Sunday, 21 February 2016

ನೊಂದ ಕನಸು
“ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ”
ಆಲಯಗಳೆಲ್ಲ ಬಿದ್ದು ಹೋದವು
ಅದರೊಳಗೆ ಸಿಕ್ಕಿದ ‘ಹೆಣ್ಣು’ ‘ಗಂಡು’ ಗಳು ಜಜ್ಜಿಹೋದವು
ಗಂಟೆ ಬಾರಿಸುತ್ತಲೇ ಪೂಜಾರಿ
ಧರೆಗುರುಳಿದ
ಮಸೀದಿಯ ಮುಲ್ಲನೂ
ಇಗರ್ಜಿಯ ಪೋಪನೂ

ಹೊರಗೆ ಕಾಯುವ ಹೊಲೆಮಾದಿಗರೂ ನೆಲಸಮವಾದರು.
ಧನಿಕ ಮಾಲಿಕ ಎದೆಯೊಡೆದು ಸತ್ತ
ಸಾಲುಗಟ್ಟಿದ ಭಿಕಾರಿಗಳು ಕುಳಿತಲ್ಲೇ ಕುಸಿದರು.
ಎಲ್ಲ ಹೆಣಗಳನ್ನೂ ಈಗ ಸಾಗಿಸಬೇಕಾಗಿದೆ ಸ್ಮಶಾನಕ್ಕೆ
ಹೆಗಲು ಕೊಡುವೆಯೇನೇ ಅಕ್ಕಾ...
ರಕ್ತಸಿಕ್ತ ಬಯಲ
ತೊಳೆಯಬೇಕಾಗಿದೆ
ಕೈ ನೀಡುವೆಯೇನೇ..
ಎಲ್ಲಾ ಸುಟ್ಟುರುಹಿದ ನೆಲದಲ್ಲಿ
ಹೊಸಬೀಜ ಬಿತ್ತಬೇಕಾಗಿದೆ
ನಿನ್ನ ಚೆನ್ನಮಲ್ಲಿಕಾರ್ಜುನನ
ಕಳುಹಿಸುವೆಯೇನೇ
ನನ್ನ ಸಂಗಾತಕ್ಕೇ..
ಗಿರಿಜಾಶಾಸ್ತ್ರಿ

Monday, 8 February 2016

31. ಚರಾಚರ
ಮೊದಲ ದಿನ ಮೌನದಲಿ ಕಾಲಿಟ್ಟಾಗ ನಾನು
ಹೊಳೆಯುತ್ತಿದ್ದೆ ಲಕ ಲಕ ನೀನೂ
ಹಬ್ಬದ ಹಸಿರು ತೋರಣದಂತೆ
ಮೈ ಕೈ ತುಂಬಿಕೊಂಡು ನನ್ನಂತೆ
ದೇವರ ಮುಂದೆ ಹಚ್ಚಿದ ತುಪ್ಪದ ಹಣತೆ
ಸಮಾಧಾನ ಮಿನುಗುತ್ತಿತ್ತು ಮೊಗ್ಗಿನಂತೆ

ಭಾವದ ಜಾತ್ರೆ ಜರಗುತ್ತಿತ್ತು ‘ಜೀವದೊಳಗೆ’
ಅಚ್ಚರಿ ಭಯ ನಡುಕ ಸಂಭ್ರಮದೊಳಗೆ
‘ವೀಣೆ’ ಮಿಡಿಯುತ್ತಿತ್ತು ‘ನೀರೊಳಗೆ’
ಕಡೆಗಣ್ಣು ಕುಡಿಯಾಗಿತ್ತು ಕತ್ತಲ ಕೋಣೆಯೊಳಗೆ

ಹೊಸಿಲೊಳಗೆ ಇಟ್ಟ ಕಾಲು ಗಟ್ಟಿ ಊರುತ್ತಿತ್ತು
ಮೂಲೆ ಮೊಡಕು ಹಸಿ ವಾಸನೆಗಳೆಲ್ಲಾ
ಯಥಾ ಯಥ ಅಂಟಿಕೊಳ್ಳುತ್ತಿತ್ತು
ಜೀವದ ನಂಟಿಗೆ ಕಥಾ ಕಥಿತ
ಭಾವದ ಜೋಕಾಲಿ ಆಡುತ್ತಿತ್ತು
ಹಕ್ಕಿ ಹಾಡು ಹಸೆ ಚಂದಿರ ಕೈಸಾಲೆಗೆ ರಂಗೇರಿತ್ತು.

ಶ್ರಾವಣಗಳೆಷ್ಟೋ ಹರಿದು ಹೋದವು ನಿನ್ನ ಅಂಗಳದಲ್ಲಿ
ಕೊಚ್ಚಿ ಹೋಯಿತು ಕಾಲ ವಸಂತ ಮೇಳಗಳಲ್ಲಿ

ಈಗ ಗೂಡುವೋಗುತ್ತಿದ್ದೇನೆ
ಒಕ್ಕಲೆದ್ದಿದ್ದೇನೆ
ಹೆರವರ ಹರಕೆ ನನ್ನ ಮೇಲೆ
ಇನ್ನೆಷ್ಟು ದಿನ ಬಾಕಿ ಸಂತೆ
ನನ್ನಂತಲ್ಲ ನೀನು ನಿಂತಿದ್ದೀಯೇ ಗಟ್ಟಿ ನೆಲದ ಮೇಲೆ
ಗರಬಡಿದಂತೆ

ಭಾವಕೋಶದೊಳಗೆ ತತ್ತಿ ಇಟ್ಟೆ
ಜೀವಕೋಶÀದೊಳಗೆ ಗೆಡ್ಡೆಯಾಗಿ ಬೆಳೆದೆ
ಕಿಮೂ ಹತ್ತುವ ಮುನ್ನ ಕತ್ತರಿಸಬೇಕಿದೆ
ಭಾವ ಅರ್ಥಗಳು ಹರಿಯಬೇಕಿದೆ

ಮೂಳೆ ಚಕ್ಕಳ  ನಡುಗು ನಡು
ಎಲ್ಲಿಯೂ ಸಲ್ಲದ ಜಂಗಮ ನಾನು
ಕಲ್ಲು ಮರಳು ಸುಣ್ಣ ಮಿಶ್ರಣ
ಎಲ್ಲಿಯೂ ಸಲ್ಲುವ ಸ್ಥಾವರ ನೀನು
                         23/7/2013

Sunday, 7 February 2016

ಬೌದ್ಧ ಸಂಘದವರ ನೋಟೀಸ್ ಬೋರ್ಡಿನೊಳಗೆ ರೋಹಿತ್ ವೇಮುಲ ರಾರಾಜಿಸುತ್ತಿದ್ದಾನೆ.
ಗುಂಗುರು ಕೂದಲಿನ ಕನಸು ಕಣ್ಣಿನ ಹುಡುಗ
ಶ್ರದ್ಧಾಂಜಲಿಯ ಚೌಕಟ್ಟಿನೊಳಗೆ ಕಂಗೊಳಿಸುತ್ತಿದ್ದಾನೆ.
ಹನ್ನೆರಡನೆ ಇಯತ್ತೆ ಪರೀಕ್ಷೆಗೆ ಭರದಿಂದ ಸಿದ್ಧತೆ ನಡೆಸುತ್ತಿರುವ ಮಕ್ಕಳು ಗುಂಪು ಗುಂಪಾಗಿ ಹೊರಡುತ್ತಿದ್ದಾರೆ.
ಮಸ್ತಿ ಖುಷಿ ತಮಾಶೆ ಆಕಾಶವೇ ಸೀಮೆಯೆನ್ನುವಂತೆ.
ಪ್ರತಿಯೊಬ್ಬರ ಕಣ್ಣುಗಳೂ ಥೇಟ್ ವೇಮುಲನ ಕಣ್ಣುಗಳಂತೇ ಹೊಳೆಯುತ್ತಿವೆ.

ಮಗನ ಇಂಜನಿಯರಿಂಗ್ ಕಾಲೇಜಿನಲ್ಲಿ ಇಂದು ಘಟಿಕೋತ್ಸವದ ಸಂಭ್ರಮ.
ಕಾರನ್ನು ಚಲಾಯಿಸಿಕೊಂಡು ಒಬ್ಬನೇ ಹೋಗಿದ್ದಾನೆ.
ಆದರೆ ಭಯವಾಗುತ್ತಿದೆ ನನಗೆ.
ಅವನು ಮನೆಗೆ ಬರುವವರೆಗೆ ಬಾಲಸುಟ್ಟ ಬೆಕ್ಕಿನಂತೆ ಒದ್ದಾಡುತ್ತಿದ್ದೇನೆ.
ವೇಮುಲನ ತಾಯಿಯ ಕಣ್ಣುಗಳಿಂದ ಉದುರಿದ ಹನಿಗಳು, ನಿಟ್ಟುಸಿರೂ
ನನ್ನೊಡಲಿಗೆ ಕೊಳ್ಳಿಯನ್ನಿಕ್ಕಿವೆ.
ನನ್ನ ಮಗನನ್ನು ಯಾರಾದರೂ ಕಾಪಾಡಿ ಪ್ಲೀಸ್......
        ಕೆ. ಸತ್ಯನಾರಾಯಣ ಅವರ ಮುಸ್ಸಂಜೆಯ ಕಥಾ ಪ್ರಸಂಗ
ಕೆ. ಸತ್ಯನಾರಾಯಣ ಅವರ 'ಒತ್ತಾಸೆ' ವಿಜಯವಾಣಿಯಲ್ಲಿ ಬಂದ ಅಂಕಣ ಬರಹಗಳು. ಇವುಗಳಲ್ಲಿ ಹೆಚ್ಚಿನವುಗಳನ್ನು ಓದುಗರು ಓದಿರುತ್ತಾರೆ. ಆದರೆ ಅದು ಒಂದು ಸಂಕಲನವಾಗಿ ಹೊರಬಂದಾಗ ಒಂದೇ ಕಟ್ಟಿನಲ್ಲಿರುವ ತರತರದ ಬಣ್ಣ ಅಕಾರಗಳ, ವೈವಿಧ್ಯಮಯ ಸುವಾಸನೆಗಳುಳ್ಳ ಹೂಗುಚ್ಛದಂತೆ ಮೃದುವಾಗಿ ನಮ್ಮ ಕೈ ಸೇರುತ್ತದೆ. ಲೇಖಕರ ಒಟ್ಟು ಲೋಕದೃಷ್ಟಿ ಮಾತ್ರವಲ್ಲದೇ ಅವರ ಜ್ಞಾನದ ಆಳ ಅಗಲಗಳ ಪರಿಚಯವೂ ಆಗುತ್ತದೆ.
ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿರುವ ಪ್ರಹ್ಲಾದ್ ದಿವಾಣಜಿಯವರು ಈ ಸಂಕಲನವನ್ನು ಇನ್ನಿಲ್ಲದೆಂತೆ ಕೊಂಡಾಡಿ ಫೋನ್ ಮಾಡಿದಾಗ, ಕಪಾಟಿನಲ್ಲಿ ಜೋಪಾನವಾಗಿಟ್ಟಿದ್ದ ಪುಸ್ತಕವನ್ನು ಕೈಗೆ ತೆಗೆದುಕೊಳ್ಳಬೇಕಾಯಿತು. ಏಕೆಂದರೆ ಒಮ್ಮೆಯೂ ಓದದ ಪುಸ್ತಕಗಳೇ ಮಂಚದ ಮೇಲೆ ಹರಡಿ ಕುಳಿತಿದ್ದವು. ಹಾಗಾಗಿ 'ಒತ್ತಾಸೆ' ಗೆ ಎರಡನೇ ಓದನ್ನು ಕೊಡುವುದಕ್ಕೆ ಸಾಧ್ಯವಾಗಿರಲಿಲ್ಲ. ಒಂದು ಪುಸ್ತಕ, ಹಾಸಿಗೆಯಲ್ಲಿರುವ ಮನುಷ್ಯನನ್ನು ಮಲಗಿಕೊಂಡಾದರೂ ಓದಲೇಬೇಕೆಂದು ಒತ್ತಾಯಿಸುವುದೆಂದರೆ ಅದು ಪುಸ್ತಕದ ಭಾಗ್ಯ.
'ಒತ್ತಾಸೆ'ಯಲ್ಲಿ ಅನೇಕ ರೀತಿಯ ಬರಹಗಳಿವೆ. ಪ್ರಬಂಧಗಳು, ಲಹರಿಯಂತಹ ಬರಹಗಳು, ಗಂಭೀರ ಸಾಹಿತ್ಯದ ವಿಮರ್ಶೆ, ವ್ಯಕ್ತಿ ಚಿತ್ರಗಳು, ಪುಸ್ತಕ ಪರಿಚಯ, ಮೇಲುನೋಟಕ್ಕೆ ಲಘು ಬರಹದಂತೆ ಕಾಣಿಸಿದರೂ ನಮ್ಮನ್ನು ಚಿಂತನೆಗೆ ಹಚ್ಚುವ ಅನೇಕ ಬರಹಗಳು- ಹೀಗೆ ಒಟ್ಟಾಗಿ ಒಬ್ಬ 'ಲೇಖಕ'ನನ್ನು ಹಿಡಿಯಲು ಇವು ಸಹಾಯಮಾಡುತ್ತವೆ.
ಇದರೊಳಗೆ ನನ್ನ ಕಣ್ಣಿಂದ ತಪ್ಪಿಸಿಕೊಂಡಿದ್ದ ಒಂದು ಪ್ರಬಂಧ 'ಮನುಷ್ಯನ ಕದಪಿಗೆ ಸಂಜೆಯ ರಾಗರತಿ' ಸೆಳೆಯಿತು. ಹಿಂದಿಯ 'ಖಾಮೋಶಿ'ಚಿತ್ರದ ಕಿಶೋರ್ ಹಾಡಿರುವ ಒಂದು ಹಾಡು 'ವೋ ಶಾಮ್ ಕುಚ್ ಅಜೀಬ್ ಥೀ' ಹಿನ್ನೆಲೆಯಲ್ಲಿಟ್ಟುಕೊಂಡ ಸಂಜೆಯ ಜಿಜ್ಞಾಸೆ, ಆ ಹಾಡಿನಂತೆಯೇ ನಮ್ಮನ್ನು ಬಹಳ ಗಾಢವಾಗಿ ತಟ್ಟುತ್ತದೆ. ಮೌನದೊಳಗಿರುವ ಹಾಡನ್ನೂ, ಹಾಡಿನೊಳಗಿರುವ ಮೌನವನ್ನೂ ಅನಾವರಣ ಮಾಡುವುದಕ್ಕೆ ಕೇವಲ ಸಂಗೀತ ಮಾಧ್ಯಮಕ್ಕೆ ಮಾತ್ರ ಸಾಧ್ಯ ಎನಿಸುತ್ತದೆ. 'poetry is the finest form of art' ಎಂದು ಒಬ್ಬ ಪಾಶ್ಚಾತ್ಯ ವಿಮರ್ಶಕ ಹೇಳುತ್ತಾನೆ. ಆದರೆ 'music is the finest form of art' ಎಂದು ನನಗೆ ಅನ್ನಿಸುತ್ತದೆ. ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಂಗೀತದಿಂದ ಮಾತ್ರ ಸಾಧ್ಯ. ಸಂಜೆಯನ್ನು transcend ಮಾಡುವ ರಾಗಗಳಿಂದ ಹಿಡಿದು, ಬೇಂದ್ರೆ ಅಡಿಗರು ಕಂಡ ಸಂಜೆ, ವಿಬಿನ್ನ ನಗರಗಳಲ್ಲಿ ಜನಸಾಮಾನ್ಯರ ಮಗ್ಗುಲಲ್ಲಿ ಹರಡಿಕೊಳ್ಳುವ ಸಂಜೆ, ಸೌಂದರ್ಯಾನುಭೂತಿಯಾಗಿ ಸಂಜೆ ಹೀಗೆ ಸಂಜೆಯ ಒಂದು ಅಖಂಡ ಸ್ವರೂಪವನ್ನು ಯಮನ್ ರಾಗದ' ವೋ ಶಾಮ್' ತನ್ನ ಅನೇಕ ಏರಿಳಿತಗಳಲ್ಲಿ, ವಿಲಂಬ ವಿಸ್ತಾರ ಗತಿಯಲ್ಲಿ ಹಿಡಿದಿಡುತ್ತದೆ. ಕನ್ನಡದಲ್ಲಿರುವ 'ಮತ್ತದೇ ಬೇಸರ' ಎನ್ನುವ ಹಾಡು ನೆನಪಾಗುತ್ತದೆ. ಆದರೆ ಆ ಹಾಡು 'ನೀನಿಲ್ಲದೇ, ಮಾತಿಲ್ಲದೇ' ಎಂದು ಎಲ್ಲವನ್ನೂ ವಾಚ್ಯಗೊಳಿಸಿಬಿಡುವುದರಿಂದ ಮತ್ತು ಕೇವಲ ಹೆಣ್ಣುಗಂಡಿನ ಪ್ರೇಮಕ್ಕೆ ಮಾತ್ರ ತೆಕ್ಕೆ ಹಾಕಿಕೊಳ್ಳುವುದರಿಂಡ ಅದು 'ವೋ ಶಾಮ್' ನಷ್ಟು ಪರಿಣಾಮಕಾರಿಯಾಗಿಲ್ಲ ಎನಿಸಿಬಿಡುತ್ತದೆ.
ಸಂಗೀತವನ್ನು ಕೇಳುತ್ತಾ ಕೇಳುತ್ತಾ ಒಳಗಿನ ಕಸವೆಲ್ಲ ಕಣ್ಣೀರಿನ ಮೂಲಕ ಹೊರ ಹರಿದು, ಒಂದು ಶುದ್ಧವಾದ ಅನುಭೂತಿ ಪ್ರಾಪ್ತವಾಗುತ್ತದೆ. ಈ ಅನುಭೂತಿಯೊಳಗೆ ಅಖಂಡ ಜೀವ ಜಾಲದ ಬಗೆಗೆ ಇನ್ನಿಲ್ಲದಂತೆ ಪ್ರೇಮ ಉಕ್ಕುತ್ತದೆ. ಒಂದು ultimate ಅದದ್ದನ್ನು ಮುಟ್ಟಿದುದರ ಅನುಭವವಾಗುತ್ತದೆ. ಈ ಅನುಭವವನ್ನು ಯಾವ ಹೆಸರಿನಿಂದ ಕರೆದರೆ ತಾನೇ ಏನು?
'ಮನುಷ್ಯನ ಕದಪಿಗೆ ಸಂಜೆಯ ರಾಗರತಿ' ನಮ್ಮನ್ನು ಆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. 'ಖಾಮೋಶಿ'ಯ ವರಾತಕ್ಕೆ ಪಕ್ಕಾಗಿರುವ ಐವತ್ತರ ಆಸುಪಾಸಿನಲ್ಲಿರುವವರಿಗಂತೂ ಇದೊಂದು ರೀತಿಯ nostalgic ಆದ ಕಟು- ಮಧುರ ಅನುಭವವನ್ನು ತಂದುಕೊಡುತ್ತದೆ.
ಕೆಂಪು ಸಂಜೆಯಲ್ಲಿ, ಬಾಲ್ಕನಿಯಲ್ಲಿ ಕುಳಿತು ದೂರದಿಂದ ಗಾಳಿಹೊತ್ತು ತರುವ 'ವೋ ಶಾಮ್' ಹಿನ್ನೆಲೆ ಸಂಗೀತದಲ್ಲಿ ಈ ಪ್ರಬಂಧವನ್ನು ಓದುತ್ತ ಹೋದರೆ ವಹೀದ ರೆಹಮಾನ್ ನಮ್ಮ ಮುಂದೆ ಮಿಂಚಿನಂತೆ ಸುಳಿದು ಮಾಯವಾಗದಿದ್ದರೆ ಕೇಳಿ........