದ್ರೆ ತುಂಬಾ ಸೀನಿಯರ್ರು...ಆದ್ರೆ ಒಂದು ಕೆಲಸಾನೂ ನೆಟ್ಟಗೆ ಮಾಡೋಕೆ ಬರೋಲ್ಲ...ಹೋಗ್ ಬುಕಿಂಗ್ ನಲ್ಲಿ 'ಕೂದುಕೋ" ಎಂದು ನನ್ನ ತೋಳು ಹಿಡಿದು ಎಬ್ಬಿಸಿದಳು. ಇನ್ನೊಂದು ಬೋರ್ಡಿನಲ್ಲಿದ್ದವಳನ್ನು ನನ್ನ ಜಾಗದಲ್ಲಿ ಕೂರಿಸಿದಳು. ಇದು (೧೯೮೧-೮೪) ಬೆಂಗಳೂರಿನಲ್ಲಿ ನಾನು ಟ್ರಂಕ್ ಎಕ್ಸ್ ಛೇಂಜ್ ಗೆ ಸೇರಿದ ಹೊಸತರಲ್ಲಿ ನಡೆದ ಕಥೆ. ಆ ಮಾನಿಟರ್ ಕನ್ನಡದವಳಾಗಿರಲಿಲ್ಲ. ಹೀಗಾಗಿ ಕನ್ನಡದ ನಾಲಗೆಯಲ್ಲಿ ಮಾತನಾಡುತ್ತಿರಲಿಲ್ಲ. ಬುಕ್ಕಿಂಗ್ ಆಗಲೀ ( 180), ಸಹಾಯ ಕರೆಗಾಗಲೀ (181), ವಿಚಾರಣಾ ಕರೆಗಾಗಲೀ (183), ರಿಸೀವರ್ ಎತ್ತಿದಾಕ್ಷಣ ಯಾವ ಆಪರೇಟರ್ರೂ ಹಲೋ ಎಂದು ಸ್ವಾಗತಿಸುವ ಹಾಗಿರಲಿಲ್ಲ. "Trunk Booking pls", " Trunk Assistance", Trunk Enquiry" ಎಂದೇ ಹೇಳಬೇಕಿತ್ತು ಟ್ರೈನಿಂಗ್ ವೇಳೆಯಲ್ಲೇ, ಯಾವ ಸಂದರ್ಭಕ್ಕೆ ಗ್ರಾಹಕರ ಜೊತೆ ಹೇಗೆ ಮಾತನಾಡಬೇಕು ಎಂಬ ಸಭ್ಯತೆಯ ೪೦-೫೦ ವಾಕ್ಯಗಳನ್ನು ( Standard Expressions) ಉರುಹೊಡೆಸಲಾಗುತ್ತಿತ್ತು. ಅದರ ಮೇಲೆ ಪರೀಕ್ಷೆ ಬೇರೇ ಇರುತ್ತಿತ್ತು. ಹಲೋ ಎನ್ನುವ ಅಭ್ಯಾಸವಾದರೂ ನಮಗೆ ಎಲ್ಲಿ ಬರಬೇಕು? ಎಂಬತ್ತರ ದಶಕದ ಪ್ರಾರಂಭದಲ್ಲಿ, ಸರ್ಕಾರಿ ಮತ್ತು ಪಬ್ಲಿಕ್ ಸೆಕ್ಟರ್ ಗಳ ಕಚೇರಿಗಳನ್ನು ಬಿಟ್ಟರೆ, ಶ್ರೀಮಂತರ ಹಾಗೂ ದೊಡ್ಡ ಅಧಿಕಾರಿಗಳ ಮನೆಗಳಲ್ಲಿ ಮಾತ್ರ ಫೋನ್ ಇರುತ್ತಿತ್ತು. ಬುಕ್ಕಿಂಗ್ ನಲ್ಲಿ ಕುಳಿತಿದ್ದೆ. ಕಿವಿಗೆ ಭಾರವಾದ ಇಯರ್ ಫೋನ್ ಹಾಕಿಕೊಂಡರೆ ಕಿವಿ ನೋಯುತ್ತಿತ್ತು. ಅಷ್ಟು ಹೊತ್ತಿಗೆ‌ ಅದೇ ಮಾನಿಟರ್ ಬಂದು " ಹೋಗು ‌A.E. ನಿನ್ನಾ ಕರೀತಿದ್ದಾರೆ" ಎಂದಳು. ಅಂದರೆ ಆಗಲೇ A.E ಅವರ ಬಳಿಗೆ ನನ್ನ ಮೇಲೆ ತಕರಾರು ಹೋಗಿದೆ ಎಂದಾಯಿತು! ಹೆದರಿಕೊಂಡೇ ಒಳಗೆ ಹೋದೆ. ಯಾರ ಬಳಿಯೋ ಫೋನಿನಲ್ಲಿ ಮಾತನಾಡುತ್ತಿದ್ದವರು, ಅದನ್ನು ಮುಗಿಸಿ ನನ್ನನ್ನು ನೋಡಿ " what's your problem?" ಎಂದು ಅಸಮಾಧಾನದಿಂದ ಕೇಳಿದರು. " sir, I cannot handle.... Bombay board. Its very busy, I am new to ....." ಎಂದು ತಡವರಿಸಿ ಹೇಳುತ್ತಿರುವಂತೆಯೇ "ನೀನು ಹೋಗಬಹುದು" ಎಂದು ಬಾಗಿಲತ್ತ ಕೈ ತೋರಿಸಿದರು. ಇನ್ನೊಮ್ಮೆ ಹೀಗೇ ಆದರೆ ನೀನು reminder ತೆಗೆದುಕೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಸಿದರು. ಅಂದು ಆಷಾಢ ಶುಕ್ರವಾರ ಅಮ್ಮ ವಿಶೇಷ ಪೂಜೆ ಮಾಡಿ ತುಂಡು ಮಲ್ಲಿಗೆ ಹೂವನ್ನು ಮುಡಿದುಕೊಳ್ಳಲು ಕೊಟ್ಟರು. "ಇವೊತ್ತು ..ಹಬ್ಬ ಹೋಗಲೇಬೇಕಾ?" ಎಂದವರೇ ನನ್ನ ಉತ್ತರವನ್ನು ಊಹಿಸಿದವರಂತೆ "ಹೋಗ್ಲಿ ಒಂದು ಹೊಸ ಸೀರೇನಾದ್ರೂ ಉಟ್ಕೊಂಡು ಹೋಗೇ" ಎಂದು ಬೇತುಕೊಂಡರು. ಟ್ರಂಕ್ ರೂಂ ಹೊಕ್ಕವಳೇ ಹಾಜರಿ ಪುಸ್ತಕ ದಲ್ಲಿ ಸಹಿ ಮಾಡಲೆಂದು ಮೇಜಿನ ಬಳಿ ಹೋದೆ. ನನ್ನ ಗ್ರಹಚಾರ!!ಅದೇ ಕರಿಮೂತಿ ಮಾನಿಟರ್ ಅಲ್ಲಿ ಕೂತಿದ್ದಳು. ಅವಳಿಗೂ ನನ್ನದೇ ಡ್ಯೂಟಿ. ಸಹಿ ಹಾಕಲು ಲೆಡ್ಜರ್ ಎಳೆದುಕೊಳ್ಳುವಾಗ, " ಓಹೋಹೋ, ಏನಿವತ್ತು ಹೂವ ಎಲ್ಲ‌ ಮುಡ್ಕಂಬಿಟ್ಟಿದ್ಯಾ !!! ಹೊಸ ಸೀರೇ ಬೇರೆ" ಎಂದು ಹಲ್ಕಿರಿಯುತ್ತಾ " ನಿನ್ ಗಂಡ ಬಂದಿದಾನಾ? ಎಂದು ಕಣ್ಣು ಹೊಡೆದಳು...." ನನ್ನ ಮೂಗಿನ ಹತ್ತಿರ ಮುಖ ತರುತ್ತಾ ಯಾವುದೋ ಪೋಲಿ ಜೋಕ್ ಹೊಡೆದಳು. ಅವಳ ಕೆನ್ನೆಗೆ ಬಾರಿಸುವಷ್ಟು ಬಂದ ಕೋಪವನ್ನು ತಡೆದುಕೊಂಡೆ, ನನ್ನ ಮೇಲಧಿಕಾರಿಯಲ್ಲ? "ನಾಚ್ಕೆ ನೋಡು ಹುಡ್ಗೀಗೆ" ಎಂದು ತನ್ನ ಜೋಕಿಗೆ ತಾನೇ ನಗುತ್ತಾ ನನ್ನ ಸೋಟೆ ತಿವಿದಳು. ಮುಂದುವರೆಯುವುದು.....