Sunday, 27 July 2025

"ಪಲುಕೇ ಬಂಗಾರಮಾಯಿನಾ ಕೋದಂಡ ಪಾಣಿ" ಕೀರ್ತನೆಯನ್ನು ಬಾಲ್ಯದಿಂದಲೂ ಕೇಳುತ್ತಾ ಬಂದವಳು. ಆಗ ಇದನ್ನು ಹೆಚ್ಚಾಗಿ ಬಾಲಮುರಳಿಯವರ ಕಂಠದಲ್ಲೇ ಕೇಳಿದ್ದು. ಮಾತೇ ಬಂಗಾವಾದ ಈ ಕೃತಿಯನ್ನು ಈಗ ರಾಹುಲ್ ವೆಲ್ಲಾಳ ಮತ್ತು ಸೂರ್ಯಗಾಯತ್ರಿಯಂತಹ ಉದಯೋನ್ಮುಖರೂ ಅದ್ಭುತವಾಗಿ ಹಾಡುತ್ತಾರೆ. ಈ ಕೃತಿ ನನಗೆ ಕಣ್ಣೆದುರು ಬಂದದ್ದು, ನಾನು ಅವಾಕ್ಕಾದದ್ದು ಹೈದ್ರಾಬಾದಿನಿಂದ ಭದ್ರಾಚಲಕ್ಕೆ ಹೋಗುವ ದಾರಿಯಲ್ಲಿ. ರಾಮದಾಸರ ಕೀರ್ತನೆಗಳನ್ನು ಹಾಕಿ ಎಂದು ನಾನು ಚಾಲಕನಿಗೆ ಹೇಳಿದೆ. ಆಗ ಮೊದಲಿಗೆ ಶುರುವಾದ್ದೇ "ಪಲುಕೇ ಬಂಗಾರಮಾಯಿನಾ"! ಅರೆ! ಎಷ್ಟು ಪರಿಚಿತವಾದ ಈ ಕೀರ್ತನೆ ಭದ್ರಾಚಲ ರಾಮದಾಸರದ್ದೆಂದು ಗೊತ್ತೇ ಇರಲಿಲ್ಲವಲ್ಲ? ಅದರ ಹಿಂದೆಯೇ "ಈ ತೀರಗುನನಿ ದಯಚೂಚದವೋ ಇನವಂಶೋತ್ತಮ ರಾಮಾ" , "ಎಂತರುಚೀರ ನೀನಾಮಮು ಏಮಿ ರುಚಿರಾ""ಶುದ್ಧ ಬ್ರಹ್ಮ ಪರಾತ್ಪರ ರಾಮ" ಮುಂತಾದ ಕೀರ್ತನೆಗಳು ಒಂದಾದಮೇಲೆ ಒಂದರಂತೆ ಹಿಂಬಾಲಿಸಿದವು. ಎಲ್ಲಾ ಹಾಡುಗಳೂ ನನ್ನ ಬಾಲ್ಯಕ್ಕೆ ಲಗ್ಗೆ ಹಾಕಿದವು. ಹೈದರಾಬಾದಿನ ಸುಸಜ್ಜಿತ ರಸ್ತೆಯ ಮೇಲೆ, ಸೊಸೆ ರೇಖಾ ( ರಘುವಿನ ಅಕ್ಕನ ಮಗಳು) ನಮ್ಮ ಪ್ರಯಾಣಕ್ಕೆ ಅಣಿಮಾಡಿಕೊಟ್ಟ ಸುಖಾಸೀನ ಕಾರು ವೇಗವಾಗಿ ಓಡುತ್ತಿತ್ತು ಹಿನ್ನೆಲೆಗೆ ರಾಮದಾಸರ ಹಾಡು. ಓಹ್ ಬಹುಶಃ ಸ್ವರ್ಗ ಸಮಾನ ಅನುಭವವೆಂದರೆ ಇದೇ ಇರಬೇಕು! ಈ ಹಾಡುಗಳು ಫಿಲ್ಮೀ ಶೈಲಿಗೆ ಅಳವಡಿಸಿದ ಎಸ್.ಪಿ.ಬಿ ಯವರದ್ದಾಗಿತ್ತು. ಅಪ್ಪಟ ಶಾಸ್ತ್ರೀಯ ಶೈಲಿಯಲ್ಲಿದ್ದಿದರೆ ಅದರ ಸುಖವೇ ಬೇರೆಯದಾಗುತ್ತಿತ್ತು. ಆಗ ಸ್ವರ್ಗ ಸಮಾನವಲ್ಲದೇ ಸ್ವರ್ಗವೇ ದಕ್ಕಿದ ಭಾವ ಉಂಟಾಗುತ್ತಿತ್ತು ಎನಿಸುತ್ತದೆ. ಆದರೆ ಚಾಲಕನ ರುಚಿಯನ್ನೂ ಗಮನಿಸಬೇಕಲ್ಲ? ಮುಂದಿನ‌ ಸೀಟಿನಲ್ಲಿ ಕುಳಿತಿದ್ದ ನನ್ನ ಅತ್ತಿಗೆಯವರೂ ಹಾಡುಗಳನ್ನು ( ರಘುನಾಥ್ ಅವರ ಅಕ್ಕ) ಆನಂದಿಸುತ್ತಿದ್ದರು. ಹೈದ್ರಾಬಾದಿನಿಂದ ಸು. ಆರುಗಂಟೆಗಳ ಕಾಲ ಪ್ರಯಾಣ ಮಾಡಿದನಂತರ ಭದ್ರಾಚಲ ತಲಪಿದೆವು. ಭದ್ರಾಚಲ ರಾಮದಾಸು ತೆಲಗು ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಪ್ರಸಿದ್ಧ ವಾಗ್ಗೇಯಕಾರರಾದ ಇವರ ಕಾಲ ೧೬೨೦-೧೬೮೮. ಇವರ ಮೂಲ ಹೆಸರು ಕಂಚರ್ಲ ಗೋಪಣ್ಣ. ರಾಮನ ಪರಮ ಭಕ್ತರಾದ ಇವರು ಹುಟ್ಟಿದ್ದು ಖಮ್ಮಮ್‌ ಜಿಲ್ಲೆಯ ನೆಲಕೊಂಡನಪಲ್ಲಿಯಲ್ಲಿ ಎಂದು ವಿಕಿಪೀಡಿಯಾ ಹೇಳುತ್ತದೆ. ತ್ಯಾಗರಾಜರ ಪರಂಪರೆಯನ್ನೇ ಅನುಸರಿಸಿದ ರಾಮದಾಸರು ಅವರ ವಾರಸುದಾರರಂತೇ ಕಾಣುತ್ತಾರೆ. ಇಬ್ಬರೂ ರಾಮಭಕ್ತರು. ಇಬ್ಬರೂ ಸಂಗೀತ ಕ್ಷೇತ್ರದ ಮಹಾನ್‌ ಸಾಧಕರು. ʼಗೋದಾವರಿʼಯನ್ನು ನಾನು ನಾಸಿಕ್‌ ನಲ್ಲಿ ಮಾತ್ರ ಕಂಡವಳು. ಅವಳು ಭದ್ರಾಚಲಕ್ಕೆ ಹರಿದುಬಂದಿದ್ದಾಳೆ. ತ್ರಯಂಬಕೇಶ್ಡರದಲ್ಲಿ ಹುಟ್ಟುವ ಗೋದಾವರಿ, ರಾಜಮಂಡ್ರಿಯ ಬಳಿ ಬಂಗಾಳಕೊಲ್ಲಿಯಲ್ಲಿ ಐಕ್ಯವಾಗುತ್ತಾಳೆ. ಪಶ್ಚಿಮದಿಂದ ಪೂರ್ವಾಭಿಮುಖ ಹರಿವು- ನಮ್ಮ ದೇಶದ ಹೆಚ್ಚನ ನದಿಗಳ ಹಾಗೆ. ಅವಳ ಹರಿವು ಸು ೧೪೬೫ ಕಿ,ಮೀ. ಅಂತೆ. ಅವಳನ್ನು ದಕ್ಷಿಣದ ಗಂಗೆಯಂತಲೂ ಕರೆಯುತ್ತಾರೆ. ಅಪಾರವಾದ ಅದರ ಪಾತ್ರ, ಎಲ್ಲಿಯೋ ಹುಟ್ಟಿ ಎಲ್ಲಿಗೋ ಸೇರುವ ಅದರ ಹರಿವು ಎಷ್ಟು ವಿಸ್ಮಯಕಾರಿ! ಈ ತೀರದ ಮೇಲೆ ರಾಮದಾಸು ಅವರು ಕಟ್ಟಿಸಿದ ಸೀತಾರಾಮಚಂದ್ರ ದೇವಾಲಯವಿದೆ. ರಾಮದಾಸು ಅವರ ಜೀವನದಲ್ಲಿ ನಡೆದ ಪವಾಡಗಳ ಬಗ್ಗೆ ಅವರ ಭಕ್ತಿಯ ತೀವ್ರತೆಯ ಬಗ್ಗೆ ನಮ್ಮ ಅಪ್ಪ ಬಹಳ ಕತೆಗಳನ್ನು ಹೇಳುತ್ತಿದ್ದರು. ಹೈದ್ರಾಬಾದಿನ ಗೋಲ್ಕಂಡದ ಕುತುಬ್‌ ಶಾಹೀ ಸುಲ್ತಾನನ ಬಳಿ ತೆರಿಗೆ ಅಧಿಕಾರಿಯಾಗಿದ್ದ ಅವರ ಸೋದರ ಮಾವನ ಬಳಿಗೆ ಕೆಲಸ ವನ್ನು ಅರಸಿಕೊಂಡು ಗೋಪಣ್ಣ ಬಂದಾಗ ಭದ್ರಾಚಲದ ತೆರಿಗೆ ಸಂಗ್ರಹ ಕಾರ್ಯವನ್ನು ಅವರಿಗೆ ಕೊಡಲಾಗುತ್ತದೆ. ಅಲ್ಲಿದ್ದ ರಾಮಚಂದ್ರ ದೇವಾಲಯದ ದುಃಸ್ಥಿತಿಯನ್ನು ಕಂಡು ರಾಮಭಕ್ತರಾದ ಗೋಪಣ್ಣನಿಗೆ ಬಹಳ ದುಃಖವಾಗುತ್ತದೆ. ಆಗ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಉಪಯೋಗಿಸಿಕೊಂಡು ರಾಮಚಂದ್ರದೇವಾಲಯವನ್ನು ಪುನರ್ನಿರ್ಮಾಣ ಮಾಡುತ್ತಾರೆ. ತರತರದ ಆಭರಣಗಳನ್ನು ಮಾಡಿಸುತ್ತಾರೆ. ಈ ಆಭರಣಗಳ ವಿವರ ಅವರ “ಇಕ್ಷಾಕುಕುಲ ಕೀರ್ತನೆಯಲ್ಲಿ ಬಹಳ ಸುಂದರವಾಗಿ ಮೂಡಿಬಂದಿದೆ. ತೆರಿಗೆಯ ಹಣ ದುರುಪಯೋಗಮಾಡಿಕೊಂಡಿದ್ದರಿಂದ ಸುಲ್ತಾನ ಅವರನ್ನು ಹದಿನಾಲ್ಕು ವರ್ಷಗಳ ಕಾಲ ಜೈಲಿನನಲ್ಲಿ ಇಡುತ್ತಾನೆ. ಈ ಸಂದರ್ಭದಲ್ಲಿ ಸ್ವತಃ ರಾಮಲಕ್ಷಮಣರೇ ಬಂದು ಜೈಲಿನಿಂದ ಬಿಡಿಸಿಕೊಂಡು ಹೋದರು ಎಂಬ ಸ್ವಾರಸ್ಯಕರವಾದ ಕಥೆ ಇದೆ. ರಾಮ ತನ್ನ ರಾಜಮುದ್ರೆಯನ್ನೇ ರಾಮದಾಸರ ತಂಬುಲದಲ್ಲಿ ಒತ್ತಿಸಿಕೊಂಡುರಾಜನ ಬಳಿಗೆ ಒಯ್ದನಂತೆ. ಆವೇಳೆಗಾಗಲೇ ಸುಲ್ತಾನನು ರಾಮ ಮುದ್ರೆ ಇರುವ ಅನೇಕ ಚಿನ್ನದ ನಾಣ್ಯಗಳು ಕನಸಿನಲ್ಲಿ ಕಂಡಿದ್ದನಂತೆ. ಹೀಗೆ ಅನೇಕ ಕತೆಗಳು ಹರಡಿವೆ. ರಾಮದಾಸರು ಜೈಲಿನಲ್ಲಿದ್ದಾಗ ರಚಿಸಿದ ಕೀರ್ತನೆಗಳು ʼದಾಶರಥಿ ಶತಕಂ ಮತ್ತ ರಾಮದಾಸ ಕೀರ್ತನೆಗಳುʼ ಎನ್ನುವ ಸಂಗ್ರಹದಲ್ಲಿ ಅಡಗಿವೆ ಎಂದು ಹೇಳಲಾಗುತ್ತದೆ. ಭದ್ರಾಚಲಕ್ಕೆ ೩೫ ಕಿ.ಮೀ ದೂರದಲ್ಲಿ ಪರ್ಣಶಾಲಾ ಎನ್ನುವ ಪ್ರದೇಶವಿದೆ. ಅಲ್ಲಿಯೂ ಒಂದು ರಾಮನ ದೇವಾಲಯ. ಸೀತಾರಾಮರು ವನವಾಸದ ಕೆಲದಿನಗಳನ್ನು ಇಲ್ಲಿ ಕಳೆದಿದ್ದರಂತೆ. ಚಿನ್ನದ ಜಿಂಕೆ, ಪರ್ಣಕುಟಿ, ಸೀತಾ ರಾಮರ ಬೊಂಬೆಗಳು, ಸನ್ಯಾಸಿ ರಾವಣ ಹೀಗೆ ಒಂದು ಕೃತಕ ವಲಯವನ್ನು ಸೃಷ್ಟಿಸಿ ಶೋಧಕರ ಭಾವಕೋಶವನ್ನು ಹಾಳುಮಾಡಿದ್ದಾರೆ. ದೇವಾಲಯದ ಮುಂದೆ ಅಪರಂಪಾರ ಗೋದಾವರಿ ಹರಿಯುತ್ತಿದ್ದಾಳೆ. ನಾವು ಹೋದದ್ದು ಮಳೆಗಾಲವಾದ್ದರಿಂದ ತುಂಬಿ ಹರಿಯುತ್ತಿದ್ದ ನದಿಯೊಳಗೆ ಇಳಿಯಲು ಸಾಧ್ಯವಾಗಲಿಲ್ಲ. ಯದುಕುಲಕಾಂಭೋಜಿ ರಾಗದ ʼಇಕ್ಷಾಕು ಕುಲ ತಿಲಕ ಕೀರ್ತನೆಯ ಸಾರಾಂಶ ಹೀಗಿದೆ "ಇಕ್ಷಾಕು ಕುಲವನ್ನು ಸಿಂಗರಿಸಲು ನಾನು ಏನಲ್ಲ ಮಾಡಿದೆ? ಈಗಲೂ ಮಾತನಾಡದೇ ಏಕೆ ಕುಳಿತಿರುವೆ ಶ್ರೀರಾಮಚಂದ್ರಾ ನನಗಿನ್ನಾರು ಗತಿ ನೀನಲ್ಲದೆ? ಭರತನಿಗೆ ಪಚ್ಚೆಯ ಪದಕ ಮಾಡಿಸಿದೆ ಅದಕ್ಕೆ ಹತ್ತು ಸಾವಿರ ವರಹಗಳನ್ನು ವೆಚ್ಚ ಮಾಡಿದೆ ಶತೃಘ್ನನಿಗೆ ಸೊಂಟದ ಪಟ್ಟಿ ಮಾಡಿಸಿದೆ (ಮೊಲತ್ರಾಡು) ಅದಕ್ಕೆ ತಗುಲಿದ ವೆಚ್ಚ ಹತ್ತುಸಾವಿರ ವರಹಗಳು ಲಕ್ಷ್ಮಣನಿಗೆ ಮುತ್ತಿನಹಾರ ತಗುಲಿದವು ಹತ್ತುಸಾವಿರ ವರಹ ಸೀತೆಗೆ ಮಾಡಿಸಿದೆ ಹುಣಿಸೆ ಚಿಗುರಿನ ಪದಕ ( ಚಿಂತಾಕು ಪದಕಮು) ಹಾರ ವೆಚ್ಚವಾಯಿತು ವರಹ ಹತ್ತು ಸಾವಿರ ಬಲು ಎಚ್ಚರಿಕೆಯಿಂದ ಮಾಡಿಸಿದ ನಿನಗೆ ಅಪೂರ್ವ ರತ್ನದ ಹಾರ ಧರಿಸಿಕೊಂಡು ನಲಿದಾಡುತ್ತಿದ್ದೀಯಲ್ಲ ಯಾರಪ್ಪನ ಗಂಟು ಎಂದುಕೊಂಡಿರುವೆ? ನಿಮ್ಮಪ್ಪ ದಶರಥ ಕೊಟ್ಟನೇ ನಿಮ್ಮಾವ ಜನಕ ಕಳಿಸಿದನ ನಾನು ಹೀಗೆ ಬೈಯುತ್ತಿರುವೆನೆಂದು ಬೇಸರಪಡಬೇಡ ಈ ಹೊಡೆತದ ನೋವು ತಾಳಲಾರದೇ ನಿನ್ನ ಹಳಿಯುತ್ತಿರುವೆ. ಭಕ್ತ ರಕ್ಷ ನೆಂದೇ ಹೆಸರಾದವನು ಈ ಭಕ್ತನನೂ ಸಲಹಲಾರೆಯಾ ಕೃಪಾಳು ಒಬ್ಬ ತೆರಿಗೆ ಅಧಿಕಾರಿಯ ರೀತಿಯಲ್ಲಿ ಶ್ರೀರಾಮನಿಗೆ ಲೆಕ್ಕ ಪತ್ರ ಒಪ್ಪಿಸುತ್ತಿದ್ದಾನೆ. ಈ ಅಹವಾಲಿನಲ್ಲಿ ಅಡ್ಡದಾರಿ ಹಿಡಿದೆ ನಿಜ ಆದರೆ ಅದು ನಿನಗಾಗಿಯೇ, ನಿನ್ನ ಕುಲದ ಮಹಿಮೆಯನ್ನು ಸಾರುವುದಕ್ಕಾಗಿಯೇ ಎಂಬ ಭಾವವಿದೆ. ಮಾಡಿದ ಅಪರಾಧಕ್ಕೆ ಅನುಭವಿಸುವ ದಂಡನೆ ಮತ್ತು ಭಕ್ತಿಯ ಔನ್ನತ್ಯ ಎರಡೂ ಇಲ್ಲಿ ಮಿಳಿತವಾಗಿದೆ. ನಿನ್ನ ಭಕ್ತನಾದುದಕ್ಕೆ ನನಗೆ ಸಿಕ್ಕ ಪ್ರತಿಫಲ ಇದುವೇ ತಾನೇ? ಎನ್ನುವ ನಿಂದಾಸ್ತುತಿಯೂ ಭಕ್ತಿಸಾಹಿತ್ಯದ ಒಂದು ಲಕ್ಷಣವೇ. ಸೀತಾರಾಮಚಂದ್ರ ದೇವಾಲಯದಲ್ಲಿ ರಾಮದಾಸರು ಮಾಡಿಸಿಟ್ಟರೆನ್ನಲಾದ ಒಡವೆಗಳನ್ಮು ಒಂದು ಸಣ್ಣ ಕೋಣೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅದನ್ನು ಅವರು ಮ್ಯೂಸಿಯಮ್ ಎನ್ನುತ್ತಾರೆ. ಅವರು ರಚಿಸಿದ ಗ್ರಂಥಗಳಾಗಲೀ ಅವರ ಜೀವನದ ಘಟ್ಟಗಳನ್ನು ಹೇಳುವ ಯಾವ ಚಿತ್ರಗಳಾಗಲೀ ಅಲ್ಲಿ ಕಾಣಲು ಸಿಗುವುದಿಲ್ಲ. ಎಲ್ಲ ಕಡೆ ಹಣ ಮಾತನಾಡುವಂತೆ ಇಲ್ಲಿಯೂ ಮಾತನಾಡುತ್ತದೆ. ಆದರೆ ಅಷ್ಟು ದುಬಾರಿಯೇನಲ್ಲ. ಯಾಕೆಂದರೆ ಇದು ಅಂತಹ ದೊಡ್ಡ ದೇವಸ್ಥಾನವಲ್ಲ. ಭದ್ರಾಚಲ ಊರಾಗಲೀ ದೇವಾಲಯವಾಗಲೀ ಅಷ್ಟು ಸ್ವಚ್ಛವಾಗಿಲ್ಲ. ಪುರಾತನ ವಸ್ತುಗಳ ಸಂಗ್ರಹಮಾಡುವ ಶಿಸ್ತನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕಾಗಿದೆ ಜೊರಾಮಿ ಇಂಗ್ಲಿಷ್ ಮೂಲ: ಮಾಲ್ಸಾವ್ಮಿ ಜೇಕಬ್ ಕನ್ನಡಕ್ಕೆ : ಭೂಮಿಕಾ.ಆರ್ ಒಂದು ವಿಮೋಚನೆಯ ಹಾಡಿನ ಪಲ್ಲವಿ. (ಈ ಬರಹ ದೀರ್ಘವಾಗಿದೆ. ನಿಮಗೆ ಇಷ್ಟ ಬಂದಷ್ಟು ಓದಿಕೊಳ್ಳಿ ಸ್ನೇಹಿತರೇ). ಈಶಾನ್ಯರಾಜ್ಯಗಳ ಸಂಸ್ಕೃತಿಯೆಂದರೆ, ಕಾಲೇಜು ವಾರ್ಷಿಕೋತ್ಸವಗಳಲ್ಲೋ, ಸಾಂಸ್ಕೃತಿಕ ಉತ್ಸವಗಳಲ್ಲೋ ಕಾಣಿಸಿಕೊಳ್ಳುತ್ತಿದ್ದ ನಾಗಾ ನೃತ್ಯಗಳು, ಬೊಂಬಿನ ನೃತ್ಯಗಳು, (ಮಿಜೋರಾಮ್) , ಮಣಿಪುರಿ ನೃತ್ಯಗಳು . ಇವುಗಳನ್ನೇ ನಾವು ಈಶಾನ್ಯದೇಶಗಳ ಸಂಸ್ಕೃತಿ ಎಂದು ತಿಳಿದುಕೊಂಡಿದ್ದೆವು. ಭೂಗೋಳ ಪಾಠಗಳಲ್ಲಿ 'ಸಪ್ತಕನ್ಯೆಯರ ನಾಡು', 'ಕೋಳಿ ಕುತ್ತಿಗೆ'ಯ ಪ್ರದೇಶ ಇಂತಹ ಹೆಸರುಗಳ ಹೊರತು, ಈಶಾನ್ಯದೇಶಗಳು ಭಾರತಕ್ಕೆ ಸಂಬಂಧವೇ ಇಲ್ಲದಂತೆ ನಮ್ಮ ಭಾವಕೋಶದಾಚೆಗೇ ಉಳಿದುಬಿಟ್ಟಿದ್ದವು. ಆದರೆ, ಅದು ಅಷ್ಟೇ ಅಲ್ಲ ಎಂದು ಅದರ ಅನೇಕ ಆಯಾಮಗಳನ್ನು ಅನಾವರಣ ಮಾಡಿರುವುದು ಭೂಮಿಕಾ ಅವರ 'ಜೊರಾಮಿ' ಕಾದಂಬರಿ. ಮಾಲ್ಸಾವ್ಮಿ ಜೇಕಬ್ ಅವರ ಮಿಜೋರಾಮಿನ 'ವಿಮೋಚನೆಯ ಹಾಡ'ನ್ನು ಕನ್ನಡಕ್ಕೆ ತಂದಿದ್ದಾರೆ. ಭೂಮಿಕಾ ಅವರ 'ಜೊರಾಮಿ' ಓದುತ್ತಿದ್ದ ಹಾಗೆ , ಅನೇಕ ನೆನಪುಗಳು ಸುಳಿದು ಹೋದವು. ಮೈಸೂರಿನ 'ಅಕ್ಕ' ಉತ್ಸವದಲ್ಲಿ ಮಣಿಪುರದ ಕನ್ಹಯ್ಯ ಲಾಲ್ ಥಿಯೇಟರಿನ ಪ್ರಸಿದ್ಧ ನಟಿ ಸಾಬಿತ್ರಿ ಹೀಸ್ನಾಮ್ ಮೈಸೂರಿನ ರಂಗಾಯಣದ ರಂಗದ ಮೇಲೆ ಬೆತ್ತಲಾದಾಗಿದ್ದಳು. ಸಭಾಗೃಹ ಅಕ್ಷರಶಃ ಸ್ತಬ್ಧವಾಗಿತ್ತು . ಮಾರನೆಯ ದಿನ ಈಶಾನ್ಯದೇಶಗಳ ಸಂಸ್ಕೃತಿಯ ಚರ್ಚೆ ನಡೆದಿತ್ತು ಎಂಬ ನೆನಪು. "ಇವರೆಲ್ಲ ಯಾವ ಭಾಷೆ ಆಡುತ್ತಾರೆ" ಎಂದು ನಾನು ಪಕ್ಕದ ಗೆಳತಿಯನ್ನು ಕೇಳಿದ್ದೆ. ಆಗ ಹಿಂದೆಯೇ ಕುಳಿತಿದ್ದ ಅರುಂಧತಿ ನಾಗ್ "ನೋಡಿ ನಮಗೆ ಈಶಾನ್ಯದೇಶಗಳ ಬಗ್ಗೆ ಎಷ್ಟು ಅಜ್ಞಾನವಿದೆ ಎಂದರೆ - ಅವರು ನಮ್ಮದೇ ದೇಶವಾಸಿಗಳು ಎಂಬುದನ್ನು ಮರೆಸುವಷ್ಟು" ಎಂದಿದ್ದರು. "Indian Army Rape us " ಎನ್ನುವ ಬ್ಯಾನರ್ ಹಿಡಿದು ಮಣಿಪುರದ ಹೆಂಗಸರು ಬತ್ತಲು ಮೆರವಣಿಗೆ ಹೊರಟ ಚಿತ್ರ. ಮಣಿಪುರದ ಉಕ್ಕಿನ ಮಹಿಳೆಯೆಂದೇ ಖ್ಯಾತಳಾದ ಇರೋಮ್ ಶರ್ಮಿಳಾ Armed Forces (Special Powers) Act, ವಿರುದ್ಧ ಹದಿನಾರು ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಚಿತ್ರ ಕಣ್ಣ ಮುಂದೆ ಬಂದಿತು. 'ಜೊರಾಮಿ' ಓದಿದಾಕ್ಷಣ ಈ ನೆನಪುಗಳೆಲ್ಲಾ ಮುನ್ನೆಲೆಗೆ ಬಂದದ್ದು ಕಾಕತಾಳೀಯವೇನಲ್ಲ. ಬತ್ತಲು ಮೆರವಣಿಗೆ ಒಂದು ಸಶಕ್ತ ಪ್ರತಿಭಟನೆಯೂ ಆಗಬಲ್ಲುದು. Scribbles on akka ಸಾಕ್ಷ್ಯ ಚಿತ್ರದಲ್ಲೂ ಬೆತ್ತಲಾದವಳು ಮಣಿಪುರದ ಸಾಬಿತ್ರಿಯೇ! ಅಕ್ಕನ ಬತ್ತಲು ಆತ್ಯಂತಿಕ ಬಿಡುಗಡೆಯ ಸಂಕೇತವೇ ಆದರೂ ಅದು ಒಂದು ಪ್ರತಿಭಟನೆಯ ಸ್ವರೂಪವೂ ಹೌದು! ಹೆಣ್ಣನ್ನು ಬತ್ತಲು ಮಾಡುವುದರ ಮೂಲಕವೇ ಹೀನಾಯವಾಗಿ ಒಂದು ಸಂಸ್ಕೃತಿಯನ್ನು/ ಜಾತಿಯನ್ನು ಹಣಿಯವುದಾದರೆ, ಬತ್ತಲ ಮೂಲಕವೇ ಉತ್ತರ ಕೊಡಬೇಕು. ಬಟ್ಟೆಯನ್ನು ಕಿತ್ತು ನಿರ್ವಾಣಗೊಳಿಸಬಹುದಾದರೆ, ನಿರ್ವಾಣದಿಂದ ಏನು ತಾನೇ ಕಿತ್ತುಕೊಳ್ಳಲು ಸಾಧ್ಯ? ( ಕೈಸಿರಿಯ ದಂಡವ ಕೊಳಬಹುದಲ್ಲದೆ) ಬತ್ತಲಾಗುವ ಪ್ರತಿಭಟನೆಯ ಮುಂದೆ ಬೇರೆ ಯಾವ ಸ್ವರೂಪದ ಪ್ರತಿಭಟನೆಯೂ ಎದುರಿಗಿರುವ ವ್ಯಕ್ತಿಯನ್ನು ಅಧೀರಗೊಳಿಸಲಾರದು. ಮೇಲಿನ ಹೆಣ್ಣುಮಕ್ಕಳ ಬತ್ತಲ ಪ್ರತಿಭಟನೆ ಪಿತೃಪ್ರಧಾನತೆಗೆ, ಸರ್ವಾಧಿಕಾರೀ ಪ್ರಭುತ್ವದ ಆಳ್ವಿಕೆಗೆ ಯಾವ ಕಾಲಕ್ಕೂ ಒಂದು ಸಶಕ್ತ ಸಂದೇಶವನ್ನು ರವಾನಿಸುತ್ತದೆ. ಭಾರತ ಶಾಂತಿಪ್ರಿಯ ದೇಶ. ಅದರದು ಅಲಿಪ್ತ ನೀತಿ ಎಂಬೆಲ್ಲಾ ಪಾಠವನ್ನು ನಾವು ಪಠ್ಯಗಳ ಮುಖೇನ ಕಲಿತಿದ್ದೆವು. ಆದರೆ ಅದು ಬುಡಮೇಲಾಗಿದ್ದು 'ಜೊರಾಮಿ'ಯಯನ್ನು ಓದಿದ ಮೇಲೆ. ಕೇವಲ ಸುದ್ದಿಯಾಗಿ ಉಳಿದಿದ್ದ ಮೇಲೆ ಹೇಳಿದ ಘಟನೆಗಳಿಗೆ ಜೀವ ಬಂದದ್ದು 'ಜೊರಾಮಿ'ಯನ್ನು ಓದಿದನಂತರವೇ. ಸಪ್ತಕನ್ಯೆಯರ ನಾಡಿನ ಸಂಸ್ಕೃತಿಯ ಮೇಲೆ ನಡೆದ ಬರ್ಬರ ಹತ್ಯೆ, ದಬ್ಬಾಳಿಕೆಯ ಪ್ರತೀಕವಾಗಿ 'ಜೊರಾಮಿ' ನಿಲ್ಲುತ್ತದೆ. 'ಜೊರಾಮಿ' ಯನ್ನು ಹಿಂದುಮುಂದು ಮಾಡಿದರೆ 'ಮಿಜೋರಾಮಿ'ಯೂ ಆಗುತ್ತಾಳೆ ಎಂದು ಶೈಲಜಾ ವೇಣುಗೋಪಾಲ್ ಹೇಳುತ್ತಾರೆ. 'ಜೊರಾಮಿ' ಕೇವಲ 'ಮಿಜೋರಾಮಿ' ಮಾತ್ರವಲ್ಲ. ಅವಳು ಇಡೀ ಈಶಾನ್ಯ ರಾಜ್ಯಗಳಮೇಲೆ ಕೇಂದ್ರ ಸರ್ಕಾರದ ಸೇನಾಪಡೆ ನಡೆಸಿದ ಹಲ್ಲೆಗೆ , ಅಮಾನುಷ ಕೃತ್ಯಕ್ಕೆ ಎದುರಾಗಿ ನಿಂತ ದಿಟ್ಟ ಪ್ರತಿಮೆಯಾಗಿ ಕಾಣುತ್ತಾಳೆ. ಜೀವ ವೈವಿಧ್ಯತೆಯಿಂದ ಕೂಡಿದ, ಬೆಟ್ಟಗುಡ್ಡ, ಜಲಪಾತಗಳಿಂದ , ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳಿಂದ ಕೂಡಿದ ಸುಂದರ ದೇಶ ಎಂದು ಮಿಜೋರಾಮ್ ನ್ನು ಗೂಗಲ್ ವರ್ಣಿಸುತ್ತದೆ. ಅದೇ ಸುಂದರ ಮಿಜೋರಾಮನ್ನು ಪ್ರಭುತ್ವದ ಅಹಂಕಾರವೆಂಬುದು ಕೊಲೆ, ಸುಲಿಗೆ, ರಕ್ತಪಾತ, ಅತ್ಯಾಚಾರಗಳಿಂದ ಹೇಗೆ ಕುರೂಪಗೊಳಿಸಿತ್ತು. ಅದನ್ನು ನೆಲಸಮ ಮಾಡಲಾಗಿತ್ತು ಎಂಬುದನ್ನು ಬಹಳ ಮಾರ್ಮಿಕವಾಗಿ ಕಟ್ಟಿಕೊಡುವ 'ಜೊರಾಮಿ' ಮಿಜೊರಾಮ್ ಭೂಪ್ರದೇಶದ ಅನನ್ಯ ಸೌಂದರ್ಯದ ವ್ಯಂಗ್ಯವೂ ಆಗಿದೆ. ಟಿಬೆಟಿಯನ್ ಮತ್ತು ಬರ್ಮನ್ ಭಾಷಾ ಪ್ರಬೇಧಕ್ಕೆ ಸೇರಿರುವ ಮಿಜೋರಾಮ್ ಭಾಷೆ ಎಲ್ಲ ರೀತಿಯಿಂದಲೂ ಅಖಂಡ ಭಾರತ ( pan indian) ಎಂದು ನಾವೇನು ಕರೆಯುತ್ತೇವೆಯೋ ಅದಕ್ಕೆ ಸರಿಹೊಂದುವುದೇ ಇಲ್ಲ. ಅಲ್ಲಿನ ಊಟ ಉಪಚಾರಗಳು, ಮನುಷ್ಯರ ಹೆಸರುಗಳು, ಉಡುಗೆತೊಡುಗೆಗಳು, ಭಾಷೆ - ಹೀಗೆ ಎಲ್ಲ ಸಾಂಸ್ಕೃತಿಕ ಸ್ವರೂಪ ನಮಗಿಂತ ಭಿನ್ನ. ಸಾಂಸ್ಕೃತಿಕವಾಗಿ ಮೇಲು ನೋಟಕ್ಕೆ ಚೀನಾ ದೇಶದ ವಾಸನೆಯನ್ನು ಹೊಂದಿರುವಂತೆ ಕಾಣುತ್ತದೆ. ಮಿಜೋ ಜನರನ್ನು ದಕ್ಷಿಣ ಚೀನಾದ ಮಂಗೋಲಿಯಾ ಪ್ರಸ್ಥಭೂಮಿಯಿಂದ ವಲಸೆ ಬಂದ ಜನಾಂಗವೆಂದು ಹೇಳಲಾಗುತ್ತದೆ. ಆದರೂ ಅದು ತನ್ನ ವಲಸೆ ಬಂದ ನಾಡಿಗಿಂತ ಬೇರೆಯದೇ ಆದ ಬಹಳ ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿದೆ ಎಂದೂ ತಿಳಿದು‌ಬರುತ್ತದೆ. ೧೯೬೬-೮೬ ರ ನಡುವಿನ ಕಾಲವನ್ನು ಮಿಜೋರಾಮಿನ ಕತ್ತಲಕಾಂಡ 'ರಾಮ್ ಬುವಾಯಿ' ( Troubled Land) ಎಂದು ಕರೆಯಲಾಗುತ್ತದೆ. ಈ ಕಾಲದ ಜನರ ಅನುಭವ ಕಥನ ಮಿಜೋ ಸಾಹಿತ್ಯದ ಪ್ರಮುಖ ಮೈಲಿಗಲ್ಲಾಗಿದೆ. ಭಾರತ ಕೇಂದ್ರ ಸರ್ಕಾರದ ಹಿಡಿತದ ಜೊತೆಗೆ, ಅಸ್ಸಾಮಿನ ಹಿಡಿತದಿಂದಲೂ ತಾವು ಸ್ವತಂತ್ರರಾಗಬೇಕೆಂದು ಮಿಜೋ ಜನಾಂಗ ತನ್ನ ಸ್ವಾಯತ್ತತೆಗಾಗಿ ಹೋರಾಡಿದ ಕಾಲ ಇದು. ಮಿಜೋ ಜನಗಳ ಈ ಹೋರಾಟವನ್ನು ಹತ್ತಿಕ್ಕಲು ಭಾರತದ / ಅಸ್ಸಾಮಿನ ಸೇನೆ ನಡೆಸಿದ ಜನಾಂಗ ಹತ್ಯೆಯ, ಅದರ ವಿರುದ್ಧ ಹೋರಾಡಿದ ಎಮ್ ಎನ್ ಎಫ್ ( ಮಿಜೋರಾಮ್ ನ್ಯಾಷನಲ್ ಫ್ರಂಟ್) ನಡುವಿನ ಸಂಘರ್ಷದ ಕಥೆಯೇ 'ಜೊರಾಮಿ' ಕಾದಂಬರಿಯ ಕೇಂದ್ರ. ಅದಕ್ಕೆ ಬಲಿಯಾದವರು ಮಾತ್ರ ಅಮಾಯಕರು ಎನ್ನುವುದನ್ನೂ ಇದು ಹೇಳುತ್ತದೆ. ಇಂತಹ ವಿಭಿನ್ನವಾದ ಸಂಸ್ಕೃತಿಯ ಜೊತೆಗೆ ನಾವು ಯಾವರೀತಿಯಲ್ಲಿಯೂ ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಹೀಗೆ ನಮ್ಮನ್ನು ಕನೆಕ್ಟ್ ಮಾಡುವುದು ಮನುಷ್ಯರ ನೋವು, ಸಾವು, ಸಂಕಟ, ಪ್ರೀತಿ,ಸ್ನೇಹ, ದೇಶಪ್ರೇಮ, ಅಂತಃಕರಣಗಳು. ವಿದ್ಯಾವಂತಳಾದ 'ಜೊರಾಮಿ' ಮೂಲಕ ಈ ಸಂಘರ್ಷದ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ. ಅವಳು ಇಂಗ್ಲಿಷ್ ಎಂ.ಎ. ಪದವೀಧರೆ, ಕಾಲೇಜು ಶಿಕ್ಷಕಿ. ಬಾಲ್ಯದಲ್ಲಿ ಸೈನಿಕರಿಂದ ಅತ್ಯಾಚಾರಕ್ಕೆ ಒಳಗಾಗಿರುತ್ತಾಳೆ. ಆ ಆಘಾತದ ಕರಿ ನೆರಳು ಅವಳನ್ನು ಕಾದಂಬರಿಯುದ್ದಕ್ಕೂ ಆವರಿಸಿಕೊಳ್ಳುತ್ತದೆ. ಹಿಂದೂ ಸಂಸ್ಕೃತಿಯಿಂದ ಭಿನ್ನವಾದ ಮಿಜೋರಾಮ್ ಸಂಸ್ಕೃತಿಯ ಮೇಲೂ 'ಪಾತಿವ್ರತ್ಯ'ದ ಗರ ಬಡಿದದ್ದು, ಅದರ ಕರಾಳ ಪ್ರಭಾವವನ್ನು ತೋರಿಸುತ್ತದೆ. ಪ್ರಭುತ್ವಕ್ಕಾಗಿ ನಡೆಯುವ ಹೋರಾಟದಲ್ಲಿ ಬಲಿಯಾಗುವವರೆಂದರೆ ಆಯಾ ಜನಾಂಗದ ಸಂಸ್ಕೃತಿಗೆ ಸೇರಿದ ಹೆಣ್ಣುಮಕ್ಕಳೇ. ಅವರ ಮೇಲೆ ಅತ್ಯಾಚಾರವೆಸಗಿ ಅವರ ಗಂಡ ಮಕ್ಕಳನ್ನು ಕೊಲ್ಲುವುದರ ಮೂಲಕ ಯುದ್ಧ ತನ್ನ ತೆವಲನ್ನು ತೀರಿಸಿಕೊಳ್ಳುತ್ತದೆ. ಇದು ಲಾಗಾಯ್ತಿನಿಂದ ನಡೆದು ಬರುತ್ತಿದೆ. ಅದರ ಪ್ರತೀಕವಾಗಿ ಜೊರಾಮಿ ಇದ್ದಾಳೆ. ಆದರೆ ಹಿಂಸೆ, ದಬ್ಬಾಳಿಕೆಗೂ ಒಂದು ಅಂತ್ಯವಿದ್ದೇ ಇದೆ. ಎಲ್ಲಾ ನಾಶಮಾಡಿದ ಮೇಲೆ ಉಳಿಯುವುದಾದರೂ ಏನು? ಭೌತಿಕ ಸಂಗತಿಗಳನ್ನಾದರೂ ನಾಶಗೊಳಿಸಬಹುದು, ನಾಶಗೊಳಿಸಿದ ಆನಂತರ ಉಳಿಯುವ ಬಯಲನ್ನು ಹೇಗೆ ನಾಶಗೊಳಿಸಲು ಸಾಧ್ಯ? ಕೇಂದ್ರಸರ್ಕಾರದೊಂದಿಗೆ ಶಾಂತಿ ಒಪ್ಪಂದವಾಗಿ ಮಿಜೋರಾಮಿಗೆ ಸ್ವತಂತ್ರ ರಾಜ್ಯದ ಪಟ್ಟಸಿಗುತ್ತದೆ. ಕಾದಂಬರಿ ಶಾಂತಿಯಿಂದ ಮುಕ್ತಾಯವಾಗುತ್ತದೆ. ಜೊರಾಮಿಗೆ ತನ್ನ ಗಂಡ ಸಂಗನ ಬಗೆಗಿನ ತಪ್ಪು ಕಲ್ಪನೆ ನಿವಾರಣೆಯಾಗುತ್ತದೆ. ಯುದ್ಧದ ವಿವರಗಳು, ಅದರ ಉಪಾಯಗಳು, ಗುಳೆ ಹೊರಡುವುದು, ಇಡೀ ಹಳ್ಳಿಗೆ ಹಳ್ಳಿಯೇ ಸುಟ್ಟು ಬೂದಿಯಾದಾಗ ಜನರ ಅತಂತ್ರ ಸ್ಥಿತಿ ಎಲ್ಲವೂ ಕಣ್ಣಿಗೆ ಕಟ್ಟುವಂತೆ ಒಂದು ಭೀಭತ್ಸ ಲೋಕವನ್ನು ಸೃಷ್ಟಿಸುತ್ತವೆ. ಆದರೆ ಇದರ ಎಡೆಯಲ್ಲೇ ಜೊರಾಮಿ ಮತ್ತು ಕಿಮಿಯ ಸ್ನೇಹ, ಕಷ್ಟಕಾಲದಲ್ಲಿ ನೆರವಾಗುವ ಗ್ರಾಮಸ್ಥರು, ತನ್ನ ಜೀವವನ್ನೇ ಪಣಕ್ಕಿಟ್ಟು, ಶಾಂತಿದೂತನಾಗಿ ಹೊರಡುವ ಪಾದ್ರಿ, ಮತ್ತೆ ಪ್ರೇಮದ ಟ್ರ್ಯಾಕಿಗೆ ಬರುವ ಜೊರಾಮಿ ಮತ್ತು ಅವಳ ಗಂಡನ ಅನುಬಂಧ- ಇವು ಕಾದಂಬರಿ, ಹಿಂಸೆಯ ಮೇಲೆ ಸಾಧಿಸಿದ ಜಯವಾಗಿದೆ. ಕೇಡಿಗೂ ಕೂಡ ಕೇಡುಗಾಲವಿದ್ದೇ ಇದೆ. ಕಾಲನ ದೈತ್ಯ ದಾಪುನಡಿಗೆಯ ಕೆಳಗೆ ಎಲ್ಲಾ ನಾಶವಾಗಲೇ ಬೇಕು. ಹಾಗೆ ನಾಶಹೊಂದಿದ ಬೂದಿಯಿಂದಲೇ ಹೊಸಹುಟ್ಟು ಅರಳಬೇಕು. ಕೇಡಿನ ಅಮಂಗಲಸ್ಥಿತಿಯಿಂದ, ಶಾಂತಿಯ ಮಂಗಲ ಸ್ಥಿತಿಗೆ ತಲಪುವ ಸೇತುವೆಯಾಗಿ ಯೇಟ್ಸ್, ಥಾಮಸ್ ಹಾರ್ಡಿ,ಕಾಫ್ಕಾ, ಜೇನ್ ಏಯರ್ ಬಂದಿದ್ದಾರೆ. ಜೊತೆಗೆ ಮಿಜೋ ಹಾಡುಗಳೂ ಕೂಡಿಕೊಂಡಿವೆ. ಎಲ್ಲವೂ ಸೇರಿ ಒಂದು ಅಪರೂಪದ ಘಮಲನ್ನು ಈ ಕೃತಿ ಹೊರಸೂಸುತ್ತದೆ. ಪ್ರಭುತ್ವ ಹಿಂಸೆಯ ಕಡೆಗಿದ್ದರೆ, 'ಮನುಷ್ಯಕುಲ' ವನ್ನು ಒಂದುಮಾಡುವ ಸಾಹಿತ್ಯ ಎಂದೂ ಶಾಂತಿ, ಪ್ರೀತಿಯ ಕಡೆಗೇ ತಾನೇ? ಈ ಕೃತಿಯಲ್ಲಿ ಮಿಜೋರಾಮಿನ ಭಾಷೆ ಕೆಲವು ಸಲ ಅನುವಾದಗೊಳ್ಳದೇ ಉಳಿದಾಗಲೂ ಹೃದ್ಗತವಾಗುತ್ತವೆ. (ಕೊನೆಯ ಪುಟದಲ್ಲಿ ಅನುವಾದ ಒದಗಿಸಿರುವುದು ಬಹಳ ಸಂಗತವಾಗಿದೆ) ಕಾರಣ ಅವು ಸೃಷ್ಟಿಸುವ ಪರಿಣಾಮಕಾರೀ ಸನ್ನಿವೇಶ, ಸಂದರ್ಭಗಳು. ಭೂಮಿಕಾ , ಹೀಗೆ ವಿಭಿನ್ನ ಸಂಸ್ಕೃತಿಯ ಕಥೆಯನ್ನು ಕನ್ನಡದ್ದೇ ಎನಿಸುವಂತೆ ಅನುವಾದ ಮಾಡಿದ್ದಾರೆ. ಅಪರಿಚಿತವಾದ ಸಂಸ್ಕೃತಿಯನ್ನು ನಮ್ಮ ಹತ್ತಿರಕ್ಕೆ ತಂದಿದ್ದಾರೆ. ಅವರಿಗೆ ಅಭಿನಂದನೆಗಳು. ನವಕರ್ನಾಟಕ ಪ್ರಕಾಶನ: ೨೦೨೫  ಅಕ್ಕನ ಅನುಭಾವ ಹೈದರಾಬಾದಿನಿಂದ ಶ್ರೀಶೈಲಕ್ಕೆ ರಸ್ತೆಯ‌ಮೇಲೆ ಪ್ರಯಾಣ ಮಾಡಬೇಕೆಂದರೆ ಸಂಜೆ ಐದುಗಂಟೆಯ ಒಳಗೆ ತಲಪುವ ಹಾಗೆ ಹೋಗಬೇಕು. ಆನಂತರ ಪಥಿಕರಿಗೆ ಆ ರಸ್ತೆ ಬಂದ್. ಅದು ಪೂರ್ವಘಟ್ಟಗಳ ಶ್ರೇಣಿಯಲ್ಲಿ ಬರುವ 'ನಲ್ಲಮಲ್ಲ' ಅರಣ್ಯ ಕ್ಷೇತ್ರ. ಹುಲಿಚಿರತೆಗಳಂತಹ ಕಾಡು ಪ್ರಾಣಿಗಳು ಓಡಾಡುತ್ತವೆ. ಅವುಗಳಿಗೆ ತೊಂದರೆಯಾಗಬಹುದೆಂದೋ ಅಥವಾ ಮನುಷ್ಯರಿಗೆ ಅವುಗಳಿಂದ ಅಪಾಯವಿದೆಯೆಂದೋ ಈ ನಿಯಮವನ್ನು ಆಂಧ್ರಪ್ರದೇಶದ ಸರ್ಕಾರವೇ ಮಾಡಿದೆ. ಇಪ್ಪತ್ತೊಂದನೇ ಶತಮಾನದ ಈ ವಿದ್ಯುನ್ಮಾನದ ಕಾಲದಲ್ಲಿಯೂ, ಜನರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಒಟ್ಟಿನಲ್ಲಿ ಸಂಜೆ ಐದರ ಒಳಗೆ ಕಾಡಿನ ಪ್ರದೇಶವನ್ನು ದಾಟಿಬಿಡಬೇಕು. ಇದು ಸರ್ಕಾರದ ಕಟ್ಟಾಜ್ಞೆ! ಸು. ಎಂಟುನೂರು ಒಂಭೈನೂರು ವರುಷಗಳ ಹಿಂದೆ ಅಕ್ಕ, ಪಶ್ಚಿಮ ಘಟ್ಟಗಳ ತಪ್ಪಲಿನಿಂದ ಹೊರಟು ಬಸವಕಲ್ಯಾಣ ಹಾದು, ಪೂರ್ವಘಟ್ಟಗಳ ಕಾಡಿನ ಮಧ್ಯದೊಳಗಿರುವ ಶ್ರೀಶೈಲದ ಚೆನ್ನಮಲ್ಲಿಕಾರ್ಜುನನ್ನು ನೋಡಿಕೊಂಡು, ಆನಂತರ ಕೃಷ್ಣಾನದಿಯ ತೀರದಲ್ಲಿರುವ ಕದಳಿ ವನದಲ್ಲಿ ಐಕ್ಯಳಾದಳು ಎನ್ನಲಾಗುತ್ತದೆ. ಒಬ್ಬಳೇ ಹೇಗೆ ಬಂದಳು? ಯಾವ ದಾರಿಯ ಮೂಲಕ ಬಂದಳು? ಇಂದಿಗೂ ಹುಲಿಚಿರತೆಗಳಿಂದ ನಿಬಿಡವಾದ ದುರ್ಗಮ ಕಾಡಿನೊಳಗೆ ಹೇಗೆ ಸಾಗಿದಳು? ಗದಗುಟ್ಟುವ ಚಳಿ, ಸುರಿಯುವ ಮಳೆ, ರಣ ಬಿಸಿಲು, ಉಟ್ಟುಕೊಂಡಿದ್ದು ಚೆನ್ನಮಲ್ಲಿಕಾರ್ಜುನನ ಬೆಳಕನ್ನೊಂದೇ! ಎಲ್ಲಾ ಹೇಗೆ ನಿಭಾಯಿಸಿದಳು? ಒಬ್ಬಳೇ ಬಂದಿರುವ ಸಾಧ್ಯತೆ ಇಲ್ಲವೆನಿಸುತ್ತದೆ. ಬಹುಶಃ ಜೊತೆಗೆ ಯಾರಾದರೂ ಇದ್ದಿರಬೇಕು. ಇಲ್ಲದಿದ್ದರೆ ಉಡುತಡಿಯಿಂದ ಕದಳಿಯವರೆಗೆ ಸು. ಇನ್ನೂರು ಮೈಲು ಪಯಣಿಸುವ ಕಾಲದಲ್ಲಿ ಅಕ್ಕ ರಚಿಸಿದಳೆನ್ನಲಾದ ವಚನಗಳನ್ನು ಯಾರಾದರೂ ಕೇಳಿಸಿಕೊಂಡು ಇರಬೇಕಲ್ಲ? - ಅವು ಸಂಗ್ರಹಕಾರರಿಂದ ನಮ್ಮವರೆಗೆ ತಲಪಲು? ಸುಸಜ್ಜಿತವಾದ ವಾಹನದಲ್ಲಿ ಚಲಿಸಿದರೂ ಸಂಜೆ ಐದರನಂತರ ಕಾಡಿನ ಬಗಲಿನುದ್ದಕ್ಕೂ ಇರುವ ಡಾಂಬರು ರಸ್ತೆಯಮೇಲೆಯೂ ಹಾದು ಹೋಗುವ ಹಾಗಿಲ್ಲ. ಅಕ್ಕ ಕಾಡಿನೊಳಗೇ ಇದ್ದಳಲ್ಲ? ಕೆರಹಳ್ಳಗಳಲ್ಲಿ ನೀರಡಿಕೆಯನ್ನು ತೀರಿಸಿಕೊಳ್ಳುತ್ತಾ, ಚಿಲಿಮಿಲಿಎಂದೋದುವ ಗಿಳಿಗಳನ್ನು, ಹಂಸಗಳನ್ನೂ, ಚೆನ್ನ ಮಲ್ಲಿಕಾರ್ಜುನನ ಪತ್ತೆ ಕೇಳುತ್ತಾ? "ಭಿಕ್ಷಾನ್ನಗಳು" ಕಾಡಿನಲ್ಲಿ ಎಲ್ಲಿ ದೊರೆಯಬೇಕು? ಹಣ್ಣು ಹಂಪಲುಗಳೇ ಪ್ರಕೃತಿ ನೀಡಿದ ಭಿಕ್ಷೆ ಇರಬೇಕು. ಅವುಗಳನ್ನು ತಿನ್ನುತ್ತಾ ಪಾಳುದೇಗುಲಗಳಲ್ಲಿ ಚೆನ್ನನೊಡನೆ ಮಲಗಿದಳು. ಅದು ಆತ್ಮಸಂಗಾತ. ಆದುದರಿಂದಲೇ ಹುಲಿ ಚಿರತೆ ಮುಂತಾದ ಕ್ರೂರಮೃಗಗಳು ಭಾದಿಸದೇ ಇದ್ದಿರಹುದು. "ಖಗಮೃಗವೆಲ್ಲ ನೀವೇ" ಎನ್ನುತ್ತಾಳಲ್ಲ? ಆ ರೂಪಗಳಲ್ಲಿ ಬಂದ ಚೆನ್ನ ಅವಳ ಚೆನ್ನೆಯನ್ನು ಹೇಗೆ ಭಾದಿಸಿಯಾನು? ನಿಶ್ಚಲವಾಗಿ ಕುಳಿತವರ ಬಳಿ ಪ್ರಾಣಿಗಳು ಸುಳಿಯುವುದಿಲ್ಲವಂತೆ. ಭಯದಿಂದ ಓಡುವವರನ್ನು ಮಾತ್ರ ಅಟ್ಟಿಸಿಕೊಂಡು ಹೋಗಿ ಹಿಡಿಯುತ್ತವಂತೆ. ಧ್ಯಾನದಲ್ಲಿ ಕುಳಿತವರ ದೇಹದ ಬೆವರಿನಿಂದ ಒಸರುವ ವಾಸನೆಗೆ ಹಾವುಗಳೂ ಕೂಡ ಆಕರ್ಷಿತವಾಗಿ ಬರುತ್ತವಂತೆ. ( ನೋಡಿ: 'ವಿಶ್ವಪ್ರಜ್ಞೆಯ ಉದಯ' - ದಾದಾ ಗಾವಂಡ್ : ಅನುವಾದ :ಸುಮಾದ್ವಾರಕಾನಾಥ್) ಶಂಕರ ಶಬರನಾಗಿ ಅರ್ಜುನನ ಜೊತೆ ಸೆಣೆಸಿ ಅವನಿಗೆ ಪಾಶುಪತವನ್ನು ಕರುಣಿಸಿದ ಪ್ರದೇಶವೇ ಶ್ರೀಶೈಲವೆಂದೂ ಆದುದರಿಂದಲೇ ಅವನು ಮಲ್ಲಿಕಾರ್ಜುನನಾದನೆಂದೂ ಐತಿಹ್ಯವಿದೆ. ಕಾಡಿನೊಳಗೆ ಮಲ್ಲಿಗೆಯ ಬಳ್ಳಿಗಳಿಂದ ಸುತ್ತುವರೆದ ಶಿವಲಿಂಗವೊಂದನ್ನು ಒಬ್ಬ ರಾಜ ಗುರುತಿಸಿದ್ದರಿಂದ ಅದಕ್ಕೆ ಈ ಹೆಸರು ಬಂದಿತೆಂದೂ ಇನ್ನೊಂದು ಐತಿಹ್ಯವಿದೆ, ಎಂದು ಗೂಗಲ್ ಹೇಳುತ್ತದೆ. 'ಅರ್ಜುನ' ಎನ್ನುವ ಪದಕ್ಕೆ 'ಬಿಳಿ' ಎನ್ನುವ ಅರ್ಥವೂ ಇದೆ. ಅವನು 'ಮಲ್ಲಿಗೆಯಂತೆ ಬಿಳಿ'. ಎ.ಕೆ ಆರ್ ಇದನ್ನೇ "as white as jasmine" ( speaking of Shiva) ಎಂದು ಅನುವಾದ ಮಾಡಿದ್ದಾರೆ. ನನಗೇನೋ ಅವನನ್ನು 'ಚೆನ್ನಮಲ್ಲಿಕಾರ್ಜುನ'ನೆಂದೇ ಉಳಿಸಿಕೊಂಡು ಅದಕ್ಕೊಂದು ಟಿಪ್ಪಣಿ ಕೊಡಬಹುದಿತ್ತು ಎಂದೇ ಎನಿಸುತ್ತದೆ. ಇರಲಿ, ಈ ಲಿಂಗ ಎರಡನೆಯ ಶತಮಾನದಲ್ಲಿ ಉದ್ಭವವಾಗಿರಬಹುದು, ಅದಕ್ಕೆ ಹದಿನಾಲ್ಕನೇ ಶತಮಾನದಲ್ಲಿ ದೇವಾಲಯವನ್ನು ಕಟ್ಟಲಾಗಿದೆ ( ವಿಜಯನಗರ ಸಾಮ್ರಾಜ್ಯ ಒಂದನೇ ಹರಿಹರ)ಎಂದು‌ ಮಂದಿರದ ಫಲಕಗಳು ಹೇಳುತ್ತವೆ. ಏನಾದರಾಗಲೀ ಅಕ್ಕ ಬರುವ ಕಾಲಕ್ಕಂತೂ ದೇವಾಲಯ ನಿರ್ಮಾಣವಾಗಿರುವುದು ಸಾಧ್ಯವಿಲ್ಲ. ಅನುಭವ ಮಂಟಪದಲ್ಲೇ, ಅಕ್ಕನಿಗೆ ಕದಳಿಗೆ ಹೋಗಲು ನಿರ್ದೇಶನವಾಗಿರುತ್ತದೆ. ( ಶೂನ್ಯಸಂಪಾದನೆ) ಅಕ್ಕ ಕದಳೀವನಕ್ಕೆ ಹೋಗುವ ದಾರಿಯಲ್ಲಿ ಶ್ರೀಶೈಲದಲ್ಲಿದ್ದ ಉದ್ಭವ ಲಿಂಗವನ್ನು ಕಂಡಮೇಲೆಯೇ ಅದಕ್ಕೆ ಚೆನ್ನಮಲ್ಲಿಕಾರ್ಜುನನೆಂಬ ಹೆಸರು ಬಂದಿರಬೇಕು. ಅಥವಾ ಅವಳೇ ಆ ಹೆಸರನ್ನು ಅವನಿಗೆ ಕೊಟ್ಟಳೋ ಇದು ಸಂಶೋಧನೆಗೆ ಸಂಬಂಧಿಸಿದ ವಿಷಯ. ಶ್ರೀಶೈಲ ಹಾಗೂ ಕದಳಿವನದ ನಡುವೆ ಅಪಾರ ಪಾತ್ರದ ಕೃಷ್ಣೆ ಹರಿಯುತ್ತಾಳೆ. ಶ್ರೀಶೈಲದಿಂದ ಕೃಷ್ಣಾನದಿ ದಂಡೆ ತಲಪಲು ಕಡಿದಾದ ಬೆಟ್ಟ ಏರಿ ಅಷ್ಟೇ ಕಡಿದಾದ ಜಾರಿನಲ್ಲಿ ಇಳಿಯಬೇಕು. ಈಗಂತೂ ರೋಪ್ ವೇ ಇದೆ. "ಅಕ್ಕ, ಕದಳೀವನಕ್ಕೆ ರೋಪ್ ವೇನಲ್ಲಿ ಹೋಗಿದ್ದಳಾ?" ರೋಪ್ ವೇ ತೊಟ್ಟಿಲೊಳಗೆ ಪಕ್ಕದಲ್ಲಿ ಕುಳಿತ ಇವನು ಜೋಕ್ ಹೊಡೆದ. ಹೌದು, ಅಕ್ಕ ಈ ಅಗಾಧ ಕೃಷ್ಣೆಯನ್ನು ಹೇಗೆ ದಾಟಿರಬಹುದು? ತೆಪ್ಪದ ಮೇಲೆಯೇ? ಈಜಿ ದಾಟಿರಬಹುದೇ? ಅಕ್ಕನಿಗೆ ಈಜು ಬರುತ್ತಿರಬಹುದೇ? ಈಗಂತೂ ಕದಳೀ ವನಕ್ಕೆ ಹೋಗುವುದು ಕಷ್ಟ. ತೆಲಂಗಾಣ ಸರ್ಕಾರದ ಪರವಾನಗಿ ಬೇಕು. ಅದು ಸಿಕ್ಕಮೇಲೆ , ದೋಣಿಯ ಚಾಲಕರು ಅಲ್ಲಿಗೆ ಕರೆದುಕೊಂಡು ಹೋಗಿ ಬಿಡುತ್ತಾರೆ. ಹಾಗೆ ಹೋದವರನ್ನು ವಾಪಸ್ಸು ಕರೆದುಕೊಂಡು ಹೋಗಲು ದೋಣಿ ಬರುವುದು ಮತ್ತೆ ಎರಡು ದಿನಗಳ ಆನಂತರವೇ, ಎಂದು ಅಕ್ಕನ ಗುಹೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ದೋಣಿಯವ ಹೇಳಿದ. ಅಕ್ಕಮಹಾದೇವಿಯ ಗುಹೆಗೆ ಶ್ರೀಶೈಲದ ತೀರದಿಂದ ಒಂದೂವರೆ ತಾಸಿನ ಅದ್ಭುತ ರಮ್ಯ ದೋಣಿಯ ಪಯಣ ಕೃಷ್ಣೆಯಮೇಲೆ. ಸುತ್ತಲೂ ದುರ್ಗಮವಾದ ನಲ್ಲಮಲ್ಲ ಹಸಿರು ಕಾಡು, ಬೆಟ್ಟಗಳು. ಕೆಳಗೆ ಅಪಾರವಾದ ನದಿ. ದೇಹ ಮನಸ್ಸು ಒಳಗೆ ವಿಶಿಷ್ಟವಾಗಿ ಅರಳಿದ ಭಾವ. ವ್ಯಕ್ತಿತ್ವ ವಿಕಸನವೆಂದರೆ ಇದೇ ಇರಬೇಕು. ದೋಣಿ ನಿಲುಗಡೆಗೆ ಬಂದಿತು. ದೋಣಿಯಿಂದ ದೋಣಿಗೆ ನೆಗೆದು ನೆಲದ ಮೇಲೆ ಕಾಲೂರಿದ ತಕ್ಷಣವೇ ನಮ್ಮನ್ನು ಗುಹೆ ಸ್ವಾಗತಿಸುವುದಿಲ್ಲ. ಅದಕ್ಕೂ ಒಂದರ್ಧ ಕಿ.ಮೀ ಏರು ನಡಿಗೆಯ ಪಯಣ- ಒರಟಾದ ಕಲ್ಲು ಹಾಸಿನ ಮೇಲೆ. ಕಾಡಿನ ಒಳಗೆ. ಕೃಷ್ಣೆಯಂತೂ ಉದ್ದಕ್ಕೂ ಜೊತೆಯಲ್ಲಿ ಇದ್ದೇ ಇದ್ದಳು. ಅಗಲವಾದ ಕೋಟೆ ಬಾಗಿಲಿನಂತೆ ಕೊರೆದು ನಿರ್ಮಾಣವಾದ ಗುಹೆ ಹೊಕ್ಕೆವು. ಅಲ್ಲೊಂದು ಅಕ್ಕನ ಮೂರ್ತಿಯನ್ನು ಇಡಲಾಗಿದೆ. ಇತ್ತೀಚೆಗೆ ಯಾರೋ ಇಟ್ಟಂತೆ ಕಾಣುತ್ತದೆ. ಧ್ಯಾನದ ಭಂಗಿ. ಎಲ್ಲವನ್ನೂ ಮೂರ್ತಗೊಳಿಸಿ, ವಾಚ್ಯಗೊಳಿಸಿ ನಮ್ಮ ಕಲ್ಪನೆಯ ರೆಕ್ಕೆಪುಕ್ಕಗಳನ್ನೆಲ್ಲಾ ಕತ್ತರಿಸಿ ಬಿಡುವ ಆಧುನಿಕ ಮನೋಸ್ಥಿತಿಯ ಬಗ್ಗೆ ಕೋಪ ಬರುತ್ತದೆ. ಸುಣ್ಣದ ಕಲ್ಲಿನ ಬಂಡೆಗಳನ್ನು, ನೀರು ಕೊರೆದು ಅದ್ಭುತ ಕಲಾಕೃತಿಯನ್ನಾಗಿ ಮಾಡಿದೆ. ವಿಶಾಲವಾದ ಗುಹೆಯ ಒಳಹೊಕ್ಕಾಗ ಮೂಲೆಯೊಂದರಲ್ಲಿ ಮುರಿದು ಬಿದ್ದ ಒಂದು ವಿಗ್ರಹವೊಂದು ಕಾಣಿಸಿತು. "ಬಹುಶಃ ಇದೇ ಮೂಲ ವಿಗ್ರಹ ಇರಬೇಕು" ಎಂದು ಇವ ಹೇಳಿದ. ಮುರಿದ ವಿಗ್ರಹದ ಬಳಿ ಯಾರೂ ಸುಳಿಯಲಿಲ್ಲ. ಎಲ್ಲರೂ ಹೊಸ ವಿಗ್ರಹದ ಮುಂದೆ ಭಕ್ತಿಭಾವದಿಂದ ಕೈಮುಗಿದು ನಿಂತಿದ್ದರು. ಗೈಡ್ ಆಗಿ ಬಂದಿದ್ದ ದೋಣಿಯವನೇ, ಅಕ್ಕನ ಬಗ್ಗೆ ತೆಲಗಿನಲ್ಲಿ, ಹಿಂದಿಯಲ್ಲಿ ಏನೇನೋ 'ಪುಂಗುತ್ತಿದ್ದ'. ಅವನ ಮಾತಿಗೆ ನಾವು 'ಕಿವುಡುಗೇಳ್ದು' ಒಳ ಹೊಕ್ಕೆವು. ಅಕ್ಕನ ಮುರಿದ ವಿಗ್ರಹದ ಮುಂದೆ ನನ್ನನ್ನು ನಿಲ್ಲಿಸಿ ಫೋಟೋ ತೆಗೆದು ಅದಕ್ಕೆ 'ತಂಗಿ'ಯೆಂದು ಇವನು ಕ್ಯಾಪ್ಷನ್ ಕೊಟ್ಟ. ನಲ್ಲಮಲ್ಲಕಾಡು, ಬೆಟ್ಟಗುಡ್ಡಗಳು ಗಹಗಹಿಸಿ ನಕ್ಕಿರಬೇಕು! ಗುಹೆಯ ಒಳಗೆ ಸುರಂಗದಂತಹ ಏರು. ಒರಟಾದ ಕಲ್ಲು ಹಾಸುಗಳು. ಒಬ್ಬರೇ ಹೋಗುವಷ್ಟು ಕಿರಿದಾದ ದಾರಿ. ಅಕಸ್ಮಾತ್ ತಲೆ ಎತ್ತಿದರೆ ಸುಣ್ಣದ ಕಲ್ಲಿನ ಹರಿತವಾದ ಕೆತ್ತನೆಗಳು , ನಮ್ಮ ಮುಖ ಮೂತಿ ಕೆತ್ತುವುದು ಖಚಿತ. ಉದ್ದವಾಗಿರುವವರಂತೂ ನೆಲಕ್ಕೆ ಮಲಗಿದಂತೆ ಬಗ್ಗಿ ಸಾಗಬೇಕು. ಕಗ್ಗತ್ತಲು, ಬಾವುಲಿಗಳ ವಾಸನೆ ಬೇರೆ. ನಮ್ಮ ಮೊಬೈಲ್ ಬೆಳಕಿನಲ್ಲಿ ದಾರಿತೋರಿಸುವವ "ದಮ್ಮುಕಟ್ಟಬಹುದು ಭಯಪಡಬೇಡಿ" ಎಂಬ ಸಂತೈಕೆ ಬೇರೆ. ಹತ್ತು ನಿಮಿಷ ಹೀಗೆ ನಡೆದರೆ ಕೊನೆಗೆ ಬಂಡೆಯ ಎರಡು ಕೊರಕಲಿನ ಮಧ್ಯೆ ಒಂದು ಶಿವಲಿಂಗ. ಅದಕ್ಕೆ ಮೇಲಿನ ಬಂಡೆಯಿಂದ ಒಸರುವ ನೀರು ಹನಿ ಹನಿಯಾಗಿ ಅಭ್ಯಂಗ ಎರೆಯುತ್ತದೆ. ಅದು ಉದ್ಭವ ಲಿಂಗವಂತೆ. ಇದು ಅದಕ್ಕೆ ಸಹಜ ಅಭಿಷೇಕವಂತೆ. ಮಾರ್ಗದರ್ಶಿ ಹೇಳುತ್ತಿದ್ದ. ಶಿವಲಿಂಗಕ್ಕೆ ಹಣೆಹಚ್ಚಲು ಅಡ್ಡಡ್ಡವಾಗಿ ಕೊರಕಲಿನೊಳಗೆ ಬಗ್ಗಿ ತೂರಿಕೊಳ್ಳಬೇಕು. ಲಿಂಗಕ್ಕೆ ಹಣೆಹಚ್ಚಿ ಅದೇರೀತಿ ಹೊರಬರಬೇಕು. ಗುಹೆಯೊಳಗೆ ಏರುವಾಗ ಇವನು ಧಡ್ಡನೆ ಬಿದ್ದ. ಸದ್ಯ ಏನೂ ಆಗಲಿಲ್ಲ. "ಅದೇನೋ ವಿಶೇಷವಾದ vibes ಇದ್ದವರು, ಗುಹೆಯೊಳಗೆ ಬೀಳುತ್ತಾರಂತೆ ಚಿಕ್ಕಪ್ಪಾ, ಅವನು ಹೇಳುತ್ತಿದ್ದ" ಎಂದು ಇವನ ಅಣ್ಣನ ಮಗಳು ಹೊರಬಂದಾಗ ಹೇಳಿದಳು. ಅದನ್ನೇನಾದರೂ ಇವನು ಕೇಳಿಸಿಕೊಂಡಿದ್ದಿದ್ದರೆ "ನಾನ್ಸೆನ್ಸ್ ಎಲ್ಲಾ ಮಾತಾಡಬೇಡ ಈಗ ನಡಿ. ಮುಂದೆ ನೋಡ್ಕೊಂಡು ಹೋಗು" ಎಂದು ಅವಳನ್ನು ಇವನು ಗದರಿಸಿರೋನು. ಸದ್ಯ ಕೇಳಿಸಿಕೊಳ್ಳಲಿಲ್ಲ ನಾನು ಬಚಾವಾದೆ. ಕದಳೀವನಕ್ಕೆ ಹೊಗುವ ಮುನ್ನ ಅಕ್ಕ ಇಲ್ಲಿ ಕುಳಿತು ತಪಸ್ಸು ಮಾಡಿರಬಹುದು. ಈ ಬಾವುಲಿಗಳ ವಾಸನೆ, ಉಸಿರು ಕಟ್ಟುವ ಇಕ್ಕಟ್ಟು, ಕಗ್ಗತ್ತಲು, ಕಾಡು, ಹೇಗಿದ್ದಿರಬಹುದು, ಒಂಬೈನೂರು ವರುಷಗಳ ಹಿಂದೆ!? ಅಕ್ಕ ಇವುಗಳನ್ನು ಹೇಗೆ ಎದುರಿಸಿರಬಹುದು? ಹಗಲಲ್ಲಿ ರುದ್ರಮನೋಹರವಾಗಿರುವ ಈ ಪರಿಸರ ಇರುಳಲ್ಲಿ ಎಷ್ಟು ಭಯಾನಕವಾಗಿರಬಹುದು? ನೀರಿಗೆ ಇಳಿಯಲೂ ಅರ್ಧಮೈಲು ಗುಡ್ಡ ಇಳಿಯಬೇಕು! ಅವಳ ನೀರಡಿಕೆ ಹೇಗೆ ತೀರಿರಬೇಕು? ಚೆನ್ನನೊಡನೆ ಅವಳ ಆತ್ಮಸಂಗಾತ ಅದೆಷ್ಟು ಗಾಢವಾಗಿರಬೇಕು! ಅಪ್ಪಿಕೊಂಡಳೇ ಅಸ್ಥಿಗಳು ನುಗ್ಗಾಗುವಂತೆ? ತನ್ನ ಕುಂಭಕುಚದ ಮೇಲೆ ಎತ್ತಿಕೊಂಡಳೇ? ಹಗಲಿನ ಕೂಟಕ್ಕೆ ಹೋರಿ ಬೆಂಡಾದಳೇ? ಇರುಳಿನ ಕೂಟಕ್ಕೆ ಇಂಬರಿದು ಹತ್ತಿದ ಅವಳ ದಾಹ ತಣಿಯಿತೇ? ಸಾವಿಲ್ಲದ, ರೂಹಿಲ್ಲದವನೊಡನೆ ಕುಲ ಸೀಮೆಯಳಿದು ಕೂಡಿದಳೇ? ವನವೆಲ್ಲ ನೀವೇ ಎಂದು ಹಲುಬಿ ಹಪಹಪಿಸಿ ವನದೊಳಗೇ ಸೇರಿಹೋದಳೇ ? ಯಾರಿಗೆ ಗೊತ್ತು? ಆದರೆ "ನೀ ಕೇಳಿದರೆ ಕೇಳು ಕೇಳದಿದ್ದರೆ ಮಾಣು. ನಾ ನಿನ್ನ ಹಾಡಿದಲ್ಲದೆ ಸೈರಿಸಲಾಪೆನಯ್ಯಾ" ಎಂದು ೩೭೫ ಕ್ಕೂ ಮಿಕ್ಕ ವಚನಗಳಲ್ಲಿ ಹರಿದ ವಿಪ್ರಲಂಬನ ಕೊನೆಗೂ ನಿಂತೇ ಹೋಯಿತಲ್ಲಾ? ಲಿಂಗೈಕ್ಯದಲ್ಲಿ ಮೌನವೇ ತಾನೇ ರಾಜ್ಯವಾಳುವುದು!  ಪ್ರಕೃತಿ ಮತ್ತು ಚಲನೆ: ಈ ಲಹರಿಯ ಬರಹಕ್ಕೆ ಕಾರಣ, ಸ್ನೇಹಿತರಾದ ಕೆ. ಸತ್ಯನಾರಾಯಣ ಅವರು, ತಮ್ಮ ಮಗಳು ಪ್ರಿಯಾ ಆರ್ಕಿಟಿಕ್ ಪ್ರದೇಶದಲ್ಲಿ ಕೈಗೊಂಡ ಮ್ಯಾರೆಥಾನ್ ಅನುಭವವನ್ನು ಹಂಚಿಕೊಂಡಿದ್ದರು. ಅದನ್ನು ಬರಹದ ಕೊನೆಗೆ ಇಲ್ಲಿ ಲಗತ್ತಿಸಿದ್ದೇನೆ. "ಮ್ಯಾರಥಾನ್ ರೇಸ್' ಒಂದು ಓಟ. ಮೈಲುಗಟ್ಟಲೆ ಓಡುವುದು. ಇದಕ್ಕೆ ಒಂದು ನಿರ್ಧಿಷ್ಟ ದಾರಿಯನ್ನು ಗುರುತು ಮಾಡಿರುತ್ತಾರೆ ( Trail). ಈ ದಾರಿಗೆ ನಮಗೆ ಅನುಕೂಲವಾದ ನಿರ್ಧಿಷ್ಟ ಜಾಗಗಳಿಂದಲೇ, ಓಟದೊಳಕ್ಕೆ ಸೇರಿಕೊಳ್ಳಬಹುದು. ಅದರಲ್ಲಿ ಸ್ಪರ್ಧೆಯ ಗೆರೆಗಳಿಲ್ಲ. ನಾವು ಕೈಗೊಂಡಷ್ಟೇ ವೇಗ. ತಲಪಿದಷ್ಟೇ ಗುರಿ. ಕಾಲಿದ್ದವರು ಮಾತ್ರ ಓಡುವುದಲ್ಲ. ಗಾಲಿಕುರ್ಚಿಯಲ್ಲಿ ಕುಳಿತವರೂ ಇಲ್ಲಿ ಓಡಲು ಸಾಧ್ಯವಿದೆ. ಹೀಗಾಗಿ 'ಕಿಂದರ ಜೋಗಿಯ ಕುಂಟರು' ನಿರಾಶರಾಗುವ ಕಾರಣವೇ ಇಲ್ಲ. ಇನ್ನೊಬ್ಬರೊಂದಿಗೆ ಸ್ಪರ್ಧೆ ಇಲ್ಲ. ನಮ್ಮ ನಮ್ಮ ಶಕ್ತ್ಯಾನುಸಾರ ಓಡುವುದು ಅಷ್ಟೇ. ಸ್ಪರ್ಧೆ ಇರುವುದಾದರೂ ಅದು ನಮ್ಮ ಸ್ವಶಕ್ತಿಯೊಡನೆ ಮಾತ್ರ. 'ಸ್ವ' ದ ಕ್ಷಮತೆಯೊಡನೆ ಮಾತ್ರ. ಹಿಂದೆ ಉಳಿದವರ ಬಗ್ಗೆ ಇಲ್ಲಿ ತಿರಸ್ಕಾರವಿಲ್ಲ, ಮುಂದೆ ಹೋದವರ ಬಗ್ಗೆ ಅಸೂಯೆ ಇಲ್ಲ. ಗೆದ್ದ ದೊಡ್ಡಸ್ತಿಕೆಯಾಗಲೀ, ಸೋತು ಸುಣ್ಣವಾಗುವುದಾಗಲಿ ಇಲ್ಲವೇ ಇಲ್ಲ. ಹಾಗಾಗಿ ಒಬ್ಬರನ್ನೊಬ್ಬರು ಓವರ್ ಟೇಕ್ ಮಾಡುವ ಪ್ರಮೇಯವೇ ಇಲ್ಲ. ತಮ್ಮ ಪಾಡಿಗೆ ತಾವು ತಮ್ಮ ವೇಗದ ಮೇಲಷ್ಟೇ ನಿಗಾ ಇಟ್ಟುಕೊಂಡು ಓಡುವುದು ! ಎಷ್ಟು ಆರೋಗ್ಯಕರ ನಿಲುವು! ಓಡುವ ಸಾಮರ್ಥ್ಯ ಎನ್ನುವುದೂ ಸಾಪೇಕ್ಷವಾದುದು. ಓಡಿ ಓಡಿ ಸುಸ್ತಾಗಿ ಇನ್ನು ಸಾಧ್ಯವೇ ಇಲ್ಲವೆಂದು ಬಿದ್ದಾಗ 'ಹುಲಿ 'ಬಂತು ಎಂದು ಯಾರೋ ಕೂಗಿದರು ಎಂದಿಟ್ಟುಕೊಳ್ಳಿ ಆಗ ಓಡಲು ದೇಹಕ್ಕೆ ಎಲ್ಲಿಲ್ಲದ ಶಕ್ತಿಬಂದು ಬಿಡುತ್ತದೆ. ಜೀವದ ಮೇಲಿನ ಆಸೆ ನಮಗೆ ಓಡಲು ಕಲಿಸುತ್ತದೆ. ಸ್ಪರ್ಧೆಗೆ ಇಷ್ಟು ಶಕ್ತಿಯಿಲ್ಲ. ಇದ್ದರೂ ಅದು ದ್ವೇಷ, ಸ್ವಾರ್ಥ, ಅಸೂಯೆಗಳ ಹೊಯ್ಲಿನಲ್ಲಿ ಕುಗ್ಗಿ ಹೋಗುತ್ತದೆ. ಹಾಗೆಂದು ಬೆಳವಣಿಗೆಗೆ ಕಾರಣವಾಗುವ ಆರೋಗ್ಯಕರ ಸ್ಪರ್ಧೆ ಬೇಡವೆಂದಲ್ಲ. ನಿರಂತರ ಚಲಿಸುವುದು ಜೀವಧಾರಣೆಯ ಸಂಕೇತ. ಚಲನೆ ಸೃಷ್ಟಿಯ ಬೀಜ. ಬದುಕಿನ ನಡೆ. ಬದುಕೆಂದರೆ ಮ್ಯಾರಥಾನ್ ಓಟವೇ,ಅದು ನಿಸರ್ಗದ ನಡೆ. ನಿಸರ್ಗ, ಸ್ಪರ್ಧೆಯಲ್ಲಿ ಜೂಜಾಡುವುದಿಲ್ಲ. ತನ್ನದೇ ನಿರ್ಧಿಷ್ಟ ಗತಿ, ಕ್ರಮದೊಳಗೆ ಚಲಿಸುತ್ತದೆ. ಗತಿ, ಕ್ರಮ ತಪ್ಪುವುದಿಲ್ಲ. ಅಕಸ್ಮಾತ್ ಗತಿ ತಪ್ಪಿದರೆ ಸುನಾಮಿ, ಭೂಕಂಪ, ಅಗ್ನಿ ಸ್ಫೋಟ. ಅದಕ್ಕೆ ನಾವೇ ಕಾರಣ. ನಿಸರ್ಗದ ಭಾಗವೇ ಆದ ನಾವು ನಮ್ಮ ಗತಿ ತಪ್ಪಬಾರದು. ತಪ್ಪಿದರೆ ದೇವರೇ ಗತಿ! ಸತ್ಯನಾರಾಯಣ ಅವರ ಮಗಳು ಸರಿಯಾಗಿಯೇ ಹೇಳಿದ್ದಾಳೆ. ನರಳಿಕೊಂಡು ಬಿದ್ದಲ್ಲೇ ಬಿದ್ದಿರುವುದೋ ಇಲ್ಲ ಒದರಿಕೊಂಡು ಓಡುವ ಕಾಲದ ಜೊತೆಗೆ ಸೇರಿಕೊಳ್ಳುವುದೋ ಎರಡರ ನಡುವಿನ ಆಯ್ಕೆ ನಮ್ಮದೇ ಆಗಿರುತ್ತದೆ.   ಕೊಟ್ಟು ಹೋಗುವುದೂ....ಬಿಟ್ಟು ನಡೆಯುವುದು.... ಬೆಂಗಳೂರಿನ ಬಾಡಿಗೆ ಮನೆಯ ಹೊಸ ವಾಸ್ತವ್ಯಕ್ಕೆಂದು ಸಟ್ಟುಗ, ತಟ್ಟೆ, ಬಾಣಲೆಗಳನ್ನು ಖರೀದಿಸುವಾಗ ಮೈ ಏರಿ ಬಂದದ್ದು ಉತ್ಸಾಹ ಸಂಭ್ರಮಗಳಲ್ಲ. ಬದಲಾಗಿ ಅಮರಿಕೊಂಡದ್ದು ಗಾಢ ವಿಷಾದ. ಎಲ್ಲವನ್ನೂ‌ ವಿಲೇವಾರಿ ಮಾಡಿ ಕೈ ಒದರಿಕೊಂಡು ಹೋಗುವ ಹೊತ್ತಿನಲ್ಲಿ ಹೊಸದಾಗಿ ಗುಡ್ಡೆ ಹಾಕಿಕೊಳ್ಳುತ್ತಿರುವುದಕ್ಕೆ ನಗೆ ಬರುತ್ತಿದೆ, ಜೊತೆಗೆ ಹೇವರಿಕೆಯೂ.... ಮೂವತ್ತೆಂಟು ವರುಷಗಳ ಹಿಂದೆ‌ ಮದುವೆಯಾದ ಹೊಸತರಲ್ಲಿ ಎಣ್ಣೆ ಬತ್ತಿ ಸ್ಟೌವ್ ನಲ್ಲಿ ಕೂಡ ಹೋಳಿಗೆ, ಸಜ್ಜಪ್ಪ ಮಾಡುತ್ತಿದ್ದ ಆ ಉಮೇದು ಈಗೆಲ್ಲಿ ಹೋಯಿತೋ?! ಈಗ , ಇದು ಯಾಕೆ? ಅದು ಯಾಕೆ? ಇರುವುದೇ ಸಾಕು ಇಲ್ಲದ್ದು ಯಾಕೆ ಬೇಕು ಎನ್ನುವ ನಿರುತ್ಸಾಹ. ನಮ್ಮ ನಡುವಿನ ಸಂವೇದನಾ ಶೀಲ ಲೇಖಕ, ರಂಗ ನಿರ್ದೇಶಕ, ಖಡಕ್ ಮನುಷ್ಯನೆಂದೇ ಹೆಸರಾದ ಎಸ್.ಎನ್.ಸೇತುರಾಮ್ ಅವರು ತಮ್ಮ ಸೀರಿಯಲ್ ಒಂದರಲ್ಲಿ "ಎಲ್ಲವನ್ನೂ ಕೊಟ್ಟು ಹೋಗುವುದಲ್ಲ ಬಿಟ್ಟು ಹೋಗುವುದು" ಎಂಬ ಮಾತನ್ನು ಪಾತ್ರಗಳ ಮುಖೇನ ಆಡಿಸುತ್ತಾರೆ. ಹೌದು, ಅದು ಬಿಟ್ಟು ಹೋಗುವುದೇ ಆದರೂ ಅದು ಕೊಟ್ಟು ಹೋಗುವುದು! ಕೊಟ್ಟು ಹೋಗುವುದಕ್ಕೂ ಬಿಟ್ಟು ಹೋಗುವುದಕ್ಕೂ ಬಹಳ ಅಂತರವಿದೆ. ಇನ್ನೆಷ್ಟು ದಿನ ಬಾಕಿ ಇದೆಯೋ ಎನ್ನುವ ವಿಷಾದದಲ್ಲಿ ಮುಂಬಯಿಂದ ಹೊರಡುವ ಸಂದರ್ಭದಲ್ಲಿ ನಾನು ಒಂದು ದಿನ ಅನಾಮತ್ತಾಗಿ ಕಪಾಟಿಗೆ ಕೈಹಾಕಿ ಒಂದು ಹತ್ತು ಹನ್ನೆಡರೆಡು ಸೀರೆಗಳನ್ನು ತಂದು ಸೋಫಾದಮೇಲೆ ಬಿಸಾಕಿ "ರಿಹಾ, ನಿನಗೆ ಇದರಲ್ಲಿ ಇಷ್ಟವಾದುದನ್ನು ಇಟ್ಟುಕೊಂಡು ಬೇರೆ ಯಾರಿಗಾದರೂ ಕೊಟ್ಟು ಬಿಡು " ಎಂದು ರಿಹಾನಾಳಿಗೆ ಹೇಳಿದೆ. ರಿಹಾನ ನನ್ನ 'ಕೊಳ್ಳಿಗೆ' ಬಿದ್ದು (ಕೊರಳಿಗೆ) ಗಳ ಗಳ ಅತ್ತು, "ಸಂಭಾಲಕೆ ಜಾನಾ... ಫೋನ್ ಕರ್ತೇ ರೆಹನಾ" ಎಂದು ದುಪ್ಪಟ್ಟಾದಲ್ಲಿ ಕಣ್ಣೊರೆಸಿಕೊಳ್ಳುತ್ತಾ ಚೀಲ ಹಿಡಿದು ಭಾರವಾಗಿ ಹೊರನಡೆದಿದ್ದಳು. ಹೀಗೆ ಸೋಫಾದಮೇಲೆ ಒಟ್ಡಿದ್ದ ಸೀರೆಗಳೆಲ್ಲಾ ಬೆಂಗಳೂರಿಗೆ ಹೊರಡುವ ಪೂರ್ವ ತಯಾರಿ ಇರಬಹುದು ಎಂದುಕೊಂಡಿದ್ದ ಗಂಡ ನನ್ನನ್ನು ಕಕಮಕವಾಗಿ ನೋಡಿದ್ದ. ಸೀರೆಗಳನ್ನು ಕೊಟ್ಟಿದ್ದೆ ನಿಜ. ಹಾಗೆ ಕೊಡುವಾಗ ಕೆಲವು ಹೊಸ ಸೀರೆಗಳನ್ನು ಕೊಟ್ಟಿದ್ದರೂ ಅವುಗಳಲ್ಲಿ ಬೆಲೆ ಬಾಳುವ ನನ್ನ ರೇಷ್ಮೆ ಸೀರೆಗಳು ಇರಲಿಲ್ಲ. ಕೊಟ್ಟು ಹೋಗುವುದೆಂದರೆ ಇದೇ ಏನೋ! ಕೊಡುವುದಾದರೆ ಯಾರಿಗೆ ಏನನ್ನು ಕೊಡಬೇಕು, ಬಿಡಬೇಕು ಎಂಬ ಆತ್ಯಂತಿಕವಾದ ತಾರತಮ್ಯವಿರುತ್ತದೆ. ಸೀರೆ ಪಾತ್ರೆಗಳನ್ನಾದರೆ ಯಾರಿಗಾದರೂ ಕೊಟ್ಟುಬಿಡಬಹುದು. ಆದರೆ ಚಿರಾಸ್ತಿಗಳನ್ನು ಚಿನ್ನದ ಆಭರಣಗಳನ್ನು ಕೊಡುವುದು ಮಾತ್ರ ನಮ್ಮ ವಾರಸುದಾರರಿಗೆ ಮಾತ್ರ. ಹೀಗೆ ಕೊಟ್ಟು ಹೋಗುವುದರಲ್ಲಿ ಆಯ್ಕೆ ಇರುತ್ತದೆ. ಆದರೆ ಬಿಟ್ಟು ಹೋಗುವುದೆಂದರೆ ಹಾಗಲ್ಲ. ದೇಹವನ್ನು ಬಿಡುವ ಹಾಗೆಯೇ! ನನಗೆ ಬೇಡವೆಂದಮೇಲೆ ಯಾರು ಒಯ್ದರೆ ತಾನೇ ಏನು ವ್ಯತ್ಯಾಸವಾಗುತ್ತದೆ ಎನ್ನುವ ಒಂದು ರೀತಿಯ ಅನಾಸಕ್ತಿ. ಅದಕ್ಕೆ‌ ಅಪಾರವಾದ ಅಧ್ಯಾತ್ಮಿಕ ತಯಾರಿ ಬೇಕು. ಬುದ್ಧ ಎಲ್ಲವನ್ನೂ ಬಿಟ್ಟು ನಡೆದ. ಕೊಡುವುದು ಹಕ್ಕಿನ ಮಾತು, ಬಿಡುವುದು ಪರಿತ್ಯಾಗದ ನಿರ್ಧಾರ. ಬಿಡುವುದರಲ್ಲಿ ಅಪರಿಗ್ರಹದ ಉದಾತ್ತತೆ ಇದೆ. ಕೊಡುವುದರಲ್ಲಿ ನಮ್ಮ ಲಾಲಸೆಯ ಸಾತತ್ಯವಿದೆ. ಮಾನಸ ಸರೋವರದಲ್ಲಿ ಮಹಿಳೆಯೊಬ್ಬರು ತಮ್ಮ ಒಡವೆಗಳನ್ನೆಲ್ಲಾ ಬಾಗಿನದ ರೂಪದಲ್ಲಿ ಅರ್ಪಿಸಿಬಿಟ್ಟರಂತೆ -ಕ್ಯಾಪ್ಟನ್ ಗೋಪಿನಾಥ್ ಹೇಳುತ್ತಿದ್ದರು. ತಟ್ಟೆ ಲೋಟ ಸಟ್ಟುಗಗಳನ್ನೇ ಕೊಟ್ಟು ನಡೆಯುವುದು ನಮಗೆ ಸಾಧ್ಯವಿಲ್ಲದಿರುವಾಗ ಇನ್ನು ಎಲ್ಲವನ್ನೂ ಬಿಟ್ಟು ನಡೆಯಲು ಸಾಧ್ಯವೇ?   ಸುದ್ದಿಸಂಗಾತಿಯ ಸಾಹಸಗಾಥೆ ಈಚೀಚೆಗೆ ನನಗೇಕೋ ಸ್ತ್ರೀವಾದವೆಂದರೆ ಮಹಿಳೆಯರು ತಮ್ಮ ಶಕ್ತಿಯ ಸಂಪೂರ್ಣ ಸಾಮರ್ಥ್ಯಕ್ಕೆ ಪೂರ್ತಿಯಾಗಿ ಅರಳುವುದೇ ಎನಿಸುತ್ತಿದೆ. ಹೀಗೆ ಎನಿಸುವುದಕ್ಕೆ ಕಾರಣ ಇತ್ತೀಚೆಗೆ ಬಿಡುಗಡೆಯಾದ ನಾಗಮಣಿ ಎಸ್. ರಾವ್ ಅವರ 'ಸುದ್ದಿ ಸಂಗಾತಿಯ ಸ್ವಗತ'. ನಾಗಮಣಿಯವರು ೧೯೫೭ ರಲ್ಲೇ ಪಿ.ಆರ್. ರಾಮಯ್ಯನವರು ಸ್ಥಾಪಿಸಿದ 'ತಾಯಿನಾಡು' ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇರಿಕೊಳ್ಳುತ್ತಾರೆ. ಅದಕ್ಕೂ ಒಂದು ವರ್ಷ ಮುಂಚೆ 'ಜನಮಿತ್ರ' (೧೯೫೬) ಪತ್ರಿಕೆಯಲ್ಲಿ ಕೇವಲ ಇಪ್ಪತ್ತು ವರುಷಗಳ ಯುವತಿ -ಸಹ ಸಂಪಾದಕರಾಗುತ್ತಾರೆ. ಅಂದರೆ ನಾನು ಹುಟ್ಟುವುದಕ್ಕೂ ಎರಡು ವರ್ಷಗಳ ಮುನ್ನವೇ- ೬೮ ವರುಷಗಳ ಹಿಂದೆ!! ಅವರು ಆ ಕಾಲಕ್ಕೆ ಹುಡುಗರ ಜೊತೆ ಕುಳಿತು ಅಭ್ಯಾಸ ಮಾಡಿ ಬಿ.ಎ. ಪದವೀಧರೆಯಾಗಿ ಪತ್ರಿಕಾರಂಗಕ್ಕೆ ಬಂದಿರುತ್ತಾರೆ. ನಮ್ಮ ದೇಶದಲ್ಲಿ ಒಂದೇ ಕಾಲದಲ್ಲಿ ಎಲ್ಲಾ ಶತಮಾನಗಳೂ ಬದುಕಿರುತ್ತವೆ ಎಂದು URA ಹೇಳುತ್ತಿದ್ದರು, ಅದು ನಿಜ. ಇವರಿಗಿಂತ ಹತ್ತು ವರ್ಷಗಳಷ್ಟೇ ದೊಡ್ಡವರು ನನ್ನಮ್ಮ. ಏಳನೇ ತರಗತಿ ಮುಗಿದ ನಂತರ ಶಾಲೆ ಬಿಡಿಸಿ ಅಜ್ಜ ಮನೆಯಲ್ಲಿ ಕೂರಿಸಿದರು. ಅಜ್ಜನ ಮೇಲೆ ಆಕ್ಷೇಪವಿಲ್ಲ. ತಮ್ಮ ಕಾಲವನ್ನು ಮೀರುವ ಧೈರ್ಯ ಹೆಚ್ಚಿನವರಿಗೆ ಇರುವುದಿಲ್ಲ. ಕಾಲದ ಸವಾಲಿಗೆ ಬಾಗಿ ಹದಿನಾಲ್ಕು ವರ್ಷಕ್ಕೇ ಮದುವೆ ಮಾಡಿಬಿಟ್ಟರು. ಅಮ್ಮ ಕೂಡ ತುಂಬಾ ಬುದ್ಧಿವಂತೆಯಾಗಿದ್ದಳು. ಆದರೆ ಅವಳಿಗೆ ಅವಳೊಳಗಿನ ಶಕ್ತಿಯ ಸಾಮರ್ಥ್ಯಕ್ಕೆ ಪೂರ್ಣವಾಗಿ ಅರಳಲು ಸಾಧ್ಯವಾಗದೇ ಹೋಯಿತು. ಇಂತಹ ಕಾಲದಲ್ಲೇ ನಾಗಮಣಿಯವರು ಬಿ.ಎ. ಮಾಡಿ, ಬಿ.ಎಲ್ ಮಾಡಿ, ಪತ್ರಕರ್ತೆಯಾಗಿ, ಆಕಾಶವಾಣಿಯ ಸುದ್ದಿವಾಚಕಿಯಾಗಿ, ಲೇಖಕಿಯರ ಸಂಘವನ್ನು ಕಟ್ಟಿ ಬೆಳೆಸಿ ಅದರ ಅಧ್ಯಕ್ಷೆಯೂ ಆಗಿ ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ರೂಪಿಸಿ ತನ್ನ ಕಾಲದ ಅನೇಕ ಮಹಿಳೆಯರಿಗೆ ಅವರವರ ಶಕ್ತಿಯ ಸ್ವರೂಪವನ್ನು ಕಂಡುಕೊಳ್ಳಲು ಮಾರ್ಗ ಹಾಕಿಕೊಟ್ಟರು. ನಾಟಕವನ್ನು ರಚಿಸಿದರು. ಪಾತ್ರವನ್ನೂ ಮಾಡಿದರು! ಹೀಗೆ ನನ್ನಮ್ಮನನ್ನಾಗಲೀ, ನನ್ನ ದೊಡ್ಡು, ಚಿಕ್ಕಿಯರನ್ನಾಗಲೀ ನಾನು ಕಲ್ಪಸಿಕೊಳ್ಳಲಾದೀತೇ? ಅಬ್ಬಾ! ಎನಿಸುತ್ತದೆ. ಅವರ ಈ ಸಾಧನೆಗೆ ಅವರ ತಂದೆ ಮತ್ತು ಅವರ ಗಂಡ ಸತ್ಯಾಜಿ ರಾವ್ ಅವರು ನೀಡಿದ ಒತ್ತಾಸೆಯೂ ಕಾರಣವಿರಬಹುದು. ಒತ್ತಾಸೆ ನೀಡದಿದ್ದರೂ ಅದನ್ನು ಮೀರಿ ಬೆಳೆಯುವ ಶಕ್ತಿ ನಾಗಮಣಿಯವರಿಗೆ ಇತ್ತೇನೋ. ಯಾವುದೇ ಕೌಟುಂಬಿಕ ಸಂಘರ್ಷವಿಲ್ಲದೇ ಸುಲಲಿತವಾಗಿ ಗೆದ್ದು ಬಂದರು. ಮಹಿಳೆಯರ ಮಾದರಿಯಾದರು. ಅವರ ಕೌಟುಂಬಿಕ ಪರಿಸರ ತನ್ನ ಕಾಲಕ್ಕಿಂತ ಒಂದೈವತ್ತು ವರ್ಷಗಳಾದರೂ ಮುಂದಿದ್ದಿತು. ಪ್ರತಿಯೊಬ್ಬ ಮಹಿಳೆಯೂ ಹೀಗೆ ಕಾಲಕ್ಕೆ ಸೆಡ್ಡು ಹೊಡೆದು, ಅದನ್ನು ಮೀರಿ ನಿಲ್ಲುವುದಾದರೆ, ಮುಂದೆ ಓಡಲು ಸಾಧ್ಯವಾದರೆ ಪಿತೃಪ್ರಧಾನತೆಯ ಯಾಜಮಾನ್ಯದ ಎದುರು ಮೇಜು ಗುದ್ದಬೇಕಾಗಿಲ್ಲ, ಮಹಿಳೆಯ ದಯನೀಯ ಸ್ಥಿತಿಯನ್ನು ಸ್ಥಾಪಿಸಬೇಕಾಗಿಲ್ಲ, ಚಳವಳಿ ಹೂಡಬೇಕಾಗಿಲ್ಲ ಎಂದೇ ಎನಿಸುತ್ತದೆ. ಹಾಗೆಂದಾಕ್ಷಣ ಇಲ್ಲಿ ನಾನು ಚಳವಳಿಗಳ ಮಹತ್ವವನ್ನು ಅಲ್ಲಗಳೆಯುತ್ತಿಲ್ಲ. ನಮ್ಮ ಹೆಚ್ಚಿನ ಮಹಿಳೆಯರಿಗೆ ಗಂಡ ಮಕ್ಕಳು ಮನೆಯನ್ನು‌ ನಿರ್ವಹಿಸುವುದೇ ದೊಡ್ಡ ಸಂಗತಿ.ಅದಕಾಗಿ ಹೊರಬರಲು ನೂರೆಂಟು ಕುಂಟು ನೆಪಗಳು. ಗಂಡಂದಿರ ಹೆಗಲ ಮೇಲೆ ಬಂದೂಕನಿಟ್ಟು ಕೆಲಸ ಸಾಧಿಸುತ್ತೇವೆ. ಅಂತಹ ಮಹಿಳೆಯರಿಗೆ ನಾಗಮಣಿ ಗುರಿ ಇಟ್ಟು ಹೊಡೆದ ಒಂದು ಉತ್ತರದಂತಿದ್ದಾರೆ. ಗಂಡುಮಕ್ಕಳ ನಡುವೆ ಕಲಿಯುವಾಗ, ನೌಕರಿ ಮಾಡುವಾಗ, ಪತ್ರಿಕಾ ವರದಿಗೆ ಹೋಗುವಾಗ ಅವರು ಎದುರಿಸಿದ ಸಮಸ್ಯೆಗಳು ನಿಭಾಯಿಸಿದ ರೀತಿ, ಆಕಾಶವಾಣಿಯಲ್ಲಿ ಪ್ರಾಮಾಣಿಕವಾಗಿ ದುಡಿದು ಗೆದ್ದ ದೊಡ್ಡಸ್ತಿಕೆ, ಸಾಮಾಜಿಕ ಕಾರ್ಯಗಳಿಗಾಗಿ ದೊರೆತ ಕಿರೀಟಗಳು ಈ ಎಲ್ಲವುಗಳ ಮೂಲಕವೇ ಅರಳಿದ ರೀತಿ ಎಲ್ಲವನ್ನೂ ಬಹಳ ಅಚ್ಚುಟ್ಟಾಗಿ, ಆರ್ದ್ರವಾಗಿ ಅನನ್ಯವಾಗಿ ಮಾಲತಿ ಭಟ್ ಸಂಯೋಜಿಸಿಕೊಟ್ಟಿದ್ದಾರೆ. ಮಾಲತಿ ಈ ಸಾಹಸವನ್ನು ಕೈಗೊಳ್ಳದಿದ್ದರೆ ನಾಗಮಣಿಯವರ ಮೇರು ವ್ಯಕ್ತಿತ್ವ ಕೇವಲ ಅವರ ಪರಿಚಿತ ವಲಯಗಳಲ್ಲೇ ಪಸರಿಸಿ ಮರೆಯಾಗಿಬಿಡುತ್ತಿತ್ತು. ಅಂತಹ ಘನವನ್ನು ಹಿಡಿಯಲು ಯತ್ನಿಸಿರುವ ಮಾಲತಿ, ಅದನ್ನು ಪ್ರಕಾಶಕ್ಕೆತಂದ ಪೂರ್ಣಿಮಾ ರಾಜಾರಾವ್ ಅವರನ್ನು ಎಷ್ಟು ಪ್ರಶಂಸಿಸಿದರೂ ಸಾಲದು. 'ಸುದ್ದಿಸಂಗಾತಿಯ ಸ್ವಗತ'ವನ್ನು ಮಹತ್ವಾಕಾಂಕ್ಷಿಗಳಾದ ಎಲ್ಲಾ ಮಹಿಳೆಯರೂ ಓದಲೇ ಬೇಕು. ನನಗಂತೂ ನಾಗಮಣಿಯವರ ಮೇಲೆ ತುಂಬಾ ಲವ್ ಆಗಿಬಿಟ್ಟಿದೆ. ಅದೇ ಗುಂಗಿನಲ್ಲಿದ್ದೇನೆ. ಇದಕ್ಕೆ ಕಾರಣರಾದ ಮಾಲತಿ ಭಟ್ ಮತ್ತು ವಿಕಾಸ ಪ್ರಕಾಶನದ ಪೂರ್ಣಿಮಾ ಮೇಡಂ ಅವರಿಗೆ ಅಭಿನಂದನೆಗಳು. ಶುಭಾಶಯಗಳು.ಧನ್ಯವಾದಗಳು.   ಚಂಪಾವತಿಯವರ ಕಾದಂಬರಿ "ತಲ್ಲಣ" ಮತ್ತು ಸ್ತ್ರೀವಾದದ ಇತರ ತುಣುಕು ವಿಚಾರಗಳು: 1989 ರಲ್ಲಿ ನಾನು ಸ್ತ್ರೀವಾದೀ ಅಧ್ಯಯನ ಕೈಗೊಂಡಾಗ ಕನ್ನಡದಲ್ಲಿ ಒಂದು ಪುಸ್ತಕವೂ ಇರಲಿಲ್ಲ. ಜರ್ಮನ್ ಗ್ರೀರ್,ಷುವಾಲ್ಟರ್, ಕೇಟ್ ಮಿಲೆಟ್, ಸಿಮೊನ್ ದ ಬೊವಾ ಹೀಗೆ ಇಂಗ್ಲಿಷಿನಲ್ಲಿ ಓದಿಕೊಂಡು ಕನ್ನಡಿಸಿ ವೈಚಾರಿಕ, ಅಸ್ತಿತ್ವವಾದೀ, ಮಾರ್ಕ್ಸ್ವಾದಿ ಸ್ತ್ರೀವಾದ ಎಂದೆಲ್ಲಾ ವಿಭಾಗಿಸಿಕೊಂಡು ವಿಜಯಾ ದಬ್ಬೆಯವರ ಮುಂದೆ ಇಟ್ಟಿದ್ದೆ. ಅವರು ಸರಿ ಎಂದು ಬೆನ್ನು ತಟ್ಟಿದ್ದರು. ಈಗ ೩೫ ವರುಷಗಳ ನಂತರ ಕಾದಂಬರಿಗಳೇ ಬರುತ್ತಿವೆ. ಈ ಬೆಳವಣಿಗೆ ಖುಷಿ ತಂದಿದೆ. ಚಂಪಾವತಿಯವರಿಗೆ ಅಭಿನಂದನೆಗಳು. ಈ ಕಾದಂಬರಿಯನ್ನು ಓದಿದಾಕ್ಷಣ ಯೇಟ್ಸ್ ನ ಸೆಕೆಂಡ್ ಕಮಿಂಗ್ ಸಾಲುಗಳು "Things fall apart centre cannot hold" ನೆನಪಾದವು. ಎಲ್ಲ ಚಳವಳಿಯ ಸ್ವರೂಪವೂ ಇಲ್ಲಿ ಚಲ್ಲಪಿಲ್ಲಿಯಾಗಿವೆ. ಒಂದು stabilty ಮತ್ತು order ಇಲ್ಲವಾಗಿದೆ. ಈ ಕಾದಂಬರಿ ಪ್ರಾರಂಭವಾಗುವುದೇ ಒಂದು Shattered, scattered ಆದ ಸ್ಥಿತಿಯಿಂದ, ಬದುಕಿಗೆ ಒಂದು ಚೌಕಟ್ಟು ಇಲ್ಲ ಎನ್ನುವ ಅರಿವಿನ‌ ಆಸ್ಫೋಟದ ಭ್ರಮ ನಿರಸನ ಸ್ಥಿತಿಯಿಂದ, ಈ ತಲ್ಲಣಗಳು ಗೊಂದಲಗಳು ಹೊಸಕಾಲದ ಮುನ್ಸೂಚನೆಯೂ ಇತಬಹುದು. ಚೌಕಟ್ಟು ಹರಿದುಕೊಂಡರೆ ಬಯಲೇ ತಾನೇ? ಫ್ಲೇವಿಯಾ ಈ ಹೋರಾಟವನ್ನು ಒಂದು ರೀತಿ ಹೋಲಿಸ್ಟಿಕ್ ಆಗಿ ನೋಡಬೇಕು ಎನ್ನುತ್ತಾರೆ . ಇದು The conflict between powerful and the powerless. ಎನ್ನುತ್ತಾರೆ. ಯಾಕೆಂದರೆ ಗಂಡಾಳಿಕೆ ಎಂದಾಕ್ಷಣ ಅದು ಪುರುಷನೇ ಆಗಬೇಕಾಗಿಲ್ಲ. ಇಲ್ಲಿ ಬರುವ ಪಲ್ಲವಿ ಅವಳು ಪಿತೃಪ್ರಧಾನತೆಯ ಸಂಕೇತವೇ ಆಗಿದ್ದಾಳೆ. ಹೀಗಾಗಿ ಹೋರಾಟ ಚಳವಳಿ ಎನ್ನುವುದು ಇದು ಲಿಂಗ ಜಾತಿ ವರ್ಣ ವರ್ಗವನ್ನು ಮೀರಿದ್ದು. ಲೇಖಕಿ ಚೌಕಟ್ಟು ಇಲ್ಲ ಎನ್ನುವುದು ಆ ಚೌಕಟ್ಟನ್ನು ಹರಿದು ಕೊಳ್ಳುವ ಪ್ರಕ್ರಿಯೆಯೇ ಆಗಿದೆ. ಎಲ್ಲ ಹೋರಾಟಗಳ ಮೂಲ ಒಂದೇ. ಎಂದು ಅಖಂಡವಾಗಿ ನೋಡುವುದೇ. ಚಲ್ಲಾಪಿಲ್ಲಿಯಾಗಿ ಚದುರಿಹೋಗಿರುವ ವಿವಿಧ ಸಂಘಟನೆಗಳನ್ನು ಒಗ್ಗೂಡಿಸುವುದಾಗಿದೆ. ಆಮೂಲಕವೇ ಒಂದು ಅರ್ಥಪೂರ್ಣ ಹೋರಾಟ ಸಾಧ್ಯ ಎಂದು ಗ್ರಹಿಸಬಹುದಾಗಿದೆ. ಈ ಕಾದಂಬರಿ ಓದಿದಾಕ್ಷಣ ನನಗೆ ಇದರಲ್ಲಿ ಸ್ತ್ರೀಪರವಾದ ಚಳವಳಗಳ ಜೋಷ್ ಕಾಣಿಸಿತು. ಅದರ ಜೊತೆಗೆ ವಿಷಾದವೂ ಸೇರಿಕೊಂಡಿದೆ. ಚಳವಳಿಯ ಸ್ವರೂಪ, ಮುಂಗಾಣ್ಕೆ, ಅದರ ಬಿಕ್ಕಟ್ಟುಗಳು, ಅದರ ದುರುಪಯೋಗ, ಪ್ರಾಯೋಗಿಕ ಸಮಸ್ಯೆಗಳು, ಪರ್ಯಾಯಗಳು ಎಲ್ಲವೂ ಲಲಿತಾ ಮತ್ತು ಸುನೀತಾ ಎಂಬ ಎರಡು ಪಾತ್ರಗಳ ಮೂಲಕ ಇಲ್ಲಿ ಚರ್ಚಿತವಾಗಿವೆ. ಶಿವಗಂಗಾದಲ್ಲಿಯೇ ಇದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ ಎನಿಸಿತು. ಇಲ್ಲಿ ಇದು loud ಆಗಿದೆ. ೯೦ ರ ದಶಕದಿಂದಾಚೆಗೆ ಸ್ತ್ರೀವಾದದಲ್ಲಿ ಒಂದು paradigm shift ನ್ನು ಕಾಣುತ್ತೇವೆ. ಅದೇನೆಂದರೆ victim mode ನಿಂದ survivor mode ಗೆ ತಿರುವನ್ನು ಪಡೆದುಕೊಂಡಿದ್ದು. ೩೫ ವರುಷಗಳ ನಂತರ ಈಗ ಸ್ತ್ರೀವಾದ ಇನ್ನೊಂದು ತಿರುವನ್ನು ಪಡೆದುಕೊಳ್ಳುವುದಕ್ಕೆ ಕಾಲ ಹದವಾಗಿದೆ ಎನಿಸುತ್ತದೆ. ಈ ಸ್ತ್ರೀಪರ ಹೋರಾಟಕ್ಕೆ ಈಗ ಅನೇಕ ಧಾರೆಗಳು LGBTQ, ಲೈಂಗಿಕ ಕಾರ್ಯಕರ್ತರು (ಮಹಿಳಾ‌ ಮತ್ತು ಪುರುಷ)ಮುಸ್ಲಿಂ ಮುಂತಾದ ಅಲ್ಪಸಂಖ್ಯಾತರು ಸೇರಿಕೊಂಡು ಚಳವಳ ಹುರಿಗೊಂಡಿದೆ. ಈ ಕಾದಂಬರಿ ಕ್ವಚಿತ್ ಆಗಿ, ಲೈಂಗಿಕ ಕಾರ್ಯಕರ್ತೆಯರು ಮತ್ತು ತೃತೀಯ ಲಿಂಗಿಗಳ ಬಗೆಗೆ ಪಾಸಿಂಗ್ ಆದ ರೆಫೆರೆನ್ಸ್ ನ್ನು ಹೊಂದಿದೆ. ಆದರೂ ಎಲ್ಲಿಯೂ ಅದು ಇಡಿಯಾಗಿ ಒಂದು ಅನುಭವವಾಗಿ ದಕ್ಕುವುದಿಲ್ಲ. ಹೀಗೆ ದಕ್ಕದೇ ಇರುವುದೇ ಇಂದಿನ ವಾಸ್ತವವೇನೋ. ಲಲಿತಾ ಸುನೀತ ಶಬುನಂ, ಈಶ್ವರ್, ಶಶಾಂಕ, ಇವರೆಲ್ಲಾ ಚಲ್ಲಾಪಿಲ್ಲಿಯಾದ ವಿವಿಧ ಸ್ತರದ ಹೋರಾಟದ ಪ್ರತೀಕಗಳು. ಇಲ್ಲಿ ಕುಟುಂಬವನ್ನು ಒಪ್ಪಿಕೊಂಡಿರುವವರು, ಅದನ್ನು ನಿರಾಕರಿಸಿದವರು, ಕುಟುಂಬ ಮತ್ತು ಸಂಘಟನೆ ಎರಡರಲ್ಲೂ ಹೋರಾಡುತ್ತಿರುವವರು, ವಿಸ್ತೃತ ಕಟುಂಬದ ಮೂಲಕ ಹೊಸ ಕುಟುಂಬದ ಪರಿಕಲ್ಪನೆಯನ್ನು ರೂಪಿಸಿಕೊಂಡವರು ಇದ್ದಾರೆ- ಈ ಎಲ್ಲರ ಸಮಸ್ಯೆಗಳು ಚರ್ಚೆಗೆ ಒಳಪಟ್ಟಿವೆ ಒಂದಕ್ಕೊಂದು ಮುಖಾಮುಖಿಯಾಗಿವೆ. ಈ ಎಲ್ಲವೂ ಒಂದು ಏಕೀಕೃತ ಗ್ರಹಿಕೆಯ ಒಳಗೆ‌ಬರಬೇಕು ಎನ್ನುವುದನ್ನು ಈ ಕೃತಿ ಹೇಳುತ್ತಿರಬಹುದು. ಸಂಬಂಧಗಳನ್ನು ನಿರಾಕರಿಸಿ ಬದುಕಲು ಸಾಧ್ಯವಿಲ್ಲ. ಸಂಬಂಧಗಳಲ್ಲಿ ಬದುಕುವುದು ಅನಿವಾರ್ಯ. ( ಶಶಿ ದೇಶಪಾಂಡೆ) ಮದುವೆ ಅಥವಾ ಗಂಡನನ್ನು ನಿರಾಕರಿಸಿದಾಕ್ಷಣ ಪಿತೃಪ್ರಧಾನತೆಯ ಬಿಗಿ ಹಿಡಿತದಿಂದ ಬಿಡುಗಡೆ ಸಿಕ್ಕಿಬಿಡುವುದಿಲ್ಲ. ಯಾಕೆಂದರೆ ಮದುವೆಯ ವ್ಯವಸ್ಥೆಯ ಆಚೆಗೂ ಗಂಡಾಳಿಕೆ ಎನ್ನುವುದು ಇದೆ. (ಗಂಡಾಳಿಕೆ ನಡೆಸುವವರು ಪುರುಷರೇ ಆಗಬೇಕೆಂದಿಲ್ಲ, ಆ ಮಾದರಿಯನ್ನು ಅನುಸರಿಸುವವರೆಲ್ಲಾ ಗಂಡಾಳಿಕೆಯ ವರ್ತುಲದಲ್ಲೇ ಬರುತ್ತಾರೆ. ಉದಾ: ಪಲ್ಲವಿ) ಇದು ಕಾದಂಬರಿ ಆಗಿದೆಯೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ಒತ್ತಟ್ಟಿಗಿಟ್ಟು ಈ ಪುಸ್ತಕ ಎತ್ತುವ ಪ್ರಶ್ನೆಗಳ ಕಡೆಗೆ ಗಮನ ಹರಿಸುವುದಾದರೆ ಇದಕ್ಕೆ ತನ್ನದೇ ಆದ ಸಾಮಾಜಿಕ ಮಹತ್ವವಿದೆ. ಸಾಹಿತ್ಯಕ ಮಹತ್ವದ ಬಗ್ಗೆ ನಾನು ಏನೂ ಹೇಳಲಾರೆ. ಇದು ಕಾದಂಬರಿಯಾಗಿ ಯಶಸ್ವಿಯಾಗಿದೆಯೇ? ಪ್ರಣಾಳಿಕೆಗಳ ಸಂಕಲನವೇ? ಎನ್ನುವ ಪ್ರಶ್ನೆಗೆ ಉತ್ತರ ಬೇರೆ ನೆಲೆಯಲ್ಲಿಯೇ ಹುಡುಕಬೇಕಾಗಿದೆ ಇಂತಹ ಕೃತಿಗಳು ಕಾದಂಬರಿಯ ಹೊಸವ್ಯಾಖ್ಯೆಗೆ ಕಾಯುತ್ತಿವೆಯೇ ಅಥವಾ ಸಾಹಿತ್ಯದ ಹೊಸ ಪ್ರಕಾರವನ್ನಾಗಿಯೇ ಗುರುತಿಸಬೇಕೇ? ಗೊಂದಲ ನನಗೆ. ಕಾಲವಷ್ಟೇ ನಿರ್ಧರಿಸಬಲ್ಲುದು. ಗೇ ಗಳಲ್ಲಿ ಕೂಡ ಒಬ್ಬ ಹೆಣ್ಣು ಭೂಮಿಕೆಯನ್ನು ನಿಭಾಯಿಸಿದರೆ ಇನ್ನೊಬ್ಬ ಗಂಡು ಭೂಮಿಕೆಯನ್ನು ನಿಭಾಯಿಸುವುದನ್ನು ನಾನು ನೋಡಿದ್ದೇನೆ. ಭೂಮಿಕೆಗಳಿಗೆ ಅಂಟಿಕೊಂಡಿರುವ ತಾರತಮ್ಯ ಭಾವನೆ ಹೋಗಬೇಕು - ಇಂತಹ ಸೈದ್ಧಾಂತಿಕ ಗೊಂದಲಗಳ ನಡುವೆ ನಾವು ಹಾದು 'ಹೋಗುತ್ತಿದ್ದೇವೆ. ಈ ಗೊಂದಲವನ್ನು ತಲ್ಲಣ'ಗಳನ್ನು ಭಾಷಾಂತರಿಸುತ್ತಿವೆ. ಭೂಮಿಕೆಗಳು ಅದಲು ಬದಲಾಗುವುದಾದರೆ ನಾವು ಹೆಣ್ಣು ಮಕ್ಕಳೇ ಸಿದ್ಧರಾಗುವುದಿಲ್ಲ . ಮದುವೆಯಾಗುವ ಗಂಡು ತನಗಿಂತ ಒಳ್ಳೆಯ ಉದ್ಯೋಗ, ಸಂಬಳ, ತನಗಿಂತ ಎತ್ತರ ಇರಬೇಕೆಂದೇ ಹೆಣ್ಣು ಮಕ್ಕಳು ಬಯಸುತ್ತಾರೆ. Home maker ಹುಡುಗನಿಗೆ ಯಾರಾದರೂ ಹೆಣ್ಣು ಕಟ್ಟಾರೆಯೇ? ಅನಕೂಲಸ್ಥ ಪುರೋಹಿತರನ್ನಾಗಲೀ , ರೈತರನ್ನಾಗಲೀ ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಎನ್ನುವ ಕೊರಗು ಇತ್ತೀಚೆಗೆ ಕಂಡು ಬರುತ್ತಿದೆ. ಈ ಎಲ್ಲವನ್ನೂ ಸ್ತ್ರೀವಾದ ಸಂಹಿತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅನಿವಾರ್ಯವಿದೆ. ಮಹಿಳೆಯರ ಪರವಾದ ಕಾನೂನುಗಳು ಜಾರಿಗೆ ಬಂದಿವೆ ನಿಜ. ಅದು ಹೆಚ್ಚು ಅನ್ವಯವಾಗುತ್ತಿಲ್ಲ. ಬಲಿಪಶುಗಳಾದ ಹೆಣ್ಣುಮಕ್ಕಳಿಗೆ ಅದಕ್ಕೆ access ಸಿಗುತ್ತಿಲ್ಲ ಎನ್ನುವುದು ಒಂದು ಕಡೆಗಾದರೆ ಇನ್ನೊಂದು ಕಡೆ ವಿದ್ಯಾವಂತ ಹೆಣ್ಣುಮಕ್ಕಳು ಇದನ್ನು misuse ಮಾಡಿಕೊಳ್ಳುತ್ತಿರುವ ಕೇಸ್ ಗಳು ಗಮನಕ್ಕೆ ಬರುತ್ತಿವೆ. ಇದರಿಂದಾಗಿ ನಿಜವಾಗಿ ಅಗತ್ಯವಿರುವ ಹೆಣ್ಣುಮಕ್ಕಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಸ್ತ್ರೀವಾದಿಗಳು ಇಂತಹ ಕಾನೂನು ದುರುಪಯೋಗ ಮಾಡಿಕೊಳ್ಳುವ ಮಹಿಳೆಯರ ವಿರುದ್ಧವಾಗಿಯೂ ಮಾತನಾಡಬೇಕಾಗಿದೆ. ಇದು ಸ್ತ್ರೀಯರ ಪ್ರಶ್ನೆ ಮಾತ್ರವಲ್ಲ ಇಡೀ ಸಮಾಜದ ಸಂಸ್ಕೃತಿಯ ಪ್ರಶ್ನೆ. ಆದುದರಿಂದ ಇದನ್ನು holistic ಆಗಿಯೇ ನೋಡಬೇಕಾಗಿದೆ. ಸ್ತ್ರೀವಾದದ ವ್ಯಾಪ್ತಿ ವಿಸ್ತೃತವಾಗ ಬೇಕಾಗಿದೆ.   ಹೆಣ್ಣುದೇಹ ಭಾಷೆ : ಈ ಕುರಿತಾಗಿ ಮಾತನಾಡಬೇಕೆಂದರೆ ಭಾಷೆಯ ರಚನೆಯಲ್ಲೇ ಇರುವ ಅವಳ ಗೈರು ಹಾಜರಿಯ ಬಗ್ಗೆ ಮಾತನಾಡಬೇಕು. ನಮ್ಮ ಸಂಸ್ಕೃತಿಯಲ್ಲಿ ಲೆಖಕರು, ಓದುಗರು, ವಿಮರ್ಶಕರೆಂದರೆ ಅವಶ್ಯವಾಗಿ ಅದು ಪುರುಷನೇ ಆಗಿರಬೇಕು. ಇಂಗ್ಲಿಷಿನಲ್ಲಿ mankind ಎನ್ನುವುದು humankind ಎಂಬ ಗ್ರಹಿಕೆಯೇ ಇದ್ದರೂ ಅಲ್ಲಿ ಅದು 'He' ಎನ್ನುವುದೇ ಅಘೋಷಿತ ಸತ್ಯ. ಜಿ. ವೆಂಕಟ ಸುಬ್ಬಯ್ಯನವರನ್ನು ಸಂದರ್ಶನ ಮಾಡುವಾಗ ಈ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕೆ ಅವರು 'ಅವನು' ಇರುವ ಕಡೆಯಲ್ಲಾ 'ಅವಳು' ಮಾಡಿಕೊಳ್ಳಿ ಏನಡ್ಡಿ? ಎಂದಿದ್ದರು. ಅದಕ್ಕೆ ನಾನು 'ಅವನು' ಇರಬಾರದೆಂದಲ್ಲ ಸರ್ ನನ್ನ ಪ್ರಶ್ನೆ. 'ಅವಳೂ' ಇರಬೇಕು ಎನ್ನುವುದು. ಹಾಗಾದರೆ 'ಅವಳು' ಎಂದೇ ಮಾಡಿಕೊಳ್ಳಿ ಎಂದಿದ್ದರು. ಒಂದು ಸಣ್ಣ ಅಪೀಲು ಬರೆಯಬೇಕಾದರೂ ಅವನ/ಳ ಮಾಡುತ್ತಾನೆ/ ಳೆ ಹೀಗೆ ಪ್ರತಿ ವಾಕ್ಯದಲ್ಲೂ ಬರೆದು ಬರೆದು ಸುಸ್ತಾಗಿಹೋಗಿ ಹೋಗತ್ಲಾಗೆ ಯಾವನೋ ಒಬ್ಬ ಎಂದು ಎಸೆದಿದ್ದೆ. ಒಂದು ಪರ್ಯಾಯ ಭಾಷೆಯನ್ನು ಕಟ್ಟುವುದು ಅಷ್ಟು ಸುಲಭವಲ್ಲ. ನನಗೆ ಭಾಷಾ ವಿಜ್ಞಾನ ಗೊತ್ತಿಲ್ಲ. ಓದುವ ಅವಕಾಶ ವಿದ್ದಾಗ ಓದಲಿಲ್ಲ.ಕೆ.ವಿ.ಎನ್. ಸರ್ ಇದಕ್ಕೆ ನೀವೇ ಉತ್ತರ ಕೊಡಬೇಕು. ಭಾಷೆಯಲ್ಲಿ ಮಹಿಳೆ ಉಳಿದಿರುವುದೆಂದರೆ ಬೈಗುಳಗಳಲ್ಲಿ. ಮತ್ತು ಭೋಗದ ಪ್ರತೀಕಗಳಲ್ಲಿ. ಉದಾ: ಗಾಂಚಾಲಿ ಎನ್ನುವ ಬೈಗಳುವಿದೆ. ಕನ್ನಡದ ಸಭ್ಯಸ್ತರೂ ಕೂಡ ಈ ಬೈಗಳವನ್ನು ಬಳಸುತ್ತಾರೆ. ಇದು ಹಿಂದಿಯ "ಗಾಂಡ್ ಚಲಾನಾ" ಪ್ರಯೋಗದಿಂದ ಬಂದಿರುವಂತಹದ್ದು. ನಿತಂಬಿನಿಯರೆಂದರೆ ಹೆಂಗಸರು ತಾನೇ? ಒಬ್ಬವ್ಯಕ್ತಿಯನ್ನು ಹೀನಾಯವಾಗಿ ಅವಮಾನಮಾಡುವುದೆಂದರೆ ಅವನಿಗೆ ಹತ್ತಿರವಾದ ಸ್ತ್ರೀಯರನ್ನು ಅವಮಾನಗೊಳಿಸುವುದು. ನಮ್ಮಲ್ಲೂ ಪ್ರೀತಿಯಿಂದ ಬೈಯುವ ಮುಂಡೇಮಗ, ಮುಂಡೇದೆ, ಉತ್ತರಕರ್ನಾಟಕದವರು ಪ್ರತಿಮಾತಿಗೂ ಸೇರಿಸುವ 'ಅವ್ನಾ' ಶಬ್ದ. ಇಂತಹವು ಹೇರಳವಾಗಿ ಸಿಗುತ್ತದೆ. ದೊಡ್ಡ ಪಟ್ಟಿಯನ್ನೇ ಮಾಡಬಹುದು. ಇದು ನಮ್ಮರಕ್ತದಲ್ಲಿ ಎಷ್ಟು ಅವಿನಾಭಾವದಿಂದ ಸೇರಿಹೋಗಿದೆಯೆಂದರೆ ಅದು ಅಸಹಜ ಎನಿಸುವುದೇ ಇಲ್ಲ. ಪ್ರಭುತ್ವ, ಸಮಾಜ, ಮಾರುಕಟ್ಟೆ ಎಲ್ಲವನ್ನೂ ಆಳುವವನು ಗಂಡಸೇ ಆಗಿರುವುದರಿಂದ ಈ ಭಾಷಾವಲಯದಲ್ಲಿ ಹೆಣ್ಣಿಗೆ ಪ್ರವೇಶವಿಲ್ಲ. (ಮಾರುಕಟ್ಟೆಯಲ್ಲಂತೂ ಹೆಣ್ಣು ದೇಹ ಹೇಗೆ ಮಾರಾಟಕ್ಕಿದೆ ಎಂಬುದನ್ನು ಹೇಳಬೇಕಾಗಿಯೇ ಇಲ್ಲ) ಹೆಸರಿಗೆ ಮಾತೃಭಾಷೆ! Mother tongue! ಆದರೆ ಇಲ್ಲಿ ಮಾತೆಯರೇ ಗಾಯಬ್. ಮಾತೆಯರ ಸಂಸ್ಕೃತಿಯೂ ಅವಹೇಳನಕ್ಕೆ ಗುರಿಯಾಗಿದೆ "ನಾನೇನು ಬಳೆ ತೊಟ್ಟುಕೊಂಡಿದ್ದೇನಾ?" ಎನ್ನುವುದು ನೇತ್ಯಾತ್ಮಕವಾದ ಪ್ರಯೋಗ. ಹೇಡಿತನದ ಪ್ರತೀಕ. "ಹೆಣ್ಣಿನ frontal lobe ಚಿಕ್ಕದಾಗಿರುವುದರಿಂದ "ಅವಳ ಬುದ್ಧಿ ಮೊಣಕಾಲ ಕೆಳಗೆ" ಇದೆ.!!!!! ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಜಡ ಚೇತನ ಪ್ರತಿಯೊಂದು ವಸ್ತುವಿಗೂ ಪ್ರತ್ಯೇಕವಾದ ಲಿಂಗವೇ ಇದೆ. ಮರಾಠಿಗರಲ್ಲಿ ಕಪ್ಪು ಒಂದು ಲಿಂಗವಾದರೆ ಬಶಿ ಇನ್ನೊಂದು ಲಿಂಗ(cup and saucer) ಹಾಗೆಯೇ ಮಲಗಿರುವ ಕಂಭ ಮತ್ತು ನಿಂತಿರುವ ಕಂಭ. ಹಿಂದಿಯಲ್ಲಿ 'ಪೋಲಿಸ್ ಆಯಿ' ಎನ್ನುತ್ತಾರೆ (ಪೋಲಿಸ್ ಬಂದಳು) 'ಬೈಲ್ ಗಾಡಿ' ಅಲ್ಲಿ ಸ್ತ್ರೀಲಿಂಗ. ಪೋಲಿಸ್ ವ್ಯವಸ್ಥೆಯಲ್ಲಿ ಹಿದೆಂದಾದರೂ ಹೆಣ್ಣು ನುಸುಳಿದ್ದುಂಟೆ? ಬೈಲ್ (ಎತ್ತು) ಎಂದಾದರೂ 'ಅವಳಾ'ಗಬಹುದೇ. ನಮ್ಮ ಕನ್ನಡದ ಹಾಗೆ ಅಲ್ಲ, ಅವರ ಭಾಷೆಗಳಲ್ಲಿ ಸ್ತ್ರೀಪುರುಷ ಲಿಂಗಗಳು ಸಮನಾಗಿ ಬೆರೆತಿವೆ. ಹಾಗೆಂದಕ್ಷಣ ಲಿಂಗಸಮಾನತೆ ಅಲ್ಲಿ ಇದೆಯಂದಲ್ಲ. ಅಲ್ಲಿ ಕೂಡ ಹೆಣ್ಣು ದ್ವಿತೀಯ ಲಿಂಗಿಯೇ! ಬೇರೆ ಬೇರೆ ಸಾಂಸ್ಕೃತಿಕ ಕಾರಣಕ್ಕಾಗಿ ಮರಾಠಿ ಹೆಣ್ಣುಮಕ್ಕಳು ಕನ್ನಡದವರಿಗಿಂತ ಹೆಚ್ಚು ಸ್ವಾವಲಂಬಿಗಳು, ಆತ್ಮಸ್ಥೈರ್ಯ ಉಳ್ಳವರೂ ಆಗಿದ್ದಾರೆ.ಒಮ್ಮೆ ಮುಂಬಯಿ ಲೋಕಲ್ಲಿನ ಲೇಡೀಸ್ ಡಬ್ಬಾದಲ್ಲಿ ಹೋಗಿಬಂದು ನೋಡಿ. ಮಚ್ಚೀವಾಲಿಗಳಿಂದ ಹಿಡಿದು ಕಾರ್ಪೋರೇಟ್ ಡೈರಕ್ಟರ್ ಗಳರೆಗೆ ಎಂತಹ ಗಟ್ಟಿಗಿತ್ತಿಯರು ಎಂದು ಗೊತ್ತಾಗುತ್ತದೆ. ಅಲ್ಲಿ ಪುರುಷ ಪ್ರಾಧಾನ್ಯವಿಲ್ಲವೆಂದಲ್ಲ ಹೋರಾಡುವುದರಲ್ಲಿ ಗಟ್ಟಿಗಿತ್ತಿಯರು ಅಷ್ಟೇ.ಅದಕ್ಕೆ ನಮ್ಮರಾಷ್ಟ್ರೀಯ ಚಳವಳಿಗಳ ಕಾಲದಿಂದಲೇ ತಾಕತ್ತು ದೊರೆತಿದೆ. ಗುಲಾಬ್ ಗುಂಡೋಜಿ ಮಹಾಡ್ (https://www.facebook.com/share/p/1A6qppy2WN/) ಎನ್ನುವ ಸಂತ ಪೂರ್ತಿ ಹೆಣ್ಣು ವೇಷದಲ್ಲೇ ಸೀರೆ ಬಳೆ, ಕುಂಕುಮ ಇತ್ಯಾದಿ, ಇದ್ದರು. ಹೆಣ್ಣುಗಳಾಗದೇ ಮುಕ್ತಿಯೇ ಇಲ್ಲ ಎಂದ ಅನುಭಾವಿಗಳು ಹೆಣ್ಣುತನವನ್ನು ಆರೋಪಿಸಿಕೊಂಡರು. ಕೃಷ್ಣನೊಬ್ಬನೇ ಗಂಡಸು, ಭಕ್ತರೆಲ್ಲರೂ ಗೋಪಿಯರು, ಗೋಪೀ ಭಾವಕ್ಕಲ್ಲದೇ ಕೃಷ್ಣದಕ್ಕುವುದು ಸಾಧ್ಯವೇ ಇಲ್ಲ. ಹೀಗಾಗಿ ಅಕ್ಕನಿಗಾಗಲೀ, ಮೀರಾಳಿಗಾಗಲೀ ಹೆಣ್ಣುತನವನ್ನು ಆರೋಪಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಪುರುಷನನ್ನು ಸೇರುವ ಉತ್ಕಟತೆ ಅವರ ಭಾಷೆಯಲ್ಲಿ ಸಹಜವಾಗಿಯೇ ವ್ಯಕ್ತವಾಯಿತು. ಇವರಿಬ್ಬರನ್ನೂ ನಾವು ಭಕ್ತಿಯ ಚೌಕಟ್ಟಿನಲ್ಲಿಯೇ ಇಟ್ಟು ನೋಡಬೇಕು. ಅವರನ್ನು ಆ context ನ ಆಚೆ ಎಳೆದು ತರಬಾರದೆಂದೇ ನನಗನಿಸುತ್ತದೆ. ಇಂದಿನ sexuality ಯ ಪ್ರಶ್ನೆಯನ್ನು ಅವರಿಗೆ ಲಗತ್ತಿಸಬಾರದು. ಅವರ ಧೈರ್ಯ ಸಾಹಸ,ಅಸ್ಮಿತೆಯನ್ನು ನಾವು ಮಾದರಿಯನ್ನಾಗಿ ಇಟ್ಟುಕೊಳ್ಳಬಹುದಷ್ಟೇ. ಪಿತೃಪ್ರಧಾನ ಭಾಷೆಗೆ ಒಂದು counter ಭಾಷೆ ಇರುವುದಾದರೆ ಅದು ಭಕ್ತಿಯ ನೆಲೆಯಲ್ಲಿಯೇ. ಇಲ್ಲಿ ಕೂಡ ಭಗವಂತ ಪುರುಷ supreme God ಎಂದು ವಾದಿಸುವ ಸಾಧ್ಯತೆಗಳೂ ಇವೆ. ಆದರೆ ದೇವರು ಅವನು ಕಲ್ಲಾಗಿ ಕುಳಿತಿರುತ್ತಾನೆ. ಭಕ್ತರು ತಾನೆ ಮಾತನಾಡುವವರು? ಭಕ್ತರಲ್ಲಿ ಕೂಡ ಸ್ತ್ರೀ ಪುರುಷ ತಾರತಮ್ಯ ಕಾಣಬಹುದಾದರೂ ಭಕ್ತಿಯ ಭಾಷೆಯಲ್ಲಿ ಅಲ್ಲ ಎಂದೇ ನನಗೆ ಎನಿಸುತ್ತದೆ. ಯಾಕೆಂದರೆ ಎಲ್ಲರೀತಿಯ ಮಾನವ ಯಾಜಮಾನ್ಯಕ್ಕೆ ಮೊದಲು ಕೌಂಟರ್ ಕೊಟ್ಟಿದ್ದು ಭಕ್ತಿ ಚಳವಳಿಯೇ ಅಲ್ಲವೇ?   ಎರಡುಸಾವಿರದೈನೂರು ವರುಷಗಳ ಆನಂತರವೂ ಬುದ್ಧ ಚರ್ಚೆಯಲ್ಲಿದ್ದಾನೆ. ಕೆಲವರು ಯಶೋಧರೆಯ ಪರವಾಗಿ ನಿಂತು ಬುದ್ಧನನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸಿದರೆ ಇನ್ನು ಕೆಲವರು ಅವನ ತಾತ್ವಿಕ ನೆಲೆಗಳಿಗೆ ಮಹತ್ವಕೊಟ್ಟು, ಮನುಷ್ಯ ಪ್ರೀತಿಯನ್ನು ಸಾರುವ ಅವನ ಸಿದ್ಧಾಂತಗಳಿಗೆ ಬೆಲೆಕೊಟ್ಟು ಅವನನ್ನು ಎತ್ತಿಹಿಡಿದಿದ್ದಾರೆ. ಈ ಎರಡೂ ನೆಲೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದರೆ ಬುದ್ಧ ಬದುಕಿದ ಕಾಲದ ಸಾಮಾಜಿಕ ಸಂದರ್ಭವನ್ನು ಗಮನಿಸಬೇಕಾಗಿದೆ. ಬಲವಾಗಿ ಬೇರೂರಿದ್ದ ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಒಂದು ಹೊಸ ಧರ್ಮವನ್ನು ರೂಪಿಸುವಲ್ಲಿ ಬುದ್ಧ ಎದುರಿಸಿದ ಸಾಮಾಜಿಕ ಸಮಸ್ಯೆಗಳು, ರೂಢಿಗತ ನಂಬಿಕೆಗಳು, ಅನಿವಾರ್ಯಗಳು, ಕಣ್ಣಿಗೆ ಕಾಣದ (ಇನ್ವಿಸಿಬಲ್) ಪಾಖಂಡಿತನದ ಆಚರಣೆಗಳು – ಇವುಗಳ ವಿರುದ್ಧ ತೆಗೆದು ಕೊಳ್ಳಬೇಕಾದ ನಿಲುವುಗಳು – ಇವೆಲ್ಲವನ್ನು ಅಖಂಡವಾಗಿ ಗ್ರಹಿಸಿದರೆ ಮಾತ್ರ ಬುದ್ಧನ ಹತ್ತಿರಕ್ಕೆ ಹೋಗಬಹುದೇನೋ. (ಬುದ್ಧನಿಗೂ ಮೊದಲೇ ಜೈನಧರ್ಮದ ಅವತರಣಿಕೆಯಿಂದಾಗಿ ಬುದ್ಧನ ತತ್ವಗಳನ್ನು ಗ್ರಹಿಸಲು ಜನರಿಗೆ ಸುಲಭವಾಗಿರಬಹುದು.( ಶೈಲಜಾ) ಇತ್ತೀಚಿನ ದಿನಗಳಂತೂ ನಾವು ಬೈನರಿಗಳಲ್ಲೇ ಮಾತನಾಡುತ್ತಿದ್ದೇವೆ. ಅವುಗಳ ನಡುವಿನ ಸುವರ್ಣ ಮಧ್ಯಮ (ಗ್ರೇ ಏರಿಯಾ) ದ ಸಂಕೀರ್ಣ ಒಳನೋಟ ದಕ್ಕುವುದು ಒಂದು ಜವಾವ್ದಾರಿಯುತ ಸೂಕ್ಷ್ಮ ಕಾಣ್ಕೆಗೆ ಮಾತ್ರ. ಈ ಮಧ್ಯಮ ಮಾರ್ಗದಲ್ಲಿ ಪರಿಪೂರ್ಣತೆ ಎನ್ನುವುದು ಇರುವುದೇ ಇಲ್ಲ. ಎಲ್ಲವೂ ಪ್ರಯೋಗಶೀಲ ನೆಲೆಯಲ್ಲಿ ಅನೇಕ ವೈರುಧ್ಯಗಳನ್ನು ಒಳಗೊಂಡ, ಪೂರ್ಣತೆಯ ಎಡೆಗೆ ಚಲಿಸುವುದಷ್ಟೇ ಗುರಿಯಾಗಿರುತ್ತದೆ. ಇಂತಹ ಒಂದು ಜವಾಬ್ದಾರಿಯುತ ಒಳ ನೋಟವನ್ನು , ಅದಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಸಂಶೋಧನಾತ್ಮಕವಾಗಿ ವಿಶ್ಲೇಷಿಸುವ , ಶೈಲಜಾ ಅವರ ಅನನ್ಯ ಕೃತಿ ‘ಥೇರೀಗಾಥಾ ಕಾಣಿಸಿದ ಹೆಣ್ಣು- ಬೌದ್ಧ ಧರ್ಮದಲ್ಲಿ ಮಹಿಳೆ. ಭಿಕ್ಕುಣಿಯರ ವಿಷಯದಲ್ಲಿ ಬುದ್ಧ ತೆಗೆದುಕೊಳ್ಳುತ್ತಿದ್ದ ಪ್ರಗತಿಶೀಲ ನಿಲುವುಗಳು ಹೊರಗಿನ ಸಮಾಜದ ನಿಷ್ಠುರು ನಿಲುವುಗಳಿಗೆ ಹೇಗೆ ವಿರುದ್ಧವಾಗಿದ್ದವು ಈ ನೆಲೆಯಲ್ಲಿ ಬುದ್ಧ ಎದುರಿಸಿದ, ಹೊಂದಾಣಿಕೆ ಮಾಡಿಕೊಂಡ ವಿಷಯಗಳು ಚರ್ಚಿತವಾಗಿದೆ. ಬುದ್ಧನಿಗೆ ಪ್ರಾರಂಭದಲ್ಲಿ ಭಿಕ್ಕುಣಿಯರನ್ನು ಸಂಘಕ್ಕೆ ಸೇರಿಸಿಕೊಳ್ಳುವುದರಲ್ಲಿ ವಿರೋಧವಿರುತ್ತದೆ. ಸ್ವತಃ ತನ್ನ ಚಿಕ್ಕ ತಾಯಿ ಗೌತಮಿಯೇ ಇದಕ್ಕೆ ಅಸ್ತಿವಾರ ಹಾಕುವವಳು. ಅವಳ ಬೇಡಿಕೆಯನ್ನೂ ಬಹಳ ಸಲ ನಿರಾಕರಿಸಿ ಆನಂತರ ಆನಂದನ ಸಲಹೆಯ ಮೇರೆಗೆ ಭಿಕ್ಕುಣಿಯರ ಸಂಘ ರೂಪುಗಳ್ಳೊಲು ತನ್ನ ಪರವಾನಗಿಯನ್ನು ಕೊಡುತ್ತಾನೆ. ಒಂದು ಕಾಲದ ನಾಡಿ ಮಿಡಿತವನ್ನು ಹಿಡಿಯಬೇಕಾದರೆ ಆಯಾ ಕಾಲದ ಬದಲಾಗುವ ಸಾಮಾಜಿಕ ಮಿಡಿತಗಳನ್ನು ಗ್ರಹಿಸುವುದು ಅಗತ್ಯ. ಈ ಮಿಡಿತವೆನ್ನುವುದು ಎಲ್ಲಾ ಕಾಲಕ್ಕೂ ಒಂದೇ ಆಗಿರುವುದಿಲ್ಲ. ಅವು‌ ಆಯಾ ಸಂದರ್ಭ, ಸನ್ನಿವೇಶಗಳಿಗೆ ಬದಲಾಗುತ್ತಲೇ ಇರುತ್ತವೆ. ಹೀಗಾಗಿ ಅವು ವೈರುಧ್ಯಗಳಿಂದ ಕೂಡಿರುವುದು ಸಹಜ. ಯಾಕೆಂದರೆ ಅಲ್ಲಿ ಬದಲಾವಣೆಯೇ ಶಾಶ್ವತ. ಬದಲಾವಣೆಗಳನ್ನು ಸಾಕ್ಷಿಪ್ರಜ್ಞೆಯಿಂದ ಗಮನಿಸುತ್ತಾ ಚಲಿಸುವ ನಡೆಯೇ ಸುವರ್ಣ ಮಧ್ಯಮ ಮಾರ್ಗ. ಹೆಣ್ಣು ಎಂದರೆ ಮಾಯೆ ಎನ್ನುವ ಪರಿಕಲ್ಪನೆ ಮೇಲುಗೈಯಾಗಿದ್ದ ಕಾಲದಲ್ಲಿ ಅಂತಹ ನೂರಾರು ಹೆಣ್ಣುಮಕ್ಕಳನ್ನು ತನ್ನ ಬೌದ್ಧ ಸಂಘಕ್ಕೆ ಸೇರಿಸಿಕೊಂಡು ಅವರನ್ನು ಮೋಕ್ಷದ ಮಾರ್ಗದತ್ತ ಒಯ್ಯುತ್ತಾನೆ ಬುದ್ಧ. ಆಶ್ಚರ್ಯವೆಂದರೆ ಅವರಲ್ಲಿ ಅದ್ಧಕಾಶೀ, ಅಂಬಪಾಲಿಯರಂತಹ ವೇಶ್ಯೆಯರೂ ಇರುವುದು. “ಹೆಣ್ಣಿನ ಸ್ಥಿತಿಯೇ ನೋವು” – ಈ ನೋವೇ ಗಂಡುಗಳ ಪಳಗಿಸಬಲ್ಲ ತರಬೇತುದಾರ ಎಂಬ ಘೋಷ ವಾಕ್ಯ ಬರುತ್ತದೆ. ಈ ನೋವು ಗಂಡುಗಳನ್ನು ಮಾತ್ರವಲ್ಲ ಅನುಭವಿಸುವ ಸಾಧಕಿಯರನ್ನೂ ಪರಿಪೂರ್ಣತೆಯತ್ತ ಕೊಂಡೊಯ್ಯುತ್ತದೆ ಎನ್ನುವುದು ತಿಳಿದು ಬರುತ್ತದೆ. ಇದು ಥೇರಿಯರ ಬದುಕಿನ ಗಾಥೆ. ಮಹಾಪ್ರಜಾಪತಿ ಗೌತಮಿ, ಖೇಮಾ, ಬದ್ಧಾ ಕುಂಡಲಕೇಶೀ, ಕಿಸಾಗೌತಮಿ ಮುಂತಾದ ಹನ್ನೆರಡು ಭಿಕ್ಕುಣಿಯರ ಸಾಹಸ, ಸಾಧನೆಗಳ ಕಥೆಯ ಜೊತಗೆ, ಭಿಕ್ಕುಣಿಗಳ ಸಂಘದಲ್ಲಿ ಬದಲಾಗುತ್ತಲೇ ಬಂದ ಸಾಮಾಜಿಕ ಸಂದರ್ಭಗಳಲ್ಲಿ ಹೆಣ್ಣಿನ ಸ್ಥಾನಮಾನ, ಅವರ ಸಮಸ್ಯೆಗಳು, ಅವರ ಸಂಘರ್ಷಗಳು, ಸ್ತ್ರೀ ಪುರುಷ ಸಮಾನತೆಯ ಪ್ರಶ್ನೆಗಳು, ಸೋದರೀತ್ವದ ಪರಿಕಲ್ಪನೆ, ಭಿಕ್ಕುಗಳು ಮತ್ತು ಭಿಕ್ಕುಣಿಯರ ನಡುವಿನ ಕಾನೂನಾತ್ಮಕ ಭೇಧಗಳು, ಭಿಕ್ಕುಗಳು ಹಾಗೂ ಸ್ವತಃ ಬುದ್ಧನಲ್ಲೇ ಇದ್ದ ವೈರುಧ್ಯಗಳು, ಅನೇಕ ವೇಳೆ ಭಿಕ್ಕುಣಿಯರ ವಿರುದ್ಧವಾಗಿ ತೆಗೆದುಕೊಳ್ಳುತ್ತಿದ್ದ ನಿಲುವುಗಳು, ಬುದ್ಧ ಅವುಗಳನ್ನು ಪರಿಹರಿಸಿದ ಬಗೆ, ದಾಂಪತ್ಯದಲ್ಲಿ ಪತ್ನಿ ಪತಿಯ ಅನುವರ್ತಿಯಲ್ಲ ಸಹವರ್ತಿಯಾಗಬೇಕು ಎನ್ನುವುದನ್ನು ಸೂಚಿಸುತ್ತಿದ್ದ ಬಗೆ ಆ ಮೂಲಕ ಸಮಾಜದಲ್ಲಿ ಸದ್ದಿಲ್ಲದೇ ಕುಟುಂಬದಲ್ಲಿ ಲಿಂಗಸಮಾನತೆಯನ್ನು ಸೂಚಿಸುತ್ತಿದ್ದ ರೀತಿ, ಭಿಕ್ಕುಣಿಯರ ಮಾನಸಿಕ ಧೃಡತೆ, ಧಮ್ಮಕ್ಕೆ ಅವರಿಗಿರುವ ಬದ್ಧತೆ, ಅಲ್ಲದೇ ಅವರ ವೇಷಭೂಷಗಳು ಅವರ‌ ಮುಟ್ಟಿನ ಸಮಸ್ಯೆಗಳು, ಭಿಕ್ಕುಗಳ ಮುಂದೆ ಸಂದರ್ಶನಕ್ಕೆ ಹಾಜರಾಗುವಾಗ ಅವರು ಅನುಭವಿಸುತ್ತಿದ್ದ ಮುಜುಗರ ಅದಕ್ಕೆ ಬುದ್ಧ ಸೂಚಿಸಿದ ಪರಿಹಾರ, ಹೀಗೆ ಸಂಘವನ್ನು ರೂಪಿಸಿ ಬೆಳೆಸುವಲ್ಲಿ ಉಂಟಾದ ಸಂಘರ್ಷಗಳು ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. ೨೫೦೦ ವರ್ಷಗಳ ಹಿಂದೆ ಹೆಣ್ಣುಮಕ್ಕಳ ಬಗ್ಗೆ ಇಂತಹ ಒಂದು ಚರ್ಚೆ ನಡೆದದ್ದು ವಿಸ್ಮಯವೇ ಸರಿ. ಮಹಿಳೆಯರ ವಿಷಯದಲ್ಲಿ, ಯುಗಪರಿವರ್ತನೆಯ ಸಂಧಿಕಾಲದ ತಲ್ಲಣಗಳನ್ನು, ಬುದ್ಧ ಮತ್ತು ಅವನ ಅನುಯಾಯಿಗಳು ನಿರ್ವಹಿಸಿದ ರೀತಿಯ ಬಗೆಗೆ ಹೊಸದೊಂದು ನೋಟವನ್ನೇ ಈ ಕೃತಿ ಪ್ರದಾನ ಮಾಡುತ್ತದೆ. “ಬಹುಶಃ ಬೌದ್ಧಗ್ರಂಥಗಳನ್ನು ಹೊರತು ಪಡಿಸಿದರೆ ಮಹಿಳೆಯರ ದಿನನಿತ್ಯ ಬದುಕಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ.ಅನೇಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರ ಉಲ್ಲೇಖ ಮಾಡುವುದಲ್ಲದೇ ಸಾರ್ವಜನಿಕ ಬದುಕಿನಲ್ಲಿಯೂ ಅವರು ಪಾಲ್ಗೊಳ್ಳುತ್ತಿದ್ದರು” ಎಂಬುದನ್ನು ಅನೇಕ ಗ್ರಂಥಗಳ ಆಧಾರದಿಂದ ಲೇಖಕಿ ಸಿದ್ಧಪಡಿಸುತ್ತಾರೆ. “ಗಣಿಕೆಯರು ಮತ್ತು ವೇಶ್ಯೆಯರನ್ನು ಕೀಳಾಗಿ ಪರಿಭಾವಿಸಿರುವುದು ಆರಂಭದ ಪಾಲಿ ಗ್ರಂಥಗಳಲ್ಲಿ ಕಂಡು ಬರುವುದಿಲ್ಲ”. “ಬುದ್ಧನಿಗೆ‌ ಬಹುಶಃ ಗಾಬರಿ ಇದ್ದದ್ದು ಭಿಕ್ಕುಣಿಯರ ಬಗ್ಗೆ ಅಲ್ಲ. ತನ್ನದೇ ಭಿಕ್ಕುಗಳ ಬಗ್ಗೆ.ಅವರು ಬಹುಬೇಗ ಭ್ರಷ್ಟರಾಗಬಲ್ಲರು ಎಂಬುದು ಅವನಿಗೆ ಗೊತ್ತಿತ್ತು” ಬುದ್ಧ ತನ್ನ ಕಾಲದ ಸಾಮಾಜಿಕ ವ್ಯವಸ್ಥೆಯ ಪ್ರವಾಹಕ್ಕೆ ಎದುರಾಗಿ ಹೀಗೆ ಈಜುತ್ತಿದ್ದ ಎನ್ನುವುದಕ್ಕೆ ಲೇಖಕಿ ಕೊಡುವ ಕೆಲವು ಉದಾಹರಣೆಗಳು ವಿಸ್ಮಯಕಾರಕವಾಗಿವೆ. ಉದಾಹರಣೆಗೆ : ಕಾರ್ಮಿಕರು ಹಾಗೂ ಸೇವಕರು ಖತ್ತಿಯ (ಕ್ಷತ್ರಿಯ), ಬ್ರಾಹ್ಮಣ ಮತ್ತು ಗಹಪತಿಗಳಿಗಂತ ಕೀಳು….ಎಂಬ ನಂಬಿಕೆ ಆಗಿನ ಸಮಾಜದಲ್ಲಿತ್ತು. ಆದರೆ ಆ ಕಾರಣಕ್ಕೆ ಅವರಿಗೆ ಸಂಘಕ್ಕೆ ಸೇರುವ ಅವಕಾಶವನ್ನು ಬುದ್ಧ ನಿರಾಕರಿಸಿರಲಿಲ್ಲ. ಕ್ಷೌರಿಕರು, ಕದುರೆ ತರಬೇತುಗಾರರು, ಬೆಸ್ತರ ಮಕ್ಕಳು ಚಂಡಾಲನೊಬ್ಬನ ಮಗ ಕೂಡ ಸಂಘಕ್ಕೆ ಸದಸ್ಯನಾಗಿದ್ದ” “ಮುಟ್ಟಾದ ಭಿಕ್ಕುಣಿಯರು ಕುಳಿತಡೆ, ನಿಂತೆಡೆ ಅವರು ಓಡಾಡಿದ ಕಡೆಯೆಲ್ಲಾ ರಕ್ತದ ಕಲೆಗಳಾಗುತ್ತಿವೆ ಎಂದು ಮಹಾಪ್ರಜಾಪತಿ ಗೌತಮಿ, ಬುದ್ಧನಿಗೆ ಹೇಳುತ್ತಾ ” ಹೆಂಗಸರು ಬಟ್ಟೆಯ ಚೂರುಗಳನ್ನು ಹೊಸೆದು ಮಾಡಿದ ಅಣಿಕೋಲಕ ಅಂದರೆ ಕಡಾಣಿ ಅಥವ ಕಡಗೀಲಿನಂತಹ ಬಟ್ಟೆಯನ್ನ ಧರಿಸಬಹುದೇ? ” ಎಂದು ಕೇಳುತ್ತಾಳೆ. ಅದಕ್ಕೆ ಅವನು ಒಪ್ಪಿ ಯೋನಿಯಲ್ಲಿ ಅದನ್ನು ಎಷ್ಟು ಆಳಕ್ಕೆ ತುರುಕಿಕೊಳ್ಳಬಹುದು? ಎಂಬೆಲ್ಲಾ ಚರ್ಚೆಗಳು ನಡೆದ ನಂತರ ಕೊನೆಗೆ ಬುದ್ಧ ಅವರಿಗೆ ಸೊಂಟದ ಸುತ್ತ ಒಂದು ಉಡುದಾರದಂತಹ ದಾರವನ್ನು ಕಟ್ಟಿಕೊಂಡು ಒಂದು ಬಟ್ಟೆಯ ತುಂಡನ್ನು ಕೌಪೀನದಂತೆ ಧರಿಸುವಂತೆ ಹೇಳುತ್ತಾನೆ. “ಆ ಕಾಲದಲ್ಲಿ ಬಟ್ಟೆ ಸುಲಭವಾಗಿ ಲಭ್ಯವಿರಲಿಲ್ಲ. ಬಳಕೆಯಾದ ಮೇಲೆ ಬಟ್ಟೆಯನ್ನು ಒಗೆದು ಸಂಘಕ್ಕೆ ವಾಪಸ್ಸು ಕೊಡಬೇಕಿತ್ತು. ಏಕೆಂದರೆ ಆ ಬಟ್ಟೆ ಸಂಘದ ಆಸ್ತಿಯಾಗಿತ್ತು. ಇದು ಓದುಗರನ್ನು ಅವಾಕ್ಕಾಗಿಸುವ ಸಂಗತಿ. ಮುಟ್ಟು ಎನ್ನುವುದು‌ ಮೈಲಿಗೆಯಾಗಿರದಿದ್ದರೂ ಕೆಲವು ಕಡೆ ಆಚರಣೆಯಲ್ಲಿ ಇರಲಿಲ್ಲ. ಮುಟ್ಟಾದ ಭಿಕ್ಕುಣಿಯರು ಸ್ತೂಪಕ್ಕೆ ಪ್ರದಕ್ಷಿಣೆ ಬರುವುದನ್ನು ನಿಷೇಧಿಸಲಾಗಿತ್ತು,” ಎಂದು ಹೇಳುತ್ತಾ ಹಿಂದು ಧರ್ಮದ ಪ್ರಭಾವದ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು ಎನ್ನುವ ಲೇಖಕಿಯ ಸಮದಂಡಿಯಾದ ದೃಷ್ಟಿಯನ್ನು ಮೆಚ್ಚಲೇಬೇಕು. ಈ ಎಲ್ಲ ವಿಚಾರಗಳು ಬುದ್ಧನನ್ನು ಅರ್ಥಮಾಡಿಕೊಳ್ಳುವಲ್ಲಿ ಹೊಸ ನೋಟವೊಂದನ್ನು ದಯಪಾಲಿಸುತ್ತವೆ. ಇಂಗ್ಲಿಷ್ ಪಾಲಿ ಮುಂತಾದ ಭಾಷೆಗಳಲ್ಲಿ ದೊರಕುವ ಹಲವಾರು ಗ್ರಂಥಗಳ ಆಧಾರದ ಮೇಲೆ ಇಂತಹ ಒಂದು ಅದ್ಭುತ ಕೃತಿಯನ್ನು ನೀಡಿದ ಲೇಖಕಿ ಶೈಲಜಾ ಅವರಿಗ ಅಭಿನಂದನೆಗಳು.